ಬುಧವಾರ, ಆಗಸ್ಟ್ 13, 2025

ಅನುಪಮ ಬಂಧವೆಂದರೆ ಅದು ಸ್ನೇಹ ಸಂಬಂಧ

ಅನುಪಮ ಬಂಧವೆಂದರೆ ಅದು ಸ್ನೇಹ ಸಂಬಂಧ 

ಸ್ನೇಹ,ಗೆಳೆತನ,ಫ್ರೆಂಡ್ಶಿಪ್ ,ದೋಸ್ತೀ ಇದು ಇಂದು ನಿನ್ನೆಯದಲ್ಲ, ಯುಗ,ಯುಗಾಂತರದಿಂದಲೂ ಚಿರಂಜೀವಿಯಾಗಿ ಉಳಿದು ಕೊಂಡಿದೆ.ಆದ್ರೂ 
ಎಲ್ಲದಕ್ಕೂ ಒಂದು ದಿನಾಚರಣೆ ಇರುವಾಗ, ಸ್ನೇಹಿತರಿಗೂ ಒಂದು ದಿನಾಚರಣೆ ಇರಬೇಕೆಂದು 1930ರಲ್ಲಿ ಒಂದು ಪಾರ್ಟಿಯಲ್ಲಿ, 
ಹಾಲ್ಮಾರ್ಕ್ ಕಾರ್ಡಗಳ ಸಂಸ್ಥಾಪಕರಾಗಿದ್ದ ಚಾಯ್ಸ್ ಹಾಲ್ ವ್ಯವಹಾರಿಕ ತಂತ್ರವಾಗಿ ಪ್ರಸ್ತಾಪಿಸಿ ಕಾರ್ಯರೂಪಕ್ಕೆ ತರುವಲ್ಲಿ ಸಫಲರಾದರು.1935ರಲ್ಲಿ ಯು ಎಸ್ ಕಾಂಗ್ರೆಸ್ ಅಧಿಕೃತ ರಜಾ ದಿನವಾಗಿ ರೂಪಿಸುವಲ್ಲಿ ಯಶಸ್ವಿಯಾಯಿತು. ತದನಂತರ 1958ರ ಜುಲೈ 30ರಂದು 'ಪರಾಗ್ವೆ'ಯಲ್ಲಿ ಅಂತಾರಾಷ್ಟ್ರೀಯ ಸ್ನೇಹಿತರ ದಿನವನ್ನು ಮೊದಲ ಬಾರಿಗೆ ಆಚರಿಸಲಾಯಿತು.ಮುಂದೆ 2011ರಲ್ಲಿ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಜುಲೈ 30 ನ್ನು ಅಂತಾರಾಷ್ಟ್ರೀಯ ಸ್ನೇಹ ದಿನವೆಂದು ಘೋಷಣೆ ಮಾಡಿತು. ವಿಶ್ವಸಂಸ್ಥೆ ಜುಲೈ ಮೂವತ್ತೆಂದು ಘೋಷಣೆ ಮಾಡಿದ್ದರು;ಕೆಲ ದೇಶಗಳು ಬೇರೆ ಬೇರೆ ತಿಂಗಳು, ಬೇರೆ ದಿನಾಂಕದಂದು ಆಚರಿಸಲು ಆರಂಭಿಸಿದವು ನಮ್ಮ ಭಾರತ ದೇಶವು ಆಗಸ್ಟ ತಿಂಗಳ ಮೊದಲ ಬಾನುವಾರ ಸ್ನೇಹಿತರ ದಿನವನ್ನು ಆಚರಿಸುತ್ತದೆ. ಬಹಳ ವೇಗವಾಗಿ ಪ್ರಖ್ಯಾತಿ ಪಡೆದ ಫ್ರೆಂಡ್ಶಿಪ್ ಡೇ ಈಗ ವಿಶ್ವದೆಲ್ಲೆಡೆ ಬಹಳ ಹರುಷದಿಂದ ಆಚರಿಸಲ್ಪಡುತ್ತಿದೆ.

''ಸ್ನೇಹ "ಎಂಬ ಪದ ಸಂಸ್ಕೃತ ಭಾಷೆಯಲ್ಲಿ ಹುಟ್ಟಿಕೊಂಡಿದೆ. ಇದರ ಅರ್ಥ "ಪ್ರೀತಿ" ಅಥವಾ "ವಾತ್ಸಲ್ಯ" ಈ ಪದವು, ನಿಕಟತೆ ಮತ್ತು ಭಾವನಾತ್ಮಕ ಸಂಪರ್ಕದ ಅರ್ಥವನ್ನು ತಿಳಿಸುತ್ತದೆ, ಇದು ಹೆಚ್ಚಾಗಿ ಕೌಟುಂಬಿಕ ಅಥವಾ ಆಳವಾದ ಸ್ನೇಹದೊಂದಿಗೆ ಸಂಬಂಧಿಸಿದೆ ಸಕಾರಾತ್ಮಕ ಅರ್ಥಗಳಿಂದಾಗಿ ಮೆಚ್ಚುಗೆ ಪಡೆಯುತ್ತದೆ. ಇದು ದಯೆ ಮತ್ತು ಸಹಾನುಭೂತಿಯ ಗುಣಗಳನ್ನು ಸಾಕಾರಗೊಳಿಸುತ್ತದೆ, ಪೋಷಕರಲ್ಲಿ ಜನಪ್ರಿಯ ಆಯ್ಕೆಯಾಗಿದೆ. ಹೆಚ್ಚುವರಿಯಾಗಿ, "ಸ್ನೇಹ" ಎಂಬ ಪದವನ್ನು ಕೆಲವೊಮ್ಮೆ ಪೋಷಣೆ ಮತ್ತು ಕಾಳಜಿಯ ಕಲ್ಪನೆಯೊಂದಿಗೆ ಸಂಯೋಜಿಸಬಹುದು, ಇದು ಸಂಬಂಧಗಳಲ್ಲಿ ಪ್ರೀತಿ ಮತ್ತು ಬೆಂಬಲದ ಮೌಲ್ಯಗಳನ್ನು ಪ್ರತಿಬಿಂಬಿಸುತ್ತದೆ.

ಪುರಾಣ, ಇತಿಹಾಸ ಕಾಲದಿಂದಲೂ ಸ್ನೇಹಕ್ಕೆ ತನ್ನದೇ ಆದ ಸ್ಥಾನಮಾನ, ಗೌರವ, ಆದರದ ಆತಿಥ್ಯವಿದೆ.ಗತಕಾಲವನ್ನು ಒಮ್ಮೆ ತಿರುವಿದಾಗ ಹಲವು ಬಿಡಿಸಲಾಗದ ಸ್ನೇಹವನ್ನು ಕಾಣಬಹುದು.ಮಹಾಭಾರತದಲ್ಲಿ ಕಂಡುಬರುವ ದುರ್ಯೋಧನ ಮತ್ತು ಕರ್ಣರ ಸ್ನೇಹ. ಇವರಿಬ್ಬರದು ಅಪ್ರತಿಮ ಗೆಳೆತನ. ಇವರ ಸ್ನೇಹದ ಮುಂದೆ,ಯಾವುದೇ ಗೆಳೆತನ ಇಂದಿಗೂ ನಿಲ್ಲಲಾಗಿಲ್ಲ.

ನಿಜವಾದ ಸ್ನೇಹ ಅಂದ್ರೆ ಏನು ಅಂತ ಈಗ ಯಾರಿಗೂ ಗೊತ್ತಿಲ್ಲಂತ ಕಾಣುತ್ತೆ. ಕೆಲವರು ಗೆಳೆತನ, ಸ್ನೇಹ, ಅಂತ ನಾಟಕ ಮಾಡಿ. ಸ್ನೇಹದ ಹೆಸರಿನಲ್ಲಿ ಸಹಾಯ ಪಡೆದು ಆಮೇಲೆ ಎದೆಗೆ ಚೂರಿ ಹಾಕಿ ದ್ರೋಹವೆಸಗುತ್ತಿದ್ದಾರೆ. ಸ್ನೇಹಿತನ ಸತಿಯೆಂದ್ರೆ,ಸಹೋದರಿಯ ಸಮಾನ.ಅಂತಹ ಸಹೋದರಿಯ ಸಮಾನವಾಗಿರುವಂತ ಹೆಣ್ಣಿನ ಮೇಲೆಯೇ ಕಾಮದ ವಕ್ರದೃಷ್ಠಿ ಬೀರಿ, ಇನ್ನಿಲ್ಲದ ಆಮಿಷಗಳನ್ನ ಒಡ್ಡಿ ಆ ಹೆಣ್ಣಿನ ಜೊತೆ ಕಾಮಕೇಳಿಯ ನಡೆಸಿ,ಸ್ನೇಹಿತನ ಜೀವನವನ್ನೆ ಸರ್ವನಾಶ ಮಾಡುವದರ ಜೊತೆಗೆ,ಮರಣಮೃದಂಗ ಬಾರಿಸುತ್ತಿರುವ, ಸುದ್ದಿ ದಿನಾ ಬೆಳಗಾದ್ರೆ ಸಾಕು ಮಾಧ್ಯಮಗಳಲ್ಲಿ ನೋಡುತ್ತಿದ್ದೇವೆ, ಓದುತ್ತಿದ್ದೇವೆ. 
ಅಂಥವರ ಮಧ್ಯೆ ಮಾದರಿಯಾಗಿ ನಿಲ್ಲುವುದು.

ಕರ್ಣ-ದುರ್ಯೋಧನರ ಅಪೂರ್ವ ಸ್ನೇಹ. 

ಸ್ನೇಹಿತರು ಸಾಯಬಹುದು, ಆದರೆ ಒಂದೊಳ್ಳೆಯ ಗೆಳೆತನ ಯಾವತ್ತೂ ಸಾಯಲಾರದು. ಕೊನೆಯಿಲ್ಲದ ಸರಪಳಿ ಸ್ನೇಹ.

ಮನಸ್ಸೆಂಬುದು ನೀರಿದ್ದಂತೆ. ಅಲ್ಲಿ ಭಾವನೆಗಳು ಹರಿದಾಡುತ್ತವೆ, ಪ್ರೀತಿ ತುಂಬಿರುತ್ತೆ. ಮನಸ್ಸಿಗೆ ನೋವಾದಾಗ ಭಾವನೆಗಳು ಹೊರಗೆ ಬರುತ್ತವೆ. ಅಂಥ ಭಾವನೆಗಳನ್ನ ಹಂಚಿಕೊಂಡು ಗೆಳೆಯ ಅಥವಾ ಗೆಳತಿಯ ಸಮಸ್ಯೆಗಳಿಗೆ ಪರಿಹಾರ ಕೊಟ್ಟು ಕಷ್ಟದಲ್ಲಿದ್ದಾಗ ಸಹಾಯ ಮಾಡಿ. ಸೋತಾಗ ಬೆನ್ನು ತಟ್ಟಿ ಮೇಲಕೆತ್ತುವವನೇ ನಿಜವಾದ ಸ್ನೇಹಿತ.

ಒಮ್ಮೆ ಕರ್ಣನು,ದುರ್ಯೋಧನನ ಪತ್ನಿ ಭಾನುಮತಿಯ ಜೊತೆ ಪಗಡೆಯಾಡುವ ಸಂಧರ್ಭದಲ್ಲಿ,ತಮಾಷೆಯಿಂದ ಆಕೆಯನ್ನು ಹಿಡಿಯಲು ಹೋಗುತ್ತಾನೆ. ಆಕಸ್ಮಿಕವಾಗಿ ಆಕೆಯ ಮುತ್ತಿನ ಸರ ಕಿತ್ತು,ಮಣಿಗಳೆಲ್ಲಾ ಚೆಲ್ಲಾಪಿಲ್ಲಿಯಾಗುತ್ತವೆ. ಆ ವೇಳೆ ಅಲ್ಲಿಗೆ ದುರ್ಯೋಧನ ಬರುತ್ತಾನೆ. ಬಂದವನು,ಕಿಂಚಿತ್ತು ಅವರನ್ನ ಅನುಮಾನಿಸದೆ, ನಾನು ಮಣಿಗಳನ್ನು ಆಯ್ದು ಕೊಡಲೇ ಎಂದು ಪ್ರಶ್ನಿಸುತ್ತಾನೆ. ಆಗ ಕರ್ಣ, ಧುರ್ಯೋಧನನಿಗೆ ರಾಜ ನನ್ನನ್ನು ಕ್ಷಮಿಸು ಎಂದು ಕೇಳುತ್ತಾನೆ, ಗೆಳೆಯ, ನನಗೆ ನಿನ್ನಲ್ಲಿ ನಂಬಿಕೆಯಿದೆ ಎಂದು ದುರ್ಯೋಧನನೇ ಸಮಾಧಾನಿಸುತ್ತಾನೆ. ಅಷ್ಟರಮಟ್ಟಿಗೆ ದುರ್ಯೋಧನನಿಗೆ ತನ್ನ ಗೆಳೆಯನ್ನಲ್ಲಿ ನಂಬಿಕೆ ವಿಶ್ವಾಸವಿರುತ್ತದೆ.

ದುರ್ಯೋಧನ ಎಂದರೇ ಕೇವಲ ಕುರುಸಾರ್ವಭೌಮ, ಧೃತರಾಷ್ಟ್ರನ ಪುತ್ರ, ಹಠಮಾರಿ, ಕ್ರೂರಿ, ಇದೇನೂ ಆಗಿರಲಿಲ್ಲ; ಕರ್ಣನ ಪಾಲಿಗೆ ಆತ ಜೀವದ ಗೆಳೆಯ, ಅಂತರಂಗದ ಉಸಿರು, ಅಣ್ಣನಂಥ ಆತ್ಮ ಬಂಧು, ಇಡೀ ಜಗತ್ತೇ ಕರ್ಣನನ್ನು ಸೂತಪುತ್ರ, ಬೆಸ್ತ ಎಂದು ಹಂಗಿಸಿದ ಕ್ಷಣದಲ್ಲಿ, ಅಂಗರಾಜ್ಯದ ಕಿರೀಟ ತೊಡಿಸಿದ ಧೀರ ದುರ್ಯೋಧನ.ಅಂಥ ಗೆಳೆಯನಿಗೆ ಯುದ್ದ ಗೆದ್ದು ಕೊಡಬೇಕು. ಆ ಮೂಲಕ ಅವನ ಋಣದಿಂದ ಸ್ವಲ್ಪ ಮಟ್ಟಿಗಾದರೂ ಮುಕ್ತನಾಗಬೇಕು ಎಂಬ ಆಸೆ ಕರ್ಣನಿಗಿತ್ತು.

ಕುರುಕ್ಷೇತ್ರ ಯುದ್ಧ ಆರಂಭವಾದಾಗ ಕರ್ಣನಿಗೆ ಕೃಷ್ಣ ಆತನ ಜನ್ಮರಹಸ್ಯವನ್ನು ತಿಳಿಸಿ, ನೀನು ಪಾಂಡವರಿಗೆಲ್ಲ ಹಿರಿಯ, ನೀನು ಬಂದು ಪಾಂಡವರ ಜೊತೆ ಸೇರು ಎಂದು ಹೇಳುತ್ತಾನೆ. ಆಗ ಕರ್ಣ ನಾನು ದುರ್ಯೋಧನನನ್ನು ಬಿಟ್ಟು ಪಾಂಡವರ ಜೊತೆ ಹೋಗುವುದಿಲ್ಲ ಎನ್ನುತ್ತಾನೆ.ಇದಕ್ಕೆ ಕಾರಣವೇನೆಂದು, ಕೃಷ್ಣ ಕೇಳಿದಾಗ, ತಾನು ದ್ರೌಪದಿ ಸ್ವಯಂವರದಲ್ಲಿ ಬಿಲ್ಲನ್ನು ಎತ್ತಲು ಬಂದಾಗ ತನ್ನನ್ನು ಸೂತ ಪುತ್ರ ಎಂಬ ಕಾರಣಕ್ಕೆ ಬಿಲ್ಲನ್ನೇರಿಸಲು ನಿರಾಕರಿಸಿದರು. ಆ ಸಮಯದಲ್ಲಿ ನನ್ನನ್ನು ಅಂಗ ದೇಶದ ರಾಜನನ್ನಾಗಿ ಮಾಡಿ ಸ್ಥಾನಮಾನ ಕಲ್ಪಿಸಿದವನು ದುರ್ಯೋಧನ, ನಾನು ರಾಜನಿಗೆ ನಿಷ್ಠನಾಗಿದ್ದೇನೆ. ಹೀಗಾಗಿ ನಾನು ಪಾಂಡವರ ಜೊತೆ ಸೇರಲು ಸಾಧ್ಯವಿಲ್ಲ ಎಂದು ಹೇಳುತ್ತಾನೆ ಕರ್ಣ. 

ಹೀಗೆ ಕರ್ಣನಿಗೆ ಹತ್ತು – ಹಲವು ಸಂದರ್ಭದಲ್ಲಿ ದುರ್ಯೋಧನನ ಬೆಂಬಲವಾಗಿ ನಿಲ್ಲುತ್ತಾನೆ. ಮಹಾಭಾರತ ಯುದ್ದದಲ್ಲಿ ಯಾವ ಆಮೀಷಗಳಿಗೆ ಬಲಿಯಾಗದೇ ದುರ್ಯೋಧನನ ಪರವಾಗಿ ಯುದ್ಧಮಾಡುವುದಾಗಿ ಹೇಳುತ್ತಾನೆ. ಕೊನೆಗೆ ಕರ್ಣನು ದುರ್ಯೋಧನನಿಗೊಂದು ಮಾತು ಕೊಡುತ್ತಾನೆ.( ಮಾತೆ ಕುಂತಿಗೆ ನಿನಗೆ ಐದು ಜನ ಪಾಂಡವರು ಖಂಡಿತ ಉಳಿಯುವರು ಅಂತ ಮಾತು ಕೊಟ್ಟ ಕಾರಣ ) ಮಿತ್ರ, ಯುದ್ದದಲ್ಲಿ ಸೈನಿಕರನಸ್ಟೇ ಅಲ್ಲದೆ, ಯಾರೇ ಎದುರಾದ್ರು ಕೊಲ್ಲುತ್ತೇನೆ; ಆದ್ರೆ ಪಾಂಡವರನ್ನು ಮುಟ್ಟುವುದಿಲ್ಲವೆಂದು ಹೇಳಿ.ಕಾರಣ ಕೇಳಬೇಡವೆನ್ನುತ್ತಾನೆ, ಆದ್ರೂ ಸಹ,ದುರ್ಯೋಧನ ಕರ್ಣನ್ನ. ಅಪಮಾನಿಸುವುದಿಲ್ಲ,ಏಕೆಂದ್ರೆ ಅವರಿಬ್ಬರ ಸ್ನೇಹ ಅಷ್ಟೊಂದು ಗಾಢವಾಗಿತ್ತು.ಹೀಗೆ ಮಹಾಭಾರತದಲ್ಲಿನ ಅವರಿಬ್ಬರ ಸ್ನೇಹ ಎಂದೆಂದಿಗೂ ಅಮರವಾಗಿದೆ.


ಕೃಷ್ಣ-ಕುಚೇಲರ ಗೆಳೆತನ

ಕರ್ಣ-ದುರ್ಯೋಧನರ ನಂತರ ನಮಗೆ ಸಿಗುವ ಅಪ್ರತಿಮ ಸ್ನೇಹಿತರು ಕೃಷ್ಣ -ಕುಚೇಲ. ಕುಚೇಲ ಒಬ್ಬ ಬಡವನಾಗಿ ಗೆಳೆಯ ಶ್ರೀಕೃಷ್ಣನ ಮನೆಗೆ ಸಹಾಯ ಕೇಳಲು ಬರುತ್ತಾನೆ. ಕೃಷ್ಣನ ಆದರಾತಿಥ್ಯಗಳಿಗೆ ಬೆರಗಾದ ಕುಚೇಲ ಆತನಲ್ಲಿ ಸಹಾಯ ಕೇಳದೆ ಸುಮ್ಮನಾಗುತ್ತಾನೆ. ಸ್ನೇಹಿತನಲ್ಲಿ ತನ್ನ ಬಡತನವನ್ನು ಹೇಳಿಕೊಳ್ಳಲಾಗದೆ ಇದ್ದಾಗ, ಕೃಷ್ಣನೇ ಆತನ ಮನವನ್ನು ಅರಿತು ಕುಚೇಲನಿಗೆ ಸಹಾಯ ಮಾಡುತ್ತಾನೆ. ಕೃಷ್ಣನಿಗೆಂದು ತಂದ ಅವಲಕ್ಕಿಯನ್ನು ಕುಚೇಲ ತನ್ನ ಹರಿದ ಬಟ್ಟೆಯಲ್ಲಿ ಗಂಟು ಕಟ್ಟಿ ಕೊಂಡಿರುತ್ತಾನೆ. ಇದನ್ನು ನೋಡಿದ ಕೃಷ್ಣ, ನನಗಾಗಿ ಏನೋ ತಂದಿರುವ ಹಾಗಿದೆಯಲ್ಲ ಎಂದು ತಾನೇ ಆ ಗಂಟನ್ನು ಬಿಚ್ಚುತ್ತಾನೆ. ಅದರಲ್ಲಿದ್ದ ಅವಲಕ್ಕಿಯನ್ನು ಬಿಚ್ಚಿ ತಾನು ತಿಂದು ರುಕ್ಮಿಣಿಗೂ ಕೊಡುತ್ತಾನೆ. ಎಷ್ಟು ರುಚಿಯಾಗಿದೆ ನನ್ನ ಗೆಳೆಯ ತಂದಿರುವುದೆಂದು ರುಕ್ಮಿಣಿ ಜೊತೆ ಕೃಷ್ಣ ತಿನ್ನುತಾನೆ. ಅಲ್ಲದೆ ಸಹಾಯವನ್ನು ಬೇಡಲು ಬಂದು ಕೇಳದೆ ಹಿಂತಿರುಗಿದ ಕುಚೇಲನ ಬಡತನವನ್ನು ಹೋಗಲಾಡಿಸಿರುತ್ತಾನೆ.

ಪುರಾಣಗಳಲ್ಲಿನ ಇಂಥಹ ಅಪ್ರತಿಮ ಗೆಳೆತನಗಳು ನಮ್ಮ ಕಣ್ಣಮುಂದೆಯೇ ಇದ್ದರೂ, ಇಂದಿನ ದಿನದ ಫ್ರೆಂಡ್ ಶಿಪ್ ನಲ್ಲಿ ಯಾವುದೇ ನಿಯತ್ತು, ಗೌರವ, ಪ್ರೀತಿ ಇಲ್ಲ.ಸ್ನೇಹ,ಪ್ರೀತಿಯ ಹೆಸರಲ್ಲಿ ಕಾಮ ಅಟ್ಟಹಾಸ ಗೈಯುತ್ತಿದೆ, ಅದೆಷ್ಟೋ ಹೆಣ್ಣು ಮಕ್ಕಳ ಹತ್ಯೆಯಾಗಿದೆ, ಇನ್ನೆಷ್ಟೋ ಹೆಂಗಳಿಯರ ಬಾಳು ಗೋಳಾಗಿದೆ. ಕೆಲವು ಸಂಸ್ಕಾರವಿಲ್ಲದ ಹೆಣ್ಣಿಂದ ಗಂಡಿನ ಜೀವನವು ನಾಶವಾಗಿ ಹುಚ್ಚರಾಗಿ ಅಲೆಯುತ್ತಿದ್ದಾರೆ. ಎಲ್ಲವೂ ಆಡಂಬರ, ದುಡ್ಡಿದ್ದವರ ಬಳಿ ಮಾತ್ರ ಗೆಳೆಯರಿರುತ್ತಾರೆ. ಅಂದು ಅಧಿಕಾರ ಇದ್ದವರು ಇಲ್ಲದವರಿಗೆ ತಮ್ಮಿಂದ ಸಹಾಯ ಹಸ್ತ ನೀಡುತ್ತಿದ್ದರು. ಆದರೆ ಇಂದಿನ ಸ್ನೇಹಿತರು ಅಧಿಕಾರ ಬಂದ ಕೂಡಲೇ ಜೊತೆಯಾಗಿದ್ದವರಿಂದ ಬೇರಾಗುತ್ತಾರೆ. ತಮ್ಮ ಸ್ವಾರ್ಥ ಹಾಗೂ ಹಿತಾಸಕ್ತಿಗಳಿಗೆ ಮಹತ್ವ ಕೊಡುತ್ತಾರೆಯೇ ಹೊರತು ಸ್ನೇಹಕ್ಕಲ್ಲ.ಎನ್ನುವದು ಕಟುಸತ್ಯ.

ಕೊನೆಯ ಮಾತು 
'ಸ್ನೇಹ' ಧರೆಯ ಪರಿಶುದ್ಧ ಸಂಬಂಧವು ಅದಕ್ಕೆಕಳಂಕ ತರುವ ಕೃತ್ಯ ಯಾರೇ ಮಾಡಿದರು, ಭವಿಷ್ಯದಿ ಖಂಡಿತ ಪಶ್ಚಾತಾಪ ಪಡಬೇಕಾಗುವದು.ಅದಕ್ಕೆ ದಯವಿಟ್ಟು ಸ್ನೇಹದ ಹೆಸರಲ್ಲಿ ಆಟವಾಡಬೇಡಿ,ನಂಬಿಕೆ ದ್ರೋಹ ಮಾಡದಿರಿ, ಜೊತೆ ಇದ್ದೆ ಹಿತ ಶತ್ರುಗಳಾಗದಿರಿ ಅಂದಾಗ ಮಾತ್ರ ಸ್ನೇಹಿತರ ದಿನ ಆಚರಣೆ ಮಾಡಿದ್ದಕ್ಕೂ ಸಾರ್ಥಕವಾಗುತ್ತದೆ. 

✍ ಡಾ.ಮಲ್ಲಿಕಾರ್ಜುನ ಎಸ್ ಆಲಮೇಲ. ಯಡ್ರಾಮಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಬೆಳಗು...

ಕವನ     ಬೆಳಗು ಬೆಳಗು ಬಾ ಬೆಳಕು ಬೆಳದಿಂಗಳ ಬೆಳಕು ಚೆಲ್ಲುತ ರಂಗು ರಂಗಿನ ಕಾಮನಬಿಲ್ಲಿನಂತೆ ಮಿನು ಮಿನುಗುವ ಬೆಳ್ಳಿಚುಕ್ಕಿಯಂತೆ ರಂಗು ರಂಗಿನ ರಂಗೋಲಿಯಂತ...