ಶನಿವಾರ, ನವೆಂಬರ್ 1, 2025

ನಾಳೆ ಇಂದ ಅಂಗಳ 'ಓದು-ಬರಹ' (ಕಥಾ-ಕಾವ್ಯ) ಕಮ್ಮಟ ಪ್ರಾರಂಭ.

ಅಂಗಳ ಕಮ್ಯುನಿಟಿ ಟ್ರಸ್ಟ್ ನ ವಿಚಾರ ಮಂಟಪ ಬಳಗ ಮತ್ತು ಕರ್ನಾಟಕ ರಾಜ್ಯ ಸ್ಪಂದನಸಿರಿ ವೇದಿಕೆ ಇವರ ಸಹಯೋಗದಲ್ಲಿ ಹಮ್ಮಿಕೊಂಡಿರುವ ಆರು ತಿಂಗಳ

*ಆನ್ ಲೈನ್ 'ಓದು- ಬರಹ' (ಕಥಾ-ಕವನ) ಕಮ್ಮಟ*
ದಿನಾಂಕ 03.11.2025 ರಿಂದ ಪ್ರಾರಂಭವಾಗಲಿದ್ದು, ದಿನಾಂಕ 03.11.2025 ರಂದು ಸಂಜೆ ಕಾರ್ಯಕ್ರಮದ ಉದ್ಘಾಟನೆಯನ್ನು ನಡೆಸಲಾಗುತ್ತಿದೆ. 

ಇಂದಿನ ಸ್ಪರ್ಧಾತ್ಮಕ ಆಧುನಿಕ ಯುಗದಲ್ಲಿ ಮೊಬೈಲ್ ಪೋನ್, ಆರ್ಟಿಪಿಷಿಯಲ್ ಇಂಟಲಿಜೆನ್ಸಿ ಮೊದಲಾದವುಗಳ ಪರಿಣಾಮದಿಂದಾಗಿ ಓದು ಬರವಣಿಗೆ ಯಂತಹ ಕ್ರಿಯಾಶೀಲ ಚಟುವಟಿಕೆಗಳಿಗೆ ಬೇಕಾದ ಸೂಕ್ತ ಶಿಕ್ಷಣ ಅಥವಾ ಮಾರ್ಗದರ್ಶನ ಸಿಗದೇ ಹೊಗುತ್ತಿರುವುದು ನಮಗೆಲ್ಲ ತಿಳಿದಿರುವ ವಿಚಾರವೇ. ಈ ಹಿನ್ನೆಲೆಯಲ್ಲಿ ಕವಿತೆ, ಲೇಖನ, ಕತೆ ಮುಂತಾದ ಸಾಹಿತ್ಯ ಪ್ರಕಾರಗಳನ್ನು ಕಲಿಯಲು ಆಸಕ್ತಿಯುಳ್ಳವರಿಗಾಗಿ ಆರು ತಿಂಗಳ ಅವಧಿಯ ಈ ಆನ್ ಲೈನ್ ಕಮ್ಮಟವನ್ನು ಪ್ರಾರಂಭಿಸಲಾಗುತ್ತಿದೆ. 

ಈ ಕಮ್ಮಟವು,

* ಸಾಹಿತ್ಯ ಎಂದರೇನು? ಸಾಹಿತ್ಯ ಪ್ರಕಾರಗಳು ಹಾಗೂ ಅವುಗಳ ಉಗಮ ಮತ್ತು ವಿಕಾಸ.
* ಆಯ್ದ ಸಾಹಿತ್ಯ ಪಠ್ಯಗಳ ಓದು.
* ಸಾಹಿತ್ಯ ಪಠ್ಯಗಳ ಭಾಷೆ, ಶೈಲಿ, ತಂತ್ರ, ವಿಧಾನ ಮೊದಲಾದವುಗಳ ಚರ್ಚೆ.
*  ಭಾಷಾ ಬಳಕೆ, ಶಬ್ಧಭಂಡಾರ, ಪ್ರಾಥಮಿಕವಾದ ಅಲಂಕಾರ, ವ್ಯಾಕರಣ, ಮೀಮಾಂಸೆ ಮೊದಲಾದವುಗಳ ಕಲಿಕೆ.
* ಕವಿತೆ, ಲೇಖನ, ಕತೆ ಮುಂತಾದ ಸಾಹಿತ್ಯ ಪ್ರಕಾರ ಮೊದಲಾದವುಗಳ ವಿವಿಧ ಮಾದರಿಗಳ ಕಲಿಕೆ.
* ಸಾಹಿತ್ಯ ರಚನೆ ಎಂದರೇನು?
* ಸಾಹಿತ್ಯ ಯಾಕಾಗಿ ಮೊದಲಾದ ವಿಚಾರಗಳ ಕಲಿಕೆ.
* ಸಾಹಿತ್ಯ ರಚನೆಯನ್ನು ಕುರಿತಾದ ತರಬೇತಿ.
* ಓದು ಮತ್ತು ಬರವಣಿಗೆಯಲ್ಲಿ ತಂತ್ರಜ್ಞಾನದ ಬಳಕೆ.
* ಕವಿತೆ ಅಥವಾ ಲೇಖನಗಳನ್ನು ಪ್ರಕಟಿಸುವ ಬಗ್ಗೆ, ಪುಸ್ತಕ ಪ್ರಕಟಣೆ ಇವುಗಳನ್ನು ಕುರಿತ ಮಾಹಿತಿ.
* ಪರೀಕ್ಷೆ, ಪ್ರಾತ್ಯಕ್ಷಿತೆ ಮೊದಲಾದವುಗಳನ್ನು ಪಠ್ಯಕ್ರಮವಾಗಿ ಒಳಗೊಂಡಿರುತ್ತದೆ.

ಈ ಕಮ್ಮಟಕ್ಕೆ ಸುಮಾರು 40 ಜನ ಅಭ್ಯರ್ಥಿಗಳ ನ್ನು ಆಯ್ಕೆ ಮಾಡಲಾಗಿದ್ದು, ಪ್ರತಿದಿನವೂ ಓದು-ಬರಹಕ್ಕೆ ಸಂಬಂಧಿಸಿದ ವಿವಿಧ ರೀತಿಯ ಅಭ್ಯಾಸಗಳನ್ನು ಮಾಡಿಸಲಾಗುವುದು. 

ತುಮಕೂರಿನ ಶಿಕ್ಷಕಿ ಹಾಗೂ ಸಾಹಿತಿಗಳೂ ಆದ ರಂಗಮ್ಮ ಹೊದೇಕಲ್ ಇವರು ಈ ಕಮ್ಮಟವನ್ನು ಉದ್ಘಾಟಿಸಲಿದ್ದು,  ಶ್ರೀ ಚಂದ್ರಶೇಖರ ಪಡೆಸೂರ್ ಇವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಬೇರೆ ಸಂಪನ್ಮೂಲ ವ್ಯಕ್ತಿಗಳು ತರಗತಿಗಳನ್ನು ತೆಗೆದುಕೊಳ್ಳಲಿದ್ದಾರೆ ಎಂದು ಕಮ್ಮಟದ ನಿರ್ದೇಶಕರಾದ ಧನುಷ್ ಎಚ್ ಶೇಖರ್ ಇವರು ತಿಳಿಸಿರುತ್ತಾರೆ.

ಶುಕ್ರವಾರ, ಅಕ್ಟೋಬರ್ 31, 2025

ಸುಮ್ಮನೆ ಆಗಲಿಲ್ಲ ಕರ್ನಾಟಕದ ಏಕೀಕರಣ-ಜಿ.ಎಸ್.ಕಲಾವತಿಮಧುಸೂದನ, ಹಾಸನ.

ನಾವು ನವೆಂಬರ್ ಮಾಸದಲ್ಲಿ ಮಾತ್ರ ನಮ್ಮ ನಾಡ ಹಬ್ಬವನ್ನು ಗೌರಿಗಣೇಶ, ದೀಪಾವಳಿ, ಯುಗಾದಿ ಹಬ್ಬಗಳಂತೆ ಆಚರಿಸಿ ಉಳಿದಂತೆ ಸ್ಥಬ್ಧರಾಗಿಬಿಡುತ್ತೇವೆ. ಆದರೇ ಆ ಹಬ್ಬದ ಹಿನ್ನೆಲೆ, ಅದಕ್ಕಾಗಿ ನಡೆಸಿದ ಹೋರಾಟ, ಹರಿಸಿದ ನೆತ್ತರು, ಅನುಭವಿಸಿದ ಶಿಕ್ಷೆ, ಸಜೆ, ತ್ಯಾಗ, ಬಲಿದಾನ, ಒಗ್ಗಟ್ಟು, ಪಟ್ಟು ಇವುಗಳನ್ನು ಕೇಳಿದಾಗ ಮೈ ರೋಮಾಂಚನಗೊಳ್ಳುತ್ತದೆ. ಅಂತಹ ಮಹಾತ್ಮರಿಗೆ ಜನ್ಮವಿತ್ತ ಕನ್ನಡಾಂಬೆಯ ಬಗ್ಗೆಯೇ ಹೆಮ್ಮೆ ಎನಿಸುವುದಲ್ಲವೇ..?! ಆ ಮಣ್ಣಿನ ಗಾಳಿಯೇ ನಮ್ಮೆಲ್ಲರ ಚೇತನವಾಗಿರುವುದೇ ನಮ್ಮ ಪುಣ್ಯವೆನಿಸುವುದು. ಅಂತಹಾ ಹೆಗ್ಗಳಿಕೆಯ ಹೋರಾಟಗಳ ಆಳ, ಒಳಹೊರಗುಗಳನ್ನು ಸ್ಮರಿಸುವ ಮೂಲಕ ಅರ್ಥಪೂರ್ಣ ಕ್ಷಣಗಳನ್ನು ಆಗಾಗ ಮೆಲುಕು ಹಾಕುತ್ತಾ ಆಚರಿಸುವುದು, ಸಂಭ್ರಮಿಸುವುದು ಸಾರ್ಥಕವಾದೀತು. 
  ಹೀಗೆ ನಮ್ಮ ನಾಡಿನ ಹಿರಿಮೆಗರಿಮೆಗಳನ್ನು, ಹಿನ್ನೆಲೆಯನ್ನು, ತ್ಯಾಗ ಬಲಿದಾನಗಳಿಂದ ಪಡೆದ ಇತಿಹಾಸದ ವೈಶಿಷ್ಟ್ಯವನ್ನು ಮಕ್ಕಳೊಂದಿಗೆ ಹಂಚಿಕೊಳ್ಳುವ ಮೂಲಕ ನಾಡು ನುಡಿಯ ಬಗೆಗೆ ಭಕ್ತಿ ಪ್ರೀತಿಯನ್ನು ಬೆಳೆಸುವುದು ಪ್ರತಿಯೊಬ್ಬ ಪೋಷಕರ ಶಿಕ್ಷಕರ ಹೊಣೆಗಾರಿಕೆಯಲ್ಲವೇ..? ಏಕೆ ಈ ವಿಷಯದ ಪ್ರಸ್ತಾಪವೆಂದರೇ, ರಾಜ್ಯೋತ್ಸವ ಕುರಿತು ಕವನ ರಚನೆಗೆ ತಿಳಿಸಿದರೇ ಈ ಸಂಭ್ರಮದ ಹಿಂದಿರುವ ಹೋರಾಟದ ಕುರಿತು ಒಂದೆಡೆಯೂ ಒಂದು ಪದವೂ ಪ್ರಸ್ತಾಪ ಇರದಿರುವುದು ಹತಾಶೆಯೊಂದಿಗೆ ವಿಷಾದವೆನಿಸಿ, ಈ ಲೇಖನ ಬರೆಯಲು ಕಾರಣವಾಯಿತು. ಯಾವುದೇ ಸಂಭ್ರಮದ ಹಿಂದಿನ ಸಂಕಟ ಹೋರಾಟಗಳ ಸ್ಮರಣೆ ನಮ್ಮಲ್ಲಿರುವುದು ಮಾನವೀಯತೆ, ಮತ್ತು ಮಾನವನಲ್ಲಿರಬೇಕಾದ ಬಹು ಮುಖ್ಯವಾದ ಉತ್ತಮ ಗುಣ ಕೃತಜ್ಞತೆ. ಉಪಕಾರ ಸ್ಮರಣೆ. ಅದಿಲ್ಲದ ಸಂಭ್ರಮ ಅದರ ಹಿಂದಿರುವ ಶ್ರಮಕ್ಕೆ ತೋರುವ ಅಗೌರವವಲ್ಲವೇ..?ಏನಾದರಾಗು ಮೊದಲು ಮಾನವನಾಗು” ಎಂಬುದು ಬೋಧನೆಗೆ ಬರಹಕ್ಕಷ್ಟೇ ಸೀಮಿತವಾಗದೇ ಕಾರ್ಯಗತವಾದಾಗ ಆ ವಾಕ್ಯ ಸಾರ್ಥಖ್ಯವಲ್ಲವೇ.?. 
 ಮೂಕಪ್ರಾಣಿಯಾದರೂ ಶ್ವಾನಕ್ಕೆ ಒಂದು ದಿನ ಒಂದು ತುತ್ತು ಅನ್ನ ಹಾಕಿದರೇ ಧನ್ಯತೆಯಿಂದ ಅವರ ಮನೆಯ ಬಾಗಿಲನ್ನು ಕಾಯುವ ಮೂಲಕವಾದರೂ   ಕೃತಜ್ಞತೆಯಿಂದ ತನ್ನ ಸೇವೆಯನ್ನು ಸಲ್ಲಿಸುತ್ತದೆ. ಇಂತಹಾ ವಿಷಯದಲ್ಲಿ ಮಾನವ ರಾದ ನಾವು ಕೃತಜ್ಞತೆಯನ್ನು ಮರೆತಾಗ ಮಾನವ ಕುಲಕ್ಕೆ ಅಪಮಾನವಲ್ಲವೇ..? ಹಾಗಾಗಿ ಇಂತಹಾ ವಿಶಿಷ್ಟವಾದ ನಮ್ಮ ಕನ್ನಡ ನಾಡಿನ ಹೆಮ್ಮೆಯ ಅವಿಸ್ಮರಣೀ ಯ ದಿನವನ್ನು ನಾಡಿನಾದ್ಯಂತ ಅತ್ಯಂತ ಸಂಭ್ರಮದಿಂದ ಆಚರಿಸಲ್ಪಡುವ ಕನ್ನಡ ರಾಜ್ಯೋತ್ಸವದ ಸಂದರ್ಭವನ್ನು, ಅದರ ಹಿನ್ನೆಲೆಯನ್ನು, ಇತಿಹಾಸದ ಪುಟಗಳನ್ನು ಹೆಮ್ಮೆಯಿಂದೊಮ್ಮೆ ತೆರೆದು ನೋಡುವ ಮೂಲಕ  ಪ್ರಾಥಃಸ್ಮರಣೀಯರ ಸ್ಮರಣೆಯೊಂದಿಗೆ ಸಂಭ್ರಮದ
ಸಮರ್ಪಣೆಯಲ್ಲಿ ಕೃತಜ್ಞತೆ ಸಲ್ಲಿಸೋಣ..

 ಶಾತವಾಹನರು ಕನ್ನಡದ ಮೊದಲ ಅರಸು ಮನೆತನದವರು. ನಂತರ ಹಲವು ವರುಷಗಳ ಕಾಲ ತಮಿಳುನಾಡಿನ ಪಲ್ಲವರ ವಶವಾಗಿತ್ತು. ಪಲ್ಲವರ ಅಡಿಯಾಳಾ ಗಿ ಕಷ್ಟದಲ್ಲಿ ಸಿಲುಕಿದ್ದ ಕನ್ನಡಿಗರನ್ನು ಕದಂಬರ ಮನೆತನದ ಅರಸ ಮಯೂರ ವರ್ಮ ಬಿಡುಗಡೆಗೊಳಿಸಿದ್ದಲ್ಲದೇ ಕನ್ನಡಿಗರ ನೆಲೆಯನ್ನು ಭದ್ರಗೊಳಿಸಿದ.
 ಆ ಬಳಿಕ ಬಂದ ಚಾಲುಕ್ಯರು, ಗಂಗರು, ಹೊಯ್ಸಳರು, ರಾಷ್ಟ್ರಕೂಟರು, ಹಾಗೂ ವಿಜಯನಗರದ ಅರಸರ ಕಾಲದ ಆಳ್ವಿಕೆಯು ಸ್ವರ್ಣಾಕ್ಷರದಲ್ಲಿ ಬರೆದಿಡುವಂತಹಾ ಬಂಗಾರದ ಯುಗವೆನಿಸಿತ್ತು. ನಾಡು ನುಡಿ ಸಂಸ್ಕೃತಿ, ವೈಭವ ಉತ್ತುಂಗಕ್ಕೇರಿದ ಕಾಲವೇ ಅದಾಗಿತ್ತು. ವಿಜಯನಗರದ ಸಾಮ್ರಾಜ್ಯದ ಅರಸರ ಆಳ್ವಿಕೆಯು ಕೊನೆಗೊಂಡ ನಂತರ ಕನ್ನಡಿಗರು ಬೇರೆಬೇರೆ ಅರಸರುಗಳ ಪಾಲಾಗಿ ಹರಿದು ಹಂಚಿ ಹೋದರು. 

ಬ್ರಿಟೀಷರ ಆಳ್ವಕೆಯಲ್ಲಿ ಕನ್ನಡಿರು ಸುಮಾರು ೨೦ ಬೇರೆಬೇರೆ ಆಳ್ವ್ವಿಕೆಯಡಿಯಲ್ಲಿ ಹಂಚಿಹೋದರು. ಬಾಂಬೆ ಪ್ರೆಡೆನ್ಸಿಯ ಆಡಳಿತ ಭಾಷೆ ಮರಾಠಿ. ನಿಜಾಮರದ್ದು ಉರ್ದು. ಹಾಗೂ ತೆಲುಗು, ಮದರಾಸಿನವರದ್ದು ತಮಿಳು. ಹೀಗಿರುವಾಗ ಕನ್ನಡಿಗರಿಗೆ ಎಲ್ಲಿಯ ಸ್ಥಾನ..? ಈಗಿನ ಸ್ಥಿತಿಯೂ ಅದಕ್ಕಿಂತ ಭಿನ್ನವಾಗಿಲ್ಲವೆಂಬುದು ವಿಷಾದಕರವಾದ ಸಂಗತಿ. ಹೀಗೆ
ಕನ್ನಡ ನುಡಿಯೊಂದಿಗೇ ಕನ್ನಡಿಗನೂ ಅನಾಥವಾದಂತಿತ್ತು. ಹಾಗೆಯೇ ಸಂಪೂರ್ಣವಾಗಿ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುವ ಹಂತ ತಲುಪಿದಾಗ, ಕನ್ನಡಾಂಬೆಯ ಕಟ್ಟಾಳುಗಳು ತಮ್ಮದೆಲ್ಲವನ್ನೂ ತೊರೆದು ನಿಸ್ವಾರ್ಥದಿಂದ ನಿಷ್ಠೆಯಿಂದ ನಾಡು-ನುಡಿಗಾಗಿಯೇ ತನುಮನಧನಗಳನ್ನು ಧಾರೆ ಎರೆಯಲು ಸಿದ್ಧರಾದರು. 
  ಈ ಹಂತದಲ್ಲಿಯೇ ತಲೆ ಎತ್ತಿ ನಿಂತಿದ್ದು “ಕರ್ನಾಟಕ ವಿಧ್ಯಾವರ್ಧಕ ಸಂಘ”. ೧೮೯೦ರಲ್ಲಿ ದಾರವಾಡದಲ್ಲಿ ಆರ್.ಹೆಚ್. ದೇಶಪಾಂಡೆಯವರು ಮೊಟ್ಟ ಮೊದಲಿಗೆ ಹುಟ್ಟು ಹಾಕಿದ ಸಂಘ ಎಂಬ ಹೆಗ್ಗಳಿಕೆ ಈ ಸಂಘದ್ದು. ಇದರ ಕವಲುಗಳಾಗಿ ಹಲವಾರು ಕನ್ನಡ ಸಂಘಗಳು ಹುಟ್ಟಿಕೊಂಡವು. ಕನ್ನಡ ನಾಡುನುಡಿ ಉಳಿಯ ಬೇಕೆಂದರೇ ನಮ್ಮಲ್ಲಿ ಒಗ್ಗಟಿನ ಬಲ ಹೆಚ್ಚಿಸಬೇಕೆಂಬುದನ್ನು ಅರಿತ ಅಂದಿನ ನಮ್ಮ ಹಿರಿಯರು ಕರ್ನಾಟಕ ಏಕೀಕರಣದ ಬೀಜವನ್ನು ಬಿತ್ತಲು ಪ್ರಾರಂಭಿಸಿದರು. ಈ ಚಳುವಳಿಯ ಹೋರಾಟಕ್ಕೆ ಬಲವಾದ ಇಂಬು ಕೊಟ್ಟವರು ದಿಟ್ಟ ಹೋರಾಟಗಾರರಾದ ಆಲೂರು ವೆಂಕಟರಾಯರು. ಇವರು ಕರುನಾಡ ಮೂಲೆ ಮೂಲೆಗಳನ್ನು ಸಂಚರಿಸಿ ಸಭೆಗಳನ್ನು ನಡೆಸಿ ಕರುನಾಡ ಗತವೈಭವವನ್ನು ಸ್ಮರಿಸುತ್ತ, ಇಂದು ನಾಡು ನುಡಿಗೊದಗಿರುವ ದುಸ್ಥಿತಿಯನು ಮನದಟ್ಟಾಗುವಂತೆ ವಿವರಿಸುವ ಮೂಲಕ ಕನ್ನಡಿಗರನ್ನು ಬಡಿದೆಬ್ಬಿಸಿದರು. ಏಕೀಕರಣದ ಕಿಚ್ಚನ್ನು ಹೊತ್ತಿಸಿದರು.

  ೧೯೧೨ರಲ್ಲಿ “ಕರ್ನಾಟಕ ಗತ ವೈಭವ”ಎಂಬ ಕೃತಿಯನ್ನು ರಚಿಸಿದರು. ಈ ಹೊತ್ತಗೆಯು ಕನ್ನಡದ ಹಿರಿಯರಲ್ಲಿ ಕಿರಿಯರಲ್ಲಿ ಕಿಚ್ಚೆಬ್ಬಿಸಿ ಹುರಿದುಂಬಿಸಿತು. ಇದರ ಸಂಕೇತವಾಗಿ ಈ ಹೋರಾಟದ ತಂಡವೇ ಆಲೂರು ವೆಂಕಟರಾಯರ ಸಹಕಾರದೊಂದಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆಗೆ ಕಾರಣವಾಯಿತು. ಆದರೇ ಇಂದು ಅದರ ಧ್ಯೇಯೋದ್ದೇಶವೇ ಬದಲಾಗಿರುವುದು ವಿಷಾದಕರ ಸಂಗತಿ. ಹೀಗೇ ಆಲೂರರೊಂದಿಗೆ ಗೊರೂರು ರಾಮಸ್ವಾಮಿ ಅಯ್ಯಂಗಾರ್, ಕೌಜಲಗಿ, ಶ್ರೀನಿವಾಸ ರಾವ್ ಮಂಗಳವಾಡೆ, ಅ.ನ.ಕೃ, ಕೆಂಗಲ್ ಹನುಮಂತರಾಯರು, ಎಸ್ ನಿಜಲಿಂಗಪ್ಪ, ಟಿ. ಮರಿಯಪ್ಪ, ಸಾಹುಕಾರ್ ಚೆನ್ನಯ್ಯ, ವೀರಣ್ಣಗೌಡ, ಹೆಚ್.ಸಿ.ದಾಸಪ್ಪ ಇನ್ನು ಹಲವಾರು ಕಟ್ಟಾಳುಗಳ ದಂಡೇ ಟೊಂಕ ಕಟ್ಟಿ ನಿಂತಿತ್ತು. ಇದರೊಂದಿಗೆ ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು, ಕರ್ನಾಟಕ ಸಂಘ, ಶಿವಮೊಗ್ಗ, ಕರ್ನಾಟಕ ಸಮಿತಿ, ಕಾಸರಗೋಡು, ಈ ಮೂರು ಮುಖ್ಯವಾದ ಸಂಘಗಳ ಮೂಲಕ ಕನ್ನಡಿಗರು ಒಂದಾಗಬೇಕೆಂಬ ಬೀಜವನ್ನು ಬಿತ್ತಿದರೆ, ಕುವೆಂಪು, ಬೇಂದ್ರೆ, ಕಾರಂತರು, ಗೋಕಾಕರು, ಜೋಷಿ, ಬೆಟಗೇರಿ ಕೃಷ್ಣ ಶರ್ಮರು, ಗೋವಿಂದ ಪೈ, ಕಯ್ಯಾರ ಕಿಯಣ್ಣರೈ ಇನ್ನು ಮುಂತಾದವರು ತಮ್ಮ ಹರಿತವಾದ ಬರಹಗಳಿಂದ ಏಕೀಕರಣದ ಕಿಚ್ಚಿಗೆ ತುಪ್ಪ ಸುರಿದರು. ಭಾಷೆಯ ಬತ್ತಿಗೆ ತೈಲವಾದರು. 

  ಇವರೊಂದಿಗೆ ಹಲವಾರು ಮಹಿಳಾಮಣಿಗಳೂ ಸೊಡರಾದರು. ಸ್ವಾತಂತ್ರ್ಯ ಹೋರಾಟದಲ್ಲಿ ವೀರಾವೇಷದಿಂದ ಹೋರಾಡಿದ ಕಿತ್ತೂರು ಚೆನ್ನಮ್ಮ, ಜಾನ್ಸಿರಾಣಿ ಲಕ್ಷ್ಮಿ ಬಾಯಿ, ಅಬ್ಬಕ್ಕರಂತೆ ಕರ್ನಾಟಕದ ಏಕೀಕರಣದಲ್ಲೂ ಜಯದೇವಿ ತಾಯಿ ಲಿಗಾಡೆ, ಬಳ್ಳಾರಿ ಸಿದ್ದಮ್ಮ, ಲಿಂಗವ್ವ, ಗುಲ್ಬರ್ಗ ವಿಮಲ ಬಾಯಿ, ಮೇಲ್ಕೋಟೆ ಮಲ್ಲವ್ವ, ಸರಸ್ವತಿ, ಸುಹಾಸಿನಿ ಬಂಡಾರಿ, ಕಮಲಾಶೆಟ್ಟಿ, ಸಾವಿತ್ರಿ ದೇವಿ ಹಳ್ಳಿಕೇರಿ, ಭಾಗೀರತಿ ಪಾಟೀಲ, ಶಾಂತಾದೇವಿ ಜತ್ತಿ, ಶಕುಂತಲ ಕುರ್ತು ಕೋಟಿ, ಇನ್ನು ಹಲವಾರು ಮಹಿಳೆಯರು ಹೋರಡಿದರು. 
  ಈ ನಿಟ್ಟಿನ ಹೋರಾಟದಲ್ಲಿ ಏಕೀಕರಣದ ಕಾವು ರಾಜಕೀಯ ಮಟ್ಟದಲ್ಲೂ ಚರ್ಚೆಗೆ ಕಾರಣವಾಗಿ ೧೯೨೦ ರಲ್ಲಿ ದಾರವಾಡದಲ್ಲಿ ನಡೆದ ಕರ್ನಾಟಕ ರಾಜ್ಯ ರಾಜಕೀಯ ಸಭೆಯಲ್ಲಿ ಏಕೀಕರಣದ ಬೇಡಿಕೆಯನ್ನು ಯಾವುದೇ ತಕರಾರಿಲ್ಲದೆ ಜಾರಿಮಾಡಲಾಯಿತು. ಇದರಿಂದ ಉತ್ಸಾಹಿತರಾದ ಕನ್ನಡಿಗರು ನಾಗಪುರದಲ್ಲಿ ನಡೆದ ಕಾಂಗ್ರೆಸ್ ಸಭೆಯಲ್ಲಿ ಪಾಲ್ಗೊಂಡು ಕರ್ನಾಟಕ ಪ್ರದೇಶ ಕಾಂಗ್ರೇಸ್ಸನ್ನು ಹುಟ್ಟು ಹಾಕುವ ನಿರ್ಧಾರವನ್ನು ಕೈಗೊಳ್ಳಲಾಯಿತು. 
ಈ ಸಮಿತಿಯು ೧೯೨೪ ರಲ್ಲಿ ಬೆಳಗಾವಿಯಲ್ಲಿ ಸಮ್ಮೇಳನ ನಡೆಸಿ ಏಕೀಕರಣದ ನಿಲುವನ್ನು ಮತ್ತಷ್ಟು ಗಟ್ಟಿಗೊಳಿಸಿತು. ಈ ಸಮ್ಮೇಳನದಲ್ಲಿ ಸೇರಿದ ಸಮುದಾಯದ ಬೇರನ್ನು ಹುಯಿಲಗೋಳ ನಾರಾಯಣರಾಯರು ಬರೆದ “ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು” ಕವಿತೆ, ಮತ್ತಷ್ಟು ಭದ್ರಗೊಳಿಸಿತು. ಈ ಹೋರಾಟದ ಬಿಸಿ ಗಡಿನಾಡ ಕೋಟೆ ದೆಹಲಿಗೂ ಮುಟ್ಟಿತು. ೧೯೨೮ ರಲ್ಲಿ ನೆಹರುರವರು ಒಂದು ತಂಡವನ್ನು ಮಾಡಿ ಬೇಡಿಕೆಯ ಪರಿಶೀಲನೆಗೆ ಕಳುಹಿದರು. ಅದನ್ನು ಪರಿಶೀಲಿಸಿದ ಸಮಿತಿಯು ಏಕೀಕರಣಕ್ಕೆ ಸಮ್ಮತಿಯನ್ನು ಸೂಚಿಸಿತಾದರೂ ಸುಮಾರು ೯ ವರುಷಗಳು ಕಳೆದರು ರಾಜಕೀಯವಾಗಿ ಕಾರ್ಯಗತಗೊಳಿಸದಿರಲು ಹಲವಾರು ಕಾರಣಗಳಿದ್ದವು. ೧೯೩೭ ರ ಚುನಾವಣೆಯಲ್ಲಿ ಏಕೀಕರಣದ ಬೇಡಿಕೆಯನ್ನು ಈಡೇರಿಸುವುದಾಗಿ ಭರವಸೆಯನ್ನಿತ್ತು ಗೆಲ್ಲುವ ಹಂಬಲ ಮಾತ್ರ ಕಾಂಗ್ರೆಸ್ಸಿಗಿತ್ತು. ಹಾಗಾಗಿ ಕನ್ನಡಿಗರು ಒಂದಾಗುವ ಆಸೆ ಕನಸಾಗೇ ಉಳಿದಿತ್ತು. 

ಆದರೆ ಹೋರಾಟಗಾರರ ಕಾವೇನೂ ಕುಗ್ಗಿರಲಿಲ್ಲ. ಇದು ರಾಜಕೀಯ ನಾಯಕರ ಅರಿವಿಗೆ ಬಂದ ಕಾರಣ ೧೯೪೬ ರಲ್ಲಿ ಮುಂಬಯಿಯಲ್ಲಿ ನಡೆದ ಏಕೀಕರಣದ ಸಭೆಯಲ್ಲಿ ಸರದಾರ್ ವಲ್ಲಬಾಯಿ ಪಟೇಲರು, “ಇನ್ನೇನು ಕೆಲವೇ ದಿನಗಳಲ್ಲಿ ಬ್ರಿಟೀಷರಿಂದ ಬಿಡುಗಡೆ ಸಿಗಲಿದೆ, ಆಗ ಕರ್ನಾಟಕ ಏಕೀಕರಣ ಸ್ವಾತಂತ್ರ್ಯ ಭಾರತದ ಮೊದಲ ಕೆಲಸ ವಾಗಲಿದೆ” ಎಂದು ಹೇಳಿಕೆ ಕೊಟ್ಟರು. ೧೯೪೭ ರಲ್ಲಿ ಬ್ರಿಟೀಷರಿಂದ ಭಾರತ ಬಿಡುಗಡೆ ಹೊಂದಿತು. ಹಾಗೆಯೇ ಕರುನಾಡೂ ಒಂದಾಗಲಿದೆ ಎಂದು ಕಾದದ್ದೇ ಬಂತು. ನಿಜಾಮರ ತೆಕ್ಕೆಯಲ್ಲಿದ್ದ ಕೆಲವು ಭಾಗಗಳನ್ನು ಅವರು ಬಿಟ್ಟುಕೊಡಲು ಸಿದ್ಧರಿರಲಿಲ್ಲ, ಹಲವು ಸುತ್ತಿನ ಮಾತುಕತೆಯ ನಂತರ ೧೯೪೮ ರಲ್ಲಿ ನಿಜಾಮ ಅರಸರ ಆಳ್ವಿಕೆಯಿಂದ ಬಿಡುಗಡೆ ಸಿಕ್ಕಿತು. ಹೈದರಾಬಾದ್ ನಿಜಾಮರ ಅಡಿಯಲ್ಲಿದ್ದ ಭಾಗಗಳೂ ಒಕ್ಕೂಟದಡಿ ಬರಲು ಸಿದ್ಧವಾದವು. ನಂತರ ರಾಜ್ಯದ ರಚನೆಯ ಕೆಲಸವಾದ ಕರ್ನಾಟಕದ ಏಕೀಕರಣದ ಬೇಡಿಕೆಯನ್ನು ಪರಿಶೀಲಿಸಲು “ದಾರ್” ಕಮಿಟಿಯನ್ನು ರಚಿಸಿತು.  ಆದರೆ ಈ ಕಮಿಟಿಯೂ ನುಡಿಯ ಆಧಾರದ ಮೇಲೆ ರಾಜ್ಯಗಳನ್ನಾಗಿ ಮಾಡುವುದನ್ನು ವಿರೋಧಿಸಿತು. ಅದು ಕನ್ನಡಿಗರ ಹೋರಾಟದ ಬಿಸಿಯನ್ನು ಮತ್ತಷ್ಟು ಹೆಚ್ಚಿಸಿತು. ಆ ಬಿಸಿಯನ್ನು ತಣಿಸುವ ಸಲುವಾಗಿ ಒಕ್ಕೂಟ ಸರ್ಕಾರವು ನೆಹರು, ವಲ್ಲಬಾಯಿ ಪಟೇಲ್. ಪಟ್ಟಾಭಿ ಸೀತಾರಾಮ ರನ್ನು ಒಳಗೊಂಡಂತೆ “ಜೆವಿಪಿ” ಕಮಿಟಿಯನ್ನು ಮಾಡಿ ಪರಿಶೀಲಿಸಿತು. ಅಂದೂ ಸಹ ಕಾರ್ಯಗತವಾಗಲಿಲ್ಲಾ. 
ಹೀಗೆ ಆಗಾಗ ಕಮಿಟಿಗಳಾಗಿ ದೊಂಬರಾಟವಾಗುತ್ತಿತ್ತು. ಇದು ಹೋರಾಟ ಗಾರರನ್ನು ಮತ್ತಷ್ಟು ಕೆರಳಿಸಿತು. ಅದಕ್ಕಾಗಿ “ಕರ್ನಾಟಕ ಏಕೀಕರಣ ಪಕ್ಷ” ವನ್ನು ಹುಟ್ಟು ಹಾಕಿದರು. ಇಷ್ಟಾದರೂ ಕಾಗ್ರೇಸ್ ಏಕೀಕರಣಕ್ಕೆ ಮನಸ್ಸು ಮಾಡದ ಕಾರಣ ಕಾಂಗ್ರೆಸ್ಸಿನ ಹಿರಿಯರಾದ ಎ.ಜೆ.ದೊಡ್ಡಮೇಟಿಯವರು ರಾಜಿನಾಮೆ ಕೊಟ್ಟರು. ಅವರಿಂದ ತೆರವುಗೊಂಡ ಸ್ಥಾನಕ್ಕಾಗಿ ಮರುಚುನಾವಣೆಯಲ್ಲಿ ಕಾಂಗ್ರೇಸ್ ಹೀನಾಯ ವಾಗಿ ಸೋಲನ್ನು ಕಂಡಿತು. ಕರ್ನಾಟಕ ಏಕೀಕರಣ ಪಕ್ಷ ಹೆಚ್ಚು ಮತಗಳಿಂದ ಗೆಲುವನ್ನು ಸಾಧಿಸಿ ರಾಜಕೀಯವಾಗಿಯೂ ನೆಲೆಗೊಂಡಿತು. ಇಂತಹಾ ಪೆಟ್ಟುಗಳನ್ನು ಪದೇಪದೇ ಕೊಡುತ್ತಲೇ ೫೦ ವರುಷಗಳೇ ದಾಟಿದವು. ಇನ್ನು ಸುಮ್ಮನೆ ಕುಳಿತರಾಗದೆಂದು ಉಪವಾಸದ ಚಳುವಳಿಯನ್ನು ಪ್ರಾರಂಭಿಸಿದರು. ನಾಡಿನೆಲ್ಲೆಡೆ ಇದೇ ಹಾದಿಯನ್ನು ಅನುಸರಿಸಿದರು. ಆದರೆ ಹುಬ್ಬಳ್ಳಿಯಲ್ಲಿ “ಶಂಕರ ಗೌಡ ಪಾಟೀಲರು” ನಡೆಸಿದ ಏಕೀಕರಣದ ಉಪವಾಸ ೨೩ ದಿನಗಳನ್ನೂ ಸುದೀರ್ಘವಾಗಿ ದಾಟಿತ್ತು. ಇದನ್ನೂ ಸರ್ಕಾರ ಲೆಕ್ಕಿಸದಿದ್ದಾಗ, ಇದೇ ಹೊತ್ತಿನಲ್ಲಿ ಹುಬ್ಬಳ್ಳಿಯಲ್ಲಿ ೧೯೫೩ ಏಪ್ರಿಲ್ ೧೯ ರಂದು ನಡೆದ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯೊಂದಕ್ಕೆ ಮುತ್ತಿಗೆ ಹಾಕಿ ಬೇಡಿಕೆ ಈಡೇರುವವರೆಗೆ ಹೋರಾಟ ನಿಲ್ಲದೆಂಬ ಸಂದೇಶವನ್ನು ಸರ್ಕಾರಕ್ಕೆ ನೀಡಿತು. ಅಂದು ಮುತ್ತಿಗೆ ಹಾಕಿದ ೨೫೦೦೦ಕ್ಕೂ ಅಧಿಕ ಸಂಖ್ಯೆಯಲ್ಲಿದ್ದ ಕನ್ನಡಿಗರನ್ನು ಕಂಡು ರಾಜಕಾರಣಿಗಳು ಬೆಚ್ಚಿಬಿದ್ದರು. ರಾಜಕೀಯ ನಾಯಕರಾದ ನಿಜಲಿಂಗಪ್ಪನವರನ್ನೊಳಗೊಂಡಂತೆ ಕೆಲವರಿಗೆ ಬಳೆಯನ್ನು ತೊಡಿಸಿ ಚಪ್ಪಲಿ ಸೇವೆಯನ್ನು ಮಾಡಿದರು. ಗುದ್ಲೆಪ್ಪ ಹಳ್ಳಿಕೇರಿಯವರ ಜೀಪಿಗೆ ಬೆಂಕಿ ಇಟ್ಟು ನಾಯಕರಿಗೆ ರಾಜೀನಾಮೆ ಕೊಡಲು ಒತ್ತಾಯಿಸಿದರು. ಯಾರ ಬೆದರಿಕೆಗೂ ಜಗ್ಗದ ಹೋರಾಟಗಾರರನ್ನು ಪೋಲೀಸರು ಮನಬಂದಂತೆ ಲಾಟಿಚಾರ್ಜ ಮಾಡ ತೊಡಗಿದರು. ಮೈಮೇಲೆ ಬಾಸುಂಡೆಗಳು ಬಂದರೂ, ನೆತ್ತರು ಹರಿದರೂ ಜಗ್ಗದೇ ಎದೆಯೊಡ್ಡಿ ನಿಂತರು ಅಂದು ವೀರ ಕೆಚ್ಚೆದೆಯ ಕನ್ನಡಿಗರು. ಮನಬಂದಂತೆ ಥಳಿಸಿ ಥಳಿಸಿ ಕೈನೊಂದ ಪೋಲೀಸರು ೧೪೪ ಸೆಕ್ಷನ್ ಜಾರಿಗೊಳಿಸಿದರು. ಹಲವು ಹಿರಿಯ ಹೋರಾಟಗಾರರನ್ನು ಸೆರೆ ಹಿಡಿದರು. ಹೋರಾಟಗಾರರ ಪರವಾಗಿ ತಮ್ಮ ಶುಲ್ಕವನ್ನು ಪಡೆಯದೇ ವಾದ ಮಾಡಿ ಎಸ್.ಆರ್. ಬೊಮ್ಮಾಯಿಯವರು ತಮ್ಮ ಜಾಣ್ಮೆಯಿಂದ ಅವರನ್ನೆಲ್ಲಾ ಬಿಡಿಸಿದರು. ಆದರೆ ಎಡೆಬಿಡದೆ ಸಭೆಗಳು ಉಪವಾಸಗಳು, ಗಲಭೆಗಳು ಆಗಿಂದಾಗ್ಗೆ ನಡೆಯುತ್ತಲೇ ಇದ್ದವು. ಈ ಬಿಸಿ ಒಕ್ಕೂಟದ ಸರ್ಕಾರವನ್ನು ಸುಡಲಾರಂಭಿಸಿತು. ರಾಜ್ಯಗಳ ಮರು ವಿಂಗಡನೆಯನ್ನು ಪರಿಶೀಲಿಸಲು ಮತ್ತೊಮ್ಮೆ “ಪಜಲ್‌ಆಲಿ” ಕಮಿಟಿಯನ್ನು ಮಾಡಿ ನುಡಿಯ ಆಧಾರದ ಮೇಲೆ ರಾಜ್ಯಗಳನ್ನು ಮಾಡಲು ಸಲಹೆ ನೀಡಿತು. ಸುಮಾರು ೭೫ ವರ್ಷಗಳಿಗೂ ಮೀರಿದ ಹೋರಾಟದ ಪರಿಣಾಮ ಕಡೆಗೂ ೧೯೫೬ ನವೆಂಬರ್ ೧ ರಂದು ಕರ್ನಾಟಕದ ಏಕೀಕರಣಗೊಳಿಸುವಲ್ಲಿ ನಿಷ್ಠ ಕನ್ನಡಿಗರ ಹೋರಾಟ ಸಫಲವಾಯಿತು. ಕರುನಾಡಾಯಿತು.  
  ಹೀಗೇ ಕರ್ನಾಟಕದ ಏಕೀಕರಣಕ್ಕಾಗಿ ಹಗಲಿರುಳು ಹೋರಾಡಿದ ಇಂತಹಾ ಹೆಮ್ಮೆಯ ಮಹನೀಯರ ಸ್ಮರಣೆಯೊಂದಿಗೆ ಕನ್ನಡ ರಾಜ್ಯೋತ್ಸವದ ಆಚರಣೆಯ ಅರ್ಪಣೆಯಾಗುವಂತೆ ಅರ್ಥಪೂರ್ಣವಾಗಿ ಆಚರಿಸದಾಗ ಆಚರಣೆ ಸಾರ್ಥಕವಾಗುತ್ತದೆ. ಅಂತಹಾ ಮಹನೀಯರ ಅರ್ಪಣೆಗಾಗಿ ಹೊಮ್ಮಿದ ನನ್ನ ಕವಿತೆ..

“ಕರುನಾಡ ಹುಟ್ಟಿನ ಹಿಂದಣ ಹೆಜ್ಜೆಗಳನ್ನು ಗಟ್ಟಿಯಾಗಿ ಹಿಡಿದಿಟ್ಟಬೇಕಿದೆ..                         ಅದು... ಬಿಟ್ಟಿ ಬಂದದ್ದಲ್ಲಾ...!                                                             
ನಮ್ಮ ಹಿರಿಯರು ಉಸುರುಗಟ್ಟಿದ                           ದಿಟ್ಟ ಹೋರಾಟದ ಹಿರಿಮೆಯಿದೆ. ಪೆಟ್ಟು ತಿಂದ ನೆತ್ತರ ಹೊಳೆಯಿದೆ..,             ನಿದ್ದೆಗೆಟ್ಟು ಕೆಚ್ಚು ತುಂಬಿದ ದಿಟ್ಟ ನಯನಗಳಿವೆ.  
ಹೋರಾಟವನೇ ಉಂಡುಟ್ಟ ಹೊಟ್ಟೆಗಳಿವೆ.               ಹಣ್ಣಾಗಿ ಮಣ್ಣಾದ ಜೀವಗಳ ಹಸಿವು ನರಳಕೆಗಳಿವೆ..!                             “ಇದಂ ನ ಮಮ” ಎಂದು ತಮ್ಮ ಬಾಳನೇ                                      ಬಟಾಬಯಲಿಗಿಟ್ಟವರ ನಿಟ್ಟುಸಿರಿನಲಿ              ಕಟ್ಟಿ ಬೆಳೆಸಿ ಉಳಿಸಿದವರ ತ್ಯಾಗದ ಉಡುಗೊರೆಯ ನಾಡ ನುಡಿಯ                                                          ನಿರ್ಲಕ್ಷಿಸಿದೊಡೆ ನಮ್ಮ ಉಳಿವೆಂತು..?                                                        ನಾಡ ಉಳಿವೆಂತು.. ನುಡಿಯ ಉಳಿವೆಂತು..!!? ನಿಷ್ಠೆಯಲಿ ಉಲಿಯುತಿರಲಿ ಉಸಿರುಸಿರು ನಲುಮೆಯಲಿ ಎಲ್ಲೆಡೆ ಕನ್ನಡದ ಒಲುಮೆ..
ಸಿರಿಗನ್ನಡಂಗೆಲ್ಗೆ ಸಿರಿಗನ್ನಡಂ ಬಾಳ್ಗೆ..

- ಜಿ.ಎಸ್.ಕಲಾವತಿಮಧುಸೂದನ, ಹಾಸನ.
  

ಭಾನುವಾರ, ಅಕ್ಟೋಬರ್ 26, 2025

ಗಜೇಂದ್ರ ಮೋಕ್ಷ (ಪದ್ಯ ಕಥನ) - ಎಂ ಆಶಾ ಕಿರಣ್.

ಗೌಳ ದೇಶದ ಅರಸ  ಇಂದ್ರದ್ಯುಮ್ನನು,
 ಸಂಸಾರ ಬಂಧನವ ತೊರೆದನು 
 ದೊರೆಯ ಪಟ್ಟವೇ ನನಗೆ ಬೇಡವೆಂದನು 
 ದಿನವೂ ಹರಿನಾಮ ಜಪವೇ ಸಾಕೆಂದನು.

 ಸುಂದರ ತಪ್ಪಲಿನಲ್ಲಿ ಕುಳಿತನು 
 ಹರಿನಾಮ ಸ್ಮರಣೆಯಲ್ಲಿ ತಲ್ಲೀನನಾದನು 
 ತನ್ನ ಶಿಷ್ಯರೊಂದಿಗೆ  ಬಂದನಲ್ಲಿಗೆ  ಅಗಸ್ತ್ಯ ಮುನಿ ವರ್ಯನು 
 ನಾ ಬಂದರೂ  ನನ್ನ ಸತ್ಕರಿಸಲಿಲ್ಲವೆಂದನು.

 ದೊರೆಗೆ ಸಿಟ್ಟಿನಿಂದ ಶಪಿಸಿದನು 
 ಮಂದ ಹೆಜ್ಜೆಗಳನಿಡುವ ಗಜ ರೂಪ ನಾಗೆಂದನು 
 ಸಿಟ್ಟೇಕೆ ಮುನಿವರ್ಯ ನಾ ಗಮನಿಸಲಿಲ್ಲ ನಿಮ್ಮ ಆಗಮನವನ್ನು 
 ಶಾಪವನು ಹಿಂಪಡೆಯಿರಿ ಮನ್ನಿಸಿ ನನ್ನ ತಪ್ಪನ್ನು.

 ಕೊಟ್ಟ ಶಾಪವ ಹಿಂಪಡೆಯೆನು  ನಾನು
 ಶಾಪ ವಿಮೋಚನೆಯ ಮಾರ್ಗವ ತಿಳಿಸಿ ಕರುಣಿಸಿ ನನ್ನನು 
 ಹಲವು ವರ್ಷಗಳು ಗಜರಾಜನಾಗಿರು ನೀನು 
 ಅನುಭವಿಸ ಬೇಕಾಗುವುದು ನೀನೊಮ್ಮೆ ನೋವನ್ನು.

 ಜಪಿಸುವೆ ನೀ ನಂದು ಹಿಂದಿನ ಜನ್ಮದ ಹರಿ ನಾಮವನ್ನು 
 ಬಂದು ನಿನಗೆ ತಾಕಿಸಲು ನೀಲ ಮೇಘನು ಸುದರ್ಶನವನ್ನು 
 ಶ್ರೀ ಹರಿಯು ನೀಡುವನಂದು ನಿನಗೆ ಮುಕ್ತಿಯನ್ನು 
 ಎಂದು ದೊರೆಗೆ ಪೇಳಿ ಹೊರಟನು 
ಮುನಿವರ್ಯನು.

 ನೀಲಾಕಾಶದಲ್ಲಿ ಮುಳುಗುತ್ತಿರಲು ಆ ಭಾಸ್ಕರನ್ನು 
 ಸುತ್ತಲೂ ಆವರಿಸಿ ನಿಶೆ ಕತ್ತಲಾಯಿತು ಕಾನನ
 ನೋಡು ನೋಡುತ ದೊರೆಯಾದನು ಗಜರಾಜನು 
 ಕರಿಯಾಗಿ ಜನಿಸಿ ಸಂತಾನವ ಪಡೆದನು.

 ಆಡಿ ನಲಿದು ಅವರೊಂದಿಗೆ  ಸಂತೋಷದಿಂದ ಇದ್ದನು 
 ಕಂಡನು ಎಂದೂ ಕಾಣದ ಬರಗಾಲವನ್ನು 
 ಬಾ ಯಾರಿದರೆ ನೀರಿಲ್ಲ ಹಸಿವಾದರೆ ಆಹಾರವಿಲ್ಲ  ಬಳಲಿದನು ಗಜರಾಜನು 
 ತನ್ನ ಜೊತೆ ಕೂಡಿಕೊಂಡು ಹೆಂಡತಿ ಮಕ್ಕಳನ್ನು.

 ಬೆಟ್ಟ ಗುಡ್ಡಗಳ ಹತ್ತಿ ಇಳಿದನು 
 ಮರಗಳ ಮುರಿದು ತುಳಿದು ತುಂಡರಿಸಿದನು 
 ಆಗ ಕಂಡನು ಸುಂದರ ಸರೋವರವನ್ನು 
 ಮಕರದ ರೂಪದಲ್ಲಿ ಸರೋವರದಲ್ಲಿದ್ದನು.

 ಶಾಪಗ್ರಸ್ತ ಹುಹು ಗಂಧರ್ವನು 
 ಮಹರ್ಷಿ ದೇವಲರು ಇತ್ತರವನಿಗೆ ಶಾಪವನ್ನು 
 ಮಹರ್ಷಿಗೆ ತೋರಿದನವನು ಅನುಚಿತ ವರ್ತನೆಯನ್ನು 
 ಅದರ ಪಾಪದ ಫಲವಾಗಿ ಪಡೆದನು ಮಕರ ಜನ್ಮವನ್ನು.

 ಸಂತಾನ ದೊಂದಿಗೆ ಸೇರಿ ಕರಿ ರಾಜ ಕಲಕಿದನು 
 ಗಂಧರ್ವ ಕಿನ್ನರರು ಜಲ ಕ್ರೀಡೆಯಾಡುವ ಸರೋವರವನ್ನು 
 ಇದ ಕಂಡು ಸಿಟ್ಟಿಗೆದ್ದನ್ನು ಮಕರನ್ನು 
  ಹಿಡಿಯಿತು ಬಲವಾಗಿ ಕುಂಜರದ ಕಾಲನ್ನು.

 ಸತಿ ಸುತರೆಲ್ಲ ಸೇರಿ ಎಳೆದರೂ ಗಜ ರಾಜನನ್ನು 
 ಆಗದೆಂದು ದುಃಖದಲಿ ದೂರದಲ್ಲಿ ನಿಂತರು ನೋಡುತ್ತಾ ಕುಂಜರವನ್ನು 
 ನನ್ನ ಪಾಪದಲ್ಲಿ ಪಾಲೇಕೆ ದೂರದಲ್ಲಿರಿ ನೀವು ಎಂದನು 
 ಮತ್ತೊಮ್ಮೆ ಎಳೆದನು  ಬಲದಿಂದ ತನ್ನ ಕಾಲನ್ನು.

 ಕೋಪದಲ್ಲಿ ಕಚ್ಚುತಲಿದ್ದನು ಮಕರ ರೂಪದ ಗಂಧರ್ವನು 
 ತುಂಬಿತು ಕೊಳದ ನೀರಲ್ಲಿ ನೆತ್ತರು ನಾಚುವಂತೆ ನೇಸರನು 
 ಗಜರಾಜನು ಹಿಂದಿನ ಜನ್ಮದಂತೆ ಶ್ರೀಹರಿಯ ಕಂಡನು 
 ಹತ್ತು ಅವತಾರಗಳ ಎತ್ತಿ ಕಾಪಾಡಿದಂತೆ ಎಲ್ಲರನ್ನು.

 ಕಾಪಾಡು ತಂದೆ ಶ್ರೀಹರಿ ನೀ ಬಂದು ನನ್ನನ್ನು 
 ಎಂದು ಶ್ರೀಹರಿಯ ಕೂಗಿ ಕರೆದನು ಕುಂಜರನ್ನು 
 ಓಡಿ ಬಂದನು ಗಜರಾಜ ನಿದ್ದಲ್ಲಿಗೆ ಮಾಧವನು 
 ಬಿಟ್ಟು ಕ್ಷಿರಾಬ್ದಿಯಲ್ಲೇ ಲಕ್ಷ್ಮಿಯನು.


 ಹೊಡೆದನು ಮಕರದ ದಂತಕ್ಕೆ ತನ್ನ ಚಕ್ರವನ್ನು 
 ಗಂಧರ್ವನಾಗಿ ನಿಂತನು ಮಕರನು
 ಶ್ರೀ ಹರಿಯು ವೈಕುಂಠಕ್ಕೆ ತೆರಳಿದನು 
 ನೃಪನಿಗೆ ಹುಹುವಿಗೆ ಕೊಟ್ಟು ಮುಕ್ತಿಯನ್ನು.


 - ಎಂ ಆಶಾ ಕಿರಣ್.
 ಶಿಕ್ಷಕಿ ಹಾಗೂಸಾಹಿತಿ ಬೇಲೂರು 
 ಹಾಸನ ಜಿಲ್ಲೆ

ಗುರುವಾರ, ಅಕ್ಟೋಬರ್ 16, 2025

ನವೋದಯ ಸಾಹಿತ್ಯದಲ್ಲಿ ಜಾತಿ ಕೇಂದ್ರಿತ ಚಿಂತನೆ - ಡಾ. ರಂಜಿತ ಬಿ.


ದಿನಾಂಕ: ೩೦.೦೬.೨೦೨೫ ರಂದು ಅಂಗಳ ಕಮ್ಯುನಿಟಿ ಟ್ರಸ್ಟ್‌ ಇವರ ವಿಚಾರ ಮಂಟಪ ಆನ್‌ಲೈನ್‌ ಉಪನ್ಯಾಸ ಸರಣಿ ೧ ಕಾರ್ಯಕ್ರಮದಲ್ಲಿ ಡಾ ರಂಜಿತ ಬಿ ಇವರು ನೀಡಿದ ಉಪನ್ಯಾಸ.

ಸಂಸ್ಕೃತಿಯ ಭಾಗವಾಗಿ ಒಂದೊಂದು ಜಾತಿಗಳನ್ನು ಪ್ರತ್ಯೇಕ ಗುಂಪು ಅಥವಾ ಸಮುದಾಯವಾಗಿ ಪರಿಗಣಿಸಬಹುದು. ಅವುಗಳು ತಮ್ಮ ವೃತ್ತಿಯಿಂದಲೋ ಅಥವಾ ಆಚಾರವಿಚಾರದಿಂದಲೋ ಸಂಪೂರ್ಣವಾಗಿಯಲ್ಲದಿದ್ದರೂ, ತಮ್ಮದೇ ಆದ ಸಂಸ್ಕೃತಿ ವೈಶಿಷ್ಟ್ಯತೆಯನ್ನು ಹೊಂದಿವೆ. ಹೀಗಾಗಿ ಭಾರತ ದೇಶದ ಒಂದೊಂದು ಸಮುದಾಯಗಳು ಒಂದೊಂದು ಸಂಸ್ಕೃತಿಯನ್ನು ಪ್ರತಿನಿಧಿಸುತ್ತವೆ. ಜಾತಿಗಳನ್ನಾಧರಿಸಿಯೇ ಸಂಸ್ಕೃತಿಯ ಹಲವು ಸಂಗತಿಗಳನ್ನು ತಿಳಿಯಬಹುದಾಗಿದೆ. ಅದಕ್ಕಾಗಿಯೇ ಭಾರತವನ್ನು ಬಹುಸಂಸ್ಕೃತಿಯನ್ನು ಹೊಂದಿರುವ ವಿವಿಧತೆಯಲ್ಲಿ ಏಕತೆಯನ್ನು ಸಾರುವ ದೇಶವಾಗಿದೆ ಎಂದು ಹೇಳಿದರೂ, ಅವುಗಳ ಅಂತರಾಳದಲ್ಲಿ ಸಾಕಷ್ಟು ಸಂಘರ್ಷಗಳು ಮತ್ತು ವೈವಿರುಧ್ಯಗಳು ಇರುವುದನ್ನು ಕಾಣಬಹುದಾಗಿದೆ. 

ವಸಾಹತುಶಾಹಿಯ ಆಳ್ವಿಕೆಯ ಕಾಲದಲ್ಲಿ ಭಾರತೀಯ ಸಂಸ್ಕೃತಿ ಎಂದು ಕರೆದುಕೊಳ್ಳುವ ವೈದಿಕ ಸಂಸ್ಕೃತಿಯು ಯಾಜಮಾನಿಕೆ ಸ್ಥಾನದಲ್ಲಿ ನಿಂತು ತಾನು ಎಲ್ಲ ಸಂಸ್ಕೃತಿಗಿಂತಲೂ ಶ್ರೇಷ್ಠ, ಆದ್ದರಿಂದ ಉಳಿದ ಇತರ ಜಾತಿಗಳಿಂದ ಸ್ವೀಕಾರ ಅಥವಾ ಅನುಕರಣೆಯಾಗಲಿ ಮಾಡುವ ಅವಶ್ಯಕತೆ ಇಲ್ಲ, ಉಳಿದ ಸಂಸ್ಕೃತಿಗಳೇ(ತಳಸಮುದಾಯದ ಸಂಸ್ಕೃತಿಗಳು) ತನ್ನನ್ನು ಅನುಕರಿಸಿವೆ ಎಂಬ ಧೋರಣೆ ಹೆಚ್ಚು ಚಾಲ್ತಿಗೆ ಬಂದಿತು. ಈ ಧೋರಣೆ ಬೆಳೆಯಲು ಕಾರಣವಾದ ಅಂಶವೆಂದರೆ, ಬ್ರಿಟಿಷ್ ಸಾಮ್ರಾಜ್ಯಶಾಹಿ ವ್ಯವಸ್ಥೆಯ ವಿರುದ್ಧ ಭಾರತದ ಗತ ವೈಭವವನ್ನು ಕಟ್ಟುವ ಸಂದರ್ಭದಲ್ಲಿ ಬೆಳೆದು ಬಂದ ಸಂಸ್ಕೃತಿ ಗ್ರಹಿಕೆಗಳು. ವೈದಿಕ ವರ್ಗ ಕಟ್ಟಿದ ಸಂಸ್ಕೃತಿ, ಕಲೆ, ಸಂಗೀತ, ನೃತ್ಯ, ದೇವಾಲಯಗಳನ್ನೇ ಭಾರತೀಯ ಸಂಸ್ಕೃತಿ, ಪರಂಪರೆಯಾಗಿ ವೈಭವೀಕರಿಸಲಾಯಿತು. ಅಲ್ಲದೆ ವರ್ಣವ್ಯವಸ್ಥೆಯನ್ನು ಈ ಭಾರತೀಯ ಸಂಸ್ಕೃತಿಯು ಒಪ್ಪಿಕೊಳ್ಳುವುದರ ಮೂಲಕ ಒಂದು ಸಮಾಜದ ಆಡಳಿತಕ್ಕೆ ಈ ವರ್ಣವ್ಯವಸ್ಥೆ ಮುಖ್ಯ ಎನ್ನುವುದನ್ನು ಪ್ರತಿಪಾದಿಸಲಾಯಿತು. ಆದರೆ, ಅದರ ಜೊತೆಗೆ ಹುಟ್ಟಿದ ಜಾತಿಯು ಮೇಲು ಕೀಳು ಎನ್ನುವ, ಸ್ಪೃಶ್ಯ-ಅಸ್ಪೃಶ್ಯತೆಯ ಭೇದ ಭಾವಗಳನ್ನು ಮಾನವರ ಹುಟ್ಟಿನೊಂದಿಗೆ ವಿಧಿಸಿ ನೋಡಿತು. ವರ್ಣವ್ಯವಸ್ಥೆ ಕಸುಬುಗಳ ಮೂಲಕ ಗುರುತಿಸಿಕೊಂಡರೆ; ಆ ಕಸುಬಿನಿಂದಲೇ ಜನ್ಮ ತಾಳಿದ್ದು ಜಾತಿಪದ್ಧತಿ. ವರ್ಣಗಳು ವೃತ್ತಿಯ ಯೋಗ್ಯತೆಯನ್ನು ಆಧರಿಸಿದರೆ; ಜಾತಿಗಳು ಹುಟ್ಟನ್ನು ಆಧರಿಸಿ ಬೆಳೆದವು. ಮಾನವರು ತಮ್ಮ ಕುಲಕಸುಬಿನಿಂದ ಮುಕ್ತಿ ತಾಳಬಹುದಿತ್ತು; ಆದರೆ ಜಾತಿಯಿಂದ ಅವರು ಮುಕ್ತಿ ಹೊಂದಲು ಸಾಧ್ಯವಿರಲಿಲ್ಲ. ಇದು ಸಾಮಾಜಿಕ ಅಸಮಾನತೆಗೆ ಕಾರಣವಾಯಿತು.

ಬ್ರಿಟಿಷ್ ಆಡಳಿತದಲ್ಲಿ ಜಾರಿಗೆ ಬಂದ ಇಂಗ್ಲಿಷ್ ಶಿಕ್ಷಣ ವ್ಯವಸ್ಥೆಯು, ದಮನಿತರು ಸಾಮಾಜಿಕ ಪರಿವರ್ತನೆಗಾಗಿ ಹೋರಾಡುವಂತೆ ಒಂದು ಕ್ರಾಂತಿಯ ಶಕ್ತಿಯನ್ನು ನೀಡಿತು. ಇದರಿಂದ ಒಂದು ಕಡೆ ಬ್ರಿಟಿಷರು ಸಾಮಾಜಿಕ ಅಸಮಾನತೆಯನ್ನು ತಮ್ಮ ಸುಸ್ಥಿರ ರಾಜಕೀಯ ವ್ಯವಸ್ಥೆಗೆ ಲಾಭ ಮಾಡಿಕೊಂಡರು, ಇನ್ನೊಂದು ಕಡೆ ಭಾರತೀಯ ವರ್ಣವ್ಯವಸ್ಥೆಯಲ್ಲಿ ಶಿಕ್ಷಣದ ಹಕ್ಕನ್ನೇ ಪಡೆಯದ ಶೂದ್ರವರ್ಗ ಮೊದಲ ಬಾರಿಗೆ ಇಂಗ್ಲಿಷ್ ಶಿಕ್ಷಣ ಪಡೆದು, ತಮ್ಮನ್ನು ಸೇವಕರಾಗಿ ಕಂಡ ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತುವಂತೆ ಮಾಡಿತು. ಹೀಗೆ ಭಾರತದಲ್ಲಿ ಈ ಇಂಗ್ಲಿಷ್ ಶಿಕ್ಷಣ ರಾಜಕೀಯ ಮತ್ತು ಸಾಮಾಜಿಕ ನೆಲೆಯಲ್ಲಿ ಒಂದು ಕ್ರಾಂತಿಯನ್ನುಂಟು ಮಾಡಿತು.

ಇದರ ಪರಿಣಾಮವಾಗಿ ದಕ್ಷಿಣ ಭಾರತದಲ್ಲಿ ನಡೆದ ಜಾತಿ ವಿರುದ್ಧದ ಹೋರಾಟ ‘ಬ್ರಾಹ್ಮಣ ಮತ್ತು ಬ್ರಾಹ್ಮಣೇತರ’ ಎಂದು ಕರೆಸಿಕೊಂಡರೆ; ಅಂಬೇಡ್ಕರ್ ಅವರು ಒಟ್ಟು ಹಿಂದೂ ಸಮುದಾಯವನ್ನು ಶೋಷಕ ವರ್ಗಗಳಾಗಿ ನೋಡಿದರು. ಹಾಗೂ “ಹಿಂದೂ ಜನಸಮುದಾಯ ಒಂದು ಸಂಕೀರ್ಣ ರಚನೆಯಾಗಿದ್ದರೂ ಅದರಲ್ಲೊಂದು ಆಳವಾದ ಸಾಂಸ್ಕೃತಿಕ ಏಕತೆಯಿದೆ” ಇದರ ಪ್ರತಿಯೊಂದು ಭಾಗವನ್ನು ಜಾತಿಯು ಹೆಣೆದು ಕಟ್ಟಿತು ಎನ್ನುತ್ತಾರೆ. ಪ್ರಾರಂಭದಲ್ಲಿ ಒಂದು ಜಾತಿ ಇದ್ದು, ಅನುಕರಣೆಯಿಂದಲೋ, ಬಹಿಷ್ಕಾರದ ಕಾರಣದಿಂದಲೂ ವರ್ಗಗಳೇ ಜಾತಿಗಳಾಗಿ ಪರಿವರ್ತನೆಗೊಂಡಿವೆ. ಹೀಗೆ ಕವಲು ಹೊಡೆದ ಜಾತಿಗಳು ತಮ್ಮಲ್ಲೇ ಬೇಲಿ ಹಾಕಿಕೊಂಡವು. ಹೀಗೆ ಬೆಳೆದ ಜಾತಿಗಳಲ್ಲಿ ಯಾವ ಜಾತಿಯವರನ್ನು ಇನ್ನೊಂದು ಜಾತಿಯವರು ಒಳಗೆ ಸೇರಿಸಿಕೊಳ್ಳುತ್ತಿರಲಿಲ್ಲ. ಅನ್ಯ ಜಾತಿಗಳೊಂದಿಗೆ ವ್ಯಾಪಾರ ಸಂಬಂಧಗಳು ನಡೆಯುತ್ತಿದ್ದವು. ಆದರೆ ರಕ್ತಸಂಬಂಧವನ್ನು ಬೆಸೆಯುವ ವಿವಾಹಸಂಬಂಧಗಳು ಸ್ವಜಾತಿಯಲ್ಲಿಯೇ ನಡೆಯಬೇಕಿತ್ತು. ಇದನ್ನು ಮೀರಿ ನಡೆಯುವ ಹಕ್ಕು ಯಾರಿಗೂ ಇರುತ್ತಿರಲಿಲ್ಲ. ಒಂದು ವೇಳೆ ಈ ಘಟನೆ ಸಂಭವಿಸಿದರೇ ಅವರಿಗೆ ಜಾತಿಯಿಂದ ಬಹಿಷ್ಕಾರ ಹಾಕಲಾಗುತ್ತಿತ್ತು. ಹಾಗೆಯೇ ಸ್ವಜಾತಿ ವಿವಾಹಗಳು ಕೂಡ ಜಾತಿಯತೆಯನ್ನು ಬೆಳೆಸಿದವು ಎಂದು ಅಂಬೇಡ್ಕರ್ ಪ್ರತಿಪಾದಿಸಿದ್ದಾರೆ. ಹೀಗೆ ಪ್ರತಿಯೊಂದು ಜಾತಿಯು ತನ್ನದೇ ಆದ ಗೋಡೆಯನ್ನು ನಿರ್ಮಿಸಿಕೊಂಡಿದ್ದರ ಪರಿಣಾಮವಾಗಿ ಜಾತಿಗಳಲ್ಲಿ ಅಸಮಾನತೆಗಳು ಉದಯವಾದವು. ಈ ಶ್ರೇಣೀಕೃತ ಜಾತಿ ವ್ಯವಸ್ಥೆಯಲ್ಲಿ ಮೇಲ್ವರ್ಗದವರನ್ನು ಕೆಳವರ್ಗದವರು ಅನುಕರಿಸುವ ಪ್ರಕ್ರಿಯೆಯೇ ಇರುವುದನ್ನು ಪ್ರತಿಪಾದಿಸಲಾಗುತ್ತದೆ. ಈ ಅನುಕರಣೆಯನ್ನೇ ಒಂದು ಆದರ್ಶ ಎಂದು ಕೂಡ ತಿಳಿಯಲಾಗಿತ್ತು. ಆದರೆ ಅನುಕರಣೆ ಮಾತು ಬಂದಾಗ ಮೇಲ್ವರ್ಗದ ಜಾತಿಯು ಕೆಳವರ್ಗದ ಜಾತಿಗಳು ತನಗೆ ಅಧೀನವಾಗಿ ಬಾಳಬೇಕು, ಏಕೆಂದರೆ ಕೆಳವರ್ಗದ ಸಂಸ್ಕೃತಿಯು ಹೀನವಾದುದು, ವಿವೇಕಯುತವಾದುದಲ್ಲ. ಅದರಿಂದ ತಾನೂ ಸ್ವೀಕರಿಸುವಂತಹ ಮೌಲ್ಯಯುತ ಅಂಶಗಳೇನು ಇಲ್ಲ ಎಂಬ ಭಾವನೆಯನ್ನು ವ್ಯಕ್ತಪಡಿಸಿತು. ಕೆಳವರ್ಗದವರಿಗೂ ಅದನ್ನು ನಂಬಿಸಿ, ಕೆಳವರ್ಗ ತಮ್ಮ ಸಂಸ್ಕೃತಿಯು ಮೇಲ್ವರ್ಗದಂತೆ ಶ್ರೇಷ್ಠವಾದುದಲ್ಲ ಎಂದು ಭಾವಿಸಿ ಸಂಸ್ಕೃತಿಕರಣಕ್ಕೆ ಒಳಗಾಗುವಂತೆ ಮಾಡಿದವು.

ಮೊದಲಿಗೆ ಗುಣ-ಕರ್ಮಗಳಿಗಾಗಿ ಹುಟ್ಟಿಕೊಂಡ ವರ್ಣವ್ಯವಸ್ಥೆಗೆ ದೇವರು, ಧರ್ಮದ ಹೆಸರಿನಲ್ಲಿ ಕಾನೂನು ಕಟ್ಟಳೆಗಳನ್ನು ನಿರ್ಮಿಸಿ ಅದರಲ್ಲಿ ಯಾವುದೇ ಬದಲಾವಣೆ ಆಗದಂತೆ ಈ ಮನುವಿನ ಧರ್ಮಶಾಸ್ತ್ರಗಳು ವಿಧಿಸಿದವು. ಎಂದೋ ಯಾವುದೋ ಕಾರಣಕ್ಕಾಗಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ಎಂಬ ವರ್ಣಗಳು ಒಂದು ಸಮಾಜದಲ್ಲಿ ಒಂದೊಂದು ಕೆಲಸಕ್ಕಾಗಿ ನಿರ್ಮಾಣಗೊಂಡವು. ಆಗ ಇವುಗಳಲ್ಲಿ ಮೇಲು-ಕೀಳಿರಲಿಲ್ಲ ಅನಿಸುತ್ತದೆ. ಇದನ್ನು ಯಾವಾಗ ಸ್ಥಿರವಾಗಿ ನಿಲ್ಲಿಸಲಾಯಿತೋ ಆಗ ಇಲ್ಲಿ ಸಮಸ್ಯೆಗಳು ಎದ್ದವು. ಉಳಿದ ಮೂರು ವರ್ಗಗಳಿಗಿಂತ ಶೂದ್ರ ವರ್ಗವನ್ನು ದುಡಿಯುವ, ಸೇವೆ ಮಾಡುವ ವರ್ಗವಾಗಿಯೇ ನೋಡಲಾಯಿತು. ಅದರಲ್ಲೂ ಈ ನಾಲ್ಕು ವರ್ಗಗಳಿಂದ ‘ದಲಿತ ವರ್ಗವನ್ನು’ ಅಸ್ಪೃಶ್ಯತೆಯ ಹೆಸರಿನಲ್ಲಿ ಊರಿನಿಂದ ಹೊರಗೆ ಇರಿಸಲಾಯಿತು. ಈ ನಾಲ್ಕು ವರ್ಗಗಳು ದಲಿತರನ್ನು ಶೋಷಿಸಿದವು. ಅವರ ನೆರಳು ಕೂಡ ಬೀಳದಂತೆ, ಅವರು ನಡೆದ ಹಾದಿಯಲ್ಲಿ ನಡೆಯದಂತೆ ಒಂದು ನಿಕ್ಕೃಷ್ಟವಾದ ಭಾವನೆಗಳನ್ನು ಸ್ಪೃಶ್ಯ ಜಾತಿಗಳು ಬೆಳೆಸಿಕೊಂಡವು. ಅವರು ಊರಿನ ಹೊರಗೆ ದಕ್ಷಿಣ ದಿಕ್ಕಿನಲ್ಲಿಯೇ ನೆಲೆಸಬೇಕು, ಭೂಮಿ ಹೊಂದಬಾರದು, ಚಪ್ಪಲಿ, ಉತ್ತಮ ವಸ್ತ್ರ, ಚಿನ್ನಾಭರಣ ಧರಿಸಬಾರದು, ಸೊಗಸಾದ ಹೆಸರು ಇಡಬಾರದು, ಕುದುರೆ ಸವಾರಿ ಮಾಡಬಾರದು, ಊರಿನೊಳಗೆ ಮೆರವಣಿಗೆ ಬರಬಾರದು, ಸ್ಪೃಶ್ಯ ಜಾತಿಯವರೊಂದಿಗೆ ವಿಧೇಯರಾಗಿ ಪರಾಧೀನತೆಯಿಂದ ಬದುಕಬೇಕು. ಹಾಗೂ ಸ್ವಂತ ಕಸುಬನ್ನು ಹೊಂದುವಂತಿಲ್ಲ. ದೇವರ ಹೆಸರಿನಲ್ಲಿ ದಲಿತ ಮಹಿಳೆಯರನ್ನು ದೇವದಾಸಿಯನ್ನರಾಗಿ ಮಾಡಿ, ಜೊತೆಗೆ ಯಜಮಾನಿಕೆಯಿಂದಲೂ ಸ್ಪೃಶ್ಯವರ್ಗಗಳು ಲೈಂಗಿಕವಾಗಿ ಬಳಸಿಕೊಂಡರು. ಹೀಗೆ ವ್ಯಕ್ತಿ ಸ್ವಾತಂತ್ರ‍್ಯವನ್ನೇ ಈ ವರ್ಗದಿಂದ ಕಿತ್ತುಕೊಳ್ಳಲಾಯಿತು. ಹಿಂದೂ ಧರ್ಮದಲ್ಲಿ ಸ್ವಾಯತ್ತ ಸಂಸ್ಥೆಗಳಾಗಿ ಬೆಳೆದ ಜಾತಿಗಳಿಂದಲೇ ವ್ಯಕ್ತಿ ಗುರುತು ಆಗುತ್ತಿತ್ತು. ಅವರು ಇಟ್ಟುಕೊಳ್ಳುವ ಹೆಸರಿನಿಂದಲೂ ಅವರನ್ನು ಜಾತಿಯನ್ನು ಗುರುತಿಸಲಾಗುತ್ತದೆ.

ಹೀಗೆ ಬೆಳೆದು ಬಂದ ವರ್ಣವ್ಯವಸ್ಥೆ ಮತ್ತು ಅದರಿಂದ ಜನ್ಮ ತಾಳಿದ ಜಾತಿ ವ್ಯವಸ್ಥೆ ಬಗ್ಗೆ ಸ್ವಂತಂತ್ರ್ಯ ಹೋರಾಟದ ಸಂದರ್ಭದಲ್ಲಿ ಭಿನ್ನವಾದ ನಿಲುವುಗಳು ಇದ್ದವು. ಉದಾಹರಣೆಗೆ ಗಾಂಧೀಜಿ ಅವರು ವರ್ಣವ್ಯವಸ್ಥೆಯಲ್ಲಿನ ಕುಲಕಸುಬುಗಳು ಒಂದು ದೇಶದ ಸಂಸ್ಕೃತಿಯ ವೈಶಿಷ್ಟ್ಯವನ್ನು ಎತ್ತಿಹಿಡಿಯುತ್ತವೆ ಎಂದರೆ, ಅಂಬೇಡ್ಕರ್ ಅವರು ಆ ವರ್ಣವ್ಯವಸ್ಥೆ ಪ್ರತಿಗಾಮಿತನದ್ದಾಗಿದ್ದು, ಅವ್ಯವಹಾರವಾಗಿದ್ದು ಅದು ಜಾತಿಪದ್ಧತಿಯ ಪ್ರಚಾರ ಮಾಡುತ್ತದೆಂದು ವಿರೋಧಿಸಿದರು. ಕುವೆಂಪು ಅವರು ಸಹ ಈ ವರ್ಣವ್ಯವಸ್ಥೆಯನ್ನು ಮತ್ತು ಅಲ್ಲಿನ ಪುರೋಹಿತಶಾಹಿ ವ್ಯವಸ್ಥೆಯನ್ನು ವಿರೋಧಿಸಿದವರು. ಅದಕ್ಕೆ ನಿದರ್ಶನ ಅವರ ‘ಶೂದ್ರ ತಪಸ್ವಿ’ ಮತ್ತು ‘ಬೆರಳ್‌ಗೆ ಕೊರಳ್’ ನಾಟಕಗಳಾಗಿವೆ. ರಾಜಕೀಯವಾಗಿ, ಸಾಮಾಜಿಕವಾಗಿ ಅಂದು ನಡೆಯುತ್ತಿದ್ದ ಈ ಎಲ್ಲ ಬೆಳೆವಣಿಗೆಗಳು ಕನ್ನಡ ನವೋದಯ ಬರಹಗಳ ಮೇಲೆ ಪ್ರಭಾವಿಸಿದವು. ಆದ್ದರಿಂದ ನವೋದಯ ಬರಹಗಳಲ್ಲಿ ಈ ಜಾತಿ ಕೇಂದ್ರಿತ ಚಿಂತನೆಗಳ ಅಧ್ಯಯನವು ಮುಖ್ಯವಾಗಿದೆ.

ಅಂಬೇಡ್ಕರ್ ಮತ್ತು ಕುವೆಂಪು ಅವರು ವರ್ಣವ್ಯವಸ್ಥೆಯನ್ನು ಕೆಡುಕಿನ ಅಂಶವಾಗಿ ನೋಡಿದರೆ, ಡಿ.ವಿ.ಜಿ ಅವರು ಅದನ್ನು ಒಂದು ಮಹಾಸಂಸ್ಕೃತಿಯಾಗಿ ನೋಡಿದರು. “ನಾನಾ ಸ್ವತಸಿದ್ಧಕಾರಣಗಳಿಂದ ನಾನಾ ಜನ ಸಮುದಾಯಗಳಲ್ಲಿ ನಾನಾ ಆಚಾರಗಳು ವ್ಯವಹಾರ ಪದ್ಧತಿಗಳು ನೆಲೆಗೊಂಡಿರುತ್ತವೆ. ಈ ಅಭ್ಯಾಸ ಭೇದಗಳ ಮತ್ತು ಸಂಪ್ರದಾಯ ಭೇದಗಳ ಆಧಾರದ ಮೇಲೆ ಆಗಿರುವುವು ವಂಶ, ಜನಪದ, ವರ್ಗ, ಜಾತಿ ಎಂಬ ಭೇದ ಗಣನೆಗಳು. ಈ ಪಂಗಡಗಳು ಯಾರೋ ಒಬ್ಬ ಮನುಷ್ಯ ಅಥವಾ ಒಂದು ಗುಂಪು ಹುಟ್ಟುಹಾಕಿದ ಕೃತ್ರಿಮ ವಿಭಜನೆಯಲ್ಲ. ಒಟ್ಟಿಗಿದ್ದದ್ದನ್ನು ಯಾರೂ ಒಡೆದು ಹಾಕಿಲ್ಲ. ಹುಟ್ಟಿನಲ್ಲಿಯೇ ಮೊಳಕೆ ಹತ್ತು ಕಾಂಡಗಳಾಗಿತ್ತು. ಮತ್ತು ಅದು ಕೊರತೆಯುಂಟು ಮಾಡಬೇಕಾದ ಸಂಗತಿಯೂ ಅಲ್ಲ. ಆ ಹತ್ತರ ಹತ್ತು ಬಗೆಯಿಂದಲೇ ಆ ಪೊದೆಯ ಸೊಗಸು ನಮಗೆ ಅಪೇಕ್ಷಣೀಯವಾದದ್ದು ವೈವಿಧ್ಯದ ವಿನಾಶವಲ್ಲ. ವೈವಿಧ್ಯದ ಸಮ್ಮಿಳಿತತೆ, ಏಕರಸತೆಯಲ್ಲ, ಸಮರಸತೆ.”  ಒಂದೇ ರೀತಿಯ ವಾಯುಗುಣ, ಭೂಪ್ರದೇಶ ಒಂದೇ ರೀತಿಯ ಜನಸ್ವಭಾವವಿಲ್ಲದ ಜನರು ಸಿಗಲು ಹೇಗೆ ಸಾಧ್ಯವಿಲ್ಲವೋ ಹಾಗೆ ಜನ ಜನಾಂಗಗಳಲ್ಲಿ, ಸಮಾಜ ವರ್ಗಗಳಲ್ಲಿ ಭೇದಭಾವಗಳು ಅನಿವಾರ್ಯವಾಗುತ್ತವೆ ಎಂಬುದು ಅವರ ವಾದ. ರಷ್ಯಾ, ಅಮೇರಿಕಾದಲ್ಲಿ ಜಾತಿವ್ಯವಸ್ಥೆ ಇಲ್ಲದಿದ್ದರೂ ಅವರಲ್ಲಿ ವೈಷಮ್ಯವಿದೆ. ಆದ್ದರಿಂದ ಜಗತ್ತಿನ ಎಲ್ಲಾ ವರ್ಗ ಮತ್ತು ಜನಾಂಗಗಳಲ್ಲಿ ವೈಷಮ್ಯಗಳು ನಡೆಯುತ್ತಿರುತ್ತವೆ. ಯಾವ ದೇಶದಲ್ಲಿಯೂ ಸಮಾನತೆ ಎಂಬ ಭಾವವೇ ಇಲ್ಲ. ಹೀಗಾಗಿ ಸಾಮಾನ್ಯ ಆಕಾರದಲ್ಲಿ ಮನುಷ್ಯರೆಲ್ಲ ಒಂದು; ವಿಶೇಷ ಆಕಾರದಲ್ಲಿ ವಂಶ, ವರ್ಗ, ಕುಲ, ಜಾತಿ, ಪೀಳಿಗೆಗೆ ಅನುಗುಣವಾಗಿ ಬೇರೆ ಬೇರೆ ಇದ್ದು, ಇಂತಹ ವರ್ಗ ವ್ಯತ್ಯಾಸ, ಜಾತಿ ವ್ಯತ್ಯಾಸಗಳಲ್ಲಿನ ವಿವಿಧತೆಯನ್ನು ‘ಮಹಾಸಂಸ್ಕೃತಿ’ ಎಂದು ಕರೆಯುತ್ತಾರೆ. ಈ ವರ್ಗ ವ್ಯತ್ಯಾಸ, ಜಾತಿ ವ್ಯತ್ಯಾಸ ಮಾನವ ಸ್ವಭಾವಕ್ಕೆ ಅನುಗುಣವಾಗಿ ಬಂದಿರುವುದರಿಂದ ಸಮಾಜದ ಸಂಘಟನೆಗೆ ಇವು ಪ್ರೇರಕ ಸಾಧಕಗಳಾಗಬೇಕು. ಅದು ಬಿಟ್ಟು ಭೇದಭಾವಗಳಲ್ಲಿ ಎಲ್ಲೆ ಮೀರಿ ನಡೆದಾಗ ಅಪಾಯಕಾರಿಗಳಾಗುತ್ತವೆ. ಲೋಕ ಜೀವನಕ್ಕೆ ಬೇಕಾದದ್ದು ಜಾತಿಗಳ ಸಾಂಕರ್ಯವಲ್ಲ; ಜಾತಿಗಳ ಸತ್ವಪೂರ್ವಕವಾದ ಅನ್ಯೋನ್ಯ ಸ್ನೇಹ. ಅದು ಹಿತಕರವಾಗಲು ಇರಬೇಕಾದದ್ದು ಔಚಿತ್ಯ ವಿವೇಕ. ಜಾಗರೂಕವಾದ ಔಚಿತ್ಯ ವಿವೇಕ.” ಎಂಬುದು ಅವರ ವಾದ.

ಹೀಗೆ ಭಾರತದಲ್ಲಿ ನೆಲೆಸಿರುವ ಜನಾಂಗಗಳನ್ನು ನೋಡಿದಾಗ ಅಲ್ಲಿ ಯಾವ ಜನಾಂಗವು ಶುದ್ಧ ಜನಾಂಗವಾಗಿರದೆ ಮಿಶ್ರಜನಾಂಗವಾಗಿರುವುದನ್ನು ಚರಿತ್ರೆ, ಪುರಾಣಗಳಿಂದಲೇ ತಿಳಿಯಬಹುದು. ಇದಕ್ಕೆ ಕಾರಣ ಶಂಬಾ ಅವರು ಹೇಳುವಂತೆ ಮಿಶ್ರವಿವಾಹ ಸಂಬಂಧಗಳು (ಆರ್ಯರ-ದ್ರಾವಿಡ) ಏರ್ಪಟ್ಟಿರುವುದು. ಆದರೆ ಈ ಸಂಪ್ರದಾಯ ಮುಂದೆ ರಾಜಪ್ರಭುತ್ವದಲ್ಲಿ ಉಳಿದರು, ಜನಸಾಮಾನ್ಯರಲ್ಲಿ ಉಳಿಯಲಿಲ್ಲ. ಸ್ವಜಾತಿಯವರಲ್ಲಿಯೇ ವಿವಾಹ ಸಂಬಂಧಗಳು ಏರ್ಪಡುತ್ತಿದ್ದವು. ಇದನ್ನು ಅಂಬೇಡ್ಕರ್ ಮತ್ತು ಶಂಬಾ ಅವರು ‘ಜಾತಿಯ ಏಕೈಕ ಲಕ್ಷಣ’ ಎಂದು ಕರೆದರು. “ಭಾರತದಲ್ಲಿ ಜಾತಿಯೆಂದರೆ ಸ್ವಜಾತಿ ಮದುವೆಯ ಆಚರಣೆಯೊಂದಿಗೆ, ಅಂತರ್ಜಾತಿ ವಿವಾಹವನ್ನು ನಿಷೇಧಿಸುತ್ತಾ, ಒಂದು ಗುಂಪು ಇನ್ನೊಂದರೊಡನೆ ಸಮ್ಮಿಳಿತವಾಗದಂತೆ ತಡೆಯುವ ಮೂಲಕ ಒಟ್ಟು ಜನಸಂಖ್ಯೆಯನ್ನು ಸ್ಥಿರ ಮತ್ತು ನಿರ್ದಿಷ್ಟ ಘಟಕಗಳ ನಡುವೆ ಕೃತಕವಾಗಿ ಕತ್ತರಿಸಿ ಹಂಚುವ ಪ್ರಕ್ರಿಯೆ. ಹೀಗಾಗಿ ಸ್ವಜಾತಿ ವಿವಾಹವು ಜಾತಿಗೇ ವಿಶಿಷ್ಟವಾದ ಏಕೈಕ ಗುಣವೆಂದು ತೀರ್ಮಾನಿಸುವುದು ಅನಿವಾರ್ಯ” ಎಂದು ಹೇಳುತ್ತಾ, ಅಂಬೇಡ್ಕರ್ ಅವರು ಜಾತಿವ್ಯವಸ್ಥೆಯ ರಹಸ್ಯ ಸ್ಫೋಟಕ್ಕೆ ಸ್ವಜಾತಿ ವಿವಾಹವು ಕೂಡ ಒಂದು ಕೀಲಿಕೈಯೆಂದೇ ಭಾವಿಸಿದ್ದರು. ಈ ಮನೋಧರ್ಮವನ್ನು ಬದಲಾಯಿಸಲು ಅಂತರ್ಜಾತಿ ವಿವಾಹದಿಂದ ಮಾತ್ರ ಸಾಧ್ಯ ಎಂಬುದನ್ನು ಪ್ರಮುಖವಾಗಿ ಪ್ರತಿಪಾದಿಸಿದರು. ಇದು ಸಾಧ್ಯವಾದರೆ ಜನರ ನಡುವೆ ಯಾವುದೇ ಜಾತಿಭೇದಗಳಿಲ್ಲದೆ ಸೋದರತೆ, ಭ್ರಾತೃತ್ವ ಮತ್ತು ಸಮಾನತೆ ಬೆಳೆಯಲು ಸಾಧ್ಯವಾಗುತ್ತದೆ ಎಂದು ನಂಬಿದರು. ಇವರಂತೆಯೇ ಮುಂದೆ ಗಾಂಧೀಜಿ ಮತ್ತು ಅವರ ಅನುಯಾಯಿಗಳು ಅಂತರ್ಜಾತಿ ವಿವಾಹಕ್ಕೆ ಪ್ರೋತ್ಸಾಹ ನೀಡಿದರು ಕೂಡ ಸಮಾಜ ಅದನ್ನು ಸ್ವೀಕರಿಸಲಿಲ್ಲ. ಶಂಬಾ ಅವರು ಕೂಡ ಭಾರತದ ಒಳಜಾತಿಗಳಲ್ಲಿ ಐಕ್ಯ, ಸಮಾನ ಭಾವಗಳು ಬೆಳೆಯಲು ಮಿಶ್ರವಿವಾಹಗಳು ಆಗಬೇಕಾದದು ಅನಿವಾರ್ಯ ಎಂದು ಹೇಳುತ್ತಾರೆ. ಇದರಿಂದ ಜಾತೀಯತೆಯಳಿದು, ಭಾರತದಲ್ಲಿ ಒಂದು ಜನಾಂಗ ನಿರ್ಮಾಣಕ್ಕೆ ಕಾರಣವಾಗುತ್ತದೆಂದು ಭಾವಿಸಿದರು.  ಇಂತಹ ಪ್ರಗತಿಪರ ಚಿಂತನೆಗಳು ನಡೆದರು ಹಿಂದೂ ಸಮಾಜದ ವರ್ಣವ್ಯವಸ್ಥೆ ಬದಲಾಯಿತೇ ಹೊರತು; ಜಾತಿ ವ್ಯವಸ್ಥೆ ಬದಲಾಗಲಿಲ್ಲ. ಕಾಲಕ್ಕೆ ತಕ್ಕಂತೆ ಅದು ಆಳುವ ವರ್ಗಗಳಿಂದ ಹೊಸ ಹೊಸ ರೂಪಗಳನ್ನು ಪಡೆದು ಬೆಳೆಯುತ್ತ ಹೋಗುತ್ತಿದೆ. ಜಾತಿ ವ್ಯವಸ್ಥೆಯನ್ನು ಬಹಿಷ್ಕರಿಸಿ ಜಾತಿಯಿಂದ ದೂರ ಉಳಿದ ಕೆಲವು ಸಾಮಾಜಿಕ ಸುಧಾರಕರನ್ನು, ಚಿಂತಕರನ್ನು ಮತ್ತೆ ತಮ್ಮ ಜಾತಿಯ ನಾಯಕರನ್ನಾಗಿ ಗುರುತಿಸಿಕೊಳ್ಳುವ ವ್ಯವಸ್ಥೆ ಶುರುವಾಗಿದೆ.

ಜಾತಿಗಳು ಬೆಳೆದು; ಧರ್ಮಗಳು ವಿಕಾಸಗೊಂಡು ಪ್ರವರ್ಧಮಾನ ಸ್ಥಿತಿಗೆ ಬಂದಾಗ ಆರೋಗ್ಯಕರವಾದ ಸಮಾಜ ಬೆಳೆಯಲಿಲ್ಲ. ಜನರಿಗೆ ‘ಧರ್ಮ’ ಎನ್ನುವ ಕಲ್ಪನೆ ಗೊತ್ತಿಲ್ಲದಿದ್ದರು ತಮ್ಮ ಜಾತಿಯ ಬಗ್ಗೆ ತಿಳಿದಿದ್ದರು. ಅದರೊಂದಿಗೆ ಭಾವ ಪ್ರಧಾನವಾದ ಸಂಬಂಧವನ್ನು ಬೆಳೆಸಿಕೊಂಡಿದ್ದರು. ಬೇರೆ ಧರ್ಮಗಳಲ್ಲಿ ಯಾವುದೇ ತೊಂದರೆ ಅನುಭವಿಸಿದಾಗ ಜನ ಒಂದಾಗುವಂತೆ ಹಿಂದೂ ಧರ್ಮಿಯರು ಒಂದಾಗುವುದು ಸಾಧ್ಯವಿರಲಿಲ್ಲ. ಪರಸ್ಪರ ಮಾನವರಲ್ಲಿ ನಾವೆಲ್ಲಾ ಒಂದು ಎಂಬ ಭಾವನೆ ಇಲ್ಲದ ಕಾರಣದಿಂದಲೇ ಭಾರತ ಸ್ವಾತಂತ್ರ್ಯಯ ಹೋರಾಟದಲ್ಲಿ ಸಂಘಟನೆಯ ವಿಷಯದಲ್ಲಿ ಹಲವು ಏಳು-ಬೀಳುಗಳನ್ನು ಅನುಭವಿಸುವಂತಾಯಿತು. ಜನರು ಯಾವುದನ್ನಾದರೂ ಬಿಟ್ಟು ಬಾಳುವರು, ಆದರೆ ಜಾತಿ ಬಿಟ್ಟು ಬಾಳಲು ಮತ್ತು ಅದರಲ್ಲಿ ಬದಲಾವಣೆ ತರಲು ಒಪ್ಪುತ್ತಿರಲಿಲ್ಲ. ಸ್ವಾತಂತ್ರ‍್ಯ ಚಳವಳಿಯ ಸಂದರ್ಭದಲ್ಲಿ ಗಾಂಧೀಜಿ ಅವರ ಖಾದಿ ಪ್ರಸಾರ, ಮಾಂಸಾಹಾರ ಮತ್ತು ಮಧ್ಯಪಾನ ನಿಷೇಧಕ್ಕೆ ಜನಮಾನ್ಯತೆ ನೀಡಿದಂತೆ ಅಸ್ಪೃಶ್ಯತೆಯ ನಿವಾರಣೆಗೆ ಅವರ ಮನೋಭಾವವನ್ನು ಬದಲಾಯಿಸಲು ಸಿದ್ಧರಿರಲಿಲ್ಲ. ಜನರ ಈ ಮನೋಧರ್ಮವನ್ನು ಕಾರಂತರು ತಮ್ಮ ಆತ್ಮಕಥೆಯಲ್ಲಿ ತಮಗಾದ ಅನಭವದಿಂದಲೇ ಹೇಳಿಕೊಂಡಿದ್ದಾರೆ. “ಅಸ್ಪೃಶ್ಯತಾ ನಿವಾರಣೆಯ ವಿಚಾರದಲ್ಲಂತು ನಮ್ಮ ಕುಂದಾಪುರದ ಜನರಿಗೆ ಮನ್ನಣೆ ಬರಲಾರದು. ಕಾರಣವಿಷ್ಟೇ; ತೀರ ಹಳೆಯ ಮಾದರಿಯ ಜನ; ಕಟ್ಟುಕಟ್ಟಲೆಗಳಲ್ಲಿ ಮುಳುಗಿ ತೇಲಿದವರು. ಅವರಲ್ಲಿನ ಅಂಧಶ್ರದ್ದೆ ಹೇಳತೀರದಷ್ಟು. ಅಂಥವರ ಮುಂದೆ ‘ಅಪ್ಪ ನೆಟ್ಟ ಆಲದಮರ ತಬ್ಬಬಾರ’ದೆಂದು ಗಾಂಧೀಜಿಯವರ ತತ್ವೋಪದೇಶ, ಸ್ವಾಮಿ ದಯಾನಂದರ ಶಾಸ್ತ್ರಚಿಕಿತ್ಸೆ, ಇವನ್ನೆಲ್ಲ ಕೂಡಿಸಿ ಹೇಳಿದರೆ, ತಮ್ಮಪ್ಪ ಅಜ್ಜಂದಿರಿಗಿಂತಲೂ ಗಾಂಧೀಜಿಯವರಾಗಲೀ, ಆ ಸ್ವಾಮಿ ದಯಾನಂದರಾಲೀ ಹೆಚ್ಚಿಗೆ ಬಲ್ಲವರೆಂದು ಆ ಜನರು ಒಪ್ಪಿಕೊಂಡಿದ್ದಾರೇಯೇ?”  ಹೀಗೆ ‘ಜಾತಿ’ ಎಂಬ ಭಾವಪ್ರಧಾನದ ವಿಷಯದೊಂದಿಗೆ ಜನರು ಎಂದಿಗೂ ತಮ್ಮ ಮನೋಧರ್ಮ ಬದಲಾಯಿಸುತ್ತಿರಲಿಲ್ಲ. ಹೀಗೆ ಸಾಮಾನ್ಯ ಜನರಿಗೆ ತಮ್ಮ ಧರ್ಮ, ಸಂಸ್ಕೃತಿ, ದೇಶದ ಬಗ್ಗೆ ತಿಳಿವು ಇಲ್ಲದಿದ್ದರು ತಮ್ಮ ಜಾತಿಯ ಬಗ್ಗೆ ಚೆನ್ನಾಗಿ ತಿಳಿದಿರುತ್ತಾರೆ.

ಅಸ್ಪೃಶ್ಯತೆ ನಿವಾರಣೆ ಕುರಿತು ಉಂಟಾದ ಜನಜಾಗೃತಿಯ ಕಾರ್ಯಕ್ರಮಗಳಲ್ಲಿ ನವೋದಯರಿಗೆ ಗಾಂಧಿ ಪ್ರಭಾವವೇ ಹೆಚ್ಚಾಗಿತ್ತು. ಅಂಬೇಡ್ಕರ್ ಆ ಸಂದರ್ಭದಲ್ಲಿ ಇವರನ್ನು ಮುಟ್ಟಿರಲಿಲ್ಲ ಎಂದೇ ಹೇಳಬಹುದು. ಆ ಕಾಲದ ಯಾವ ಪ್ರಮುಖ ಬರಹಗಾರರಲ್ಲೂ ಇವರ ಪ್ರಭಾವ ಕಂಡು ಬಂದಿಲ್ಲ. ಮಾಸ್ತಿ ಅವರು ಮಾತ್ರ ಅಂಬೇಡ್ಕರ್ ಬೌದ್ಧ ಧರ್ಮ ಸ್ವೀಕರಿಸಿದ್ದನ್ನು ಒಪ್ಪದೆ ಅದಕ್ಕೆ ಪ್ರತಿಕ್ರಿಯೆಯಾಗಿ ತಮ್ಮ ‘ಧರ್ಮ ಸಂರಕ್ಷಣೆ’ ಕೃತಿಯನ್ನು ರಚಿಸಿದರು. ನವೋದಯರ ಪ್ರಮುಖ ವೈಚಾರಿಕ ಚಿಂತಕರಾದ ಕುವೆಂಪು ಮತ್ತು ಕಾರಂತರಲ್ಲಿಯೂ ಬರುವ ದಲಿತರ ಬದುಕಿನ ಚಿತ್ರಣದಲ್ಲಿಯೂ ಅವರ ಸಮಕಾಲೀನವರೇ ಆದ ಅಂಬೇಡ್ಕರ್ ಅವರ ಯಾವ ಅಂಶಗಳು ಪ್ರಭಾವಿಸಿದ್ದಂತೆ ಕಾಣುವುದಿಲ್ಲ. ಕಾರಣ ಕರ್ನಾಟಕದ ಅಂದಿನ ಪರಿಸ್ಥಿತಿ ಹಾಗೆ ಇತ್ತು. ಹೇಗೆ ಭಾರತ ಹರಿದು ಹಂಚಿಹೋಗಿತ್ತೋ ಹಾಗೇ ಕರ್ನಾಟಕವು ಹಲವು ಭಾಗಗಳಾಗಿ ಮುಂಬೈ, ಮದ್ರಾಸ್, ಹೈದರಬಾದ್ ಮತ್ತು ಮೈಸೂರು ಭಾಗಗಳಿಗೆ ಹಂಚಿಕೆಯಾಗಿದ್ದು ಒಂದು ಏಕೀಕೃತ ಆಳ್ವಿಕೆ ಇರಲಿಲ್ಲ. ಉತ್ತರ ಕರ್ನಾಟಕದ ಭಾಗಗದಲ್ಲಿ ಅಂಬೇಡ್ಕರ್ ಚಳವಳಿಯ ಪ್ರಭಾವ ಸ್ವಲ್ಪ ಮಟ್ಟಿಗೆ ಕಾಣಿಸಿಕೊಂಡಿತು. ಆದರೆ ದಕ್ಷಿಣ ಭಾಗಕ್ಕೆ ಅವರ ಹೋರಾಟದ ಪ್ರಭಾವಗಳು ಕಾಣಿಸಿಕೊಂಡಿರಲಿಲ್ಲ. ಈ ಭಾಗದಲ್ಲಿ ಮದ್ರಾಸ್ ಪ್ರಾಂತ್ಯದ ಬ್ರಾಹ್ಮಣೇತರ ಚಳವಳಿಗಳ ನೇರ ಪ್ರಭಾವವಿತ್ತು. ಆದರೆ ಕುವೆಂಪು, ಕಾರಂತ ಮತ್ತು ಅಂಬೇಡ್ಕರ್ ಈ ಮೂವರು ಅಂದಿನ ವೈದಿಕಶಾಹಿಯ ‘ಭಾರತೀಯ ಸಂಸ್ಕೃತಿ’ಯನ್ನು ಪ್ರಶ್ನಿಸುವ ಮನೋಧರ್ಮವನ್ನು ಹೊಂದಿದವರಾಗಿದ್ದು, ‘ಸಂಸ್ಕೃತಿ ಪುನರ‍ಚನೆ’ಯ ಚಿಂತಕರಾಗಿದ್ದರೆಂದು ಜಿ.ಹೆಚ್.ನಾಯಕರು ಹೇಳುತ್ತಾರೆ. ಮೈಸೂರು ಮತ್ತು ಮದ್ರಾಸ್ ಭಾಗದಲ್ಲಿ ವೈದಿಕೇತರ ಚಳವಳಿಗಳ ಪ್ರಭಾವ ಹೆಚ್ಚಾಗಿದ್ದರಿಂದ ಅಂಬೇಡ್ಕರ್ ಅವರ ಹೋರಾಟಗಳು ಇಡೀ ಕರ್ನಾಟಕ ಅಥವಾ ದಕ್ಷಿಣ ಪ್ರಾಂತ್ಯವನ್ನು ಮುಟ್ಟುವುದು ತಡವಾದರೂ, ಮುಂಬೈ ಪ್ರಾಂತ್ಯದ ಭಾಗವನ್ನು ಮುಟ್ಟಿದ್ದವು.

       ಕರ್ನಾಟಕದ ನವೋದಯ ಪೂರ್ವ ಮತ್ತು ನವೋದಯ ಕಾಲದಲ್ಲಿ ಬರೆಯಲಾರಂಭಿಸಿದ್ದ ಪ್ರಮುಖ ಮೂರು ದಲಿತ ಬರಹಗಾರರಾದ ದೇವರಾಯ ಇಂಗಳೆ, ಸೊಸಲೆ ಸಿದ್ದಪ್ಪ, ಡಿ. ಗೋವಿಂದ ದಾಸ್ ಇವರುಗಳಲ್ಲಿ, ಸೋಸಲೆ ಸಿದ್ದಪ್ಪ, ಡಿ.ಗೋವಿಂದಾಸ ಇಬ್ಬರು ಅಂಬೇಡ್ಕರ್ ಪ್ರಭಾವಕ್ಕಿಂತ ಗಾಂಧೀಜಿ ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ ಪ್ರಭಾವಕ್ಕೆ ಒಳಗಾಗಿದ್ದರು. ಈ ಇಬ್ಬರು ಮೈಸೂರು ಪ್ರಾಂತ್ಯದವರಾಗಿದ್ದರಿಂದ ಅಂಬೇಡ್ಕರ್ ಅವರ ದಲಿತ ಹೋರಾಟಗಳ ನೇರ ಪ್ರಭಾವ ಇವರ ಮೇಲಾಗಲಿಲ್ಲ. ಅದರೆ ನಾಲ್ವಡಿ ಕೃಷ್ಣರಾಜ ಒಡೆಯರು ಜಾರಿಗೆ ತಂದ ಸಾಮಾಜಿಕ ಸುಧಾರಣೆಯಿಂದ ಶಿಕ್ಷಣ ಪಡೆದ ಮೊದಲ ತಲೆಮಾರಿನ ದಲಿತ ಬರಹಗಾರರಾದ ಈ ಇಬ್ಬರಲ್ಲಿ ತಮ್ಮ ಈ ಏಳಿಗೆಗೆ ಕಾರಣರಾದ ಒಡೆಯರಲ್ಲಿ ಸ್ವಾಮಿ ಭಕ್ತಿ ಇತ್ತು. ಡಿ. ಗೋವಿಂದಾಸರಿಗೆ ನಂತರದಲ್ಲಿ ಅಂಬೇಡ್ಕರ್ ಅವರ ಪ್ರಭಾವ ಆಯಿತು. ದೇವರಾಯ ಇಂಗಳೆ ಅವರು ಮುಂಬೈ ಪ್ರಾಂತ್ಯಕ್ಕೆ ಸೇರಿದವರಾಗಿದ್ದು ಶಾಹುಮಹಾರಾಜ ಮತ್ತು ಅಂಬೇಡ್ಕರ್ ಅವರ ನೇರ ಒಡನಾಟವಿದ್ದರಿಂದ ಒಬ್ಬ ದಲಿತ ಹೋರಾಟಗಾರರಾಗಿ ತಮ್ಮ ಜನರ ಏಳಿಗೆಗಾಗಿ ಶ್ರಮಿಸಿದರು. ನಾಟಕಗಳನ್ನು ಬರೆದು, ಆಡಿಸಿ ಜನರಲ್ಲಿ ದಲಿತರ ಮೇಲೆ ನಡೆಯುವ ಶೋಷಣೆಗಳ ಜಾಗೃತಿ ಮೂಡಿಸಲು ಮುಂದಾದರು. ‘ದೇವದಾಸಿ’ ಪದ್ಧತಿಗೆ ದಲಿತ ಮಹಿಳೆಯರೇ ನೇರ ಗುರಿ ಆಗುತ್ತಿದ್ದರು. ಆ ಕೆಟ್ಟ ಆಚರಣೆಯ ತಡೆಗೆ ಸತತವಾಗಿ ಹೋರಾಡಿದರು. ದಲಿತರ ಭೂಮಿ ಹಕ್ಕಿಗಾಗಿಯೂ ಹೋರಾಡಿದರು. ದಲಿತರು ಶಿಕ್ಷಿತರಾದರೇ ಅಷ್ಟೇ ಅವರಿಗೆ ತಮ್ಮ ಶೋಷಣೆ ಜ್ಞಾನ ತಿಳಿಯಲು ಸಾಧ್ಯವಾಗಿದ್ದು ಶಿಕ್ಷಣ ಪಡೆಯುವಂತೆ ಜನರನ್ನು ಪ್ರೇರೇಪಿಸಿದರು. ಅದಕ್ಕೂ ಮೊದಲು ದಲಿತರು ತಮ್ಮ ಜೀವನ ಪದ್ಧತಿಯನ್ನು ಬದಲಾಯಿಸಿಕೊಳ್ಳುವಂತೆ, ಸತ್ತ ದನದ ಮಾಂಸವನ್ನು ತಿನ್ನದಂತೆ ಜನರಿಗೆ ಜಾಗೃತಿ ಮೂಡಿಸಲು ಹೋರಾಡಿದರು.

ಸೋಸಲೆ ಸಿದ್ದಪ್ಪನವರು ಗಾಂಧೀಜಿ ಅವರ ‘ಹರಿಜನೋದ್ಧಾರ’ ಕಾರ್ಯಕ್ರಮದ ಪ್ರಭಾವದಿಂದ ‘ಮತಸುಧಾರಣೆ’ (೨೦-೦೩-೧೯೩೮) ಎಂಬ ತಮ್ಮ ಭಾಷಣದಲ್ಲಿ ದಲಿತರು ತಮ್ಮ ಜೀವನ ಪದ್ಧತಿಯನ್ನು ಬದಲಾಯಿಸಿಕೊಳ್ಳಲು, ಮೇಲುವರ್ಗದವರ ಬದುಕನ್ನು ಅನುಕರಿಸಬೇಕು ಎಂದು ಹೇಳಿದರು. ಅಂದರೆ ಆಹಾರಪದ್ಧತಿ(ಮಾಂಸಾಹಾರ ಮತ್ತು ಮದ್ಯಸೇವನೆ)ಯನ್ನು ಬದಲಾಯಿಸಿಕೊಂಡು ವಾರಕ್ಕೊಮ್ಮೆಯಾದರು ಶುಚಿಯಾಗಿ, ದೈವಾರಾಧನೆ ಮಾಡುವ, ದೇವರಿಗೆ ಪ್ರಾಣಿಬಲಿ ಕೊಡುವುದನ್ನು ಬಿಟ್ಟು ಅಹಿಂಸಾ ಮನೋಭಾವವನ್ನು ತಾಳಬೇಕು ಎಂಬುದು ಅವರ ಆಶಯವಾಗಿತ್ತು. ಹಾಗೆಯೇ ಅವರಲ್ಲಿಯೂ ಈ ಸಮಾಜದ ಮೇಲ್ವರ್ಗ ದಲಿತರ ವ್ಯಕ್ತಿತ್ವದ ಸ್ವಾತಂತ್ರ್ಯವನ್ನು ಕಿತ್ತುಕೊಂಡಿರುವ ಬಗ್ಗೆ ನೋವು ಮತ್ತು ಆಕ್ರೋಶವೂ ಇತ್ತು. ಇದಕ್ಕೆ ತಮ್ಮದೇಯಾದ ಪ್ರತಿಕ್ರಿಯೆಯನ್ನು ತಮ್ಮ ಭಾಷಣದಲ್ಲಿ ನೀಡಿದ್ದಾರೆ. ಮೇಲ್ವರ್ಗದವರು ಮಠ-ಕುಲ ಗುರುಗಳನ್ನು ಹೊಂದಿರುವುದರಿಂದ ಅವರ ಸಮುದಾಯದ ಏಳಿಗೆಗಾಗಿ ಶ್ರಮಿಸುತ್ತಾರೆ. ಆದರೆ ದಲಿತರಿಗೆ ಈ ಯಾವ ವ್ಯವಸ್ಥೆಯು ಇಲ್ಲದಿರುವುದರಿಂದ ಹಾಗೂ ಮೇಲ್ವರ್ಗದಂತೆ ಒಂದು ಸ್ವತಂತ್ರ ಸಮುದಾಯವಾಗಿ ಬದುಕುವ ಜೀವಿಸುವ ಹಕ್ಕು ಇಲ್ಲದ ಕಾರಣ ಮಂದಿರಗಳೊಳಗೆ ಪೂಜೆ, ಪ್ರಾರ್ಥನೆಗೆ ಅವಕಾಶವಿಲ್ಲ. ಆದರೆ “ದೇವರಿಗೆ ತಮ್ಮಿಂದ ಸ್ವೀಕರಿಸುವ ಕಪ್ಪಕಾಣಿಕೆಗೆ ಭೇದ ಮಾಡಲ್ಲ; ನಮಗೆ ಒಳಗೆ ಸೇರಿಸಲು ಮಾತ್ರ ಭೇದ ಉಂಟು” ಎಂದು ಪ್ರಶ್ನಿಸಿದವರು.

ಮುಂದುವರೆದು “ಈಶ್ವರ ಸೃಷ್ಟಿಯ ಮಾನವ ಜಾತಿಯಲ್ಲಿ ಗಂಡು ಹೆಣ್ಣುಗಳೆಂಬ ಎರಡು ಜಾತಿಗಳಿರುತ್ತವೆ. ಇವುಗಳಲ್ಲಿ ಈಶ್ವರನಿಗೆ ಯಾವ ಭಿನ್ನಾಭಿಪ್ರಾಯವೂ ಇರುವುದಿಲ್ಲ. ದೇವರ ಇದಿರಿನಲ್ಲಿ ಎಲ್ಲರೂ ಶ್ರೇಷ್ಠರು, ಎಲ್ಲರೂ ಸಮಾನರು ಎಂಬುದಾಗಿ ಬುದ್ಧದೇವನು ಸಾರಿ ಸಾರಿ ಹೇಳಿರುತ್ತಾನೆ. ಹೀಗಿದ್ದಾಗ್ಯೂ ಮತಾಚಾರ್ಯರ ಹಾವಳಿಯಿಂದ ದಿನದಿನವೂ ಅನಂತ ಜನಾಂಗ ಉತ್ಪತ್ತಿಯಾಗುತ್ತಿರುವುದು ಯಾರು ಯಾರು ಯಾವ ಯಾವ ಮತವನ್ನುತ್ಪತ್ತಿ ಮಾಡಿದಾಗ್ಯೂ ನಮ್ಮನ್ನು ಮಾತ್ರ ಹಿಂದು ಹಿಂದಕ್ಕೆ ಅಟ್ಟಿ ಬಿಡುತ್ತಲೇ ಇರುವರು. ಇದಕ್ಕೆ ನಾವು ಮಾಡಿದ ತಪ್ಪೇನೋ ಗೊತ್ತಾಗಲಿಲ್ಲ. ಇದುವರೆಗೆ ನಮ್ಮನ್ನು ಹೊಲೆಯರು, ಬಲಗೈಯವರು, ಪಂಚಮರು ಎಂದೂ, ಈಗ ಆದಿಕರ್ನಾಟಕರೆಂದು ಕರೆವರು, ನಾಳೆ ಮತ್ತೇನೆಂದು ಕರೆವರೊ ಗೊತ್ತಿಲ್ಲ. ಹೀಗೆ ದಿನಕ್ಕೊಂದು, ವಾರಕ್ಕೊಂದು, ತಿಂಗಳಿಗೊಂದು, ವರ್ಷಕ್ಕೊಂದು ಹೆಸರಿಟ್ಟು ಕರೆದರೂ ನಾವು ಅದಕ್ಕೆಲ್ಲ ಸಮ್ಮತಿಸುತ್ತಿರುವೆವೇ ಹೊರತು ಯಾಕೆ ನಮ್ಮನ್ನು ಹೀಗೆ ಕರೆವಿರೆಂದು ಯಾರೂ ಕೇಳಲೇ ಇಲ್ಲ. ಇತರೇ ವರ್ಣದವರನ್ನು ನಾಮಧೇಯದಿಂದ ಮತ್ತೊಂದು ನಾಮಧೇಯಕ್ಕೆ ಬದಲಾಯಿಸಿದ್ದರೆ ಅವರೆಷ್ಟು ಕಾದಾಡುತ್ತಿದ್ದರೋ ನೋಡಬಹುದಾಗಿತ್ತು. ಆದರೆ ನಾವೂ ಕೇಳುವಂತಿಲ್ಲ. ನಮ್ಮ ಪರವಾಗಿ ಕೇಳುವ ಮಠ ಮಾನ್ಯಾದಿ ವಕೀಲರೂ ಇರುವುದಿಲ್ಲ. ಇದಕ್ಕೂ ನಾವು ಒಬ್ಬರು ಮಠಾಧಿಪತಿಗಳೆಂಬ ವಕೀಲರನ್ನಿರಿಸಿಕೊಳ್ಳುವುದು ಅತಿಮುಖ್ಯವಾದ ಕಾರ್ಯವೆಂದು ಸಕಲರೂ ದೃಢವಾಗಿ ನಂಬಿಕೊಳ್ಳಬೇಕು.”  ಅವರ ಈ ಮಾತುಗಳಲ್ಲಿ ದಲಿತವರ್ಗ ಸಮಾಜಕ್ಕೆ ಗಟ್ಟಿಯಾಗಿ ಮಾತನಾಡುವ ಧ್ವನಿಯಿಲ್ಲದೆ ಮೇಲ್ವರ್ಗದವರು ಏನೇ ವಿಧಿಸಿದರೂ ಅದರಂತೆ ಬದುಕುವ ಜೀವನವಾಗಿದ್ದು, ಅದರಿಂದ ಹೊರಬರುವ ದಾರಿಯನ್ನು ಕಾಣಬೇಕಾಗಿದೆ ಎಂಬ ಆಶಯವಿದೆ.

ಸೋಸಲೆ ಸಿದ್ಧಪ್ಪನವರಂತೆಯೇ ಅಂಬೇಡ್ಕರ್ ಅವರು ಕೂಡ, ದಲಿತ ವರ್ಗಕ್ಕೆ ಒಂದು ಧ್ವನಿ ಇಲ್ಲ ಎಂಬುದನ್ನು ಹೇಳುತ್ತಾರೆ. ಸ್ವಾತಂತ್ರ‍್ಯ ಸಂಗ್ರಾಮದ ಸಂದರ್ಭದಲ್ಲಿ ಅಂಬೇಡ್ಕರ್ ಅವರು ಸಾಮಾಜಿಕ ಸಮಾನತೆಗಾಗಿ ಆಗ್ರಹಿಸಿದಾಗ ಕೆಲವರಿಂದ ಬಂದ ವಿರೋಧಕ್ಕೂ ಪ್ರತಿಕ್ರಿಯಿಸಿದರು. ಕೆಲವರು ರಾಜಕೀಯ ಸ್ವಾತಂತ್ರ್ಯಕ್ಕೆ ಪ್ರಾಮುಖ್ಯತೆ ನೀಡಿ ಅಸ್ಪೃಶ್ಯತೆಯು ಸೋವಿಯತ್ ಅಮೇರಿಕಾದಂತಹ ಗುಲಾಮಗಿರಿಗಿಂತಲೂ ಹೀನಾಯವಾದುದಲ್ಲ(ಲಾಲಾ ಲಜಪತ್ ರಾಯ್ ‘ನೆಮ್ಮದಿ ಇಲ್ಲದ ಭಾರತ’ ಕೃತಿ) ಎಂದು ಅಸ್ಪೃಶ್ಯತೆಯನ್ನು ಸಮರ್ಥಿಸಲು ಹೊರಟರು. ಹೀಗೆ ಗುಲಾಮಗಿರಿ ಮತ್ತು ಅಸ್ಪೃಶ್ಯರ ವಾಸ್ತವಿಕ ಸ್ಥಿತಿಗಳನ್ನು ಹೋಲಿಕೆ ಮಾಡುವುದನ್ನು ಅಂಬೇಡ್ಕರ್ ಅವರು ಖಂಡಿಸುತ್ತಾರೆ. ಅವೆರಡು ಪರಸ್ಪರ ವಿರುದ್ಧವಾದವು, ಒಂದು ವೇಳೆ ಗುಲಾಮಗಿರಿಗೆ ಮುಕ್ತಿ ಸಿಗಬಹುದು(ಈಗ ಸಿಕ್ಕಿದೆ), ಆದರೆ ಹಿಂದೂ ಸಮಾಜದಲ್ಲಿನ ಅಸ್ಪೃಶ್ಯ ಎಂಬ ಹಣೆ ಪಟ್ಟಿ ಹೊತ್ತ ಜಾತಿಗೆ ಮುಕ್ತಿ ಸಿಗುವುದಿಲ್ಲ ಎನ್ನುವ ಅವರ ಮಾತು ಇಂದಿಗೂ ಸತ್ಯವಾಗಿದೆ. ರೋಮ್ ಗುಲಾಮರಿಗೆ ಓದುವುದನ್ನು ಬರೆಯುವುದನ್ನು ಯಜಮಾನರು ಕಲಿಸುತ್ತಿದ್ದರು. ಅವರಲ್ಲಿ ಅಲಂಕಾರಿಕ, ವ್ಯಾಕರಣಕಾರ, ತತ್ವಜ್ಞಾನಿ, ಬೋಧಕ, ವೈದ್ಯ, ಕಲಾವಿದ ವೃತ್ತಿಗಳಲ್ಲಿ ತೊಡಗಿದ್ದವರು ಇದ್ದರು. ಅವರುಗಳಲ್ಲಿ ಆಳು ಮತ್ತು ಒಡೆಯ ಎಂಬ ಭೇದದ ಸಂಬಂಧವಿತ್ತು. ಆದರೆ ಭಾರತೀಯ ದಲಿತರಿಗೆ ಈ ಅವಕಾಶವನ್ನು ನೀಡಲಿಲ್ಲ. ಅಸ್ಪೃಶ್ಯರಿಗೆ ನಾಗರಿಕತೆಯ ಉನ್ನತ ಕಲಾ ಸ್ಥಾನಗಳಿಗೆ ಪ್ರವೇಶವಿಲ್ಲ ಮತ್ತು ಒಂದು ಸಾಂಸ್ಕೃತಿಕ ಜೀವನದೊಳಕ್ಕೆ ನುಸುಳಲು ದಾರಿಯಿಲ್ಲ. ಆದ್ದರಿಂದ “ಅಸ್ಪೃಶ್ಯತೆಯು ಗುಲಾಮಗಿರಿಗಿಂತಲೂ ಹೀನವಾಗಿದ್ದು ಮಾತ್ರವಲ್ಲ, ಅದರೊಂದಿಗೆ ಹೋಲಿಸಿದರೆ ಇದು ನಿಜಕ್ಕೂ ಕ್ರೂರವಾದದ್ದು ಕೂಡ. ಅವನ ಜೀವನಾಧಾರವನ್ನು ಅವನೇ ಕಂಡುಕೊಳ್ಳಬೇಕು; ಆದರೆ ಜೀವನೋಪಾಯಕ್ಕೆ ಇರುವ ಮಾರ್ಗಗಳನ್ನು ಅವನಿಗೆ ಪೂರ್ತಿಯಾಗಿ ತೆರೆಯುವುದಿಲ್ಲ. ಸ್ವತಂತ್ರವಾದ ಸಾಮಾಜಿಕ ವ್ಯವಸ್ಥೆಯ ಯಾವ ಅನುಕೂಲಗಳನ್ನೂ ಅಸ್ಪೃಶ್ಯರು ಕೇಳಿ ಪಡೆಯುವಂತಿಲ್ಲ. ಆದರೆ ಒಂದು ಸ್ವತಂತ್ರ ಸಾಮಾಜಿಕ ವ್ಯವಸ್ಥೆಯ ಎಲ್ಲ ಪ್ರತಿಕೂಲಗಳನ್ನು ಅವರು ಸಹಿಸಿಕೊಳ್ಳಬೇಕು.”  ಹೀಗೆ ಹಿಂದೂ ಸಮಾಜದಲ್ಲಿ ಅಸ್ಪೃಶ್ಯತೆ ಎಂಬುದು ಕೆಡುಕಿನ ವಾಹಕವಾಗಿದ್ದು, ಅವರನ್ನು ಮಾನವ ಜೀವಿ ಎಂಬಂತೆ ನೋಡುವುದಿಲ್ಲ. ಅಸ್ಪೃಶ್ಯತೆಯನ್ನು ಬಲವಂತವಾಗಿ ಹೇರಿ ಕಡ್ಡಾಯಗೊಳಿಸಿವುದರಿಂದ, ಗುಲಾಮಗಿರಿಗಿಂತಲೂ ಇದು ಕ್ರೂರವಾದುದು ಎಂದೇ ನೋಡುತ್ತಾರೆ. ಇವರ ಅಭಿಪ್ರಾಯಕ್ಕೆ ನಿದರ್ಶನವಾಗಿ ಭಾರತದ ಊಳಿಗಮಾನ್ಯ ವ್ಯವಸ್ಥೆಯ ಕ್ರೂರತೆಯನ್ನು ತೋರಿಸುವ ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ಮತ್ತು ಶಿವರಾಮ ಕಾರಂತರ ‘ಚೋಮನ ದುಡಿ’ ಕಾದಂಬರಿಗಳನ್ನು ನಿದರ್ಶಗಳಾಗಿ ನೋಡಬಹುದು.

ಶಂಬಾ ಮತ್ತು ಮಾಸ್ತಿಯವರು ಶೂದ್ರರು ‘ಬ್ರಾಹ್ಮಣ’ ಎನ್ನುವ ಜಾತಿಯನ್ನೇ ಗುರಿಯಾಗಿಸಿಕೊಂಡು ವಿರೋಧಿಸತೊಡಗಿದಾಗ ಅದನ್ನು ಒಪ್ಪದೆ ಶ್ರೇಷ್ಠ ಮತ್ತು ಕನಿಷ್ಠ ಎಂಬ ಭಾವನೆಗಳು ಜಾತಿಯಿಂದ ಬರುವುದಿಲ್ಲ. ಗುಣದಿಂದ ಬರುತ್ತವೆ ಎಂದು ಹೇಳಿದರು. ಬ್ರ‍್ರಾಹ್ಮಣ್ಯ ಎಂದರೆ ಸದ್ಗುಣಗಳಿಂದ ಕೂಡಿರುವಂತದು; ಆ ಗುಣ, ಶೀಲ, ನಡತೆ ಇಲ್ಲದಿರುವುದು ಶೂದ್ರತ್ವ ಎಂದು ಹೇಳುತ್ತಾರೆ. ಅವರ ಪ್ರಕಾರ ಬ್ರಾಹ್ಮಣ ಮತ್ತು ಶೂದ್ರ ಎನ್ನುವುದು ಗುಣನಡತೆಗಳಿಗೆ ಸಂಬಂಧಿಸಿದ್ದು. ಹೀಗೆ ಹೇಳುವ ಅವರ ಈ ಮಾತುಗಳು ಸಮಂಜಸವಾಗುವುದಿಲ್ಲ. ಶೂದ್ರ ವರ್ಗದವರು ಕೇವಲ ಮಧ್ಯ ಕುಡಿಯುವುದರಿಂದ, ಮಾಂಸ ತಿನ್ನುವುದರಿಂದ ಸದ್ಗುಣರಾಗಿಲ್ಲವೇ ಎಂಬ ಪ್ರಶ್ನೆ ಉಂಟಾಗುತ್ತದೆ. ಕೇವಲ ಈ ಆಹಾರ ಪದ್ಧತಿಯಿಂದ ಶ್ರೇಷ್ಠತ್ವ ಮತ್ತು ಕನಿಷ್ಠತ್ವ ಎಂಬ ಗುಣ ಸ್ವಭಾವವನ್ನು ಅಳೆಯುವುದು ತಪ್ಪಾಗುತ್ತದೆ. ಒಂದು ವೇಳೆ ತನ್ನ ಆಹಾರ ಪದ್ಧತಿಯನ್ನು ಬದಲಾಯಿಸಿಕೊಂಡು ಶೂದ್ರನು ಬ್ರಾಹ್ಮಣ್ಯ ಪಡೆಯಲು ಹೋದವರನ್ನು ಈ ವರ್ಣವ್ಯವಸ್ಥೆ ಒಪ್ಪಿಕೊಂಡಿದಿಯೇ? ಖಂಡಿತವಾಗಿಯೂ ಇಲ್ಲ. ಇದಕ್ಕೆ ರಾಮಾಯಣದ ಉತ್ತರ ಭಾಗದಲ್ಲಿ ಬರುವ ಶಂಭೂಕನ ವಧೆಯೇ ಉತ್ತರವನ್ನು ನೀಡುತ್ತದೆ. ಈ ಕಥೆಯನ್ನು ಬಳಸಿಕೊಂಡು ಹೊಸ ದೃಷ್ಟಿಯ ಸಂಸ್ಕೃತಿಯನ್ನು ನೀಡಲು ಹೋದ ಕುವೆಂಪು ಅವರು ಎದುರಿಸಿದ ಟೀಕೆಗಳು ಇದಕ್ಕೆ ನಿದರ್ಶನ.

ಈ ಬ್ರಾಹ್ಮಣತ್ವಕ್ಕೆ ಸಂಬಂಧಿಸಿದಂತೆ ಡಿ.ವಿ.ಜಿ ಅವರು ಸಹ ಒಬ್ಬ ಶೂದ್ರ ಬ್ರಾಹ್ಮಣತ್ವ ಪಡೆಯಬಹುದು. ಆದರೆ ಅದನ್ನು ಪಡೆಯಲು ಜನ್ಮಾಂತರಗಳನ್ನು ಕಾಯಬೇಕು, ಅವಸರ ಮಾಡಬಾರದು, ಅವಸರ ಮಾಡಿದರೆ ಅಧರ್ಮವಾಗುತ್ತದೆ ಎಂಬ ಮಾತುಗಳನ್ನು ಹೇಳುತ್ತಾರೆ. ಅವರು ಈ ಮಾತು ಕುವೆಂಪು ಅವರ ‘ಶೂದ್ರ ತಪಸ್ವಿ’ ನಾಟಕಕ್ಕೆ ಕೊಟ್ಟಿರುವ ಪ್ರತಿಕ್ರಿಯಾಗಿದೆ. ಶೂದ್ರ ತಪಸ್ವಿಯ ದಂಡನೆ ಕುರಿತು “ಶಂಭೂಕನು ಮಾಡಿದ್ದಲ್ಲ ತಪ್ಪು; ಬೇಡಿದ್ದು. ಅದರಲ್ಲಿಯೂ ಅವನ ಆತುರ. ಅವನು ಬೇಡಿದ್ದು ಅವನ ಆಗಣ ಶರೀರದಲ್ಲಿಯೇ ದೇವತ್ವವನ್ನು. ಅವನು ಹಾಗೆ ಆತುರ ಪಡದೆ ಉತ್ತಮ ಜನ್ಮ ಪ್ರಾಪ್ತಿಗಾಗಿ ತಪಸ್ಸು ಮಾಡಿದ್ದಿದ್ದರೆ, ತತ್‌ಕ್ಷಣದ ದೇವತ್ವಕ್ಕೆ ಬದಲಾಗಿ ಕ್ರಮಕ್ರಮವಾಗಿ ದೇವತ್ವಕ್ಕೆಂದು ತಪಸ್ಸು ಮಾಡಿದ್ದಿದ್ದರೆ, ಅದು ಅಪರಾಧವಾಗುತ್ತಿರಲಿಲ್ಲ. ಉತ್ತಮಗತಿಯನ್ನು ಸಂಪಾದಿಸಿಕೊಳ್ಳಲು ಎಲ್ಲ ಜೀವಿಗಳಿಗೂ ಅಧಿಕಾರವುಂಟು; ಶೂದ್ರನಿಗೆ ಅದು ನಿಸ್ಸಂದೇಹವಾಗಿ ಉಂಟು.”  ಎಂದು ಹೇಳುವ ಅವರ ಪ್ರಕಾರ ಜೀವನದ ಅರ್ಹತಾಭಿವೃದ್ಧಿಯೇ ವರ್ಣಾಶ್ರಮ ವ್ಯವಸ್ಥೆಯ ಅಂತಃಸತ್ವ. ಮನುಷ್ಯ ಜೀವಿಯ ಯೋಗ್ಯತೆ ಮೆಟ್ಟಿಲು ಮೆಟ್ಟಿಲಾಗಿ, ಜನ್ಮದಿಂದ ಜನ್ಮಕ್ಕೆ, ಆಶ್ರಮದಿಂದ ಆಶ್ರಮಕ್ಕೆ ಮೇಲಾಗಬೇಕು. ಒಂದೇ ಹಾರಿನಿಂದ ಗಿರಿಶಿಖರವನ್ನು ಸೇರಲಾಗದು. ಈ ಅಕ್ರಮ ಪ್ರವೃತ್ತಿಯನ್ನು ಖಂಡಿಸುವುದು ಶಂಭೂಕ ವಧೆಯ ಅಂತರ್ಭಾವ ಎಂದೇ ಗ್ರಹಿಸುತ್ತಾರೆ.

ಮಾಸ್ತಿಯವರು ಕೂಡ ತಮ್ಮ ಕಾಲಘಟ್ಟದಲ್ಲಿ ಮುನ್ನಲೆಗೆ ಬಂದ ಜಾತಿ ಕೇಂದ್ರಿತ ಚಿಂತನೆಗೆ ಪ್ರತಿಕ್ರಿಯಿಸಿದವರು. ಗುಣ ಕರ್ಮಗಳಿಗಾಗಿ ರಚನೆಯಾದ ವರ್ಣವ್ಯವಸ್ಥೆಯಲ್ಲಿ ಭೇದ ಉಂಟಾಗಿದ್ದು ಮನುಸ್ಮೃತಿ ರಚನೆಯ ಕಾಲದಿಂದಲೇ ಹೊರತು ಅದಕ್ಕೂ ಹಿಂದೆ ವೇದ-ಉಪನಿಷತ್ತುಗಳಲ್ಲಿ ಶ್ರೇಷ್ಠತೆಯ ಭೇದ ಎಣಿಸಿರಲಿಲ್ಲ ಎನ್ನುತ್ತಾರೆ. ಹಾಗೂ ವೈದಿಕ ವರ್ಗದವರೇ ವರ್ಣವ್ಯವಸ್ಥೆಯನ್ನು ಮೀರಿ ಬೇರೆ ವೃತ್ತಿಗಳನ್ನು ಅನುಸರಿಸುತ್ತಿರುವುದನ್ನು ಚರಿತ್ರೆಗಳನ್ನೇ ಆಧಾರವಾಗಿಟ್ಟುಕೊಂಡು ಹೇಳಿದ್ದಾರೆ. ವೈದಿಕರು ಅರಸರಾಗಿಯೂ ಆಳ್ವಿಕೆ(ಕದಂಬರ ಮಯೂರ ಮತ್ತು ಮರಾಠಿ ಪೇಶ್ವೆಗಳು) ನಡೆಸಿದದನ್ನು ಗಮನಿಸಬಹುದು. ಬ್ರಿಟಿಷರ ಆಧುನಿಕತೆ ಭಾರತಕ್ಕೆ ಬಂದ ಮೇಲೆ ವೈದಿಕರು ವ್ಯಾಪಾರಿಗಳು ಆದರೂ, ಹೋಟೆಲ್ ನಡೆಸಿದರು, ಕೃಷಿ ಮಾಡಿದರು ಹೀಗೆ ವರ್ಣವ್ಯವಸ್ಥೆಯನ್ನು ಪ್ರತಿಪಾದಿಸಿದ ವರ್ಗವೇ ಅದನ್ನು ಮೀರಿ ನಡೆದದ್ದನ್ನು ಬ್ರಾಹ್ಮಣ ಆಚಾರ-ವಿಚಾರಗಳು ಬದಲಾಗುತ್ತಿರುವುದನ್ನು ಮಾಸ್ತಿ ಅವರು ಗುರುತಿಸಿದ್ದಾರೆ. ಅವರು ಹೇಳುವಂತೆ ಈ ಮೇಲಿನ ಬದಲಾವಣೆಗಳು ವೈದಿಕ ವರ್ಗದಲ್ಲಿ ಸಂಭವಿಸಿದರು ಆ ವರ್ಗದವರಲ್ಲಿ ತುಂಬಿರುವ ಜಾತಿ ಶ್ರೇಷ್ಠತ್ವದ ಭಾವ ಹೋಗುವುದಿಲ್ಲ. ಶೂದ್ರರು ಎಂದೂ ತಮ್ಮ ನೆಲೆಯಿಂದ ಮೇಲೆ ಬರಬಾರದೆಂದು ಅದು ತಡೆಯುತ್ತದೆ. ಶೂದ್ರರ ಸಂಸ್ಕೃತಿ, ಹಬ್ಬ ಆಚರಣೆ, ದೇವರು, ಉಡುಗೆ-ತೊಡುಗೆ, ರೀತಿ-ನೀತಿ, ಭಾಷೆ, ಆಚಾರ-ವಿಚಾರಗಳು ಈ ಯಾವುದಕ್ಕೂ ಪುರೋಹಿತಶಾಹಿ ವರ್ಗ ಮಾನ್ಯತೆ ನೀಡಲಿಲ್ಲ. ಅದನ್ನೆಲ್ಲ ಕೀಳು ಎಂದೇ ಭಾವಿಸಿತು. 

ಮಾಸ್ತಿ ಅವರು ವೈದಿಕ ವರ್ಗ ತನ್ನ ವರ್ಣಧರ್ಮದಿಂದ ಆಚೆ ಬಂದು ಎಲ್ಲ ವರ್ಗಗಳಲ್ಲಿಯೂ ಪಾಲ್ಗೊಳ್ಳುತ್ತಿರುವುದನ್ನು ಹೇಳಿದರೆ, ದೇವುಡು ಅವರು ಶೂದ್ರರು ವೈದಿಕರ ಜೀವನ ಪದ್ಧತಿಯನ್ನು ಅನುಸರಿಸಿ ತಮ್ಮ ಶೂದ್ರತ್ವದ ಕೆಟ್ಟಾಚರಣೆಗಳನ್ನು ಬಿಡುತ್ತಿರುವುದನ್ನು ಪ್ರಸ್ತಾಪಿಸುತ್ತಾರೆ. ಇದನ್ನು ಆರ್ಯಿಕರಣ ಎಂದು ಕರೆಯುತ್ತಾರೆ. ವೈದಿಕ, ಶೂದ್ರ, ದಲಿತ ಎಂಬ ಭಿನ್ನಭಾವಗಳಿಲ್ಲದೆ ಜನರು ಕೂಡುತ್ತಿದ್ದಾರೆ. ವೈದಿಕರು ಶೂದ್ರರ ಮನೆಗಳಿಗೆ ಹೋಗಿ ಪೂಜೆ ಮಾಡಿ ಬರುತ್ತಿದ್ದಾರೆ ಎಂದು ಅಭಿಮಾನ ಪೂರ್ವವಾಗಿ ಹೇಳುತ್ತಾರೆ. ಆದರೆ, ಅವರ ಮಾತಿನಂತೆಯೇ ನೋಡಿದರು ವೈದಿಕರು ಶೂದ್ರರ ಮನೆಗಳಿಗೆ ಪೌರೋಹಿತ್ಯ ಮಾಡಿ ಬರುವ ಹಾಗೆ, ಶೂದ್ರರ ಕೈಯಲ್ಲಿ ಯಾವ ಪೌರೋಹಿತ್ಯವನ್ನು ಸ್ವೀಕರಿಸುವುದಿಲ್ಲ. ಇದು ಇಂದಿಗೂ ಸಾಗಿ ಬಂದಿರುವ ನಿಜ ಸ್ಥಿತಿ. ಅವರು “ಬ್ರಾಹ್ಮಣರ ದೇವರುಗಳನ್ನೂ ಆ ದೇವರುಗಳ ಅವತಾರಗಳನ್ನೂ ಪೂಜಿಸುವುದು. ಗೋವನ್ನು ಗೌರವಿಸುವುದು, ಮದುವೆ ಊಟಗಳಲ್ಲಿ ಕೆಲವು ನಿಯಮಗಳನ್ನು ಅನುಸರಿಸುವುದು, ಶುಭಾಶುಭಕರ್ಮಗಳನ್ನು ಬ್ರಾಹ್ಮಣಮುಖವಾಗಿ ನಡೆಸುವುದು, ಇದು ಬ್ರಾಹ್ಮಣ ಧರ್ಮವಾದರೆ, ‘ಇದು ಇತರರನ್ನು ಸೇರಿಸಿಕೊಳ್ಳುತ್ತಿಲ್ಲ; ಬೆಳೆಯುತ್ತಿಲ್ಲ; ಎಂದು ಹೇಳುವುದು ಸರಿಯಲ್ಲ; ಅದು ಜಾತಿ ಕುಲ ಗೋತ್ರಗಳಿಲ್ಲದ ಅನಾರ್ಯರನ್ನು ಗೆದ್ದುಕೊಂಡು ತಮ್ಮವರನ್ನಾಗಿ ಮಾಡಿಕೊಳ್ಳುತ್ತಿದೆ. ಹೀಗೆ ಅನಾರ್ಯಕುಲಗಳು ತಮಗಿಂತ ಉತ್ತಮರಾದವರ ರೀತಿ ನೀತಿಗಳನ್ನು ಅನುಸರಿಸುವುದರಲ್ಲಿ ಆರಂಭವಾಗುತ್ತದೆ. ಅವರು ತಮ್ಮ ರೀತಿ-ನೀತಿಗಳನ್ನೂ, ಪೂಜಾ ಪದ್ಧತಿಗಳನ್ನೂ ಬದಲಾಯಿಸಬೇಕೆಂದು ಯಾರೂ ಹೇಳುವುದಿಲ್ಲ. ಆದರೂ ಅವರು ತಾವಾಗಿ ಜಾಗ್ರತೆಯಿಂದ ಹಿಂದೂ ಪದ್ಧತಿಗಳನ್ನು ಆಚಾರ ಸಂಪ್ರದಾಯಗಳನ್ನು ಅವಲಂಬಿಸಿ ಬ್ರಾಹ್ಮಣ ಭಕ್ತರಾಗುವುದರಿಂದ ಅವರ ಧರ್ಮವೂ, ಜೀವನವೂ ಬದಲಾಯಿಸಿ ಹೋಗುತ್ತವೆ. ಇದುವರೆಗೆ ಶುಭಾಶುಭಗಳಿಗೆ ಬ್ರಾಹ್ಮಣರನ್ನು ಕರೆಯದವರು ಈಗ ಪ್ರತಿಯೊಂದಕ್ಕೂ ಬ್ರಾಹ್ಮಣರನ್ನು ಕರೆಯುತ್ತಾರೆ. ಊಟ, ಮದುವೆ ಮೊದಲಾದ ನಿತ್ಯನೈಮಿತ್ತಿಕ ಸಂದರ್ಭಗಳಲ್ಲೆಲ್ಲಾ ಬ್ರಾಹ್ಮಣ ಪದ್ಧತಿಗಳನ್ನು ಅನುಸರಿಸುತ್ತಾರೆ; ಬರುಬರುತ್ತ ಅವರದೇ ಒಂದು ಜಾತಿಯಾಗುತ್ತದೆ” ಎಂದು ಹೇಳುತ್ತಾ, ಬ್ರಾಹ್ಮಣರು ಯಾರನ್ನು ಸ್ಪೃಶ್ಯ- ಅಸ್ಪೃಶ್ಯತೆಯ ಶೋಷಣೆ ಮಾಡುತ್ತಿಲ್ಲ, ಇಲ್ಲಿ ಎಲ್ಲಾರೊಂದಿಗೆ ಒಟ್ಟಾಗಿ ಬೆರೆಯುತ್ತಿದ್ದಾರೆ ಎಂಬ ವಾದ ಮಂಡಿಸುತ್ತಾರೆ. ಇಲ್ಲಿ ಅವರು ಶೂದ್ರರ ಶುಭಕಾರ್ಯಗಳಿಗೆ ವೈದಿಕರು ಯಾವುದೇ ಜಾತಿ ಭೇದ ಮಾಡದೇ ಹೋಗುವುದನ್ನು ವೈದಿಕರು ಜಾತಿ ಪ್ರತಿಪಾದಕರಲ್ಲ ಎಂದು ಪ್ರತಿಪಾದಿಸುತ್ತಿದ್ದಾರೆ. ಆದರೆ, ಅವರ ದೃಷ್ಟಿಯಲ್ಲಿ ಆಧುನಿಕ ಕಾಲದ ಸಮಾಜಿಕ ಬದಲಾವಣೆಯ ಸಮಾಜ ಕಾಣುತ್ತಿದೆ. ಆದ್ದರಿಂದ ಶೂದ್ರರಲ್ಲಿ ಆದ ಈ ಆರ್ಯೀಕರಣದ ಅನುಕರಣೆಯನ್ನೇ ದೇವುಡು, ಮಾಸ್ತಿ, ಡಿ.ವಿ.ಜಿ., ಅವರು ಶೂದ್ರರು ತಮ್ಮ ಕೆಟ್ಟತನಗಳನ್ನು ಕಳೆದು ಬ್ರಾಹ್ಮಣ್ಯತ್ವದ ಶ್ರೇಷ್ಠಗುಣಗಳನ್ನು ಅನುಸುತ್ತಿದ್ದಾರೆಂದು ಹೇಳುತ್ತಾರೆ.

ಆದರೆ ಕುವೆಂಪು ಅವರು ಶೂದ್ರರ ಇಂತಹ ಅವೈಜ್ಞಾನಿಕ ಅನುಕರಣೆಯನ್ನು ವಿರೋಧಿಸಿದರು. ಶೂದ್ರರು ಹೀಗೆ ಪುರೋಹಿತಶಾಹಿಯನ್ನು ಹಿಂಬಾಲಿಸಿ ಹೋಗುತ್ತಿರುವುದನ್ನು ಬಿಡಬೇಕು ಎಂದರು. ಅಂದರೆ ಜ್ಯೋತಿಷ್ಯ, ಪೂಜೆಗಳಿಗೆ, ಪಂಚಾಂಗ, ಮದುವೆಗಳಿಗೆ ಪುರೋಹಿತರನ್ನು ನೆಚ್ಚಿಕೊಳ್ಳುವುದನ್ನು ಬಿಡಬೇಕು. ಯಾವ ಪೂಜಾರಿ, ವೈದಿಕ, ಭಟ್ಟ ಕರೆಯದಿದ್ದರೂ ಶೂದ್ರರು ತಾವಾಗೇ ಅವರ ಬಳಿಗೆ ಹೋಗಿ, ಅವರ ಮೂಲಕ ದೇವರಿಗೆ ಸಲ್ಲಿಸಿದ ಪೂಜೆಯೇ ಸಲ್ಲುವುದೆಂದು ಅವರ ಕಾಲಿಗೆ ಬಿದ್ದು ನಮಸ್ಕರಿಸಿ, ತಮ್ಮ ಬೆಲೆ ತೆತ್ತು, ಅವರಿಗೆ ಬೆಲೆಕೊಟ್ಟು ಬರುವ ಮನೋಭಾವ ಹೋಗಬೇಕು. ತಮ್ಮ ದೇವರ ಪ್ರಾರ್ಥನೆ, ಪೂಜೆಯನ್ನು ಯಾವುದೇ ಪುರೋಹಿತರ ಮೂಲಕ ಸಲ್ಲಿಸದೇ ತಾವೇ ನೇರವಾಗಿ ಮಾಡಬೇಕು. ತಾವು ಇದ್ದಲ್ಲಿಯೇ ದೇವರನ್ನು ಕಾಣಬೇಕು. ದೇವರನ್ನು ಕಾಣಲು ದೇವಸ್ಥಾನಕ್ಕೆ ಹೋಗುವುದಲ್ಲ ಎಂದು ಹೇಳಿದರು.

    ಏಕೆಂದರೆ, ಶೂದ್ರರು ಪುರೋಹಿತರನ್ನು ಅವಲಂಬಿಸಿ ಹೋಗುವುದರಿಂದಲೇ ದೇಶದ ಶೇ.೫% ಇರುವ ಪುರೋಹಿತವರ್ಗ ಬಹುಸಂಖ್ಯಾತರಾದ ಶೂದ್ರರನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗಿದ್ದು. “ಮನು ಧರ್ಮಶಾಸ್ತ್ರಗಳನ್ನು ಮೂಲೆಗಿಟ್ಟು ಮನಃಶಾಸ್ತ್ರೀಯ ವ್ಯಾಖ್ಯಾನ ಮಾಡಬೇಕು” ಎಂದು ಹೇಳುವ ಮೂಲಕ, ಮೊದಲು ಶೂದ್ರರು ತಮ್ಮ ತಲೆಗಳನ್ನು ಶುದ್ಧಿ ಮಾಡಿಕೊಳ್ಳಬೇಕು. ಇದಕ್ಕಾಗಿ ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ, ಆತ್ಮಶ್ರೀಯ ಸರ್ವತೋಮುಖ ಗುಣವನ್ನು ಬೆಳೆಸಿಕೊಳ್ಳಬೇಕಾಗಿದೆ ಎಂದು ಸಾರಿದರು. ಹಿಂದೆ ಚಾತುರ್ವಣ್ಯವನ್ನು ಮನುಷ್ಯ ಸೃಷ್ಟಿ ಮಾಡಿ ಅದನ್ನು ದೇವರಿಗೆ ಆರೋಪಿಸಿ, ಗೀತೆಯಲ್ಲಿ ಕೃಷ್ಣನಿಂದಲೇ “ಚಾತುರ್ವರ್ಣ್ಯಂ ಮಯಾ ಸೃಷ್ಟಂ” ಎಂದು ಹೇಳಿಸಲಾಯಿತು. ಇದು ಸಾಲದೆ ಮಧ್ವಾಚಾರ್ಯ “ಮುಕ್ತಿಯೋಗ್ಯರು, ನಿತ್ಯಸಂಸಾರಿಗಳು, ತಮೋಯೋಗ್ಯರು” ಎಂದು ವರ್ಗೀಕರಣ ಮಾಡಿ ಜನರಲ್ಲಿ ಭೇದಭಾವ ಎಣಿಸಿದ್ದನ್ನು ವಿರೋಧಿಸಿದರು. ಜನರಲ್ಲಿ ಸ್ವರ್ಗ-ನರಕ, ಮುಕ್ತಿ-ಮೋಕ್ಷ, ಪಾಪ-ಪುಣ್ಯ ಕಲ್ಪನೆಯನ್ನು ತಂದು ಜನರ ಬದುಕನ್ನು ಮೂಢತೆಗೆ ತಳ್ಳಲಾಯಿತು. ಇದನ್ನು ಆಧಾರವಾಗಿಟ್ಟುಕೊಂಡು “ಹಿಂದಿನವರು ಮಾತ್ರವಲ್ಲ ಇಪ್ಪತ್ತನೆಯ ಶತಮಾನದ ಹಿಂದಿನ ಆಚಾರ್ಯವರ್ಗದವರು ಸ್ವಜಾತಿ ಸ್ವಾರ್ಥದೃಷ್ಟಿಯಿಂದ ತಪ್ಪು ತಪ್ಪು ವ್ಯಾಖ್ಯಾನಗಳನ್ನೆಲ್ಲ ಮಾಡಿ, ತಮ್ಮ ಜಾತಿಶ್ರೇಷ್ಠತೆಯನ್ನು ರಕ್ಷಿಸಿಕೊಂಡು ಬಾಕಿಯವರನ್ನೆಲ್ಲ ಊಳಿಗದವರನ್ನಾಗಿ ಮಾಡಬೇಕೆಂಬ ಉದ್ದೇಶದಿಂದ ಆ ರೀತಿ ಮಾಡಿಕೊಂಡು ಹೋಗಿದ್ದಾರೆ.” ಹೀಗೆ ವರ್ಣವ್ಯವಸ್ಥೆಯನ್ನು ಪೋಷಿಸುವ ಕೆಲಸ ಸಾಗುತ್ತಿರುವುದನ್ನು ಹೇಳಿದ್ದಾರೆ.

ಸ್ವಾತಂತ್ರ‍್ಯ ಭಾರತದ ನಂತರವೂ ಗೌರವಸ್ಥಾನಗಳಲ್ಲಿರುವ ಅಸ್ಪೃಶ್ಯರು ದೇವಾಲಯಕ್ಕೆ ಹೋಗಿ ಬಂದರೆ; ಶುದ್ಧೀಕರಣ ಮಾಡುವ ಪದ್ಧತಿ ಇರುವುದನ್ನು ಕುವೆಂಪು ಅವರು ೨೦-೦೪-೧೯೭೪ರಂದು ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಒಕ್ಕೂಟವನ್ನು ಉದ್ಘಾಟಿಸಿ ಮಾಡಿದ ಭಾಷಣದಲ್ಲಿ ಪ್ರತಿಕ್ರಿಯಿಸಿದರು. ಹೀಗೆ ಜಾತಿನಿಂದನೆ ಎಲ್ಲಾ ವಲಯಗಳಲ್ಲೂ ವ್ಯಾಪಿಸಿರುವುದನ್ನು ಕುರಿತು, ಕಸ ತುಂಬಿದ ಮನಸ್ಸಿನವನಿಂದ ದೇವರಿಗೆ ಮೈಲಿಗೆಯಾಗುವುದಿಲ್ಲ, ಜಾತಿಯಿಂದ ಮೈಲಿಗೆ ಎನ್ನುವವರ ಮನಸ್ಥಿತಿಯನ್ನು ಮೂಢರೂ, ಕೊಳಕರೂ, ದುಷ್ಟರೂ, ರೋಗಿಗಳು, ದುರಾಚಾರಿಗಳು ಎಂದು ನಿಂದಿಸಿದರು. ೭೦ರ ದಶಕದಲ್ಲಿ ದಲಿತ-ಬಂಡಾಯ ಸಾಹಿತ್ಯ ಚಳವಳಿ ಮತ್ತು ಪ್ರಗತಿಪರ ಚಿಂತನೆಗಳು ಹುಟ್ಟಿಕೊಂಟಿದ್ದರಿಂದ ಅದರ ತಾತ್ವಿಕ ನಿಲುವುಗಳು ಹೇಗೆ ಇರಬೇಕೆಂದು ಕುರಿತು ತಮ್ಮ ಭಾಷಣದಲ್ಲಿ ದಲಿತ ಯುವಕರಿಗೆ “ಹೀಗೆ ಅವಮಾನಿಸಿಕೊಂಡು ದೇವಾಲಯಕ್ಕೆ ಹೋಗದಿದ್ದರೆ ಏನಾಗುತ್ತದೆ? ಗುಡಿಯ ಕಲ್ಲಿನಲ್ಲಿ ದೇವರಿದ್ದಾನೆ ಎಂಬ ಭ್ರಾಂತಿ ನಿಮಗೇಕೆ? ಮತದ ಮೌಢ್ಯಕ್ಕೂ, ಪುರೋಹಿತರ ಸುಲಿಗೆಗೂ ಒಳಗಾಗುವುದಕ್ಕಿಂತ ದೂರವಿದ್ದುಕೊಂಡು ಎದೆಯ ದೇಗುಲದಲ್ಲಿಯೇ ಈಶ್ವರನನ್ನು ಇನ್ನಷ್ಟು ಅತಿಶಯವಾದ ಭಾವಭಕ್ತಿಯಿಂದ ಪೂಜಿಸಬಾರದೆ?” ಎಂದು ಕೇಳುತ್ತಾರೆ. ಅವರ ಈ ಮಾತಿಗೆ ‘ಜಲಗಾರ’ ನಾಟಕವನ್ನು ನಿರ್ದಶನವಾಗಿಟ್ಟುಕೊಂಡು ದೇವರು, ಧರ್ಮ, ಪಾಪ-ಪುಣ್ಯ ಇವುಗಳೆಲ್ಲ ಮಾನವರ ಸೃಷ್ಟಿ. ದೇವರು ವಿಶ್ವವ್ಯಾಪ್ತಿ. ಸರ್ವರೊಳಗೂ ದೇವರು ಇರುತ್ತಾನೆ. ಅವನನ್ನು ಗುಡಿಯಲ್ಲಿ ಕೂರಿಸಿ ಹೊಟ್ಟೆತುಂಬಿಸಿ ಕೊಳ್ಳುತ್ತಿರುವ ಪುರೋಹಿತಶಾಹಿವರ್ಗದವರ ಮೂಲಕ ದೇವರ ದರ್ಶನ ಮಾಡುವುದನ್ನು ಬಿಡಬೇಕು ಎಂಬುದನ್ನು ತಿಳಿಸಿದರು. ಅವರು ಕೂಡ ಹಾಗೆಯೇ ಪುರೋಹಿತಶಾಹಿತ್ವದ ಪೂಜೆ ಪುನಸ್ಕಾರಗಳಿಂದ ಹೊರಗುಳಿದು ಬದುಕಿದವರು. ಅಂದರೆ, ಅವರು ದೇವರ ನಂಬಿಕೆ, ಪೂಜೆಗಳನ್ನು ವಿರೋಧಿಸಿಲ್ಲ; ಬದಲಾಗಿ ತಮ್ಮ ಪ್ರಾರ್ಥನೆಯನ್ನು ಪುರೋಹಿತರ ಮೂಲಕ ಅರ್ಪಿಸಬೇಕೆಂಬ ನಂಬಿಕೆ ಜನರಲ್ಲಿ ಹೋಗಬೇಕು ಎಂದು ಪ್ರತಿಪಾದಿಸಿದರು. ಮತಭ್ರಾಂತಿ ಬಿಟ್ಟು ಮತಿಯನ್ನು ಬೆಳೆಸಿಕೊಂಡರೆ ಯಾವ ಸಂಪ್ರದಾಯಕ್ಕೂ ಒಳಗಾಗದೆ ಒಂದು ಪಂಥದ ಇಕ್ಕಟ್ಟಿಗೆ ಒಳಗಾಗದೆ ಎಲ್ಲ ಧರ್ಮಗಳ ದರ್ಶನ ಪಡೆದಾಗ ಪೂರ್ಣ ಜೀವನದ ಅನುಭವ ಲಭಿಸುತ್ತದೆ. ದೇವರ ಶರೀರ ರೂಪಿಯಾದ ಜಗತ್ತೆಲ್ಲವೂ ದೇವಸ್ಥಾನವಾಗುತ್ತದೆ ಎಂಬುದು ಅವರ ಪ್ರತಿಪಾದನೆ.

ಹೀಗೆ ಕುವೆಂಪು ಅವರು ವರ್ಣವ್ಯವಸ್ಥೆಯ ಪುರೋಹಿತಶಾಹಿತ್ವವನ್ನು ವಿರೋಧಿಸಿ ‘ಜಲಗಾರ’ ನಾಟಕ ರಚಿಸಿದರು. ವರ್ಣವ್ಯವಸ್ಥೆಯು ಕಟ್ಟಿದ ಧರ್ಮವನ್ನು ಮುರಿಯಲು ‘ಶೂದ್ರತಪಸ್ವಿ’ ನಾಟಕ ರಚಿಸಿದರು. ದ್ರಾವಿಡರು ರಾಕ್ಷಸರು, ಸಂಸ್ಕೃತಿಹೀನರು, ಮ್ಲೇಚ್ಛರೆಂದು ಕರೆದ ಆರ್ಯರಿಗೆ ‘ರಾಮಾಯಣ ದರ್ಶನಂ’ ಮಹಾಕಾವ್ಯದ ಮೂಲಕ ರಾವಣನಲ್ಲಿಯೂ ಉದಾತ್ತತೆಯನ್ನು ಕಾಣಿಸಿದರು. ಆರ್ಯ ಸಂಸ್ಕೃತಿ ದ್ರಾವಿಡ ಸಂಸ್ಕೃತಿಯ ವೈರುಧ್ಯವನ್ನು ಬದಲಾಗಿ ಗ್ರಹಿಸಿ ಕಟ್ಟಿದರು. ಕುವೆಂಪು ಅವರಲ್ಲಿ ಇದ್ದ ಈ ಪುನರ್ ಮೌಲ್ಯಿಕರಣವನ್ನು ಕುರಿತು ಡಿ.ಆರ್.ನಾಗರಾಜ್ ಅವರು “ಪೆರಿಯಾರ್ ಭಾರತದ ಇಡೀ ಚರಿತ್ರೆಯನ್ನು ಆರ್ಯ-ಶೂದ್ರ ದೃಷ್ಟಿಕೋನದಿಂದ ವಿವರಿಸಿ ಪ್ರತಿಸಂಸ್ಕೃತಿಯನ್ನು ಕಟ್ಟಿದರು. ಇಲ್ಲಿ ರಾಮ ಖಳನಾಯಕನಾದ, ರಾವಣ ಪೂಜ್ಯನಾದ. ಆದರೆ ಕುವೆಂಪು ಅವರಿಗೆ ರಾಮ ಖಳನಾಯಕನಾಗಲಿಲ್ಲ ಸಂಸ್ಕೃತಿಯ ಆದರ್ಶ ಪುರುಷನಾದ, ರಾವಣನು ಖಳನಾಯಕನಾಗಲಿಲ್ಲ ಉದಾತ್ತನಾದ” ಎಂದಿದ್ದಾರೆ.

ಒಬ್ಬ ಶೂದ್ರಧ್ವನಿಯ ಲೇಖಕನಾಗಿ ಕುವೆಂಪು ಅವರು ನೋಡುವ ವರ್ಣವ್ಯವಸ್ಥೆ ಮತ್ತು ಜಾತಿ ಕೇಂದ್ರಿತ ನೆಲೆಗಳೇ ಬೇರೆ; ಶೂದ್ರವರ್ಗದಿಂದ ಹೊರಗೆ ನಿಂತು ವರ್ಣವ್ಯವಸ್ಥೆಯನ್ನು ಅರ್ಥೈಸುವ ಡಿ.ವಿ.ಜಿ, ಮಾಸ್ತಿ, ದೇವುಡು ಅವರು ಚಿಂತನೆ ಕ್ರಮಗಳೇ ಬೇರೆ ಇರುವುದನ್ನು ಇಲ್ಲಿ ಗ್ರಹಿಸಬಹುದಾಗಿದೆ. ಕುವೆಂಪು ಅವರು ವೈದಿಕ ವರ್ಗದಲ್ಲಿದ್ದ ಕೆಡಕನ್ನು ಖಂಡಿಸಿ, ಅಲ್ಲಿನ ಸಂಸ್ಕೃತಿಯ ಒಳಿತಿನ ಅಂಶಗಳನ್ನು ಸ್ವೀಕರಿಸಿದವರು. ಹಾಗಾಗಿ ಅವರು ಎಂದೂ ವೈದಿಕ ಜಾತಿಯನ್ನು ವಿರೋಧಿಸಿದವರಲ್ಲ, ಆದರೆ ಅದರಲ್ಲಿನ ಪರೋಹಿತಶಾಹಿಯನ್ನು ವಿರೋಧಿಸಿದವರು. ಕೇವಲ ಹಿಂದೂ ಧರ್ಮದಷ್ಟೇ ಅಲ್ಲದೆ, ಎಲ್ಲ ಧರ್ಮಗಳ ಪುರೋಹಿತಶಾಹಿಯ ಅಟ್ಟಹಾಸವನ್ನು ವಿರೋಧಿಸಿ, ತಿರಸ್ಕರಿಸಿದವರು. ಕುವೆಂಪು ಅವರಲ್ಲಿದ್ದ ಈ ತಾತ್ವಿಕತೆಯನ್ನು ಕುರಿತು ಡಿ.ಆರ್. ನಾಗರಾಜ್ ಅವರು “ವಿಶಾಲಾರ್ಥದಲ್ಲಿ ಹಿಂದೂ ಧರ್ಮದ ಸಂವಿಧಾನದೊಳಗಿದ್ದೇ ಜಾತಿಪದ್ಧತಿಯ ಕೊಳಕು ರೂಪವನ್ನು ನಾರಾಯಣಗುರು ವಿರೋಧಿಸಿದರು. ನಾರಾಯಣಗುರುಗಳ ಹಾಗೆ ಕುವೆಂಪು ಕೂಡಾ ಹಿಂದೂ ಧರ್ಮದ ಬಗ್ಗೆ ಸಮಗ್ರ ತಿರಸ್ಕಾರ, ದ್ವೇಷದಿಂದ ಹೊರಡಲಿಲ್ಲ. ಹಿಂದೂ ಧರ್ಮದ ಸಂವಿಧಾನ ಚೌಕಟ್ಟಿನಲ್ಲೇ ಒಳಗಿನ ಬಂಡಾಯಗಾರನಾಗಿ ಉಳಿದದ್ದು ಕುವೆಂಪು ಅವರ ಸೃಜನಶೀಲ ಜೀವನದ ಅತ್ಯಂತ ಮುಖ್ಯಸಂಗತಿ” ಎನ್ನುತ್ತಾರೆ. ತಮ್ಮ ಬದುಕಿನ ಮೌಲ್ಯಾದರ್ಶಗಳನ್ನು, ತತ್ವಜ್ಞಾನದ ದರ್ಶನಗಳು, ವೈದಿಕರು ರಚಿಸಿದ ವೇದ, ಉಪನಿಷತ್ತು, ಮಹಾಕಾವ್ಯ ಮತ್ತು ಆ ವರ್ಗದ ವಿಭೂತಿ ಪುರುಷರ ಪ್ರಭಾವದಿಂದ ಪಡೆದುಕೊಂಡವರು. ಆದ್ದರಿಂದ ಒಳಿತಿನ ಅಂಶಗಳು ಯಾವ ಮತಧರ್ಮಗಳಿಂದ ಬಂದರು ಅದನ್ನು ಸ್ವಿಕರಿಸಬೇಕು ಎಂಬ ತಾತ್ವಿಕ ಬದುಕಿಗೆ ಒಳಗಾಗಿದ್ದವರು. ಆದ್ದರಿಂದ ಅವರು ವೈದಿಕ ಜಾತಿಯನ್ನು ಪ್ರಶ್ನಿಸಲಿಲ್ಲ ಜಾತಿ ಹೆಸರಿನಲ್ಲಿ ಮೆರೆಯುವ ಪುರೋಹಿತಶಾಹಿತ್ವದ ವಿರುದ್ಧ ಧ್ವನಿ ಎತ್ತಿದರು. ಅವರು ತಮ್ಮ ಭಾಷಣಗಳಲ್ಲಿಯೂ ಯಾವುದೇ ಜಾತಿಯ ವಿರೋಧವಾಗಿ ಮಾತನಾಡಿದವರಲ್ಲ. ಆದರೆ ಜಾತಿಗಳಲ್ಲಿರುವ ಅವೈಜ್ಞಾನಿಕತೆ, ಮೂಢತೆಗಳನ್ನು ಮತ್ತು ಅವುಗಳನ್ನು ಬೆಳೆಸಿದವರ ವಿರುದ್ಧ ಧ್ವನಿ ಎತ್ತಿದವರು.

ಬಸವಲಿಂಗಪ್ಪನವರ ‘ಬೂಸಾ’ ಪ್ರಕರಣಕ್ಕೆ ಪ್ರತಿಕ್ರಿಯಿಸಿದ ಕುವೆಂಪು ಅವರು ಬಸವಲಿಂಗಪ್ಪನವರ “ಹರಿಜನರ ಉದ್ಧಾರವನ್ನು ದೃಷ್ಟಿಯಲ್ಲಿಟ್ಟುಕೊಂಡು ಹೇಳುವ ಸಾಹಿತ್ಯ ಕನ್ನಡದಲ್ಲಿ ಹೆಚ್ಚಿಲ್ಲ” ಎಂಬರ್ಥದ ಮಾತನ್ನು ತಿರುಚಿ, ಹಳದಿ ಮೆದುಳು, ಹಳದಿ ಪತ್ರಿಕೆಗಳು ವಿವಾದವನ್ನು ಸೃಷ್ಟಿಸಿದ್ದನ್ನು ಟೀಕೆ ಮಾಡಿದರು. ಬಸವಲಿಂಗಪ್ಪನವರು ಹೇಳುವಂತೆ ಹರಿಜನೋದ್ಧಾರ ದೃಷ್ಟಿಯಿಂದ ಹುಟ್ಟಿದ ಸಾಹಿತ್ಯ ಕನ್ನಡದಲ್ಲಿ ಹೆಚ್ಚಿಲ್ಲ. ಆದರೆ ತೀರ ಇಲ್ಲವೆ ಇಲ್ಲ ಎನ್ನಲು ಸಾಧ್ಯವಿಲ್ಲ; ಬಂದಿವೆಂಬುದನ್ನು ತಮ್ಮ ಕೃತಿಗಳಾದ ‘ಜಲಗಾರ’, ‘ಶೂದ್ರತಪಸ್ವಿ’, ‘ಕಾನೂರು ಹೆಗ್ಗಡತಿ’, ‘ಮಲೆಗಳಲ್ಲಿ ಮದುಮಗಳು’, ಕೆಲವು ಸಣ್ಣ ಕತೆಗಳಲ್ಲಿ, ಕವನಗಳಲ್ಲಿ ದಲಿತರ ಬಗ್ಗೆ ಬಂದಿರುವುದನ್ನು ನಿದರ್ಶನ ಕೊಟ್ಟುಕೊಂಡು ಹೇಳಿದ್ದಾರೆ. ಪ್ರಾಚೀನ ಕಾಲದಿಂದಲೂ ಪಂಪ, ವಚನ ಚಳವಳಿ, ಕನಕದಾಸ, ಸರ್ವಜ್ಞ ಇವರೆಲ್ಲರು ಕುಲಗಳ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಗಾಂಧೀಜಿ ಪ್ರಭಾವದಿಂದ ನವೋದಯರ ಹರಿಜನರ ಉದ್ಧಾರವನ್ನು ಕುರಿತು ಗೊರೂರರು ‘ಹೇಮಾವತಿ’, ಕಾರಂತರ ‘ಚೋಮನದುಡಿ’, ಬೇಂದ್ರೆ ಅವರ ‘ಉದ್ಧಾರ’ ಇವುಗಳನ್ನು ನಿದರ್ಶನವಾಗಿ ಕೊಡಬಹುದು.

ಹೀಗೆ ನವೋದಯ ಬರಹಗಾರರಲ್ಲಿಯೇ ಜಾತಿ ಪ್ರಜ್ಞೆ ಕುರಿತಂತೆ ಭಿನ್ನ ದೃಷ್ಟಿಕೋನಗಳಿದ್ದವು. ಮಾಸ್ತಿ, ಡಿ.ವಿ.ಜಿ. ಅವರು ಜಾತಿವ್ಯವಸ್ಥೆ ಖಂಡಿಸಿದರು ಸಹ ಗಾಂಧಿ ಪ್ರಭಾವದ ವರ್ಣವ್ಯವಸ್ಥೆಯ ಪ್ರತಿಪಾದನೆ ಅವರಲ್ಲಿತ್ತು. ಶಂಬಾ, ತಾರಾನಾಥರು ಇವರಿಗಿಂತ ಭಿನ್ನವಾಗಿಯೇ ನಿಂತು ವೈಚಾರಿಕವಾಗಿ ವರ್ಣವ್ಯವಸ್ಥೆ ಮತ್ತು ಜಾತಿವ್ಯವಸ್ಥೆಯನ್ನು ಮೇಲು-ಕೀಳಿನ ಭೇದಭಾವಗಳನ್ನು ಖಂಡಿಸಿದವರು. ಕಾರಂತರು ಶಿಷ್ಟ ಸಂಸ್ಕೃತಿ ಸೃಷ್ಟಿಸಿದ ಆಚಾರ-ವಿಚಾರಗಳನ್ನು ಒಪ್ಪಿದವರಲ್ಲ. ಜನಪದ ಸಂಸ್ಕೃತಿಯನ್ನು ಕಲೆಮಾಧ್ಯಮಗಳ ಮೂಲಕ ಕಟ್ಟಿದವರು. ಮೂಕ ಜನರ ಇತಿಹಾಸಕ್ಕೆ ಮಾನ್ಯತೆ ನೀಡಿದವರು. ಈ ಮೇಲಿನವರಿಗಿಂತ ಶೂದ್ರ ಸಮುದಾಯದಿಂದ ಬಂದ ಕುವೆಂಪು ಅವರಲ್ಲಿ ಶೂದ್ರ ಧ್ವನಿ ಗಟ್ಟಿಯಾಗಿತ್ತು. ಶತಮಾನಗಳಿಂದ ಅಕ್ಷರ ಸಂಸ್ಕೃತಿಯಿಂದ ಹೊರಗುಳಿದಿದ್ದ ಶೂದ್ರವರ್ಗ ೧೮-೧೯ ಶತಮಾನದಿಂದ ತನ್ನ ಧ್ವನಿಯನ್ನು ಎತ್ತಲು ಶುರುಮಾಡಿತು. ಆ ವರ್ಗದಿಂದ ಬಂದ ಕುವೆಂಪು ಅವರ ಧ್ವನಿ ಕನ್ನಡ ಸಾಹಿತ್ಯದಲ್ಲಿಯೇ ಒಂದು ಹೊಸ ಚಲನೆಯನ್ನುಂಟು ಮಾಡಿತು. ಅವರು ವರ್ಣವ್ಯವಸ್ಥೆಯ ಪುನರ್ ಮೌಲ್ಯೀಕರಣವನ್ನು ‘ಸಂಸ್ಕೃತಿ ಕ್ರಾಂತಿ’ಯಾಗಿಯೇ ಸ್ವೀಕರಿಸಿದರು. ಅವರ ಸಮಕಾಲೀನರಾದ ಅಂಬೇಡ್ಕರ್ ಅವರು ‘ಸ್ವಾತಂತ್ರ‍್ಯ, ಸಮಾನತೆ ಮತ್ತು ಭ್ರಾತೃತ್ವ’ ತತ್ವವನ್ನು ಪ್ರತಿಪಾದಿಸಿದರೆ; ಕುವೆಂಪು ಅವರು ‘ಸರ್ವೋದಯ, ಸಮನ್ವಯ, ಪೂರ್ಣದೃಷ್ಟಿಯ; ಮನುಜಮತ ವಿಶ್ವಪಥ’ ಎಂಬ ವಿಶ್ವಮಾನವ ಪ್ರಜ್ಞೆಯನ್ನು ಪ್ರತಿಪಾದಿಸಿದರು. “ತನಗೆ ಯಾವ ಜಾತಿಯು ಇಲ್ಲ; ನಾನೊಬ್ಬ ವಿಶ್ವಮಾನವ ಎಂದು” ಘೋಷಿಸಿಕೊಂಡವರು.

ಹೀಗೆ ಏನೇ ವಾದ-ಪ್ರತಿವಾದ-ವಾಗ್ವಾದಗಳು ಹುಟ್ಟಿಕೊಂಡರು ಭಾರತದಲ್ಲಿ ‘ಜಾತಿ’ ಪ್ರಶ್ನೆ ಸಜೀವವಾಗಿಯೇ ಉಳಿದಿದೆ. ತೇಜಸ್ವಿ ಅವರು ಹೇಳುವಂತೆ ವರ್ಣವ್ಯವಸ್ಥೆಯ ಶ್ರೇಣಿವ್ಯವಸ್ಥೆಯಲ್ಲಿ ಮೇಲೆ ಇರುವವರ ಮನೆಯ ಪ್ರವೇಶಕ್ಕೆ ಒಂದೊಂದು ಜಾತಿಗೂ, ಒಂದೊಂದು ಹಂತವಿದೆ. ಅಂದರೆ ಹೊರಗೆ ನಿಲ್ಲುವವರು, ಹಜಾರದವರೆಗೆ ಬರುವವರು, ಅಡಿಗೆ ಮನೆಯವರೆಗೂ ಬರುವವರು ಹೀಗೆ ಮನೆ ಪ್ರವೇಶಕ್ಕೂ ಜಾತೀಯತೆಯ ಹಂತಗಳಿರುವಂತೆ ಸಾಮಾಜಿಕ ವ್ಯವಸ್ಥೆಯಲ್ಲಿಯು ಇದೆ. ‘ಜಾತ್ಯಾತೀತ’  ಎಂದು ಸಂವಿಧಾನದ ಪೀಠಿಕೆಯಲ್ಲಿ ಹೇಳಿದರೂ ಯಾರ ಮನಸ್ಸಿನಲ್ಲಿಯೂ ಜಾತ್ಯಾತೀತತೆ ಎಂಬ ಭಾವನೆ ಮೂಡಿಯೇ ಇಲ್ಲ. ದಿನನಿತ್ಯ ದಲಿತರ ಮೇಲೆ ದೌರ್ಜನ್ಯಗಳು, ಮರ್ಯಾದೆ ಹತ್ಯೆ, ದಲಿತ ಮಹಿಳೆಯರ ಲೈಂಗಿಕ ಶೋಷಣೆ, ಅತ್ಯಾಚಾರಗಳು ಸಾಗಿವೆ. ಅಂದು ಭಾರತೀಯ ಸಾಮಾಜಿಕ ಅಸಮಾನತೆಯ ಲಾಭವನ್ನು ಬ್ರಿಟಿಷರು ಪಡೆದರು. ಇಂದು ರಾಜಕೀಯ ಪಕ್ಷಗಳು ಪಡೆಯುತ್ತಿವೆ. ಜಾತಿಯೊಳಗೆ ಜಾತಿ ಉದಯಿಸಿ ಎಲ್ಲರೂ ಮೀಸಲಾತಿಗಾಗಿ ಬೇಡಿಕೆ ಇಡುವವರೇ ಆಗಿದ್ದಾರೆ. ಪರಸ್ಪರ ಗಂಡು-ಹೆಣ್ಣು ಒಲಿದು ಅಂತರ್ಜಾತಿ ವಿವಾಹವಾಗಿ ಅವರ ಪಾಡಿಗೆ ಎಲ್ಲೋ ದೂರದಲ್ಲಿ ಬದುಕಿದರೂ ಊರಿನ ಮಾನ ಮರ್ಯಾದೆ ವಿಷಯಕ್ಕಾಗಿ 'ಮರ್ಯಾದೆ ಹತ್ಯೆ’ ಮಾಡುತ್ತಾರೆ. ಇದರಿಂದ ಅಂತರ್ಜಾತಿ ವಿವಾಹದಿಂದ ಜಾತಿ ನಿರ್ಮೂಲನೆ ಆಗುತ್ತದೆಂಬುದು ಕೂಡ ಹುಸಿಯಾಯಿತು. ತೇಜಸ್ವಿ ಅವರು ಪ್ರಸ್ತಾಪಿಸುವಂತೆ ಅಂತರ್ಜಾತಿ ವಿವಾಹವಾದವರಿಗೆ ಜಾತ್ಯಾತೀತರೆಂದು ಗುರುತಿಸಿ ಸರ್ಕಾರ ಅವರಿಗೆ ಉದ್ಯೋಗ, ಶಿಕ್ಷಣದಲ್ಲಿ ಶೇಕಡಾ ೧ ರಷ್ಟು ಮೀಸಲಾತಿ ನೀಡುವ ಕಾರ್ಯಕ್ರಮ ಹಾಕಿಕೊಳ್ಳದಿದ್ದರೆ ಅದು ಬೆಳೆಯುವುದಿಲ್ಲ. ಮತ್ತೇ ಅಂತರ್ಜಾತಿ ವಿವಾಹವಾದರೂ ತಮ್ಮ ಜಾತಿಯೊಳಗೆ ಅವರು ಗುರುತಿಸಿಕೊಳ್ಳುತ್ತಾರೆ. ಸರ್ಕಾರ ಇವರನ್ನು ಪ್ರತ್ಯೇಕವಾಗಿ ಪರಿಗಣಿಸಿ ಸೌಕರ್ಯಗಳನ್ನು ನೀಡಿದಾಗ ಅದರ ಸಂಖ್ಯೆ ಹೆಚ್ಚಾಗುತ್ತದೆ ಎಂಬ ಅಭಿಪ್ರಾಯ ಹೊಂದಿದ್ದರು. ಸಿದ್ದಲಿಂಗಯ್ಯನವರು ವಿಧಾನಮಂಡಲದಲ್ಲಿಯೂ ಅಂತರ್ಜಾತಿ ವಿವಾಹವಾದವರಿಗೆ ಮೀಸಲಾತಿ ನೀಡಲು ಪ್ರಸ್ತಾಪಿಸಿದರು. ಆದರೆ ಈ ಯಾವ ಕಾರ್ಯಗಳು ಸಫಲವಾಗಿಲ್ಲದಿದ್ದನ್ನು ಅವರೇ ಹೇಳಿಕೊಂಡಿದ್ದಾರೆ. ಹೀಗೆ ಇಂದಿಗೂ ಜಾತಿ-ಧರ್ಮದ ವಿಚಾರಗಳು ಸೂಕ್ಷ್ಮ ಸಂಗತಿಗಳಾಗಿಯೇ ಉಳಿದಿವೆ.

- ಡಾ. ರಂಜಿತ ಬಿ,  ಸಹಾಯಕ ಪ್ರಾಧ್ಯಾಪಕರು,

ಕನ್ನಡ ವಿಭಾಗ, ಎಸ್‌ಟಿಜಿ ಪ್ರಥಮ ದರ್ಜೆ ಕಾಲೇಜು, ಚಿನಕುರುಳಿ.

ಬುಧವಾರ, ಅಕ್ಟೋಬರ್ 15, 2025

ಗುರು (ಕವಿತೆ) - ಹೆಚ್. ಎಸ್. ನಿಜಗುಣ.

ಜ್ಞಾನದ ದಿಗಂತದ ಬೆಳಕನು ತೋರುವ
ಗುರುವೇ ದಾರಿ ದೀವಿಗೆ;

ನೀತಿಸಂಹಿತೆಯ ಬೋಧನೆ ಮಾಡುವ
ಗುರುವೇ;ಧರ್ಮ ಸರ್ವರಿಗೆ 

ಅಜ್ಞಾನದಿಂದಲೇ ಅಕ್ಷರ ಕಲಿಸುವ
ಗುರುವೇ ಜ್ಞಾನಾರ್ಜಕನಿಗೆ;

ಮಾನವ ಕುಲಕ್ಕೆ ಮೌಲ್ಯ ಬೋಧಿಸುವ
ಗುರುವೇ ಗತಿಯ ಅರಿವಿಗೆ;

ಶ್ರದ್ಧೆಯ ತೋರುತ ಸತ್ಯದ ಸಾರುವ
ಗುರುವೇ ಹಿರಿಯ ಜನತೆಗೆ;

ವಿದ್ಯೆಯ ಕಲಿಸುವ ಬುದ್ಧಿಯ ಹೇರುವ
ಗುರುವೇ ಶೀಲದ ಶಾಲೆಗೆ;

ಚರಿತ್ರೆಯ ಕಲಿಸಿ  ಸಂಸ್ಕೃತಿ ಬೆಳೆಸುವ
ಗುರುವೇ ಪೂಜ್ಯ ಸಕಲರಿಗೆ;

ಶೀಲ ಸಂಸ್ಕಾರದ ಮಹಿಮೆಯ ಅರಿಹುವ
ಗುರುವೇ ಅನನ್ಯ ಮಾಣಿಕ್ಯ.


- ಹೆಚ್. ಎಸ್. ನಿಜಗುಣ.
ಹುಲ್ಲೇಕೆರೆ.- ತಿಪಟೂರು, ಉಪ ಪ್ರಾಂಶುಪಾಲರು.

ಜಾಣಕಿವುಡು (ಕವಿತೆ) - ಮಧುಮಾಲತಿ ರುದ್ರೇಶ್ ಬೇಲೂರು.

 

 ಹೌದು ಈಗೀಗ ನಾವೇಕೆ ಮಾತನಾಡುತಿಲ್ಲ 
ಸುಖಾ ಸುಮ್ಮನೆ ಮೌನವನೆ ಹೊತ್ತಿಹೆವಲ್ಲ
 ವಿದ್ಯಾವಂತರಾದಂತೆ ಅವಿವೇಕಿಗಳಾಗುತಿಹೆವು
ವಿನಯ ಶೀಲತೆಯ ಮರೆತು ಬಾಳುತಿಹೆವು 

 ಹೌದು ನಾವೇಕೆ ಮಾತನಾಡುತಿಲ್ಲ 
ಪರರೇಳ್ಗೆಯ ಕಂಡು ಏಕೋ ಅಭಿನಂದಿಸಲಾಗುತ್ತಿಲ್ಲ
 ಸುಮ್ಮನೆ ಮನದಲ್ಲೇ ಮಂಡಿಗೆ ಮೆಲ್ಲುತಿಹೆವಲ್ಲ 
ಲಂಚ ಭ್ರಷ್ಟಾಚಾರಗಳೇ ಮೇಲುಗೈ ಸಾಧಿಸಿರುವಾಗ 
ಮೌನದಿ ಒಪ್ಪಿ ಅಪ್ಪಿ ಕೊಂಡಿರುವೆವು ನಾವೀಗ

ಏಕೊ ಮಾತೇ ಮರೆತಿರುವೆವಲ್ಲ
ಅರಳಿ ಬಾಳಬೇಕಾದ ಮೊಗ್ಗುಗಳು ನಲುಗುತಿವೆ 
ಕಾಮಾಂಧರ ಬಲೆಗೆ ಸಿಲುಕಿ ಹೊಸಕಿ ಹೋಗುತಿವೆ 
ಏಕೋ ಕಂಡರೂ ಕಾಣದಂತೆ ದೃಷ್ಟಿ ಹೀನರಾಗಿಹೆವು
 ಕೇಳಿಯೂ ಕೇಳದಂಥ ಜಾಣ ಕಿವುಡರಾಗಿಹೆವು

 ಹೀಗೇಕೆ ಮೂಕವಾಗಿಹೆವು ನಾವೆಲ್ಲ 
 ಸ್ವಾರ್ಥ ದುರಾಸೆಯ ಕೂಪದಿ ಮುಳುಗೇಳುತಿಹೆವು
ಸ್ವಹಿತಾಸಕ್ತಿಯಲೇ ಕಾಲ ದೂಡುತಿಹೆವು 
ಕೇಳುತಿಲ್ಲ ಯಾರಿಗೂ ಅಶಕ್ತರ ಅರ್ತನಾದ 
ಎಲ್ಲವೂ ನಮಗೆ ಸಿಗಬೇಕೆಂಬ ಮೌನ ವಾದ 

 ಹೌದು ನಾವೇಕೆ ಮಾತನಾಡುತ್ತಿಲ್ಲ





  



















- ಮಧುಮಾಲತಿರುದ್ರೇಶ್  ಬೇಲೂರು

ಗುರುವಾರ, ಅಕ್ಟೋಬರ್ 2, 2025

ಕವನ

ಕವನ
     ನವರ್ರಾತಿ
ಮೈಸೂರ ದಸರಾ 
ಎಷೊಂದು ಸುಂದರ 
ನವರಾತ್ರಿ ಉತ್ಸವ 
ಹಬ್ಬದ ಸಡಗರ 
ಎಲ್ಲೆಲೂ ಸಂಭ್ರಮ 
ನವ ಅವಾತರಗಳು 
ಶೈಲಪುತ್ರಿ ದುರ್ಗೆ 
ಬ್ರಹ್ಮಚಾರಿಣಿ ದುರ್ಗೆ
ಚಂದ್ರಘಂಟಾ ದುರ್ಗೆ
ಕೂಷ್ಮಾಂಡದೇವಿ ದುರ್ಗೆ
ಸ್ಕಂದಾ ಮಾತಾ ದುರ್ಗೆ
ಕಾತ್ಯಾಯಿನಿ ದುರ್ಗೆ
ಕಾಳರಾತ್ರಿ ಮಹಾಮಾಯೇ 
ಮಹಾ ಗೌರಿ ತಾಯಿ
ಸಿದ್ಧಿಧಾತ್ರಿ ತಾಯಿ 
ದೇವಿಯ ಅವತಾರಗಳು 
ನವರಾತ್ರಿಯ ದಿನಗಳು
ಆಯುಧ ಪೂಜೆಗಳು 
ವಿಜಯದಶಮಿ ಹಬ್ಬದ ಶುಭಾಶಯಗಳು. 
           - ವಿ.ಎಂ.ಎಸ್.ಗೋಪಿ ✍
          ಲೇಖಕರು, ಸಾಹಿತಿಗಳು
                 ಬೆಂಗಳೂರು.

ವರದಿ...

ವರದಿ

ಗೊರೂರು ಅನಂತರಾಜು ಅವರಿಗೆ ಲೇಖಿಕಾ ಶ್ರೀ 2025 ಪ್ರಶಸ್ತಿ 

ಬೆಂಗಳೂರಿನ ಲೇಖಿಕಾ ಸಾಹಿತ್ಯ ವೇದಿಕೆಗೆ 25 ವರ್ಷ ತುಂಬಿದ ಪ್ರಯುಕ್ತ ವೇದಿಕೆಯು ತನ್ನ 25ನೇ ವಾರ್ಷಿಕೋತ್ಸವ ರಜತ ಮಹೋತ್ಸವ ಲೇಖಿಕಾ ಸಾಹಿತ್ಯ ಸಂಭ್ರಮದ ಅಂಗವಾಗಿ 25 ಸಾಧಕರಿಗೆ ಲೇಖಿಕಾ ಶ್ರೀ 2025 ಪ್ರಶಸ್ತಿ ನೀಡಿ ಗೌರವಿಸುತ್ತಿದೆ. ಪ್ರಶಸ್ತಿ ಫಲಕ, ಸ್ಮರಣಿಕೆ, ಶಾಲು, ಫಲ ತಾಂಬೂಲಗಳನ್ನು ನವೆಂಬರ್ 9ರ ಭಾನುವಾರ ಹಾಸನದ ಎವಿಕೆ ಕಾಲೇಜು ಸಭಾಂಗಣದಲ್ಲಿ ಸಾಧಕರಿಗೆ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ ಎಂದು ಲೇಖಿಕಾ ಸಾಹಿತ್ಯ ವೇದಿಕೆಯ ಸಂಚಾಲಕರಾದ ಶ್ರೀಮತಿ ಶೈಲಜಾ ಸುರೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪ್ರಶಸ್ತಿ ಪುರಸ್ಕೃತರು:
ಗೊರೂರು ಅನಂತರಾಜು (ಹಾಸನ), 
ಡಾ. ವೀಣಾ ( ಸುಳ್ಯ), ಲೀಲಾವತಿ (ಹಾಸನ), ಪದ್ಮ ಆನಂದ್ (ಮೈಸೂರು) ದೀಪಿಕಾ ಚಾಟಿ (ಬೆಳಗಾವಿ), ರಾಧಾ ಟೇಕಲ್ (ಬೆಂಗಳೂರು), ಉಷಾ ನರಸಿಂಹನ್ (ಮೈಸೂರು), ಉದಯರವಿ (ಹಾಸನ), ಕೆ. ಎಂ. ಲೋಲಾಕ್ಷಿ (ಮೈಸೂರು), ಕೃಷ್ಣ ಪದಕಿ (ಶಿರಸಿ), ವಿದ್ಯಾ ಶಿರಹಟ್ಟಿ (ಧಾರಾವಾಡ ), ಗಣೇಶ ಅಮೀನಗಡ (ಮೈಸೂರು) ಯಶೋಧಾ ಡಿ (ಬೆಂಗಳೂರು), ಎನ್.ಎಲ್. ಚನ್ನೇಗೌಡ (ಹಾಸನ), ಸುಮಾ ವೀಣಾ (ಹಾಸನ), ರೂಪಾ ಜೋಶಿ (ಹುಬ್ಬಳ್ಳಿ), ಮುಕುಂದ ಗಂಗೂರ್ (ಹೊಸಪೇಟೆ), ನಾಗಲಕ್ಷ್ಮಿ ಎಂ.ಜೆ. (ಚಿಕ್ಕಮಗಳೂರು), ಡಾ. ಕರುಣಾ ಲಕ್ಷ್ಮಿ (ಮೈಸೂರು), ದಮಯಂತಿ ನರೇಗಲ್ (ಧಾರವಾಡ ), ಮಧುರಾ ಕರ್ಣಂ (ಬೆಳಗಾವಿ), ಭಾಗಿರಥಿ ಹೆಗಡೆ (ಶಿರಸಿ), ಸುಕನ್ಯಾ ಮುಕುಂದ್ (ಹಾಸನ), ಪ್ರಭಾ ದಿನಮಣಿ (ಹಾಸನ).

ಲೇಖನ...

ಲೇಖನ

ಹರಿಶ್ಚಂದ್ರ ಸತ್ಯಕ್ಕಾಗಿ ಪಟ್ಟ ಕ್ಲೇಶವನ್ನೆಲ್ಲಾ ನಾನೂ ಪಡಬೇಕು: ಮಹಾತ್ಮ ಗಾಂಧೀಜಿ

 ಗಾಂಧೀಜಿಯವರ ಆತ್ಮ ಕಥೆ ಅಥವಾ ನನ್ನ ಸತ್ಯಾನ್ವೇಷಣೆ ಪುಸ್ತಕ ಓದುತ್ತಿದ್ದೆ. ನಾವು ಗುಜರಾತ್ ಪ್ರವಾಸ ಹೋಗಿ ಬಂದು ಆಗಲೇ ನಾಲ್ಕು ವರ್ಷ ಕಳೆದಿದೆ. ನಮ್ಮ ಅಕ್ಕ ಬಾವನವರು ಗುಜರಾತ್ ಪ್ರವಾಸ ಪ್ರಸ್ತಾಪಿಸಿದಾಗ ಆ ಪ್ರವಾಸಿ ಪಟ್ಟಿಯಲ್ಲಿ ನನ್ನನ್ನು ಆಕರ್ಷಿಸಿದ್ದು ಒಂದು ದ್ವಾರಕ ಮತ್ತೊಂದು ಪೋರ್‌ ಬಂದರ್. ಮಹಾಭಾರತ ಕಥೆ ಓದಿದ್ದು ಟಿವಿ ದಾರಾವಾಹಿ ನೋಡಿದ್ದು ದ್ವಾರಕಾ ನೋಡಲು ಆಸಕ್ತಿ ಮೂಡಿಸಿದ್ದರೆ ಗಾಂಧೀಜಿಯವರ ಜನ್ಮಸ್ಥಳ ವೀಕ್ಷಣೆಗೆ ಅವರ ಆತ್ಮಕಥೆ ಪ್ರೇರಣೆ ಆಗಿತ್ತು. ನನ್ನ ಪತ್ನಿಯದು ಧಾರ್ಮಿಕ ನೋಟ. ನನ್ನದು ಐತಿಹಾಸಿಕ ಓದು ವೀಕ್ಷಣೆ. ನಾವು ಮೊದಲ ಬಾರಿಗೆ ವಿಮಾನದಲ್ಲಿ ಪ್ರಯಾಣಿಸಿದ್ದು ಅಹಮದಬಾದ್‌ಗೆ. ಅಲ್ಲಿಂದ ಬೆಂಗಳೂರಿನ ನೇತಾಜಿ ಟೂರಿಸ್ಟ್ ಸಂಸ್ಥೆಯವರು ಬಸ್ ವ್ಯವಸ್ಥೆ ಮಾಡಿದ್ದರು. ಹತ್ತು ದಿನಗಳ ಟೂರ್‌ನಲ್ಲಿ ಬಸ್‌ನಲ್ಲಿ ಜರ್ನಿ ಮಾಡಿದ್ದೇ ಹೆಚ್ಚು. ಗಾಂಧೀಜಿಯವರ ಆತ್ಮಕಥೆ ಓದುತ್ತಾ ನಮ್ಮ ಪ್ರವಾಸದ ನೆನಪು ಮರುಕಳಿಸಿತು. 
ಪೋರ್‌ ಬಂದರ್ ಜುನಾಗಡ ಜಿಲ್ಲೆಯ ಒಂದು ರೇವು ಪಟ್ಟಣ. ಇಲ್ಲೇ ಮಹಾತ್ಮಗಾಂಧಿ ಜನಿಸಿದ್ದು. ಇದು ಜೇತ್ವಾ ರಜಪೂತರ ನಿಯಂತ್ರಣದಲ್ಲಿತ್ತು. ಬ್ರಿಟಿಷರು ಸ್ಥಾಪಿಸಿದ ಕಾಠಿಯಾವಾಡ ಸಂಸ್ಥಾನಗಳಲ್ಲಿ ಒಂದಾದ ಪೋರ್‌ಬಂದರ್ ಸಂಸ್ಥಾನಕ್ಕೆ ಇದು ೧೯೭೫ರಿಂದ ೧೯೪೮ರವರೆಗೆ ರಾಜಧಾನಿಯಾಗಿತ್ತು. ಭಾರತ ಸ್ವಾತಂತ್ರ್ಯ ನಂತರ ಮುಂಬೈ ಪ್ರಾಂತಕ್ಕೆ ಸೇರಿದ ಇದು ಮುಂದೆ ೧೯೬೦ರಲ್ಲಿ ಗುಜರಾತ್ ಪ್ರತ್ಯೇಕ ರಾಜ್ಯವಾದಾಗ ಅದರ ಭಾಗವಾಯಿತು. ಇದನ್ನು ಸುಧಾಮನಗರ ಎಂದೂ ಕರೆಯಲಾಗುತ್ತದೆ. 
ಕೀರ್ತಿಮಂದಿರವು ಮಹಾತ್ಮಗಾಂಧಿಯವರು ಜನಿಸಿರುವ ಪೋರಬಂದರ್ ನಗರದಲ್ಲಿರುವ ಒಂದು ವಸ್ತು ಸಂಗ್ರಹಾಲಯ. ಈ ವಸ್ತು ಸಂಗ್ರಹಾಲಯದಲ್ಲಿ ಗಾಂಧೀಜಿಯವರು ಬಳಸಿದ ವಸ್ತುಗಳು ಗಾಂಧೀಜಿ ಹಾಗೂ ಕಸ್ತೂರ್‌ ಬಾ ಅವರ ಆಳೆತ್ತರದ ಹಲವು ಹಳೆಯ ಛಾಯಾಚಿತ್ರಗಳಿವೆ. ಗಾಂಧೀಜಿಯವರು ಬರೆದಿರುವ ಹಾಗೂ ಅವರ ತತ್ವಗಳಿಗೆ ಸಂಬಂಧಿಸಿದ ಪುಸ್ತಕಗಳ ಗ್ರಂಥಾಲಯವಿದೆ. ವಸ್ತು ಸಂಗ್ರಹಾಲಯದ ಮೂಲಕ ಗಾಂಧೀಜಿಯವರ ಪೂರ್ವಜರ ಮನೆಗೆ ಪ್ರವೇಶಿಸಬಹುದು. ಗಾಂಧೀಜಿಯವರನ್ನು ೧೯೪೪ರಲ್ಲಿ ಬ್ರಿಟಿಷರು ಆಗಾಖಾನ್ ಅರಮನೆಯಿಂದ ಕೊನೆಯ ಬಾರಿಗೆ ಬಿಡುಗಡೆ ಮಾಡಿದಾಗ ಪೋರ್ ಬಂದರ್‌ನ ಸ್ಥಳೀಯರು ಅವರ ಜನ್ಮಸ್ಥಳದಲ್ಲಿ ಸ್ಮಾರಕವನ್ನು ನಿರ್ಮಿಸಲು ಯೋಚಿಸಿ ಗಾಂಧೀಯವರ ಲಿಖಿತ ಒಪ್ಪಿಗೆ ಪಡೆದರು. ಈ ಮನೆಯೂ ಈಗ ಕೀರ್ತಿ ಮಂದಿರ ಸಂಕೀರ್ಣದ ಒಂದು ಭಾಗವಾಗಿದೆ. ಮೂಲ ಮೂರು ಅಂತಸ್ತಿನ ಮನೆಯನ್ನು ಹವೇಲಿಯಂತೆ (ಉಪ್ಪರಿಗೆ ಮನೆ) ನಿರ್ಮಿಸಲಾಗಿದೆ. ಇದನ್ನು ೧೭ನೇ ಶತಮಾನದಲ್ಲಿ ಗಾಂಧೀಜಿ ಮುತ್ತಜ್ಜ ಹರಜೀವನ್ ರೈದಾಸ್ ಗಾಂಧಿ ಖರೀದಿಸಿದ್ದರು. ಗಾಂಧೀಯವರ ತಂದೆ ಕರಮ್‌ಚಂದ ಗಾಂಧಿ, ಚಿಕ್ಕಪ್ಪ ತುಳಸಿದಾಸ ಗಾಂಧಿ ಮತ್ತು ಅಜ್ಜ ಉತ್ತಮ್ ಚಂದ್ ಗಾಂಧಿ ಇಲ್ಲಿ ವಾಸಿಸುತ್ತಿದ್ದರು. 
೧೯೯೭ರಲ್ಲಿ ಗಾಂಧೀಜಿ ಬದುಕಿರುವಾಗಲೇ ದರ್ಬಾರ್ ಗೋಪಾಲ್‌ದಾಸ್ ದೇಸಾಯಿ ಅವರು ಕೀರ್ತಿ ಮಂದಿರಕ್ಕೆ ಅಡಿಪಾಯ ಹಾಕಿದರು. ಮನೆಯನ್ನು ಖರೀದಿಸಲು ಮತ್ತು ವಸ್ತು ಸಂಗ್ರಹಾಲಯವನ್ನು ನಿರ್ಮಿಸಲು ನಂಜಿಬಾಯಿ ಕಾಳಿದಾಸ ಮೆಹ್ತಾ ಅವರು ಧನ ದಾನ ಮಾಡಿದ್ದರು. ಈ ಸ್ಮಾರಕವು ೧೯೫೦ರಲ್ಲಿ ಪೂರ್ಣಗೊಂಡು ಅಂದಿನ ಗೃಹ ಸಚಿವರು ಸರ್ದಾರ್ ವಲ್ಲಭಬಾಯಿ ಪಟೇಲರು ತಾ. ೨೭-೫-೧೯೫೦ರಲ್ಲಿ ಇದನ್ನು ಉದ್ಘಾಟಿಸಿ ಇದನ್ನು ಬಾರತ ಸರ್ಕಾರಕ್ಕೆ ನೀಡಲಾಯಿತು. 
ಕೀರ್ತಿಮಂದಿರ ೭೯ ಅಡಿ ಎತ್ತರವಾಗಿದೆ. ಇದು ಗಾಂಧೀಜಿಯವರ ಜೀವನದ ೭೯ ವರ್ಷ ಗಳನ್ನು ಪ್ರತಿನಿಧಿಸುತ್ತದೆ. ಹಿಂದೂ, ಬೌದ್ಧ, ಜೈನ ಮತ್ತು ಪಾರ್ಸಿ ದೇವಾಲಯಗಳ ವಾಸ್ತುಶಿಲ್ಪದ ಅಂಶಗಳನ್ನು ಚರ್ಚ್ ಮತ್ತು ಮಸೀದಿಯನ್ನು ಒಳಗೊಂಡಿದೆ. ಗಾಂಧೀಜಿ ಮತ್ತು ಕಸ್ತೂರಬಾ ಅವರ ಅಳೆತ್ತರದ ತೈಲ ವರ್ಣಚಿತ್ರಗಳು ಇಲ್ಲಿವೆ. ಮಗನ್ ಲಾಲ್ ಮತ್ತು ಮಹಾದೇವ ದೇಸಾಯಿ ಅವರ ಸ್ಮಾರಕಗಳ ಎರಡು ಕೊಠಡಿಗಳು, ಕೋಣೆ ವಸ್ತು ಸಂಗ್ರಹಾಲಯದ ಕೊಠಡಿಗಳಲ್ಲಿ ಖಾದಿ ಭಂಡಾರದ ವಸ್ತುಗಳು ಪುಸ್ತಕ ಮಾರಾಟ ಕೇಂದ್ರವಿದೆ. ಕೀರ್ತಿ ಮಂದಿರದಲ್ಲಿ ಗಾಂಧೀಜಿ ಹುಟ್ಟಿದ ಸ್ಥಳವನ್ನು ಗುರುತಿಸಲು ಸ್ವಸ್ತಿಕ್ ಚಿನ್ಹೆಯಿಂದ ದಾಖಲಿಸಲಾಗಿದೆ. ನಾನು ಅಲ್ಲಿ ನಿಂತು ಮಡದಿ ಶಕುಂತಲಗೆ ಪೋಟೋ ತೆಗೆಯಲು ಹೇಳಿದೆ. 
ಗಾಂಧೀಜಿ ತಮ್ಮ ಆತ್ಮಕಥೆ ನನ್ನ ಸತ್ಯಾನ್ವೇಷಣೆಯ ಮೊದಲ ಭಾಗದಲ್ಲಿ ಬರೆಯುತ್ತಾರೆ. 
ಗಾಂಧಿ ಮನೆತನದವರು ಬನಿಯಾ ಜಾತಿಯವರು. ಅವರು ಮೊದಲಿಗೆ ಕಿರಾಣಿ ಅಂಗಡಿ ವ್ಯಾಪಾರಿಗಳೆಂದು ಕಾಣುತ್ತದೆ. ಆದರೆ ನಮ್ಮ ತಾತನಿಂದ ಮೂರು ತಲೆಮಾರಿನವರು ಕಾಘೇವಾಡದ ಬೇರೆ ಬೇರೆ ಸಂಸ್ಥಾನಗಳಲ್ಲಿ ದಿವಾನರಾಗಿದ್ದರು. ನಮ್ಮ ತಾತ ಉತ್ತಮ್‌ ಚಂದ್ ಅಥವಾ
ಓಕಾ ಗಾಂಧೀ ನಿಯಮ ನಿಷ್ಠೆಯುಳ್ಳ ವ್ಯಕ್ತಿಯಾಗಿದ್ದಿರಬೇಕು. ಪೋರ್‌ ಬಂದರಿನ ದಿವಾನರಾಗಿದ್ದ ಆತ ಅಲ್ಲಿ ನಡೆದ ಆಸ್ಥಾನದ ಪಿತೂರಿಗಳಿಂದಾಗಿ ಆ ಸಂಸ್ಥಾನವನ್ನು ಬಿಟ್ಟು ಜುನಾಗಢದಲ್ಲಿ ಆಶ್ರಯವನ್ನು ಪಡೆಯಬೇಕಾಯಿತು. ಅಲ್ಲಿ ಆತ ನವಾಬನಿಗೆ ಎಡಗೈಯಿಂದ ಸಲಾಮು ಮಾಡಿದನು. ಇದನ್ನು ನೋಡಿದವರೊಬ್ಬರು ಈ ಅವಿನಯದ ಕಾರಣವನ್ನು ಕೇಳಿದರು. ಆತ ‘ಬಲಗೈ ಮೊದಲೇ ಪೋರ್‌ ಬಂದರ್ ಸಂಸ್ಥಾನಕ್ಕೆ ಮೀಸಲಾಗಿದೆ’ ಎಂದು ಉತ್ತರ ಕೊಟ್ಟನು.. 
ನಮ್ಮ ತಂದೆ ಪೋರ್‌ ಬಂದರನ್ನು ಬಿಟ್ಟು ರಾಜಕೋಟೆಯ ರಾಜಾಸ್ಥಾನಿಕ ನ್ಯಾಯಾಲಯದ ಸದಸ್ಯರಾಗಿ ಹೊರಟಾಗ ನನಗೆ ಕೇವಲ ಏಳು ವರ್ಷಗಳು. ಅಲ್ಲಿ ನನ್ನನ್ನು ಪ್ರಾಥಮಿಕ ಶಾಲೆಗೆ ಸೇರಿಸಿದರು. ಆ ದಿನಗಳಲ್ಲಿ ನನಗೆ ಬೋಧಿಸಿದ ಉಪಾಧ್ಯಾಯರ ಹೆಸರುಗಳು ಮೊದಲಾದ ವಿವರಗಳೆಲ್ಲಾ ನನಗೆ ಚೆನ್ನಾಗಿ ನೆನಪಿದೆ. ಪೋರ್‌ ಬಂದರ್‌ನಲ್ಲಿ ಇದ್ದಂತೆಯೇ ಇಲ್ಲಿಯೂ ನನ್ನ ವಿದ್ಯಾಭ್ಯಾಸದ ವಿಷಯದಲ್ಲಿ ಹೇಳಬೇಕಾದ ಹೆಚ್ಚಿನದೆನೂ ಇಲ್ಲ.  
ಪ್ರೌಢಶಾಲೆ ಮೊದಲನೇ ವರ್ಷದ ಪರೀಕ್ಷೆಯ ವೇಳೆಯಲ್ಲಿ ನಡೆದ ಘಟನೆ ಹೇಳಬೇಕು. ಇನ್‌ಸ್ಪೆಕ್ಟರ್ ಮಿ. ಗೈಲ್ಸ್ ಪರಿಶೀಲನೆಗಾಗಿ ಶಾಲೆಗೆ ಬಂದಿದ್ದರು. ಅವರ ಮೊದಲನೆಯ ತರಗತಿಯ ವಿದ್ಯಾರ್ಥಿಗಳಿಗೆ ಐದು ಪದಗಳನ್ನು ಬರೆಯಲು ಕೊಟ್ಟರು. ಇವುಗಳ ಪೈಕಿ ಕೆಟಲ್ ಎಂಬ ಪದವೂ ಒಂದು. ನಾನು ಅದನ್ನು ತಪ್ಪಾಗಿ ಬರೆದೆ. ನಮ್ಮ ಉಪಾಧ್ಯಾಯರು ತಮ್ಮ ಪಾದರಕ್ಷೆಯ ತುದಿಯಿಂದ ನನ್ನನ್ನು ಎಚ್ಚರಿಸಲು ಪ್ರಯತ್ನಿಸಿದರು. ನಾನು ಆ ಸೂಚನೆಯಂತೆ ನಡೆಯಲಿಲ್ಲ. ಮುಂದಿನ ಹುಡುಗನ ಸ್ಲೇಟನ್ನು ನೋಡಿಕೊಂಡು ನನ್ನ ತಪ್ಪನ್ನು ತಿದ್ದಿಕೊಳ್ಳಬೇಕೆಂಬುದು ಉಪಾಧ್ಯಾಯರ ಉದ್ದೇಶ. ಅದು ನನಗೆ ಒಪ್ಪಿಗೆಯಾಗಲಿಲ್ಲ. ಏಕೆಂದರೆ ನಾವು ಕಾಪಿ ಮಾಡದಂತೆ ನೋಡಿಕೊಳ್ಳುವುದೇ ಉಪಾಧ್ಯಾಯರ ಕೆಲಸವೆಂದು ನಾನು ತಿಳಿದಿದ್ದೆ. ಇದರ ಪರಿಣಾಮವಾಗಿ ನನ್ನನ್ನು ಹೊರತು ಉಳಿದ ಹುಡುಗರೆಲ್ಲಾ ಐದು ಪದಗಳನ್ನು ಸರಿಯಾಗಿ ಬರೆದಿದ್ದರು. ನಾನೊಬ್ಬನೇ ದಡ್ಡ. ಇದಾದ ಮೇಲೆ ಉಪಾಧ್ಯಾಯರು ನನ್ನ ಮೂರ್ಖತನವನ್ನು ನನಗೆ ತೋರಿಸುವುದಕ್ಕೆ ಪ್ರಯತ್ನಪಟ್ಟರು. ಅದರಿಂದ ಅವರಿಗೆ ವೃಥಾ ಶ್ರಮವಾಯಿತೇ ಹೊರತು ಕಾಪಿ ಮಾಡುವ ಕಲೆ ನನಗೆ ಕೊನೆಗೂ ಬರಲೇ ಇಲ್ಲ. 
ಇದೇ ಸಮಯದಲ್ಲಿ ನಡೆದ ಮತ್ತೆರಡು ಸಂಗತಿಗಳು ಯಾವಾಗಲೂ ನನ್ನ ನೆನಪಿನಲ್ಲಿ ಉಳಿದಿದೆ. ಪಠ್ಯ ಪುಸ್ತಕಗಳನ್ನು ಹೊರತು ಬೇರೆ ಏನನ್ನೂ ಓದುವುದು ಸಾಧಾರಣವಾಗಿ ನನಗೆ ಸೇರುತ್ತಿರಲಿಲ್ಲ. ನಿತ್ಯದ ಪಾಠಗಳನ್ನಂತೂ ಓದಲೇಬೇಕಾಗಿತ್ತು. ಉಪಾಧ್ಯಾಯರು ನನ್ನನ್ನು ಗುರುತಿಸುವುದು ನನಗೆ ಇಷ್ಟವಿರಲಿಲ್ಲ. ಅವರಿಗೆ ಮೋಸ ಮಾಡಲು ನನಗೆ ಇಷ್ಟವಿರಲಿಲ್ಲ. ಆದುದರಿಂದ ಪಾಠವನ್ನೇನೊ ಓದುತ್ತಿದ್ದೆ. ಆದರೆ ಪಾಠದಲ್ಲಿ ಮನಸ್ಸು ಇರುತ್ತಿರಲಿಲ್ಲ. ಹೀಗೆ ಪಾಠಗಳನ್ನೇ ಸರಿಯಾಗಿ ಓದುತ್ತಿರಲಿಲ್ಲವೆಂದ ಮೇಲೆ ಇನ್ನು ಹೆಚ್ಚಿನ ವ್ಯಾಸಂಗದ ಪ್ರಶ್ನೆ ಎಲ್ಲಿ ಬಂತು. ಆದರೆ ಹೇಗೋ ನಮ್ಮ ತಂದೆ ಕೊಂಡುಕೊಂಡು ಬಂದಿದ್ದ ಒಂದು ಪುಸ್ತಕ ನನ್ನ ಕಣ್ಣಿಗೆ ಬಿತ್ತು. ಅದರ ಹೆಸರು ಶ್ರವಣ ಪಿತೃ ಭಕ್ತಿ ನಾಟಕ. ಅದನ್ನು ನಾನು ಅತ್ಯಂತ ಆಸಕ್ತಿಯಿಂದ ಓದಿದೆ. ಅದೇ ಸಮಯದಲ್ಲಿ ಸಂಚಾರಿ ಬೊಂಬೆ ಪ್ರದರ್ಶಕರು ನಮ್ಮ ಊರಿಗೆ ಬಂದರು. ಅವರು ನನಗೆ ತೋರಿಸಿದ ಒಂದು ಚಿತ್ರ ಶ್ರವಣ ತನ್ನ ಕುರುಡು ತಂದೆ ತಾಯಿಯರನ್ನು ಅಡ್ಡೆಯಲ್ಲಿ ಕೂರಿಸಿಕೊಂಡು ಅದನ್ನು ಹೆಗಲಿನ ಮೇಲೆ ಹೊತ್ತುಕೊಂಡು ಯಾತ್ರೆಗಾಗಿ ಹೋಗುತ್ತಿದ್ದ ಚಿತ್ರ. ಆ ಪುಸ್ತಕ ಆ ದೃಶ್ಯ ಎರಡೂ ನನ್ನ ಅಂತರಂಗದಲ್ಲಿ ಶಾಶ್ವತವಾಗಿ ಅಂಕಿತವಾದವು. ಇಗೋ ಇಲ್ಲಿ ನಿನಗೊಂದು ಆದರ್ಶವಿದೆ. ಅದನ್ನು ಅನುಸರಿಸು ಎಂದು ನನಗೆ ನಾನೇ ಹೇಳಿಕೊಂಡೆ. ಶ್ರವಣ ಮರಣ ಹೊಂದಲು ಅವನ ಮಾತಾಪಿತೃಗಳ ಆರ್ತ ವಿಲಾಪ ನನ್ನ ಕಿವಿಗೆ ಈಗಲೂ ಕೇಳುವಂತಿದೆ. ಆ ರಾಗ ನನ್ನ ಹೃದಯವನ್ನು ಕರಗಿಸಿತು. ನಮ್ಮ ತಂದೆ ಕೊಂಡುಕೊಟ್ಟಿದ್ದ ರಾಗಮಾಲಿಕೆಯಲ್ಲಿ ಅದನ್ನು ಬಾರಿಸಲು ಕಲಿತೆ. 
ಮತ್ತೊಂದು ನಾಟಕಕ್ಕೆ ಸಂಬಂಧಿಸಿದಂತೆ ಇದೇ ಬಗೆಯ ಪ್ರಸಂಗ ನಡೆಯಿತು. ಆ ಕಾಲದಲ್ಲಿ ಒಂದು ನಾಟಕ ಮಂಡಳಿಯವರು ಪ್ರದರ್ಶಿಸುತ್ತಿದ್ದ ನಾಟಕವೊಂದನ್ನು ನೋಡಲು ನಮ್ಮ ತಂದೆಯವರು ನನಗೆ ಅನುಮತಿ ಕೊಟ್ಟಿದ್ದರು. ಅದು ಹರಿಶ್ಚಂದ್ರ ನಾಟಕ. ಅದು ನನ್ನ ಮನಸ್ಸನ್ನು ಸೂರೆಗೊಂಡಿತು. ಅದನ್ನು ಎಷ್ಟು ನೋಡಿದರೂ ನನಗೆ ತೃಪ್ತಿಯೇ ಆಗಲಿಲ್ಲ. ಆದರೆ ಎಷ್ಟು ಸಲ ನೋಡಲು ಅನುಮತಿ ಕೊಟ್ಟಾರು? ಅದರ ಹುಚ್ಚು ನನ್ನನ್ನು ಹಗಲು ರಾತ್ರಿ ಬಿಡಲೇ ಇಲ್ಲ. ಲೆಕ್ಕವಿಲ್ಲದಷ್ಟು ಸಲ ನಾನೇ ಹರಿಶ್ಚಂದ್ರನಾಗಿ ಆ ನಾಟಕವನ್ನು ಅಭಿನಯಿಸಿಕೊಂಡೆ. ಎಲ್ಲರೂ ಏಕೆ ಹರಿಶ್ಚಂದ್ರರಂತೆ ಸತ್ಯಸಂಧನಾಗಿರಬಾರದು.? ಇದೇ ಹಗಲೂ ರಾತ್ರಿ ನನ್ನನ್ನು ನಾನೇ ಕೇಳಿಕೊಳ್ಳುತ್ತಿದ್ದ ಪ್ರಶ್ನೆ. ಸತ್ಯವನ್ನು ಅನುಸರಿಸಬೇಕು. ಹರಿಶ್ಚಂದ್ರ ಸತ್ಯಕ್ಕಾಗಿ ಪಟ್ಟ ಕ್ಲೇಶವನ್ನೆಲ್ಲ ಆಪತ್ತುಗಳನ್ನೆಲ್ಲ ನಾನೂ ಪಡಬೇಕು. ಇದೊಂದೇ ನನ್ನ ಮನಸ್ಸಿನಲ್ಲಿ ಸ್ಫೂರ್ತಿ ತುಂಬಿದ ಆದರ್ಶ. ಹರಿಶ್ಚಂದ್ರನ ಕಥೆಯನ್ನು ನಾನು ಅಕ್ಷರಶ: ನಂಬಿದೆನು. ನೆನಪು ಮಾಡಿಕೊಂಡು ಪದೇ ಪದೇ ಅಳುತ್ತಿದ್ದೆ. ಹರಿಶ್ಚಂದ್ರ ಐತಿಹಾಸಿಕ ವ್ಯಕ್ತಿ ಆಗಿರಲಾರ ಎಂಬುದು ಇಂದು ನನ್ನ ಬುದ್ಧಿಗೆ ಗೋಚರಿಸುತ್ತಿದೆ. ಆದರೆ ನನ್ನ ಮಟ್ಟಿಗೆ ಹರಿಶ್ಚಂದ್ರ, ಶ್ರವಣ ಇಬ್ಬರೂ ಜೀವಂತ ವ್ಯಕ್ತಿಗಳು. ಆ ನಾಟಕಗಳನ್ನು ಓದಿದರೆ ಮತ್ತೆ ಮೊದಲಿನಂತೆ ನಾನು ಕಣ್ಣೀರು ಹಾಕದೆ ಇರಲಾರನೆಂಬುದು ನನ್ನ ನಂಬಿಕೆ. 
 ---
ಗೊರೂರು ಅನಂತರಾಜು, ಹಾಸನ. 
ಮೊ: ೯೪೪೯೪೬೨೮೭೯
ವಿಳಾಸ: ಹುಣಸಿನಕೆರೆ ಬಡಾವಣೆ,
 ೨೯ನೇ ವಾರ್ಡ್,
 ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ಹಾಸನ.

ಲೇಖನ

ಲೇಖನ

ಹಾಸ್ಯ ನಟ ಬಹುಮುಖ ಪ್ರತಿಭೆಯ
ಮೈಸೂರು ರಮಾನಂದ್ 
ಕರ್ನಾಟಕದ ರಂಗಭೂಮಿಯ ಪರಂಪರೆ ಕನ್ನಡಿಗರ ವಾಸ್ತವ ಬದುಕನ್ನು ಸಮರ್ಥವಾಗಿ ಪ್ರತಿನಿಧಿಸುತ್ತಲೇ ಬಂದಿದೆ. ಆಧ್ಯಾತ್ಮಿಕ, ಪೌರಾಣಿಕ, ಐತಿಹಾಸಿಕ, ಸಾಮಾಜಿಕ, ವಿಡಂಬನೆ, ಸಮಕಾಲೀನ ಸಮಸ್ಯೆ......ಹೀಗೆ ರಂಗಭೂಮಿಯಿಂದ ಆಗಿರುವ ಜೀವನಕ್ರಾಂತಿ ಬಹು ದೊಡ್ಡದು. ಜನಮಾನಸವನ್ನು ಈ ರೀತಿಯಾಗಿ ಸದಾ ಚಾಲನೆಯಲ್ಲಿ ಇರಿಸಿದ ದೃಷ್ಟಿಯಿಂದ ರಂಗಭೂಮಿಯನ್ನು ಜವಾಬ್ದಾರಿಯಿಂದ ಬೆಳಸಿದ ಮಹಾನ್ ಕಲಾವಿದರ ಪರಂಪರೆಗೆ ದೊಡ್ಡ ಗೌರವ ಸಲ್ಲಲೇಬೇಕಿದೆ. ಇಂತಹ ಮಹಾನ್ ರಂಗಕಲಾವಿದರಲ್ಲಿ ಸಮರ್ಪಣೆಯ ರಂಗ ಕಲಾವಿದ ಮೈಸೂರು ರಮಾನಂದ್ ಕೂಡ ಒಬ್ಬರು.

 ಸುಮಾರು 70 ವರ್ಷ ವಯಸ್ಸಿನ ಮೈಸೂರು ರಮಾನಂದ್ ಅವರು ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಜನಿಸಿದವರು. ನಾಡಿನ ಸಾಂಸ್ಕೃತಿಕ ಸೊಗಡನ್ನು ತಮ್ಮ ವ್ಯಕ್ತಿತ್ವದಲ್ಲಿ ಅಳವಡಿಸಿಕೊಂಡವರು. ನಿರಂತರ 50 ವರ್ಷಗಳಿಂದ ನಾಡಿನಾದ್ಯಂತ ಸಂಚರಿಸಿ ರಂಗಭೂಮಿಯಲ್ಲಿ ಬಹುಮುಖಿ ವೇಷಗಳಿಂದ, ಬಹುಮುಖ ಪ್ರತಿಭೆಯಿಂದ ಮೆರೆದವರು. ಬಹುವಿಭಾಗ ಸಿನಿಮಾ, ರಂಗ ನಿರ್ವಹಣೆಯಿಂದ ಕರ್ನಾಟಕ ರಮಾರಮಣರೆನಿಸಿದವರು. 

 ಕನ್ನಡದ ಹೆಮ್ಮೆಯ ವರನಟ 
ಡಾ.ರಾಜಕುಮಾರ್, 
ಡಾ.ಹಾ.ಮಾ.ನಾಯಕ್, 
 ಡಾ.ಬಿ.ವಿ.ಕಾರಂತ್ ಮೊದಲಾದ ದಿಗ್ಗಜರು ರಮಾನಂದರ ರಂಗಕಲೆಯ ಕಾಯಕವನ್ನು ಮೆಚ್ಚಿಕೊಂಡವರಾಗಿದ್ದಾರೆ.
  ನಾಡಿನ ಹಲವು ಪತ್ರಿಕೆಗಳು ಮೈಸೂರು ರಮಾನಂದರ 50 ವರ್ಷಗಳ ರಂಗ ಸೇವೆಯ ಬರಹ ಪ್ರಕಟಿಸಿವೆ. ನಾಡಿನ ರಂಗ ದಿಗ್ಗಜರು ಸಾಹಿತಿ ಕಲಾವಿದರು ರಮಾನಂದ ಅವರ ಪ್ರತಿಭಾ ಸಂಪನ್ನ ಸಾಧನೆಯನ್ನು ರಂಗ ಬೆನ್ನು ತಟ್ಟಿ ಉತ್ತೇಜಿಸಿದ್ದಾರೆ. ನಟ,ನಿರ್ದೇಶಕ, ರಚನಕಾರ, ಪ್ರಕಾಶಕ, ಗೆಜ್ಜೆ ಹೆಜ್ಜೆ ರಂಗ ತಂಡ ಸಂಸ್ಥಾಪಕ, ಪತ್ರಕರ್ತ, ಪ್ರಯೋಗ ಶೀಲ ನಾಟಕಕಾರ, ರಂಗ ಸಂಚಾರಿ... ಹೀಗೆ ವಿವಿಧ ಆಯಾಮಗಳ ಬಹುಮುಖಿ ಸಾಧಕ ಮೈಸೂರು ರಮಾನಂದರು. ಇವರು ಗೆಳೆಯರೊಂದಿಗೆ ಆರಂಭಿಸಿದ ವಾಸ್ತವ ಜೀವನದ ಸಮಸ್ಯೆಗಳು ಮತ್ತದರ ಪರಿಹಾರಗಳನ್ನು ತಿಳಿಸುವ ಬೀದಿ ನಾಟಕಗಳು ಸಾವಿರಕ್ಕೂ ಹೆಚ್ಚು ಪ್ರದರ್ಶನ ನೀಡಿ ದಾಖಲೆ ನಿರ್ಮಿಸಿದೆ. ರಂಗಭೂಮಿಯ ವಿಶ್ವ ಪ್ರಜ್ಞೆಯನ್ನು ಯಶಸ್ವಿಯಾಗಿ ಸಾರುತ್ತಿರುವ ಮೈಸೂರು ರಮಾನಂದ ಅವರು ಕ್ರಿಯಾಶೀಲತೆಯಲ್ಲಿ, ಸಾಮಾಜಿಕ ಕಳಕಳಿಯ ಬದ್ಧತೆಯಲ್ಲಿ ಸದಾ ಮುಂಚೂಣಿಯಲ್ಲಿರುವ ವ್ಯಕ್ತಿ. ಅವರು ರಂಗಭೂಮಿಯನ್ನು ವಾಸ್ತವ ಬದುಕಿನ ಸಮಸ್ಯೆಗಳ ಪರಿಹಾರದ ಕನ್ನಡಿಯಾಗಿ ದೂರದೃಷ್ಟಿ ಅವಲೋಕನ ಮೆಚ್ಚುವಂತದ್ದು, 
ಮೈಸೂರು ರಮಾನಂದರನ್ನು ಕಲಾವಿದರಾಗಿ ಸಂತೋಷದಿಂದ ಒಪ್ಪಿಕೊಳ್ಳುವ ಜೊತೆಗೆ ನಮ್ಮ ರಾಜ್ಯದ ಮಹಾನಂದ ಎಂದು ಬಾಚಿ ಅಪ್ಪಿಕೊಳ್ಳಬಹುದಾಗಿದೆ. 
ಇವರ ಕುರಿತಂತೆ ಕೆಲ ವರ್ಷಗಳ ಹಿಂದೆ ಅಭಿನಂದನಾ ಗ್ರಂಥ ಪ್ರಕಟವಾಗಿದೆ. ಅದರಲ್ಲಿ ನಾನು ಕೂಡ ಬರೆದಿರುವೆ. ಸರ್ಕಾರಿ ಕಚೇರಿಗಳ ಸಹಯೋಗದಲ್ಲಿ ಅವರು ಸರ್ಕಾರದ ಪ್ರಚಾರಾತ್ಮಕ ನೀತಿಗಳನ್ನು ಜನಸಾಮಾನ್ಯರಿಗೆ ತಮ್ಮದೇ ರಚನೆಯ ಬೀದಿ ನಾಟಕಗಳ ಮೂಲಕ ಅತ್ಯಂತ ಪರಿಣಾಮಕಾರಿಯಾಗಿ ತಲುಪಿಸಿದ್ದಾರೆ. 
 ವೈಯುಕ್ತಿಕವಾಗಿ ಸುಮಾರು 2 ದಶಕಗಳಿಂದ ಅವರು ನನಗೆ ಪರಿಚಿತರು. ಪ್ರೀತಿಯ ಒಡನಾಡಿ. ಮೈಸೂರು ರಮಾನಂದರ ಕಲಾ ಪರಿಚಯವನ್ನು ನಾನು ನಾಡಿನ ಕೆಲವು ಪತ್ರಿಕೆಗಳಲ್ಲಿ ಬರೆದಿರುವುದುಂಟು. ರಮಾನಂದ್ ರಂಗಭೂಮಿಯಲ್ಲಿ ತಾನು ಕಲಾವಿದನಾಗಿ ಬೆಳೆಯುವ ಜೊತೆಗೆ ತನ್ನ ಸಹ ಕಲಾವಿದರನ್ನು ಬೆಳೆಸಿದ್ದಾರೆ. ಕಲಾವಿದರ ಸಂಕಷ್ಟಗಳಿಗೆ ಮಿಡಿದು ಅವರನ್ನು ಸಹ ತನ್ನೊಂದಿಗೆ ಬೆಳೆಸಿದ ಹೃದಯ ಸಂಪನ್ನರು. ಇವರಿಗೆ ರಾಜ್ಯದ ರಾಜ್ಯೋತ್ಸವ ಪ್ರಶಸ್ತಿ ನಿಜಕ್ಕೂ ಸಲ್ಲಬೇಕಿದೆ. ಅದಕ್ಕೆ ಇವರು ನಿಜವಾಗಿಯೂ ಅರ್ಹರಿದ್ದಾರೆ.
ಮೊನ್ನೆ ಅವರು ಬೆಂಗಳೂರಿನ ನಾಗರಬಾವಿಯಲ್ಲಿ ಬಾಡಿಗೆ ಮನೆಯಲ್ಲಿರುವ ಮಗನ ಮನೆಗೆ ಬಂದಿದ್ದರು. .ಅವರ ರಂಗ ಸಾಧನೆಯ ಬೃಹತ್ ಫೈಲ್ ನ್ನು ತೋರಿಸಿದರು. ಇದನ್ನು ಆಯ್ಕೆ ಸಮಿತಿ ನೋಡಿ ಪ್ರಶಸ್ತಿಗೆ ಪರಿಗಣಿಸಬೇಕಿದೆ ಅಷ್ಟೇ.  
ರಂಗಭೂಮಿಯ ಅನುಭವದಿಂದ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಅಲ್ಲಿಯೂ ಗುರುತರ ಪಾತ್ರಗಳಲ್ಲಿ ಗಮನಾರ್ಹ ಅಭಿನಯದಿಂದ ಮಿಂಚಿದವರು ಮೈಸೂರು ರಮಾನಂದರು. ಎಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೋ ತಿಳಿಯದು. ಇತ್ತೀಚಿಗೆ ಇವರೇ ಪ್ರದಾನ ಪಾತ್ರ ನಿರ್ವಹಿಸುತ್ತಿರುವ ಮಗ್ಗಿ ಪುಸ್ತಕ ಬಿಡುಗಡೆಯ ನಿರೀಕ್ಷಿಯಲ್ಲಿದೆ. ಮತ್ತೊಂದು ರನೊನಂದರ
ವಿಶೇಷವೆಂದರೆ ಇವರ ಮಗ ಮತ್ತು ಪತ್ನಿ ಸಹ ಕಲಾ ಬದುಕಿನಲ್ಲಿ ಇವರ ಜೊತೆಯಲ್ಲಿಯೇ ಸಾಗಿದ್ದಾರೆ.
ನಗು ಎಲ್ಲಿದೆಯೋ ಅಲ್ಲಿದೆ ಅರೋಗ್ಯ ಎನ್ನುವ ರಮಾನಂದರ ಸ್ಲೋಗನ್ ನಂತೆ ಇವರು ತಮ್ಮ ಬದುಕಿನ ಉದ್ದಕ್ಕೂ ಕಲಾ ರಸಿಕರನ್ನು ನಗಿಸುತ್ತಲೇ ಬಂದಿದ್ದಾರೆ.
   ----

ಗೊರೂರು ಅನಂತರಾಜು, ಹಾಸನ
9449462879
ವಿಳಾಸ: ಹುಣಸಿನಕೆರೆ ಬಡಾವಣೆ,
29ನೇ ವಾಡ್೯
3 ನೇ ಕ್ರಾಸ್, ಹಾಸನ - 573201.

ವರದಿ

ವರದಿ

ಬದುಕು 'ಹಾವು-ಏಣಿಯಾಟ ಜಯಪ್ಪ ಹೊನ್ನಾಳಿ


ಬದುಕು ಹಾವು ಏಣಿಯಾಟ, ಅದರಲ್ಲಿ ದುರಾಸೆ, ದುಃಖ, ಜಾತಿ, ಮತ, ಕುಲ, ಧರ್ಮಗಳೆಂಬ ವಿಷಕಾರುವ ಹಾವುಗಳು ಜಾಸ್ತಿ, 'ಬುದ್ಧ-ಬಸವ-ಅಂಬೇಡ್ಕರ್' ಮುಂತಾದವರಿಲ್ಲಿ ಏಣಿಗಳು, ಆ ಏಣಿಗಳನ್ನು ಹಿಡಿದುಕೊಂಡು ನಾವು ಮೇಲೇರಬೇಕಾಗಿದೆ, ಅದರಲ್ಲೂ ಮುಖ್ಯವಾಗಿ ನಾವು ಅಂದರೆ ಬರೆವಣಿಗೆಯಲ್ಲಿ ತೊಡಗಿಸಿಕೊಂಡವರು, ಬರೆಯದ ಸಾವಿರಾರು ಜನರ ಪ್ರತಿನಿಧಿಗಳಾಗಿ,
ಜಾತ್ಯತೀತರಾಗಿ ಜಗತ್ತಿಗೆ ಆದರ್ಶವಾಗಬೇಕಾಗಿದೆ, ಮತಾತೀತನಾಗದವನು, ಕುಲಾತೀತನಾಗದವನು ಎಂದಿಗೂ ಕವಿಯಾಗಲಾರ, ಮಮತೆ ಸಮತೆಗಳ ತನ್ನೆರಡೂ ಕಣ್ಣಾಗಿಸಿಕೊಂಡವ ಮಾತ್ರ ಕವಿಯಾಗಲು ಸಾಧ್ಯ, ರಾಜಕಾರಣಿಗಳ, ಮಂತ್ರಿ ಮಹೋದಯರ ಶಿಫಾರಸ್ಸಿನಿಂದ ಯಾರೇ ಕವಿಗೋಷ್ಠಿಯ ವೇದಿಕೆಗಳನ್ನೇರಿದರೂ, ಸಹೃದಯರೆದೆಯ ಸಿಂಹಾಸನವನ್ನೇರುವುದು ಅಸಾಧ್ಯ, ಕವಿತೆಯೇ ಕವಿಯನ್ನು ಶಿಫಾರಸ್ಸು ಮಾಡಿದರೆ ಮಾತ್ರ ಸಹೃದಯರೆದೆಯ ಸಿಂಹಾಸನನ್ನು ಪಂಪ-ಕುಮಾರವ್ಯಾಸ-ಕುವೆಂಪು-ಬೇಂದ್ರೆಯವರಂತೆ ಏರಬಹುದು, ಇದನ್ನು ಇಂದಿನ ಬಹುಪಾಲು ಬರೆಹಗಾರರು ಮರೆತಿರುವುದು ಖೇದಕರ ಸಂಗತಿ ಎಂದು ಕವಿ ಡಾ. ಜಯಪ್ಪ ಹೊನ್ನಾಳಿ ಹೇಳಿದರು.

   ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಮೈಸೂರು ಜಿಲ್ಲಾ ಘಟಕದಿಂದ ಹಾರ್ಡ್ವೀಕ್ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ *ದಸರಾ ಕವಿಗೋಷ್ಠಿ* ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತಾಡಿದ ಅವರು, ವಿಶ್ವಪ್ರಜ್ಞೆ ಕವಿಗಳದಾಗಬೇಕು, ಅವರು ಶಾಶ್ವತ ಸಾಂಸ್ಕೃತಿಕ ಶಾಸಕರು ತಾವೆಂಬುದನ್ನೆಂದಿಗೂ ಮರೆಯಬಾರದು ಎಂದರು.

ಅಧ್ಯಕ್ಷತೆ ವಹಿಸಿದ್ದ ಕವಯತ್ರಿ ಹೇಮಗಂಗಾ ಮಾತನಾಡಿ, ಭಾಷಾ ಶುದ್ಧಿ ಕವಿಗಳಿಗೆ ಬಹುಮುಖ್ಯ, ಭಾಷೆಯ ಮೇಲೆ ಪ್ರಭುತ್ವವಿಲ್ಲದಿರೆ ಉತ್ತಮ ಸಾಹಿತ್ಯ ಸೃಷ್ಟಿಸಲು ಸಾಧ್ಯವಿಲ್ಲ, ಪ್ರೌಢವಾದ ಭಾಷಾ ಸಂಪನ್ನತೆಯನ್ನು ಕವಿಗಳು ಎಲ್ಲಕ್ಕೂ ಮೊದಲು ತಮ್ಮದಾಗಿಸಿಕೊಳ್ಳಬೇಕು ಎಂದರು.

ವೇದಿಕೆಯ ಮೈಸೂರು ಜಿಲ್ಲಾಧ್ಯಕ್ಷೆ ಶ್ರೀ ಮತಿ ಇಂದಿರಾ ವಸಂತ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮೀರಾ ಕೇಸರ್ಕರ್ ಎಲ್ಲರನ್ನೂ ಸ್ವಾಗತಿಸಿದರು. ಸ್ಮಿತಾ ಹೇಮೇಶ್ ಪ್ರಾರ್ಥನೆ ಹಾಗೂ ಕುಮಾರಿ ಪರಿಣಿತ ಹಚ್ಚೇವು ಕನ್ನಡದ ದೀಪ ದೀಪಾರತಿಯ ಅಮೋಘ ನೃತ್ಯ ದೊಂದಿಗೆ ಎಲ್ಲರನ್ನು ರಂಜಿಸಿ ಮೆಚ್ಚುಗೆಗೆ ಪಾತ್ರರಾದರು. 
ಮುಖ್ಯ ಅತಿಥಿಗಳಾಗಿ ಎಂ ಶಿವಸ್ವಾಮಿ, ಶೈಲಜಾ ಹಾಸನ, ರಾಜೇಶ್ವರಿ ಹುಲ್ಲೇನಳ್ಳಿ, ರಾಘವೇಂದ್ರ, ಶಿವಕುಮಾರ್, ಬಿಡಿಎಂ ಕುಮಾರ್, ಹಿರಿಯ ಕವಿಗಳಾದ ಎನ್. ಎಲ್. ಚನ್ನೇಗೌಡ, ಗೊರೂರು ಅನಂತ ರಾಜು, ಶೀಲಾ ಭಟ್ ಇದ್ದು ಕವಿತೆ ವಾಚಿಸಿದರು. 20ಕ್ಕೂ ಹೆಚ್ಚು ಕವಿಗಳು ಕವನ ವಾಚಿಸಿದರು. ಪುಷ್ಪಲತಾ ನಾರಾಯಣ್, ಮಂಜುಳ ಜಾದವ್ ನಿರ್ವಹಿಸಿದರು. 
ಮನೋಜ್ ಕುಮಾರ್, ಅನಿಲ್ ಕುಮಾರ್ ನಿರೂಪಿಸಿದರು. ವೇದಿಕೆಯ ಸಂಸ್ಥಾಪಕ ಅಧ್ಯಕ್ಷೆ ಕಲಾವತಿ ಮಧುಸೂದನ್ ಪ್ರಾಸಂಗಿಕವಾಗಿ ಮಾತನಾಡುತ್ತ ವೇದಿಕೆಯ ಧ್ಯೇಯೋದ್ದೇಶಗಳನ್ನು ತಿಳಿಸಿ, ವೇದಿಕೆ ಮುನ್ನೆಡೆಸಲು ಸರ್ವರ ಸಹಕಾರ ಕೋರಿದರು. ಮತ್ತು ಕಾರ್ಯಕ್ರಮದ ಕಡೆಯಲ್ಲಿ ವಂದನಾರ್ಪಣೆ ಮಾಡಿದರು.

ಲೇಖನ...

ಲೇಖನ 

ನಮ್ಮ ಊರು ಹಾಸನ ಶಿಲ್ಪಕಲೆಯ ಶಾಸನ 
ಗಾಯಕ ಆರ್. ರಾಮಶಂಕರಬಾಬು


 ಮಾತನಾಡುವಾಗ ಉಗ್ಗುವಿಕೆಯ ತೊಂದರೆಯಿಂದ ತೊದಲುವ ವ್ಯಕ್ತಿ ಹಾಡುವಾಗ ಸುಲಲಿತವಾಗಿ ಹಾಡುತ್ತಾರೆ ಎಂದರೆ ಈ ಸಾಧನೆಯ ಹಿಂದೆ ದೃಢ ಸಂಕಲ್ಪ ಮೇಳೈಸಿದೆ ಎನ್ನಬಹುದು. ತನ್ನ ಉಗ್ಗುವಿಕೆಯ ತೊಂದರೆಗೆ ಹಾಡುಗಾರಿಕೆಯಿಂದ ಪರಿಹಾರ ಕಂಡುಕೊಂಡ ಹಾಸನದ ಆರ್. ರಾಮಶಂಕರಬಾಬು ಜಿಲ್ಲೆಯ ಪ್ರತಿಭಾನ್ವಿತ ಗಾಯಕರು. ಉಗ್ಗು ಇದ್ದರೂ ಹಾಡಿ ಹಿಗ್ಗುವ ಮುಖೇನ ತಮ್ಮ ಬಾಳಿನ ನೋವು ಮರೆಯುತ್ತಿದ್ದರು. ಚಿಕ್ಕ ವಯಸ್ಸಿನಲ್ಲಿ ಉಗ್ಗುವಿಕೆ ತೊಂದರೆಯಿಂದ ಮಾತನಾಡಲು ಕಷ್ಟಪಡುತ್ತಿದ್ದ ಬಾಬು ಛಲ ಮತ್ತು ದೃಢಚಿತ್ತದಿಂದ ಹಾಡುವುದನ್ನು ಅಭ್ಯಾಸ ಮಾಡಿಕೊಂಡವರಾಗಿದ್ದರು. ಜಾನಪದ ಹಾಡುಗಳನ್ನು ಹಾಡುವುದರ ಜೊತೆಗೆ ಕಂಜರ ಬಾರಿಸುವುದನ್ನು ರೂಢಿಸಿಕೊಂಡಿದ್ದರು. ಹೆಚ್ಚು ಹೆಚ್ಚು ಆತ್ಮವಿಶ್ವಾಸದಿಂದ ಹಾಡುಗಾರಿಕೆ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಗೆದ್ದವರು. ಗಾನ ಸೌರಭ, ಸಂಗೀತ ಗಂಗಾ ಎಂಬ ಹೆಸರಿನಲ್ಲಿ ಆರ್ಕೆಸ್ಟ್ರಾ ತಂಡ ಕಟ್ಟಿಕೊಂಡು ಗಣೇಶೋತ್ಸವ, ರಾಜ್ಯೋತ್ಸವ, ಮದುವೆ ಸಮಾರಂಭಗಳಲ್ಲಿ ಹಾಡುತ್ತಿದ್ದರು. 
 ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಜನೆಯಲ್ಲಿ ಸುಗಮ ಸಂಗೀತ ಕಾರ್ಯಕ್ರಮ ನೀಡಿದ್ದರು. ಹಾಸನ ಆಕಾಶವಾಣಿಯಲ್ಲಿ ತತ್ವಪದ ಗಾಯಕರಾಗಿ ಹಾಡಿದ್ದರು. ಸಾಮಾಜಿಕ ಜನಜಾಗೃತಿಯ ಕಾರ್ಯಕ್ರಮಗಳಲ್ಲಿ ಅವಕಾಶ ಸಿಕ್ಕಾಗ ತಮ್ಮೆಲ್ಲಾ ಕಾರ್ಯಗಳನ್ನು ಬದಿಗೊತ್ತಿ ಭಾಗವಹಿಸುತ್ತಿದ್ದರು. ಸರ್ಕಾರಿ ಪ್ರಾಯೋಜಿತ ಜನಜಾಗೃತಿ ಕಾರ್ಯಕ್ರಮ ಅದು ಆರೋಗ್ಯ ನೈರ್ಮಲ್ಯ ವಿಚಾರವಿರಲಿ, ಕುಡಿತದ ವ್ಯಸನ, ರಸ್ತೆ ಸುರಕ್ಷತೆ ಕೌಟುಂಬಿಕ ಸಾಮರಸ್ಯ ಹೀಗೆ ಎಂತಹದೇ ವಿಷಯದ ವಿಚಾರ ಇರಲಿ ಅದಕ್ಕೆ ಸ್ಥಳದಲ್ಲೇ ರಾಗ ತಾಳ ಮೇಳೈಸಿ ಹಾಡುವ ಸಾಮಾರ್ಥ್ಯ ಅವರಲ್ಲಿತ್ತು. ಅಂದಿನ ದಿನಗಳಲ್ಲಿ ನಾನು ಗೊರೂರಿನಲ್ಲಿ ಕಟ್ಟಿ ಬೆಳೆಸಿದ್ದ ಕನ್ನಡ ಕಲಾ ಸಾಹಿತ್ಯ ವೇದಿಕೆ ವೃಂದ ಜಿಲ್ಲೆಯ ನಾಟಕ ಸ್ಫರ್ಧೆಗಳಲ್ಲಿ ಹಾಸನ ಜಾತ್ರೆ, ಹೊಳೆನರಸೀಪುರ ಸಕಲೇಶಪುರ ಜಾತ್ರೆ, ಗಣೇಶೋತ್ಸವಗಳಲ್ಲಿ ನಮ್ಮ ನಾಟಕ ತಂಡದ ಹಿನ್ನೆಲೆ ಗಾಯಕರಾಗಿ ಬರುತ್ತಿದ್ದರು, ಹಾಡುತ್ತಿದ್ದರು. ನಾಟಕಕ್ಕೆ ಜನ ಸೇರಿಸಲು ಮೊದಲಿಗೆ ಬಾಬು ಅವರಿಗೆ ಹಾಡಲು ಅವಕಾಶ ನೀಡುತ್ತಿದ್ದೆ. ಅವರು ನನ್ನ ಊರು ಹಾಸನ ಶಿಲ್ಪಕಲೆಯ ಶಾಸನ ತಾವೇ ರಚಿಸಿದ್ದ ಈ ಹಾಡನ್ನು ಸಾವಿರಾರು ವೇದಿಕೆಗಳಲ್ಲಿ ಹಾಡಿದ್ದಾರೆ. ಈ ಗೀತೆ ನಮ್ಮ ನಾಟಕಕ್ಕೂ ಮೊದಲು ನಾವು ಮೇಕಪ್ ಮಾಡಿಕೊಳ್ಳಲು ಸಮಯ ಸಿಗಲು ಅನುಕೂಲವಾಗುತ್ತಿತ್ತು. ಮತ್ತು ನಾಟಕ ಆರಂಭಗೊಂಡಿರಬೇಕು ಎಂದು ಭಾವಿಸಿ ಜನ ಧಾವಿಸಿ 
ಬರುತ್ತಿದ್ದರು. ಇನ್ನು ನಮ್ಮ ಹುಡುಗರು ಬಸ್ಸಿನಿಂದ ಇಳಿದ ಕೂಡಲೇ ಅಲ್ಲಿ ಇಲ್ಲಿ ಚೆಲ್ಲಾಪಿಲ್ಲಿಯಾಗಿ ಜಾತ್ರೆ ಮಾಳ ಸುತ್ತುವ ಕೆಟ್ಟ ಚಾಳಿ ಬೆಳೆಸಿಕೊಂಡಿದ್ದರು. ಆಗ ಬಾಬು ಅವರ ಕಂಚಿನ ಕಂಠದಿoದ ಬಾಬು ಮೈಕಿನಲ್ಲಿ ಹಾಡುತ್ತಿದ್ದನ್ನು ಕೇಳಿಸಿಕೊಂಡು ಆಗ ಕಲಾವಿದರು ನಿಧಾನವಾಗಿ ಬಂದು ಸಾರಿ ಸಾರ್,. ಎಂದು ಪರದೆ ಹಿಂದೆ ಸರಿಯುತ್ತಿದ್ದರು. ಈ ಅನುಭವ ಹಿನ್ನಲೆಯಲ್ಲೇ ನಾನು ತೋಳ ಬಂತು ತೋಳ ಬರೆದು ನಾಟಕವಾಡಿಸಿ ಅದೀಗ ಪುಸ್ತಕವಾಗಿ ಓದುಗರ ಕ್ಕೆ ಸೇರಿದೆ. ಇಂದು ಕಾಮಿಡಿ ಕಿಲಾಡಿಗಳು ವಿನ್ನರ್ ಆಗಿರುವ ಕೆ.ಆರ್.ಪೇಟೆ ಶಿವರಾಜ್ ಅಂದು ನಮ್ಮ ತಂಡದ ನಟನಾಗಿ ರಂಗದ ಮೇಲೆ ಬಂದಾಗ ಆಗಿನ್ನು ಕಾಲೇಜು ವಿದ್ಯಾರ್ಥಿ. ಬಾಬು ಅವರು ನನ್ನ ಕವನಗಳಿಗೆ ರಾಗ ಕಟ್ಟಿ ವೇದಿಕೆಗಳಲ್ಲಿ ಹಾಡಿದ್ದಾರೆ. ಇವರು ವೇದಿಕೆಯಲ್ಲಿ ಏಕಪಾತ್ರಾಭಿನಯವನ್ನು ಮಾಡಿ ಜನರನ್ನು ರಂಜಿಸಿದ್ದಾರೆ. ಅನೇಕ ನಾಟಕಗಳಿಗೆ ಹಿನ್ನೆಲೆ ಗಾಯಕರಾಗಿ ಹಾಡಿರುವ ಇವರಿಗೆ ಕುಂಟುನಾಯಿ, ವ್ಯವಸ್ಥೆ, ಆತ್ಮ ಯಾವ ಕುಲ ಜೀವ ಕುಲ ನಾಟಕಗಳು ಹೆಸರು ತಂದಿದ್ದವು. 
 ವಾರ್ತಾ ಇಲಾಖೆ ಆರೋಗ್ಯ ಇಲಾಖೆಗಳು ಹಮ್ಮಿಕೊಂಡ ಜನಜಾಗೃತಿ ಕಾರ್ಯಕ್ರಮಗಳಲ್ಲಿ ಸಾಕ್ಷರತಾ ಆಂದೋಲನದ ಕಲಾಜಾಥದಲ್ಲಿ ಪಾಲ್ಗೊಂಡು ಬಾಬು ದಮಡಿ ಬಾರಿಸಿಕೊಂಡು ಹಾಡಿದ್ದಾರೆ. ಇವರ ಕಲಾ ಪ್ರತಿಭೆ ಗುರುತಿಸಿ ಜಿಲ್ಲೆಯ ಸಂಘ ಸಂಸ್ಥೆಗಳು ಸನ್ಮಾನಿಸಿ ಗೌರವಿಸಿವೆ. ಆದರೆ ಇಂತಹ ಮಹಾನ್ ಕಲಾವಿದನಿಗೆ ಹಾಸನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಕಡೆಗೂ ಸಿಗದೇ ಇದ್ದಿದ್ದು ವಿಷಾದನೀಯ. ಈ ಬಗ್ಗೆ ಅಷ್ಟಾಗಿ ಆಸಕ್ತಿ ತೋರದ ಬಾಬು ಮುಂದಿನ ವರ್ಷ ನೋಡೋಣ ಬಿಡಿ ಅನಂತರಾಜು ಎಂದು ನಿರಾಸೆಯಿಂದಲೇ ಹೇಳುತ್ತಿದ್ದರು. ಎರಡು ವರ್ಷದ ಹಿಂದೆ ಅರ್ಜಿ ಹಾಕಿದ್ದರು. ಪ್ರಶಸ್ತಿ ಸಿಗದೆ ನಿರಾಶರಾಗಿದ್ದರು. ಕಲಾವಿದರ ಮಾಶಸನಕ್ಕೂ ಅರ್ಜಿ ಹಾಕಲಾಗಲಿಲ್ಲ. ಜನ್ಮ ದಿನಾಂಕ ಪ್ರಮಾಣ ಪತ್ರ (ಡೇಟ್ ಆಫ್ ಬರ್ತ್ ಫಿಕೇಟ್ ) ಬೇಕಾಗಿತ್ತು ಎ೦ದು ಕಾಣುತ್ತದೆ. ಅದು ಅವರಲ್ಲಿ ಇರಲಿಲ್ಲವೇನೋ. ಅದಕ್ಕಾಗಿ ಅವರು ಅನಂತರಾಜು, ನೀವು ನನ್ನ ಪರಿಚಯ ಲೇಖನ ಪ್ರಜಾವಾಣಿ ದಿನಪತ್ರಿಕೆಯಲ್ಲಿ ಬರೆದಿದ್ದಿರಲ್ಲಾ ಅದರ ಕಟಿಂಗ್ಸ್ ನಿಮ್ಮ ಫೈಲ್ ನಲ್ಲಿ ಇದ್ದರೆ ಹುಡುಕಿಕೊಡಿ ಎಂದರು. ನಾನು ಸಾಮಾನ್ಯವಾಗಿ ಕಲಾವಿದರ ಪರಿಚಯ ಲೇಖನ ಬರೆಯುವಾಗ ಅವರ ಜನ್ಮ ದಿನಾಂಕ ಕೇಳಿ ದಾಖಲಿಸುತ್ತಿದ್ದೆ. ಕೆಲವರಿಗೆ ಅವರ ಹುಟ್ಟಿದ ದಿನಾಂಕವೇ ಗೊತ್ತಿರುವುದಿಲ್ಲ. ಈಗಿನಂತೆ ಶಾಲೆಗೆ ಮಕ್ಕಳನ್ನು ಸೇರಿಸುವಾಗ ಆಸ್ಪತ್ರೆ, ನಗರಸಭೆಯಿಂದ ಪಡೆದ ಜನನ ಪ್ರಮಾಣ ಕೂಡಲೇಬೇಕೆಂಬ ಕಡ್ಡಾಯವಿರಲಿಲ್ಲ. ಇದಕ್ಕೆ ಉದಾಹರಣೆ ಹೇಳಬೇಕೆಂದರೆ ಸಾಹಿತಿಗಳು ನಮ್ಮ ಚಿಕ್ಕಪ್ಪನವರು ಆದ ಗೊರೂರು ಸೋಮಶೇಖರ್ ತಮ್ಮ ಆತ್ಮಕಥೆ ಪುಸ್ತಕ ಗೊರೂರು ನೆನಪುಗಳಲ್ಲಿ ಬರೆದಿದ್ದಾರೆ. 
ಮಹಾಲಯ ಅಮಾವಾಸೆಯ ದಿನ ಹಬ್ಬ ಮುಗಿಸಿ ನಾನು ನನ್ನ ಸಹೋದರ ಲೇಖಕ ನಿವೃತ್ತ ಉಪನ್ಯಾಸಕ ಗೊರೂರು ಶಿವೇಶ್ ಸಂಜೆ ಎಲೆ ಅಡಿಕೆ ತಿನ್ನುತ್ತಾ ಸಾಹಿತ್ಯ ಪರಿಷತ್ತು ಚುನಾವಣೆ, ನಾಟಕ ವಿಚಾರವಾಗಿ ಮಾತನಾಡುತ್ತಾ ಬಾಬು ವಿಷಯ ಮಧ್ಯೆ ಬಂತು. ಆಗಲೇ ನಾನು ಬಾಬು ಅವರಿಗೆ ಈ ಬಾರಿ ಅರ್ಜಿ ಹಾಕಿ ಬಾಬು ಎಂದು ಮೆಸೇಜ್ ಮಾಡಿದ್ದೆ. ಮಾರನೇ ದಿನ ಬೆಳಿಗ್ಗೆ ಕಾದಂಬರಿಗಾರ್ತಿ ಶ್ರೀಮತಿ ಶೈಲಜಾ ಸುರೇಶ್ ಮೇಡಂ ಬಾಬು ನಿಧನ ಸುದ್ಧಿ ವ್ಯಾಟ್ಸಪ್ ಮಾಡಿದ್ದರು. ಇದು ಆ ಕ್ಷಣಕ್ಕೆ ನನಗೆ ಶಾಕಿಂಗ್ ನ್ಯೂಸ್. ಆಗ ನಮ್ಮ ವಾರ್ಡಿನ ಕಸದ ಗಾಡಿ ನಮ್ಮ ಮನೆ ಕಡೆ ಬರುತ್ತಿರಲು ಆ ಗಾಡಿಯ ಮೈಕಿನಿಂದ ಬಾಬು ಅವರ ಜನಪ್ರಿಯ ಹಾಡು ನನ್ನ ಊರು ಹಾಸನ ಶಿಲ್ಪ ಕಲೆಯ ಶಾಸನ ಕೇಳಿ ಬರುತ್ತಿತ್ತು. ಈ ಹಾಡು ಮಲಗಿದ್ದ ನಮ್ಮನ್ನು ಹಿಂದೆಲ್ಲಾ ಬಡಿದೆಬ್ಬಿಸುತ್ತಿತ್ತು. ಬಾಬು ಈ ಆಡಿಯೋ ಎಲ್ಲಿ ಮಾಡಿಸಿದ್ದೀರಿ ಎಂದು ಹಿಂದೊಮ್ಮೆ ಕೇಳಿದ್ದೆ. ಅನಂತರಾಜು, ನಿಜವಾಗಿಯೂ ಈ ಹಾಡು ನಾನು ಹಾಡಿದ್ದಲ್ಲ ಗಾಯಕ ಭಾನುಮೋಶ್ರೀಯವರು ಹಾಡಿದ್ದು ಎಂದಿದ್ದರು. ಬಾಬು ಅವರದೇ ಸ್ವರ ಸಾಮಾರ್ಥ್ಯದಲ್ಲಿ ಈ ಹಾಡನ್ನು ಮ್ಯೂಸಿಕ್ ಸಂಗಾತ್ಯದಲ್ಲಿ ರೆಕಾರ್ಡ್ ಮಾಡಿ ಭಾನುಮೋಶ್ರಿ ಯೂ ಟ್ಯೂಬ್ ನಲ್ಲಿ ಹಾಕಿದ್ದರು ಎಂದು ಕಾಣುತ್ತದೆ.ಅದನ್ನು ಗೊರೂರು ಶಿವೇಶ್ ಯೂ ಟ್ಯೂಬ್‌ನಿಂದ ತೆಗೆದು ಗ್ರೂಪ್ ಗೆ ಕಳಿಸಿದರು. ಹಾಡು ಕೇಳುತ್ತಾ ಹಾಗೆಯೇ ಕಣ್ಣಂಚಿನಲ್ಲಿ ನೀರು ಧುಮುಕದೆ ಹಾಗೆ ನಿಂತಿತ್ತು. 

ಗೊರೂರು ಅನಂತರಾಜು, ಹಾಸನ. 
ಮೊ:೯೪೪೯೪೬೨೮೭೯.
ವಿಳಾಸ: ಹುಣಸಿನಕೆರೆ ಬಡಾವಣೆ, 
೨೯ನೇ ವಾರ್ಡ್, ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ಹಾಸನ.

ಗಂಡ ಹೆಂಡತಿ ಜಗಳ ಉಂಡು ಮಲಗಿದ ಮೇಲೂ...

ಗಂಡ ಹೆಂಡತಿ ಜಗಳ ಉಂಡು ಮಲಗಿದ ಮೇಲೂ........

ಗಂಡ ಹೆಂಡತಿ ಜಗಳ ಉಂಡು ಮಲಗುವವರೆಗೂ ಎನ್ನುವ ಮಾತು ಬರಬರುತ್ತಾ ಗಂಡಹೆಂಡತಿ ಜಗಳ ಉಂಡು ಮಲಗಿದಿ ಮೇಲೂ ಎನ್ನುವಂತಾಗಿದೆ. ಹಾಗಂತ ನಾನು ನಮ್ಮ ಬಗ್ಗೆ ಹೇಳ್ತಾಯಿಲ್ಲ ಮಾಧ್ಯಮಗಳಲ್ಲಿ ಇತ್ತೀಚಿಗೆ ಪ್ರಸಾರವಾಗುತ್ತಿರುವ ವರದಿಗಳು ಮತ್ತು ನಮಗೆ ಗೊತ್ತಿರುವ ನಮ್ಮ ಸುತ್ತಲೂ ನಡೆಯುತ್ತಿರುವ ಘಟನೆಗಳು ಕಾರಣ.

ಗಂಡ ಹೆಂಡತಿಯ ಮಧ್ಯೆ ಜಗಳ ಸರ್ವೇ ಸಾಮಾನ್ಯ ಗಂಡನ ಜೊತೆ ಜಗಳ ಆಡದಿದ್ದರೆ ಕೆಲವು ಹಂಗಸರಿಗೆ ಊಟ ಅರಗಲ್ಲ. ಅದೇ ರೀತಿ ಹೆಂಡತಿ ಬೈಯದಿದ್ದರೆ ಗಂಡನಿಗೆ ಸಮಾಧಾನ ಇರಲ್ಲ ಅಂಥಹ ಪರಿಸ್ಥತಿಗೆ ಕೆಲವರು ತಲುಪಿ ಬಿಟ್ಟಿರುತ್ತಾರೆ‌ ಅಂದರೆ ಸಂಸಾರವೆಂಬ ಪರ್ವತದ ಪೀಕಿಗೆ ತಲುಪಿರುತ್ತಾರೆ. ಕೆಲವರು ಜಗಳವಾಡುತ್ತಲೇ ಮುಂಜಾನೆ ಎದ್ದರೂ ಅವರವರ ಕೆಲಸ ಸಾಗುತ್ತಲೇ ಜೊತೆಜೊತೆಯಲಿ ಜಗಳನೂ ಮುಂದುವರೆಸಿರುತ್ತಾರೆ ಹೆಂಡತಿ ಬೈಯುತ್ತಲೇ ಅಡುಗೆ ಮಾಡುತ್ತಾಳೆ ಬೈಯುತ್ತಲೇ ಊಟ ಬಡಿಸುತ್ತಾಳೆ. ಒಂದುವೇಳೆ ಅವಳೇನಾದರೂ ಬೈಯುವುದ ನಿಲ್ಲಿಸಿದರೆ ಗಂಡನಿಗೆ ಅನುಮಾನ ಬಂದು ಯಾಕೆ ಬೈಯುವುದ ನಿಲ್ಲಿಸಿದಳೆಂದು ಅಡುಗೆ ಮನೆಗೆ ಹೋಗಿ ನೋಡಿ ಯಾಕೆ ಏನಾಯಿತು ಸಮ್ನಾಗಿಬಿಟ್ಟೆ ಅಂದ್ರೆ ಆಕೆ ಅಳುತ್ತಿರುವುದನ್ನು ನೋಡಿ ಭಯಪಡುವುದು ಉಂಟು. ಆದರೆ ಗಂಡ ಹೆಂಡತಿಯ ಬೈಗುಳದ ಬಿರುಗಾಳಿಯ ಮಧ್ಯೆ ಸಿಕ್ಕು ಹಾರಿಹೋಗುತ್ತಿರುವಾಗ ಆಗಾಗ ಬದುಕಲು ಒಂದೋ ಎರಡೊ ಮೆದು ಮಾತಿನ ಆಸರೆ ಪಡೆಯಲು ಪ್ರಯತ್ನಿಸುತ್ತಾನೆ.ಇಷ್ಟೆಲ್ಲಾ ಆದಮೇಲೆ ಗಂಡ ಕೆಲಸಕ್ಕೆ ಹೋದಮೇಲೆ ಕೆಲವು ಹೆಂಗಸರು ತಕ್ಷಣ ಪಕ್ಕದ ಮನೆಯವರ ಜೊತೆ ಮಾತಿಗೆ ಜಾಯಿನ್ ಆಗಿ ನನ್ನ ಗಂಡ ನನ್ನ ತುಂಬಾ ಪ್ರೀತಿ ಮಾಡ್ತಾನೆ ಕರ್ಣಿ ಅಂದಾಗ ಅದು ಹೇಗೆ ಹೇಳ್ತಿರಾ ಅಂದ್ರೆ ನಾನು ಎಷ್ಟೇ ಬೈದರೂ ಮರು ಮಾತಾಡುವುದೇ ಇಲ್ಲ ಅಂತಾರೆ. 

ಇನ್ನೂ ಕೆಲವು ಹೆಂಡತಿಯರು ಗಂಡ ಹೋದಮೇಲೆ ಅಯ್ಯೋ ನಾನ್ಯಕೆ ಏನೇನೊ ಅಂದು ಬಿಟ್ಟೆ ಪಾಪ ಮನಸಿಗೆ ನೋವು ಮಾಡಿಕೊಂಡ್ರೋ ಏನೋ ಅಂತ ಆಫೀಸಿಗೆ ಹೋದ ಗಂಡನಿಗೆ ಫೋನ್ ಮಾಡಿ ರೀ.... ಸಾರಿರೀ...ಬೇಜಾರಾಯ್ತಾ...? 

ಇಲ್ವಲ್ಲ....ಯಾಕೆ ಏನಾಯ್ತು...? 

ನಾನು ನಿಮಗೆ ಹಾಗೆಲ್ಲ ಬೈಯಬಾರದಿತ್ತು ಸಾರಿರೀ..


ನೀನು ನನಗೆ ಬೈದಿಯಾ...?

ಹೌದು....

ನನಗೇನೂ ಕೇಳಿಸಲೇ ಇಲ್ಲ 

ಯಾಕೆ...?

ನಾನು ಬೆಳಿಗ್ಗೆ ಎದ್ದ ಕೂಡಲೇ ಏರ್ ಫೋನ್ ಹಾಕಿಕೊಳ್ಳುವ ಅಭ್ಯಾಸ ಆಗಿದೆ ಕಣೆ...ಅನ್ನೋದ

ಗಂಡ ಸಂಜೆ ಮನೆಗೆ ಬಂದು ಅರ್ದ ಗಂಟೆಯ ನಂತರ ಅಥವಾ ಬರುತ್ತಿದ್ದಂತೆಯೇ ಮತ್ತೆ ಜಗಳ ಈ ಜಗಳ ಮು.ಮಜಾನೆಯಿಂದ ರಾತ್ರಿ ಮಲಗಿದ ಮೇಲೂ ಕಂಟಿನ್ಯೂ ಆಗಿರತ್ತೆ...ಇದು ತಿಂಗಳಗಟ್ಟಲೆ ವರ್ಷಗಟ್ಟಲೇ ಜಗಳಾಡುತ್ತಲೇ ಮಕ್ಕಳಾಗ್ತಾವೆ ಜಗಳಾಡುತ್ತಲೇ ಮಕ್ಕಳನ್ನು ಬೆಳೆಸಿ ಒಳ್ಳೆಯ ಶಿಕ್ಷಣ ಕೊಡಿಸಿ ಮದುವೆ ಮಾಡಿ 

ನೋಡಮ್ಮ ನಾನು ನಿಮ್ಮ ತಂದೆ ಮೂವತ್ತು ವರ್ಷ ಸುಖ ಸಂಸಾರ ಮಾಡಿದ್ದೇವೆ ನೀನು ಕೂಡ ನಿನ್ನ ಗಂಡನ ಜೊತೆ ಹೀಗೆ ನೂರು ವರ್ಷ ಸುಖವಾಗಿ ಬಾಳು ಎಂದು ತಾಯಿ ಹೇಳಿದರೆ.  

ಗಂಡ ಅಳಿಯನಿಗೆ ಸಂಸಾರದಲ್ಲಿ ಸಾವಿರ ಬರತ್ತೆ ಸಾವಿರ ಹೋಗತ್ತೆ ಯಾವುದೇ ಕಾರಣಕ್ಕೂ ತಾಳ್ಮೆ ಕಳೆದುಕೊಳ್ಳಬೇಡಿ ನನ್ನ ನೋಡಿ ಕಲಿತು ಕೊಳ್ಳಿ ಎಂದು ಅಳಿಯನ ಕೈಗೆ ಏರ್ ಫೋನ್ ಕೊಟ್ಟಿದ್ದು.

ಕೆಲವರು ಜಗಳ ಆಡುವುದೇ ಇಲ್ಲ ಯಾಕೆ ಅಂದ್ರೆ ಗಂಡ ಬೈಸಿಕೊಳ್ಳಲು ಮತ್ತೊಬ್ಬರನ್ನು ಹುಡುಕಿರುತ್ತಾನೆ ಹೆಂಡತಿ ಬೈಯಲು ಇನ್ನೊಬ್ಬನನ್ನು ಸೈಡಿಗೆ ಇಟ್ಟಿರುತ್ತಾಳೆ ಇವನು ಹೊರಗೆ ಹೋದಮೇಲೆ ಫೊಕನನಲ್ಲಿ ಅವನಿಗೆ ಇವಳು ಬೈಯುವುದು.ಹೊರಗೆ ಹೋದವನು ಅವಳ ಬಳಿ ಬೈಸಿಕೊಳ್ಳಲು ಇವನು ಹೋಗುವುದು ಟೋಟಲಿ ಗಂಡು ಹೆಣ್ಣಿನ ಸಂಬಂಧ ಅಂದ್ರೆ ಜಗಳ 

ಇರಲಿ ಬಿಡಿ ಜಗಳ ಆದರೆ ಅದು ಉಂಡು ಮಲಗಿದ ಮೇಲೂ ಅಗುವ ಜಗಳ ಸಂಸಾರ ನಾಶಕ್ಕೆ ದಾರಿಯಾಗುತ್ತದೆ.ಜಗಳ ಬಂದಾಗ ಇಬ್ಬರಲ್ಲಿ ಯಾರಾದರೊಬ್ಬರು ಸೈಲೆಂಟ್ ಆಗಿಬಿಡಬೇಕು ಅವಳು ಅಥವಾ ಅವನು ಮಾತನಾಡದೇ ಮೌನವಾಗಬೇಕು ತಾನು ಎಲ್ಲಿ ತಪ್ಪು ಮಾಡಿದೆ ಎಂದು ಅರಿತು ತಿದ್ದಿಕೊಂಡು ಮುನ್ನಡೆಯಬೇಕು ಅವನು ಅವಳಲ್ಲಿ ಕ್ಷಮೆ ಕೇಳಬೇಕು ಅವಳು ಅವನಲ್ಲಿ ಕ್ಷಮೆ ಕೇಳಬೇಕು ಆಗ ಮಾತ್ರ ಸುಖ ಸಂಸಾರ...( ಹಾಗೇ ಸುಮ್ಮನೆ)

ಮಧುನಾಯ್ಕ.ಲಂಬಾಣಿ
ಹೂವಿನ ಹಡಗಲಿ
9611228929

ಬುಧವಾರ, ಸೆಪ್ಟೆಂಬರ್ 17, 2025

ವರದಿ..

ವರದಿ

ನಾಟಕಕಾರ ಗೊರೂರು ಅನಂತರಾಜು ಅವರಿಗೆ ಬೆಂಗಳೂರು ಗೆಜ್ಜೆ ಹೆಜ್ಜೆ ರಂಗತಂಡದಿಂದ ರಂಗ ಪುರಸ್ಕಾರ 

ಬೆಂಗಳೂರಿನ ಚಲನಚಿತ್ರ ಹಾಸ್ಯನಟರು ಮೈಸೂರು ರಮಾನಂದ್ ಸಾರಥ್ಯದ ಹೆಜ್ಜೆ ಗೆಜ್ಜೆ ರಂಗ ತಂಡದ 50ನೇ ವರ್ಷದ ಪಾದಾರ್ಪಣೆಯ ಸಂಭ್ರಮ ಹಾಗೂ ಆಶಾನಾದಿ ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಮಕ್ಕಳ ನಾಟಕ ಕೃತಿ ಲೋಕಾರ್ಪಣಿ, ರಂಗ ಸಂಗೀತ, ನಾಟಕ ಪ್ರದರ್ಶನ ಕಾರ್ಯಕ್ರಮ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಿತು. ಹಾಸನದ ಸಾಹಿತಿಗಳು ನಾಟಕಕಾರರು ಶ್ರೀ ಗೊರೂರು ಅನಂತರಾಜು ರವರ ಕಲಾ ಸೇವೆ ಸಾಂಸ್ಕೃತಿಕ ಸಂಘಟನೆ, ನಾಟಕ, ಸಾಹಿತ್ಯ ಸೇವೆ ಗುರುತಿಸಿ ರಂಗ ಪುರಸ್ಕಾರವನ್ನು ಹೆಜ್ಜೆ ಗೆಜ್ಜೆ ತಂಡದ ಸಂಸ್ಥಾಪಕ ಅಧ್ಯಕ್ಷರು ಮತ್ತು ಚಲನಚಿತ್ರ ನಟರು ಶ್ರೀ ಮೈಸೂರು ರಮಾನಂದ್ ಅವರು ನೀಡಿ ಸನ್ಮಾನಿ ದರು. ಸಾಹಿತ್ಯ ಕ್ಷೇತ್ರದಲ್ಲಿ 50ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿರುವ, ಸಾಂಸ್ಕೃತಿಕ ಕ್ಷೇತ್ರದಲ್ಲಿ ತಮ್ಮ ಕ್ರಿಯಾಶೀಲ ವ್ಯಕ್ತಿತ್ವದಿಂದ ರಂಗಭೂಮಿ ನಟರು, ಗಾಯಕರು, ನೃತ್ಯ ಚಿತ್ರ ಕಲಾವಿದರು ಮೊದಲಾಗಿ ಪ್ರತಿಭ್ವಾನಿತ ಕಲಾವಿದರನ್ನು ಸಂದರ್ಶಿಸಿ ಪತ್ರಿಕೆಗಳ ಮೂಲಕ ಜನತೆಗೆ ಪರಿಚಯಿಸುವ ಸದಾ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿರುವ ಲೇಖಕರು ಕರ್ನಾಟಕ ರಾಜ್ಯ ಬರಹಗಾರರ ಸಂಘ, ಹೂವಿನ ಹಡಗಲಿ ರಾಜ್ಯ ಸಾಹಿತ್ಯ ಸಾಂಸ್ಕೃತಿಕ ಸಂಘಟನೆಯ ಗೌರವ ಅಧ್ಯಕ್ಷರು ಶ್ರೀ ಗೊರೂರು ಅನಂತರಾಜು ರವರ ಸಾಹಿತ್ಯ ಮತ್ತು ಸಾಂಸ್ಕೃತಿಕ ಸೇವೆಯು ಸಮಾಜಕ್ಕೆ ಇನ್ನೂ ಹೆಚ್ಚಿನದಾಗಿ ದೊರೆಯಲೆಂದು ಶುಭ ಹಾರೈಸಿ ಕರ್ನಾಟಕ ರಾಜ್ಯ ಬರಹಗಾರರ ಸಂಘ, ಹೂವಿನ ಹಡಗಲಿ ರಾಜ್ಯಾಧ್ಯಕ್ಷರು ಶ್ರೀ ಮಧು ನಾಯ್ಕ್ ಲಂಬಾಣಿಯವರು ಅಭಿನಂದಿಸಿದ್ದಾರೆ.

ನಾಳೆ ಇಂದ ಅಂಗಳ 'ಓದು-ಬರಹ' (ಕಥಾ-ಕಾವ್ಯ) ಕಮ್ಮಟ ಪ್ರಾರಂಭ.

ಅಂಗಳ ಕಮ್ಯುನಿಟಿ ಟ್ರಸ್ಟ್ ನ ವಿಚಾರ ಮಂಟಪ ಬಳಗ ಮತ್ತು ಕರ್ನಾಟಕ ರಾಜ್ಯ ಸ್ಪಂದನಸಿರಿ ವೇದಿಕೆ ಇವರ ಸಹಯೋಗದಲ್ಲಿ ಹಮ್ಮಿಕೊಂಡಿರುವ ಆರು ತಿಂಗಳ *ಆನ್ ಲೈನ್ ...