ಸೋಮವಾರ, ನವೆಂಬರ್ 22, 2021

ಮುಗ್ಧ ಮನದ ಹೂಗಳು (ಕವಿತೆ) - ಭವ್ಯ ಟಿ.ಎಸ್.

ಬಂದಿದೆ ಬಂದಿದೆ ಮಕ್ಕಳ ದಿನ
ಪುಟಾಣಿಗಳ ಸಂಭ್ರಮದ ಶುಭದಿನ
ಚಾಚಾ ನೆಹರು ಹುಟ್ಟಿದ ಸುದಿನ
ಹಿರಿಯರೂ ಮಕ್ಕಳಾಗಲು ಬಯಸುವ ದಿನ

ಎಳೆಯರು ನಾವು ಮುಗ್ಧಮನದ ಹೂಗಳು
ಕಪಟ ವಂಚನೆಗಳರಿಯದ ಬಿಳಿಹಾಳೆಗಳು
ಸ್ವಚ್ಛಂದವಾಗಿ ಹಾರಾಡುವ ಬಾನಾಡಿಗಳು
ದೇಶದ ಭವ್ಯ ಭವಿಷ್ಯದ ಕನಸುಗಳು

ಕೈ ಕೈ ಹಿಡಿದು ನಲಿದು ಆಡುವ ಗೆಳೆಯರು
ಭೇದಭಾವ ಮರೆತ ಸಮತೆಯ ಬಾಂಧವರು
ಹಾರುವೆವು ಭಾನುವಿನೆತ್ತರಕೆ ನಾವೀಗ ಏರಿ
ಬೆರೆಯುವೆವು ಜಾತಿಮತಗಳ ಗಾಳಿಗೆ ತೂರಿ

ಬಂಧಿಸದಿರಿ ನಮ್ಮನು ಒತ್ತಡಗಳ ಬೇಲಿಯೊಳಗೆ
ಕುಂದಿಸದಿರಿ ನಮ್ಮ ಶಕ್ತಿಗಳ ಕತ್ತಲೆಯೊಳಗೆ
ದಂಡಿಸದಿರಿ ಅರಿಯದೆ ಮಾಡಿದ ತಪ್ಪುಗಳಿಗೆ
ಪೀಡಿಸದಿರಿ ಮೃದು ಹೃದಯಗಳ ಶೋಷಣೆಗಳಿಗೆ

ಪ್ರೀತಿ ಮಮತೆಯ ಬಯಸುವ ಮುದ್ದು ಮಕ್ಕಳು
ಹಾಲಿನಂತಹ ನಿಷ್ಕಲ್ಮಶ ಭಾವದ ಕೂಸುಗಳು
ಆಟಪಾಠಗಳಲಿ ಒಂದಾಗುವೆವು ನಗುನಗುತಾ 
ಸಾಗಿಹೆವು ಹೊಸದಿಗಂತದೆಡೆಗೆ ಮೇರೆ ಮೀರುತಾ
- ಭವ್ಯ ಟಿ.ಎಸ್. ಶಿಕ್ಷಕರು.ಹೊಸನಗರ, ಶಿವಮೊಗ್ಗ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...