ಭಾನುವಾರ, ಮಾರ್ಚ್ 30, 2025

ಯುಗಾದಿ...

ಮತ್ತೆ ಬಂದಿದೆ
ಯುಗಾದಿ!
ಕ್ಯಾಲೆಂಡರ್ ಬದಲಾಯಿತೆಂಬ
ಕಾರಣಕ್ಕಲ್ಲ?
ಪ್ರಕೃತಿಯೇ ಸ್ವಾಗತಿಸಿದೆ!

ಸೇವಿಸುವೆನು
ಬೇವು ಬೆಲ್ಲ
ಬೇವಲ್ಲಿ ರೋಗನಿರೋಧಕ
ಬೆಲ್ಲದಿ ಬುದ್ಧಿವರ್ಧಕವಿದೆಯೆಂಬ
ಕಾರಣಕ್ಕಲ್ಲ?
ಬಾಲ್ಯದಿಂದ ಅಮ್ಮ ಕಟ್ಟಿಕೊಟ್ಟ ರುಚಿಗಾಗಿ!

ನಮಿಸುವೆನು ಕೈಜೋಡಿಸಿ
ತಲೆಬಾಗುವೆನು ನಡುಬಗ್ಗಿಸಿ
ಕರಗಳಲ್ಲಿ ಅಯಸ್ಕಾಂತ
ಶಿರದಲ್ಲಿ ಶ್ರೀಚಕ್ರವಿದೆಯೆಂಬ
ಕಾರಣಕ್ಕಲ್ಲ?
ನನ್ನಪ್ಪನು ಕಲಿಸಿಕೊಟ್ಟ ಸಂಸ್ಕಾರವದು!

ಬೆಳಗುವೆನು ಆರತಿಯ
ಸೇವಿಸುವೆನು ತೀರ್ಥಪ್ರಸಾದವ
ಶಾಖವು ಕ್ರಿಮಿನಾಶಕ ತೀರ್ಥವು ಉರಿನಾಶಕ
ಪ್ರಸಾದವು ಪುಷ್ಟಿದಾಯಕವೆಂದಲ್ಲ!
ನನ್ನಜ್ಜಿಯ ಸೀರೆ ಸೆರಗಿನಲಿ ಬಂದ ಒಲವಿನ ಓಲೆಗಳವು!

ಇರಿಸುವೆನು ತಿಲಕ ವಿಭೂತಿ ಕುಂಕುಮವ
ಧರಿಸುವೆನು ತುಳಸಿ ಗಂಧ ಪುಷ್ಪಮಾಲೆಯ
ಸಿದ್ಧಿಸದೆನಗೆ ತರ್ಕವಿಜ್ಞಾನ ಅನ್ವೇಷಣೆ?
ನಂಬುಗೆಯಿದೆ ಎನಗೆ, ನನ್ನಜ್ಜನ ಕೋಲೇ ನನ್ನಯ ಕುದುರೆ!
ಸೂಕ್ಷ್ಮದರ್ಶಕ ಬೇಕಿಲ್ಲ, ಪ್ರಯೋಗಕೆ ತೊಡಕಿಲ್ಲ!?

ಮತ್ತೆ ಬರುವುದು
ಯುಗಾದಿ
ಕ್ಯಾಲೆಂಡರ್ ಮುದ್ರಣವಾಯಿತೆಂದಲ್ಲ?
ಮತ್ತೆ ಮತ್ತೆ ಮಗುವಾಗುವ
ಪ್ರಕೃತಿಗೆ
ಮತ್ತೆ ಮತ್ತೆ ವಧುವಾಗುವ
ಭುವಿಗೆ
ಚಿಗುರುವ ಮನಸಿಗೆ
ಕಾರಣಬೇಕಿಲ್ಲ!
ಮತ್ತೆ ಮತ್ತೆ ಚಿಗುರುತಿರಲಿ
ಮರಳಿ ಮರಳಿ ಬರುತಿರಲಿ!

ಯುಗಾದಿ! ಯುಗಾದಿ! ಯುಗಾದಿ!
~ ಅರಬಗಟ್ಟೆ ಅಣ್ಣಪ್ಪ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...