ಮಂಗಳವಾರ, ಮೇ 2, 2023

ಇಳೆಯೊಡಲ ಒಲವ ಆಹ್ವಾನ (ಕವನ) - ಮಧುಮಾಲತಿ ರುದ್ರೇಶ್.

ಬಾ ಮಳೆಯೆ ಬಾ ಇಳೆಗವತರಿಸು ಆದರಿಸು
ಚಿಗುರೆಲೆಗಳ ಮೇಲೆ ಮುತ್ತು ಮಣಿಯನುಳಿಸು 

ಇಳೆಯೊಡಲ ಒಲವ ಆಹ್ವಾನವ
ಆಲಿಸು ವರುಣ
ಕ್ಷಣವು ವ್ಯಯಿಸದೆ ಚೆಲ್ಲು ಅವಳೆಡೆಗೆ ಪ್ರೀತಿಯ ಕಿರಣ 

ಧರಣಿ ಕಾದಿಹಳು ತನ್ನೊಡಲ ತಣಿಸುವನೆಂದು
ಕಾಯಿಸದಿರು ಅವಳ ಸಂತೈಸು ನೀ ಬಂದು 

ಭೂರಮೆಯ ಮಡಿಲ ತುಂಬಿದ ಹಸಿರು ಗಿರಿ ಕಾನನಗಳು
ವರ್ಷಧಾರೆಯಲಿ ಮಿಂದೇಳಲು ಕಾತರಿಸಿಹ ಕ್ಷಣಗಳು 

ಶೃಂಗಾರಗೊಂಡಿಹಳು ವಸುಂಧರೆ ಹಸಿರುಟ್ಟು ನಗುತ
ತನ್ನಿನಿಯ ವರುಣನಿಗೆ  ಪ್ರೇಮದಾಹ್ವಾನವ ನೀಡುತ

ತುಸುಮೆಲ್ಲ ಬೀಸುತಿಹ ಮಾರುತದ ಸಂದೇಶವನಾಲಿಸು
ಒಲವ ಕರೆಗೆ ಮಣಿದಿಳಿದು ಇಳೆಯನೊಮ್ಮೆ ಆಲಂಗಿಸು
ಬಾ ಮಳೆಯೇ ಬಾ....
- ಮಧುಮಾಲತಿ ರುದ್ರೇಶ್, ಬೇಲೂರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...