ಸತ್ಯ ಒಸರಿದ ಕಣ್ಣೀರು
ನೆಡೆದುದೆಲ್ಲವನು
ಒಮ್ಮೆಗೆ ನೆನೆದು ಮರೆತು ಬಿಡು
ಇಲ್ಲಾ ಪ್ರಿಯವೆಂದರೆ..! ಕಣ್ಮುಚ್ಚಿ ಒಪ್ಪಿ ಬಿಡು
ಸುರ ಅಸುರಾದಿಗಳ ಸುಧೆ ಪಾನದಂತೆ
ಮತ್ತೆ ಮತ್ತೆ ಬಲವಂತದಲಿ ಗೊಟ್ಟವೇರಿಸಿ ಕೇಕೆಯಾಕುವ ಆಳುವವರಿದ್ದಾರೆ…!!
ಆಗೊಮ್ಮೆ ನಮಗುಣ್ಣಿಸಿ ಸ್ಫೋಟ ಗೊಂಡದ್ದು
ಕಾಳಕಪ್ಪು ಬಿಡು…!!
ಸ್ವಾತಂತ್ರ್ಯದ ಕಿಚ್ಚು
ಉಳ್ಳವನ ಮನೆಯ ಬಾಗಿಲು ತಟ್ಟಿ
ಹರುಷ ಪಡುತ್ತಿದೆ ಬಿಡು
ಚರಿತೆ ಪುಟಕ್ಕೆ ಸೇರಿ ದಾಖಲಾಗಲಿ ಎಲ್ಲಾ...
ಇಲ್ಲ ಇಲ್ಲಿ ಸುಖವೆಂದೂ....ಬರಿಯಕಸ
ಹರುಷದಗಲು ನಿಮಿಷದಂತೆ
ದುಃಖ ಉಮ್ಮಳಿಸಿ ಇರುಳೆಲ್ಲಾ ಆವರಿಸಿದೆ
ಇತಿಹಾಸದ ಕಡೆ ತಣ್ಣೀರು?
ಸತ್ಯ ಒಸರಿದರೆ ಬರಿಯ ಕಣ್ಣೀರು
ಬುದ್ಧ ಉಸುರಿದ ಅಹಿಂಸೆಯ ತತ್ವ
ಬಸವ ಸಾರಿದ ಸಮಾನತೆಯ ತತ್ವ
ಕಾಲ ಉರುಳಿಸಿವೆ ಎಲ್ಲವನ್ನೂ ಇಲ್ಲವಾಗಿಸಿ
ಅಮ್ಮನಿದ್ದು ಅನಾಥವಾಗಿದೆ ಪ್ರಜಾಪ್ರಭುತ್ವದ ಕೂಸು
ಭಾರತಾಂಬೆಯು ಇನ್ನೂ ಹಾಗೆ
ಜಿಡ್ಡಿನೊಳಗೂ ಹಿಡಿದ ಮಹಾಜಿಡ್ಡು
ಮತ್ತೆ ಮತ್ತೆ ಕಾಯಿಸಿದರೂ
ಮತ್ತೆ ಮತ್ತೆ ಗಟ್ಟಿಯಾಗಿಸುವಷ್ಟು ಜಿಡ್ಡು
ಜಡತ್ವದ ಮೋಹಕ್ಕೆ ಬಿದ್ದಿಹ ಕುರುಡು
ಅಂಧತ್ವ ಅಂಟಿಕೊಂಡ ಫಲವಿಲ್ಲದ ಗೊಡ್ಡು
ಪಾರ್ಥೇನಿಯಮ್ ನಂತೆಯೇ
ಧರ್ಮ ಜಾತಿ ಪ್ರತಿಷ್ಠೆಯ ಅಫೀಮುಗಳು
ಪಾಪಿ ಬೆಳೆಯುವ ಸಂತಾನಕ್ಕೆ ಸಡಗರ
ಇತಿಹಾಸ ಸದಾ ನಗುತ್ತಾ ಕೋಮುವಿಗೆ ಜಯ
ಸದಾ ಕಾಡುವ ಪಾಡುಗಬ್ಬ
ಈ ಗಬ್ಬು ಒಪ್ಪಿಕೊಂಡು ಸಾಗುವ ಜನ ಸಾಗರ
ಸಡಗರಕ್ಕೂ ಧರ್ಮ, ಜಾತಿ ಹೆಪ್ಪುಗಟ್ಟಿದ ಒಪ್ಪು
ಇರಲು ಹಾಗೆ.... ಸಾಗಲು ಹೀಗೆ...
ಎಲ್ಲ ಒಪ್ಪಿಕೊಂಡ ಪೀಳಿಗೆ
ಎಂದಿಗೂ ಇರುವುದು ಇರುವ ಹಾಗೆ
ನಾಶವಾಗುವ ಹಾದಿಗೆ ಒಪ್ಪಿಗೆ ಅನಿವಾರ್ಯ
ಅಸಹಾಯಕತೆಗೆ ಇನ್ನೆಲ್ಲಿ ಹೊಸದಾರಿ.
- ಲಕ್ಷ್ಮೀನಾರಾಯಣ ಕೆ. ವಾಣಿಗರಹಳ್ಳಿ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ