ಮಂಗಳವಾರ, ನವೆಂಬರ್ 21, 2023

ಒಂದು ಸಿನಿಮಾದ ಹಿಂದಿನ ಕಥೆ (ಸಣ್ಣ ಕತೆ) - ಜಯಶ್ರೀ ಹಿರೇಮಠ.

ಡಾಕ್ಟರ. ಬಸಲಿಂಗಯ್ಯ ಹಿರೇಮಠ ಆಯುರ್ವೇದ ವೈದ್ಯಕೀಯದಲ್ಲಿ ಎತ್ತಿದ ಕೈ,  ಸಿದ್ಧ ಹಸ್ಥರಿದ್ದರು.  ಅವರ ಬಾಲ್ಯವನ್ನು  ಗದಗಿನ ಪುಟ್ಟರಾಜ ಗುರುಗಳ ಆಶ್ರಮ, ಆಶ್ರಯದಲ್ಲಿ  ಕಳೆದಿದ್ದರು.  ಗೆಳೆಯರೊಬ್ಬರ ಕೋರಿಕೆ ಮೇರೆಗೆ ಮತ್ತು ಮಕ್ಕಳ ವಿದ್ಯಾಭ್ಯಾಸದ ಸಲುವಾಗಿ ಮೈಸೂರ್ ಗೆ ಹೋದರು.  ನಂತರ ಬೆಂಗಳೂರಿಗೆ ಬಂದು ನೆಲೆಸಿದರು. ಅವರಿಗೆ ಮೂರು ಜನ ಹೆಣ್ಣು ಮಕ್ಕಳು ಮತ್ತು ಇಬ್ಬರು ಗಂಡು ಮಕ್ಕಳು.  ಹಿರಿಯವಳೆ ಜಯಾ ಆಕೆ ತುಂಬಾ ಧೈರ್ಯಶಾಲಿ ತಂದೆಯ ಗರ್ವ.  ಜಯಾಳನ್ನ ಧಾರವಾಡದಲ್ಲಿ  ನೌಕರಿ ಮಾಡುತ್ತಿದ್ದ  ವೀರೇಶ್ ಜೊತೆ ವಿದ್ಯಾಭ್ಯಾಸ ಮುಗಿದ ನಂತರ ಜಯಾ ಮದುವೆ ಮಾಡಿದ್ದರು. 
ಜಯಾಗೆ ಇಬ್ಬರು ಮಕ್ಕಳು ಒಂದು ಹೆಣ್ಣು ಒಂದು ಗಂಡು.  ಮಗಳು ಸುಷ್ಮಾ ರಾಣಿ,  ಮಗ ರುದ್ರಮುನಿ, ಇಬ್ಬರೂ ಶಾಲೆಯಲ್ಲಿ  ನಂಬರ್ ಒನ್.  ಮಗಳು PUC ಕಲಿಯುವಾಗ NCC ಕೆಡೆಟ್,  ಅಲ್ಲದೆ ಸಾರ್ಜೆಂಟ್ ಕೂಡ  B SC, MSC , ಮಾಡಿದ ಮೇಲೆ ಒಂದು ವರ್ಷ ಕಾಲೇಜೊಂದರಲ್ಲಿ  ಲೆಕ್ಚರರ್ ಆಗಿ ನೌಕರಿ ಮಾಡುತ್ತಿದ್ದಾಗ  ಅವಳಿಗೆ ಒಂದು ಒಳ್ಳೇ ಮನೆತನದ ವರ  ಶಿವಾನಂದ್ ನ ಜೊತೆ ಮದುವೆ ಆಯಿತು.  ಅವಳಿಗೆ ಒಬ್ಬ ಗಂಡು ಮಗ ಆದಿತ್ಯ . ಆದಿತ್ಯ ಎಂದರೆ ಜಯಾಗೆ ಪಂಚ ಪ್ರಾಣ.   ಆದಿ ಅವಳಮ್ಮ ಕಲಿಸಿದಂತೆ ಜಯಾನ್ನ ಬೇಬಿ ಎಂದೇ ಕರೆಯುತ್ತಿದ್ದ. 

ಇನ್ನು  ಮಗ ರುದ್ರ  ಸ್ಕೌಟ್ ನಲ್ಲಿದ್ದ ಪ್ರತೀ ಆಟದಲ್ಲೂ ಫಸ್ಟ್. ಯೋಗ, ಕರಾಟೆ, ಡಾನ್ಸ್ ಹೀಗೆ ಆಲ್ ರೌಂಡರ್ ಆಗಿದ್ದ .  ಅವನೂ  B B A ಮುಗಿಸಿದ.  ರುದ್ರನಿಗೆ  ಸಿನಿಮಾದಲ್ಲಿ ಹೀರೋ ಆಗುವ ಮಹದಾಸೆ.  ಅವನು ಬೆಳೀತಾ ಬೆಳೀತಾ ಅವನ  ಆಸೆಯೂ ಬೆಳೆದು ಹೆಮ್ಮರವಾಯ್ತು.  ಮನೆಯಲ್ಲಿ ತಂದೆಯ ಸಮ್ಮತಿ ಇರಲಿಲ್ಲ.  ಮಗಳ ಗಂಡ ಶಿವು , ರುದ್ರನ ಆಸೆಗೆ ಬೆಂಬಲ ನೀಡಿದ. 

      ಶಿವು    2020 ನವೆಂಬರ್ 28 ರ ಶೆನಿವಾರ ರಾಣಿ ಮತ್ತು ಆದಿತ್ಯನ  ಜೊತೆ ಧಾರವಾಡಕ್ಕೆ ಬಂದರು.  ಜಯಾಗೆ  ಬಹಳ ಖುಷಿ ಆಯ್ತು.  ಶಿವು ಊಟ ಮಾಡಿದ ನಂತರ ರುದ್ರುನ್ನ ಕರಕೊಂಡು ಹೊರಗೆ ಹೋದ ನಂತರವೇ ಜಯಾಗೆ ಗೊತ್ತಾಯ್ತು ವಿಷಯ ಏನು ಅಂತ.   ಶಿವು ತನಗೆ ಪರಿಚಯವಿದ್ದ ಸಿನಿಮಾ ನಿರ್ಮಾಪಕರೊಬ್ಬರ ಪರಿಚಯ ಮಾಡಿಸಲು ರುದ್ರುನ್ನ ಕರ್ಕೊಂಡು ಹೋದದ್ದು ಅಂತ. 
  
  ರುದ್ರು ಡಿಗ್ರಿ ಮಾಡುತ್ತಿರುವಾಗಲೇ  ಮಾಡೆಲಿಂಗ್.   ಕ್ಷೇತ್ರದಲ್ಲಿ ಹೆಸರು ಮಾಡಿದ್ದ  ಬೆಂಗಳೂರಿನಲ್ಲಿ.    "ಅಭಿನಯ ಚಕ್ರವರ್ತಿ ಸುದೀಪ್ "ಅವರ ಹಾಗೇ ಅಭಿನಯ ಕೂಡ ಮಾಡುವುದನ್ನು ಒಮ್ಮೆ ಶಿವು ನೋಡಿದ್ದ.  ಅನಾಯಾಸವಾಗಿ ಧಾರವಾಡದಲ್ಲಿ ಶೂಟಿಂಗ್ ಸಲುವಾಗಿ ತಮ್ಮ ತಂಡದೊಟ್ಟಿಗೆ ಬಂದಿದ್ದ ಗೆಳೆಯರಿಗೆ ರುದ್ರನ ಪರಿಚಯ ಮಾಡಿಸಿದಾಗ,
ಅವರು ಮೊದಲೇ ಕರ್ಕೊಂಡು ಬರಬೇಕಿತ್ತು ಈ ಸಿನಿಮಾದಲ್ಲೇ ಹೀರೊ ಆಗಿ ತಗೋತಿದ್ದಿವಿ ಅಂತ ಮರುಗಿದರೆ...?     ಅಲ್ಲಿದ್ದವರೆಲ್ಲಾ  ರುದ್ರುನ್ನೆ ಹೀರೊ ಅಂತ ತಿಳಕೊಂಡಿದ್ರಂತೆ.  

    ಭಾನುವಾರ ಪ್ರದೀಪ್ ಅಂದ್ರೆ ನಿರ್ಮಾಪಕರು ಶಿವುಗೆ ಫೋನ್ ಮಾಡಿ ಮೀಟಿಂಗ್ ಇದೆ ನಿಮ್ಮ ಅಳಿಯನ್ನ ಕರ್ಕೊಂಡು ಬನ್ನಿ ಅಂತ ಹೇಳಿದ್ರಂತೆ  ಮತ್ತೆ ಇಬ್ಬರೂ ಶೂಟಿಂಗ್ ಸ್ಪಾಟ್ ಗೆ  ಹೋದರು.

ಜಯಾ ಮಾತ್ರ ಅವರು ಮನೆಗೆ ಯಾವಾಗ ಬರ್ತಾರೋ 
ಅಂತ ಚಾತಕ ಪಕ್ಷಿಯಂತೆ ಕಾಯ್ತಾ ಇದ್ದಳು. ಸಾಯಂಕಾಲ ಮನೆಗೆ ಬಂದು ಅತ್ತೆಯನ್ನು ನೋಡಿ ಶಿವು ಹೇಳಿದ ಧಾರವಾಡದಲ್ಲಿ ಶೂಟಿಂಗ್ ಮುಗಿಯುವ ತನಕ ರುದ್ರುಗೆ ಬರೋದಕ್ಕೆ ಹೇಳಿದ್ದಾರೆ  ಅತ್ತೆ  ಅಂತ
ಅಂದಾಗ.  ಜಯಾಗಂತೂ ಆಕಾಶ ಮೂರೇ  ಗೇಣು ಇದ್ದಂತೆ ಭಾಸವಾಯಿತು.  ಅಂತೂ ಇಂತೂ  ಮಗನ  ಆಸೆ ಈಡೇರುತ್ತೆ ಅಂತ.

ರುದ್ರ  ಅದೂ ಕೊರೋನಾ ಟೈಮ್ ನ್ನೂ ಲೆಕ್ಕಿಸದೆ ತನಗೆ ಇಷ್ಟವಾದ ಫೀಲ್ಡ್ ಗೆ ತೆರಳಿದ.   ಶಿವು,  ರಾಣಿನ್ನ ಮತ್ತು ಆದಿತ್ಯನ್ನ.   ಕರ್ಕೊಂಡು ಸಾಯಂಕಾಲ ತಮ್ಮ ಊರಿಗೆ ಹೊರಟೇ ಬಿಟ್ಟ. 

    ಆದಿತ್ಯ ಜಯಾಳ ಮುದ್ದಿನ ಮೊಮ್ಮಗ  ಅವ ಹೊರಟ ಅಂದ್ರೆ  ಸಾಕು ಆಕೆಗೆ ಏನೋ ಒಂದು ಥರ  ಕಳವಳ ಬೇಜಾರು ದುಃಖ  ಸಂಕಟ  ಒಂದು ಅಮೂಲ್ಯ ವಾದ  ವ್ಯಕ್ತಿ ತನ್ನಿಂದ ದೂರ ಹೋಗುತ್ತಾನೆ ಅನ್ನುವ ಆತಂಕ, ದುಗುಡ ಅಲ್ಲದೆ ಆದಿತ್ಯ ತಮ್ಮ ಊರಿಗೆ ಹೋದ ಮೇಲೆ ಎಲ್ಲಿ ತನ್ನನ್ನ ಮರೆತು ಬಿಡುತ್ತಾನೇನೋ ಅಂತ ಭಯ.......!?

          30/11/2020

ಬೆಳಿಗ್ಗೆ ಆರು ಗಂಟೆಗೆ ಸರಿಯಾಗಿ ರುದ್ರು  ಶೂಟಿಂಗ್
ಸೆಟ್ ಗೆ  ಹೋಗಿದ್ದ.   ಜಯಾ ಪೂಜೆ ಮಾಡಿ ಮುಗಿಸಿದಾಗ ರುದ್ರ ಶೂಟಿಂಗ್ ಗೆ ಹೋಗಿದ್ದು ಗೊತ್ತಾಯ್ತು.   ಮಧ್ಯಾಹ್ನ ಕಳೆಯಿತು,  ಸಾಯಂಕಾಲ ಆಯ್ತು ರಾತ್ರಿ ಆಯ್ತು.  ರುದ್ರ ಬರಲಿಲ್ಲ.
ಜಯಾಗೆ  ಕುತೂಹಲ....!   ರುದ್ರನ    ಮೊದಲ ದಿನದ
ಅನುಭವ ಹೇಗಿತ್ತು ?  ಕೇಳಲು ಕಾತುರದಿಂದ ಕಾಯ್ತಾ ಇದ್ದಳು  ಒಮ್ಮೇಲೆ ರಾತ್ರಿ 2 ಗಂಟೆಗೆ ಬಂದ ರುದ್ರ.
 
    ರುದ್ರ  ಹೇಳಪ್ಪಾ ನಿನ್ನ ಮೊದಲ ದಿನದ ಅನುಭವ ಹೇಗಿತ್ತು ಅಂತ.....!  ಆಗ ಅವನು ಹೇಳಿದ ಮಾತು ಕೇಳಿ ಜಯಾಳ ಗಂಟಲು ಉಬ್ಬಿತು, ಕಣ್ಣಾಲಿಗಳು ತುಂಬಿ ತುಳುಕಿತು. 

     ರುದ್ರ  ಬೆಳಿಗ್ಗೆ ಬೇಗ ಎದ್ದು ಹೋಗಿದ್ದಾಗ ಸೆಟ್ ನಲ್ಲಿ
ಕ್ಯಾಮರಾ ಮನ್ ,ಸೆಟ್ ಹಾಕುವವರು, ಕುಕ್ ಇನ್ನೂ. ತುಂಬಾ ಜನ ಬಂದಿದ್ದರಂತೆ.   ಆನಂತರ ಶೂಟಿಂಗ್ ಶುರುವಾಯ್ತು ಸುಮಾರು ಆರೇಳು ಗಂಟೆಯ ನಂತರ ವಿರಾಮ.   ಮತ್ತೆ ಶೂಟಿಂಗ್ ಶುರು.  ಅಂತೂ ರಾತ್ರಿ ಒಂದು ಗಂಟೆಗೆ ಪ್ಯಾಕಪ್ ಆದ ಮೇಲೆ  ಸ್ವಲ್ಪ ಹೊತ್ತು ನಿರ್ಮಾಪಕರು, ಚಿತ್ರ ತಂಡದ ಜೊತೆ ಮಾತಾಡಿ ಮನೆಗೆ ಬಂದಾಗ  ರಾತ್ರಿ ಎರಡು ಗಂಟೆ ಆಗಿತ್ತು.

    ರುದ್ರ ಬರುವುದನ್ನೇ ಎದುರು ನೋಡುತ್ತಿದ್ದ ಜಯಾಗೆ  ಕೆಟ್ಟ ಕುತೂಹಲ.  ರುದ್ರ  ಯಾರಿಗೂ ನಿರಾಶೆ ಮಾಡಲಿಲ್ಲ    ತನ್ನ ಅನುಭವ ಹೇಳಲು ಶುರು ಮಾಡಿದ .  ಬೆಳಿಗ್ಗೆ ಐದು ಗಂಟೆಗೆ ಸರಿಯಾಗಿ ಎದ್ದು ತಯಾರಾಗಿ ಆರು ಗಂಟೆಗೆ ಶೂಟಿಂಗ್ ಸ್ಪಾಟ್ ಗೆ ಹೋದೆ ಅಲ್ಲಿ ಎಲ್ಲರೂ ನನ್ನನ್ನ ತುಂಬಾ ಚೆನ್ನಾಗಿ ಮಾತಾಡಿಸಿದರು.   ಶೂಟಿಂಗ್ ನಡೆಯುವಾಗ ನಾನು ಒಂದು ಕಡೆ ನಿಂತು ಎಲ್ಲಾ ಗಮನಿಸಿದೆ.  ಮಧ್ಯ ವಿರಾಮ ಆಗುವ ತನಕ ಅಂದರೆ ಬರೋಬ್ಬರಿ ಆರು ತಾಸು ಆಗಿತ್ತು,  ಒಂಟಿ ಕಾಲ್ನಾಗ ನಿಂತಿದ್ದೆ ಕಾಲು ಭಾಳ ನೋವಾಯ್ತು ಅಂದಾಗ ಜಯಾಗೆ ತುಂಬಾ ಅಳು ಬಂತು.

     ರುದ್ರ ಅದನ್ನ ನೋಡಿ ಆಕೆಗೆ ಹೇಳಿದ ಮಮ್ಮೀ....! ಇದೇನು ಮಹಾ  ಅಲ್ಲ.  ಇದು ನನಗೆ ಇಷ್ಟವಾದ ಜಗತ್ತು.   ನಾನೇ ಅತೀ ಹತ್ತಿರದಿಂದ ಸಿನಿಮಾ
ಶೂಟಿಂಗ್ ನೋಡುವುದರಲ್ಲಿ ಮಗ್ನ ಆಗಿದ್ದು .
ಪ್ರದೀಪ್ ಅಣ್ಣಾ ಕೂತ್ಕೊಳ್ಳಿ  ಅಂತ ಹೇಳಿ ನನ್ನನ್ನ
ಎಲ್ಲರಿಗೂ ಮತ್ತೊಮ್ಮೆ ಪರಿಚಯ ಮಾಡಿಸಿದರು.
ಮೊನ್ನೆ ಶಿವು ಮಾಮ, ಬಸವಾರಾಧ್ಯ ಅಣ್ಣಾ
ನನ್ನನ್ನ ಪ್ರದೀಪ್ ಅಣ್ಣಾ ಅವರಿಗೆ ಪರಿಚಯ
ಮಾಡಿಸಿದ್ರಲ್ಲಾ .....! ಆಗ ಅವರೇನಂದರು ಗೊತ್ತಾ ?
ರುದ್ರ ನಮಗೆ ನೀವು ಮೊದಲೇ ಸಿಗಬೇಕಾಗಿತ್ತು  ಅಂತ.
ಸೆಟ್ ನಲ್ಲಿ ಇದ್ದವರೆಲ್ಲಾ   ನನ್ನನ್ನೇ ಹೀರೊ ಅಂತ
ತಿಳಿದು ಕೊಂಡಿದ್ದರು.  ಈ ಮಾತನ್ನು  ಶಿವೂನೂ ರುದ್ರನಿಗೆ ಹೇಳಿ ಇದನ್ನ ಉಳಿಸಿಕೊಂಡು ಹೋಗು ರುದ್ರ ಅಂತ ಹೇಳಿ ಹೋಗಿದ್ದನಂತೆ.

  ರುದ್ರ ಇದನ್ನೆಲ್ಲಾ ಹೇಳಿ ಮುಗಿಸುವ ಹೊತ್ತಿಗೆ ಬೆಳಿಗ್ಗೆ ಐದು ಗಂಟೆ .   ಎಲ್ಲರೂ ಮಲ್ಕೊಳ್ರಿ  ಇನ್ನು ಅಂದ.
ಬೆಳಕೇ ಆಯ್ತು ಇನ್ನೇನು ಮಲಗೋದು ಅಂತ ಜಯಾ
ಅಂದಾಗ .... ಇವತ್ತು  ನೀವು ನನ್ನ ದಾರಿ ಕಾದೀರಿ ....?! ಇನ್ನು ಮುಂದೆ ಕಾಯ್ ಬ್ಯಾಡ್ರಿ  ಈ ವಯಸ್ಸಿನಲ್ಲಿ ನಿಮಗೆ ರೆಸ್ಟ್ ಬೇಕು. ಅದೂ ಅಲ್ಲದೇ ನಾನೂ ಒಂದೆರಡು ತಾಸು ಮಲಗೆದ್ದು ಮತ್ತೆ ಶೂಟಿಂಗ್ ಗೆ  ಹೋಗ್ತೀನಿ, ಅಂತ ತಾಯಿಗೆ ಮಲಗಲು ಹೇಳಿ  ತನ್ನ ರೂಮಿಗೆ ಹೋದ.

      01/12/2020

ಜಯಾ ಏಳುವ ಹೊತ್ತಿಗಾಗಲೇ ರುದ್ರ ಶೂಟಿಂಗ್ ಗೆ
ಹೋಗಿದ್ದ  ಅವ ಮನೆಗೆ ಬರುತ್ತಿದ್ದ ಹಾಗೆ ಎಲ್ಲರ  ವಿಚಾರಣೆ ಶುರು.  ಇವತ್ತು ಹ್ಯಾಗಿತ್ತು  ನಿನ್ನ  ಅನುಭವ.  ರುದ್ರ ಹೇಳಿದ ಇವತ್ತು ನಿರ್ಮಾಪಕರ ಮಗ ನನ್ನೊಟ್ಟಿಗೆ ಎಷ್ಟು ಹಚ್ಕೊಂಡು ಮಾತಾಡಿದ ಆಗ ಅಲ್ಲಿದ್ದವರೆಲ್ಲಾ ನೀವಿಬ್ಬರೂ ಮೊದಲಿನಿಂದ ಪರಿಚಯಾನ...?  ಅಂತ ಕೇಳಿದರು.
ಜಯಾ  ಅವನ ಮಾತು ತುಂಡರಿಸಿ ಕೇಳಿದಳು ಇದೇ
ಸಿನಿಮಾದಲ್ಲಿ ನಿಂಗೆ ಆಕ್ಟ್ ಮಾಡಲು ಅವಕಾಶ ಸಿಗುತ್ತಾ.....?  ಅಂದಾಗ ರುದ್ರ ಹೇಳಿದ ಇಲ್ಲ.....! ತಾಯಿಗೆ ಬಹಳ ನಿರಾಶೆ ಆಯ್ತು.  ಈ ಸಿನಿಮಾ ಈಗ ಅರ್ಧ ಶೂಟ್ ಆಗಿದೆ ಮುಂದಿನ ಸಾರಿ ನನಗೆ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿ ಮುಗಿಸಿದ.  ಮತ್ತೆ ನೀನು ದಿನಾ ಹೋಗೋದು ನೋಡಿ ನಿನಗೂ ಅವಕಾಶ
ಕೊಟ್ಟಾರೇನೊ .....? ಅನ್ಕೊಂಡಿದ್ದೆ ,  ನೀನು ನಿರ್ಮಾಪಕರಿಗೆ ಹೇಳಿಲ್ಲನು........ ? ನೀನು  ಮಾಡೆಲಿಂಗ್ ಕ್ಷೇತ್ರದಲ್ಲಿ ಹೆಸರು ಮಾಡಿದ್ದು , ಹೇಳಬೇಕಿತ್ತು .  ಅಂದಾಗ ರುದ್ರ ಹೇಳಿದ.  ಶಿವು ಮಾಮ ಎಲ್ಲಾ ಹೇಳಿದ್ದಕ್ಕೆ ಅವರು ನನಗೆ ಅಲ್ಲಿ ಹೋಗಿ ಅನುಭವ ಆಗ್ಲಿ ಅಂತ  ಶೂಟಿಂಗ್ ಸ್ಪಾಟ್ ಗೆ ಹೋಗೋಕೆ  ಅನುಮತಿ ಕೊಟ್ಟಿರೋದು
ಅಂದು ಮಾತು ಮುಗಿಸಿದ.  ಜಯಾಳ ಪೆಚ್ಚು ಮೋರೆ
ನೋಡಿ ರುದ್ರ ಆಕೆಗೆ  ಸಮಾಧಾನ ಮಾಡ್ತಾ ಹೇಳಿದ
ತಡೀರಿ ಈ ಕೊರೋನ ಟೈಮ್ ಮುಗೀಲಿ ಅವಕಾಶ ಜಾಸ್ತಿ ಸಿಗುತ್ತೆ.   ಅಂತ ಹೇಳಿ ಮಲಗಲು ಹೋದ.

03/12/2020

ರುದ್ರ ಬೆಳಿಗ್ಗೆ ಬೇಗ  ಹೋಗೋದು ರಾತ್ರಿ ಶೂಟಿಂಗ್
ಪ್ಯಾಕಪ್  ಆದ ಮೇಲೆ ಬರುವುದು ಜಯಾಳಿಗೀಗ ಅಭ್ಯಾಸ ಆಗಿಬಿಟ್ಟಿತು.    ಆದ್ರೆ  ಇವತ್ತು ಒಂದು ಸರ್ಪರೈಸ್ ಇತ್ತು  ರುದ್ರ ಶೂಟಿಂಗ್ ಹೊರಟ ದಿನದಿಂದ ಜಯಾ ಯಾವಾಗಲೂ ಫೋನ್ ಮಾಡಿ  ಅವನಿಗೆ ತೊಂದರೆ ಕೊಟ್ಟಿರಲಿಲ್ಲ.  ಅವ ಮನೆಗೆ ಬಂದ ಮೇಲೆ ಜಯಾಗೆ ಹೇಳಿದ ಹಿರೇಮಠ್...! 
ರುದ್ರ ಜಯಾ ಮೇಲೆ ಪ್ರೀತಿ ಜಾಸ್ತಿ ಆದಾಗ, ಇಲ್ಲಾ ತುಂಬಾ ಬೇಜಾರು ಮಾಡಿಕೊಂಡಗಲೆಲ್ಲಾ ಸರ್ ನೇಮ್  ಹಚ್ಚಿ  ಕರೆಯುತ್ತಿದ್ದ.  ದಿನಾಲೂ ನೀವು ಕೇಳ್ತಾ ಇದ್ರಿ....! ಇವತ್ತು ಕೇಳಲೇ ಇಲ್ಲ.....?  ನೋಡ್ರಿ ಇವತ್ತು ನನಗೆ ಸಿನಿಮಾದಲ್ಲಿ ನಟಿಸಲು ಅವಕಾಶ ಕೊಟ್ಟರು, ನಂಗೆ  ಕಾಲೇಜ್ ಓರಿಯೆಂಟೇಶನ್ ಡೇ ನಲ್ಲಿ ಕಾಲೇಜ್ ಸ್ಟೂಡೆಂಟ್ ರೋಲ್ ಕೊಟ್ರು.  ಅಂತ ರುದ್ರ ಹೇಳಿದಾಗ  ಏನು ಸೀನಿತ್ತು..? ಎಂದು ಜಯಾ  ಕೇಳಿದಳು ಆಗ  ರುದ್ರ ಹೇಳಿದ.  ಹಿರೇಮಠ್ .....! ನೀವು ಸಿನಿಮಾ ರಿಲೀಸ್ ಆದ ಮೇಲೆ  ನೋಡುವರಂತೆ ಈಗ ನನ್ನನ್ನ ಏನು ಕೇಳಬಾರದಂತಪ್ಪ  ... .....! ಎಂದು ಹೇಳಿ ಮಾತು  ಮುಗಿಸಿದ.  ಇವತ್ತು ಗಟ್ಟಿಮೇಳಾ ಧಾರಾವಾಹಿಯಲ್ಲಿ ನಟಿಸುತ್ತಿದ್ದ ಶರಣ್ಯಳ ನೃತ್ಯ ಇತ್ತಂತೆ.  ಅದು ಒಂದು ಹಾರರ್ ಮೋವಿ ಡಿಸೆಂಬರ್16ರ ವರೆಗೂ ಶೂಟಿಂಗ್ ಇರುತ್ತೆ, ನಂತರ ದಾಂಡೇಲಿಯಲ್ಲಿ  ಶೂಟಿಂಗ್ ಮುಂದುವರಿಯುತ್ತದೆ ಎಂದು ರುದ್ರ ಹೇಳಿದ .  ಅಜೇಯ್ ಮತ್ತು ಅವರ ತಂದೆ ರುದ್ರನ್ನ  ದಾಂಡೇಲಿಗೂ ಬನ್ನಿ ಎಂದು ಹೇಳಿದರಂತೆ.
ಬರೋಣ ಬಿಡಿ ಸಾರ್ ಎಂದು ಹೇಳಿ ಬಂದನಂತೆ.

ರುದ್ರ ಹೀಗೇ ಶನಿವಾರದ ತನಕ ಹೋದ.  ಭಾನುವಾರ
ರಜೆ.   ಮತ್ತೆ ಸೋಮವಾರದಿಂದ ಶುಕ್ರವಾರ ತನಕ
ಹೋಗುವುದು ಬರುವುದು ಮನೆಯವರಿಗೀಗ ಅಭ್ಯಾಸ ಆಗಿಬಿಟ್ಟಿತು ಜಯಾ ಒಮ್ಮೆ ನಮ್ಮನ್ನೂ ಶೂಟಿಂಗ್ ನೋಡಲು ಕರ್ಕೊಂಡು ಹೋಗು ಅಂತ ಕೇಳಿದಳು.  ಈಗ ಬೇಡ ಮಮ್ಮಿ ಎಂದಾಗ ಹೋಗಲಿ .....!  ನಮ್ಮೂರಿನಲ್ಲಿ ಶೂಟಿಂಗ್ ಗೆ  ಬಂದಾರಲ್ಲಪ್ಪ.....!  ಅವ್ರನ್ನಾದ್ರೂ ಮನೀಗೆ ಒಮ್ಮೆ ಊಟಕ್ಕೆ ಕರಿ ಅಂದಳು ಅದಕ್ಕೆ ಅವನು ಆಯ್ತು ಅಂದ.  ಇವತ್ತು ರುದ್ರನ  ಜೊತೆ ಸಂಜೆ ಅವನ ಫ್ರೆಂಡ್ ಕೂಡ ಶೂಟಿಂಗ್ ನೋಡಲು ಹೋಗಿದ್ದನಂತೆ ಆರು ಗಂಟೆಗೇ ಶೂಟಿಂಗ್ ಮುಗಿಸಿ ಇನ್ನೋವಾ ಕಾರಿನಲ್ಲಿ ಇವರ್ದ್ದೊಂದು ಟೀಮ್ ನ ಕರ್ಕೊಂಡು  ಹೊರಗಡೆ ಹೋಗಿ ಊಟ ಮಾಡಿ ಬಂದೆವು ಎಂದು  ಹೇಳಿದ ರುದ್ರ.  ಅಪೂರ್ವ ರುದ್ರನ ಫ್ರೆಂಡ್  ಅವನೂ ರುದ್ರನ ಬಗ್ಗೆ ತನಗೇನು ಗೊತ್ತಿತ್ತೋ  ಅದನ್ನ ಅಲ್ಲಿದ್ದವರಿಗೆಲ್ಲಾ ಹೇಳಿದ್ದ.    ಶನಿವಾರ ಮತ್ತೆ ಅಜೇಯ್ ಫೋನ್ ಮಾಡಿದ ಮೇಲೆ ರುದ್ರ ಹೋಗಿ ಬಂದ.    ಇವತ್ತು ರಾತ್ರಿ 10.30 ಕ್ಕೆ   ಮನೆಗೆ ಬಂದ . ಇವತ್ತು ಎಲ್ಲರೂ ಒಟ್ಟಿಗೇ ಊಟ ಮಾಡಿದೆವು .
ನಂತರ ಜಯಾ  ಮತ್ತೊಮ್ಮೆ ರುದ್ರನಿಗೆ  ಹೇಳಿದಳು. ಅವರೆಲ್ಲಾ ಹೋಗುವುದರೊಳಗೆ ಒಂದು ಸಾರಿ ನಮ್ಮಮನೆಗೆ  ಕರಿ ಅವರೂ ಉತ್ತರ ಕರ್ನಾಟಕದ ಊಟ ಮಾಡ್ಲಿ  ಅಂದಳು  ಆಗ ರುದ್ರ ಹೇಳಿದ  ನಾಳೆ 13, ಭಾನುವಾರ ರಜೆ.  ಸೋಮವಾರ ಕೇಳಿ ನಿಮಗೆ ಹೇಳ್ತಿನಿ ಬಿಡಿ ಅಂದ.
       
             ರುದ್ರ ಸೋಮವಾರ ಸಂಜೆ ಹೋಗಿದ್ದ ಸಂದರ್ಭದಲ್ಲಿ ನಿರ್ಮಾಪಕರು  ಫುಲ್ ಬಿಜಿ, ಹಾಗೇ
ಬಂದ. 15 ರಂದೂ ಹಂಗೇ ಆಯ್ತು.  ಮತ್ತು ಆವತ್ತೇ
ಶೂಟಿಂಗ್ ಕಡೇ ದಿನ ಕೂಡ ಆಯ್ತು.  16 ರಂದು,    ಎಲ್ಲರೂ ರುದ್ರನಿಗೆ ಮತ್ತೆ ಬರೋಣ... ..!ಬನ್ನಿ ಸಾರ್  ಅಂತ ಹೇಳಿದಾಗ.  ರುದ್ರ ಅವರನ್ನೆಲ್ಲಾ ವೀವ್ ನೋಡಲು ಕಲ್ಕೇರಿಗೆ ಕರ್ಕೊಂಡು ಹೋಗಿ ಬಂದ ನಂತರ ಅವರೆಲ್ಲರಿಗೂ ಹೋಟೆಲ್ ನಲ್ಲಿ ಊಟ ಮಾಡಿಸಿದ ಮೇಲೆ ಮನೆಗೆ ಬಂದ.  ಬಂದವನೇ ಮಮ್ಮಿ ಇವತ್ತು ನಾವೆಲ್ಲಾ ಕ್ರಿಕೇಟ್ ಕೂಡ ಆಡಿದೆವು. ಅಂದ ಸರಿ ಬಿಡು ಎಲ್ಲರಿಗೂ ಧಾರವಾಡದ ಪರಿಚಯ ಮಾಡಿಸಿದೆ ಅಂದೆ ಹೂಂ ಎಂದು ಹೇಳಿ ಮಲಗಲು ಹೋದ.

             17/12/2020.

ಇವತ್ತು ರುದ್ರ ಬೆಳಿಗ್ಗೆ 8 ಗಂಟೆ ಗೇ ಹೋಗಿದ್ದ .   ಡೈರೆಕ್ಟರ್  ಕೂಡ ಇವರ ಜೊತೆ ಕ್ರಿಕೇಟ್ ಆಟ ಆಡಿ ಟೈಮ್ ಪಾಸ್ ಮಾಡಿ ಸಂಜೆ ಬೆಂಗಳೂರಿಗೆ ಪ್ರಯಾಣ
ಬೆಳೆಸಿದರಂತೆ.  ಅಂತೂ ಅವರಿಗೆ ಸೆಂಡ್ ಆಫ್
ಮಾಡಿಯೇ ಬಂದ್ಯನಪಾ ......? ಅಂದಳು ಜಯಾ   ಯೆಸ್ ......!.  ಇನ್ನು ನನ್ನ ಟೈಮ್ ಗಾಗಿ ಕಾಯಬೇಕು.  ಭರತ್ ಅಂದ್ರೆ ಡೈರೆಕ್ಟರ್ ಹೋಗುವಾಗ ನೀವು ನಮ್ಮ ಮನಸ್ಸಲ್ಲಿ  ಇರ್ತಿರಾ ಬಿಡಿ ಸಾರ್ ಎಂದು ಹೇಳಿ ಹೋದರಂತೆ.  ಎಷ್ಟು ದೊಡ್ಡ ಮಾತು.....!

ಅಂತೂ ಇಂತೂ ರುದ್ರನ ಆಸೆಗೆ ಗರಿ  ಮೂಡಿದ ಹಾಗೇ
ಆಯ್ತು..... ಇನ್ನು ಈ  ಗಂಡು ನವಿಲು ಗರಿಬಿಚ್ಚಿ ಕುಣಿಯವುದನ್ನು ನೋಡಬೇಕು ಅನ್ನುವುದೇ ತಾಯಿಯ ಮಹದಾಸೆ.
      ರುದ್ರ ಸಿನೆಮಾದಲ್ಲಿ ಆಕ್ಟ್ ಮಾಡುವ  ಆಸೆಯನ್ನ ತಂದೆಗೆ ತಿಳಿಸಿದಾಗ ಆಯ್ತು ಒಂದು ವರ್ಷ ಟೈಮ್ ಕೊಡ್ತೀನಿ  ನಾನು ತಿಂಗಳಿಗೆ 15000/- ರೂ. ಅಷ್ಟೇ ಕೊಡುತ್ತೇನೆ ಅಂದಾಗ ರುದ್ರ ಅದಕ್ಕೊಪ್ಪಿದ.  ಬೆಂಗಳೂರಿನಲ್ಲಿದ್ದ ತನ್ನ ಗೆಳೆಯನ ಜೊತೆ ಶೇರಿಂಗ್ ನಲ್ಲಿ ಇರತೊಡಗಿದ.  ಅವರಪ್ಪ ಎರಡೇ ತಿಂಗಳಿಗೆ ದುಡ್ಡು ಕೊಡುವುದು ನಿಲ್ಲಿಸಿದರು.  ಆಗ ರುದ್ರ  ಮತ್ತೆ ಎರಡು ತಿಂಗಳು ಕಾದ ಪ್ರಯೋಜನ ಆಗಲಿಲ್ಲ.   ಕಡೆಗೆ ಅವ ಫಸ್ಟ್ ಸೋರ್ಸ್ ಎಂಬ UK ಕಂಪನಿಯಲ್ಲಿ  CSA ಆಗಿ ನೌಕರಿ ಮಾಡುತ್ತಲೇ.  ತನ್ನ ತಾಯಿಯ ಫ್ರೆಂಡ್ ಗೆ ಗೊತ್ತಿರುವ ಡೈರೆಕ್ಟರ್ ಕಡೆಯಿಂದ ಸಿನಿಮಾ ಒಂದರಲ್ಲಿ ಒಂದು ಒಳ್ಳೇ ಅವಕಾಶ ಸಿಕ್ಕಿತು.  ಅದರಲ್ಲಿ ಸೆಕೆಂಡ್ ಹೀರೋ ಆಗಿದ್ದ.  ಹೀಗೆ ಒಂದರಿಂದ,  ಒಂದು ಒಟ್ಟು ಐದು ಸಿನಿಮಾದಲ್ಲಿ ಆಕ್ಟ್ ಮಾಡಿದ್ದಾನೆ.  ಅದೂ ಶಿಫ್ಟ್ ನೌಕರಿ ಮಾಡುತ್ತಾ.  
     ರುದ್ರ  ತನ್ನ ಹೆಸರಿಗೆ ತಕ್ಕಂತೆ ಇದ್ದವನು ಈಗ ತುಂಬಾ ಬದಲಾಗಿದ್ದಾನೆ.  ಚಿಕ್ಕವನಿದ್ದಾಗಿನಿಂದಲೂ ಅವನಿಗೆ ತುಂಬಾ ಜವಾಬ್ದಾರಿ.  ತಂದೆ ತಾಯಿ ಅಕ್ಕ...... ಅಂತಾ. ಹೀಗೆ...ಜೀವನದಲ್ಲಿ  ನಡೆದ ಘಟನೆಗಳಿಂದ ಆದ
ಅನುಭವ ಅವನನ್ನು ತುಂಬಾ ದೊಡ್ಡ ವ್ಯಕ್ತಿಯನ್ನಾಗಿ
ಮಾಡಿತ್ತು.   " ಯಾವ ವಿಶ್ವ ವಿದ್ಯಾಲಯವು ಕಲಿಸದ ಪಾಠವನ್ನು ಜೀವನ ಕಲಿಸಿತ್ತು ".
  
      ಹೇಗೋ ಜೀವನ ಸಾಗಿಸುತ್ತಿದ್ದ  ಒಮ್ಮೆಲೇ  ಅವನ ತಾಯಿಗೆ ತುಂಬಾ ಸೀರಿಯಸ್ ICU ನಲ್ಲಿ ರೆಡ್ ಝೋನ್ ನಲ್ಲಿ ಇರಿಸಿದ್ದು ಕೇಳಿ ರುದ್ರ ರಾತ್ರೋ ರಾತ್ರಿ  ಪ್ರಯಾಣ ಬೆಳೆಸಿದ.   31  ಮೇ 2023  ಅಡ್ಮಿಟ್ ಆಗಿ ಎರಡು ದಿನ ಏನೂ ಪ್ರಜ್ಞೆಯೇ ಇಲ್ಲ.   ಜೂನ್ 1ರಂದು ಆಕೆ ಮದುವೆಯಾದ ದಿನ ಗಂಡ ಬಂದು ಮಾತಾಡಿದ್ದು ಅರಿವಿಲ್ಲ.   ಮಗಳು ಬಂದಾಗಲೂ ಏನು ಮಾತಾಡಿದ್ದು ಗೊತ್ತಿಲ್ಲ.  ಅಳಿಯ ಬಂದಾಗ  ಸ್ವಲ್ಪ ತಿಳಿಯಿತು.  ಈಗ ಇಬ್ಬರು ಮೊಮ್ಮಕ್ಕಳು ಜಯಾಗೆ.  ಮಗಳು ,ಅಳಿಯ  ಜಯಾಗೆ ಸಮಾಧಾನ ಹೇಳಿ ನೀವು ಡಿಸ್ಚಾರ್ಜ್ ಆದ ಮೇಲೆ ಬರ್ತೀವಿ ಎಂದು ಹೇಳಿ ಹೋದರು .

      ರುದ್ರ ತಾಯಿ ಡಿಸ್ಚಾರ್ಜ್ ಆಗಿ ಮನೆಗೆ ಬಂದ ಮೇಲೆ ಅವ ಹೇಳಿದ್ದು ಇಷ್ಟೇ.    "  ಮಮ್ಮಿ ನಾನು ಮುಂದೆ ಒಂದು ದಿನ ದೊಡ್ಡ ವ್ಯಕ್ತಿ ಆಗೇ ಆಗ್ತೀನಿ "  ಆದರೆ ಅದನ್ನ ನೋಡೋಕೆ ನೀವೇ ಇಲ್ಲ ಅಂದ್ರ....? " ನಾನು  ಯಾಕ ಇಷ್ಟು ಕಷ್ಟ ಪಡಬೇಕು ".....? ನೀವು  ಇಷ್ಟು ವರ್ಷ ಕಷ್ಟ ಪಟ್ಟೀರಿ ...!  ನಮಗೂ ಒಳ್ಳೇ ಕಾಲ ಬಂದೇ ಬರುತ್ತ.  ಕಾಯಬೇಕು ಅಷ್ಟೇ ಅಂತ ಧೈರ್ಯ ಹೇಳಿ   ಮತ್ತೆ ಬೆಂಗಳೂರಿಗೆ  ಹೋದ.
     ಜಯಾ  ಒಂದು ಶಾಲೆಗೆ ಟೀಚರ್ ಕೆಲಸಕ್ಕೆ ಹೊರಟಳು.   ಈಗಲೂ ಮಗನಿಗೆ ಅದೃಷ್ಟದ  ಬಾಗಿಲು ತೆರೆಯುತ್ತದೆ ಎಂದು ಕಾಯುತ್ತಾ ಕುಳಿತಿರುವಳು......


- ಪ್ರೊ. ಜಯಶ್ರೀ ಹಿರೇಮಠ,
ಆಯುರ್ವೇದ ಮತ್ತು ಜಾನಪದ ವೈದ್ಯರು
ಮತ್ತು ಸಾಹಿತಿ,
ಧಾರವಾಡ -580009.
ಮೋ.  9449819425.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...