ಭಾನುವಾರ, ಫೆಬ್ರವರಿ 12, 2023

ಗಜ಼ಲ್ - ಡಾ ಸುರೇಶ ನೆಗಳಗುಳಿ.

ಸತ್ತು ಬದುಕಿದ ಹಾಗೆ ಆಗಿ‌ ಹೋಗುವುದುಂಟು ಒಮ್ಮೊಮ್ಮೆ
ಮೆತ್ತಿದ ಬಣ್ಣ ಕಿತ್ತು ಬೆತ್ತಲಾಗುವುದುಂಟು ಒಮ್ಮೊಮ್ಮೆ

ನಂಬುಗೆಯ ಮಾನದಂಡವನ್ನು ಹುಡುಕುವುದು ಹೇಗೆ
ಅನಿರೀಕ್ಷಿತವಾಗಿ ಒಲವು ಮುತ್ತುವುದುಂಟು ಒಮ್ಮೊಮ್ಮೆ

ತರುಲತೆಗಳೂ ಮುಂಜಾನೆ ಅಳುತಿರುವ ಹಾಗಿರುವುದೇಕೆ
ದುಗುಡ ದೂರಾದ ಮರೀಚಿಕೆ ಕಾಣುವುದುಂಟು ಒಮ್ಮೊಮ್ಮೆ

ಒಡೆದ ಕನ್ನಡಿಯಲ್ಲಿ  ಏಕ ರೂಪೀ ಬಿಂಬಗಳೇಕೆ ಹಲವಾರು
ಬಿಸಿಲಿಗೆ ಬಸವಳಿದು ನೆಲವೂ ಒಡೆವುದುಂಟು ಒಮ್ಮೊಮ್ಮೆ

ಗಾಳಿಯ ಚಲನೆಗೆ ಮಾರ್ಗ ಮಾಡುವ ದುಸ್ಸಾಹಸವೇಕೆ
ಕಣ್ಣ ಸನ್ನೆಯ ಭ್ರಮೆಗೆ ಹಳ್ಳಕ್ಕೆ ಬೀಳುವುದುಂಟು ಒಮ್ಮೊಮ್ಮೆ

ಅರಿತು ನಡೆವವನು ಗೆಲದಿರಲು ಸಾಧ್ಯವಿಲ್ಲ ಅಲ್ಲವೇನು
ದಿಢೀರ್ ನಿರ್ಧಾರದಿಂದ ಕೆಡುವುದುಂಟು ಒಮ್ಮೊಮ್ಮೆ

ಪರ ಭಾಷೆ ಸೆಳೆದಂತೆ ತನ್ನ ಮನೆ ಬಿಟ್ಟು ಹೋಗುವುದೇತಕ್ಕೆ
ತಾಮಸಾನಂದದಲಿ ಸ್ವಂತಿಕೆಯು ಅಳಿವುದುಂಟು ಒಮ್ಮೊಮ್ಮೆ

ಹೆತ್ತ ತಾಯಿಯ ಕತ್ತು ಹಿಚುಕುವ ಭಾವ ಮೆಚ್ಚುವವರಾರು
ತನ್ನ ನೆಲ ತನ್ನ ನುಡಿ ಬಿಟ್ಟು ನಡೆವುದುಂಟು ಒಮ್ಮೊಮ್ಮೆ

ನೀಳ ಕೇಶದ ನೀರೆಯ ಮೊಗ ಕಾಣದು ತಿಳಿ ಸುರೇಶಾ
ಹಗ್ಗವೂ ಹಾವಾಗಿ ಎದೆ ಬಡಿತ ನಿಲುವುದುಂಟು ಒಮ್ಮೊಮ್ಮೆ.

- ಡಾ ಸುರೇಶ ನೆಗಳಗುಳಿ
ಮಂಗಳೂರು,
#೯೪೪೮೨೧೬೬೭೪
negalagulis@gmail.com

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...