ಅನಂತ ನೋವುಗಳ ನುಂಗುತಿರುವೆ ನನ್ನೊಳು
ದಮನಿಸುವ ಕಲೆಯದು ಕಲಿಯಬೇಕು ಭವದೊಳು
ಅಂಬರದ ದಿನಪನು ಕ್ಷಯಿಸುವನು ಒಮ್ಮೊಮ್ಮೆ
ಕಾರ್ಮುಗಿಲು ಒಗ್ಗೂಡಿ ಅವನೆಡೆಗೆ ಧಾವಿಸಲು II
ನೆನಹುಗಳೇ ಬದುಕಿನ ಅಡ್ಡಗೋಡೆಗಳಾಗಿ
ಚಲಿಸುವ ಪಥವನು ತಡೆ ಹಿಡಿದು ಬಿಡುವವು
ನೆನಪುಗಳ ಸಿಹಿ ಕಹಿಯ ಚಾದರವ ಮಡಿಸುತ್ತ
ಬೆಳದಿಂಗಳಿರುಳಿಗೆ ಮನವ ತೆರೆಯಬೇಕಿದೆ II
ನಾವಲ್ಲಿಯೇ ನಿಂತರೆ ಸಾಗದು ಜೀವನವು
ಬೀಸುತ್ತಲಿರಬೇಕು ತಿರುತಿರುಗಿ ಸುಳಿಗಾಳಿಯಂತೆ
ಮೆರೆಯುತಿಹ ಕಾರ್ಮುಗಿಲ ತಿಳಿಯಾಗಿಸಿ ಬಾನೊಳು
ಮರೆಯಾದ ರವಿತೇಜನ ಸಹಿ ಹಾಕಿಸಬೇಕಿದೆ II
- ಗುಲಾಬಿ ರಾಘವೇಂದ್ರ, BEML ಕೆಜಿಎಫ್.
ಧನ್ಯವಾದಗಳು ಸರ್
ಪ್ರತ್ಯುತ್ತರಅಳಿಸಿ