ಅಬ್ಬಾ! ಇದೇನು ಚಮತ್ಕಾರ
ಮನೆಮಹಲ್ಲು ಎಲ್ಲವೂ ಚಿತ್ತಾರ
ಮೋಡಿಗಾರನ ಮಾತಿಗೆ
ಮರುಳಾದರೆ ನನ್ನ ಜನ!
ಹರಿದ ಸೀರೆಯುಟ್ಟು
ಜಗದವ್ವ
ಅಂಗಲಾಚುತ್ತಿದ್ದಾಳೆ.
ಅವಳಿಗೊಂದು ಸೂರಿಲ್ಲ!
ಅದೋ ಒಮ್ಮೆ
ಕಣ್ಣೊರೆಸಿ ನಗುತ್ತಿದ್ದಾಳೆ
ಜೋಪಡಿಯ ನೆತ್ತಿಯಲ್ಲಿ
ಬಾವುಟವೊಂದ ನೆಟ್ಟು...
ಅದೇನು ಸಂಭ್ರಮ
ಅದೇನು ಮಹೋತ್ಸವ ...
ಅದೋ ಅವಳ ಪತಾಕೆ....
ಕಣ್ಣು ಹಾಯಿಸಿದಷ್ಟು ಖುಷಿಯೇ
ಒಡಲಲಿ ಅವಿತ ಹಸಿವಿನ ಕೂಗು
ಧರಣಿ ಧಣಿಯೇ
ನೇಯ್ದಕೊಂಡ ನೇಣುರಿ ಕಾವು
ಕಾಣದಾಗಿದೆ, ಕೇಳದಾಗಿದೆ
ಭೋರ್ಗರೆವ ಹೆಣದ
ವಾದ್ಯಗೋಷ್ಠಿಯ ಕಂಡು
ಅವಳು ಕೂಗುತ್ತಿದ್ದಾಳೆ
ಅಬ್ಬಾ! ಅದೇನು ಮಹೋತ್ಸವ.
ಅದೇನು ಸಂಭ್ರಮ
ಜಗದವ್ವ ಕೇಳುತ್ತಿದ್ದಾಳೆ
ಅತ್ಯಾಚಾರದ ಸದ್ದಿಲ್ಲವೇ?
ಭ್ರಷ್ಟಾಚಾರಕೆ ಕೊನೆಯಿಲ್ಲವೇ?
ಸೌಹರ್ದತೆಯ ನಾಡಿನೊಳಗ
ದ್ವೇಷದ ಕುಲುಮೆಯೊಂದು ಕಾದಿಲ್ಲವೇ?
ದೀನದಲಿತ ಬಡವ ಬೀದಿಯೊಳಗೆ ಬಿದ್ದಿಲ್ಲವೇ?
ಅದೋ ಅಂದು ಮೊಳಗಿದ
ಭೀಮಾ ಘರ್ಜನೆ
ನೆಪವಲ್ಲವೇ ?
ಗಾಂಧಿಯ ಸ್ವರಾಜ್ಯ
ಸಂಕೋಲೆಯಾಗಿಲ್ಲವೇ?
ಅದೇನು ಚಮತ್ಕಾರ
ಮನೆಮಹಲ್ಲು ಎಲ್ಲವೂ ಚಿತ್ತಾರ
ಮೋಡಿಗಾರನ ಮಾತಿಗೆ
ಮರುಳಾದರೆ ನನ್ನ ಜನ?
ಪ್ರಭುತ್ವದ ಗುದ್ದಿಗೆ
ಮಠ-ಮಾನ್ಯಗಳ ಗದ್ದುಗೆಗೆ
ಗುಲಾಮರಾದರೇ ನನ್ನ ಜನ
ಜಗದವ್ವ
ಕೇಳುತ್ತಿದ್ದಾಳೆ........
- ಗಂಗಾಧರ್ ಬಾಣಸಂದ್ರ.
ಮೊ:8722780127
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ