ಶನಿವಾರ, ಡಿಸೆಂಬರ್ 11, 2021

ಆಡಂಬರದ ವಿವಾಹಗಳು ಮತ್ತು ಬಡ, ಮಧ್ಯಮ ವರ್ಗದವರ ತಾಪತ್ರಯಗಳು(ಲೇಖನ) - ಹರ್ಷ ಹೆಚ್. ಎಲ್. (ಬರಹರ್ಷ).

ಬೇರೆ ದೇಶದಲ್ಲಿ ಹೇಗೋ ಏನೋ ನಮ್ಮ ದೇಶದಲ್ಲಂತೂ ಅದರಲ್ಲೂ ಈ ಮಧ್ಯಮ ಕುಟುಂಬಗಳಲ್ಲಂತೂ ಹೆಣ್ಣು ಹುಟ್ಟಿದರೆ ನಾವ್ ಸೋತ್ವಿ ಎಂದು ಭಾವಿಸಿ ಹುಟ್ಟಿನಿಂದಲೇ ಮದುವೆಗೆ ಕೂಡಿಡುವ ಪದ್ದತಿ ಹೊಸದೇನಲ್ಲ.... ಆದರೆ ಈಗ ಮತ್ತೊಂದು ಹೊಸ ಪದ್ದತಿ ಜಾರಿ ಆಗುತ್ತಿದೆ... ಏನಪ್ಪಾ ಅಂತೀದಿರ?  ಎಷ್ಟೋ ಬಡ ಹಾಗೂ ಮಧ್ಯಮ ಕುಟುಂಬದವರು ಹೆಣ್ಣು ಮಗಳು ಓಡಿ ಹೋದರೆ ಸಾಕು ಮದುವೆ ಖರ್ಚು ಉಳಿಯುತ್ತೆ ಎಂದು ಭಾವಿಸುವ ಕಾಲ ಒಂದು ಬಂದಿದೆ ಎಂದರೆ ನಂಬುವಿರೇ?? ಇದು ಕೇಳಲು ಅಹಿತವಾಗಿದ್ದರೂ ಕಟು ಸತ್ಯ.... ವಯಸ್ಸಿಗೆ ಬಂದ ಮಗಳು ಮನೆಯಲ್ಲಿ ಕೂತಿರುವುದನ್ನು ನೋಡಲಾರದೆ ಮದುವೆಯ ಮಾಡಲು ಸಾಧ್ಯವಾಗದೇ ಕೈ ಚೆಲ್ಲಿ ಕುಳಿತ ಮನೆಯವರು ಪ್ರೀತಿಸಿಕೊಂಡು ಹೋಗಿದ್ದರೆ ಹೇಗೋ ನಂತರ ಕರೆದುಕೊಂಡು ಬರಬಹುದಿತ್ತು ಎಂದು ಮಾತಾಡುವುದನ್ನ ಕೇಳಿಸಿಕೊಂಡ ಮಗಳು., ನಾನು ಯಾಕೆ ಯಾರನ್ನೂ ಪ್ರೀತಿಸಿಲ್ಲ ಎಂದು ವ್ಯಥೆ ಪಟ್ಟ ಸಂಗತಿ ಒಂದು ಕಡೆ ಆದರೆ... ಓಡಿಹೋದ ಮಗಳನ್ನು ನೆನೆದು "ಅಲ್ಲ, ಓಡಿ ಹೋಗೋದು ಹೋದಳು ಒಳ್ಳೆ ಆಸ್ತಿ ಇರೋನ್ನ ಕಟ್ಟ್ಕೋಳೊದ್ ಬಿಟ್ಟು ಇವ್ನ್ ಯಾರೋ ಪರದೇಸಿ ನ ಕಟ್ಟಕೊಂಡ್ ಹೋಗವಳೇ" ಅಂತ ಮಾತಾಡೋ ಕಾಲ ಬಂದಿದೆ!...  ಇದಕ್ಕೆಲ್ಲ ಒಂದೇ ಕಾರಣ *ವಿಜೃಂಭಣೆ ಇಂದ ಮದುವೆ ಮಾಡಬೇಕೆಂಬ ಕೆಟ್ಟ ಆಸೆ ಹಾಗೂ ವರದಕ್ಷಿಣೆ* ಸುಮಾರಾಗಿ ದೇವಸ್ಥಾನದಲ್ಲಿ ಮದುವೆ ಆದ್ರೆ ಅದು ಮದುವೆ ಅಲ್ಲವಾ?? ವಿಜೃಂಭಣೆಯಿಂದ ವೈಭವವಾಗಿ ಮದುವೆ ಆದರೆ ಮಾತ್ರ ಅದು ಮದುವೇನಾ..?? ಮದುವೆ ಗೆ ಖರ್ಚು ಮಾಡುವ ಶಕ್ತಿ ಇಲ್ಲದೆ ಓಡಿಹೋಗಬಾರದಿತ್ತಾ? ಓಡಿ ಹೋದ್ರು ದುಡ್ಡಿರೋರ್ ಹಿಂದೆ ಹೋಗಬಾರದಿತ್ತಾ? ಅಂತೆಲ್ಲಾ ಯೋಚಿಸುವ ನಿಮಗೆ ಒಂದು ಸಣ್ಣ ಪ್ರಶ್ನೆ.. ಮದುವೆ ಅನ್ನೋ ಸಣ್ಣ ಕಾರ್ಯಕ್ಕೆ ಮಾನ ಮರ್ಯಾದೆಯನ್ನೇ ಕಳಚಿ ಕೊಳ್ಳಲು ನಿಂತಿರುವಿರಾ? ನಿಂತಿರುವಿರಾದರೂ ಇದು ನಿಮ್ಮ ತಪ್ಪಲ್ಲ ನಮ್ಮ ಸಮಾಜದ ತಪ್ಪು ಬಿಡಿ... ಅಕ್ಕ ಪಕ್ಕ ಅವರಿವರನು ನೋಡಿ ಅವರಂತೆಯೇ ನಾವು ಮದುವೆ ಮಾಡಬೇಕು ಎಂದು ಏಕೆ ಬಯಸಬೇಕು? ಹಾಸಿಗೆ ಇದ್ದಷ್ಟು ಕಾಲು ಚಾಚಬೇಕೆನ್ನುವ ಕನಿಷ್ಠ ಬುದ್ಧಿಯನ್ನೂ ಉಳಿಸಿಕೊಳ್ಳಲಾರದ ಜನ ನಮ್ಮ middle class family ಅವರು.. ನಾನ್ ಮತ್ತೆ ಹೇಳುತ್ತಿರುವೆ ಇದು ಮಧ್ಯಮ ಹಾಗೂ ಬಡ ಕುಟುಂಬಗಳಿಗೆ ಮಾತ್ರ.... ಅಲ್ಲ ರೀ ಕೋಟ್ಯಂತರ ಆಸ್ತಿ ಮಾಡ್ಕೊಂಡಿರುವಂತ ಲಕ್ಪತಿಗಳೇ ಇಂದು ರಿಜಿಸ್ಟರ್ ಮ್ಯಾರೇಜ್ , ಸರಳ ವಿವಾಹ , ಟೀ ವಿವಾಹ , ಕಾಫಿ ವಿವಾಹ ಅಂತ ನೂರೆಂಟು ತರ simple  ಆಗಿ ಮದುವೆ ಮಾಡಿಕೊಂಡು ಉಚಿತವಾಗಿರುವಾಗ.. ದುಡ್ಡೇ ಇಲ್ಲದೆ ಸಾಲ ಮಾಡಿ ಮದುವೆ ಮಾಡುವ ಅನಿವಾರ್ಯತೆಯಾದರು ಏನು?? ಮೊದಲು, ವೈಭವಾಯುತವಾಗೆ ಮದುವೆ ಮಾಡಬೇಕು ಎನ್ನುವ ನಿಮ್ಮ ಮೂಢ ಆಚರಣೆಯನ್ನು ತಲೆಯಿಂದ ತಗೆದು ಹಾಕಿ. ನಮ್ಮ ದೇಶದಲ್ಲಿ ಗಂಡಿಗೆ ಬರವಿಲ್ಲ ಹೆಣ್ಣಿಗೆ ಇದೆ... ಒಬ್ಬ ಅಲ್ಲದಿದ್ದರೆ ನೂರು ಗಂಡು ಬರುತ್ತಾರೆ.. ದುಡ್ಡಿರೋರಿಗೆ ಕೊಡಬೇಕು ಮಗಳನ್ನು ಅನ್ನುವ ಬದಲು ಒಳ್ಳೆ ಮನಸಿರುವ ಮನೆಗೆ ಕೊಡಿ.. ದುಡ್ಡಿನ ಆಸೆಗೆ ಮದುವೆ ಆಗುವ ಗಂಡು ಕೇವಲ ದುಡ್ಡನ್ನೇ ನೋಡುತ್ತಾನೆಯೇ ವಿನಃ ನಿಮ್ಮ ಮಗಳ ಮನಸನ್ನಲ್ಲ... ಮನಸ ನೋಡಿ ಮದುವೆ ಆಗುವವ ದುಡ್ಡಿನ ಆಸೆಗೆ ಬೀಳಲಾರ.. ದುಡ್ಡನ್ನೇ ಹುಡುಕುತ್ತಾ ಹೋಗುವ ಹುಡುಗನಿಗೆ ಹೆಣ್ಣೇ ಕೊಡಬೇಡಿ... ಆಗೇನು ಆತ ಗಂಡನ್ನೇ ಮದುವೆ ಆಗುವನೇ?? ಇಲ್ಲವಲ್ಲಾ,  ಕೊನೆಗೆ ದುಡ್ಡಲ್ಲ ಮುಖ್ಯ ಎಂದು ಅರಿತು ಒಳ್ಳೆಯ ಬಡ ಹೆಣ್ಣುಮಗಳನ್ನೇ ಮದುವೆ ಆಗುತ್ತಾನೆ.. ಅವರಿವರಿಗೆ ಹೆಣ್ಣನ್ನು ಕೊಟ್ಟು ಮದುವೆ ಮಾಡಿಬಿಡಬೇಕು ಎನ್ನುವುದನ್ನು ಬಿಟ್ಟು ಅವಳನ್ನು ಓದಿಸಿ.. ಅಯ್ಯೋ ಹೆಣ್ಣನ್ನ ಓದಿಸಿ ಏನಾಗಬೇಕು? ಗಂಡನ್ ಮನೆಗೆ ತಗೊಂಡ್ ಹೋಗತಳೆ ಅಂತೆಲ್ಲಾ ಯೋಚಿಸಬೇಡಿ? ನೀವು ಹೆಣ್ಣು ಮಕ್ಕಳನ್ನ ಸಾಕಿರೋದಕ್ಕೆ ಹೆಣ್ಣು ದುಡಿಯುವವರೆಗೂ ತನ್ನ ತಂದೆ ತಾಯಿಗೆ ತನ್ನ ಸಂಬಳದ ಇಷ್ಟು ಭಾಗ ಕೊಡಬೇಕೆಂದರೆ ಅದರಲ್ಲಿ ತಪ್ಪೇನಿಲ್ಲ..ಇದೆಲ್ಲಾ ಸಾಧ್ಯವಾ?  ವಿಶಾಲ ಮನಸ್ಸಿನಿಂದ ಯೋಚಿಸುವವರಿಗೆ ಎಲ್ಲವೂ ಸಾಧ್ಯ.. ಹೆಣ್ಣು ಸರಕಲ್ಲ.. ಯಾವಾಗಲೂ ಸಾಗು ಹಾಕಲು ನೋಡಬೇಡಿ.
- ಹರ್ಷ ಹೆಚ್ ಎಲ್ (ಬರಹರ್ಷ)
ಶೇಷಾದ್ರಿಪುರಂ ಸಂಜೆ ಪದವಿ ಕಾಲೇಜು
ವಿದ್ಯಾರ್ಥಿ( ತೃತೀಯ ಬಿ. ಕಾಂ).


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...