ಬೆವರು ಸುರಿಸಿ ದುಡಿಯುವ ಕಾರ್ಮಿಕನ ಬಾಳು
ದಿನಗೂಲಿಯಲ್ಲಿ ಬದುಕುವ ಬಡತನದ ಗೋಳು
ಗಂಜಿ ಕುಡಿಯಲು ಸಾಲದು ಕೊಂಡು ತಂದ ಕಾಳು
ಮುರುಕು ಗುಡಿಸಲಿನಲ್ಲಿ ಮಕ್ಕಳ ಆಕ್ರಂದನ ಕೇಳು
ಬಿಸಿಲು ಮಳೆ ಚಳಿಯ ಹಂಗಿಲ್ಲದೆ ದುಡಿಯುವಾತ
ಅರೆ ಹೊಟ್ಟೆಯಲ್ಲಿ ಹರಕುಬಟ್ಟೆ ತೊಟ್ಟಂತ ಜೀತ
ಸಹನ ಶಕ್ತಿಯ ದೊಡ್ಡ ವರದಾನ ಪಡೆದವನಾತ
ದುಡಿಯುವುದು ಬಿಟ್ಟರೆ ಬೇರೆ ಗತಿಯಿಲ್ಲದ ದಾತಾ
ಕಾಯಕವೇ ಕೈಲಾಸವೆಂದು ಜಗಕೆ ಸಾರಿದ ಬಸವಣ್ಣನು
ಯಾವ ಕೆಲಸವಾದರೇನು ದುಡಿದು ತಿನ್ನುವ ಕೈಗಿನ್ನು
ಕೀಳ ಭಾವನೆಯದಿ ನೋಡಬೇಡ ಆತನ ದುಡಿಮೆಯನ್ನು
ಹಗಲು ರಾತ್ರಿ ಮೈ ಮುರಿದು ಶ್ರಮಿಸುವ ಕಾರ್ಮಿಕನಿವನು
ಕಾರ್ಮಿಕರ ಜೀವನ ಭದ್ರತೆಗೆ ಯಾವ ಕಾನೂನಗಳಿಲ್ಲ
ಸಿರಿವಂತರ ಪಾಲಿಗೆ ಬಡ ಕಾರ್ಮಿಕರು ನಿಧಿಯಂತಿಹರಲ್ಲ
ಕೆಲಸದಲ್ಲಿ ಸಂಭವಿಸುವ ಅನಾಹುತಕೆ ಮಾಲಿಕನ ಕನಿಕರವಿಲ್ಲ
ಅದೆ ವರ್ಷಕ್ಕೊಮ್ಮೆ ಮರೆಯದೆ ಕಾರ್ಮಿಕರ ದಿನ ಆಚರಿಸುವರಲ್ಲ.
- ಶ್ರೀಮತಿ ಸುಲೋಚನಾ ಮಾಲಿಪಾಟೀಲ, ಧಾರವಾಡ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ