ಓಂ ಎನ್ನ ಗುರುವೆ ನಿಮಗಿದೊ ನಮನ,
ನಿನ್ನೊಲುಮೆಯಿಂದ ಸಾಗುತಿದೆ ನನ್ನ ಅಕ್ಷರ ಯಾನ.
ಬಾಳ ಕತ್ತಲೆಯ ಹಾದಿಯ ಕೈದೀವಿಗೆ ನೀವು, ಮಾತೆಯಂದದಿ ಪೊರೆದ ವಾತ್ಸಲ್ಯಮಯಿ ತಾವು.
ಅಜ್ಞಾನದ ಗೂಡಾದ ಮನದೊಳಗೆ ಇಣುಕಿ,
ಹೆಕ್ಕಿ ತೆಗೆದಿರಿ ನೀವು ಮೌಢ್ಯಗಳ ಕೆದಕಿ.
ಬಿದ್ದ ಬೀಜ ಮೊಳಕೆಯೊಡೆಯುವಂದದಿ, ಅಕ್ಷರ ಬೀಜವನೆ ಬಿತ್ತಿದಿರಿ ಮನದಿ.
ಬೆಳಗುವಾಸೆಯ ಹಣತೆಗೆ ತೈಲವೆರೆದಿರಿ ನೀವು,
ಮಿನುಗುವಾಸೆಯ ತಾರೆಗೆ ಅರುಣ ಕಿರಣ ನೀವು.
ಮೇಲು ಕೀಳು ಜಾತಿ ಭೇದ ಮರೆಸಿದಿರಿ,
ನಾನೆಂಬುದು ಅಳಿದು ನಾವೆಂಬುದ ಕಲಿಸಿದಿರಿ.
ಒರಟು ಶಿಲೆಯಂತಿದ್ದವರು ನಾವಲ್ಲವೇ,
ಕಡೆದ ಶಿಲ್ಪವಾಗಿಸಿದವರು ನೀವಲ್ಲವೇ ಗುರುವೇ ನೀವಲ್ಲವೇ?
ಜ್ಞಾನದ ಶರಧಿಯ ಪಯಣಿಗರು ನಾವು,
ತೀರವ ಸೇರಿಸೋ ಅಂಬಿಗನೆ ಗುರುವು.
ದೇಶದ ಗಡಿ ಕಾಯುವ ಸೈನಿಕರು ಅಲ್ಲಿ,
ದೇಶಕಟ್ಟುವ ನಿಜ ಯೋಗಿಯೂ ನೀವಿಲ್ಲಿ.
ಕಾಣದ ದೇವರ ಜಗಕೆ ಹಾದಿ ತೋರಿದಿರಿ,
ಕಾಣುವ ದೈವವೇ ನೀವು ಎಲ್ಲರಿಗೂ ಮೊದಲಾದಿರಿ.
ಗುರು ಬ್ರಹ್ಮ ಗುರು ವಿಷ್ಣು
ಗುರು ದೇವೋ ಮಹೇಶ್ವರ
ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈಶ್ರೀ ಗುರುವೇ ನಮಃ.
ಮಧುಮಾಲತಿ ರುದ್ರೇಶ್ ಬೇಲೂರುˌˌˌ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ