ಬೋಳು ಹಣೆ
ನಿತ್ಯವೂ ಕುಂಕುಮ ಶೋಭಿತಳಾಗಿರುತಿದ್ದ
ನಮ್ಮವ್ವನ ಹಣೆ ಇಂದೇಕೆ ಬೋಳಾಗಿದೆ
ಹಸಿರು ಬಳೆಗಳಿಂದ ಕಂಗೊಳಿಸುತಿದ್ದ
ಕೈಗಳು ಅದೇಕೆ? ಬಣ ಬಣ.
ಮುತ್ತಿನ ಮುಗುತಿಯಿಲ್ಲ
ಕೊರಳಲಿ ಮಾಂಗಲ್ಯವಿಲ್ಲ
ಬೋಳಾದ ಮಂಡೆಯ ಮೇಲೆ
ಬಿಳಿಸೀರೆಯ ಹೊದಿಕೆ
ಇದೇನು ಸಂಪ್ರದಾಯ?
ಹೆತ್ತ ತಾಯಿ, ಹೊತ್ತ ತಾಯಿ ಹೆಣ್ಣು
ಬೆನ್ನೆಲುಬಾಗಿ ನಿಲ್ಲುವವಳು ಹೆಣ್ಣು
ಮನೆ ಬೆಳಗುವವಳು ಹೆಣ್ಣು
ಶೋಭಿತಳು ಹೆಣ್ಣು
ಪ್ರತಿ ವ್ಯಕ್ತಿಗೆ ಸರ್ವಸ್ವ ಹೆಣ್ಣು
ಎಂದೆಲ್ಲ ಹೇಳಿದ ಇವರು
ಹುಟ್ಟು ಸಾವು ಸಹಜ ಎಂದರು
ಬರುವಾಗ ಬೆತ್ತಲೆ ಹೋಗುವಾಗ ಬೆತ್ತಲೆ
ಎಂದವರು,ಮತ್ತೇನು ಈ ಕೆಂತಿ?
ಇದಾವ ನ್ಯಾಯ ಯಾವ ಧರ್ಮ
ಶೃಂಗಾರ ಶೋಭಿತಳಾದ
ಭೂದೇವಿಗೆ ಹೋಲಿಸಿ
ಹಸಿರಂತೆ ಹೂವಾಗಿ ಹಣ್ಣಾಗಿ
ಕಂಗೊಳಿಸಿ,ಉಸಿರು ಉಸಿರಾಗಿಸಿದ
ಭೂಮಾತೆಯನ್ನೇ ಬರಡಾಗಿಸಿದಂತೆ
ಆಗುವುದಿಲ್ಲವೇ?
ಕಿತ್ತೆಸೆಯಿರಿ ನಿಮ್ಮ ವಿಚಾರಗಳನು
ಬೆಳಗಿಸಿ ದಿವ್ಯ ಜ್ಯೋತಿಯನು
ಸ್ತ್ರೀಕುಲಕೆ.
✍ ಶ್ರೀಧರ ಗಸ್ತಿ ಧಾರವಾಡ.
(ನಿಮ್ಮ ಬರಹಗಳ ಪ್ರಕಟಣೆ ಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ