ಹುಟ್ಟಿದ್ದು ಹೊಲಗೇರಿ, ಬೆಳೆದ್ದಿದು ಕೊಳೆಗೇರಿ,
ಉಂಡದ್ದು, ಕಂಡದ್ದು ಪೋಣಿಸಿದ ಉಪಕಾರಿ
ನಿನ್ನಂತೆ ಯಾರಿಹರು ಈ ಹೊತ್ತ ಸಾರಿ
ನೀ ಪಟ್ಟ ಕಷ್ಟಗಳ ಬಿಡುಗಡೆಯ ದಾರಿ.
ಹೊರಟೆ ನೀನು ಗುರಿಯನ್ನು ಹುಡುಕುತ್ತ,
ಬಂದು ಅಡರಿಸಿದವು ಕಲ್ಲು ಮುಳ್ಳುಗಳು
ಜಾಡಿಸಿ, ಮೇಲೆದ್ದು ಮೈಕೋಡವಿ ನಿಂತೇ
ಶಿಕ್ಷಣ, ಸಂಘಟನೆ, ಹೋರಾಟದ ತ್ರಿಶೂತ್ರದಿಂದ.
ಸಾರಿದೇ ನೀನು ಮನುಕುಲದ ಸಂದೇಶ
ಅಲ್ಲಗಳೆದರು ನಿನ್ನ ಜಾತಿಮತೀಯನೆಂದು
ಸತ್ಯದ ದಾರಿಯಲಿ ನಡೆದೇ
ಸತ್ಯವೆ ನಿನ್ನದಾಯಿತು.
ನಿನ್ನಂತೆ ಯಾರಿಹರು ಜಗದೊಡೆಯ.
ಜಾತಿ, ಧರ್ಮಗಳ ಗೋಡೆ ಕೆಡವಿ
ಸಂವಿಧಾನವ ಬರೆಯಲು ಹೊರಟೆ.
ವಾಸ್ತವಿಕ ಪ್ರಜ್ಞೆಯಲಿ ವಿಹರಿಸಿದ ನೀನು
ಸಮುದ್ರದಾಚೆಗಿನ ಬದುಕನ್ನು ನಮಗೆ ಕಟ್ಟಿಕೊಟ್ಟೆ.
ಧರ್ಮದಲ್ಲಿ ದೇವರಾಗಿ, ರಾಜಕೀಯ ಗುರುವಾಗಿ
ನೀ ನಡೆದೇ.
ನಿನ್ನಂತೆ ನಡೆಯುವವವರು ಹುಡುಕಾಡ ಬೇಕಾಗಿದೆ,
ನೀ ಹಾಕಿಕೊಟ್ಟ ಮಾರ್ಗವ ಉಳಿಸಬೇಕಾಗಿದೆ.
ನಮಗೆ ನೀನೇ ಜಗದ ಗುರು.
ನಿಮ್ಮ ಜೀವನ ಚರಿತ್ರೆಯೇ ನಮಗೆ ಪ್ರೇರಣೆ
ನಿಮ್ಮ ಜ್ಞಾನದ ಎಂಜಲುಗಳು ನಾವು
ನಿಮ್ಮ ಗುಣಗಳ ಪಾಲಿಸುವೆಂದು ಪ್ರತಿಜ್ಞೆಯನು
ಮಾಡಿದರೆ ಮಾನವ ಜನ್ಮವೂ ಅದು ನಮಗೆ ಸಾರ್ಥಕವಾದಿತು,
ಏಷ್ಯಾದ ಬೆಳಕೆ.
ಬದುಕನ್ನು ಕಟ್ಟಿಕೊಟ್ಟೆ ನೀ ನಮಗೆ
ನಿಮ್ಮ ಬದುಕನ್ನು ತೊರೆದು, ಆದರೆ.??
ನಾವು ಮಾಡಿದ್ದೂ ಜಾತಿರಾಜಕಾರ, ಮತಗಳ ಹುನ್ನಾರ, ನಿನ್ನ ಪ್ರತಿಫಲ ಪಡೆದ ಮಂಗಗಳು ಮಾಡುತ್ತಿರುವುದು ಕೇವಲ ಅನ್ಯರಾಜಕಾರಣ.
ನಿನ್ನಂತೆ ಯಾರಿಹರು
ಓ ಧೀರದಾತಾ ಅಂಬೇಡ್ಕರ್.
- ಸುನೀಲ್ ಬಂಜಾರ, ಸಂಶೋಧನಾರ್ಥಿ
ಕ. ವಿ. ವಿ, ಹಂಪಿ.
ಮೊ : 7349177749.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ