ಕರುನಾಡು ಕಥಾ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ಪಡೆದಿರುವ ಕತೆ
ಅನುಭವವೇ ಜೀವನ ಸಾರ.
ಅಮ್ಮ! ನಮ್ಮೂರ ಲಕ್ಷ್ಮಣನ ಮಗ ಮಧುಕೇಶ್ ರಾತ್ರಿ ಇದ್ದಕ್ಕಿದ್ದಂಗೆ ಹ್ಯಾಂಗೆ ಹ್ಯಾಂಗೊ ಆಡತಿದ್ದನಂತೆ.. ಉಸುರು ತಗ್ಯಕ್ಕೆ ಆಗದೇ ಒದ್ದಾಡತ ಇದ್ನಂತೆ... ಕಡಿಗೆ ಅದೇನೋ ಆಂಬುಲೆನ್ಸ್ ಅಂತಾರಲ್ಲ ಅದು ಬಂದು ಆಸ್ಪತ್ರೆ ಗೆ ಕರಕೊಂಡು ಹೋಯ್ತು... ಅಂತ ಮನೆ ಕೆಲಸದ ಸಾವಿತ್ರಿ ಬಂದು ಹೇಳಿದಾಗ ಹಾಂಗಾರೆ ಅವನಿಗೆ ಕರೋನನೇ ತಗ!! ಹೇಳಿದರ ಕೇಳಬೇಕಲ್ಲ... ಎಲ್ಲಾ ಕಡೆ ಗ್ಯಾಂಗ್ ಕಟ್ಟಿಕಂಡ್ ಕ್ರಿಕೆಟ್ ಆಟ ಅದೂ ಇದೂ ಅಂತ ಓಡಾಡಿದರೆ ರೋಗ ಬರದೇ ಮತ್ತೆಂತ ಆಗುತ್ತೆ... ಜಾಸ್ತಿನೇ ಆಗಿದೆ ಅಂತಿಯಲ್ಲ.. ಅಲ್ಲೇ ಸಾವಿತ್ರಿ.!ಎಲ್ಲರೂ ಚೆನ್ನಾಗಿಯೇ ಇರಲಿ ಅಂತ ನಾವು ಆಸೆ ಪಡ್ತೀವಿ. ಆದರೆ ಈ ಮಕ್ಕಳು .ಹಿರಿಯರು ಹೇಳಿದ ಮಾತು ಕೇಳೋದು ಅಷ್ಟರಲ್ಲೇ ಐತಿ... ಯಾಕೇನೋ! ಅವ ಅಂತ ಅಲ್ಲಾ ಈಗಿನ ಹುಡುಗರಿಗೆ ಮೌಲ್ಯ ಅನ್ನೋದು ಗೊತ್ತೇ ಇಲ್ಲ ಬಿಡು.
ನನ್ನ ಕೈಯ್ಯಲ್ಲೇ ಓದಿ ಬೆಳೆದ ಹುಡುಗ ಅವನು.. ಮೊನ್ನೆ ದಿನ ಈ ಕರೋನ ರೋಗದ ಬಗ್ಗೆ ಜಾಗ್ರತೆ ಆಗಿರಿ ಅಂತ ಹೇಳೋದಕ್ಕೆ ಹೋದರೆ ಎಲ್ಲ ಮಕ್ಕಳನ್ನು ಕಟ್ಟಿಕೊಂಡು ಕ್ರಿಕೆಟ್ ಆಡತಾ ಇದ್ದವ ಏನಂದ ಗೊತ್ತ? ಮೇಡಂ ಸುಮ್ಮನೆ ಇರಿ.. ಇದೆಲ್ಲ ನಮ್ಮನ್ನ ಏನೂ ಮಾಡೋದಿಲ್ಲ.. ಎಲ್ಲಾ ಬರೀ ಭೋಗಸ್... ಈ ರೋಗವೆ ಇಲ್ಲ...ಜ್ವರ ಕೆಮ್ಮು ನೆಗಡಿ ಹೊಲದಲ್ಲಿ ಕೆಲಸ ಮಾಡುವವರಿಗೆ ವಾತಾವರಣ ಚೇಂಜ್ ಆದಾಗ ಬಂದೇ ಬರುತ್ತೆ... ನಾವು ದುಡಿಮೆ ಮಾಡುವಾಗ ಈ ಮಾಸ್ಕು ಗಿಸ್ಕು ಎಲ್ಲ ಹಾಕಿ ಕೊಳ್ಳಲು ಆಗುವುದಿಲ್ಲ ಮೇಡಂ... ಹಾಗೆ ವಾಕ್ಸಿನ್ ಕೂಡ ದಂಡ... ಅದೂ ಬೇರೆ ಅಡ್ಡ ಪರಿಣಾಮ ಇದೆಯಂತೆ ನಮ್ಮವರುಗೆಲ್ಲ ನಾನು ಹಾಕಿಸ್ಕೊಬೇಡಿ ಅಂತಾನೆ ಅನ್ನೋದು ಅಂತೆಲ್ಲ ಹೇಳಿದಾಗ ನನ್ನ ಕೈಲಿ ಏನು ಸಮಾಜಯಿಸಿ ಹೇಳಲು ಸಾಧ್ಯವೋ ಅದನ್ನೆಲ್ಲ ಹೇಳಿ ಬಂದು 5 -6 ದಿನಗಳೂ ಆಗಿಲ್ಲ ನೋಡು. ಈಗ ಅವನಿಗೆ ಹುಷಾರಿಲ್ಲದೆ ಆಸ್ಪತ್ರೆ ಸೇರುವ ಹಾಗೆ ಆಯ್ತಲ್ಲ.
ಪಾಪ!! ಎಷ್ಟು ಒದ್ದಾಡುತ್ತಾ ಇದ್ದಾನೋ.!. ಬೆಡ್ ಸಿಕ್ಕಿತೋ ಇಲ್ಲವೋ! ಉಸಿರಾಟದ ತೊಂದರೆ ಎಂದರೆ ಆಕ್ಸಿಜನ್ ವ್ಯವಸ್ಥೆ ಆಯತೋ ಇಲ್ಲವೋ!! ಯೋಚನೆ ಮಾಡುತ್ತಾ ಇರುವಾಗ ಒಲೆ ಮೇಲೆ ಇಟ್ಟ ಅನ್ನ ಸೀದಾಗಲೇ ಮತ್ತೆ ವಾಸ್ತವಕ್ಕೆ ಬಂದಿದ್ದು
ಹೀಗೆ 18 - 20 ದಿನದಲ್ಲಿ ಅರೋಗ್ಯ ಸುಧಾರಿಸಿ ನಾಳೆ ಕರೆದುಕೊಂಡು ಬರುತ್ತಾರೆ ಎಂಬ ಮಾಹಿತಿ ಸಿಕ್ಕಾಗ ಮನಸ್ಸಿಗೆ ಏನೋ ನಿರಾಳ ಭಾವ !! ಅವರೇನೇ ಅಂದರೂ, ಮಾಡಿದರೂ ನಮ್ಮೂರ ಮಕ್ಕಳೇ ಅಲ್ಲವೇ?
ಒಂದಿಷ್ಟು ಹಣ್ಣು ತೆಗೆದುಕೊಂಡು ನೋಡಲು ಹೋದಾಗ ನನ್ನ ಕಣ್ಣು ನಾನೇ ನಂಬದಾದೆ.. ಹೌದು! ಅವನ ಸುತ್ತ ಎಲ್ಲ ಗೆಳೆಯಾರೂ ಮಾಸ್ಕ್ ಧರಿಸಿ ಕೈಗವಸು ಹಾಕಿಕೊಂಡು ಸಾಮಾಜಿಕ ಅಂತರ ದೊಂದಿಗೆ ನಿಂತಿದ್ದರು.. ಸ್ಯಾನಿಟೈಜರ್ ಪರಿಮಳ ಸೂಸುತ್ತಿತ್ತು.....
ಮಧುಕೇಶ ನನ್ನ ಕಂಡ ಕೂಡಲೇ ಎದ್ದು ಬಂದು ಕೈ ಮುಗಿದು ಹೇಳಿದ.ಕ್ಷಮಿಸಿ ಮೇಡಂ, ನನ್ನ ಅಹಂಕಾರ ಉಡುಗಿ ಹೋಯ್ತು .. ನಾನು ಸಾವು ಗೆದ್ದ ವೀರ ನಾಗಿ ನಿಮ್ಮ ಮುಂದೆ ನಿಂತಿದ್ದೇ ದೊಡ್ಡ ವಿಷಯ... ನಿಮ್ಮ ಮಾತು ಕೇಳದೇ ಉಢಾಫೆ ಮಾಡಿದ್ದೇ ಇಷ್ಟಕ್ಕೆಲ್ಲ ಕಾರಣ ಆಯ್ತು ....ಇದೊಂದು ಮಾರಕ ರೋಗ.. ಆದರೆ ಎಚ್ಚರಿಕೆಯಿಂದ ಇದ್ದರೇ ಏನೂ ಆಗುವುದಿಲ್ಲ ಎನ್ನುವುದು ಗೊತ್ತಾಯಿತು
... ಅದಕ್ಕೆ ನಾವು ಗೆಳೆಯರೆಲ್ಲ ಸೇರಿ ಒಂದು ತೀರ್ಮಾನಕ್ಕೆ ಬಂದಿದ್ದೀವಿ.. ನಿಮ್ಮ ಜೊತೆ ಫಲಾಪೇಕ್ಷೆ ಇಲ್ಲದೇ ಕೊರೋನ ವಾರಿಯರ್ಸ್ ಆಗಿ ನಮ್ಮ ಊರಿನ ಪ್ರತಿಯೊಂದು ಮನೆಯನ್ನು ಹತ್ತಿ ಇಳಿದು ಅದರ ಬಗ್ಗೆ ಜಾಗ್ರತೆ ಮೂಡಿತ್ತೇವೆ...ಬೀದಿ ನಾಟಕ ಮಾಡುತ್ತೇವೆ.. ಹಾಗೇನೇ ನಮ್ಮೂರ ಸುತ್ತ ಮುತ್ತ ಸ್ವಚ್ಛತೆಯನ್ನು ನಾವೇ ಮಾಡುತ್ತೇವೆ... ಮತ್ತು ನಮ್ಮ ದುಡಿಮೆಯ ಸ್ವಲ್ಪ ಹಣವನ್ನು ಹಾಕಿ ಬಡವರಿಗೆ ಮಾಸ್ಕ್ ವಿತರಣೆ ಮಾಡುತ್ತೇವೆ...ಮತ್ತು ಕರೋನ ಬರದಂತೆ ತಡೆಯುವುದು ಹೇಗೆ... ಅಕಸ್ಮಾತ್ ಬಂದರೆ ಹೇಗೆ ಇರಬೇಕು ಎಂಬುದನ್ನು ಪ್ರಿಂಟ್ ಹಾಕಿಸಿ ಪ್ರತೀ ಮನೆಯ ಬಾಗಿಲಿನ ಮೇಲೆ ಆಂಟಿಸುತ್ತೇವೆ... ಹಾಗೂ ಎಲ್ಲಾ ಮನೆಯ ಅಜ್ಜ ಅಜ್ಜಿ ಹಾಗೂ ಎಲ್ಲರಿಗೂ ವ್ಯಾಕ್ಸಿನ ಹಾಕಿಸಲು ಹೋಗಿ ಬರುವ ವಾಹನದ ವ್ಯವಸ್ಥೆ ಹಾಗೂ ಪಾಸಿಟಿವ್ ಬಂದವರಿಗೆ ಧೈರ್ಯ ತುಂಬುವ ಮತ್ತು ಅವರನ್ನು ಕ್ವಾರಂಟೈನ್ ಕೇಂದ್ರಕೆ ಬಿಡುವ ವ್ಯವಸ್ಥೆ ಕೂಡ ಮಾಡಲು ಯೋಚಿಸಿದ್ದೇವೆ ಇದಕ್ಕೆ ನಿಮ್ಮ ಸಲಹೆ ಮಾರ್ಗದರ್ಶನ ಸದಾ ನಮಗೆ ಬೇಕು ಎಂದಾಗ. ನಾನು ಕಾಣುತ್ತಿರುವುದು ಕನಸೋ ನನಸೋ ತಿಳಿಯದಾಯ್ತು...
ಏನೇ ಆದರೂ ಊರಿನ ಈ ಗುಂಪು ಕೆಲಸಕ್ಕೆ ನಿಲ್ಲುವ ಹಾಗೆ ಆಯ್ತಲ್ಲ... ಕರೋನ ಒಂದು ದೊಡ್ಡ ಪಾಠ ಕಲಿಸಿ ಈ ಮಕ್ಕಳಿಗೆ ಒಳ್ಳೆಯತನ ಬಂತಲ್ಲ... ದೇವರಿಗೆ ಮನಸ್ಸಿನಲ್ಲಿಯೇ ವಂದಿಸಿ ಅವರಿಗೆ ಸದಾ ನಾನು ನಿಮ್ಮ ಜೊತೆ ಇರುತ್ತೇನೆ.. ಇರುವಷ್ಟು ದಿನ ಒಳ್ಳೆಯದು ಕೆಲಸ ಮಾಡೋಣ.. ಉಸಿರು ನಶ್ವರ ಹೆಸರು ಶಾಶ್ವತ ಎಂದು ತಿಳಿ ಹೇಳಿ ಮನೆಗೆ ಬಂದಾಗ ಏನೋ ಒಂದು ತರ ಸಂತೋಷ......
- ಶ್ರೀಮತಿ ಶ್ರೀಮತಿ ಜೋಶಿ ಶಿಕ್ಷಕಿ
ನಿಸರಾಣಿ ಸೊರಬ ಶಿವಮೊಗ್ಗ 577434.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ :9448713659 ಸಂಪಾದಕರು ವಿ ಮ ಸಾ ಪತ್ರಿಕೆ)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ