ಬುಧವಾರ, ಜೂನ್ 7, 2023

ನಿಸರ್ಗ ಮಾತೆ (ಕವಿತೆ) - ಸದ್ದಾಂ ತಗ್ಗಹಳ್ಳಿ.

ಓ ನಿಸರ್ಗ ಮಾತೆ
ನೀ ನಮ್ಮ ಜೀವದಾತೆ

ಬಾನಲಿ ಚಂದ್ರನು ಮಿಂಚುತಿರಲು
ಕೊಂಬೆಯ ಮೇಲೆ ಕೂತು ಕೋಗಿಲೆ ಹಾಡುತಿರಲು
ಗುಡುಗು ಮಿಂಚುಗಳೊಡನೆ ಮಳೆಯೂ ಸುರಿಯುತಿರಲು
ಉಲ್ಲಾಸದಿಂದ ನದಿಯ ಝರಿಯು ಧುಮುಕುತಿರಲು
ಸಂಜೆ ಹೊತ್ತಲ್ಲಿ ತಂಪು ಗಾಳಿ ಬೀಸುತಿರಲು
ಆಕರ್ಷಿಸಿತು ಮನ ಪ್ರಕೃತಿಯ ಸೊಬಗನ್ನು ಅನುಭವಿಸಲು

ನಿನ್ನ ಮಡಿಲಲ್ಲಿ ಜೀವಿಸುವ ಮಕ್ಕಳು ನಾವೆಲ್ಲ
ನೀ ಇಲ್ಲದೆ ನಮ್ಮ ಬದುಕೇ ಇಲ್ಲ
ನಿನ್ನಯ ಆಶ್ರಯ ನಮಗೆ ಅವಶ್ಯವಾಯಿತಲ್ಲ
ನಿನ್ನ ಸಲುಗೆಯಿ೦ದ ನಮ್ಮ ಬದುಕು ಬೇವು ಬೆಲ್ಲ

ಎತ್ತ ನೋಡಿದತ್ತ ಶಕ್ತಿ ಸಂಪನ್ಮೂಲಗಳು ತುಂಬಿಕೊಂಡಿವೆ
ಮನುಷ್ಯನ ಆಸೆ ಈಡೇರಿಸುವ ಅಂಶಗಳೆಲ್ಲ ನಿನ್ನ ಕೊಡುಗೆಯಾಗಿವೆ
ಪ್ರಕೃತಿ ದೇವತೆಯೇ ನಿನ್ನ ವೈಭವವನ್ನು ವರ್ಣಿಸಲು ಸಾಧ್ಯವೇ
ನಿನ್ನ ಹಚ್ಚಹಸಿರ ಮಡಿಲಲ್ಲಿ ನಮ್ಮ ಉಸಿರು ನಿಂತಿದೆ

ಓ ನಿಸರ್ಗ ಮಾತೆ 
ನೀ ನಮ್ಮ ಜೀವದಾತೆ

ಹಸಿರೇ ಉಸಿರು ಎಂಬಂತೆ ಹರಡಿರುವುದು ನಿನ್ನ ಹೆಸರು
ನಿನ್ನ ಒಡಲಲ್ಲಿ ಅವಿತಿರುವುದು ನಮ್ಮೆಲ್ಲರ ಉಸಿರು
ಜಗದೊಳು ನಿನ್ನದೇ ಪರ್ಯಟನೆ ,
ಗುರುತಿಸಿಕೊಳ್ಳಲು ಮನುಜನಿಗಿರುವ ನಿನ್ನದೊಂದೆ ನಮೂನೆ

ಸಾಲಿನೊದ್ದಕ್ಕು ನಿಂತ ಮರಗಳು ಧರೆಗುರುಳಿ ಮಣ್ಣಾಗುತ್ತಿವೆ
ಸುತ್ತ ನೋಡಿದತ್ತ ಹಸಿರು ಮಾಯವಾಗಿ ಉಸಿರು ನಿಂತಂತಾಗಿದೆ
ಗಾಳಿ ಇದ್ದು ಶುದ್ಧ ಗಾಳಿಗೆ ಪರದಾಡುವಂತಾಗಿದೆ
ಮಾನವನ ದುರಾಸೆಗಳಿಗೆ ಪ್ರಕೃತಿಯೇ ತಲೆ ಬಾಗಿಬಿಟ್ಟಿದೆ

 ಕೊರಗಬೇಡ ಅಳಬೇಡ ಪ್ರಕೃತಿಯೇ ಮಾನವ ನಾಶ ಮಾಡಿದನೆಂದೂ
ಅವನ ಆಸೆಗಳೆಲ್ಲ ಮಿತಿಮೀರಿ ಕ್ರೂರಿ ಆಗಿದ್ದಾನೆ 
ಈಗಿನ ಕೆಟ್ಟ ಪರಿಸ್ಥಿತಿಯನ್ನು ಎದುರಿಸದೆ ವಿಫಲನಾಗಿದ್ದಾನೆ
ಓ ನಿಸರ್ಗ ದೇವತೆ ಕರುಣಿಸು ಆಶೀರ್ವಾದಿಸು ನೀ ನಮಗೆ ಎಂದೆಂದೂ

ಗಿಡ ನೆಟ್ಟು ಮರವಾಗಿ ಬೆಳೆಸುವ ಸಂಕಲ್ಪ ಮಾಡೋಣ
ಜಗ ಉಳಿಸುವ ಕಾರ್ಯ ಕೈಗೊಳ್ಳೋಣ
ಪ್ರಕೃತಿಯ ಜೊತೆ ಕೈಜೋಡಿಸಿ ಹೊಸ ಪ್ರಪಂಚವ ನಿರ್ಮಿಸೋಣ
ಕಾಡು ಬೆಳೆಸುತ್ತಾ ನಾಡು ಉಳಿಸೋಣ..

ಓ ನಿಸರ್ಗ ಮಾತೆ
ನೀ ನಮ್ಮ ಜೀವದಾತೆ.

- ಸದ್ದಾಂ ತಗ್ಗಹಳ್ಳಿ.




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...