ಗುರುವಾರ, ಅಕ್ಟೋಬರ್ 16, 2025

ನವೋದಯ ಸಾಹಿತ್ಯದಲ್ಲಿ ಜಾತಿ ಕೇಂದ್ರಿತ ಚಿಂತನೆ - ಡಾ. ರಂಜಿತ ಬಿ.


ದಿನಾಂಕ: ೩೦.೦೬.೨೦೨೫ ರಂದು ಅಂಗಳ ಕಮ್ಯುನಿಟಿ ಟ್ರಸ್ಟ್‌ ಇವರ ವಿಚಾರ ಮಂಟಪ ಆನ್‌ಲೈನ್‌ ಉಪನ್ಯಾಸ ಸರಣಿ ೧ ಕಾರ್ಯಕ್ರಮದಲ್ಲಿ ಡಾ ರಂಜಿತ ಬಿ ಇವರು ನೀಡಿದ ಉಪನ್ಯಾಸ.

ಸಂಸ್ಕೃತಿಯ ಭಾಗವಾಗಿ ಒಂದೊಂದು ಜಾತಿಗಳನ್ನು ಪ್ರತ್ಯೇಕ ಗುಂಪು ಅಥವಾ ಸಮುದಾಯವಾಗಿ ಪರಿಗಣಿಸಬಹುದು. ಅವುಗಳು ತಮ್ಮ ವೃತ್ತಿಯಿಂದಲೋ ಅಥವಾ ಆಚಾರವಿಚಾರದಿಂದಲೋ ಸಂಪೂರ್ಣವಾಗಿಯಲ್ಲದಿದ್ದರೂ, ತಮ್ಮದೇ ಆದ ಸಂಸ್ಕೃತಿ ವೈಶಿಷ್ಟ್ಯತೆಯನ್ನು ಹೊಂದಿವೆ. ಹೀಗಾಗಿ ಭಾರತ ದೇಶದ ಒಂದೊಂದು ಸಮುದಾಯಗಳು ಒಂದೊಂದು ಸಂಸ್ಕೃತಿಯನ್ನು ಪ್ರತಿನಿಧಿಸುತ್ತವೆ. ಜಾತಿಗಳನ್ನಾಧರಿಸಿಯೇ ಸಂಸ್ಕೃತಿಯ ಹಲವು ಸಂಗತಿಗಳನ್ನು ತಿಳಿಯಬಹುದಾಗಿದೆ. ಅದಕ್ಕಾಗಿಯೇ ಭಾರತವನ್ನು ಬಹುಸಂಸ್ಕೃತಿಯನ್ನು ಹೊಂದಿರುವ ವಿವಿಧತೆಯಲ್ಲಿ ಏಕತೆಯನ್ನು ಸಾರುವ ದೇಶವಾಗಿದೆ ಎಂದು ಹೇಳಿದರೂ, ಅವುಗಳ ಅಂತರಾಳದಲ್ಲಿ ಸಾಕಷ್ಟು ಸಂಘರ್ಷಗಳು ಮತ್ತು ವೈವಿರುಧ್ಯಗಳು ಇರುವುದನ್ನು ಕಾಣಬಹುದಾಗಿದೆ. 

ವಸಾಹತುಶಾಹಿಯ ಆಳ್ವಿಕೆಯ ಕಾಲದಲ್ಲಿ ಭಾರತೀಯ ಸಂಸ್ಕೃತಿ ಎಂದು ಕರೆದುಕೊಳ್ಳುವ ವೈದಿಕ ಸಂಸ್ಕೃತಿಯು ಯಾಜಮಾನಿಕೆ ಸ್ಥಾನದಲ್ಲಿ ನಿಂತು ತಾನು ಎಲ್ಲ ಸಂಸ್ಕೃತಿಗಿಂತಲೂ ಶ್ರೇಷ್ಠ, ಆದ್ದರಿಂದ ಉಳಿದ ಇತರ ಜಾತಿಗಳಿಂದ ಸ್ವೀಕಾರ ಅಥವಾ ಅನುಕರಣೆಯಾಗಲಿ ಮಾಡುವ ಅವಶ್ಯಕತೆ ಇಲ್ಲ, ಉಳಿದ ಸಂಸ್ಕೃತಿಗಳೇ(ತಳಸಮುದಾಯದ ಸಂಸ್ಕೃತಿಗಳು) ತನ್ನನ್ನು ಅನುಕರಿಸಿವೆ ಎಂಬ ಧೋರಣೆ ಹೆಚ್ಚು ಚಾಲ್ತಿಗೆ ಬಂದಿತು. ಈ ಧೋರಣೆ ಬೆಳೆಯಲು ಕಾರಣವಾದ ಅಂಶವೆಂದರೆ, ಬ್ರಿಟಿಷ್ ಸಾಮ್ರಾಜ್ಯಶಾಹಿ ವ್ಯವಸ್ಥೆಯ ವಿರುದ್ಧ ಭಾರತದ ಗತ ವೈಭವವನ್ನು ಕಟ್ಟುವ ಸಂದರ್ಭದಲ್ಲಿ ಬೆಳೆದು ಬಂದ ಸಂಸ್ಕೃತಿ ಗ್ರಹಿಕೆಗಳು. ವೈದಿಕ ವರ್ಗ ಕಟ್ಟಿದ ಸಂಸ್ಕೃತಿ, ಕಲೆ, ಸಂಗೀತ, ನೃತ್ಯ, ದೇವಾಲಯಗಳನ್ನೇ ಭಾರತೀಯ ಸಂಸ್ಕೃತಿ, ಪರಂಪರೆಯಾಗಿ ವೈಭವೀಕರಿಸಲಾಯಿತು. ಅಲ್ಲದೆ ವರ್ಣವ್ಯವಸ್ಥೆಯನ್ನು ಈ ಭಾರತೀಯ ಸಂಸ್ಕೃತಿಯು ಒಪ್ಪಿಕೊಳ್ಳುವುದರ ಮೂಲಕ ಒಂದು ಸಮಾಜದ ಆಡಳಿತಕ್ಕೆ ಈ ವರ್ಣವ್ಯವಸ್ಥೆ ಮುಖ್ಯ ಎನ್ನುವುದನ್ನು ಪ್ರತಿಪಾದಿಸಲಾಯಿತು. ಆದರೆ, ಅದರ ಜೊತೆಗೆ ಹುಟ್ಟಿದ ಜಾತಿಯು ಮೇಲು ಕೀಳು ಎನ್ನುವ, ಸ್ಪೃಶ್ಯ-ಅಸ್ಪೃಶ್ಯತೆಯ ಭೇದ ಭಾವಗಳನ್ನು ಮಾನವರ ಹುಟ್ಟಿನೊಂದಿಗೆ ವಿಧಿಸಿ ನೋಡಿತು. ವರ್ಣವ್ಯವಸ್ಥೆ ಕಸುಬುಗಳ ಮೂಲಕ ಗುರುತಿಸಿಕೊಂಡರೆ; ಆ ಕಸುಬಿನಿಂದಲೇ ಜನ್ಮ ತಾಳಿದ್ದು ಜಾತಿಪದ್ಧತಿ. ವರ್ಣಗಳು ವೃತ್ತಿಯ ಯೋಗ್ಯತೆಯನ್ನು ಆಧರಿಸಿದರೆ; ಜಾತಿಗಳು ಹುಟ್ಟನ್ನು ಆಧರಿಸಿ ಬೆಳೆದವು. ಮಾನವರು ತಮ್ಮ ಕುಲಕಸುಬಿನಿಂದ ಮುಕ್ತಿ ತಾಳಬಹುದಿತ್ತು; ಆದರೆ ಜಾತಿಯಿಂದ ಅವರು ಮುಕ್ತಿ ಹೊಂದಲು ಸಾಧ್ಯವಿರಲಿಲ್ಲ. ಇದು ಸಾಮಾಜಿಕ ಅಸಮಾನತೆಗೆ ಕಾರಣವಾಯಿತು.

ಬ್ರಿಟಿಷ್ ಆಡಳಿತದಲ್ಲಿ ಜಾರಿಗೆ ಬಂದ ಇಂಗ್ಲಿಷ್ ಶಿಕ್ಷಣ ವ್ಯವಸ್ಥೆಯು, ದಮನಿತರು ಸಾಮಾಜಿಕ ಪರಿವರ್ತನೆಗಾಗಿ ಹೋರಾಡುವಂತೆ ಒಂದು ಕ್ರಾಂತಿಯ ಶಕ್ತಿಯನ್ನು ನೀಡಿತು. ಇದರಿಂದ ಒಂದು ಕಡೆ ಬ್ರಿಟಿಷರು ಸಾಮಾಜಿಕ ಅಸಮಾನತೆಯನ್ನು ತಮ್ಮ ಸುಸ್ಥಿರ ರಾಜಕೀಯ ವ್ಯವಸ್ಥೆಗೆ ಲಾಭ ಮಾಡಿಕೊಂಡರು, ಇನ್ನೊಂದು ಕಡೆ ಭಾರತೀಯ ವರ್ಣವ್ಯವಸ್ಥೆಯಲ್ಲಿ ಶಿಕ್ಷಣದ ಹಕ್ಕನ್ನೇ ಪಡೆಯದ ಶೂದ್ರವರ್ಗ ಮೊದಲ ಬಾರಿಗೆ ಇಂಗ್ಲಿಷ್ ಶಿಕ್ಷಣ ಪಡೆದು, ತಮ್ಮನ್ನು ಸೇವಕರಾಗಿ ಕಂಡ ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತುವಂತೆ ಮಾಡಿತು. ಹೀಗೆ ಭಾರತದಲ್ಲಿ ಈ ಇಂಗ್ಲಿಷ್ ಶಿಕ್ಷಣ ರಾಜಕೀಯ ಮತ್ತು ಸಾಮಾಜಿಕ ನೆಲೆಯಲ್ಲಿ ಒಂದು ಕ್ರಾಂತಿಯನ್ನುಂಟು ಮಾಡಿತು.

ಇದರ ಪರಿಣಾಮವಾಗಿ ದಕ್ಷಿಣ ಭಾರತದಲ್ಲಿ ನಡೆದ ಜಾತಿ ವಿರುದ್ಧದ ಹೋರಾಟ ‘ಬ್ರಾಹ್ಮಣ ಮತ್ತು ಬ್ರಾಹ್ಮಣೇತರ’ ಎಂದು ಕರೆಸಿಕೊಂಡರೆ; ಅಂಬೇಡ್ಕರ್ ಅವರು ಒಟ್ಟು ಹಿಂದೂ ಸಮುದಾಯವನ್ನು ಶೋಷಕ ವರ್ಗಗಳಾಗಿ ನೋಡಿದರು. ಹಾಗೂ “ಹಿಂದೂ ಜನಸಮುದಾಯ ಒಂದು ಸಂಕೀರ್ಣ ರಚನೆಯಾಗಿದ್ದರೂ ಅದರಲ್ಲೊಂದು ಆಳವಾದ ಸಾಂಸ್ಕೃತಿಕ ಏಕತೆಯಿದೆ” ಇದರ ಪ್ರತಿಯೊಂದು ಭಾಗವನ್ನು ಜಾತಿಯು ಹೆಣೆದು ಕಟ್ಟಿತು ಎನ್ನುತ್ತಾರೆ. ಪ್ರಾರಂಭದಲ್ಲಿ ಒಂದು ಜಾತಿ ಇದ್ದು, ಅನುಕರಣೆಯಿಂದಲೋ, ಬಹಿಷ್ಕಾರದ ಕಾರಣದಿಂದಲೂ ವರ್ಗಗಳೇ ಜಾತಿಗಳಾಗಿ ಪರಿವರ್ತನೆಗೊಂಡಿವೆ. ಹೀಗೆ ಕವಲು ಹೊಡೆದ ಜಾತಿಗಳು ತಮ್ಮಲ್ಲೇ ಬೇಲಿ ಹಾಕಿಕೊಂಡವು. ಹೀಗೆ ಬೆಳೆದ ಜಾತಿಗಳಲ್ಲಿ ಯಾವ ಜಾತಿಯವರನ್ನು ಇನ್ನೊಂದು ಜಾತಿಯವರು ಒಳಗೆ ಸೇರಿಸಿಕೊಳ್ಳುತ್ತಿರಲಿಲ್ಲ. ಅನ್ಯ ಜಾತಿಗಳೊಂದಿಗೆ ವ್ಯಾಪಾರ ಸಂಬಂಧಗಳು ನಡೆಯುತ್ತಿದ್ದವು. ಆದರೆ ರಕ್ತಸಂಬಂಧವನ್ನು ಬೆಸೆಯುವ ವಿವಾಹಸಂಬಂಧಗಳು ಸ್ವಜಾತಿಯಲ್ಲಿಯೇ ನಡೆಯಬೇಕಿತ್ತು. ಇದನ್ನು ಮೀರಿ ನಡೆಯುವ ಹಕ್ಕು ಯಾರಿಗೂ ಇರುತ್ತಿರಲಿಲ್ಲ. ಒಂದು ವೇಳೆ ಈ ಘಟನೆ ಸಂಭವಿಸಿದರೇ ಅವರಿಗೆ ಜಾತಿಯಿಂದ ಬಹಿಷ್ಕಾರ ಹಾಕಲಾಗುತ್ತಿತ್ತು. ಹಾಗೆಯೇ ಸ್ವಜಾತಿ ವಿವಾಹಗಳು ಕೂಡ ಜಾತಿಯತೆಯನ್ನು ಬೆಳೆಸಿದವು ಎಂದು ಅಂಬೇಡ್ಕರ್ ಪ್ರತಿಪಾದಿಸಿದ್ದಾರೆ. ಹೀಗೆ ಪ್ರತಿಯೊಂದು ಜಾತಿಯು ತನ್ನದೇ ಆದ ಗೋಡೆಯನ್ನು ನಿರ್ಮಿಸಿಕೊಂಡಿದ್ದರ ಪರಿಣಾಮವಾಗಿ ಜಾತಿಗಳಲ್ಲಿ ಅಸಮಾನತೆಗಳು ಉದಯವಾದವು. ಈ ಶ್ರೇಣೀಕೃತ ಜಾತಿ ವ್ಯವಸ್ಥೆಯಲ್ಲಿ ಮೇಲ್ವರ್ಗದವರನ್ನು ಕೆಳವರ್ಗದವರು ಅನುಕರಿಸುವ ಪ್ರಕ್ರಿಯೆಯೇ ಇರುವುದನ್ನು ಪ್ರತಿಪಾದಿಸಲಾಗುತ್ತದೆ. ಈ ಅನುಕರಣೆಯನ್ನೇ ಒಂದು ಆದರ್ಶ ಎಂದು ಕೂಡ ತಿಳಿಯಲಾಗಿತ್ತು. ಆದರೆ ಅನುಕರಣೆ ಮಾತು ಬಂದಾಗ ಮೇಲ್ವರ್ಗದ ಜಾತಿಯು ಕೆಳವರ್ಗದ ಜಾತಿಗಳು ತನಗೆ ಅಧೀನವಾಗಿ ಬಾಳಬೇಕು, ಏಕೆಂದರೆ ಕೆಳವರ್ಗದ ಸಂಸ್ಕೃತಿಯು ಹೀನವಾದುದು, ವಿವೇಕಯುತವಾದುದಲ್ಲ. ಅದರಿಂದ ತಾನೂ ಸ್ವೀಕರಿಸುವಂತಹ ಮೌಲ್ಯಯುತ ಅಂಶಗಳೇನು ಇಲ್ಲ ಎಂಬ ಭಾವನೆಯನ್ನು ವ್ಯಕ್ತಪಡಿಸಿತು. ಕೆಳವರ್ಗದವರಿಗೂ ಅದನ್ನು ನಂಬಿಸಿ, ಕೆಳವರ್ಗ ತಮ್ಮ ಸಂಸ್ಕೃತಿಯು ಮೇಲ್ವರ್ಗದಂತೆ ಶ್ರೇಷ್ಠವಾದುದಲ್ಲ ಎಂದು ಭಾವಿಸಿ ಸಂಸ್ಕೃತಿಕರಣಕ್ಕೆ ಒಳಗಾಗುವಂತೆ ಮಾಡಿದವು.

ಮೊದಲಿಗೆ ಗುಣ-ಕರ್ಮಗಳಿಗಾಗಿ ಹುಟ್ಟಿಕೊಂಡ ವರ್ಣವ್ಯವಸ್ಥೆಗೆ ದೇವರು, ಧರ್ಮದ ಹೆಸರಿನಲ್ಲಿ ಕಾನೂನು ಕಟ್ಟಳೆಗಳನ್ನು ನಿರ್ಮಿಸಿ ಅದರಲ್ಲಿ ಯಾವುದೇ ಬದಲಾವಣೆ ಆಗದಂತೆ ಈ ಮನುವಿನ ಧರ್ಮಶಾಸ್ತ್ರಗಳು ವಿಧಿಸಿದವು. ಎಂದೋ ಯಾವುದೋ ಕಾರಣಕ್ಕಾಗಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ಎಂಬ ವರ್ಣಗಳು ಒಂದು ಸಮಾಜದಲ್ಲಿ ಒಂದೊಂದು ಕೆಲಸಕ್ಕಾಗಿ ನಿರ್ಮಾಣಗೊಂಡವು. ಆಗ ಇವುಗಳಲ್ಲಿ ಮೇಲು-ಕೀಳಿರಲಿಲ್ಲ ಅನಿಸುತ್ತದೆ. ಇದನ್ನು ಯಾವಾಗ ಸ್ಥಿರವಾಗಿ ನಿಲ್ಲಿಸಲಾಯಿತೋ ಆಗ ಇಲ್ಲಿ ಸಮಸ್ಯೆಗಳು ಎದ್ದವು. ಉಳಿದ ಮೂರು ವರ್ಗಗಳಿಗಿಂತ ಶೂದ್ರ ವರ್ಗವನ್ನು ದುಡಿಯುವ, ಸೇವೆ ಮಾಡುವ ವರ್ಗವಾಗಿಯೇ ನೋಡಲಾಯಿತು. ಅದರಲ್ಲೂ ಈ ನಾಲ್ಕು ವರ್ಗಗಳಿಂದ ‘ದಲಿತ ವರ್ಗವನ್ನು’ ಅಸ್ಪೃಶ್ಯತೆಯ ಹೆಸರಿನಲ್ಲಿ ಊರಿನಿಂದ ಹೊರಗೆ ಇರಿಸಲಾಯಿತು. ಈ ನಾಲ್ಕು ವರ್ಗಗಳು ದಲಿತರನ್ನು ಶೋಷಿಸಿದವು. ಅವರ ನೆರಳು ಕೂಡ ಬೀಳದಂತೆ, ಅವರು ನಡೆದ ಹಾದಿಯಲ್ಲಿ ನಡೆಯದಂತೆ ಒಂದು ನಿಕ್ಕೃಷ್ಟವಾದ ಭಾವನೆಗಳನ್ನು ಸ್ಪೃಶ್ಯ ಜಾತಿಗಳು ಬೆಳೆಸಿಕೊಂಡವು. ಅವರು ಊರಿನ ಹೊರಗೆ ದಕ್ಷಿಣ ದಿಕ್ಕಿನಲ್ಲಿಯೇ ನೆಲೆಸಬೇಕು, ಭೂಮಿ ಹೊಂದಬಾರದು, ಚಪ್ಪಲಿ, ಉತ್ತಮ ವಸ್ತ್ರ, ಚಿನ್ನಾಭರಣ ಧರಿಸಬಾರದು, ಸೊಗಸಾದ ಹೆಸರು ಇಡಬಾರದು, ಕುದುರೆ ಸವಾರಿ ಮಾಡಬಾರದು, ಊರಿನೊಳಗೆ ಮೆರವಣಿಗೆ ಬರಬಾರದು, ಸ್ಪೃಶ್ಯ ಜಾತಿಯವರೊಂದಿಗೆ ವಿಧೇಯರಾಗಿ ಪರಾಧೀನತೆಯಿಂದ ಬದುಕಬೇಕು. ಹಾಗೂ ಸ್ವಂತ ಕಸುಬನ್ನು ಹೊಂದುವಂತಿಲ್ಲ. ದೇವರ ಹೆಸರಿನಲ್ಲಿ ದಲಿತ ಮಹಿಳೆಯರನ್ನು ದೇವದಾಸಿಯನ್ನರಾಗಿ ಮಾಡಿ, ಜೊತೆಗೆ ಯಜಮಾನಿಕೆಯಿಂದಲೂ ಸ್ಪೃಶ್ಯವರ್ಗಗಳು ಲೈಂಗಿಕವಾಗಿ ಬಳಸಿಕೊಂಡರು. ಹೀಗೆ ವ್ಯಕ್ತಿ ಸ್ವಾತಂತ್ರ‍್ಯವನ್ನೇ ಈ ವರ್ಗದಿಂದ ಕಿತ್ತುಕೊಳ್ಳಲಾಯಿತು. ಹಿಂದೂ ಧರ್ಮದಲ್ಲಿ ಸ್ವಾಯತ್ತ ಸಂಸ್ಥೆಗಳಾಗಿ ಬೆಳೆದ ಜಾತಿಗಳಿಂದಲೇ ವ್ಯಕ್ತಿ ಗುರುತು ಆಗುತ್ತಿತ್ತು. ಅವರು ಇಟ್ಟುಕೊಳ್ಳುವ ಹೆಸರಿನಿಂದಲೂ ಅವರನ್ನು ಜಾತಿಯನ್ನು ಗುರುತಿಸಲಾಗುತ್ತದೆ.

ಹೀಗೆ ಬೆಳೆದು ಬಂದ ವರ್ಣವ್ಯವಸ್ಥೆ ಮತ್ತು ಅದರಿಂದ ಜನ್ಮ ತಾಳಿದ ಜಾತಿ ವ್ಯವಸ್ಥೆ ಬಗ್ಗೆ ಸ್ವಂತಂತ್ರ್ಯ ಹೋರಾಟದ ಸಂದರ್ಭದಲ್ಲಿ ಭಿನ್ನವಾದ ನಿಲುವುಗಳು ಇದ್ದವು. ಉದಾಹರಣೆಗೆ ಗಾಂಧೀಜಿ ಅವರು ವರ್ಣವ್ಯವಸ್ಥೆಯಲ್ಲಿನ ಕುಲಕಸುಬುಗಳು ಒಂದು ದೇಶದ ಸಂಸ್ಕೃತಿಯ ವೈಶಿಷ್ಟ್ಯವನ್ನು ಎತ್ತಿಹಿಡಿಯುತ್ತವೆ ಎಂದರೆ, ಅಂಬೇಡ್ಕರ್ ಅವರು ಆ ವರ್ಣವ್ಯವಸ್ಥೆ ಪ್ರತಿಗಾಮಿತನದ್ದಾಗಿದ್ದು, ಅವ್ಯವಹಾರವಾಗಿದ್ದು ಅದು ಜಾತಿಪದ್ಧತಿಯ ಪ್ರಚಾರ ಮಾಡುತ್ತದೆಂದು ವಿರೋಧಿಸಿದರು. ಕುವೆಂಪು ಅವರು ಸಹ ಈ ವರ್ಣವ್ಯವಸ್ಥೆಯನ್ನು ಮತ್ತು ಅಲ್ಲಿನ ಪುರೋಹಿತಶಾಹಿ ವ್ಯವಸ್ಥೆಯನ್ನು ವಿರೋಧಿಸಿದವರು. ಅದಕ್ಕೆ ನಿದರ್ಶನ ಅವರ ‘ಶೂದ್ರ ತಪಸ್ವಿ’ ಮತ್ತು ‘ಬೆರಳ್‌ಗೆ ಕೊರಳ್’ ನಾಟಕಗಳಾಗಿವೆ. ರಾಜಕೀಯವಾಗಿ, ಸಾಮಾಜಿಕವಾಗಿ ಅಂದು ನಡೆಯುತ್ತಿದ್ದ ಈ ಎಲ್ಲ ಬೆಳೆವಣಿಗೆಗಳು ಕನ್ನಡ ನವೋದಯ ಬರಹಗಳ ಮೇಲೆ ಪ್ರಭಾವಿಸಿದವು. ಆದ್ದರಿಂದ ನವೋದಯ ಬರಹಗಳಲ್ಲಿ ಈ ಜಾತಿ ಕೇಂದ್ರಿತ ಚಿಂತನೆಗಳ ಅಧ್ಯಯನವು ಮುಖ್ಯವಾಗಿದೆ.

ಅಂಬೇಡ್ಕರ್ ಮತ್ತು ಕುವೆಂಪು ಅವರು ವರ್ಣವ್ಯವಸ್ಥೆಯನ್ನು ಕೆಡುಕಿನ ಅಂಶವಾಗಿ ನೋಡಿದರೆ, ಡಿ.ವಿ.ಜಿ ಅವರು ಅದನ್ನು ಒಂದು ಮಹಾಸಂಸ್ಕೃತಿಯಾಗಿ ನೋಡಿದರು. “ನಾನಾ ಸ್ವತಸಿದ್ಧಕಾರಣಗಳಿಂದ ನಾನಾ ಜನ ಸಮುದಾಯಗಳಲ್ಲಿ ನಾನಾ ಆಚಾರಗಳು ವ್ಯವಹಾರ ಪದ್ಧತಿಗಳು ನೆಲೆಗೊಂಡಿರುತ್ತವೆ. ಈ ಅಭ್ಯಾಸ ಭೇದಗಳ ಮತ್ತು ಸಂಪ್ರದಾಯ ಭೇದಗಳ ಆಧಾರದ ಮೇಲೆ ಆಗಿರುವುವು ವಂಶ, ಜನಪದ, ವರ್ಗ, ಜಾತಿ ಎಂಬ ಭೇದ ಗಣನೆಗಳು. ಈ ಪಂಗಡಗಳು ಯಾರೋ ಒಬ್ಬ ಮನುಷ್ಯ ಅಥವಾ ಒಂದು ಗುಂಪು ಹುಟ್ಟುಹಾಕಿದ ಕೃತ್ರಿಮ ವಿಭಜನೆಯಲ್ಲ. ಒಟ್ಟಿಗಿದ್ದದ್ದನ್ನು ಯಾರೂ ಒಡೆದು ಹಾಕಿಲ್ಲ. ಹುಟ್ಟಿನಲ್ಲಿಯೇ ಮೊಳಕೆ ಹತ್ತು ಕಾಂಡಗಳಾಗಿತ್ತು. ಮತ್ತು ಅದು ಕೊರತೆಯುಂಟು ಮಾಡಬೇಕಾದ ಸಂಗತಿಯೂ ಅಲ್ಲ. ಆ ಹತ್ತರ ಹತ್ತು ಬಗೆಯಿಂದಲೇ ಆ ಪೊದೆಯ ಸೊಗಸು ನಮಗೆ ಅಪೇಕ್ಷಣೀಯವಾದದ್ದು ವೈವಿಧ್ಯದ ವಿನಾಶವಲ್ಲ. ವೈವಿಧ್ಯದ ಸಮ್ಮಿಳಿತತೆ, ಏಕರಸತೆಯಲ್ಲ, ಸಮರಸತೆ.”  ಒಂದೇ ರೀತಿಯ ವಾಯುಗುಣ, ಭೂಪ್ರದೇಶ ಒಂದೇ ರೀತಿಯ ಜನಸ್ವಭಾವವಿಲ್ಲದ ಜನರು ಸಿಗಲು ಹೇಗೆ ಸಾಧ್ಯವಿಲ್ಲವೋ ಹಾಗೆ ಜನ ಜನಾಂಗಗಳಲ್ಲಿ, ಸಮಾಜ ವರ್ಗಗಳಲ್ಲಿ ಭೇದಭಾವಗಳು ಅನಿವಾರ್ಯವಾಗುತ್ತವೆ ಎಂಬುದು ಅವರ ವಾದ. ರಷ್ಯಾ, ಅಮೇರಿಕಾದಲ್ಲಿ ಜಾತಿವ್ಯವಸ್ಥೆ ಇಲ್ಲದಿದ್ದರೂ ಅವರಲ್ಲಿ ವೈಷಮ್ಯವಿದೆ. ಆದ್ದರಿಂದ ಜಗತ್ತಿನ ಎಲ್ಲಾ ವರ್ಗ ಮತ್ತು ಜನಾಂಗಗಳಲ್ಲಿ ವೈಷಮ್ಯಗಳು ನಡೆಯುತ್ತಿರುತ್ತವೆ. ಯಾವ ದೇಶದಲ್ಲಿಯೂ ಸಮಾನತೆ ಎಂಬ ಭಾವವೇ ಇಲ್ಲ. ಹೀಗಾಗಿ ಸಾಮಾನ್ಯ ಆಕಾರದಲ್ಲಿ ಮನುಷ್ಯರೆಲ್ಲ ಒಂದು; ವಿಶೇಷ ಆಕಾರದಲ್ಲಿ ವಂಶ, ವರ್ಗ, ಕುಲ, ಜಾತಿ, ಪೀಳಿಗೆಗೆ ಅನುಗುಣವಾಗಿ ಬೇರೆ ಬೇರೆ ಇದ್ದು, ಇಂತಹ ವರ್ಗ ವ್ಯತ್ಯಾಸ, ಜಾತಿ ವ್ಯತ್ಯಾಸಗಳಲ್ಲಿನ ವಿವಿಧತೆಯನ್ನು ‘ಮಹಾಸಂಸ್ಕೃತಿ’ ಎಂದು ಕರೆಯುತ್ತಾರೆ. ಈ ವರ್ಗ ವ್ಯತ್ಯಾಸ, ಜಾತಿ ವ್ಯತ್ಯಾಸ ಮಾನವ ಸ್ವಭಾವಕ್ಕೆ ಅನುಗುಣವಾಗಿ ಬಂದಿರುವುದರಿಂದ ಸಮಾಜದ ಸಂಘಟನೆಗೆ ಇವು ಪ್ರೇರಕ ಸಾಧಕಗಳಾಗಬೇಕು. ಅದು ಬಿಟ್ಟು ಭೇದಭಾವಗಳಲ್ಲಿ ಎಲ್ಲೆ ಮೀರಿ ನಡೆದಾಗ ಅಪಾಯಕಾರಿಗಳಾಗುತ್ತವೆ. ಲೋಕ ಜೀವನಕ್ಕೆ ಬೇಕಾದದ್ದು ಜಾತಿಗಳ ಸಾಂಕರ್ಯವಲ್ಲ; ಜಾತಿಗಳ ಸತ್ವಪೂರ್ವಕವಾದ ಅನ್ಯೋನ್ಯ ಸ್ನೇಹ. ಅದು ಹಿತಕರವಾಗಲು ಇರಬೇಕಾದದ್ದು ಔಚಿತ್ಯ ವಿವೇಕ. ಜಾಗರೂಕವಾದ ಔಚಿತ್ಯ ವಿವೇಕ.” ಎಂಬುದು ಅವರ ವಾದ.

ಹೀಗೆ ಭಾರತದಲ್ಲಿ ನೆಲೆಸಿರುವ ಜನಾಂಗಗಳನ್ನು ನೋಡಿದಾಗ ಅಲ್ಲಿ ಯಾವ ಜನಾಂಗವು ಶುದ್ಧ ಜನಾಂಗವಾಗಿರದೆ ಮಿಶ್ರಜನಾಂಗವಾಗಿರುವುದನ್ನು ಚರಿತ್ರೆ, ಪುರಾಣಗಳಿಂದಲೇ ತಿಳಿಯಬಹುದು. ಇದಕ್ಕೆ ಕಾರಣ ಶಂಬಾ ಅವರು ಹೇಳುವಂತೆ ಮಿಶ್ರವಿವಾಹ ಸಂಬಂಧಗಳು (ಆರ್ಯರ-ದ್ರಾವಿಡ) ಏರ್ಪಟ್ಟಿರುವುದು. ಆದರೆ ಈ ಸಂಪ್ರದಾಯ ಮುಂದೆ ರಾಜಪ್ರಭುತ್ವದಲ್ಲಿ ಉಳಿದರು, ಜನಸಾಮಾನ್ಯರಲ್ಲಿ ಉಳಿಯಲಿಲ್ಲ. ಸ್ವಜಾತಿಯವರಲ್ಲಿಯೇ ವಿವಾಹ ಸಂಬಂಧಗಳು ಏರ್ಪಡುತ್ತಿದ್ದವು. ಇದನ್ನು ಅಂಬೇಡ್ಕರ್ ಮತ್ತು ಶಂಬಾ ಅವರು ‘ಜಾತಿಯ ಏಕೈಕ ಲಕ್ಷಣ’ ಎಂದು ಕರೆದರು. “ಭಾರತದಲ್ಲಿ ಜಾತಿಯೆಂದರೆ ಸ್ವಜಾತಿ ಮದುವೆಯ ಆಚರಣೆಯೊಂದಿಗೆ, ಅಂತರ್ಜಾತಿ ವಿವಾಹವನ್ನು ನಿಷೇಧಿಸುತ್ತಾ, ಒಂದು ಗುಂಪು ಇನ್ನೊಂದರೊಡನೆ ಸಮ್ಮಿಳಿತವಾಗದಂತೆ ತಡೆಯುವ ಮೂಲಕ ಒಟ್ಟು ಜನಸಂಖ್ಯೆಯನ್ನು ಸ್ಥಿರ ಮತ್ತು ನಿರ್ದಿಷ್ಟ ಘಟಕಗಳ ನಡುವೆ ಕೃತಕವಾಗಿ ಕತ್ತರಿಸಿ ಹಂಚುವ ಪ್ರಕ್ರಿಯೆ. ಹೀಗಾಗಿ ಸ್ವಜಾತಿ ವಿವಾಹವು ಜಾತಿಗೇ ವಿಶಿಷ್ಟವಾದ ಏಕೈಕ ಗುಣವೆಂದು ತೀರ್ಮಾನಿಸುವುದು ಅನಿವಾರ್ಯ” ಎಂದು ಹೇಳುತ್ತಾ, ಅಂಬೇಡ್ಕರ್ ಅವರು ಜಾತಿವ್ಯವಸ್ಥೆಯ ರಹಸ್ಯ ಸ್ಫೋಟಕ್ಕೆ ಸ್ವಜಾತಿ ವಿವಾಹವು ಕೂಡ ಒಂದು ಕೀಲಿಕೈಯೆಂದೇ ಭಾವಿಸಿದ್ದರು. ಈ ಮನೋಧರ್ಮವನ್ನು ಬದಲಾಯಿಸಲು ಅಂತರ್ಜಾತಿ ವಿವಾಹದಿಂದ ಮಾತ್ರ ಸಾಧ್ಯ ಎಂಬುದನ್ನು ಪ್ರಮುಖವಾಗಿ ಪ್ರತಿಪಾದಿಸಿದರು. ಇದು ಸಾಧ್ಯವಾದರೆ ಜನರ ನಡುವೆ ಯಾವುದೇ ಜಾತಿಭೇದಗಳಿಲ್ಲದೆ ಸೋದರತೆ, ಭ್ರಾತೃತ್ವ ಮತ್ತು ಸಮಾನತೆ ಬೆಳೆಯಲು ಸಾಧ್ಯವಾಗುತ್ತದೆ ಎಂದು ನಂಬಿದರು. ಇವರಂತೆಯೇ ಮುಂದೆ ಗಾಂಧೀಜಿ ಮತ್ತು ಅವರ ಅನುಯಾಯಿಗಳು ಅಂತರ್ಜಾತಿ ವಿವಾಹಕ್ಕೆ ಪ್ರೋತ್ಸಾಹ ನೀಡಿದರು ಕೂಡ ಸಮಾಜ ಅದನ್ನು ಸ್ವೀಕರಿಸಲಿಲ್ಲ. ಶಂಬಾ ಅವರು ಕೂಡ ಭಾರತದ ಒಳಜಾತಿಗಳಲ್ಲಿ ಐಕ್ಯ, ಸಮಾನ ಭಾವಗಳು ಬೆಳೆಯಲು ಮಿಶ್ರವಿವಾಹಗಳು ಆಗಬೇಕಾದದು ಅನಿವಾರ್ಯ ಎಂದು ಹೇಳುತ್ತಾರೆ. ಇದರಿಂದ ಜಾತೀಯತೆಯಳಿದು, ಭಾರತದಲ್ಲಿ ಒಂದು ಜನಾಂಗ ನಿರ್ಮಾಣಕ್ಕೆ ಕಾರಣವಾಗುತ್ತದೆಂದು ಭಾವಿಸಿದರು.  ಇಂತಹ ಪ್ರಗತಿಪರ ಚಿಂತನೆಗಳು ನಡೆದರು ಹಿಂದೂ ಸಮಾಜದ ವರ್ಣವ್ಯವಸ್ಥೆ ಬದಲಾಯಿತೇ ಹೊರತು; ಜಾತಿ ವ್ಯವಸ್ಥೆ ಬದಲಾಗಲಿಲ್ಲ. ಕಾಲಕ್ಕೆ ತಕ್ಕಂತೆ ಅದು ಆಳುವ ವರ್ಗಗಳಿಂದ ಹೊಸ ಹೊಸ ರೂಪಗಳನ್ನು ಪಡೆದು ಬೆಳೆಯುತ್ತ ಹೋಗುತ್ತಿದೆ. ಜಾತಿ ವ್ಯವಸ್ಥೆಯನ್ನು ಬಹಿಷ್ಕರಿಸಿ ಜಾತಿಯಿಂದ ದೂರ ಉಳಿದ ಕೆಲವು ಸಾಮಾಜಿಕ ಸುಧಾರಕರನ್ನು, ಚಿಂತಕರನ್ನು ಮತ್ತೆ ತಮ್ಮ ಜಾತಿಯ ನಾಯಕರನ್ನಾಗಿ ಗುರುತಿಸಿಕೊಳ್ಳುವ ವ್ಯವಸ್ಥೆ ಶುರುವಾಗಿದೆ.

ಜಾತಿಗಳು ಬೆಳೆದು; ಧರ್ಮಗಳು ವಿಕಾಸಗೊಂಡು ಪ್ರವರ್ಧಮಾನ ಸ್ಥಿತಿಗೆ ಬಂದಾಗ ಆರೋಗ್ಯಕರವಾದ ಸಮಾಜ ಬೆಳೆಯಲಿಲ್ಲ. ಜನರಿಗೆ ‘ಧರ್ಮ’ ಎನ್ನುವ ಕಲ್ಪನೆ ಗೊತ್ತಿಲ್ಲದಿದ್ದರು ತಮ್ಮ ಜಾತಿಯ ಬಗ್ಗೆ ತಿಳಿದಿದ್ದರು. ಅದರೊಂದಿಗೆ ಭಾವ ಪ್ರಧಾನವಾದ ಸಂಬಂಧವನ್ನು ಬೆಳೆಸಿಕೊಂಡಿದ್ದರು. ಬೇರೆ ಧರ್ಮಗಳಲ್ಲಿ ಯಾವುದೇ ತೊಂದರೆ ಅನುಭವಿಸಿದಾಗ ಜನ ಒಂದಾಗುವಂತೆ ಹಿಂದೂ ಧರ್ಮಿಯರು ಒಂದಾಗುವುದು ಸಾಧ್ಯವಿರಲಿಲ್ಲ. ಪರಸ್ಪರ ಮಾನವರಲ್ಲಿ ನಾವೆಲ್ಲಾ ಒಂದು ಎಂಬ ಭಾವನೆ ಇಲ್ಲದ ಕಾರಣದಿಂದಲೇ ಭಾರತ ಸ್ವಾತಂತ್ರ್ಯಯ ಹೋರಾಟದಲ್ಲಿ ಸಂಘಟನೆಯ ವಿಷಯದಲ್ಲಿ ಹಲವು ಏಳು-ಬೀಳುಗಳನ್ನು ಅನುಭವಿಸುವಂತಾಯಿತು. ಜನರು ಯಾವುದನ್ನಾದರೂ ಬಿಟ್ಟು ಬಾಳುವರು, ಆದರೆ ಜಾತಿ ಬಿಟ್ಟು ಬಾಳಲು ಮತ್ತು ಅದರಲ್ಲಿ ಬದಲಾವಣೆ ತರಲು ಒಪ್ಪುತ್ತಿರಲಿಲ್ಲ. ಸ್ವಾತಂತ್ರ‍್ಯ ಚಳವಳಿಯ ಸಂದರ್ಭದಲ್ಲಿ ಗಾಂಧೀಜಿ ಅವರ ಖಾದಿ ಪ್ರಸಾರ, ಮಾಂಸಾಹಾರ ಮತ್ತು ಮಧ್ಯಪಾನ ನಿಷೇಧಕ್ಕೆ ಜನಮಾನ್ಯತೆ ನೀಡಿದಂತೆ ಅಸ್ಪೃಶ್ಯತೆಯ ನಿವಾರಣೆಗೆ ಅವರ ಮನೋಭಾವವನ್ನು ಬದಲಾಯಿಸಲು ಸಿದ್ಧರಿರಲಿಲ್ಲ. ಜನರ ಈ ಮನೋಧರ್ಮವನ್ನು ಕಾರಂತರು ತಮ್ಮ ಆತ್ಮಕಥೆಯಲ್ಲಿ ತಮಗಾದ ಅನಭವದಿಂದಲೇ ಹೇಳಿಕೊಂಡಿದ್ದಾರೆ. “ಅಸ್ಪೃಶ್ಯತಾ ನಿವಾರಣೆಯ ವಿಚಾರದಲ್ಲಂತು ನಮ್ಮ ಕುಂದಾಪುರದ ಜನರಿಗೆ ಮನ್ನಣೆ ಬರಲಾರದು. ಕಾರಣವಿಷ್ಟೇ; ತೀರ ಹಳೆಯ ಮಾದರಿಯ ಜನ; ಕಟ್ಟುಕಟ್ಟಲೆಗಳಲ್ಲಿ ಮುಳುಗಿ ತೇಲಿದವರು. ಅವರಲ್ಲಿನ ಅಂಧಶ್ರದ್ದೆ ಹೇಳತೀರದಷ್ಟು. ಅಂಥವರ ಮುಂದೆ ‘ಅಪ್ಪ ನೆಟ್ಟ ಆಲದಮರ ತಬ್ಬಬಾರ’ದೆಂದು ಗಾಂಧೀಜಿಯವರ ತತ್ವೋಪದೇಶ, ಸ್ವಾಮಿ ದಯಾನಂದರ ಶಾಸ್ತ್ರಚಿಕಿತ್ಸೆ, ಇವನ್ನೆಲ್ಲ ಕೂಡಿಸಿ ಹೇಳಿದರೆ, ತಮ್ಮಪ್ಪ ಅಜ್ಜಂದಿರಿಗಿಂತಲೂ ಗಾಂಧೀಜಿಯವರಾಗಲೀ, ಆ ಸ್ವಾಮಿ ದಯಾನಂದರಾಲೀ ಹೆಚ್ಚಿಗೆ ಬಲ್ಲವರೆಂದು ಆ ಜನರು ಒಪ್ಪಿಕೊಂಡಿದ್ದಾರೇಯೇ?”  ಹೀಗೆ ‘ಜಾತಿ’ ಎಂಬ ಭಾವಪ್ರಧಾನದ ವಿಷಯದೊಂದಿಗೆ ಜನರು ಎಂದಿಗೂ ತಮ್ಮ ಮನೋಧರ್ಮ ಬದಲಾಯಿಸುತ್ತಿರಲಿಲ್ಲ. ಹೀಗೆ ಸಾಮಾನ್ಯ ಜನರಿಗೆ ತಮ್ಮ ಧರ್ಮ, ಸಂಸ್ಕೃತಿ, ದೇಶದ ಬಗ್ಗೆ ತಿಳಿವು ಇಲ್ಲದಿದ್ದರು ತಮ್ಮ ಜಾತಿಯ ಬಗ್ಗೆ ಚೆನ್ನಾಗಿ ತಿಳಿದಿರುತ್ತಾರೆ.

ಅಸ್ಪೃಶ್ಯತೆ ನಿವಾರಣೆ ಕುರಿತು ಉಂಟಾದ ಜನಜಾಗೃತಿಯ ಕಾರ್ಯಕ್ರಮಗಳಲ್ಲಿ ನವೋದಯರಿಗೆ ಗಾಂಧಿ ಪ್ರಭಾವವೇ ಹೆಚ್ಚಾಗಿತ್ತು. ಅಂಬೇಡ್ಕರ್ ಆ ಸಂದರ್ಭದಲ್ಲಿ ಇವರನ್ನು ಮುಟ್ಟಿರಲಿಲ್ಲ ಎಂದೇ ಹೇಳಬಹುದು. ಆ ಕಾಲದ ಯಾವ ಪ್ರಮುಖ ಬರಹಗಾರರಲ್ಲೂ ಇವರ ಪ್ರಭಾವ ಕಂಡು ಬಂದಿಲ್ಲ. ಮಾಸ್ತಿ ಅವರು ಮಾತ್ರ ಅಂಬೇಡ್ಕರ್ ಬೌದ್ಧ ಧರ್ಮ ಸ್ವೀಕರಿಸಿದ್ದನ್ನು ಒಪ್ಪದೆ ಅದಕ್ಕೆ ಪ್ರತಿಕ್ರಿಯೆಯಾಗಿ ತಮ್ಮ ‘ಧರ್ಮ ಸಂರಕ್ಷಣೆ’ ಕೃತಿಯನ್ನು ರಚಿಸಿದರು. ನವೋದಯರ ಪ್ರಮುಖ ವೈಚಾರಿಕ ಚಿಂತಕರಾದ ಕುವೆಂಪು ಮತ್ತು ಕಾರಂತರಲ್ಲಿಯೂ ಬರುವ ದಲಿತರ ಬದುಕಿನ ಚಿತ್ರಣದಲ್ಲಿಯೂ ಅವರ ಸಮಕಾಲೀನವರೇ ಆದ ಅಂಬೇಡ್ಕರ್ ಅವರ ಯಾವ ಅಂಶಗಳು ಪ್ರಭಾವಿಸಿದ್ದಂತೆ ಕಾಣುವುದಿಲ್ಲ. ಕಾರಣ ಕರ್ನಾಟಕದ ಅಂದಿನ ಪರಿಸ್ಥಿತಿ ಹಾಗೆ ಇತ್ತು. ಹೇಗೆ ಭಾರತ ಹರಿದು ಹಂಚಿಹೋಗಿತ್ತೋ ಹಾಗೇ ಕರ್ನಾಟಕವು ಹಲವು ಭಾಗಗಳಾಗಿ ಮುಂಬೈ, ಮದ್ರಾಸ್, ಹೈದರಬಾದ್ ಮತ್ತು ಮೈಸೂರು ಭಾಗಗಳಿಗೆ ಹಂಚಿಕೆಯಾಗಿದ್ದು ಒಂದು ಏಕೀಕೃತ ಆಳ್ವಿಕೆ ಇರಲಿಲ್ಲ. ಉತ್ತರ ಕರ್ನಾಟಕದ ಭಾಗಗದಲ್ಲಿ ಅಂಬೇಡ್ಕರ್ ಚಳವಳಿಯ ಪ್ರಭಾವ ಸ್ವಲ್ಪ ಮಟ್ಟಿಗೆ ಕಾಣಿಸಿಕೊಂಡಿತು. ಆದರೆ ದಕ್ಷಿಣ ಭಾಗಕ್ಕೆ ಅವರ ಹೋರಾಟದ ಪ್ರಭಾವಗಳು ಕಾಣಿಸಿಕೊಂಡಿರಲಿಲ್ಲ. ಈ ಭಾಗದಲ್ಲಿ ಮದ್ರಾಸ್ ಪ್ರಾಂತ್ಯದ ಬ್ರಾಹ್ಮಣೇತರ ಚಳವಳಿಗಳ ನೇರ ಪ್ರಭಾವವಿತ್ತು. ಆದರೆ ಕುವೆಂಪು, ಕಾರಂತ ಮತ್ತು ಅಂಬೇಡ್ಕರ್ ಈ ಮೂವರು ಅಂದಿನ ವೈದಿಕಶಾಹಿಯ ‘ಭಾರತೀಯ ಸಂಸ್ಕೃತಿ’ಯನ್ನು ಪ್ರಶ್ನಿಸುವ ಮನೋಧರ್ಮವನ್ನು ಹೊಂದಿದವರಾಗಿದ್ದು, ‘ಸಂಸ್ಕೃತಿ ಪುನರ‍ಚನೆ’ಯ ಚಿಂತಕರಾಗಿದ್ದರೆಂದು ಜಿ.ಹೆಚ್.ನಾಯಕರು ಹೇಳುತ್ತಾರೆ. ಮೈಸೂರು ಮತ್ತು ಮದ್ರಾಸ್ ಭಾಗದಲ್ಲಿ ವೈದಿಕೇತರ ಚಳವಳಿಗಳ ಪ್ರಭಾವ ಹೆಚ್ಚಾಗಿದ್ದರಿಂದ ಅಂಬೇಡ್ಕರ್ ಅವರ ಹೋರಾಟಗಳು ಇಡೀ ಕರ್ನಾಟಕ ಅಥವಾ ದಕ್ಷಿಣ ಪ್ರಾಂತ್ಯವನ್ನು ಮುಟ್ಟುವುದು ತಡವಾದರೂ, ಮುಂಬೈ ಪ್ರಾಂತ್ಯದ ಭಾಗವನ್ನು ಮುಟ್ಟಿದ್ದವು.

       ಕರ್ನಾಟಕದ ನವೋದಯ ಪೂರ್ವ ಮತ್ತು ನವೋದಯ ಕಾಲದಲ್ಲಿ ಬರೆಯಲಾರಂಭಿಸಿದ್ದ ಪ್ರಮುಖ ಮೂರು ದಲಿತ ಬರಹಗಾರರಾದ ದೇವರಾಯ ಇಂಗಳೆ, ಸೊಸಲೆ ಸಿದ್ದಪ್ಪ, ಡಿ. ಗೋವಿಂದ ದಾಸ್ ಇವರುಗಳಲ್ಲಿ, ಸೋಸಲೆ ಸಿದ್ದಪ್ಪ, ಡಿ.ಗೋವಿಂದಾಸ ಇಬ್ಬರು ಅಂಬೇಡ್ಕರ್ ಪ್ರಭಾವಕ್ಕಿಂತ ಗಾಂಧೀಜಿ ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ ಪ್ರಭಾವಕ್ಕೆ ಒಳಗಾಗಿದ್ದರು. ಈ ಇಬ್ಬರು ಮೈಸೂರು ಪ್ರಾಂತ್ಯದವರಾಗಿದ್ದರಿಂದ ಅಂಬೇಡ್ಕರ್ ಅವರ ದಲಿತ ಹೋರಾಟಗಳ ನೇರ ಪ್ರಭಾವ ಇವರ ಮೇಲಾಗಲಿಲ್ಲ. ಅದರೆ ನಾಲ್ವಡಿ ಕೃಷ್ಣರಾಜ ಒಡೆಯರು ಜಾರಿಗೆ ತಂದ ಸಾಮಾಜಿಕ ಸುಧಾರಣೆಯಿಂದ ಶಿಕ್ಷಣ ಪಡೆದ ಮೊದಲ ತಲೆಮಾರಿನ ದಲಿತ ಬರಹಗಾರರಾದ ಈ ಇಬ್ಬರಲ್ಲಿ ತಮ್ಮ ಈ ಏಳಿಗೆಗೆ ಕಾರಣರಾದ ಒಡೆಯರಲ್ಲಿ ಸ್ವಾಮಿ ಭಕ್ತಿ ಇತ್ತು. ಡಿ. ಗೋವಿಂದಾಸರಿಗೆ ನಂತರದಲ್ಲಿ ಅಂಬೇಡ್ಕರ್ ಅವರ ಪ್ರಭಾವ ಆಯಿತು. ದೇವರಾಯ ಇಂಗಳೆ ಅವರು ಮುಂಬೈ ಪ್ರಾಂತ್ಯಕ್ಕೆ ಸೇರಿದವರಾಗಿದ್ದು ಶಾಹುಮಹಾರಾಜ ಮತ್ತು ಅಂಬೇಡ್ಕರ್ ಅವರ ನೇರ ಒಡನಾಟವಿದ್ದರಿಂದ ಒಬ್ಬ ದಲಿತ ಹೋರಾಟಗಾರರಾಗಿ ತಮ್ಮ ಜನರ ಏಳಿಗೆಗಾಗಿ ಶ್ರಮಿಸಿದರು. ನಾಟಕಗಳನ್ನು ಬರೆದು, ಆಡಿಸಿ ಜನರಲ್ಲಿ ದಲಿತರ ಮೇಲೆ ನಡೆಯುವ ಶೋಷಣೆಗಳ ಜಾಗೃತಿ ಮೂಡಿಸಲು ಮುಂದಾದರು. ‘ದೇವದಾಸಿ’ ಪದ್ಧತಿಗೆ ದಲಿತ ಮಹಿಳೆಯರೇ ನೇರ ಗುರಿ ಆಗುತ್ತಿದ್ದರು. ಆ ಕೆಟ್ಟ ಆಚರಣೆಯ ತಡೆಗೆ ಸತತವಾಗಿ ಹೋರಾಡಿದರು. ದಲಿತರ ಭೂಮಿ ಹಕ್ಕಿಗಾಗಿಯೂ ಹೋರಾಡಿದರು. ದಲಿತರು ಶಿಕ್ಷಿತರಾದರೇ ಅಷ್ಟೇ ಅವರಿಗೆ ತಮ್ಮ ಶೋಷಣೆ ಜ್ಞಾನ ತಿಳಿಯಲು ಸಾಧ್ಯವಾಗಿದ್ದು ಶಿಕ್ಷಣ ಪಡೆಯುವಂತೆ ಜನರನ್ನು ಪ್ರೇರೇಪಿಸಿದರು. ಅದಕ್ಕೂ ಮೊದಲು ದಲಿತರು ತಮ್ಮ ಜೀವನ ಪದ್ಧತಿಯನ್ನು ಬದಲಾಯಿಸಿಕೊಳ್ಳುವಂತೆ, ಸತ್ತ ದನದ ಮಾಂಸವನ್ನು ತಿನ್ನದಂತೆ ಜನರಿಗೆ ಜಾಗೃತಿ ಮೂಡಿಸಲು ಹೋರಾಡಿದರು.

ಸೋಸಲೆ ಸಿದ್ದಪ್ಪನವರು ಗಾಂಧೀಜಿ ಅವರ ‘ಹರಿಜನೋದ್ಧಾರ’ ಕಾರ್ಯಕ್ರಮದ ಪ್ರಭಾವದಿಂದ ‘ಮತಸುಧಾರಣೆ’ (೨೦-೦೩-೧೯೩೮) ಎಂಬ ತಮ್ಮ ಭಾಷಣದಲ್ಲಿ ದಲಿತರು ತಮ್ಮ ಜೀವನ ಪದ್ಧತಿಯನ್ನು ಬದಲಾಯಿಸಿಕೊಳ್ಳಲು, ಮೇಲುವರ್ಗದವರ ಬದುಕನ್ನು ಅನುಕರಿಸಬೇಕು ಎಂದು ಹೇಳಿದರು. ಅಂದರೆ ಆಹಾರಪದ್ಧತಿ(ಮಾಂಸಾಹಾರ ಮತ್ತು ಮದ್ಯಸೇವನೆ)ಯನ್ನು ಬದಲಾಯಿಸಿಕೊಂಡು ವಾರಕ್ಕೊಮ್ಮೆಯಾದರು ಶುಚಿಯಾಗಿ, ದೈವಾರಾಧನೆ ಮಾಡುವ, ದೇವರಿಗೆ ಪ್ರಾಣಿಬಲಿ ಕೊಡುವುದನ್ನು ಬಿಟ್ಟು ಅಹಿಂಸಾ ಮನೋಭಾವವನ್ನು ತಾಳಬೇಕು ಎಂಬುದು ಅವರ ಆಶಯವಾಗಿತ್ತು. ಹಾಗೆಯೇ ಅವರಲ್ಲಿಯೂ ಈ ಸಮಾಜದ ಮೇಲ್ವರ್ಗ ದಲಿತರ ವ್ಯಕ್ತಿತ್ವದ ಸ್ವಾತಂತ್ರ್ಯವನ್ನು ಕಿತ್ತುಕೊಂಡಿರುವ ಬಗ್ಗೆ ನೋವು ಮತ್ತು ಆಕ್ರೋಶವೂ ಇತ್ತು. ಇದಕ್ಕೆ ತಮ್ಮದೇಯಾದ ಪ್ರತಿಕ್ರಿಯೆಯನ್ನು ತಮ್ಮ ಭಾಷಣದಲ್ಲಿ ನೀಡಿದ್ದಾರೆ. ಮೇಲ್ವರ್ಗದವರು ಮಠ-ಕುಲ ಗುರುಗಳನ್ನು ಹೊಂದಿರುವುದರಿಂದ ಅವರ ಸಮುದಾಯದ ಏಳಿಗೆಗಾಗಿ ಶ್ರಮಿಸುತ್ತಾರೆ. ಆದರೆ ದಲಿತರಿಗೆ ಈ ಯಾವ ವ್ಯವಸ್ಥೆಯು ಇಲ್ಲದಿರುವುದರಿಂದ ಹಾಗೂ ಮೇಲ್ವರ್ಗದಂತೆ ಒಂದು ಸ್ವತಂತ್ರ ಸಮುದಾಯವಾಗಿ ಬದುಕುವ ಜೀವಿಸುವ ಹಕ್ಕು ಇಲ್ಲದ ಕಾರಣ ಮಂದಿರಗಳೊಳಗೆ ಪೂಜೆ, ಪ್ರಾರ್ಥನೆಗೆ ಅವಕಾಶವಿಲ್ಲ. ಆದರೆ “ದೇವರಿಗೆ ತಮ್ಮಿಂದ ಸ್ವೀಕರಿಸುವ ಕಪ್ಪಕಾಣಿಕೆಗೆ ಭೇದ ಮಾಡಲ್ಲ; ನಮಗೆ ಒಳಗೆ ಸೇರಿಸಲು ಮಾತ್ರ ಭೇದ ಉಂಟು” ಎಂದು ಪ್ರಶ್ನಿಸಿದವರು.

ಮುಂದುವರೆದು “ಈಶ್ವರ ಸೃಷ್ಟಿಯ ಮಾನವ ಜಾತಿಯಲ್ಲಿ ಗಂಡು ಹೆಣ್ಣುಗಳೆಂಬ ಎರಡು ಜಾತಿಗಳಿರುತ್ತವೆ. ಇವುಗಳಲ್ಲಿ ಈಶ್ವರನಿಗೆ ಯಾವ ಭಿನ್ನಾಭಿಪ್ರಾಯವೂ ಇರುವುದಿಲ್ಲ. ದೇವರ ಇದಿರಿನಲ್ಲಿ ಎಲ್ಲರೂ ಶ್ರೇಷ್ಠರು, ಎಲ್ಲರೂ ಸಮಾನರು ಎಂಬುದಾಗಿ ಬುದ್ಧದೇವನು ಸಾರಿ ಸಾರಿ ಹೇಳಿರುತ್ತಾನೆ. ಹೀಗಿದ್ದಾಗ್ಯೂ ಮತಾಚಾರ್ಯರ ಹಾವಳಿಯಿಂದ ದಿನದಿನವೂ ಅನಂತ ಜನಾಂಗ ಉತ್ಪತ್ತಿಯಾಗುತ್ತಿರುವುದು ಯಾರು ಯಾರು ಯಾವ ಯಾವ ಮತವನ್ನುತ್ಪತ್ತಿ ಮಾಡಿದಾಗ್ಯೂ ನಮ್ಮನ್ನು ಮಾತ್ರ ಹಿಂದು ಹಿಂದಕ್ಕೆ ಅಟ್ಟಿ ಬಿಡುತ್ತಲೇ ಇರುವರು. ಇದಕ್ಕೆ ನಾವು ಮಾಡಿದ ತಪ್ಪೇನೋ ಗೊತ್ತಾಗಲಿಲ್ಲ. ಇದುವರೆಗೆ ನಮ್ಮನ್ನು ಹೊಲೆಯರು, ಬಲಗೈಯವರು, ಪಂಚಮರು ಎಂದೂ, ಈಗ ಆದಿಕರ್ನಾಟಕರೆಂದು ಕರೆವರು, ನಾಳೆ ಮತ್ತೇನೆಂದು ಕರೆವರೊ ಗೊತ್ತಿಲ್ಲ. ಹೀಗೆ ದಿನಕ್ಕೊಂದು, ವಾರಕ್ಕೊಂದು, ತಿಂಗಳಿಗೊಂದು, ವರ್ಷಕ್ಕೊಂದು ಹೆಸರಿಟ್ಟು ಕರೆದರೂ ನಾವು ಅದಕ್ಕೆಲ್ಲ ಸಮ್ಮತಿಸುತ್ತಿರುವೆವೇ ಹೊರತು ಯಾಕೆ ನಮ್ಮನ್ನು ಹೀಗೆ ಕರೆವಿರೆಂದು ಯಾರೂ ಕೇಳಲೇ ಇಲ್ಲ. ಇತರೇ ವರ್ಣದವರನ್ನು ನಾಮಧೇಯದಿಂದ ಮತ್ತೊಂದು ನಾಮಧೇಯಕ್ಕೆ ಬದಲಾಯಿಸಿದ್ದರೆ ಅವರೆಷ್ಟು ಕಾದಾಡುತ್ತಿದ್ದರೋ ನೋಡಬಹುದಾಗಿತ್ತು. ಆದರೆ ನಾವೂ ಕೇಳುವಂತಿಲ್ಲ. ನಮ್ಮ ಪರವಾಗಿ ಕೇಳುವ ಮಠ ಮಾನ್ಯಾದಿ ವಕೀಲರೂ ಇರುವುದಿಲ್ಲ. ಇದಕ್ಕೂ ನಾವು ಒಬ್ಬರು ಮಠಾಧಿಪತಿಗಳೆಂಬ ವಕೀಲರನ್ನಿರಿಸಿಕೊಳ್ಳುವುದು ಅತಿಮುಖ್ಯವಾದ ಕಾರ್ಯವೆಂದು ಸಕಲರೂ ದೃಢವಾಗಿ ನಂಬಿಕೊಳ್ಳಬೇಕು.”  ಅವರ ಈ ಮಾತುಗಳಲ್ಲಿ ದಲಿತವರ್ಗ ಸಮಾಜಕ್ಕೆ ಗಟ್ಟಿಯಾಗಿ ಮಾತನಾಡುವ ಧ್ವನಿಯಿಲ್ಲದೆ ಮೇಲ್ವರ್ಗದವರು ಏನೇ ವಿಧಿಸಿದರೂ ಅದರಂತೆ ಬದುಕುವ ಜೀವನವಾಗಿದ್ದು, ಅದರಿಂದ ಹೊರಬರುವ ದಾರಿಯನ್ನು ಕಾಣಬೇಕಾಗಿದೆ ಎಂಬ ಆಶಯವಿದೆ.

ಸೋಸಲೆ ಸಿದ್ಧಪ್ಪನವರಂತೆಯೇ ಅಂಬೇಡ್ಕರ್ ಅವರು ಕೂಡ, ದಲಿತ ವರ್ಗಕ್ಕೆ ಒಂದು ಧ್ವನಿ ಇಲ್ಲ ಎಂಬುದನ್ನು ಹೇಳುತ್ತಾರೆ. ಸ್ವಾತಂತ್ರ‍್ಯ ಸಂಗ್ರಾಮದ ಸಂದರ್ಭದಲ್ಲಿ ಅಂಬೇಡ್ಕರ್ ಅವರು ಸಾಮಾಜಿಕ ಸಮಾನತೆಗಾಗಿ ಆಗ್ರಹಿಸಿದಾಗ ಕೆಲವರಿಂದ ಬಂದ ವಿರೋಧಕ್ಕೂ ಪ್ರತಿಕ್ರಿಯಿಸಿದರು. ಕೆಲವರು ರಾಜಕೀಯ ಸ್ವಾತಂತ್ರ್ಯಕ್ಕೆ ಪ್ರಾಮುಖ್ಯತೆ ನೀಡಿ ಅಸ್ಪೃಶ್ಯತೆಯು ಸೋವಿಯತ್ ಅಮೇರಿಕಾದಂತಹ ಗುಲಾಮಗಿರಿಗಿಂತಲೂ ಹೀನಾಯವಾದುದಲ್ಲ(ಲಾಲಾ ಲಜಪತ್ ರಾಯ್ ‘ನೆಮ್ಮದಿ ಇಲ್ಲದ ಭಾರತ’ ಕೃತಿ) ಎಂದು ಅಸ್ಪೃಶ್ಯತೆಯನ್ನು ಸಮರ್ಥಿಸಲು ಹೊರಟರು. ಹೀಗೆ ಗುಲಾಮಗಿರಿ ಮತ್ತು ಅಸ್ಪೃಶ್ಯರ ವಾಸ್ತವಿಕ ಸ್ಥಿತಿಗಳನ್ನು ಹೋಲಿಕೆ ಮಾಡುವುದನ್ನು ಅಂಬೇಡ್ಕರ್ ಅವರು ಖಂಡಿಸುತ್ತಾರೆ. ಅವೆರಡು ಪರಸ್ಪರ ವಿರುದ್ಧವಾದವು, ಒಂದು ವೇಳೆ ಗುಲಾಮಗಿರಿಗೆ ಮುಕ್ತಿ ಸಿಗಬಹುದು(ಈಗ ಸಿಕ್ಕಿದೆ), ಆದರೆ ಹಿಂದೂ ಸಮಾಜದಲ್ಲಿನ ಅಸ್ಪೃಶ್ಯ ಎಂಬ ಹಣೆ ಪಟ್ಟಿ ಹೊತ್ತ ಜಾತಿಗೆ ಮುಕ್ತಿ ಸಿಗುವುದಿಲ್ಲ ಎನ್ನುವ ಅವರ ಮಾತು ಇಂದಿಗೂ ಸತ್ಯವಾಗಿದೆ. ರೋಮ್ ಗುಲಾಮರಿಗೆ ಓದುವುದನ್ನು ಬರೆಯುವುದನ್ನು ಯಜಮಾನರು ಕಲಿಸುತ್ತಿದ್ದರು. ಅವರಲ್ಲಿ ಅಲಂಕಾರಿಕ, ವ್ಯಾಕರಣಕಾರ, ತತ್ವಜ್ಞಾನಿ, ಬೋಧಕ, ವೈದ್ಯ, ಕಲಾವಿದ ವೃತ್ತಿಗಳಲ್ಲಿ ತೊಡಗಿದ್ದವರು ಇದ್ದರು. ಅವರುಗಳಲ್ಲಿ ಆಳು ಮತ್ತು ಒಡೆಯ ಎಂಬ ಭೇದದ ಸಂಬಂಧವಿತ್ತು. ಆದರೆ ಭಾರತೀಯ ದಲಿತರಿಗೆ ಈ ಅವಕಾಶವನ್ನು ನೀಡಲಿಲ್ಲ. ಅಸ್ಪೃಶ್ಯರಿಗೆ ನಾಗರಿಕತೆಯ ಉನ್ನತ ಕಲಾ ಸ್ಥಾನಗಳಿಗೆ ಪ್ರವೇಶವಿಲ್ಲ ಮತ್ತು ಒಂದು ಸಾಂಸ್ಕೃತಿಕ ಜೀವನದೊಳಕ್ಕೆ ನುಸುಳಲು ದಾರಿಯಿಲ್ಲ. ಆದ್ದರಿಂದ “ಅಸ್ಪೃಶ್ಯತೆಯು ಗುಲಾಮಗಿರಿಗಿಂತಲೂ ಹೀನವಾಗಿದ್ದು ಮಾತ್ರವಲ್ಲ, ಅದರೊಂದಿಗೆ ಹೋಲಿಸಿದರೆ ಇದು ನಿಜಕ್ಕೂ ಕ್ರೂರವಾದದ್ದು ಕೂಡ. ಅವನ ಜೀವನಾಧಾರವನ್ನು ಅವನೇ ಕಂಡುಕೊಳ್ಳಬೇಕು; ಆದರೆ ಜೀವನೋಪಾಯಕ್ಕೆ ಇರುವ ಮಾರ್ಗಗಳನ್ನು ಅವನಿಗೆ ಪೂರ್ತಿಯಾಗಿ ತೆರೆಯುವುದಿಲ್ಲ. ಸ್ವತಂತ್ರವಾದ ಸಾಮಾಜಿಕ ವ್ಯವಸ್ಥೆಯ ಯಾವ ಅನುಕೂಲಗಳನ್ನೂ ಅಸ್ಪೃಶ್ಯರು ಕೇಳಿ ಪಡೆಯುವಂತಿಲ್ಲ. ಆದರೆ ಒಂದು ಸ್ವತಂತ್ರ ಸಾಮಾಜಿಕ ವ್ಯವಸ್ಥೆಯ ಎಲ್ಲ ಪ್ರತಿಕೂಲಗಳನ್ನು ಅವರು ಸಹಿಸಿಕೊಳ್ಳಬೇಕು.”  ಹೀಗೆ ಹಿಂದೂ ಸಮಾಜದಲ್ಲಿ ಅಸ್ಪೃಶ್ಯತೆ ಎಂಬುದು ಕೆಡುಕಿನ ವಾಹಕವಾಗಿದ್ದು, ಅವರನ್ನು ಮಾನವ ಜೀವಿ ಎಂಬಂತೆ ನೋಡುವುದಿಲ್ಲ. ಅಸ್ಪೃಶ್ಯತೆಯನ್ನು ಬಲವಂತವಾಗಿ ಹೇರಿ ಕಡ್ಡಾಯಗೊಳಿಸಿವುದರಿಂದ, ಗುಲಾಮಗಿರಿಗಿಂತಲೂ ಇದು ಕ್ರೂರವಾದುದು ಎಂದೇ ನೋಡುತ್ತಾರೆ. ಇವರ ಅಭಿಪ್ರಾಯಕ್ಕೆ ನಿದರ್ಶನವಾಗಿ ಭಾರತದ ಊಳಿಗಮಾನ್ಯ ವ್ಯವಸ್ಥೆಯ ಕ್ರೂರತೆಯನ್ನು ತೋರಿಸುವ ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ಮತ್ತು ಶಿವರಾಮ ಕಾರಂತರ ‘ಚೋಮನ ದುಡಿ’ ಕಾದಂಬರಿಗಳನ್ನು ನಿದರ್ಶಗಳಾಗಿ ನೋಡಬಹುದು.

ಶಂಬಾ ಮತ್ತು ಮಾಸ್ತಿಯವರು ಶೂದ್ರರು ‘ಬ್ರಾಹ್ಮಣ’ ಎನ್ನುವ ಜಾತಿಯನ್ನೇ ಗುರಿಯಾಗಿಸಿಕೊಂಡು ವಿರೋಧಿಸತೊಡಗಿದಾಗ ಅದನ್ನು ಒಪ್ಪದೆ ಶ್ರೇಷ್ಠ ಮತ್ತು ಕನಿಷ್ಠ ಎಂಬ ಭಾವನೆಗಳು ಜಾತಿಯಿಂದ ಬರುವುದಿಲ್ಲ. ಗುಣದಿಂದ ಬರುತ್ತವೆ ಎಂದು ಹೇಳಿದರು. ಬ್ರ‍್ರಾಹ್ಮಣ್ಯ ಎಂದರೆ ಸದ್ಗುಣಗಳಿಂದ ಕೂಡಿರುವಂತದು; ಆ ಗುಣ, ಶೀಲ, ನಡತೆ ಇಲ್ಲದಿರುವುದು ಶೂದ್ರತ್ವ ಎಂದು ಹೇಳುತ್ತಾರೆ. ಅವರ ಪ್ರಕಾರ ಬ್ರಾಹ್ಮಣ ಮತ್ತು ಶೂದ್ರ ಎನ್ನುವುದು ಗುಣನಡತೆಗಳಿಗೆ ಸಂಬಂಧಿಸಿದ್ದು. ಹೀಗೆ ಹೇಳುವ ಅವರ ಈ ಮಾತುಗಳು ಸಮಂಜಸವಾಗುವುದಿಲ್ಲ. ಶೂದ್ರ ವರ್ಗದವರು ಕೇವಲ ಮಧ್ಯ ಕುಡಿಯುವುದರಿಂದ, ಮಾಂಸ ತಿನ್ನುವುದರಿಂದ ಸದ್ಗುಣರಾಗಿಲ್ಲವೇ ಎಂಬ ಪ್ರಶ್ನೆ ಉಂಟಾಗುತ್ತದೆ. ಕೇವಲ ಈ ಆಹಾರ ಪದ್ಧತಿಯಿಂದ ಶ್ರೇಷ್ಠತ್ವ ಮತ್ತು ಕನಿಷ್ಠತ್ವ ಎಂಬ ಗುಣ ಸ್ವಭಾವವನ್ನು ಅಳೆಯುವುದು ತಪ್ಪಾಗುತ್ತದೆ. ಒಂದು ವೇಳೆ ತನ್ನ ಆಹಾರ ಪದ್ಧತಿಯನ್ನು ಬದಲಾಯಿಸಿಕೊಂಡು ಶೂದ್ರನು ಬ್ರಾಹ್ಮಣ್ಯ ಪಡೆಯಲು ಹೋದವರನ್ನು ಈ ವರ್ಣವ್ಯವಸ್ಥೆ ಒಪ್ಪಿಕೊಂಡಿದಿಯೇ? ಖಂಡಿತವಾಗಿಯೂ ಇಲ್ಲ. ಇದಕ್ಕೆ ರಾಮಾಯಣದ ಉತ್ತರ ಭಾಗದಲ್ಲಿ ಬರುವ ಶಂಭೂಕನ ವಧೆಯೇ ಉತ್ತರವನ್ನು ನೀಡುತ್ತದೆ. ಈ ಕಥೆಯನ್ನು ಬಳಸಿಕೊಂಡು ಹೊಸ ದೃಷ್ಟಿಯ ಸಂಸ್ಕೃತಿಯನ್ನು ನೀಡಲು ಹೋದ ಕುವೆಂಪು ಅವರು ಎದುರಿಸಿದ ಟೀಕೆಗಳು ಇದಕ್ಕೆ ನಿದರ್ಶನ.

ಈ ಬ್ರಾಹ್ಮಣತ್ವಕ್ಕೆ ಸಂಬಂಧಿಸಿದಂತೆ ಡಿ.ವಿ.ಜಿ ಅವರು ಸಹ ಒಬ್ಬ ಶೂದ್ರ ಬ್ರಾಹ್ಮಣತ್ವ ಪಡೆಯಬಹುದು. ಆದರೆ ಅದನ್ನು ಪಡೆಯಲು ಜನ್ಮಾಂತರಗಳನ್ನು ಕಾಯಬೇಕು, ಅವಸರ ಮಾಡಬಾರದು, ಅವಸರ ಮಾಡಿದರೆ ಅಧರ್ಮವಾಗುತ್ತದೆ ಎಂಬ ಮಾತುಗಳನ್ನು ಹೇಳುತ್ತಾರೆ. ಅವರು ಈ ಮಾತು ಕುವೆಂಪು ಅವರ ‘ಶೂದ್ರ ತಪಸ್ವಿ’ ನಾಟಕಕ್ಕೆ ಕೊಟ್ಟಿರುವ ಪ್ರತಿಕ್ರಿಯಾಗಿದೆ. ಶೂದ್ರ ತಪಸ್ವಿಯ ದಂಡನೆ ಕುರಿತು “ಶಂಭೂಕನು ಮಾಡಿದ್ದಲ್ಲ ತಪ್ಪು; ಬೇಡಿದ್ದು. ಅದರಲ್ಲಿಯೂ ಅವನ ಆತುರ. ಅವನು ಬೇಡಿದ್ದು ಅವನ ಆಗಣ ಶರೀರದಲ್ಲಿಯೇ ದೇವತ್ವವನ್ನು. ಅವನು ಹಾಗೆ ಆತುರ ಪಡದೆ ಉತ್ತಮ ಜನ್ಮ ಪ್ರಾಪ್ತಿಗಾಗಿ ತಪಸ್ಸು ಮಾಡಿದ್ದಿದ್ದರೆ, ತತ್‌ಕ್ಷಣದ ದೇವತ್ವಕ್ಕೆ ಬದಲಾಗಿ ಕ್ರಮಕ್ರಮವಾಗಿ ದೇವತ್ವಕ್ಕೆಂದು ತಪಸ್ಸು ಮಾಡಿದ್ದಿದ್ದರೆ, ಅದು ಅಪರಾಧವಾಗುತ್ತಿರಲಿಲ್ಲ. ಉತ್ತಮಗತಿಯನ್ನು ಸಂಪಾದಿಸಿಕೊಳ್ಳಲು ಎಲ್ಲ ಜೀವಿಗಳಿಗೂ ಅಧಿಕಾರವುಂಟು; ಶೂದ್ರನಿಗೆ ಅದು ನಿಸ್ಸಂದೇಹವಾಗಿ ಉಂಟು.”  ಎಂದು ಹೇಳುವ ಅವರ ಪ್ರಕಾರ ಜೀವನದ ಅರ್ಹತಾಭಿವೃದ್ಧಿಯೇ ವರ್ಣಾಶ್ರಮ ವ್ಯವಸ್ಥೆಯ ಅಂತಃಸತ್ವ. ಮನುಷ್ಯ ಜೀವಿಯ ಯೋಗ್ಯತೆ ಮೆಟ್ಟಿಲು ಮೆಟ್ಟಿಲಾಗಿ, ಜನ್ಮದಿಂದ ಜನ್ಮಕ್ಕೆ, ಆಶ್ರಮದಿಂದ ಆಶ್ರಮಕ್ಕೆ ಮೇಲಾಗಬೇಕು. ಒಂದೇ ಹಾರಿನಿಂದ ಗಿರಿಶಿಖರವನ್ನು ಸೇರಲಾಗದು. ಈ ಅಕ್ರಮ ಪ್ರವೃತ್ತಿಯನ್ನು ಖಂಡಿಸುವುದು ಶಂಭೂಕ ವಧೆಯ ಅಂತರ್ಭಾವ ಎಂದೇ ಗ್ರಹಿಸುತ್ತಾರೆ.

ಮಾಸ್ತಿಯವರು ಕೂಡ ತಮ್ಮ ಕಾಲಘಟ್ಟದಲ್ಲಿ ಮುನ್ನಲೆಗೆ ಬಂದ ಜಾತಿ ಕೇಂದ್ರಿತ ಚಿಂತನೆಗೆ ಪ್ರತಿಕ್ರಿಯಿಸಿದವರು. ಗುಣ ಕರ್ಮಗಳಿಗಾಗಿ ರಚನೆಯಾದ ವರ್ಣವ್ಯವಸ್ಥೆಯಲ್ಲಿ ಭೇದ ಉಂಟಾಗಿದ್ದು ಮನುಸ್ಮೃತಿ ರಚನೆಯ ಕಾಲದಿಂದಲೇ ಹೊರತು ಅದಕ್ಕೂ ಹಿಂದೆ ವೇದ-ಉಪನಿಷತ್ತುಗಳಲ್ಲಿ ಶ್ರೇಷ್ಠತೆಯ ಭೇದ ಎಣಿಸಿರಲಿಲ್ಲ ಎನ್ನುತ್ತಾರೆ. ಹಾಗೂ ವೈದಿಕ ವರ್ಗದವರೇ ವರ್ಣವ್ಯವಸ್ಥೆಯನ್ನು ಮೀರಿ ಬೇರೆ ವೃತ್ತಿಗಳನ್ನು ಅನುಸರಿಸುತ್ತಿರುವುದನ್ನು ಚರಿತ್ರೆಗಳನ್ನೇ ಆಧಾರವಾಗಿಟ್ಟುಕೊಂಡು ಹೇಳಿದ್ದಾರೆ. ವೈದಿಕರು ಅರಸರಾಗಿಯೂ ಆಳ್ವಿಕೆ(ಕದಂಬರ ಮಯೂರ ಮತ್ತು ಮರಾಠಿ ಪೇಶ್ವೆಗಳು) ನಡೆಸಿದದನ್ನು ಗಮನಿಸಬಹುದು. ಬ್ರಿಟಿಷರ ಆಧುನಿಕತೆ ಭಾರತಕ್ಕೆ ಬಂದ ಮೇಲೆ ವೈದಿಕರು ವ್ಯಾಪಾರಿಗಳು ಆದರೂ, ಹೋಟೆಲ್ ನಡೆಸಿದರು, ಕೃಷಿ ಮಾಡಿದರು ಹೀಗೆ ವರ್ಣವ್ಯವಸ್ಥೆಯನ್ನು ಪ್ರತಿಪಾದಿಸಿದ ವರ್ಗವೇ ಅದನ್ನು ಮೀರಿ ನಡೆದದ್ದನ್ನು ಬ್ರಾಹ್ಮಣ ಆಚಾರ-ವಿಚಾರಗಳು ಬದಲಾಗುತ್ತಿರುವುದನ್ನು ಮಾಸ್ತಿ ಅವರು ಗುರುತಿಸಿದ್ದಾರೆ. ಅವರು ಹೇಳುವಂತೆ ಈ ಮೇಲಿನ ಬದಲಾವಣೆಗಳು ವೈದಿಕ ವರ್ಗದಲ್ಲಿ ಸಂಭವಿಸಿದರು ಆ ವರ್ಗದವರಲ್ಲಿ ತುಂಬಿರುವ ಜಾತಿ ಶ್ರೇಷ್ಠತ್ವದ ಭಾವ ಹೋಗುವುದಿಲ್ಲ. ಶೂದ್ರರು ಎಂದೂ ತಮ್ಮ ನೆಲೆಯಿಂದ ಮೇಲೆ ಬರಬಾರದೆಂದು ಅದು ತಡೆಯುತ್ತದೆ. ಶೂದ್ರರ ಸಂಸ್ಕೃತಿ, ಹಬ್ಬ ಆಚರಣೆ, ದೇವರು, ಉಡುಗೆ-ತೊಡುಗೆ, ರೀತಿ-ನೀತಿ, ಭಾಷೆ, ಆಚಾರ-ವಿಚಾರಗಳು ಈ ಯಾವುದಕ್ಕೂ ಪುರೋಹಿತಶಾಹಿ ವರ್ಗ ಮಾನ್ಯತೆ ನೀಡಲಿಲ್ಲ. ಅದನ್ನೆಲ್ಲ ಕೀಳು ಎಂದೇ ಭಾವಿಸಿತು. 

ಮಾಸ್ತಿ ಅವರು ವೈದಿಕ ವರ್ಗ ತನ್ನ ವರ್ಣಧರ್ಮದಿಂದ ಆಚೆ ಬಂದು ಎಲ್ಲ ವರ್ಗಗಳಲ್ಲಿಯೂ ಪಾಲ್ಗೊಳ್ಳುತ್ತಿರುವುದನ್ನು ಹೇಳಿದರೆ, ದೇವುಡು ಅವರು ಶೂದ್ರರು ವೈದಿಕರ ಜೀವನ ಪದ್ಧತಿಯನ್ನು ಅನುಸರಿಸಿ ತಮ್ಮ ಶೂದ್ರತ್ವದ ಕೆಟ್ಟಾಚರಣೆಗಳನ್ನು ಬಿಡುತ್ತಿರುವುದನ್ನು ಪ್ರಸ್ತಾಪಿಸುತ್ತಾರೆ. ಇದನ್ನು ಆರ್ಯಿಕರಣ ಎಂದು ಕರೆಯುತ್ತಾರೆ. ವೈದಿಕ, ಶೂದ್ರ, ದಲಿತ ಎಂಬ ಭಿನ್ನಭಾವಗಳಿಲ್ಲದೆ ಜನರು ಕೂಡುತ್ತಿದ್ದಾರೆ. ವೈದಿಕರು ಶೂದ್ರರ ಮನೆಗಳಿಗೆ ಹೋಗಿ ಪೂಜೆ ಮಾಡಿ ಬರುತ್ತಿದ್ದಾರೆ ಎಂದು ಅಭಿಮಾನ ಪೂರ್ವವಾಗಿ ಹೇಳುತ್ತಾರೆ. ಆದರೆ, ಅವರ ಮಾತಿನಂತೆಯೇ ನೋಡಿದರು ವೈದಿಕರು ಶೂದ್ರರ ಮನೆಗಳಿಗೆ ಪೌರೋಹಿತ್ಯ ಮಾಡಿ ಬರುವ ಹಾಗೆ, ಶೂದ್ರರ ಕೈಯಲ್ಲಿ ಯಾವ ಪೌರೋಹಿತ್ಯವನ್ನು ಸ್ವೀಕರಿಸುವುದಿಲ್ಲ. ಇದು ಇಂದಿಗೂ ಸಾಗಿ ಬಂದಿರುವ ನಿಜ ಸ್ಥಿತಿ. ಅವರು “ಬ್ರಾಹ್ಮಣರ ದೇವರುಗಳನ್ನೂ ಆ ದೇವರುಗಳ ಅವತಾರಗಳನ್ನೂ ಪೂಜಿಸುವುದು. ಗೋವನ್ನು ಗೌರವಿಸುವುದು, ಮದುವೆ ಊಟಗಳಲ್ಲಿ ಕೆಲವು ನಿಯಮಗಳನ್ನು ಅನುಸರಿಸುವುದು, ಶುಭಾಶುಭಕರ್ಮಗಳನ್ನು ಬ್ರಾಹ್ಮಣಮುಖವಾಗಿ ನಡೆಸುವುದು, ಇದು ಬ್ರಾಹ್ಮಣ ಧರ್ಮವಾದರೆ, ‘ಇದು ಇತರರನ್ನು ಸೇರಿಸಿಕೊಳ್ಳುತ್ತಿಲ್ಲ; ಬೆಳೆಯುತ್ತಿಲ್ಲ; ಎಂದು ಹೇಳುವುದು ಸರಿಯಲ್ಲ; ಅದು ಜಾತಿ ಕುಲ ಗೋತ್ರಗಳಿಲ್ಲದ ಅನಾರ್ಯರನ್ನು ಗೆದ್ದುಕೊಂಡು ತಮ್ಮವರನ್ನಾಗಿ ಮಾಡಿಕೊಳ್ಳುತ್ತಿದೆ. ಹೀಗೆ ಅನಾರ್ಯಕುಲಗಳು ತಮಗಿಂತ ಉತ್ತಮರಾದವರ ರೀತಿ ನೀತಿಗಳನ್ನು ಅನುಸರಿಸುವುದರಲ್ಲಿ ಆರಂಭವಾಗುತ್ತದೆ. ಅವರು ತಮ್ಮ ರೀತಿ-ನೀತಿಗಳನ್ನೂ, ಪೂಜಾ ಪದ್ಧತಿಗಳನ್ನೂ ಬದಲಾಯಿಸಬೇಕೆಂದು ಯಾರೂ ಹೇಳುವುದಿಲ್ಲ. ಆದರೂ ಅವರು ತಾವಾಗಿ ಜಾಗ್ರತೆಯಿಂದ ಹಿಂದೂ ಪದ್ಧತಿಗಳನ್ನು ಆಚಾರ ಸಂಪ್ರದಾಯಗಳನ್ನು ಅವಲಂಬಿಸಿ ಬ್ರಾಹ್ಮಣ ಭಕ್ತರಾಗುವುದರಿಂದ ಅವರ ಧರ್ಮವೂ, ಜೀವನವೂ ಬದಲಾಯಿಸಿ ಹೋಗುತ್ತವೆ. ಇದುವರೆಗೆ ಶುಭಾಶುಭಗಳಿಗೆ ಬ್ರಾಹ್ಮಣರನ್ನು ಕರೆಯದವರು ಈಗ ಪ್ರತಿಯೊಂದಕ್ಕೂ ಬ್ರಾಹ್ಮಣರನ್ನು ಕರೆಯುತ್ತಾರೆ. ಊಟ, ಮದುವೆ ಮೊದಲಾದ ನಿತ್ಯನೈಮಿತ್ತಿಕ ಸಂದರ್ಭಗಳಲ್ಲೆಲ್ಲಾ ಬ್ರಾಹ್ಮಣ ಪದ್ಧತಿಗಳನ್ನು ಅನುಸರಿಸುತ್ತಾರೆ; ಬರುಬರುತ್ತ ಅವರದೇ ಒಂದು ಜಾತಿಯಾಗುತ್ತದೆ” ಎಂದು ಹೇಳುತ್ತಾ, ಬ್ರಾಹ್ಮಣರು ಯಾರನ್ನು ಸ್ಪೃಶ್ಯ- ಅಸ್ಪೃಶ್ಯತೆಯ ಶೋಷಣೆ ಮಾಡುತ್ತಿಲ್ಲ, ಇಲ್ಲಿ ಎಲ್ಲಾರೊಂದಿಗೆ ಒಟ್ಟಾಗಿ ಬೆರೆಯುತ್ತಿದ್ದಾರೆ ಎಂಬ ವಾದ ಮಂಡಿಸುತ್ತಾರೆ. ಇಲ್ಲಿ ಅವರು ಶೂದ್ರರ ಶುಭಕಾರ್ಯಗಳಿಗೆ ವೈದಿಕರು ಯಾವುದೇ ಜಾತಿ ಭೇದ ಮಾಡದೇ ಹೋಗುವುದನ್ನು ವೈದಿಕರು ಜಾತಿ ಪ್ರತಿಪಾದಕರಲ್ಲ ಎಂದು ಪ್ರತಿಪಾದಿಸುತ್ತಿದ್ದಾರೆ. ಆದರೆ, ಅವರ ದೃಷ್ಟಿಯಲ್ಲಿ ಆಧುನಿಕ ಕಾಲದ ಸಮಾಜಿಕ ಬದಲಾವಣೆಯ ಸಮಾಜ ಕಾಣುತ್ತಿದೆ. ಆದ್ದರಿಂದ ಶೂದ್ರರಲ್ಲಿ ಆದ ಈ ಆರ್ಯೀಕರಣದ ಅನುಕರಣೆಯನ್ನೇ ದೇವುಡು, ಮಾಸ್ತಿ, ಡಿ.ವಿ.ಜಿ., ಅವರು ಶೂದ್ರರು ತಮ್ಮ ಕೆಟ್ಟತನಗಳನ್ನು ಕಳೆದು ಬ್ರಾಹ್ಮಣ್ಯತ್ವದ ಶ್ರೇಷ್ಠಗುಣಗಳನ್ನು ಅನುಸುತ್ತಿದ್ದಾರೆಂದು ಹೇಳುತ್ತಾರೆ.

ಆದರೆ ಕುವೆಂಪು ಅವರು ಶೂದ್ರರ ಇಂತಹ ಅವೈಜ್ಞಾನಿಕ ಅನುಕರಣೆಯನ್ನು ವಿರೋಧಿಸಿದರು. ಶೂದ್ರರು ಹೀಗೆ ಪುರೋಹಿತಶಾಹಿಯನ್ನು ಹಿಂಬಾಲಿಸಿ ಹೋಗುತ್ತಿರುವುದನ್ನು ಬಿಡಬೇಕು ಎಂದರು. ಅಂದರೆ ಜ್ಯೋತಿಷ್ಯ, ಪೂಜೆಗಳಿಗೆ, ಪಂಚಾಂಗ, ಮದುವೆಗಳಿಗೆ ಪುರೋಹಿತರನ್ನು ನೆಚ್ಚಿಕೊಳ್ಳುವುದನ್ನು ಬಿಡಬೇಕು. ಯಾವ ಪೂಜಾರಿ, ವೈದಿಕ, ಭಟ್ಟ ಕರೆಯದಿದ್ದರೂ ಶೂದ್ರರು ತಾವಾಗೇ ಅವರ ಬಳಿಗೆ ಹೋಗಿ, ಅವರ ಮೂಲಕ ದೇವರಿಗೆ ಸಲ್ಲಿಸಿದ ಪೂಜೆಯೇ ಸಲ್ಲುವುದೆಂದು ಅವರ ಕಾಲಿಗೆ ಬಿದ್ದು ನಮಸ್ಕರಿಸಿ, ತಮ್ಮ ಬೆಲೆ ತೆತ್ತು, ಅವರಿಗೆ ಬೆಲೆಕೊಟ್ಟು ಬರುವ ಮನೋಭಾವ ಹೋಗಬೇಕು. ತಮ್ಮ ದೇವರ ಪ್ರಾರ್ಥನೆ, ಪೂಜೆಯನ್ನು ಯಾವುದೇ ಪುರೋಹಿತರ ಮೂಲಕ ಸಲ್ಲಿಸದೇ ತಾವೇ ನೇರವಾಗಿ ಮಾಡಬೇಕು. ತಾವು ಇದ್ದಲ್ಲಿಯೇ ದೇವರನ್ನು ಕಾಣಬೇಕು. ದೇವರನ್ನು ಕಾಣಲು ದೇವಸ್ಥಾನಕ್ಕೆ ಹೋಗುವುದಲ್ಲ ಎಂದು ಹೇಳಿದರು.

    ಏಕೆಂದರೆ, ಶೂದ್ರರು ಪುರೋಹಿತರನ್ನು ಅವಲಂಬಿಸಿ ಹೋಗುವುದರಿಂದಲೇ ದೇಶದ ಶೇ.೫% ಇರುವ ಪುರೋಹಿತವರ್ಗ ಬಹುಸಂಖ್ಯಾತರಾದ ಶೂದ್ರರನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗಿದ್ದು. “ಮನು ಧರ್ಮಶಾಸ್ತ್ರಗಳನ್ನು ಮೂಲೆಗಿಟ್ಟು ಮನಃಶಾಸ್ತ್ರೀಯ ವ್ಯಾಖ್ಯಾನ ಮಾಡಬೇಕು” ಎಂದು ಹೇಳುವ ಮೂಲಕ, ಮೊದಲು ಶೂದ್ರರು ತಮ್ಮ ತಲೆಗಳನ್ನು ಶುದ್ಧಿ ಮಾಡಿಕೊಳ್ಳಬೇಕು. ಇದಕ್ಕಾಗಿ ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ, ಆತ್ಮಶ್ರೀಯ ಸರ್ವತೋಮುಖ ಗುಣವನ್ನು ಬೆಳೆಸಿಕೊಳ್ಳಬೇಕಾಗಿದೆ ಎಂದು ಸಾರಿದರು. ಹಿಂದೆ ಚಾತುರ್ವಣ್ಯವನ್ನು ಮನುಷ್ಯ ಸೃಷ್ಟಿ ಮಾಡಿ ಅದನ್ನು ದೇವರಿಗೆ ಆರೋಪಿಸಿ, ಗೀತೆಯಲ್ಲಿ ಕೃಷ್ಣನಿಂದಲೇ “ಚಾತುರ್ವರ್ಣ್ಯಂ ಮಯಾ ಸೃಷ್ಟಂ” ಎಂದು ಹೇಳಿಸಲಾಯಿತು. ಇದು ಸಾಲದೆ ಮಧ್ವಾಚಾರ್ಯ “ಮುಕ್ತಿಯೋಗ್ಯರು, ನಿತ್ಯಸಂಸಾರಿಗಳು, ತಮೋಯೋಗ್ಯರು” ಎಂದು ವರ್ಗೀಕರಣ ಮಾಡಿ ಜನರಲ್ಲಿ ಭೇದಭಾವ ಎಣಿಸಿದ್ದನ್ನು ವಿರೋಧಿಸಿದರು. ಜನರಲ್ಲಿ ಸ್ವರ್ಗ-ನರಕ, ಮುಕ್ತಿ-ಮೋಕ್ಷ, ಪಾಪ-ಪುಣ್ಯ ಕಲ್ಪನೆಯನ್ನು ತಂದು ಜನರ ಬದುಕನ್ನು ಮೂಢತೆಗೆ ತಳ್ಳಲಾಯಿತು. ಇದನ್ನು ಆಧಾರವಾಗಿಟ್ಟುಕೊಂಡು “ಹಿಂದಿನವರು ಮಾತ್ರವಲ್ಲ ಇಪ್ಪತ್ತನೆಯ ಶತಮಾನದ ಹಿಂದಿನ ಆಚಾರ್ಯವರ್ಗದವರು ಸ್ವಜಾತಿ ಸ್ವಾರ್ಥದೃಷ್ಟಿಯಿಂದ ತಪ್ಪು ತಪ್ಪು ವ್ಯಾಖ್ಯಾನಗಳನ್ನೆಲ್ಲ ಮಾಡಿ, ತಮ್ಮ ಜಾತಿಶ್ರೇಷ್ಠತೆಯನ್ನು ರಕ್ಷಿಸಿಕೊಂಡು ಬಾಕಿಯವರನ್ನೆಲ್ಲ ಊಳಿಗದವರನ್ನಾಗಿ ಮಾಡಬೇಕೆಂಬ ಉದ್ದೇಶದಿಂದ ಆ ರೀತಿ ಮಾಡಿಕೊಂಡು ಹೋಗಿದ್ದಾರೆ.” ಹೀಗೆ ವರ್ಣವ್ಯವಸ್ಥೆಯನ್ನು ಪೋಷಿಸುವ ಕೆಲಸ ಸಾಗುತ್ತಿರುವುದನ್ನು ಹೇಳಿದ್ದಾರೆ.

ಸ್ವಾತಂತ್ರ‍್ಯ ಭಾರತದ ನಂತರವೂ ಗೌರವಸ್ಥಾನಗಳಲ್ಲಿರುವ ಅಸ್ಪೃಶ್ಯರು ದೇವಾಲಯಕ್ಕೆ ಹೋಗಿ ಬಂದರೆ; ಶುದ್ಧೀಕರಣ ಮಾಡುವ ಪದ್ಧತಿ ಇರುವುದನ್ನು ಕುವೆಂಪು ಅವರು ೨೦-೦೪-೧೯೭೪ರಂದು ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಒಕ್ಕೂಟವನ್ನು ಉದ್ಘಾಟಿಸಿ ಮಾಡಿದ ಭಾಷಣದಲ್ಲಿ ಪ್ರತಿಕ್ರಿಯಿಸಿದರು. ಹೀಗೆ ಜಾತಿನಿಂದನೆ ಎಲ್ಲಾ ವಲಯಗಳಲ್ಲೂ ವ್ಯಾಪಿಸಿರುವುದನ್ನು ಕುರಿತು, ಕಸ ತುಂಬಿದ ಮನಸ್ಸಿನವನಿಂದ ದೇವರಿಗೆ ಮೈಲಿಗೆಯಾಗುವುದಿಲ್ಲ, ಜಾತಿಯಿಂದ ಮೈಲಿಗೆ ಎನ್ನುವವರ ಮನಸ್ಥಿತಿಯನ್ನು ಮೂಢರೂ, ಕೊಳಕರೂ, ದುಷ್ಟರೂ, ರೋಗಿಗಳು, ದುರಾಚಾರಿಗಳು ಎಂದು ನಿಂದಿಸಿದರು. ೭೦ರ ದಶಕದಲ್ಲಿ ದಲಿತ-ಬಂಡಾಯ ಸಾಹಿತ್ಯ ಚಳವಳಿ ಮತ್ತು ಪ್ರಗತಿಪರ ಚಿಂತನೆಗಳು ಹುಟ್ಟಿಕೊಂಟಿದ್ದರಿಂದ ಅದರ ತಾತ್ವಿಕ ನಿಲುವುಗಳು ಹೇಗೆ ಇರಬೇಕೆಂದು ಕುರಿತು ತಮ್ಮ ಭಾಷಣದಲ್ಲಿ ದಲಿತ ಯುವಕರಿಗೆ “ಹೀಗೆ ಅವಮಾನಿಸಿಕೊಂಡು ದೇವಾಲಯಕ್ಕೆ ಹೋಗದಿದ್ದರೆ ಏನಾಗುತ್ತದೆ? ಗುಡಿಯ ಕಲ್ಲಿನಲ್ಲಿ ದೇವರಿದ್ದಾನೆ ಎಂಬ ಭ್ರಾಂತಿ ನಿಮಗೇಕೆ? ಮತದ ಮೌಢ್ಯಕ್ಕೂ, ಪುರೋಹಿತರ ಸುಲಿಗೆಗೂ ಒಳಗಾಗುವುದಕ್ಕಿಂತ ದೂರವಿದ್ದುಕೊಂಡು ಎದೆಯ ದೇಗುಲದಲ್ಲಿಯೇ ಈಶ್ವರನನ್ನು ಇನ್ನಷ್ಟು ಅತಿಶಯವಾದ ಭಾವಭಕ್ತಿಯಿಂದ ಪೂಜಿಸಬಾರದೆ?” ಎಂದು ಕೇಳುತ್ತಾರೆ. ಅವರ ಈ ಮಾತಿಗೆ ‘ಜಲಗಾರ’ ನಾಟಕವನ್ನು ನಿರ್ದಶನವಾಗಿಟ್ಟುಕೊಂಡು ದೇವರು, ಧರ್ಮ, ಪಾಪ-ಪುಣ್ಯ ಇವುಗಳೆಲ್ಲ ಮಾನವರ ಸೃಷ್ಟಿ. ದೇವರು ವಿಶ್ವವ್ಯಾಪ್ತಿ. ಸರ್ವರೊಳಗೂ ದೇವರು ಇರುತ್ತಾನೆ. ಅವನನ್ನು ಗುಡಿಯಲ್ಲಿ ಕೂರಿಸಿ ಹೊಟ್ಟೆತುಂಬಿಸಿ ಕೊಳ್ಳುತ್ತಿರುವ ಪುರೋಹಿತಶಾಹಿವರ್ಗದವರ ಮೂಲಕ ದೇವರ ದರ್ಶನ ಮಾಡುವುದನ್ನು ಬಿಡಬೇಕು ಎಂಬುದನ್ನು ತಿಳಿಸಿದರು. ಅವರು ಕೂಡ ಹಾಗೆಯೇ ಪುರೋಹಿತಶಾಹಿತ್ವದ ಪೂಜೆ ಪುನಸ್ಕಾರಗಳಿಂದ ಹೊರಗುಳಿದು ಬದುಕಿದವರು. ಅಂದರೆ, ಅವರು ದೇವರ ನಂಬಿಕೆ, ಪೂಜೆಗಳನ್ನು ವಿರೋಧಿಸಿಲ್ಲ; ಬದಲಾಗಿ ತಮ್ಮ ಪ್ರಾರ್ಥನೆಯನ್ನು ಪುರೋಹಿತರ ಮೂಲಕ ಅರ್ಪಿಸಬೇಕೆಂಬ ನಂಬಿಕೆ ಜನರಲ್ಲಿ ಹೋಗಬೇಕು ಎಂದು ಪ್ರತಿಪಾದಿಸಿದರು. ಮತಭ್ರಾಂತಿ ಬಿಟ್ಟು ಮತಿಯನ್ನು ಬೆಳೆಸಿಕೊಂಡರೆ ಯಾವ ಸಂಪ್ರದಾಯಕ್ಕೂ ಒಳಗಾಗದೆ ಒಂದು ಪಂಥದ ಇಕ್ಕಟ್ಟಿಗೆ ಒಳಗಾಗದೆ ಎಲ್ಲ ಧರ್ಮಗಳ ದರ್ಶನ ಪಡೆದಾಗ ಪೂರ್ಣ ಜೀವನದ ಅನುಭವ ಲಭಿಸುತ್ತದೆ. ದೇವರ ಶರೀರ ರೂಪಿಯಾದ ಜಗತ್ತೆಲ್ಲವೂ ದೇವಸ್ಥಾನವಾಗುತ್ತದೆ ಎಂಬುದು ಅವರ ಪ್ರತಿಪಾದನೆ.

ಹೀಗೆ ಕುವೆಂಪು ಅವರು ವರ್ಣವ್ಯವಸ್ಥೆಯ ಪುರೋಹಿತಶಾಹಿತ್ವವನ್ನು ವಿರೋಧಿಸಿ ‘ಜಲಗಾರ’ ನಾಟಕ ರಚಿಸಿದರು. ವರ್ಣವ್ಯವಸ್ಥೆಯು ಕಟ್ಟಿದ ಧರ್ಮವನ್ನು ಮುರಿಯಲು ‘ಶೂದ್ರತಪಸ್ವಿ’ ನಾಟಕ ರಚಿಸಿದರು. ದ್ರಾವಿಡರು ರಾಕ್ಷಸರು, ಸಂಸ್ಕೃತಿಹೀನರು, ಮ್ಲೇಚ್ಛರೆಂದು ಕರೆದ ಆರ್ಯರಿಗೆ ‘ರಾಮಾಯಣ ದರ್ಶನಂ’ ಮಹಾಕಾವ್ಯದ ಮೂಲಕ ರಾವಣನಲ್ಲಿಯೂ ಉದಾತ್ತತೆಯನ್ನು ಕಾಣಿಸಿದರು. ಆರ್ಯ ಸಂಸ್ಕೃತಿ ದ್ರಾವಿಡ ಸಂಸ್ಕೃತಿಯ ವೈರುಧ್ಯವನ್ನು ಬದಲಾಗಿ ಗ್ರಹಿಸಿ ಕಟ್ಟಿದರು. ಕುವೆಂಪು ಅವರಲ್ಲಿ ಇದ್ದ ಈ ಪುನರ್ ಮೌಲ್ಯಿಕರಣವನ್ನು ಕುರಿತು ಡಿ.ಆರ್.ನಾಗರಾಜ್ ಅವರು “ಪೆರಿಯಾರ್ ಭಾರತದ ಇಡೀ ಚರಿತ್ರೆಯನ್ನು ಆರ್ಯ-ಶೂದ್ರ ದೃಷ್ಟಿಕೋನದಿಂದ ವಿವರಿಸಿ ಪ್ರತಿಸಂಸ್ಕೃತಿಯನ್ನು ಕಟ್ಟಿದರು. ಇಲ್ಲಿ ರಾಮ ಖಳನಾಯಕನಾದ, ರಾವಣ ಪೂಜ್ಯನಾದ. ಆದರೆ ಕುವೆಂಪು ಅವರಿಗೆ ರಾಮ ಖಳನಾಯಕನಾಗಲಿಲ್ಲ ಸಂಸ್ಕೃತಿಯ ಆದರ್ಶ ಪುರುಷನಾದ, ರಾವಣನು ಖಳನಾಯಕನಾಗಲಿಲ್ಲ ಉದಾತ್ತನಾದ” ಎಂದಿದ್ದಾರೆ.

ಒಬ್ಬ ಶೂದ್ರಧ್ವನಿಯ ಲೇಖಕನಾಗಿ ಕುವೆಂಪು ಅವರು ನೋಡುವ ವರ್ಣವ್ಯವಸ್ಥೆ ಮತ್ತು ಜಾತಿ ಕೇಂದ್ರಿತ ನೆಲೆಗಳೇ ಬೇರೆ; ಶೂದ್ರವರ್ಗದಿಂದ ಹೊರಗೆ ನಿಂತು ವರ್ಣವ್ಯವಸ್ಥೆಯನ್ನು ಅರ್ಥೈಸುವ ಡಿ.ವಿ.ಜಿ, ಮಾಸ್ತಿ, ದೇವುಡು ಅವರು ಚಿಂತನೆ ಕ್ರಮಗಳೇ ಬೇರೆ ಇರುವುದನ್ನು ಇಲ್ಲಿ ಗ್ರಹಿಸಬಹುದಾಗಿದೆ. ಕುವೆಂಪು ಅವರು ವೈದಿಕ ವರ್ಗದಲ್ಲಿದ್ದ ಕೆಡಕನ್ನು ಖಂಡಿಸಿ, ಅಲ್ಲಿನ ಸಂಸ್ಕೃತಿಯ ಒಳಿತಿನ ಅಂಶಗಳನ್ನು ಸ್ವೀಕರಿಸಿದವರು. ಹಾಗಾಗಿ ಅವರು ಎಂದೂ ವೈದಿಕ ಜಾತಿಯನ್ನು ವಿರೋಧಿಸಿದವರಲ್ಲ, ಆದರೆ ಅದರಲ್ಲಿನ ಪರೋಹಿತಶಾಹಿಯನ್ನು ವಿರೋಧಿಸಿದವರು. ಕೇವಲ ಹಿಂದೂ ಧರ್ಮದಷ್ಟೇ ಅಲ್ಲದೆ, ಎಲ್ಲ ಧರ್ಮಗಳ ಪುರೋಹಿತಶಾಹಿಯ ಅಟ್ಟಹಾಸವನ್ನು ವಿರೋಧಿಸಿ, ತಿರಸ್ಕರಿಸಿದವರು. ಕುವೆಂಪು ಅವರಲ್ಲಿದ್ದ ಈ ತಾತ್ವಿಕತೆಯನ್ನು ಕುರಿತು ಡಿ.ಆರ್. ನಾಗರಾಜ್ ಅವರು “ವಿಶಾಲಾರ್ಥದಲ್ಲಿ ಹಿಂದೂ ಧರ್ಮದ ಸಂವಿಧಾನದೊಳಗಿದ್ದೇ ಜಾತಿಪದ್ಧತಿಯ ಕೊಳಕು ರೂಪವನ್ನು ನಾರಾಯಣಗುರು ವಿರೋಧಿಸಿದರು. ನಾರಾಯಣಗುರುಗಳ ಹಾಗೆ ಕುವೆಂಪು ಕೂಡಾ ಹಿಂದೂ ಧರ್ಮದ ಬಗ್ಗೆ ಸಮಗ್ರ ತಿರಸ್ಕಾರ, ದ್ವೇಷದಿಂದ ಹೊರಡಲಿಲ್ಲ. ಹಿಂದೂ ಧರ್ಮದ ಸಂವಿಧಾನ ಚೌಕಟ್ಟಿನಲ್ಲೇ ಒಳಗಿನ ಬಂಡಾಯಗಾರನಾಗಿ ಉಳಿದದ್ದು ಕುವೆಂಪು ಅವರ ಸೃಜನಶೀಲ ಜೀವನದ ಅತ್ಯಂತ ಮುಖ್ಯಸಂಗತಿ” ಎನ್ನುತ್ತಾರೆ. ತಮ್ಮ ಬದುಕಿನ ಮೌಲ್ಯಾದರ್ಶಗಳನ್ನು, ತತ್ವಜ್ಞಾನದ ದರ್ಶನಗಳು, ವೈದಿಕರು ರಚಿಸಿದ ವೇದ, ಉಪನಿಷತ್ತು, ಮಹಾಕಾವ್ಯ ಮತ್ತು ಆ ವರ್ಗದ ವಿಭೂತಿ ಪುರುಷರ ಪ್ರಭಾವದಿಂದ ಪಡೆದುಕೊಂಡವರು. ಆದ್ದರಿಂದ ಒಳಿತಿನ ಅಂಶಗಳು ಯಾವ ಮತಧರ್ಮಗಳಿಂದ ಬಂದರು ಅದನ್ನು ಸ್ವಿಕರಿಸಬೇಕು ಎಂಬ ತಾತ್ವಿಕ ಬದುಕಿಗೆ ಒಳಗಾಗಿದ್ದವರು. ಆದ್ದರಿಂದ ಅವರು ವೈದಿಕ ಜಾತಿಯನ್ನು ಪ್ರಶ್ನಿಸಲಿಲ್ಲ ಜಾತಿ ಹೆಸರಿನಲ್ಲಿ ಮೆರೆಯುವ ಪುರೋಹಿತಶಾಹಿತ್ವದ ವಿರುದ್ಧ ಧ್ವನಿ ಎತ್ತಿದರು. ಅವರು ತಮ್ಮ ಭಾಷಣಗಳಲ್ಲಿಯೂ ಯಾವುದೇ ಜಾತಿಯ ವಿರೋಧವಾಗಿ ಮಾತನಾಡಿದವರಲ್ಲ. ಆದರೆ ಜಾತಿಗಳಲ್ಲಿರುವ ಅವೈಜ್ಞಾನಿಕತೆ, ಮೂಢತೆಗಳನ್ನು ಮತ್ತು ಅವುಗಳನ್ನು ಬೆಳೆಸಿದವರ ವಿರುದ್ಧ ಧ್ವನಿ ಎತ್ತಿದವರು.

ಬಸವಲಿಂಗಪ್ಪನವರ ‘ಬೂಸಾ’ ಪ್ರಕರಣಕ್ಕೆ ಪ್ರತಿಕ್ರಿಯಿಸಿದ ಕುವೆಂಪು ಅವರು ಬಸವಲಿಂಗಪ್ಪನವರ “ಹರಿಜನರ ಉದ್ಧಾರವನ್ನು ದೃಷ್ಟಿಯಲ್ಲಿಟ್ಟುಕೊಂಡು ಹೇಳುವ ಸಾಹಿತ್ಯ ಕನ್ನಡದಲ್ಲಿ ಹೆಚ್ಚಿಲ್ಲ” ಎಂಬರ್ಥದ ಮಾತನ್ನು ತಿರುಚಿ, ಹಳದಿ ಮೆದುಳು, ಹಳದಿ ಪತ್ರಿಕೆಗಳು ವಿವಾದವನ್ನು ಸೃಷ್ಟಿಸಿದ್ದನ್ನು ಟೀಕೆ ಮಾಡಿದರು. ಬಸವಲಿಂಗಪ್ಪನವರು ಹೇಳುವಂತೆ ಹರಿಜನೋದ್ಧಾರ ದೃಷ್ಟಿಯಿಂದ ಹುಟ್ಟಿದ ಸಾಹಿತ್ಯ ಕನ್ನಡದಲ್ಲಿ ಹೆಚ್ಚಿಲ್ಲ. ಆದರೆ ತೀರ ಇಲ್ಲವೆ ಇಲ್ಲ ಎನ್ನಲು ಸಾಧ್ಯವಿಲ್ಲ; ಬಂದಿವೆಂಬುದನ್ನು ತಮ್ಮ ಕೃತಿಗಳಾದ ‘ಜಲಗಾರ’, ‘ಶೂದ್ರತಪಸ್ವಿ’, ‘ಕಾನೂರು ಹೆಗ್ಗಡತಿ’, ‘ಮಲೆಗಳಲ್ಲಿ ಮದುಮಗಳು’, ಕೆಲವು ಸಣ್ಣ ಕತೆಗಳಲ್ಲಿ, ಕವನಗಳಲ್ಲಿ ದಲಿತರ ಬಗ್ಗೆ ಬಂದಿರುವುದನ್ನು ನಿದರ್ಶನ ಕೊಟ್ಟುಕೊಂಡು ಹೇಳಿದ್ದಾರೆ. ಪ್ರಾಚೀನ ಕಾಲದಿಂದಲೂ ಪಂಪ, ವಚನ ಚಳವಳಿ, ಕನಕದಾಸ, ಸರ್ವಜ್ಞ ಇವರೆಲ್ಲರು ಕುಲಗಳ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಗಾಂಧೀಜಿ ಪ್ರಭಾವದಿಂದ ನವೋದಯರ ಹರಿಜನರ ಉದ್ಧಾರವನ್ನು ಕುರಿತು ಗೊರೂರರು ‘ಹೇಮಾವತಿ’, ಕಾರಂತರ ‘ಚೋಮನದುಡಿ’, ಬೇಂದ್ರೆ ಅವರ ‘ಉದ್ಧಾರ’ ಇವುಗಳನ್ನು ನಿದರ್ಶನವಾಗಿ ಕೊಡಬಹುದು.

ಹೀಗೆ ನವೋದಯ ಬರಹಗಾರರಲ್ಲಿಯೇ ಜಾತಿ ಪ್ರಜ್ಞೆ ಕುರಿತಂತೆ ಭಿನ್ನ ದೃಷ್ಟಿಕೋನಗಳಿದ್ದವು. ಮಾಸ್ತಿ, ಡಿ.ವಿ.ಜಿ. ಅವರು ಜಾತಿವ್ಯವಸ್ಥೆ ಖಂಡಿಸಿದರು ಸಹ ಗಾಂಧಿ ಪ್ರಭಾವದ ವರ್ಣವ್ಯವಸ್ಥೆಯ ಪ್ರತಿಪಾದನೆ ಅವರಲ್ಲಿತ್ತು. ಶಂಬಾ, ತಾರಾನಾಥರು ಇವರಿಗಿಂತ ಭಿನ್ನವಾಗಿಯೇ ನಿಂತು ವೈಚಾರಿಕವಾಗಿ ವರ್ಣವ್ಯವಸ್ಥೆ ಮತ್ತು ಜಾತಿವ್ಯವಸ್ಥೆಯನ್ನು ಮೇಲು-ಕೀಳಿನ ಭೇದಭಾವಗಳನ್ನು ಖಂಡಿಸಿದವರು. ಕಾರಂತರು ಶಿಷ್ಟ ಸಂಸ್ಕೃತಿ ಸೃಷ್ಟಿಸಿದ ಆಚಾರ-ವಿಚಾರಗಳನ್ನು ಒಪ್ಪಿದವರಲ್ಲ. ಜನಪದ ಸಂಸ್ಕೃತಿಯನ್ನು ಕಲೆಮಾಧ್ಯಮಗಳ ಮೂಲಕ ಕಟ್ಟಿದವರು. ಮೂಕ ಜನರ ಇತಿಹಾಸಕ್ಕೆ ಮಾನ್ಯತೆ ನೀಡಿದವರು. ಈ ಮೇಲಿನವರಿಗಿಂತ ಶೂದ್ರ ಸಮುದಾಯದಿಂದ ಬಂದ ಕುವೆಂಪು ಅವರಲ್ಲಿ ಶೂದ್ರ ಧ್ವನಿ ಗಟ್ಟಿಯಾಗಿತ್ತು. ಶತಮಾನಗಳಿಂದ ಅಕ್ಷರ ಸಂಸ್ಕೃತಿಯಿಂದ ಹೊರಗುಳಿದಿದ್ದ ಶೂದ್ರವರ್ಗ ೧೮-೧೯ ಶತಮಾನದಿಂದ ತನ್ನ ಧ್ವನಿಯನ್ನು ಎತ್ತಲು ಶುರುಮಾಡಿತು. ಆ ವರ್ಗದಿಂದ ಬಂದ ಕುವೆಂಪು ಅವರ ಧ್ವನಿ ಕನ್ನಡ ಸಾಹಿತ್ಯದಲ್ಲಿಯೇ ಒಂದು ಹೊಸ ಚಲನೆಯನ್ನುಂಟು ಮಾಡಿತು. ಅವರು ವರ್ಣವ್ಯವಸ್ಥೆಯ ಪುನರ್ ಮೌಲ್ಯೀಕರಣವನ್ನು ‘ಸಂಸ್ಕೃತಿ ಕ್ರಾಂತಿ’ಯಾಗಿಯೇ ಸ್ವೀಕರಿಸಿದರು. ಅವರ ಸಮಕಾಲೀನರಾದ ಅಂಬೇಡ್ಕರ್ ಅವರು ‘ಸ್ವಾತಂತ್ರ‍್ಯ, ಸಮಾನತೆ ಮತ್ತು ಭ್ರಾತೃತ್ವ’ ತತ್ವವನ್ನು ಪ್ರತಿಪಾದಿಸಿದರೆ; ಕುವೆಂಪು ಅವರು ‘ಸರ್ವೋದಯ, ಸಮನ್ವಯ, ಪೂರ್ಣದೃಷ್ಟಿಯ; ಮನುಜಮತ ವಿಶ್ವಪಥ’ ಎಂಬ ವಿಶ್ವಮಾನವ ಪ್ರಜ್ಞೆಯನ್ನು ಪ್ರತಿಪಾದಿಸಿದರು. “ತನಗೆ ಯಾವ ಜಾತಿಯು ಇಲ್ಲ; ನಾನೊಬ್ಬ ವಿಶ್ವಮಾನವ ಎಂದು” ಘೋಷಿಸಿಕೊಂಡವರು.

ಹೀಗೆ ಏನೇ ವಾದ-ಪ್ರತಿವಾದ-ವಾಗ್ವಾದಗಳು ಹುಟ್ಟಿಕೊಂಡರು ಭಾರತದಲ್ಲಿ ‘ಜಾತಿ’ ಪ್ರಶ್ನೆ ಸಜೀವವಾಗಿಯೇ ಉಳಿದಿದೆ. ತೇಜಸ್ವಿ ಅವರು ಹೇಳುವಂತೆ ವರ್ಣವ್ಯವಸ್ಥೆಯ ಶ್ರೇಣಿವ್ಯವಸ್ಥೆಯಲ್ಲಿ ಮೇಲೆ ಇರುವವರ ಮನೆಯ ಪ್ರವೇಶಕ್ಕೆ ಒಂದೊಂದು ಜಾತಿಗೂ, ಒಂದೊಂದು ಹಂತವಿದೆ. ಅಂದರೆ ಹೊರಗೆ ನಿಲ್ಲುವವರು, ಹಜಾರದವರೆಗೆ ಬರುವವರು, ಅಡಿಗೆ ಮನೆಯವರೆಗೂ ಬರುವವರು ಹೀಗೆ ಮನೆ ಪ್ರವೇಶಕ್ಕೂ ಜಾತೀಯತೆಯ ಹಂತಗಳಿರುವಂತೆ ಸಾಮಾಜಿಕ ವ್ಯವಸ್ಥೆಯಲ್ಲಿಯು ಇದೆ. ‘ಜಾತ್ಯಾತೀತ’  ಎಂದು ಸಂವಿಧಾನದ ಪೀಠಿಕೆಯಲ್ಲಿ ಹೇಳಿದರೂ ಯಾರ ಮನಸ್ಸಿನಲ್ಲಿಯೂ ಜಾತ್ಯಾತೀತತೆ ಎಂಬ ಭಾವನೆ ಮೂಡಿಯೇ ಇಲ್ಲ. ದಿನನಿತ್ಯ ದಲಿತರ ಮೇಲೆ ದೌರ್ಜನ್ಯಗಳು, ಮರ್ಯಾದೆ ಹತ್ಯೆ, ದಲಿತ ಮಹಿಳೆಯರ ಲೈಂಗಿಕ ಶೋಷಣೆ, ಅತ್ಯಾಚಾರಗಳು ಸಾಗಿವೆ. ಅಂದು ಭಾರತೀಯ ಸಾಮಾಜಿಕ ಅಸಮಾನತೆಯ ಲಾಭವನ್ನು ಬ್ರಿಟಿಷರು ಪಡೆದರು. ಇಂದು ರಾಜಕೀಯ ಪಕ್ಷಗಳು ಪಡೆಯುತ್ತಿವೆ. ಜಾತಿಯೊಳಗೆ ಜಾತಿ ಉದಯಿಸಿ ಎಲ್ಲರೂ ಮೀಸಲಾತಿಗಾಗಿ ಬೇಡಿಕೆ ಇಡುವವರೇ ಆಗಿದ್ದಾರೆ. ಪರಸ್ಪರ ಗಂಡು-ಹೆಣ್ಣು ಒಲಿದು ಅಂತರ್ಜಾತಿ ವಿವಾಹವಾಗಿ ಅವರ ಪಾಡಿಗೆ ಎಲ್ಲೋ ದೂರದಲ್ಲಿ ಬದುಕಿದರೂ ಊರಿನ ಮಾನ ಮರ್ಯಾದೆ ವಿಷಯಕ್ಕಾಗಿ 'ಮರ್ಯಾದೆ ಹತ್ಯೆ’ ಮಾಡುತ್ತಾರೆ. ಇದರಿಂದ ಅಂತರ್ಜಾತಿ ವಿವಾಹದಿಂದ ಜಾತಿ ನಿರ್ಮೂಲನೆ ಆಗುತ್ತದೆಂಬುದು ಕೂಡ ಹುಸಿಯಾಯಿತು. ತೇಜಸ್ವಿ ಅವರು ಪ್ರಸ್ತಾಪಿಸುವಂತೆ ಅಂತರ್ಜಾತಿ ವಿವಾಹವಾದವರಿಗೆ ಜಾತ್ಯಾತೀತರೆಂದು ಗುರುತಿಸಿ ಸರ್ಕಾರ ಅವರಿಗೆ ಉದ್ಯೋಗ, ಶಿಕ್ಷಣದಲ್ಲಿ ಶೇಕಡಾ ೧ ರಷ್ಟು ಮೀಸಲಾತಿ ನೀಡುವ ಕಾರ್ಯಕ್ರಮ ಹಾಕಿಕೊಳ್ಳದಿದ್ದರೆ ಅದು ಬೆಳೆಯುವುದಿಲ್ಲ. ಮತ್ತೇ ಅಂತರ್ಜಾತಿ ವಿವಾಹವಾದರೂ ತಮ್ಮ ಜಾತಿಯೊಳಗೆ ಅವರು ಗುರುತಿಸಿಕೊಳ್ಳುತ್ತಾರೆ. ಸರ್ಕಾರ ಇವರನ್ನು ಪ್ರತ್ಯೇಕವಾಗಿ ಪರಿಗಣಿಸಿ ಸೌಕರ್ಯಗಳನ್ನು ನೀಡಿದಾಗ ಅದರ ಸಂಖ್ಯೆ ಹೆಚ್ಚಾಗುತ್ತದೆ ಎಂಬ ಅಭಿಪ್ರಾಯ ಹೊಂದಿದ್ದರು. ಸಿದ್ದಲಿಂಗಯ್ಯನವರು ವಿಧಾನಮಂಡಲದಲ್ಲಿಯೂ ಅಂತರ್ಜಾತಿ ವಿವಾಹವಾದವರಿಗೆ ಮೀಸಲಾತಿ ನೀಡಲು ಪ್ರಸ್ತಾಪಿಸಿದರು. ಆದರೆ ಈ ಯಾವ ಕಾರ್ಯಗಳು ಸಫಲವಾಗಿಲ್ಲದಿದ್ದನ್ನು ಅವರೇ ಹೇಳಿಕೊಂಡಿದ್ದಾರೆ. ಹೀಗೆ ಇಂದಿಗೂ ಜಾತಿ-ಧರ್ಮದ ವಿಚಾರಗಳು ಸೂಕ್ಷ್ಮ ಸಂಗತಿಗಳಾಗಿಯೇ ಉಳಿದಿವೆ.

- ಡಾ. ರಂಜಿತ ಬಿ,  ಸಹಾಯಕ ಪ್ರಾಧ್ಯಾಪಕರು,

ಕನ್ನಡ ವಿಭಾಗ, ಎಸ್‌ಟಿಜಿ ಪ್ರಥಮ ದರ್ಜೆ ಕಾಲೇಜು, ಚಿನಕುರುಳಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಾಳೆ ಇಂದ ಅಂಗಳ 'ಓದು-ಬರಹ' (ಕಥಾ-ಕಾವ್ಯ) ಕಮ್ಮಟ ಪ್ರಾರಂಭ.

ಅಂಗಳ ಕಮ್ಯುನಿಟಿ ಟ್ರಸ್ಟ್ ನ ವಿಚಾರ ಮಂಟಪ ಬಳಗ ಮತ್ತು ಕರ್ನಾಟಕ ರಾಜ್ಯ ಸ್ಪಂದನಸಿರಿ ವೇದಿಕೆ ಇವರ ಸಹಯೋಗದಲ್ಲಿ ಹಮ್ಮಿಕೊಂಡಿರುವ ಆರು ತಿಂಗಳ *ಆನ್ ಲೈನ್ ...