ಹಸಿರಿನ ತಂಪಲ್ಲಿ ಅರಳಿದ ತಾವರೆ
ನಿನ್ನ ಚೆಲುವಿಗೆ ಸಾಟಿ ಇಲ್ಲವೇ ನೀರೆ
ಕೊಳದ ಪಂಕವೇ ನೀ ನಗಲು ಆಸರೆ
ಸೃಷ್ಟಿಯ ಸೊಬಗೆಲ್ಲ ನಿನ್ನ ಕೈಸೆರೆ
ಶ್ರೀ ಲಕ್ಷ್ಮಿಯ ಪ್ರಿಯ ಸಿಂಹಾಸನವಾದೆ
ಚೆಲುವ ಹೊಗಳಲು ನೀ ಉಪಮೆಯಾದೆ
ಕೆಸರೊಳಿದ್ದರೂ ಶುಭ್ರತೆಗೆ ಸಾಕ್ಷಿಯಾದೆ
ನಿರ್ಮಲ ಮನಸಿನ ಬಿಂಬ ನೀನಾದೆ
ರವಿ ಕಿರಣಕೆ ನೀ ಮುದಗೊಳ್ಳುವೆ
ಭಾಸ್ಕರನುದಕೆ ಅರಳಿ ನಗುವೆ
ತಾಯಿ ಶಾರದೆಗೂ ಪ್ರಿಯವೆನಿಸುವೆ
ಮೂಲೋಕದಲೂ ನೀ ಖ್ಯಾತಿಯಾಗಿರುವೆ
ಕಮಲ ಪಂಕಜ ನೈದಿಲೆ ಸರಸಿಜ
ಹಲವು ಹೆಸರು ಇಹುದು ಸಹಜ
ನಿನ್ನಿಂದ ಪಾಠ ಕಲಿಯಲಿ ಮನುಜ
ಅರಿತರೆ ಬದುಕು ಬಂಗಾರ ನಿಜ
ಮಧುಮಾಲತಿ ರುದ್ರೇಶ್ ಬೇಲೂರು