ಮಕ್ಕಳೆಂದು ಹಿಗ್ಗುವ ಮನದಲಿ
ವೇದನೆ ತುಂಬಿದ ಕಣ್ಣಾಲೀ||ಪ||
ಅಪ್ಪನ ದಿನವಿದೆಯೆಂದು
ಅಪ್ಪನ ಬಳಿ ಬಂದು
ಕುಶಲೋಪಚಾರ ಕೇಳದೆ
ಥಟ್ಟನೆ ಒಂದು ಭಾವಚಿತ್ರವ ಸೆರೆಹಿಡಿದ! ||೧||
ನಮ್ಮ ಹಸಿವುನೀಗಿಸಿಕೊಳ್ಳುವ ಮುನ್ನ
ಒಮ್ಮೆ ನೆನೆಯಿರಿ! ಅಪ್ಪನ ಸಹಸ್ರ ಬೆವರಿನ ಹನಿಗಳನ್ನ!
ಶ್ರಮ ಸುರಿದ ಸಂಸಾರದ ಒಡಲ ತುಂಬಲು
ತನ್ನ ಒಡಲಿಗೆ ತಣ್ಣೀರಿನ ಬಟ್ಟಲು!||೨||
ರಾಶಿ ರಾಶಿ ಬಟ್ಟೆ ಖರೀದಿಸುವ ಮುನ್ನ
ಒಮ್ಮೆ ನೋಡಿರಿ!ಅಪ್ಪನ ಅಂಗಿಯ ದಾರದ ಹೊಲಿಗೆಯನ್ನ!
ಹಗಲು-ಇರುಳು ಎನ್ನದೆ ದುಡಿಯುತ್ತಿರುವುದು
ನನ್ನಯ ಕಣ್ಣಾಗಿರುವ ಆಸೆಗಳ ಪೂರೈಸುವುದು!||೩||
ಬಟ್ಟೆಗೆ ತಕ್ಕ ಬಣ್ಣ ಬಣ್ಣದ ಪಾದರಕ್ಷೆ ತೆಗೆದುಕೊಳ್ಳುವ ಮುನ್ನ
ಒಮ್ಮೆ ಮುಟ್ಟಿ ನೋಡಿ! ಬರಿಗಾಲಲ್ಲಿ ನಡೆದು ಒಡೆದ ಹಿಮ್ಮಡಿಯನ್ನ!
ಎಲ್ಲರ ಒಳಿತಿಗಾಗಿ ಮೀಸಲಿಡುತ್ತಿದ್ದ ಸಿರಿವಂತಿಕೆ!
ತನಗಾಗಿ ತಾನು ಎನ್ನುವುದ ಮೆರೆತಿದ್ದು,ಅವನ ಹೃದಯವಂತಿಕೆ!||೪||
ಕಾ(ಬೇ)ಡಿ ಕೇಳದೆ ಅಷ್ಟೈಶ್ವರ್ಯಗಳನು ಕೊಟ್ಟ ಜೀವಕೆ
ಸಣ್ಣದೊಂದು ನೋವ ನೀಡದಿರು, ಆ ನೊಂದ ಮನಕೆ
ಜೀವದ ಬೊಂಬೆ ಇರುವಾಗಲೇ!
ಅವರ ಸೇವೆ ಮಾಡು, ಹೆತ್ತ ಋಣವ ತೀರಿಸುವೆ ಆಗಲೇ!||೫||
- (ಶಿವಶೋಭ ಸುತೆ)ಶಿಲ್ಪಾ ಮಲ್ಲಿಕೇರಿಮಠ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ