ಬನದ ಮೊಗ್ಗು ಹೂವಾಗಿ ಅರಳಿ ನಿಂತಿತು
ಬೆಟ್ಟ ಗುಡ್ಡ ಸುಳಿದು ಸುತ್ತಿ ನಾಡ ಸೇರಿತು
ಕಲ್ಲು ಮುಳ್ಳಿನಲ್ಲೂ ಪರಿಮಳವ ಬೀರುತ
ಬೆಳೆಬೆಳೆಯುತ ಇಳೆಯ ತುಂಬ ಸೌಗಂಧ ಹರಡಿತು ॥
ಆದಿವಾಸಿ ಬುಡಕಟ್ಟು ಮನೆಗೆ ಬೆಳಕು ತಂದಳು
ನಿಷ್ಠೆಯಿಂದ ವಿದ್ಯೆ ಕಲಿತು ಗುಮಾಸ್ತೆಯಾದಳು
ತಾತ್ವಿಕ ಬದುಕಲಿ ಕಡುಕಷ್ಟದ ಕಹಿಯನುಣ್ಣುತ
ಆದಿವಾಸಿಗಳ ಬದುಕಿಗೆ ಆಸರೆಯಾಗಿ ನಿಂತಳು ॥
ಅರಳುವ ಕುಸುಮಗಳ ಮಸ್ತಕವ ತುಂಬಲು
ಗುಮಾಸ್ತೆ ಕಜ್ಜವ ತೊರೆದು ಶಿಕ್ಷಕಿಯಾದಳು
ನೂರಾರು ಮಕ್ಕಳಿಗೆ ನಿತ್ಯ ಅಕ್ಷರವನುಣಿಸುತ
ಸದ್ಗುಣಗಳ ತುಂಬಿ ಭರತಮಾತೆಯ ರಕ್ಷಣೆಗೆ ಬಿಟ್ಟಳು ॥
ವಿಧಿಯಾಟದಲಿ ಪತಿಯ ಕಳೆದುಕೊಂಡು ಒಂಟಿಯಾದಳು
ಕರುಳಬಳ್ಳಿಗಳೆರಡನೂ ಕಳೆದುಕೊಂಡು ಕಂಗಾಲಾದಳು
ಬ್ರಹ್ಮಕುಮಾರಿ ಆಧ್ಯಾತ್ಮ ಚಳುವಳಿ ಸೇರಿ ಶೋಕ ಮರೆಯುತ
ತನ್ನ ತನು ಮನವನು ಭರತಮಾತೆ ಸೇವೆಗೆ ಮೀಸಲಿಟ್ಟಳು ॥
ಜನಸೇವೆ ಮಾಡಲೆಂದು ರಾಜಕೀಯಕೆ ದುಮುಕಿದಳು
ರಾಯರಂಗಪುರದ ಕೌನ್ಸಿಲರಾಗಿ ಯಶಸ್ಸು ಕಂಡಳು
ಓಡಿಶಾ ವಿಧಾನಸಭೆಯಲಿ ಸಚಿವೆಯಾಗಿ ಸೇವೆ ಗೈದು
ಜಾರ್ಖಂಡದ ಮೊದಲ ಪ್ರಜೆಯಾಗಿ ಕೀರ್ತಿ ಪಡೆದಳು ॥
ಬುಡಕಟ್ಟು ನಕ್ಷತ್ರವೊಂದು ಭಾರತದ ತಾರಾಲಯ ಸೇರಿತು
ಪಳಪಳನೇ ಹೊಳೆಯುತ ಬೆಳಕು ಬೀರಲು ಮುಗಿಲ ಏರಿತು
ಕಾಡ ಹೂವ ತಲೆಗೆ ಮುಡಿದು ಭರತಮಾತೆಯು ನಲಿದಿತ್ತು
ದ್ರೌಪದಿ ಮುರ್ಮು ರಾಷ್ಟ್ರಪತಿಯಾಗಲು ಹರುಷ ಉಕ್ಕಿತು ॥
- ಬಸವರಾಜ ನಾಗೂರ ಮುದ್ದೇಬಿಹಾಳ (ಬಾವೂರ).
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ