*ಮಾನಸೀಕ ಸಮಸ್ಯೆಗಳಿಗೆ ಆಧ್ಯಾತ್ಮದ ದಿವ್ಯೌಷಧ ಭಾರತದ ನೆಲದಲ್ಲಿದೆ ಎನ್ನುವ ಪಿ.ಲಂಕೇಶರ ಗುಣಮುಖ ನಾಟಕ*
“ಚಕ್ರವರ್ತಿ ಆಗುವುದಕ್ಕೆ ಅನೇಕ ಮಾರ್ಗಗಗಳಿವೆ, ಸರ್ವಶಕ್ತನಾದ ಅಲ್ಲಾಹು ಯಾವುದೇ ಅಹಂಕಾರವಿಲ್ಲದ ಚಕ್ರವರ್ತಿ, ಕವಿ ಜಲಾಲುದ್ದೀನ್ ರೂಮಿ ಯಾವುದೇ ಪ್ರದರ್ಶನವಿಲ್ಲದೆ ಕಾವ್ಯ ಲೋಕದ ಚಕ್ರವರ್ತಿ, ಮನುಷ್ಯರನ್ನು ಅರ್ಥಮಾಡಿಕೊಳ್ಳುವ, ಅವರ ಅಳಲನ್ನು ತಿಳಿದುಕೊಳ್ಳುವ ನಾಯಕ ತಾನೇ ತಾನಾಗಿ ಎಲ್ಲ ಅಸಹಾಯಕ ಜನತೆಯ ಚಕ್ರವರ್ತಿ.” ಈ ಸಾಲುಗಳನ್ನು ಗುಣಮುಖ ನಾಟಕದಲ್ಲಿ ಮಾನಸೀಕವಾಗಿ ಅಸ್ಥವ್ಯಸ್ಥನಾದ ಚಕ್ರವರ್ತಿ ನಾದಿರ್ ಶಾನಿಗೆ ಹಕೀಮನೊಬ್ಬ ಹೇಳುವ ಮಾತುಗಳು ಹೌದು ಅತಿಯಾದ ಕೌರ್ಯ ಮನುಷ್ಯನನ್ನು ಮಾನಸೀಕ ಅಸ್ವಸ್ಥನನ್ನಾಗಿಸುತ್ತದೆ.
ಇಲ್ಲಿ ಅತಿಯಾದ ಮಹತ್ವಾಕಾಂಕ್ಷೆ ಉಳ್ಳ ನಾದಿರ್ ಶಾ ಪ್ರಪಂಚವನ್ನು ಗೆಲ್ಲಬೇಕು ಎನ್ನುವ ಆಸೆಯಲ್ಲಿ 1940 ರಲ್ಲಿ ಭಾರತದ ಮೇಲೆ ದಾಳಿ ಮಾಡಿದನು. ಆಗಿನ ಭಾರತ ದೇಶದ ಪರಿಸ್ಥಿತಿ ಹಾಗೂ ಮರಾಠರು ಮೊಗಲ್ ಸಾಮ್ರಾಜ್ಯವನ್ನು ಕೊಂಚ ಕೊಂಚವಾಗಿ ಆಕ್ರಮಿಸುತ್ತಿದ್ದ ಬಗೆಯನ್ನು ವಿವಿರಿಸುತ್ತಲೆ ಯುದ್ದ ಎನ್ನುವುದು ಬರಿ ಜನಸಾಮಾನ್ಯರ ಬದುಕನ್ನಷ್ಟೇ ಹೆಕ್ಕಿ ತಿನ್ನದೆ ಜನರ ಪ್ರಾಣವನ್ನು ಕತ್ತರಿಸಿದ ಸೈನಿಕರ ಮಾನಸೀಕ ಸ್ಥಿತಿ ಅವರ ಬದುಕಿನ ಮೇಲೆ ಬೀರಬಹುದಾದ ಕರಾಳ ಛಾಯೆಯನ್ನು ವಿಶ್ಲೇಷಿಸುತ್ತದೆ. ಹೌದು ಯುದ್ದದ ಫಲಿತಾಂಶ ಯಾವತ್ತಿದ್ದರೂ ವಿನಾಶವೇ ಎನ್ನುವುದು ಈ ಒಟ್ಟಾರೆ ನಾಟಕ ಆಶಯ. ಅದರಲ್ಲೂ ಭಾರತಿಯ ಅರಸರು ಹೆಚ್ಚಾಗಿ ಯುದ್ಧ ಪ್ರೀಯರಾಗಿರದೆ ಶಾಂತಿ ಪ್ರೀಯರಾಗಲು ಕಾರಣ. ಹಾಗೂ ಭಾರತೀಯರ ಆಧ್ಯಾತ್ಮಿಕ ಒಲವು ಅದರಿಂದ ಅವರು ಪಡೆದ ವಿನಯವಂತಕೆ ಹಾಗೂ ಸತ್ಯ, ಪ್ರಮಾಣಿಕತೆ, ದಯೆಯಂತಹ ಸದ್ಗುಣಗಳು ರಾಜನನ್ನು ಅಷ್ಟೇ ಅಲ್ಲದೆ ಪ್ರಜೆಗಳನ್ನೂ ಸುರಕ್ಷಿತವಾಗಿಡುತ್ತಿದ್ದವು. ಖಂಡಿತ ಅರಸನಾದವನಲ್ಲಿ ರಾಜ್ಯಗಳನ್ನು ಗೆಲ್ಲಬೇಕು ಸಾಮ್ರಾಜ್ಯವನ್ನು ವಿಸ್ಥರಿಸಬೇಕು ಎನ್ನುವ ಮಹತ್ವಾಕಾಂಕ್ಷೆ ಹೆಚ್ಚಾದಾಗ ಹಾಗೂ ಬೇರೆ ದೇಶದ ಸಂಪತ್ತನ್ನು ಕೊಳ್ಳೆ ಹೊಡೆಯಬೇಕು ಎನ್ನುವ ದುರಾಸೆ ಹೆಚ್ಚಾದಗಲೆ ಎರಡೂ ಸಾಮ್ರಾಜ್ಯದ ಪ್ರಜೆಗಳೂ ತೊಂದರೆಗೀಡಾಗುತ್ತಾರೆ. ಆದ್ದರಿಂದಲೆ ನಮ್ಮ ಕರುಣಾಳು ಅರಸರು ಹೆಚ್ಚಾಗಿ ಪ್ರಜೆಗಳ ಹಿತ ಕಾಯ್ವ ಉತ್ತಮ ಆಡಳಿತ ಮಾಡುತ್ತಿದ್ದರು ಇಲ್ಲವಾದರೆ ಸಂಗೀತ, ನೃತ್ಯ, ಮಧ್ಯ, ಮನೋರಂಜನೆ, ಕಲೆ, ಸಾಹಿತ್ಯ, ವಾಸ್ತುಶಿಲ್ಪ, ಸಾಕಷ್ಟು ಜನ ಹೆಂಡಿರ ಸುಖಲೋಲುಪತೆಯಲ್ಲಿ ತೇಲಿ ಬಿಡುತ್ತಿದ್ದರು. ಇದರಿಂದ ರಾಜನಿಗೂ ಪ್ರಜೆಗಳಿಗೂ ಇರ್ವರಿಗೂ ಯಾವುದೇ ನಷ್ಟ ಇರುತ್ತಿರಲಿಲ್ಲ. ಇಲ್ಲಿ ನಾದಿರ್ ಶಾನ ಮಹತ್ವಕಾಂಕ್ಷೆ ಹಾಗೂ ದುರಾಸೆಗೆ ಹೋಲಿಸಿದರೆ ನಮ್ಮ ಭಾರತಿಯ ಅರಸರ ಸುಖ ಲೋಲುಪತೆ ಎಷ್ಟೋ ವಾಸಿ ಎನ್ನಿಸಲು ಶುರು ಮಾಡುತ್ತದೆ. ಯುದ್ಧ ತಂತ್ರಗಳಿಂದ ಪ್ರವೀಣನಾದ ನಾದಿರ್ ಶಾ ಯುದ್ದದ ಕೌರ್ಯದಿಂದಲೆ ರೋಮಾಂಚನ ಪಡುವುದು ಹೆಚ್ಚು ಹಾಗೂ ಹಿಂದೂಸ್ಥಾನದ ಸಂಪತ್ತನ್ನು ಕೊಳ್ಳೆ ಹೊಡೆಯಲು ನಾದಿರ್ ಶಾ ತನ್ನ ಸೈನಿಕರನ್ನು ಹುರಿದುಂಬಿಸುತ್ತಾನೆ. ಹೀಗೆ ಸಂಪತ್ತು ಸಾಮ್ರಾಜ್ಯ ವಿಸ್ತರಣೆಯ ಇವನ ದುರಾಸೆ ಒಂದು ಸಾರಿ ಮಾತ್ರ ಇವನ ಸೈನಿಕರೆ ಇವನ ವಿರುದ್ಧ ದಂಗೆ ಏಳುವಂತೆ ಮಾಡಿತು. ತನ್ನ ಸೈನಿಕರಿಂದಲೆ ಹತನಾಗಬೇಕಾದವನು ತಪ್ಪಿಸಿಕೊಂಡು ಬದುಕುಳಿಯುತ್ತಾನೆ. ಆದರೆ ಇದರ ಹಿಂದೆ ತನ್ನ ಮಗನದೇ ಷಡ್ಯಂತ್ರವಿರಬಹುದೆಂದು ನಂಬಿದ ನಾದಿರ್ ಸ್ವತಃ ಮಗನ ಕಣ್ಣುಗಳನ್ನೆ ಕೀಳಿಸುತ್ತಾನೆ. ಹೀಗೆ ತನ್ನ ಕೌರ್ಯ ಮುಂದುವರಿಸಿದ ನಾದಿರ್ ಶಾ ಕಡೆಗೂ 1947 ರಲ್ಲಿ ತನ್ನ ಸೈನಿಕರಿಂದ ಹತನಾಗುತ್ತಾನೆ. ಏಕೆಂದರೆ ಸ್ವತಃ ಅವನ ಸೈನಿಕರೆಗೆ ಯುದ್ಧ ರಕ್ತಪಾತ ಬೇಕಾಗಿರುವುದಿಲ್ಲ.
ನಾದಿರ್ ಭಾರತಕ್ಕೆ ದಂಡಯಾತ್ರೆ ಬಂದಾಗ ಅವನ ಮಾನಸೀಕ ಹಾಗೂ ದೈಹಿಕ ಆರೋಗ್ಯ ಸಾಕಷ್ಟು ಹದಗೆಟ್ಟಿತ್ತು. ಇಲ್ಲಿಯ ಅಲಾವಿ ಖಾನ್ ಎನ್ನುವ ವೈದ್ಯ ಅವನ ದೈಹಿಕ ಹಾಗೂ ಮಾನಸೀಕ ಆರೋಗ್ಯ ಸುಧಾರಿಸಲು ಪ್ರಯತ್ನಿಸಿದ್ದುರ ಸನ್ನಿವೇಶವೆ ಈ ನಾಟಕದ ಕಥಾ ಹಂದರ. ಅಲಾವಿ ಖಾನ್ ಎನ್ನುವ ಹಕೀಮ ಆಧ್ಯಾತ್ಮ ಹಾಗೂ ತತ್ವಜ್ಞಾನದ ಹಿನ್ನಲೆಯಲ್ಲಿ ನಾದಿರ್ ಶಾನಿಗೆ ಬೋಧಿಸುವುದಲ್ಲದೆ. ಕೌರ್ಯ ದುರಾಸೆಗಳಿಂದ ಹುಚ್ಚು ಹಿಡಿದಂತೆ ವರ್ತಿಸುತ್ತಾ, ಕಂಡವರನ್ನೆಲ್ಲಾ ಸಂಶಯಸುತ್ತಾ ಅರಚುವ ಧ್ವನಿಯಲ್ಲಿ ಯಾವುದರಲ್ಲೂ ಶಾಂತಿ ಕಾಣದ ನಾದಿರ್ನನ್ನು ಅಲಾವಿ ಖಾನ್ ಮನೋವೈಜ್ಞಾನಿಕವಾಗಿ ಸಂದರ್ಶನ ಮಾಡಿ ಅವನನ್ನು ಸುದಾರಿಸಲು ಪ್ರಯತ್ನಿಸಿ ಸಫಲನಾಗುವ ಈ ಕತೆ ನಮ್ಮ ಭಾರತೀಯರ, ಶಾಂತಿ ಪ್ರೀಯತೆ ಹಾಗೂ ಆಧ್ಯಾತ್ಮದ ಸಂಸ್ಕಾರಕ್ಕೆ ಹಿಡಿದ ಕನ್ನಡಿಯಾಗಿದೆ. ಅತ್ಯಂತ ಪರಿಣಾಮಕಾರಿ ಎನ್ನುವ ರೀತಿಯಲ್ಲಿ ಲಂಕೇಶರು ನಾಟಕದ ಸಂಭಾಷಣೆಯನ್ನು ಹೆಣೆದಿದ್ದಾರೆ.
“ಶರಣಾತನಾದವನು ಕುತಂತ್ರಿಯೆಂದು ಗೊತ್ತಿದ್ದರೂ ಆತನನ್ನು ಕ್ಷಮಿಸು, ಅವನ ಸೇವೆ ಸ್ವೀಕರಿಸು. ಸಾದತ್ ಖಾನ್ ಮತ್ತು ನಿಜಾಮ್ ಉಲ್ ಮುಲ್ಕ್ ನೆಲಕ್ಕೆ ಬಿದ್ದ ಮೇಲೆ ಕೊಂದದ್ದು ವೀರನಾದವನ ಕೆಲಸವಲ್ಲ, ಅವನ ದಿವಾನ್ ಮರ್ಯಾದೆಗೂ ತಮ್ಮ ಮನುಷತ್ವಕ್ಕೂ ಸಲ್ಲುವ ಕೃತ್ಯವಲ್ಲ.”
ಹೀಗೆ ಅಲಾವಿ ಖಾನ್ ನಾದಿರ್ನನ್ನು ಸಂದರ್ಶನ ಮಾಡುವ ಸನ್ನಿವೇಶ ತುಂಬಾ ಸಂವೇದನಾಶೀಲತೆಯಿಂದ ಕೂಡಿದೆ. ಮುಂದುವರಿದು ಅಲಾವಿ ಖಾನ್ “ಮೊನ್ನೆ ರೋಶನ್-ಉದ್-ದೌ¯ ಮಸೀದಿಯ ಬಳಿ ಕೂತಿದ್ದಾಗ ಗುಂಡೊಂದು ಹಾರಿತು ನಿಮ್ಮ ಅಂಗ ರಕ್ಷಕ ಸತ್ತ. ಕೂಡಲೇ ತಾವು ದಿಲ್ಲಿಯನ್ನು ತರಿದುಹಾಕುವಂತೆ ಆಜ್ಞೆ ಮಾಡಿದಿರಿ. ಹೆಂಗಸರು, ಮಕ್ಕಳು, ರೋಗಿಗಳು, ಮುಗ್ಧರು, ವೃತ್ತಿವಂತರು ಎಲ್ಲರನ್ನೂ ಮನೆಯಿಂದ ಹೊರಗೆಳೆದು ಕೊಲ್ಲತೊಡಗಿದಿರಿ. ಇದು ಯುದ್ದವಲ್ಲ, ಶೌರ್ಯದ ಪ್ರದರ್ಶನವಲ್ಲ, ಕಗ್ಗೋಲೆ. ಕೃಷ್ಣ ಎಂಬ ಹುಡುಗ ಅವನನ್ನು ಚಿನಿವಾರ ಪೇಟೆಯ ಅಂಗಡಿಯಿಂದ ಕರೆತಂದು ಕೊತ್ಯಾಲಿಯಲ್ಲಿ ಕೂಡಿಹಾಕಲಾಯಿತು. ಅವನ ಹೆಂಡತಿ ಶಾರದಾ ಕಂಗಾಲಾಗಿ ಅಲ್ಲಿಗೆ ಬಂದು ಬೇಡಿಕೊಂಡಾಗ ಅವಳ ಅಂಗಾಲಾಚುವಿಕೆ ಕೇಳದೆ ಅವಳ ಬಟ್ಟೆ ಬಿಚ್ಚಿ ಅತ್ಯಾಚಾರ ಮಾಡಿ, ಗಂಡನೊಂದಿಗೆ ಕ್ರೂರವಾಗಿ ಕೊಚ್ಚಿಹಾಕಲಾಯಿತು, ಆಕೆ ನಿಮಗೆ ಹೇಳಿದ್ದೇನು, ನಿಮಗೆ ನೆನಪಿದೆಯೆ?” ಎಂದು ಕೇಳುತ್ತಾನೆ. ಆಗ ಶಾರದೆ ಅಂಗಲಾಚುತ್ತಾ ಬೇಡಿದ್ದು “ನಾವು ಬಡವರು ಒಳ್ಳೆಯವರು ನಮಗಿರುವ ಒಂದೇ ಆಸ್ತಿ ನಮ್ಮ ಮಾನ ಮತ್ತು ಜೀವ, ನಾವು ಯಾರಿಗೂ ಕೇಡು ಮಾಡಿಲ್ಲ. ನನ್ನ ಗಂಡನನ್ನು ಕೊಲ್ಲಬೇಡಿ. ಕೊಂದರೆ ನಿಮ್ಮ ನೆಮ್ಮದಿ ಉಳಿಯಲಿಕ್ಕಿಲ್ಲ.” ಈ ಶಾರದೆಯ ಮಾತನ್ನು ಅಲಾವಿ ನೆನಪಿಸುತ್ತಾ ನಾದಿರ್ ಶಾ ನ ಕಣ್ಣು ತೆರೆಸಲು ಪ್ರಯತ್ನಿಸುತ್ತಾನೆ. ಹೌದು ಅಮಾಯಕರನ್ನು ಹಿಡಿದು ಕೊಲ್ಲುವುದು ರಾಜನಾದವನಿಗೆ ಯಾವ ಕಾಲದಲ್ಲೂ ಶ್ರೇಯಸ್ಕರವಲ್ಲ. ಭಾರತೀಯ ಸಂಸ್ಕøತಿಯಲ್ಲಿ ಪ್ರಜೆಗಳೆಂದರೆ ಅರಸನ ಮಕ್ಕಳು. ಅವರ ಕಾಳಜಿ ರಾಜ ಧರ್ಮವೇ ಹೊರತು ಅವರ ಕೊಲೆ ಖಂಡಿತಾ ಅಲ್ಲ ಎನ್ನುವ ನೀತಿಯಲ್ಲಿ ನಾಟಕ ಬೆಳಕು ಚೆಲ್ಲುತ್ತದೆ.
ಈ ಅಧ್ಬುತ ನಾಟಕವನ್ನು ನಮಗೆ ಕಟ್ಟಿ ಕೊಟ್ಟ ಪಿ.ಲಂಕೇಶ್ ಅವರು ಕನ್ನಡದ ಖ್ಯಾತ ಸಾಹಿತಿಗಳು ಹಾಗೂ ಲಂಕೇಶ್ ಪತ್ರಿಕೆಯ ಸಂಪಾದಕರು. ಕಾವ್ಯ, ಕಥೆ, ಕಾದಂಬರಿ, ಅಂಕಣ, ನಾಟಕ, ನಟ, ನಿರ್ದೇಶಕ, ಅಧ್ಯಾಪಕ ಹೀಗೆ ಬಹುಮುಖ ವ್ಯಕ್ತಿತ್ವವನ್ನು ಹೊಂದಿದವರು. ಪತ್ರಕೋದ್ಯಮದಲ್ಲಿ ಹೆಸರು ಮಾಡಿದ್ದು, ನಾಟಕ ಕ್ಷೇತ್ರದಲ್ಲಿ ಇವರ ಕೊಡುಗೆ ಅಪಾರ. ಮಾರ್ಚ 8, 1935 ರಲ್ಲಿ ಶಿವಮೊಗ್ಗ ಜಿಲ್ಲೆಯ ಕೊನಗವಳ್ಳಿಯಲ್ಲಿ ಜನಿಸಿದರು. ಬಿರುಕು, ಗುಣಮುಖ, ಸಂಕ್ರಾಂತಿ, ತೆರೆಗಳು ಇವು ಇವರ ನಾಟಕಗಳು. ಕೆರೆಯ ನೀರು ಕೆರೆಗೆ ಚೆಲ್ಲಿ, ನಾನಲ್ಲ, ಉಮಾಪತಿಯ ಸ್ಕಾಲರ್ ಶಿಪ್ ಯಾತ್ರೆ, ಉಲ್ಲಂಘನೆ ಮುಂತದವ ಕಥಾ ಸಂಗ್ರಹಗಳನ್ನು, ಬಿರುಕು, ಅಕ್ಕ ಕಾದಂಬರಿಗಳು, ಪ್ರಸ್ತುತ, ಕಂಡದ್ದು ಕಂಡಹಾಗೆ, ಪಾಂಚಾಲಿ ಎನ್ನುವ ಅಂಕಣ ಬರಹ ಸಂಗ್ರಹ, ಬಿಚ್ಚು, ನೀಲು ಕಾವ್ಯ ಮುಂತಾದ ಕವನ ಸಂಕಲನಗಳನ್ನು ಬರೆಯುವ ಮೂಲಕ ಕನ್ನಡ ಸಾರಸ್ವತ ಲೋಕಕ್ಕೆ ತಮ್ಮದೇ ಆದ ಅಮೂಲ್ಯವಾದ ಕೊಡುಗೆಯನ್ನು ನೀಡಿದ್ದಾರೆ.
- ಶ್ರೀಮತಿ ಗಿರಿಜಾ ಮಾಲಿ ಪಾಟೀಲ ಸಂಸ್ಥಾಪಕ ಅಧ್ಯಕ್ಷರು ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ