ಲೇಖನಿ ನಡುಗುತಿದೆ ಏಕೋ ಏನೋ
ಪದಗಳು ಬಿಕ್ಕುತಿವೆ ಅತ್ತು ತತ್ತರಿಸಿ
ಇಳಿಯದೆ ಮೇಲೆ ಕುಳಿತಿಹಳು ಕಾವ್ಯ
ಕನ್ನಿಕೆ ಅಂಜಿ ಲೇಖನಿಗೆ ಬಿಕ್ಕುತಿಹಳು
ಯಾವ ನೋವ ಯಾರ ಮನಕೆ ಯಾವ
ನಲಿವು ಯಾವ ಮನಕೆ ಸೋತು ಹೋದ
ಬದುಕ ಕಟ್ಟಲು ಯಾವ ಪ್ರೀತಿ ತರಲಿ
ಒಲವ ನಂಬಿ ಗೆಲುವು ಸಾಧಿಸಿ ತೋರಲಿ
ಬರಡು ಬದುಕಿಗೆ ಬಾನೆತ್ತರದ ಆಕಾಂಕ್ಷೆ
ಯಾರಿಗೆ ಹೇಳಲಿ ನೊಂದ ಮನದ ಬಯಕೆಯ
ಚಿಂತೆಯ ಸುಳಿಗಾಳಿಗೆ ಸಿಕ್ಕು ಬರಡಾಯಿತೆನ್ನ
ಮನ ಕನ್ನ ಕೊರೆದು ಹೋಯಿತು ಬಾಳು
ಹೃದಯವೇಕೋ ಅಳುತಿದೆ ಬಿಕ್ಕಿ ಬಿಕ್ಕಿ
ನುಂಗಲಾರದೆ ಕಕ್ಕಿತು ಅಂಜಿ ನಂಜನು
ಬಿದ್ದ ಹಾಲಾಹಲಕೆ ತೊಟ್ಟಿಕ್ಕಿತು ನಾಲಗೆ
ಬೆಂಕಿಯುಂಡು ಕುಡಿದು ಲಾವಾರಸ
ಮತ್ತದೇ ಲೋಕ ಚಂದಿರನಿಲ್ಲದ ಬೆಳದಿಂಗಳ
ಸಾವ ಲೋಕಕೆ ಲಗ್ಗೆ ಇಡುವ ಹುನ್ನಾರ
ಕತ್ತಲಲ್ಲಿ ಬೆಳಕು ಕಾಣುವ ಹಗಲುಗನಸು
ಬೇಡರ ವೇಷದ ಮೃತ್ಯು ಕೂಪ ಬದುಕು
ಯಾರಿಗೆ ಬೇಕಿತ್ತು ಈ ಲೋಕ ಏತಕ್ಕೆ
ಬೇಕಿತ್ತು ನಭ ಇಂದ್ರಲೋಕದ ಮಾಂತ್ರಿಕ
ಕಟೆದಿಟ್ಟ ಪ್ರತಿಮೆಯ ಮುಂದೆ ದೀಪ
ಆರಿ ಹೋದ ಹಣತೆ ಬೆಳಕಿಲ್ಲ ಕತ್ತಲೆ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ