ಶುಕ್ರವಾರ, ಡಿಸೆಂಬರ್ 30, 2022

ಬತ್ತದಿರಲಿ ಸ್ಪೂರ್ತಿ (ಕವಿತೆ) - ಶ್ರೀಮತಿ ಸುಲೋಚನಾ ಮಾಲಿಪಾಟೀಲ, ಧಾರವಾಡ.

ಚಿಮ್ಮುವ ಚಿಲುಮೆಯಂತಿರಲಿ ಜೀವನ
ಹೊತ್ತ ದೃಡಸಂಕಲ್ಪದ ಬದುಕಿನ ಪಯಣದಲಿ
ಬಾಲ್ಯದಿಂದ ಕಳೆಯುವ ವೃದ್ಧಾಪ್ಯದ ತನಕ
ಬತ್ತದಿರಲಿ ದಕ್ಕಿದ ಯಶ ವಿಶಾದಗಳ ನಿಟ್ಟಿನಲಿ 

ಕೈಯಿಂದ ಜಾರದಂತೆ ಅವಕಾಶಗಳ ಸದ್ಬಳಕೆಯಲಿ
ನೊಯಿಸದಂತಿರಲಿ ಹಾರೈಸಿ ಹರಸುವ ಮನಗಳಿಗೆ
ಜೀವನದ ಅನುಭವಗಳ ಸರಮಾಲೆಯೇ ಪಣವಾಗಿ
ಬತ್ತದಿರಲಿ ಸ್ಪೂರ್ತಿ ಪ್ರತಿಹೆಜ್ಜೆಯ ನಡೆಯಲ್ಲಿ

ಏಳು ಬೀಳು ಕಷ್ಟ ನಷ್ಟ ಒಳಗೊಂಡಾದ ಪಯಣವು
ಬಾಳಿನಲಿ ಎದುರಿಸಿ ಕಲಿತು ಕಲಿಸುವ ಅಧ್ಯಯನವು
ಬತ್ತದಿರಲಿ ಸ್ಪೂರ್ತಿ ಕಂಡರಿಯದಕ್ಕಿಂತ ಅರಿತದಾರಿಯಲಿ ಸುಗಮವಲ್ಲವೇ ಹಿಡಿದ ಛಲ ಬಿಡದೇ ಸಾಧಿಸುವಲ್ಲಿ

ಕಾಣುವ ಆಧುನಿಕ ಯುಗದ ವಿಭಿನ್ನತೆಯಲಿ
ಎಷ್ಟು ಕಷ್ಟದ ಬದುಕು ಈ ನಾಲ್ಕು ದಿನಗಳಲ್ಲಿ
ಕಾಲೆಳೆಯಲು ಹೊಂಚುಹಾಕುವ ದುಷ್ಟಶಕ್ತಿಗಳ ಮಧ್ಯೆ 
ಬತ್ತದ ಚಿಲುಮೆಯ ಬುಗ್ಗೆಯಂತಿರಲಿ ಸ್ಪೂರ್ತಿ

ಮೆಟ್ಟಿನಿಂತಿರುವ ಸತ್ಯದ ದಾರಿಯಲಿ ಈ ಧೇಯ
ಕಾಯಕವೇ ಕೈಲಾಸವೆಂಬ ಅರಿವಿನ ಅಂತರಾತ್ಮ
ಬತ್ತದಿರಲಿ ಸ್ಪೂರ್ತಿ ಬೆಳಗುವ ಆಶಾಕಿರಣದೊಂದಿಗೆ
ಹರಿವ ನದಿಯ ನೀರೊಳು ಹೊಸತನದ ಹರಿವಂತೆ

ಸೃಷ್ಟಿಯ ಮಾಯೆಯಲಿ ರಮಿಸುವ ಛಾಯೆಯಲಿ
ಚೈತನ್ಯತುಂಬುವ ಭೂಮಾತೆಯೇ ತಬ್ಬಿಕೊಂಡಿಹಳು
ಚಿಗುರೊಡೆಸಿ ಬೆಳಸುವ ಪರಿಸರ ಸಂಕುಲ ಬತ್ತದಂತೆ
ಬದುಕಿಸುವ ಕಲೆಯಲ್ಲಿ ಸ್ಪೂರ್ತಿಯ ಸೆಲೆಯಲ್ಲಿ

- ಶ್ರೀಮತಿ ಸುಲೋಚನಾ ಮಾಲಿಪಾಟೀಲ, ಧಾರವಾಡ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...