ಬುಧವಾರ, ಆಗಸ್ಟ್ 13, 2025

ಕವಿತೆ

ಮಿಂಚುವ ರಾಖಿಯಲ್ಲ
ಕುಣಿದಾಡುವ ಶೋಕಿಯಿಲ್ಲ
ತಣ್ಣಗೆ ಕೂರಿಸಿ ಕಟ್ಟಿಸುತಿದ್ದಳು
ಅವ್ವ ಅರಿಶಿಣದ ದಾರವನು

ತಂಗಿಯೋ ಅಕ್ಕಳೋ
ಒಬ್ಬರಲ್ಲ, ಸಾವಿರವಿದ್ದರೂ ಬೇಕು
ನಾಗರಪಂಚಮಿ ಬಂದೊಡನೆ
ಉಮ್ಮಳಿಸುವುದು ದುಃಖ
ಬಿಗಿಯುವುದು ಕಂಠ
ತೊಟ್ಟಿಕ್ಕುವುವು ಕಂಗಳು
ಗತಿಸಿದ ತಂಗಿಯ ನೆನೆನೆನೆದು

'ಮೂಡಣಕೆ ಮುಖ ಮಾಡಿ
ಸೂರ್ಯನಂತೆ ಬೆಳಗುವನಣ್ಣ
ಬೆಂಗಟಿಗೆ ನೇರದಲಿ ಕೂತು
ಮನೆಗೆ ಆಧಾರವು ನಮ್ಮಣ್ಣ'
ಆರತಿಯ ಬೆಳಗಿ ತಿಲಕವಿಟ್ಟು
ನಾಗಬಂಧವ ಕಟ್ಟಿ ಹರಸುತಿದ್ದಳು ತಂಗಿ
ನೆನಪಿಗಿಟ್ಟ ಎರಡೇ ರೂಪಾಯಿಗೆ ಹಿರಿಹಿರಿ ಹಿಗ್ಗಿ

ಬಳಪದ ಕಲ್ಲಲಿ ಕೆತ್ತಿದ ನಾಗ
ಬಳಿದೆಣ್ಣೆ ಅರಿಶಿಣಕೆ ಮಿಂಚುವುದೀಗ
ಲೋಟಕೆರಡು ಹನಿ ತುಪ್ಪ ತುಂಬ ಹಾಲು
ತಂಗಿಯ ಕೈಹಿಡಿದು ಗರಿಕೆಯಲಿ ಎರೆಯಲು
ಕಿಲಕಿಲ ನಗುವನು ನಾಗ
ಎದುರೆಲೆಯ ಮೇಲೆ ಎಳ್ಳುಂಡೆ ಚಿಗಣಿ-ಟಮಟ 
ನೆನೆಸಿಟ್ಟ ಕಾಳು ಬಿಸಿಬಿಸಿ ಹೂರಣ
ತರತರದುಂಡೆ ಹಬೆಯಾಡುವ ಅನ್ನ
ನನಗೆಂದೇ ಒಬ್ಬಳಿದ್ದರೆ ತಂಗಿ
ನಾಗಪಂಚಮಿಯೇ ಸುಗ್ಗಿ

ಅಕ್ಕತಂಗಿಯರು ಬೇಕು ನರಜನ್ಮಕೆ
ಜಗಳವಾಡಲಾದರೂ
ತವರೆಂದೊಡನೆ
ಓಡೋಡಿ ಬರುವವರು
ಸತ್ತಾಗಲೂ ಮೊದಲ ಸುದ್ಧಿ ಅವರಿಗೇ
'ಕಾಯಲು ಯಾರೂ ಇಲ್ಲ
ಬೇಗ ಮಣ್ಣು ಮಾಡಿಬಿಡಿ'
ಅನಾಥವಾಗಿ ಹೋಗುವೆನಲ್ಲ!?
ಅಕ್ಕತಂಗಿಯವರು ಬೇಕು ನರಜನ್ಮಕೆ
ಓಡೋಡಿ ಬರುವವರವರೆ! ಅವರೊಬ್ಬರೆ!!
~ ಅರಬಗಟ್ಟೆ ಅಣ್ಣಪ್ಪ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...