ಶನಿವಾರ, ಏಪ್ರಿಲ್ 8, 2023

ದೇವತೆ (ಕವಿತೆ) - ಸಬ್ಬನಹಳ್ಳಿ ಶಶಿಧರ.

ಅಮ್ಮಾ ನೀನು ನನ್ನ ಬಾಳ
ನಂದಾ ದೀಪವು
ಸಾಟಿ ಇಲ್ಲ ನಿನ್ನ ಪದಕೆ
ಯಾವ ಮಂತ್ರವು

ನೀನು ಹಚ್ಚಿದಂತ ದೀಪ
ಬದುಕ ಹಸನು ಮಾಡಿದೆ
ಹೇಳಿ ಕೊಟ್ಟ ಬುದ್ಧಿ ಪಾಠ
ಮನದ ಕಣ್ಣ ತೆರೆಸಿದೆ

ನಿನ್ನ ನೆನೆದ ಒಡನೆ ಒಡಲು
ನವಿಲಿನಂತೆ ನಲಿವುದು
ನೂರು ಮಂತ್ರ ಜಪಿಸಿದಂತೆ
ಹೃದಯ ತುಂಬಿ ನಗುವುದು

ಅಮೃತಕು ಮಿಗಿಲಾದ ಹಾಲ
ನನಗೆ ಕುಡಿಸಿದೆ
ರೋಗ ರುಜಿನೆ ಬಾರದಂತೆ
ನನಗೆ ರಕ್ಷೆ ನೀಡಿದೆ

ಬಣ್ಣಿಸಲು ಪದಗಳಿಲ್ಲ
ತಾಯಿ ನಿನ್ನ ತ್ಯಾಗಕೆ
ಶಿರಬಾಗಿ ವಂದಿಸುವೆ
ನಿತ್ಯ ನಿನ್ನ ಚರಣಕೆ.
     - ಸಬ್ಬನಹಳ್ಳಿ ಶಶಿಧರ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...