ಬುಧವಾರ, ಸೆಪ್ಟೆಂಬರ್ 17, 2025

ಸವಿ ಮಾತು.

""ಸವಿ ಮಾತು""

 ದಯೆಯೆ ನಿನ್ನ ಮೂಲ ಮಂತ್ರವಾಗಿರಲಿ 
ಹಸಿದ ಜೀವಕೆ ತುತ್ತ ನೀಡುವ ಮನವಿರಲಿ 

ಬಡವನೆದುರು ಶ್ರೀಮಂತಿಕೆಯ ಪ್ರದರ್ಶನ ಸಲ್ಲದು
 ಹಸಿದವರೆದುರು ಭೋಜನದ ಮಾತನಾಡಬಾರದು 

ಕೊಡುವ ಮನವಿದ್ದರೆ ನೀ ನಿಸ್ವಾರ್ಥದಿ ನೀಡು 
ಸರ್ವರೆದುರು ತೋರ್ಪಡಿಕೆಯ ಪ್ರತಿಷ್ಠೆ ಬಿಡು 

ಮೂಕ ಜೀವಿಗಳ ಕಂಡು ಮರುಗುವುದನು ಕಲಿ 
ಅಶಕ್ತರಿಗೆ ಕೈಲಾದ ಸಹಾಯ ಮಾಡು ಬಾಳಲಿ

 ಕಿರಿಯರೆದೆಯಲಿ ಸ್ನೇಹ ಪ್ರೀತಿಯ ಹಣತೆ ಬೆಳಗು
 ಗುರು ಹಿರಿಯರ ನುಡಿಗೆ ನಮಿಸಿ ತಲೆ ಬಾಗು

 ಉಸಿರಿನ ನಂತರವೂ ಹೆಸರುಳಿಯುವಂತಾಗಲಿ
 ನಿನ್ನ ನಡೆ ನುಡಿ ಸಕಲರಿಗೂ ದಾರಿದೀಪವಾಗಿರಲಿ

ಗರ್ವ ಪಡದಿರು ದೇವ ನೀಡಿದ ಸುಖಕೆ
ಭಕ್ತಿಯಲಿ ಆಮಂತ್ರಿಸು ಚಿನ್ಮಯನ ಮನಕೆ

ಹಣ ಅಂತಸ್ತು ಅಧಿಕಾರ ಶಾಶ್ವತವಲ್ಲ
ತಿಳಿದು ನಡೆ ಬದುಕು ನೀನೆಣಿಸಿದಂತಿಲ್ಲ
 ಮಧುಮಾಲತಿ ರುದ್ರೇಶ್ ಬೇಲೂರು 
🙏💐✍️

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...