ಭಾನುವಾರ, ಏಪ್ರಿಲ್ 17, 2022

೨೦೨೦ ನೇ ಸಾಲಿನ ಡಾ. ನಿರ್ಮಲಾ ಎಲಿಗಾರ್ ದತ್ತಿನಿಧಿ ಬಹುಮಾನಕ್ಕೆ ಶ್ರೀಮತಿ ಮರಿಯಾಂಬಿ ಆಯ್ಕೆ.

ಕರ್ನಾಟಕ ಲೇಖಕಿಯರ ಸಂಘವು ಕೊಡಮಾಡುವ ೨೦೨೦ ನೇ ಸಾಲಿನ ಡಾ. ನಿರ್ಮಲಾ ಎಲಿಗಾರ್ ದತ್ತಿನಿಧಿ ಬಹುಮಾನವು ಶ್ರೀಮತಿ ಮರಿಯಾಂಬಿ ಇವರಿಗೆ ದೊರಕಿದೆ. 
ಶ್ರೀಮತಿ ಮರಿಯಾಂಬಿ ಯವರ ಕವಿತೆ ಮತ್ತು ಸಾಹಿತ್ಯ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದ್ದು, ಕರ್ನಾಟಕ ಲೇಖಕಿಯರ ಸಂಘದ ವಾರ್ಷಿಕೋತ್ಸವ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು. 
ಮಾನ್ಯ ಮರಿಯಾಂಬಿಯವರಿಗೆ ವಿಚಾರ ಮಂಟಪ ಸಾಹಿತ್ಯ ಬಳಗದ ಪರವಾಗಿ ತುಂಬು ಹೃದಯದ ಅಭಿನಂದನೆಗಳು.

ಧರಣಿ ಜಾತೆ (ಕವಿತೆ) - ಮಧುಮಾಲತಿ ರುದ್ರೇಶ್ ಬೇಲೂರು.

ಧರಣಿಜಾತೆ ಸುಜನ ಸಂಪ್ರೀತೆ
 ಸುನಯನ ಸುತೆ ˌˌˌ
ಕೋಟಿ ದಿನಕರ ತೇಜದಿ
 ಹೊಳೆಯುವ ಮಾತೆ ಸೀತೆˌˌ

  ಮಿಥಿಲೆಯ ಭಾಗ್ಯವೇ
 ಜನಕನ ಪ್ರಿಯ ಪುತ್ರಿ ˌˌˌ
ನಿನ್ನ ಜನ್ಮದಿಂದ ಪಾವನ
 ವಾದಳು ಧರಿತ್ರಿ ˌˌˌ

ಸಹನೆ ವಿನಯತೆ ಪತಿಭಕ್ತಿಯ
 ಸ್ವರೂಪಿಣಿ ˌˌˌ
ಪತಿವ್ರತಾ ಧರ್ಮದಿ ನಡೆದ
ಶುಭಕಾರಿಣಿˌˌ

  ಶ್ರೀರಾಮನ ಪ್ರಾಣಸಖಿ
 ನಾರಿ ಕುಲತಿಲಕˌˌ
 ಮರೆಯದೆಂದಿಗೂ ನಿನ್ನ
 ಆದರ್ಶಗಳ ಈ ಮೂಲೋಕˌˌ

 ಸ್ವರ್ಣ ಜಿಂಕೆ ಕಂಡು ಬಯಸಿದ ಹರಿಣನಯನೆˌˌ
 ಅಶೋಕ ವನದಿ ಬಂಧಿಯಾದ
 ಕಮಲವದನೆ ˌˌ

ತನ್ನದಲ್ಲದ ತಪ್ಪಿಗೆ ವನವಾಸ
ಗೈದ ವೈದೇಹಿ ಮಾತ ˌˌ
ವಾಲ್ಮೀಕಿ ಮುನಿಯ ಅನುಗ್ರಹ
 ಪಡೆದ ತಾಯಿ ಸೀತಾ ˌˌˌ

ಯುಗವೆಷ್ಟೇ ಉರುಳಿದರು
 ನಿನ್ನ ಗುಣಗಳು ಅಮರˌˌ
 ಸಹನೆ ಧೈರ್ಯವ ನೀಡು ನಮಗೆ ˌˌ
ಬದುಕು ಬವಣೆಯ ಸಾಗರˌˌˌ

 ಕೋಟಿ ವಂದನೆ ನಿನಗೆ ಜಾನಕಿ  ಮಾತೆˌˌ
 ದಿವ್ಯ ಸ್ವರೂಪ ಲವಕುಶರ
 ಜನ್ಮದಾತೆ ˌˌ
- ಮಧುಮಾಲತಿ ರುದ್ರೇಶ್ ಬೇಲೂರು.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ನಡೆದಾಡಿದ ದೇವರು ಸಿದ್ಧ ಶ್ರೀಗಳು (ಕವಿತೆ) - ಹನುಮಂತ ದಾಸರ ಹೊಗರನಾಳ.

ಸಿದ್ಧಗಂಗೆಯ ಸಿದ್ಧ ಶರಣರೇ ಸಿದ್ಧರಾಗಿ ಮರಳಿ ಬರಲು ಈ ಧರೆಗೆ
ಕಾದು ಕಾದು ಕುಳಿತ ನಿನ್ನ ಕರುಳಬಳ್ಳಿಯ ಕಣ್ಣೀರಿನ ಕರೆಗೆ....!

ನೀ ಹೊತ್ತಿಸಿದ ಆ ದಾಸೋಹದ ಬೆಂಕಿ ಸದಾ ಉರಿಯುತ್ತಿರಲಿ ಗುರುವರೆಯನೇ
ನಿನ್ನ ನಂಬಿದ ಕಂದಮ್ಮಗಳ ಪಾಲಿಗೆ ಅನ್ನ ಅಕ್ಷರವ ನೀಡಿ ಸಲುಹಿದ  ಆಶ್ರಯದತಾನೇ....!

ಸಹಸ್ರಾರು ಬಡಮಕ್ಕಳ ಬದುಕಿಗೆ ಬೆಳಕು ನೀಡಿದ ಹೊಂಬೆಳಕಿನ ಚಂದ್ರಮನು ನೀನು
ಮಾನವೀಯತೆಯಲಿ ದಾನ ಧರ್ಮವನು ಮೊಳಗಿಸಿದ ನಡೆದಾಡುವ ದೇವನು ನೀನು....!

ಎತ್ತ ನೋಡಿದರೂ ನಿನ್ನದೇ ನಾಮವು ಕೇಳುತಿದೆ ನಾಡತುಂಬೆಲ್ಲಾ
ಎತ್ತ ಸುಳಿದರೂ ಸೂಸುತಿದೆ ನಿನ್ನ ಅಕ್ಷರಧಾಮದ ಸುವಾಸನೆಯು ಧರೆಯ ತುಂಬೆಲ್ಲಾ.....!

ಅಕ್ಷರವ ಕಲಿಸಿ ಅಜ್ಞಾನವ ಅಳಿಸಿ ಸುಜ್ಞಾನವ ಬೆಳಗಿಸಿದ ಶಿವಶರಣನು ನೀನು
ಗುರು ಲಿಂಗ ಜಂಗಮದ ಸಾರದಲಿ ಬೆರೆತ ಸಿದ್ಧಗಂಗೆಯ ತ್ರಿವಿಧ ದಾಸೋಹಿಯು ನೀನು....!

ಓಗೊಟ್ಟು ಮರಳುವೆಯಾ ಒಂದೊಮ್ಮೆ ನೀ ಕೂಡಿಟ್ಟ ಸಂಪತ್ತಿನ ಸಿರಿಗೆ
ಸಮೃದ್ಧಿ ಸಮಾನತೆಯ ಸಾಮ್ರಾಜ್ಯವಾದ ಸಿದ್ಧಗಂಗೆಯ ನಿಮ್ಮ ಆಸ್ಥಾನದ ಕಡೆಗೆ....!
      
- ಹನುಮಂತ ದಾಸರ ಹೊಗರನಾಳ.

(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಪ್ರೇಮದೋಲೆ(ಕವಿತೆ) - ಶಿವಾ ಮದಭಾಂವಿ.

ಕನಸಿನ ಲೋಕದ ಗೆಳತಿ ಆ ನಿನ್ನ ಕಣ್ಣೋಟ 
ಆಡಿಸುತಿದೆ ಮಿಂಚು ಮಿಂಚಿನ ಬಗೆ ಬಗೆಯ ಆಟ

ಕಾದಿಹೆನು ಚೆಲುವಿ ಕನಸಿನ ಬುತ್ತಿ ಹೊತ್ತು
ಹೊತ್ತೋತ್ತಿಗೆ ಸೇರುತ್ತಿಲ್ಲ ಹೊಟ್ಟೆಗೆ ಒಂದು ತುತ್ತು

ಕ್ಷಣ ಕ್ಷಣವೂ ನಿನ್ನ ಧ್ಯಾನದಲ್ಲಿ ನನ್ನ ಚಿತ್ತ 
ಮನದ ಮಹಲಿನಲಿ ಕಂಗೊಳಿಸುತಿದೆ ನಿನ್ನ ಚಿತ್ರ

ಮುದ್ದು ಮನವೇ ಮನಮಿಡಿತವ ಹೇಳದೆ ಇರಲಾರೆ
ಎಷ್ಟಿದ್ದಾವ ಅಷ್ಟು ಜನ್ಮ ನೀನಿರದೆ ನಾ ಬದುಕಲಾರೆ

ತಡೆಯಲಾಗದೆ ಬರೆದಿರುವೇ ಪ್ರೇಮದೋಲೆ 
ಒಪ್ಪಿಕೊ ಪ್ರೇಮನಿವೇದನೆಯ ಓ ನನ್ನ ನಲ್ಲೆ 

ಮನಸಾರೆ ಒಪ್ಪಿ ಬಾ ಬಿಟ್ಟಿರನು ಒಂದು ಕ್ಷಣ
ನನ್ನೆದೆಯ ರಾಜ್ಯಕ್ಕೆ ರಾಣಿಯಾಗು ನೀ ಅನುಕ್ಷಣ

ಜೀವನ ಪುಸ್ತಕದ ಪುಟದಲಿ ಬರೆದಿಡೋಣ
ಸುವರ್ಣಾಕ್ಷರದಲಿ ಹಾಕುವ ಜೊತೆಯಾಗಿ ಅಂಕಿತವ 

ತೇಲಾಡುವ ಅಮೃತ ಸುಧೆಯಲಿ ಮಿಂದೇಳುತಾ
ಜಗವೇ ಗೆದ್ದಂತೆ ನೀನಿದ್ದರೆ ಸ್ವರ್ಗವೇ ಧರೆಗಿಳಿದಂತೆ

- ಶಿವಾ ಮದಭಾಂವಿ.

(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ನಾವು ಮನುಷ್ಯರು(ಕವಿತೆ) - ಗೌತಮ್ ಗೌಡ.

ನೋಡಿ ನಾವು ನಿಮ್ಮ ಹಾಗೆ
ತಾಯಿ ಯೋನಿ ಇಂದ
ಜಗತ್ತಿಗೆ ಕಾಲಿಟ್ಟವರು
ನಾವು ಮನುಷ್ಯರು
ನಿಮ್ಮಂತೆ ನಮ್ಮ ನೆತ್ತರು
ಕೆಂಪೆ
ನೀವೂ ನೊಂದಾಗ
ಕಣ್ಣೀರಿಡುವಿರಿ
ಹಾಗೆಯೇ ನಾವು.
ನಿಮ್ಮ ಬತ್ತಳಿಕೆಯ ಮಾತುಗಳು
ಹೃದಯ ಚುಚ್ಚಿದಾಗ
ಬತ್ತಿ ಹೋದ ಸಮುದ್ರವನ್ನು
ತುಂಬಿಸುವಷ್ಟು ಅತ್ತಿದೇವೆ.
ನೋಡಿ ನಾವು
ನಿಮ್ಮ ಹಾಗೆ ಮನುಷ್ಯರು
ಮಗು, ಪ್ರಾಣಿ, ಹಕ್ಕಿ
ಕೀಟ ಎಲ್ಲದರಲ್ಲೂ
ಮೊದಲಿಗೆ ಲಿಂಗ
ಹುಡುಕುವ ನೀವೂ
ನಮ್ಮನ್ನು ಮನುಷ್ಯರೆಂದು
ಕೊಂಡರೆ ಸಾಕು
ಯಾಕೆಂದರೆ ನಾವು
ಮನುಷ್ಯರು
ಗಂಡು ಹೆಣ್ಣು ಎಂಬ
ಅಸ್ಥಿತ್ವಗಳ ನಡುವೆ
ನಮ್ಮ ಅಸ್ಥಿತ್ವಗಳನ್ನು
ನೀವೂ ಒಪ್ಪುವುದಿಲ್ಲ
ಅದಕ್ಕೆ ನಾವು ಮನುಷ್ಯರು
ಎಂಬ ಅಸ್ಥಿತ್ವವನ್ನು
ಕೂಗಿ ಕೂಗಿ ಸಾರುತ್ತಿದ್ದೇವೆ
ನಾವು ಮನುಷ್ಯರು
-Gowtham Gowda

(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ  9448713659 ವಾಟ್ಸಪ್ ಮಾತ್ರ)

ಕವಿಯ ಕಣ್ಣು ಸಮಾಜದ ಕನ್ನಡಿಯಲ್ಲಿ (ಲೇಖನ) - ಸುನಿಲ್ ಐ ಎಸ್. ಚಿತ್ರದುರ್ಗ.

ಸಮಾಜದ ಕನ್ನಡಿಯಲ್ಲಿ ಎಲ್ಲವೂ ಮುಖವಾಡಗಳೇ ಮುಖವಾಡಗಳ ಕಳಚಿ, ಪ್ರಜಾ ಹಿತವನ್ನು ಉಳಿಸಲು  ಶ್ರಮಿಸಿದ ನಿರಾಧಾರಿಗಳ ಆಶಯಗಳು ಹಲವು, ಮಾಧ್ಯಮ ಒಂದು  ಅಂದು ಅವರು ಕಂಡ ನವ ಸಮಾಜದ ಕನಸು ಇಂದಿಗೂ ಸಾಕಾರವಾಗಿಲ್ಲಾ.??       

 ಪಂಪ ರನ್ನರು, ಬುದ್ಧ ಬಸವ ಅಲ್ಲಮ ಅಕ್ಕರಂತಹವರ ಅವಿರತ ಪ್ರಯತ್ನದ ಮಾಧ್ಯಮವು ಸಮಾಜದ ಬೀಜವಾಗಿ ಕಾವ್ಯದ ರೂಪಕವಾಗಿ ಸಮಾನತೆಯ ರಂಬೆ ಕೊಂಬೆಗಳಂತೆ ಪ್ರಖರ ನೆರಳು ನೀಡಿದವು ಒಗ್ಗೂಡಿಸಿದವು ಪ್ರಜಾಪ್ರಭುತ್ವದ ಉಳಿವಿಗೆ ಸಕಲರೂ ಸಮ ಭಾಗಿಗಳಾದರು   ಅಂದು.

 ಆದರೆ..?  ಇಂದು! ಪ್ರಶಸ್ತಿ-ಪುರಸ್ಕಾರಗಳಿಗೆ ಕಟ್ಟುಬಿದ್ದು ಸಮಾಜದ ಆಶಯಗಳಿಗೆ ದಕ್ಕೆಯಾಗುವಂತೆ  ಅವುಗಳನ್ನು ಬುಡಮೇಲು ಮಾಡುವ, ಸ್ವ ಪ್ರತಿಷ್ಠೆಗೆ ಬಳಸಿಕೊಳ್ಳುವ ಕಾವ್ಯಸೃಷ್ಟಿಯ ಹುನ್ನಾರಗಳು ನಡೆಯುತ್ತಿದೆ, ಜಾತಿ ರಾಜಕಾರಣದ ಹೆಸರಿನಲಿ.

 ರಾಮರಾಜ್ಯದ ಕನಸುಗಳು ಇಂದು ಛಿದ್ರವಾಗಿವೆ ಬೆರಳೇ ಣಿಕೇಯಷ್ಟು ಕಾವ್ಯಗಳು  ಸದೃಢ ಸಮಾಜದ ಪ್ರತಿಬಿಂಬಗಳು, ಬರವಣಿಗೆಯಂತೆ ನಡೆಯುವವರು ಹುಡುಕಾಡ ಬೇಕಾಗಿದೆ ಇಂದು, ಸೂಕ್ಷ್ಮ ದೃಷ್ಟಿಯಿಂದ ಸಮಾಜವನ್ನು  ಗ್ರಹಿಸಿ ಸವಾಲುಗಳ ಎತ್ತಿತೋರಿಸುವವರು ಹುಡುಕಾಡಬೇಕಾಗಿದೆ. ಕೊಟ್ಟ  ಮಾತಿನಂತೆ ಬರಹ ಬರವಣಿಗೆ ಮಾಡುವವರ  ಸಮಾಜದ  ಕನ್ನಡಿಯಲ್ಲಿ ನೋಡಬೇಕಾಗಿದೆ ಇಂದು..??
ಎಲ್ಲಿಹರೆಂದು ಬೇದಕಬೇಕಾಗಿದೆ ಇಂದು..??
 
- ಸುನಿಲ್ ಐ ಎಸ್. ಚಿತ್ರದುರ್ಗ.
 ಸಂಶೋಧನಾರ್ಥಿ
 ಕನ್ನಡ ವಿಶ್ವವಿದ್ಯಾಲಯ ಹಂಪಿ
📞 : 7349177749


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ  9448713659 ವಾಟ್ಸಪ್ ಮಾತ್ರ)

ಓದು (ಕವಿತೆ) - ಕಾವೇರಿ ಪೋತ್ನಾಳ್.

ವಿದ್ಯೆಯೆಂಬುದು ಸರ್ವ ಅಸ್ತ್ರಗಳ ಮೂಲಬಾಣ
ಇದನ್ನರಿತರೆ  ನೀನಾಗುವೆ ಜಾಣ
ನ್ಯಾಯಾ, ನಿಷ್ಟೆ, ಪ್ರಾಮಾಣಿಕತೆಯ ಕಲಿಕೆ
ಜ್ಞಾನವೇ ನಿನ್ನ ಕೈ ಹಿಡಿಯುವುದು ಕೇಳಿಕೋ.

ಬದುಕಲ್ಲಿ ಕಷ್ಟ-ಸುಖ ಕಾಲಚಕ್ರವಿದ್ದಂತೆ
ಒಂದಾದ ಮೇಲೊಂದು ಬಂದೆ ಬರುತ್ತದೆ
ಈ ಎರಡು ಸಮರಸದೊಂದಿಗೆ ಮುನ್ನಡಿಯಲು
ವಿದ್ಯಯೇ ದೀಪದ ಬೆಳಕು ನಿ ತಿಳಿಯೋ.

ನಿನ್ನಲ್ಲಿರುವ ಹಣ,ಆಸ್ತಿ, ಐಶ್ವರ್ಯ ಕದಿಯಬಹುದು
ಅರಿವೆಂಬ ಸಂಪತ್ತನ್ನು ಯಾರು ಕಸಿಯರು
ಎದುರಾಳಿಯು ಹೆದರುವ ಪ್ರಬಲ ಆಯುಧವೇ
ಚತುರತೆಯೇ ರಾಮಬಾಣ ಮೇಧಾವಿತೆ.

ಹಿಂದಿನಿಂದಲೂ ರೂಡಿಯಿದೆ ಈ ಒಂದುಗಾದೆ
ವಿದ್ಯೆಯಿಲ್ಲದವನ ಬಾಳು ಹದ್ದಿಗಿಂತಲೂ ಕೀಳು
ಅದಕ್ಕಾಗಿ ಶ್ರಮಪಟ್ಟು ನಿ ಓದು ಸ್ನೇಹಿತೆ
ಯಶಸ್ಸು ನಿನ್ನದಾಗುವುದು ಇದು ಮಾತ್ರ ಖಚಿತ.
- ಕಾವೇರಿ ಪೋತ್ನಾಳ್.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕನ್ನಡದಲ್ಲಿ ಅರ್ಥಾಲಂಕಾರಗಳು (ಲೇಖನ) - ಎಸ್. ಸುದರ್ಶನ್. ಸಾಹಿತಿಗಳು.

ಕನ್ನಡ ಭಾಷೆಯ ಬಂಗಾರದ ಬೆಡಗಿನ ಬಗ್ಗೆ ಯಾರು ಎಷ್ಟು ಬರೆದರೂ ಮುಗಿಯೋದೇ ಇಲ್ಲ. ಅಷ್ಟಿದೆ ಬರೆಯೋಕೆ! ಕನ್ನಡಮ್ಮನ ಸೌಂದರ್ಯವಂತೂ ವರ್ಣಿಸಲಸದಳ.ಅಂತರಂಗದಷ್ಟೇ ಬಹಿರಂಗವೂ ಅಷ್ಟೇ ಹೆಮ್ಮೆ ಪಡಬಹುದಾದ ಮನೋಹರತೆ.  ಅದಕ್ಕೇ ಏನೋ ಕನ್ನಡಿಗರೆಂಬ  ಹೆಮ್ಮೆ ಎಲ್ಲ ಕನ್ನಡಿಗರಿಗೆ! ಅದೇ ಭಾಷೆಯ ಹಿರಿಮೆ. ಯಾವುದೇ ಭಾಷೆ ಇರಲಿ.ಭಾಷೆಯೆಂದರೇನೇ ಹಾಗೆ.ಅಭಿವ್ಯಕ್ತಿ ಮಾಧ್ಯಮದ ಜತೆಗೆ ವಾಗ್ಸಂಪತ್ತಿನ ಅದ್ಭುತ ಆಗರವೆಂದೇ ಹೇಳಬೇಕಾಗುವುದು. ನಮ್ಮ ಮುದ್ದು ಕನ್ನಡ ಭಾಷೆಯಂತೂ ಕಾಲಕಾಲಕ್ಕೆ ಸಾಹಿತ್ಯ ಜಂಗಮರ,ಸೃಜನಶಾಲೀ ಸಾಹಿತ್ಯ ಸೃಷ್ಟಿಕರ್ತರ, ಕಾಲಕಾಲದ ಪದಪ್ರಸಾದನಪ್ರಿಯರ ಪದಪೋಷಣಾ ಮೋಹದಿಂದಾಗಿ ಕಸ್ತೂರಿ ಕನ್ನಡವು ತುಷ್ಟಿ,ಪುಷ್ಟಿ ಪಡೆದುಕೊಂಡಿದ್ದು ಕನ್ನಡಿಗರ ಹೆಮ್ಮೆಯ ವಿಷಯವೇ. ಯಾವ ಆಭರಣದ ಅಲಂಕಾರವೂ ಇಲ್ಲದೆಯೂ ಮನೋಹರ ರೂಪದಿಂದ ಕಂಗೊಳಿಸಿಬಿಡುವ ಕನ್ನಡ ನುಡಿಗಳಿಗೆ ಪದವಿಶೇಷಗಳೂ ಅರ್ಥವಿಶೇಷಗಳೂ ಅಲಂಕಾರದ ವಸ್ತುಗಳಾಗಿ ಆಲಂಗಿಸಿಕೊಂಡುಬಿಟ್ಟರೆ  ಇನ್ನದರ ಸೌಂದರ್ಯ ಇನ್ನೆಷ್ಟು ಹೆಚ್ಚಿಬಿಡಬಹುದು ಊಹೆ ಮಾಡಿಕೊಳ್ಳಿ‌! ಅಂಥಾ ಊಹಾಪ್ರಕ್ರಿಯೆಯಲ್ಲೂ ಸುಖವಿರುವುದನ್ನು ಗುರ್ತಿಸಬಹುದು. ಅಂಥಾ ಸುಖವನ್ನೇ ಅವರ್ಣನೀಯ ಸುಖದ ವ್ಯಾಖ್ಯೆಗೆ ಪ್ರಾಜ್ಞರು ಸೇರಿಸಿದ್ದು‌.ವಾಸ್ತವದಲ್ಲಿ ಯಾವುದೇ ಒಂದು ಭಾಷೆಯ ಸರ್ವತೋಮುಖ  ವಿಕಾಸವಾಗಬೇಕಾದರೆ ಹೊಸ ಪದಗಳ ಆವಿಷ್ಕಾರದ ಜತೆಗೆ ಲಭ್ಯವಿರುವ ಪದಗಳಿಗೆ ಅರ್ಥವಿಶೇಷಗಳೂ ಹೆಚ್ಚಾಗಬೇಕು. ಜತೆಗದು ಅನರ್ಥಹೇತುವೆನಿಸಬಾರದು. ಕೆಲವೊಮ್ಮೆ ಹಾಸ್ಯಕ್ಕೆ ಹೇಳಿದ ಮಾತುಗಳೂ ಅರ್ಥಗರ್ಭಿತ ಅನ್ನಿಸಿಕೊಂಡು ಸಹಜವಾಗಿಯೇ ಬಳಕೆಯನ್ನು ಪಡೆದುಕೊಂಡು ಜನಪ್ರಿಯವಾಗಿಬಿಡಬಹುದು. ಒಟ್ಟಿನಲ್ಲಿ ಭಾಷಿಗರು ಹೆಚ್ಚಾದಂತೆ ಭಾಷಾಪ್ರಯೋಗಗಳೂ ಹೆಚ್ಚಾಗುವುದು ಸಹಜವೇ ತಾನೇ? ಭಿನ್ನ ಭಾಗಗಳಲ್ಲಿ  ಭಿನ್ನ ಜನರ ವಿಭಿನ್ನ ಅಭ್ಯಾಸಗಳು, ತನ್ಮೂಲಕ ಭಿನ್ನ ಭಾವವಿಶೇಷಗಳು ಭಾಷಾಪ್ರಯೋಗಗಳಿಂದಾಗಿ  ಭಿನ್ನ ಪದಗಳಿಗೆ ವಿಭಿನ್ನವೆನಿಸುವ  ಅರ್ಥವಿಶೇಷಗಳನ್ನು ನೀಡುವ ಚಮತ್ಕಾರೀ ವಿಶೇಷವು ಎಲ್ಲ ಭಾಷೆಗಳಲ್ಲಿದ್ದಂತೆ ಕನ್ನಡ ಭಾಷೆಯಲ್ಲೂ ಅಪಾರವಾಗಿಯೇ ಇದ್ದು ಅರ್ಥಶ್ರೀಮಂತಿಕೆಯಲ್ಲೂ        ಹಿಂದೆಬಿದ್ದಿಲ್ಲ. ಹೀಗಾಗಿ ಮಾತಿಗನು ಮನಬಿಚ್ಚಿ ಮುದದಿಂದ ತೆರೆದಿಟ್ಟ ಮನದ ಮಾತುಗಳು ನವನವಾರ್ಥಗಳನ್ನು ನೀಡುವ ನವನೀತವಾದಾಗ ಅಂಥಾ ಪದ ಪ್ರಯೋಗಗಳು ಸಂತಸದ ಸೃಷ್ಟಿಕರ್ತವೆನಿಸಿ ಪುನರ್ಪ್ರಯೋಗಗಳನ್ನು ಪಡೆದುಕೊಳ್ಳುತ್ತಾ ಜನಜನಿತವೂ ಜನಪ್ರಿಯವೂ ಆಗಿಬಿಡುತ್ತವೆ. ಅಂಥಾ ಕೆಲವು ನವನೀತಗಳನ್ನು ಮಥಿಸಿ ಮುದ್ದಿಸಲು ಕೆಲವು ಜನಪ್ರಿಯ ಕನ್ನಡ ಪದಗಳನ್ನು ಅವುಗಳ ಅಂತರಂಗದ ಅರ್ಥವಿಶೇಷಗಳನ್ನು ಚರ್ವಣ ಮಾಡಿ ,ಮತ್ತೆ ಮತ್ತೆ ಕನ್ನಡದ ಮನಗಳನ್ನು ಮುದಗೊಳಿಸುವುದರಲ್ಲಿ ಯಶಸ್ವಿಯಾಗಿವೆ. 
ಕನ್ನಡದ ಸಾಮಾನ್ಯ ಭಾಷಾಬಳಕೆಯಲ್ಲಿ ಕೆಲವು ಪದಗಳಂತೂ ಜನಪದರ ಮಾತಿನ ವರಸೆಯಿಂದಲೇ ಕಾಲಕಾಲದ ವಿಶೇಷಗಳಾಗಿ ಜನ್ಮ ತಳೆದಿದ್ದು ತಮ್ಮ ವಾಸ್ತವಾರ್ಥವನ್ನು ತ್ಯಜಿಸಿ ಹೊಸ ಹೊಳಪಿನಿಂದ ಹೊಳಯಿಸಿ ಫಲಗೊಂಡ ಹೊಸ ಹೊಳಪಿನಿಂದ ಇಚ್ಛಿತ ನವಾರ್ಥದಿಂದ ವಿಶೇಷ ಸಂದರ್ಭಗಳಲ್ಲಿನ ಬಳಕೆಗಾಗಿಯೇ ಸೃಷ್ಟಿಯಾಗಿರುವ 'ವಿಶ್ವಾಮಿತ್ರ' ಸೃಷ್ಟಿಗಳವು. ಇಚ್ಛಿತಾರ್ಥಗಳನ್ನು ನೇರವಾಗಿ ಗುರಿ ಮುಟ್ಟಿಸಿಬಿಡುವ ಸತ್ಪದಾಂಬುಗಳವು. ಹರಿತಾರ್ಥಗಳ ಹೂರಣವೆನಿಸಿದರೂ ಕ್ಷಣಮಾತ್ರದಲ್ಲಿ ಆಡಿದವನಿಗೂ ಆಡಿಸಿಕೊಂಡವನಿಗೂ ಮುದನೀಡಿ ನಗೆ ಮೂಡಿಸುವುದರ ಜತೆಗೆ ಅಂಥಾ ಸರಳ ಪದಗಳ ಸೃಷ್ಟಿಯ ಬಗ್ಗೆ ಕ್ಷಣಕಾಲವಾದರೂ ಚಿಂತನೆ ಮಾಡಬೇಕೆನಿಸುವ ಚತುರ ಸೃಷ್ಟಿಗಳವು.ಎಷ್ಟೋ ಸಂದರ್ಭಗಳಲ್ಲಿ ಆಂಗ್ಲ ಭಾಷೆಯ ಈಡಿಯಂ(Idiom) ಅಥವಾ ಪ್ರೇಸ್(Phrase)ಗಳ ಸ್ಥಾನವನ್ನು ತುಂಬಿಬಿಡುವ ಜತೆಗೆ ನಗೆಚೂರ್ಣವನ್ನೇ ತೂರಿಬಿಡುವ ಶಕ್ತಿಶಾಲಿ ಪದಗಳು ಕನ್ನಡಭಾಷಾ ವಿಕಸನದಲ್ಲಿ ಹಿರಿಯ ಪಾತ್ರವನ್ನೇ ವಹಿಸಿವೆಯೆಂದರೆ  ತಪ್ಪಾಗಲಾರದು. ಕೆಲವೊಮ್ಮೆ ಕನ್ನಡದ ಅಂಥ ಪದಗಳು ಆಂಗ್ಲರ ಪದಚಮತ್ಕಾರೀ ಪನ್(Pun)ಗಳಿಗೂ ಪರ್ಯಾಯ ಪದಗಳೆನಿದ ಸಂದರ್ಭಗಳೂ ಇಲ್ಲದಿಲ್ಲ.ಜತೆಗೆ ವಿಚಾರಗಳ ಸಮರ್ಥನೆ ಹಾಗೂ ಸಾರ್ಥಕತೆಗೆ ಅಂಥಾ ವಿಚಾರಗಳನ್ನು ಪುಷ್ಟೀಕರಿಸುವ ಉದಾಹರಣೆಗಳ ಅವಶ್ಯಕತೆಯಂತೂ ಇದ್ದೇಯಿರುತ್ತದೆ. ಅಂಥಾ  ವಿಶಿಷ್ಟಾರ್ಥವನ್ನು ಗರ್ಭೀಕರಿಸಿಕೊಂಡು ಅವುಗಳ ದೈನಂದಿನ ಬಳಕೆಯಿಂದ ಮುದದ ಜತೆಗೆ ಅರ್ಥಪೂರ್ಣ ಸಾರ್ಥಕತೆಯನ್ನು ಸಾಧಿಸಿರುವ ಕೆಲವು ಪದಗಳನ್ನು ಈಗ ಗಮನಿಸೋಣ. 
ಕೆಲವು ಮಾತುಗಳಿಗೆ ತೂಕವೇ ಇರುವುದಿಲ್ಲವೆಂಬ ಸತ್ಯವನ್ನು ಪದವೊಂದು ಸಾರಿದೆ. ಸತ್ಯವಿರದ,ನಂಬಿಕೆಗೆ ಅರ್ಹವೆನಿಸದ ಗಾಳಿಯಲ್ಲಿ ತೂರಿಬಂದುಬಿಡುವ ಸ್ವಾರ್ಥ ಸಾಧನೆಯ ಧ್ಯೇಯೋದ್ದೇಶವನ್ನು ಹೊಂದಿರುವ ವದಂತಿ ಅಥವಾ ಪುಕಾರಿಗೆ ಪರ್ಯಾಯ ಪದವನ್ನಾಗಿ ನಾವು ಬಳಸುವ ಪದವೆಂದರೆ 'ಗಾಳಿಮಾತು'. ತೂಕವಿಲ್ಲದೇ ಗಾಳಿಯಲ್ಲಿ ತೇಲಿಬಂದ ಗುಣಹೀನರ 'ಗುಸುಗುಸು' ತಾನೇ ಇದು?ತನ್ನ ಹಗುರತ್ವದಿಂದ ಸತ್ವಹೀನವೆನಿಸಿದ, ಸಲ್ಲದ ಮಾತಿಗೆ ಸಾರ್ಥಕಾರ್ಥ ನೀಡಿ ಜನಪ್ರಿಯವೆನಿಸಿದ ಪದಪ್ರಯೋಗವಿದು. ಇಲ್ಲಿ ವಾಸ್ತವಾರ್ಥದ ಬದಲಿಗೆ ಅಂತರಂಗಾರ್ಥವನ್ನಷ್ಟೇ ಗುರ್ತಿಸಬೇಕು. ಸತ್ಯಾಂಶವಿರುವ ಸಾರ್ಥಕಾರ್ಥದ ಮಾತು ತಾನೇ ಇದು? 
 ನರಲೋಕದಲ್ಲಿ ಪ್ರತಿಷ್ಠೆಗೆ ದೊಡ್ಡ ಸ್ಥಾನವಿದೆ. ಅದರಲ್ಲೂ ಸ್ವಪ್ರತಿಷ್ಠೆಯ ದಾಸರಾದ ನಮಗೆ ನಮ್ಮ ಮಾತೇ ನಡೆಯಬೇಕು, ನಾವಾಡುವ ಮಾತಿನಲ್ಲಷ್ಟೇ ಸತ್ಯವಿರುವುದು,  ನಮ್ಮದು ವೇದವಾಕ್ಯಕ್ಕೆ ನಮಾನವಾದ ಸತ್ಯವಾಣಿ ಎಂಬ ದುರಭಿಮಾನದ, ಬಡಿವಾರವೆನಿಸುವ ಜತೆಗೆ  ಮಿಥ್ಯಾಭ್ರಮೆಯಿರುತ್ತದೆ.  ಅದನ್ನೇ ನಮ್ಮ ಭಾಷಾಬ್ರಹ್ಮರು 'ಮೂಗಿನ ನೇರದ' ಮಾತು ಅಂದಿದ್ದು! ಮೂಗಿನ ತುದಿಯಿಂದ ನೋಡುವ ದೃಶ್ಯಗಳು ಎಂದಿಗೂ ವಕ್ರವೇ. ಅತ್ತಿತ್ತ ವಿಷಯದ ಬಗ್ಗೆ ಚಿಂತಿಸದ ಏಕರೂಪೀ ಸ್ವಾರ್ಥ ಚಿಂತನೆಯ ಗೂಢಾರ್ಥವಿರುವ ನೇರಾರ್ಥದ ಮಾತಿದು. ಎಷ್ಟು ಚಂದದ ಪ್ರಯೋಗವಿದೆಂದು ಅನ್ನಿಸದಿರದು. ಒಮ್ಮೆ ನನ್ನೊಡನೆ ಮಾತನಾಡುತ್ತಿದ್ದ ಮಿತ್ರರೊಬ್ಬರು ನನ್ನ ಇನ್ನೊಬ್ಬ ಮಿತ್ರರ ಬಗ್ಗೆ ಎಚ್ಚರಿಕೆ ಕೊಡುತ್ತಿದ್ದರು. " ಅವನ ಬಗ್ಗೆ ನೀನು ಜಾಗ್ರತೆಯಾಗಿರಬೇಕು. ಕಾಣ ಅವನಿಗೆ 'ಕಿವಿ ಕಚ್ಚುವ' ಕೆಟ್ಟ ಚಾಳಿಯಿದೆ. ಇದನ್ನು ಕೇಳಿದ ನನಗೆ 'ಕಿವಿ ನೆಟ್ಟಗಾಯಿತು'. ಕನ್ನಡದ ಅದ್ಭುತ ಪ್ರಯೋಗಗಳಿವು. ಚಾಡಿ ಹೇಳುವ ಚಾಳಿಗೆ 'ಕಿವಿ ಕಚ್ಚುವ' ಪದಪ್ರಯೋಗವು  ನಿಜಕ್ಕೂ ನಗು ತರಿಸುವ ಜತೆಗೆ  'ಕರ್ಣಾನಂದ'ವೆನಿಸುವುದರಲ್ಲಿ ಆಶ್ಚರ್ಯವೇನಿಲ್ಲ ಅಲ್ಲವೇ? ಬೇರೆ ಭಾಷೆಗಳಲ್ಲಿರುವಂತೆ ನಮ್ಮ ಕನ್ನಡದಲ್ಲೂ ವಾಗಾಲಂಕಾರಗಳ ಪ್ರಯೋಗವಿದೆ. ಇಲ್ಲಿ ವಾಚ್ಯಾರ್ಥಕ್ಕಿಂತಾ ಸೂಚ್ಯಾರ್ಥವೇ ವಿಶೇಷಾರ್ಥ! 'ಕಣ್ಣಲ್ಲಿ ಕಣ್ಣಿಟ್ಟು ನೋಡು' ಎಂಬ ಪ್ರಯೋಗದಲ್ಲಿ ವಾಚ್ಯಾರ್ಥವು ಅರ್ಥಹೀನವೆನಿಸಿದರೂ ಸೂಚ್ಯಾರ್ಥವೇ ವಿಶೇಶಾರ್ಥವಾಗಿ ಮೆರೆದರೂ ಅರ್ಥ ಜಿಜ್ಞಾಸೆಗೆಂದೂ ಎಡೆಮಾಡಿಕೊಡುವುದಿಲ್ಲ. ಇದೇ ಅಲ್ಲವೇ ಭಾಷಾ ಸೊಗಸು! ಹಾಗೆಯೇ ನಮ್ಮ ಜನಜನಿತ ಪ್ರಯೋಗಗಳೆಂದೇ ಪ್ರಿಯವೆನಿಸಿರುವ 'ಕುಂಟುನೆವ' ''ಹೊಟ್ಟೆಯುರಿ' 'ಮನೆಮಾತು' ಮೊದಲಾದ ಪದಪ್ರಯೋಗಗಳ ಅಂತರಾರ್ಥವನ್ನು ಅರಿತಾಗಲೇ ಪದ ಪ್ರಯೋಗದ ಉದ್ದೇಶಿತ ಸಾರ್ಥಕತೆಯು ಸಾಧಿತವಾಗುವುದು. ಇನ್ನೊಂದು ಅತಿ ಹೆಚ್ಚು ಪ್ರಯೋಗದ ಪದವೊಂದು ಕನ್ನಡದಲ್ಲಿದೆ. ಅದೇ 'ಹೊಟ್ಟೆಯ ಮೇಲೆ ಹೊಡೆಯುವುದು'. ಇಲ್ಲಿ 'ಹೊಡೆ' ಎಂಬ ಕ್ರಿಯಾಪದದ ವಿಶೇಷ ಪ್ರಯೋಗವಿದ್ದರೂ ವಾಸ್ತವಾರ್ಥದಲ್ಲಿ ಯಾವ ಹೊಡೆತದ ಪ್ರತ್ಯಕ್ಷ ಪ್ರಕ್ರಿಯೆಯ ದರ್ಶನವೂ ಆಗುವುದಿಲ್ಲ. ಆದರಲ್ಲಿ ಹೊಟ್ಟೆಪಾಡಿನ ಸಂಪಾದನೆಯನ್ನು ಕಸಿದುಕೊಳ್ಳುವ ಅಂತರ್ಭಾವದ ಪ್ರಕಟವಿರುತ್ತಷ್ಟೇ! ಕಡೆಯದಾಗಿ ಇನ್ನೊಂದು ವಿಶೇಷ ಪದದ ಪದವಿಶೇಷವನ್ನು ಗಮನಿಸಿ ಈ ವಿಶೇಷಗಳ ಬರಹಕ್ಕೆ 'ಮಂಗಳ ಹಾಡಿ'ಬಿಡೋಣ. ಸಂಗೀತ ಕಚೇರಿಗಳಲ್ಲಿ ಹಾಡುವ ಅಂತ್ಯಗೀತೆಯೇ  ಸರ್ವರಿಗೂ ಶುಭ ಕೋರುವ ಮಂಗಳದ ಹಾಡು. 'ಅಂತ್ಯ' ಶಬ್ಧಕ್ಕೆ ಪರ್ಯಾಯವಾಗಿ ಬಳಕೆಯಾಗುತ್ತಿರುವ ಶುಭಪ್ರದ  ಪದವಿದು. ಹೀಗೆ ಎಷ್ಟೋ ಪದಪ್ರಯೋಗಗಳು ಸೂಚ್ಯಾರ್ಥ ಪ್ರಧಾನತೆಯನ್ನು ಸಾಧಿಸಿ ಭಾಷಾಪ್ರಿಯರ ಹೃನ್ಮನಗಳನ್ನು ತಣಿಸುವುದರ ಜತೆಗೆ ನಮ್ಮ ಹೆಮ್ಮೆಯ ಭಾಷಾಕೋಶವನ್ನು ಉಬ್ಬಿಸುತ್ತಿರುವ ಇಂಥಾ ಜಾಣ ಪದಪ್ರಯೋಗಗಳು ನೂರ್ಮಡಿಯಾಗಲಿ. ಅಂಥಾ‌  ಪದಪ್ರಯೋಗಬ್ರಹ್ಮರ  ಸಂತತಿ ಸಾವಿರವಾಗಲಿ.
- ಎಸ್. ಸುದರ್ಶನ್. ಸಾಹಿತಿಗಳು.



(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಹೆಣ್ಣು (ಕವಿತೆ) - ಮಲ್ಲಿಕಾರ್ಜುನ ಎಸ್ ಆಲಮೇಲ ಯಡ್ರಾಮಿ.

ಮಾಳಿಗೆ ಮನೆ ಮುಂದೆ ಮುತ್ತು ಕೇರುವ ಹೆಣ್ಣು 
ತವರುಮನೆ  ಗಂಡನ ಮನೆಗೂ ನೀನೇ ಕಣ್ಣು 
ನಿನ್ನನು ನಿಂದಿಸುವರ ಬಾಯಲ್ಲಿ ಬರೀ ಮಣ್ಣು 
ಅಣ್ಣ ತಮ್ಮರಿಗೆ ಹಾರೈಸುತ ಸರಿಯಾಗಿ ಉಣ್ಣು 

ಮರಿಬ್ಯಾಡ ನವಮಾಸ ಒಡಲೊಳು ಹೊತ್ತವಳನ್ನ 
ನೆನಪುಹಾರ ಬ್ಯಾಡವ್ವ ಮಗಳೆ ಒಡಹುಟ್ಟಿದವರನ್ನ 
ನೆನಸಿಕೊಳ್ಳವ್ವ ಅರೆಹೊಟ್ಟೆ ಉಂಡು ಬೆಳಸಿದ ಅಪ್ಪನ್ನ 
ಅವ್ರುಕಷ್ಟದಲ್ಲೆ ಸಿರಿವಂತ ಮನಿಗಿ ಧಾರೆಯೆರೆದರು ನಿನ್ನ 

ಸಿರಿಯು ಬಂದಾಗ ನೀನು ಹಿಗ್ಗಲೂ ಬ್ಯಾಡವ್ವ 
ಸಂಕಷ್ಟಗಳ ಸರಪಳಿ ಸುತ್ತಿದರು ಕುಗ್ಗ ಬೇಡವ್ವ 
ನಡು ಓಣ್ಯಾಗ ನಿಂತು ಎಂದು ನಾಗಬಾರದವ್ವ 
ಚಿತ್ತಿಟ್ಟು ಕೇಳು ಕರಿಸೀರಿ ಯಾವತ್ತು ಉಡಬ್ಯಾಡವ್ವ 

ಅತ್ತೆ ಮಾವರನ್ನು ಅಪ್ಪ ಅವ್ವನಂತೆ ನೋಡಿಕೊಳ್ಳವ್ವ 
ನಾದಿನಿ ಮೈದುನರನ್ನ ಅಣ್ಣ ತಂಗಿಯಂತೆ ಕಾಣವ್ವ
ಪತಿಯೆ ಪರದೈವವಂತ ಹಿರ್ಯಾರು ಹೇಳ್ಯಾರವ್ವ 
ಅವನ ಅಣತಿಯಂತೆ ಸಾಗಿದರೆ ಬಾಳು ಬಂಗಾರವ್ವ 
- ಮಲ್ಲಿಕಾರ್ಜುನ ಎಸ್ ಆಲಮೇಲ ಯಡ್ರಾಮಿ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಗಜಲ್ - ಮಾಜಾನ್ ಮಸ್ಕಿ.

ದ್ವೇಷದ ಬೆಂಕಿ ಹತ್ತಿ ಉರಿಯುತ್ತಿದೆ ರಕುತ ಯಾರದು 
ಭೇದ ಭಾವದ ಕಿಚ್ಚು ಗಗನ ಮುಟ್ಟುತ್ತಿದೆ ರಕುತ ಯಾರದು 

ಸೌದೆಯಂತೆ ನೊಗ ನೀಡುತ್ತಿರುವರು ಬುದ್ಧಿಹೀನರು 
ಅಹಮಿನ ತುಪ್ಪ ಸುರಿಯುತ್ತಿದೆ ರಕುತ ಯಾರದು 

ಧರ್ಮ ಜಾತಿಯ  ಭ್ರಮೆ ಕಳೆ ಕೀಳಬೇಕಾಗಿದೆ 
ಭಾವೈಕ್ಯತೆಯ ಫಸಲು ಕಾಣದಾಗುತ್ತಿದೆ ರಕುತ ಯಾರದು 

ಹಿಜಾಬ್ ಕೇಸರಿ ಬಿಟ್ಟು ವಿದ್ಯಾ ತಪೋವನ ಸೇರಬೇಕಿದೆ 
ಹೆತ್ತವರ ಅಸಹಾಯಕತೆ ಚೀರುತ್ತಿದೆ ರಕುತ ಯಾರದು 

ಸಮಾನತೆಯ ಕರುಳಿಗೆ ಕೊಳ್ಳಿಯಿಟ್ಟವರು ಯಾರು "ಮಾಜಾ "
ಧರೆಯೇ ಬೇಗೆಯಲ್ಲಿ ಬೇಯುತ್ತಿದೆ ರಕುತ ಯಾರದು 

- ಮಾಜಾನ್ ಮಸ್ಕಿ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ನವ ಮನ್ವಂತರ (ಕವಿತೆ) - ರಾಕೇಶ್.ಎಂ

ನೀಲ ಬಯಲು ಶಾಂತಿ ತೀರವು 
ದೂರದ ಬೆಟ್ಟದ ಆಸೆ ಅಗಾದವು 
ನೆರಳಿನ ಮರವು ಸಾಧನೆಯ ಯಶೋಗಾಥೆಯು 
ನಸು ತಂಪಿನ ತುಸು ವಾತಾವರಣವು.

ಸೂರ್ಯನ ಮುಳುಗಿಪನು ಪಶ್ಚಿಮ ದಿಕ್ಕಿಗೆ 
ಪಶ್ಚಿಮ ದಿಕ್ಕಿನ ಮರದ ನೆರಳು 
ಜೀವನದ ನೋವನು ತಿಳಿಸಿಹುದು 
ಎನ್ನ ಮನವು ಪ್ರಶಾಂತದಿ ಶಾಂತಿಯ ಬಯಸಿಹುದು.

ಮರಳ ರಾಶಿಯ ಮೇಲಿನ ಜೀವನವು 
ಹೆಜ್ಜೆ ಗುರುತು ಮೂಡುವವರೆಗೆ 
ಕೊನೆಗೆ ಜೀವನದ ಹಾದಿ ಸಾಗಿಪುದು 
ದೂರದ ಬೆಟ್ಟದ ಕಡೆಗೆ.

ಸಾಗರದ ಅಲೆಯ ತೀರವ ತಲುಪಿದರೆ 
ಮರಳ ಮೇಲಿನ ಗುರುತು ಮಾಯ 
ಹೊಸ ಜೀವನದ ಹಾದಿಗೆ ಇದುವೇ ಆಮಂತ್ರಣ 
ದೂರದ ಬೆಟ್ಟವ ಸೇರುವ ಬಯಕೆ ಹುಚ್ಚು ಮನದಲಿ 
ನೂರು ಭಾವವು ಶಾಂತಿ ಧ್ಯಾನದಿ ಮನದ ಆನಂದವು.

ಸಾಧನೆಯ ದಾರಿಗೆ ತಾಳ್ಮೆಯೇ ಒಲವು 
ಪ್ರಕೃತಿಯ ಮರ್ಮ ಅರಿತರೆ ಅದೇ ಜ್ಞಾನವು 
ಮುಳುಗುವ ಸೂರ್ಯ ಮುಳುಗಿ ಹೋಗಲಿ 
ನವ ಮನ್ವಂತರದ ನವ ರವಿ ಮೂಡಿಬರಲಿ 
ಎನ್ನ ಜೀವನವು ಗುರಿಯ ಮುಟ್ಟಲಿ.

- ರಾಕೇಶ್.ಎಂ, ಶಿಕ್ಷಕರು, ಬೆಂಗಳೂರು.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

                                               

ಅಂಗಳದಿ ನಿಂತ ತುಳಸಿ (ಕವಿತೆ) - ಸೌಜನ್ಯ ದಾಸನಕೊಡಿಗೆ.

ಮನೆ ಇವುದು ಮಹಡಿಯಲಿ, 
ಮನವಿಹುದು ಮೂಲೆಯಲಿ, 
ಮಾತನಾಡಲು ಇಲ್ಲಿ ಜೊತೆಎಲ್ಲಿ...

ದಿಕ್ಕು ದಿಕ್ಕುಗಳು ಕಾಲಿ, 
ಮರೆತೆ ಹೋಯಿತು ಜೋಲಿ, 
ಮನಕೆ ಕಟ್ಟಿರಲು ಬೇಲಿ,  
ಯಂತ್ರಗಳೆ ತುಂಬಿಹವು ಅಲ್ಲಿ ಇಲ್ಲಿ...

ಸುತ್ತಲೂ ರಾಕ್ಷಸ ಗೋಡೆ 
ಪ್ರತಿದ್ವನಿಸೊ ಬೀಡೆ, 
ಒಮ್ಮೆ ಇತ್ತ ನೋಡೆ, 
ಮೌನವ ಮುರಿದು ಮಾತನಾಡೆ.. 
ಹೇಳು ನಿನ್ನೊಳಗಿನ ಕತೆ 
ಕಾಡದಿರಲಿ ಮತ್ತದೇ ವ್ಯಥೆ....

ಎಲ್ಲಿ ಹೋದರು ಅವರು,  
ನಮ್ಮವರು ತಮ್ಮವರು,  
ಎಲ್ಲಾ ತಿಳಿದ ಹೆಮ್ಮರವೆ ದೂರವಿರಲು 
ಎಲ್ಲಿ ಹೋಗಲಿ ನಾ ಅವರ ಹುಡುಕಿ ತರಲು...

ತುಂಬಿಹವು ಮನೆ ತುಂಬ ಉದ್ದಗಲದಾ ಕೋಣೆ, 
ಅದರೊಳಗೆ ಮನೆ ಮಂದಿ ಉಳಿದದ್ದೆ ಕಾಣೆ, 
ಕೂಡಿಡಲು ಹೊರ ಹೋದರು
ಬಹು ಸರಳ ವಿಷಯ,  
ಗುಣಿಸಲೇ ಇಲ್ಲ ಮನೆಜನರ ಖುಷಿಯಾ....
 
ದೇವರಿದ್ದರೆ ಸಾಕೆ, 
ಜನರೂ ಸೇರಬೇಕೆ , 
ಜಾತ್ರೆ ಮೆರವಣಿಗೆ ಸಾಗೋಕೆ...

ಹೂವು ಇದ್ದರೆ ಸಾಕೆ , 
ಜೇನ ಬಳಗವು ಬೇಕೆ , 
ಸಿಹಿ ತುಪ್ಪದ ಚಪ್ಪರವ ಕಟ್ಟೋಕೆ ......

ಸದ್ದು ಗದ್ದಲವಿಲ್ಲದೇ ಗೆದ್ದಲು ಹರಡಿರಲು, 
ಮಾಡುವರಾರು  ಮನೆಯ ಸರಿಸಿ ಗುಡಿಸಿ...
ವಂಶವೃಕ್ಷವು ಮುರಿದು ಕಟ್ಟಿಗೆಯಾಗಿ ಬಿದ್ದಿರಲು, 
ಅಳುತಿಹಳು ಅಂಗಳದಿ ನಿಂತ ತುಳಸಿ.....
- ಸೌಜನ್ಯ ದಾಸನಕೊಡಿಗೆ.

(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಹಂಪೆಯಲ್ಲಿರುವ ಪ್ರಸಿದ್ಧ ನಾಗಮ್ಮದೇವಿ ಸನ್ನಿಧಿ (ಲೇಖನ) - ಶ್ರೀಮತಿ ಸುಮಂಗಲಾ ಕೃಷ್ಣ ಕೊಪ್ಪರದ.

ನಮಗೆ  ಪುಣ್ಯ ಇದ್ದರೆ ಪುಣ್ಯಕ್ಷೇತ್ರಗಳ ದರ್ಶನ ತನ್ನಿಂದ ತಾನೇ ದೊರೆಯುತ್ತೆ  ಅಂತ ನಮ್ಮ ತಂದೆ ತಾಯಿ ಹೇಳ್ತಾ ಇದ್ರು .ಅಂತಹ ಸಂದರ್ಭ ಇತ್ತೀಚೆಗೆ ನನಗೆ ಒದಗಿ ಬಂತು. ನಾನೆಂದೂ ನೋಡಬೇಕು ಎಂದು ಬಯಸದೆ ಇರುವಂತಹ ನಾಗದೇವತೆಯ ದರ್ಶನ ಭಾಗ್ಯ ಒದಗಿ ಬಂದದ್ದು ನನ್ನ ಪುಣ್ಯ ಎಂದು ಆ  ಸ್ಥಳದ ಮಹತ್ವ ತಿಳಿದ ಮೇಲೆ  ನನಗನಿಸಿತ್ತು.ಏಕೆಂದರೆ ನಾನು ನೋಡಿದ್ದು ವಿಜಯನಗರ ಸಾಮ್ರಾಜ್ಯದ ಸ್ಥಾಪಕರಾದ ಹಕ್ಕಬುಕ್ಕರ ಕಾಲದಲ್ಲಿ ಅಂದರೆ 14ನೇ ಶತಮಾನದಲ್ಲಿ ಸ್ಥಾಪಿತವಾದಂತಹ ಶಿಲಾ ನಾಗದೇವತೆಗಳ ಸನ್ನಿಧಿಯ ತಾಣ.ಈ ಸ್ಥಳವನ್ನು ನಾಗಮ್ಮದೇವಿ ಸನ್ನಿಧಿ ಎಂದು ಕರೆಯುವರು.
                   ಹಂಪೆಯ ವಿರೂಪಾಕ್ಷಸ್ವಾಮಿಯ  ದೇವಾಲಯದಿಂದ 1ಕಿಲೋ ಮೀಟರ್ ದೂರ ಹೋದರೆ ಎದುರಿಗೆ ಒಂದು ಬೃಹತ್ತಾದ 
ಕಲ್ಲು ಮಂಟಪ ಕಾಣಿಸುತ್ತೆ ,ಅಲ್ಲಿಂದ ನಾವು ಆ ಬೆಟ್ಟವನ್ನು ಹತ್ತಿ ಸುಮಾರು 2 ಕಿಲೋ ಮೀಟರ್ ದೂರ ಪಯಣಿಸಬೇಕು. ಬೆಳಿಗ್ಗೆ 8ಗಂಟೆಗೆ ನಾವು ಬಿಸಿಲಿನ ತಾಪಮಾನ ಹೆಚ್ಚುವ ಮುನ್ನವೇ ಪ್ರಯಾಣ ಬೆಳೆಸಿದೆವು .ಈ ಸನ್ನಿಧಿಗೆ ಭೇಟಿ ನೀಡುವ ಮಾರ್ಗಮಧ್ಯದಲ್ಲಿ ಕಾಲ್ನಡಿಗೆಯಲ್ಲಿ ಹೋಗಬೇಕು.ಮಾರ್ಗಮಧ್ಯದಲ್ಲಿ  ಒಂದು ಶೀಲಾ ಬಂಡೆಯ ಮೇಲೆ ಹದಿನಾಲ್ಕನೇ ಶತಮಾನದಲ್ಲಿ ಕೆತ್ತಲ್ಪಟ್ಟ 'ಅನಂತಪದ್ಮನಾಭ ಸ್ವಾಮಿಯ' ಮೂರ್ತಿಯನ್ನು ನೋಡಬಹುದು. ಹಾಗೆಯೇ ಅದರ ಎದುರಿಗೆ ಆಂಜನೇಯನ ದೇವಸ್ಥಾನವಿದೆ. ಆ ದೇವಸ್ಥಾನದ ಮುಂದೆ ನಿಂತು ನಾವು ದೂರದಲ್ಲಿರುವ ಅಂಜನಾದ್ರಿ ಬೆಟ್ಟವನ್ನು ಗಮನಿಸಬಹುದು .ಇಲ್ಲಿಂದ ಮುಂದೆ ಪಯಣಿಸಿದರೆ 'ಮಾತಂಗಪರ್ವತಕ್ಕೆ ಹೋಗುವ ದಾರಿ' ಎಂಬ ನಾಮಫಲಕವೂ ನಮಗೆ ದೊರೆಯುತ್ತದೆ .ಅದರ ಪಕ್ಕವೇ ನಾಗಮ್ಮ ದೇವಿ ಸನ್ನಿಧಿಗೆ ಹೋಗುವ ಮತ್ತೊಂದು ಮಾರ್ಗವೂ ಇದೆ .ಆ ಮಾರ್ಗದ ಮುಖಾಂತರ ಮುಂದೆ ಸಾಗಿದಾಗ ಮೊದಲು ನಮಗೆ ಬೃಹತ್ ಹೆಬ್ಬಂಡೆಗಳ ಕೆಳಗೆ ಗುಹೆಯಲ್ಲಿ  ಶಿವಲಿಂಗುವಿನ ದರ್ಶನವಾಗುತ್ತದೆ.ತುಂಬಾ ಪುರಾತನ ಸ್ಥಳವಾಗಿರುವುದರಿಂದ ಜನಸಂಚಾರವೂ ಕಡಿಮೆಯಿರುವುದರಿಂದ ಸ್ವಚ್ಛತೆಯ ಕೊರತೆ ಕಾಣುತ್ತಿತ್ತು. 

ಹಾಗೆಯೇ ಹೊರ ಬಂದು ಮುಂದೆ ಪಯಣಿಸಿದರೆ "ಹತ್ತು ಕೈ ಅಮ್ಮನ" ಸನ್ನಿಧಿಗೆ ಭೇಟಿ ನೀಡುತ್ತೇವೆ.ಹತ್ತು ಕೈಗಳನ್ನು  ಹೊಂದಿರುವುದರಿಂದ "ಹತ್ತುಕೈ ಅಮ್ಮಾ" ಎಂದು ಕರೆಯುತ್ತಾರೆ.ಆ ತಾಯಿಯ ದರ್ಶನ ಪಡೆದು ಹಾಗೆ ಮುಂದೆ ಸಾಗಿದಾಗ, ನಾಗಮ್ಮ ದೇವಿಯ ದಿವ್ಯ ಸಾನಿದ್ಯ ದೊರೆಯುತ್ತದೆ.  ಸುತ್ತಲೂ ಹಚ್ಚ ಹಸಿರಿನ ಹೊಲಗಳ ಮಧ್ಯದಲ್ಲಿದ್ದ ಈ ನಾಗ ಮಂಟಪ ನೋಡಲು ಆಕರ್ಷಕವಾಗಿತ್ತು.ಆ ಸ್ಥಳಕ್ಕೆ ಭೇಟಿಯಿತ್ತ ನಂತರ ಮನಸ್ಸಿಗೆ ಏನೋ ಒಂದು ರೀತಿಯ ಸಮಾಧಾನದ ಅನುಭವ. ಮುಖ್ಯವಾಗಿ ನಾವು ಈ ಸನ್ನಿಧಿಗೆ ಬಂದ ಕಾರಣ, ನಮ್ಮ ಸಂಬಂಧಿಕರ ಮಕ್ಕಳ ನಾಗದೋಷ ಪರಿಹಾರಕ್ಕಾಗಿ ಆ ಸ್ಥಳವನ್ನು ಅರ್ಚಕರು ಸೂಚಿಸಿದ್ದರು. ಅವರ ಸಲಹೆಯಂತೆ ಅರ್ಚಕರೊಂದಿಗೆ ನಾವು ಆ ಸ್ಥಳಕ್ಕೆ ಭೇಟಿ ನೀಡಿದ್ದೆವು.  ನಾಗದೋಷ ಪರಿಹಾರಕ್ಕಾಗಿ ದೇಶಾದ್ಯಂತ ಹಲವಾರು ಸ್ಥಳಗಳಿವೆ. ಅವುಗಳಲ್ಲಿ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಕುಕ್ಕೆ ಸುಬ್ರಹ್ಮಣ್ಯ,ಶಿವಮೊಗ್ಗ ಜಿಲ್ಲೆಯ ಅಗಸನಹಳ್ಳಿ ನಾಗಪ್ಪ ದೇವಾಲಯ, ಬೆಂಗಳೂರಿನಿಂದ 60 ಕಿಲೋ ಮೀಟರ್ ದೂರದಲ್ಲಿರುವ ಘಾಟಿ ಸುಬ್ರಹ್ಮಣ್ಯ ,ಅಲ್ಲದೆ ತಮಿಳುನಾಡಿನ ತಂಜಾವೂರಿನ ತಿರುನಾಗೇಶ್ವರ, ರಾಮೇಶ್ವರ, ಹೀಗೆ ದೇಶಾದ್ಯಂತ ಹಲವಾರು ಸ್ಥಳಗಳಿವೆ .ಅಂತಹ ಸ್ಥಳಗಳಲ್ಲಿ ಉತ್ತರ ಕರ್ನಾಟಕದ ವಿಜಯನಗರ ಜಿಲ್ಲೆಯಲ್ಲಿ ಬರುವ ನಾಗಮ್ಮ ಸನ್ನಿಧಿ ಮತ್ತು ಕಮಲಾಪುರದ ಹತ್ತಿರವೂ ಸಹ ಬೃಹತ್ತಾದ ನಾಗದೇವತೆಯ ಸನ್ನಿಧಿಯಿದೆ.  

            ನಾಗದೋಷ ,ಸರ್ಪದೋಷ,ಕುಜ ದೋಷ  ಇದೆ ಎಂದು ಜ್ಯೋತಿಷಿಗಳು ಹೇಳಿದರೆ ಸಾಕು ಎಲ್ಲರೂ ಭಯಪಡುತ್ತಾರೆ. ನಾಗದೋಷವೆಂದರೆ ......ಹಾವನ್ನು ಸಾಯಿಸಿರಬಹುದು ಅಥವಾ ತೊಂದರೆ ಕೊಟ್ಟಿರಬಹುದು .ಇದರಿಂದ ದೋಷವಾಗಿರುತ್ತದೆ ಎನ್ನುವುದು ನಂಬಿಕೆ.  ನಾನು ಯಾವುದೇ ಹಾವನ್ನು ಸಾಯಿಸಿಲ್ಲ, ತೊಂದರೆ ಕೊಟ್ಟಿಲ್ಲ ಆದರೂ ಜಾತಕದಲ್ಲಿ ಸರ್ಪ ದೋಷವಿದೆ ಎಂದು ಹೇಳುತ್ತಾರಲ್ಲ..... ಅನ್ನುವವರು ಇದ್ದಾರೆ .ಅದಕ್ಕೆ ತಿಳಿದವರು ಈ ಜನ್ಮದ ಪಾಪವಲ್ಲದಿದ್ದರೂ ಈ ಮೊದಲಿನ ಜನ್ಮದ ದೋಷವಿದೆ ಎನ್ನುತ್ತಾರೆ. ಕುಟುಂಬದ ಹಿರಿಯರು ನಾಗಹತ್ಯೆ ಮಾಡಿದ್ದರೆ ಅದರ ದೋಷ ಕುಟುಂಬದ ಸದಸ್ಯರ ಮೇಲೆ ಆಗುತ್ತದೆ , ಅದಕ್ಕೆ ಇನ್ನೂ ತಿಳಿಯುವಂತೆ ಪಿತ್ರಾರ್ಜಿತ  ಆಸ್ತಿಯಲ್ಲಿ ಪಾಲಿಗಾಗಿ  ಹಕ್ಕನ್ನು ಪಡೆಯುವಂತೆ ನಿಮ್ಮ ಪೂರ್ವಿಕರು ಮಾಡಿದ ಕೆಟ್ಟ ಮತ್ತು ಒಳ್ಳೆಯ ಕಾರ್ಯಗಳು ಪಾಪ ಪುಣ್ಯಗಳ ರೂಪದಲ್ಲಿ ನಿಮಗೆ ಪಿತ್ರಾರ್ಜಿತವಾಗಿ ಬರುತ್ತವೆ ಎಂದು ತಿಳಿ ಹೇಳುತ್ತಾರೆ.ಆದ್ದರಿಂದ ಅದೇ ಕುಟುಂಬದಲ್ಲಿ ಕೆಲವರು ಒಳ್ಳೆಯ ಜೀವನ ನಡೆಸಿದರೆ ಇನ್ನೂ ಕೆಲವರಿಗೆ ತೊಂದರೆಗಳು ಎದುರಾಗುತ್ತಿರುತ್ತವೆ.     

ಸಾಮಾನ್ಯವಾಗಿ ಹಿಂದುಗಳಲ್ಲಿ ನಾವು  ಹೆಚ್ಚಾಗಿ ಈ ಜಾತಕ ಪರಿಶೀಲಿಸುವ ಪರಿಪಾಠವನ್ನು ಹೊಂದಿರುತ್ತೇವೆ. ಅದರ ಮೂಲಕ ಮುಂದೆ ಒದಗಬಹುದಾದ ತೊಂದರೆ, ವಿಪತ್ತುಗಳಿಗೆ ಶಾಂತಿ ಪರಿಹಾರವನ್ನು ಮಾಡುವ ಮೂಲಕ, ತೊಂದರೆಯ ತೀವ್ರತೆಯನ್ನು ಕಡಿಮೆಮಾಡಬಹುದು ಎಂಬುದು ಪುರಾತನ ಕಾಲದಿಂಲೂ  ಬಂದ ಒಂದು ನಂಬಿಕೆಯಾಗಿದೆ.ಕೆಲವೊಮ್ಮೆ ನಮ್ಮ ಜಾತಕದಲ್ಲಿ ಕಾಣಸಿಗುವ ದೋಷಗಳು ನಮ್ಮನ್ನು ವಾಸ್ತವ ಜೀವನದಲ್ಲಿ ಹೆಚ್ಚಾಗಿ ಬಾಧಿಸುವುದನ್ನು ನಮ್ಮ ಸುತ್ತಮುತ್ತನಲ್ಲಿ ನೋಡಿರುತ್ತೇವೆ. ಅದರಲ್ಲೂ ನಾಗದೋಷಗಳ ಕುರಿತು ನಾವು ಆಗಾಗ ಕೇಳುತ್ತಿರುತ್ತೇವೆ. ಈ ದೋಷಗಳಲ್ಲಿ ಕೆಲವು ಪೂರ್ವಜನ್ಮದ ದೋಷಗಳು ಎಂದು ಹೇಳಿದರೆ , ತಿಳಿದು ತಿಳಿಯದೇ ಮಾಡಿದ ಕೆಲವು ತಪ್ಪುಗಳಿಂದ ನಾವು ದೋಷಕ್ಕೆ ಬಲಿಯಾಗುತ್ತೇವೆ. ಅವುಗಳಿಂದ ನಾನಾ ತರಹದ ತೊಂದರೆಗಳನ್ನು ಅನುಭವಿಸುವುದನ್ನು ಕಾಣಬಹುದು. ಅಷ್ಟೇ ಅಲ್ಲದೇ ವಿವಾಹವಾಗದೇ ಇರುವುದು, ಚರ್ಮ ರೋಗ, ನಿರುದ್ಯೋಗ, ಸಂತಾನಹೀನತೆ,  ಎಷ್ಟೇ ಪ್ರಯತ್ನ ಪಟ್ಟರೂ ಕಂಕಣ ಭಾಗ್ಯ ಕೂಡಿ ಬರದಿರುವುದು,  ಎಷ್ಟೇ ವಿದ್ಯಾವಂತ ಆಗಿದ್ದರೂ, ರೂಪವಂತ ಆಗಿದ್ದರೂ ಮದುವೆ ಆಗದಿರುವದು,ಕೂಡಿದ ಸಂಬಂಧಗಳು ಮುರಿದು ಬೀಳುವುದು, ಇನ್ನೂ ಕೆಲವರಿಗೆ ಗರ್ಭ ಸಂಬಂಧ ಕಾಯಿಲೆಗಳು, ಯಾವುದೇ ವೈದ್ಯರ ಬಳಿ ಹೋದರು ಗುಣ ಆಗುತ್ತಿಲ್ಲ ಮತ್ತೆ ಮತ್ತೆ ಬರುತ್ತಿದೆ ಎನ್ನುವವರು, ಎಲ್ಲಾ ಚೆನ್ನಾಗಿ ಇದ್ದರೂ ಮಾನಸಿಕ ಸಮಸ್ಯೆಯಿಂದ ನೆಮ್ಮದಿಯಿಲ್ಲ ಎನ್ನುವವರು ಇಂತಹ ಹಲವಾರು ತೊಂದರೆಗಳಿದ್ದರೆ, ನಾಗದೋಷದಿಂದ ಬಳಲುತ್ತಿರಬಹುದು ಎಂಬ ನಂಬಿಕೆಯಿಂದ ತಂದೆತಾಯಿಗಳು ಜ್ಯೋತಿಷಿಗಳ ಬಳಿ ಹೋಗುವುದು ಸರ್ವೇ ಸಾಮಾನ್ಯ.

ವಿದ್ಯಾವಂತರಾದ ನಾವು ಈ ಮೂಢನಂಬಿಕೆಗಳನ್ನು ನಂಬೋದು ಸರಿಯೇ ಅಂತ ಒಂದು ಸಾರಿ ನಮ್ಮ ಮನಸ್ಸಿಗೆ ಅನ್ನಿಸಿದರೂ ,ಇದನ್ನೆಲ್ಲ ಮಾಡಿಸಬೇಡಿ ಮೂಢನಂಬಿಕೆ  ಅಂತ ಹೇಳ್ಬೇಕು ಅನಿಸಿದರೂ,  ಕೇವಲ ಪಠ್ಯ ಪುಸ್ತಕದ ಜ್ಞಾನ ಪಡೆದ ನಮಗೆ ನಮ್ಮ ದೇಶದ ಸಂಸ್ಕೃತಿ ಪರಂಪರೆಯಲ್ಲಿ ಅಡಗಿರುವ ಕಾಲಗರ್ಭದ ಎಷ್ಟೋ ಸತ್ಯಗಳನ್ನು ಅರಿಯದ ಜ್ಞಾನ ನಮ್ಮದು ಅನಿಸಿತು.ಅಲ್ಪಸ್ವಲ್ಪ ತಿಳುವಳಿಕೆಯಿಂದ ಅನುಭವಿಕ ಹಿರಿಯರೆದುರು ಆ ರೀತಿ ಮಾತನಾಡುವುದು ಸರಿಯಲ್ಲ ಅನ್ನಿಸಿತು.  ಪುರಾತನ ಕಾಲದಲ್ಲಿ ಇಂತಹ ಉದ್ದೇಶಗಳನ್ನು ಈಡೇರಿಸುವುದಕ್ಕಾಗಿ ಸ್ಥಾಪಿತವಾದಂತಹ ನಾಗದೇವತೆಗಳ ಶಕ್ತಿಯ ಮೇಲೆ ಅಪನಂಬಿಕೆ ಬೆಳೆಸುವುದು ಎಷ್ಟರಮಟ್ಟಿಗೆ ಸರಿ? ಅಂತ ಮನಸಿಗೆ ಅನ್ನಿಸಿತು.ದೈವಶಕ್ತಿಯ ಮುಂದೆ ನಂಬಿಕೆ, ಅಪನಂಬಿಕೆಯ ಪ್ರಶ್ನೆಯೇ ಇಲ್ಲ ಎಂದುಕೊಂಡು ಪೂಜೆಗೆ ಹಿರಿಯರು ಅನುಮತಿ ನೀಡಿದರು. ಅಲ್ಲದೆ ಈ ಪೂಜೆಯನ್ನು ಯಾವಾಗೆಂದರೆ ಆವಾಗ ಮಾಡಿಸಲು ಬರುವುದಿಲ್ಲ. ಅವರವರ ಜಾತಕಕ್ಕನುಗುಣವಾಗಿ, ರಾಶಿಗಳಿಗೆ ಅನುಗುಣವಾಗಿ ,ನಕ್ಷತ್ರಗಳು ಕೂಡುವ ಸಮಯಕ್ಕನುಗುಣವಾಗಿ, ಅದು  ಹಗಲಾಗಿರಬಹುದು ಅಥವಾ ರಾತ್ರಿ ಆಗಿರಬಹುದು ಅದೇ ಸಂದರ್ಭದಲ್ಲಿ  ಅರ್ಚಕರು  ಹೇಳಿದ ದಿನದಂದೇ ಪೂಜಾ ಕೈಂಕರ್ಯಗಳನ್ನು ಮಾಡಬೇಕಾಗುತ್ತದೆ. ಅಲ್ಲಿಯವರೆಗೂ ಕಾಯಲೇಬೇಕು.
                 ಅಲ್ಲಿ ಸುಮಾರು ನೂರಾರು ನಾಗದೇವತೆಗಳ ಶಿಲಾವಿಗ್ರಹಗಳಿವೆ. ಅವುಗಳಲ್ಲಿ ಕೆಲವು ನಾಗದೇವತೆಗಳಿಗೆ ನಾಗ ಶರೀರ ಮಾನವಮುಖ ಇರುವುದು ವಿಶೇಷವಾಗಿತ್ತು.ನಿಸರ್ಗದ ಮಡಿಲಲ್ಲಿರುವ ದೇಗುಲದ ಪಕ್ಕವೇ ತುಂಗಭದ್ರ ನದಿ ನೀರಿನ ಧಾರೆ.ಅಲ್ಲಿ ಸ್ನಾನ ಮಾಡಿ ಆ ಮಕ್ಕಳ ಕಡೆಯಿಂದಲೇ ಎಲ್ಲ ನಾಗದೇವತೆಗಳಿಗೆ ಪೂಜೆ ಸಲ್ಲಿಸಲಾಯಿತು . ನಾಗದೋಷ ಪರಿಹಾರಕ್ಕಾಗಿ ಹಲವು ರೀತಿಯ ಸಾಮಾನುಗಳನ್ನು ತರಲು ಅರ್ಚಕರು ಸಲಹೆ ನೀಡಿದ್ದರು.ಅವರು ಹೇಳಿದಂತೆ ಪೂಜೆಗೆ ಅಣಿ ಪಡಿಸಲಾಯಿತು .ಮೊದಲಿಗೆ ವಿಘ್ನೇಶ್ವರನ ಪೂಜೆಯೊಂದಿಗೆ ಆರಂಭವಾಯಿತು .ನಂತರ ಯಾವ ಕಾರಣಕ್ಕಾಗಿ ಈ ಪೂಜೆಯನ್ನು ಮಾಡಲಾಗುತ್ತದೆಯೋ ಆ ಉದ್ದೇಶದೊಂದಿಗೆ ಮಕ್ಕಳಿಂದ ಸಂಕಲ್ಪವನ್ನು ಮಾಡಿಸಲಾಯಿತು .ಮಕ್ಕಳು ಅರ್ಚಕರು ಹೇಳಿದಂತೆ ಹಿಟ್ಟಿನಿಂದ ತಯಾರಿಸಿದ ಸರ್ಪಗಳನ್ನು ಮಾಡಿದರು. ಅನಂತರ ಅವುಗಳಿಗೆ ಪೂಜೆಯನ್ನು ಸಲ್ಲಿಸಿ , ಅರ್ಚಕರು ಮಂತ್ರಪಠಣ ಮಾಡುತ್ತಲೇ ,ಅವರ ಅಣತಿಯಂತೆ ,ಪ್ರತಿಸಾರೆಯೂ ಹೋಮದ ಅಗ್ನಿಕುಂಡದಲ್ಲಿ ಹಿಟ್ಟಿನಿಂದ ತಯಾರಿಸಿದ 2  ನಾಗದೇವತೆಗಳನ್ನು  ಸಮರ್ಪಿಸಲಾಯಿತು.

ಪ್ರತಿ ಸಾರಿಯೂ ಅರ್ಚಕರು ಬೇರೆಬೇರೆ ನಾಗದೇವತೆಗಳ ಹೆಸರನ್ನು ಹೇಳುತ್ತಾ ,ಮಂತ್ರ ಪಠಣ ಮಾಡುತ್ತಾ, ಆ ಮಕ್ಕಳಿಂದ  ಇಪ್ಪತ್ತೈದು ನಾಗಗಳನ್ನು ಅಗ್ನಿಕುಂಡದಲಿ ಸಮರ್ಪಿಸಿದರು. ಇದುವೇ "ಆಶ್ಲೇಷ ಬಲಿ" ಪೂಜೆ ಎಂದು ತಿಳಿಯಿತು. ಮಕ್ಕಳ ಜಾತಕಕ್ಕನುಗುಣವಾಗಿ,ದೋಷ ಕ್ಕನುಗುಣವಾಗಿ  ವಿಭಿನ್ನ ರೀತಿಯಲ್ಲಿ   ಆಶ್ಲೇಷ ಬಲಿ ಪೂಜೆ ನಡೆಸಲಾಗುತ್ತದೆ ಎಂದು ಅವರು ತಿಳಿಸಿದರು . ನಾಗದೋಷಗಳಲ್ಲಿ ಹಲವು ವಿಧ ಸರ್ಪಹತ್ಯ,ಸರ್ಪಾಂಡ ಅಂದರೆ ಹಾವಿನ ಮೊಟ್ಟೆಗಳನ್ನು ನಾಶ ಮಾಡಿದರೆ ಅಥವಾ ಹಾವಿನ ಮಾರ್ಗ ಪಥಕ್ಕೆ ತೊಂದರೆ ಮಾಡಿದರೆ ಅಥವಾ ಹಾವುಗಳ ಮಿಲನ ಕ್ರಿಯೆಯನ್ನು ನೋಡಿದರೆ ಈ ರೀತಿಯ ನಾಗದೋಷ ಬರುತ್ತೆ ಎನ್ನುವುದು ತಿಳಿಯಿತು.ಮಕ್ಕಳು ಇದನ್ನು ಒಪ್ಪದಿದ್ದರೂ ಜೀವನದ ಅನುಭವವಿರುವಂತಹ ಹಿರಿಯರ ಮಾತಿಗೆ ಗೌರವ ಕೊಟ್ಟು ಪೂಜೆಯಲ್ಲಿ ನಿರತರಾಗಿದ್ದರು.ಅನಂತರ ಕುಟುಂಬದ ಹಿರಿಯರ, ಪೂರ್ವಿಕರ ಹೆಸರಿನಲ್ಲಿ ಪಿಂಡಪ್ರಧಾನವನ್ನು ಮಾಡಿಸಿ ಅವರ ಆತ್ಮಕ್ಕೆ ಶಾಂತಿ ದೊರೆಯುವಂತೆ  ಪೂಜೆ ಸಲ್ಲಿಸಲಾಯಿತು.ಇಷ್ಟೆಲ್ಲಾ ಪೂಜೆ ಮುಗಿಯುವ ವೇಳೆಗೆ 4 ಗಂಟೆಗೂ ಅಧಿಕ ಸಮಯಾವಕಾಶ ಬೇಕಾಯಿತು.  ಪೂಜಾಕಾರ್ಯಗಳೆಲ್ಲ ಮುಗಿದ ನಂತರ ಪುನಃ ಮತ್ತೊಮ್ಮೆ ಆ ಮಕ್ಕಳು ಸ್ನಾನವನ್ನು ಮಾಡಲು ಸಲಹೆ ನೀಡಿ ,ನಂತರ ಎಲ್ಲಾ ನಾಗಮೂರ್ತಿಗಳಿಗೆ ಆ ಮಕ್ಕಳಿಂದಲೇ ಮತ್ತೊಮ್ಮೆ ನೀರಿನಿಂದ ಶುಚಿಗೊಳಿಸಿ, ಅನಂತರ  ಹಾಲನ್ನು ಎರೆಯಲಾಯಿತು.ಅರಿಶಿನ ಕುಂಕುಮದಿಂದ ಅಲಂಕೃತಗೊಳಿಸಿ, ಪುಷ್ಪಗಳನ್ನು ಸಮರ್ಪಿಸಿ,ತೆಂಗಿನಕಾಯಿ ಹಣ್ಣನ್ನು ನೈವೇದ್ಯವಾಗಿ ಸಮರ್ಪಿಸಿ ಪೂಜಾವಿಧಿಯನ್ನೂ ಪೂರ್ಣಗೊಳಿಸಿದರು.ಅಲ್ಲಿಯವರೆಗೂ ಬೆಳಗ್ಗಿನಿಂದ ಯಾವುದೇ ರೀತಿಯ ಆಹಾರವನ್ನು ಸೇವಿಸದೆ ಶುದ್ಧ ಮನಸ್ಸಿನಿಂದ ಪೂಜೆಗೈಯುವುದು ವಿಶೇಷವಾಗಿತ್ತು.

ಪೂಜೆಯ ನಂತರ ಎಲ್ಲರೂ ಕೆಲ ಕ್ಷಣ ಅಲ್ಲೇ ಕುಳಿತು ದೇವರ ನಾಮದ ಹಾಡುಗಳನ್ನು ಹಾಡಿ ಅಲ್ಲಿಂದ ಪುನಃ ಹೊರಡಲು ಸಿದ್ಧರಾದೆವು.    ಆ ಚಿಕ್ಕ ನಾಗ ಮಂಟಪದ ಸುತ್ತಲೂ ಬಾಳೆತೋಟದ ಹಚ್ಚಹಸಿರಿನ ಹೊಲಗಳು ಮನಸ್ಸಿಗೆ ಮುದ ನೀಡಿದವು.ನಂತರ ಎಲ್ಲರೂ ಅಲ್ಲಿಂದ ಪುನಃ ಹತ್ತು ಕೈ ಅಮ್ಮನ  ಸನ್ನಿಧಿಗೆ ಬಂದೆವು.ಅಲ್ಲಿ ಆ ಮಕ್ಕಳಿಂದಲೇ ದೇವಿಗೆ ಅಭಿಷೇಕ ಮಾಡಿಸುವುದರ ಮೂಲಕ ಪೂಜೆ ಸಲ್ಲಿಸಿ, ಮಂಗಳಾರತಿಯ ನಂತರ ಅಲ್ಲಿಂದ ಹೊರಟೆವು.ಪುನಃ ಬಂದ ಕಾಲು ದಾರಿಯಲ್ಲೇ ಮರಳಿ ವಿರೂಪಾಕ್ಷ ದೇವಾಲಯದ ಸನ್ನಿಧಿಗೆ ಬಂದು, ಅಲ್ಲಿ ದೇವರ ದರುಶನ ಪಡೆದು ,ಮಧ್ಯಾಹ್ನದ ಊಟ ಮುಗಿಸಿಕೊಂಡು ಪುನಃ ಮರಳಿ ನಮ್ಮ ಊರಿನತ್ತ ಪ್ರಯಾಣ ಬೆಳೆಸಿದೆವು. 

               ಸಾಕಷ್ಟು ಜನ ನಾಗದೋಷ ಪರಿಹಾರಕ್ಕೆ ಕುಕ್ಕೆ ಸುಬ್ರಹ್ಮಣ್ಯ ಶ್ರೇಷ್ಠ ಸ್ಥಳ ಎಂದು ಹೇಳುತ್ತಾರೆ.ಅದು ನಿಜವಿರಬಹುದು. ಆದರೆ ಕೋಟ್ಯಂತರ ಜನರೆಲ್ಲರಿಗೂ ಆ ಸ್ಥಳಕ್ಕೆ ಹೋಗಿ ದೋಷ ಪರಿಹಾರ ಮಾಡಿಕೊಳ್ಳುವ ಸಾಮರ್ಥ್ಯವಿಲ್ಲದಿರಬಹುದು.ದೇವರು ಎಲ್ಲೆಡೆ ಇದ್ದಾನೆಂಬ  ನಂಬಿಕೆಯಿರುವವರು ಕೊಪ್ಪಳ ಜಿಲ್ಲೆಯ ಭಾಗ್ಯನಗರದಲ್ಲಿರುವ ಕಳಕಪ್ಪ ಸ್ವಾಮಿ ಎಂಬ ಅರ್ಚಕರ ಬಳಿ ಬಂದು ನಾಗದೋಷ ಪರಿಹಾರಕ್ಕಾಗಿ ಸಲಹೆ ಕೇಳಿದಾಗ ,ಅವರು ನಿಷ್ಕಲ್ಮಶ ಮನಸ್ಸಿನಿಂದ ಅವರ ಕೊಟ್ಟ ದಕ್ಷಿಣೆಯನ್ನು ಸಂತೋಷದಿಂದ ಸ್ವೀಕರಿಸಿ ಪೂಜಾ ಕೈಂಕರ್ಯಗಳನ್ನು ಕೈಕೊಂಡು ,ನಿಮಗೆ ಒಳಿತಾದರೆ ನನಗೂ ಒಳಿತಾಗುವುದು ಎಂದು ತುಂಬು ಹೃದಯದಿಂದ ಹರಸಿ ಕಳಿಸುತ್ತಾರೆ.ಹೀಗಾಗಿ ಸಾಕಷ್ಟು ಬಡ ಜನತೆ ಅರ್ಚಕರ ಬಳಿ ಬಂದು ತಮ್ಮ ಜಾತಕದಲ್ಲಿ ದೋಷ ಪರಿಹಾರಕ್ಕಾಗಿ ಇವರ ಸಹಾಯವನ್ನು ಪಡೆದು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ .

ನನ್ನ ಅರಿವಿಗೆ ತಿಳಿದಂತೆ ಈ ಸ್ಥಳ ಪರಿಚಯ ಲೇಖನವನ್ನು ನಾನು ಬರೆದಿದ್ದೇನೆ.ಈ ಸ್ಥಳದ ಬಗ್ಗೆ ಈಗಾಗಲೇ ಮಾಹಿತಿ ತಿಳಿದವರಿದ್ದರೆ,ನನ್ನ ಬರವಣಿಗೆಯಲ್ಲಿ  ಏನಾದರೂ ಲೋಪದೋಷಗಳಿದ್ದರೆ ಮಾರ್ಗದರ್ಶನ ನೀಡಿ .
- ಶ್ರೀಮತಿ ಸುಮಂಗಲಾ ಕೃಷ್ಣ ಕೊಪ್ಪರದ ಇಲಕಲ್ಲ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಆತ್ಮವಿಶ್ವಾಸವೇ ಶ್ವಾಸವಾಗಿರಲಿ (ಕವಿತೆ) - ಶಾಂತಾರಾಮ ಮರಾಠಿ ಶಿರಸಿ, ಉತ್ತರ ಕನ್ನಡ.

ಆತ್ಮವಿಶ್ವಾಸವಿರಲಿ,
ಆತ್ಮವಿಶ್ವಾಸವೇ ಶ್ವಾಸವಾಗಿರಲಿ,
ಮನವು ಕುಗ್ಗದಿರಲಿ-ಕೊರಗದಿರಲಿ-ಸುಮ್ಮನೆ ಕೂರದಿರಲಿ,
ಆತ್ಮವಿಶ್ವಾಸದ ಚಿಲುಮೆ ಜ್ವಾಲಾಮುಖಿಯಂತೆ ಚಿಮ್ಮುತಿರಲಿ..

ನೋಡುವವರು ನೋಡಲಿ-ನೋಡಿ ಚುಚ್ಚುಮಾತುಗಳ ಆಡುತಿರಲಿ,
ನಿಮ್ಮಆಟದ ಕಡೆ ಗಮನವಿರಲಿ ಎಲ್ಲಿಯೂ ನಿಲ್ಲದೇ ನಡೆಯುತಿರಲಿ,
ಸೋಲಲಿ-ಸಾವಿರಸಲ ಸೋಲಲಿ-ಆ ಸೋಲೇ ಒಪ್ಪಿಕೊಳ್ಳಲಿ,
ನಿನಗೆ ಶರಣಾಗಿ ಗೆಲುವು ತಂದು ಕೊಡುವ ಮಾತು ನೀಡಲಿ..

ಮುನ್ನುಗ್ಗುವ ಸಾಗರದಲೆಗಳಂತ ಎಡಬಿಡದ ರಭಸವಿರಲಿ,
ನೋವು-ಕಷ್ಟಗಳು,ಅಡೆ-ತಡೆಗಳು ಬರಲಿ-ಅದ್ಯಾವುದಕ್ಕೂ ಹೆದರದಿರಲಿ,
ಸೋಲನುಂಡು ನಜ್ಜುಗುಜ್ಜಾಗಿ ನೆಪ್ಪಿ ನುಚ್ಚುನೂರಾದರೂ ಮನವು ಅಂಜದೇ ಚಂಚಲವಾಗದಿರಲಿ,
ಸಾಗುವ ದಾರಿಯಲಿ ಗುರಿಯೆಡೆಗೆ ಸಾಗುವ ಎಚ್ಚರಿಕೆಯ ಏಕಾಗ್ರತೆಯಿರಲಿ,
ಯಾರನ್ನೂ ನಂಬದಿರಿ-ನಂಬಿ ಮೋಸಹೋಗದಿರಿ -ನಮ್ಮ ಮೇಲೆ ನಮಗೆ ಅಚಲವಾದ ನಂಬಿಕೆಯಿರಲಿ,
ಆತ್ಮವಿಶ್ವಾಸದಿ ನಾವು ನಡೆದದ್ದೆ ದಾರಿಯಾಗಲಿ-ನಮ್ಮನಡಿಗೆ ದಾರಿದೀಪವಾಗಲಿ,
ಆತ್ಮವಿಶ್ವಾಸದ ದಾರಿದೀಪದ ಬೆಳಕಿನಿಂದ ಎಲ್ಲರೂ ನಮ್ಮಂತೆ ಸಾಗುತಿರಲಿ.

- ಶಾಂತಾರಾಮ ಮರಾಠಿ ಶಿರಸಿ, ಉತ್ತರ ಕನ್ನಡ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಪ್ರೀತಿ - ಪ್ರೇಮಕೆ ಬಲಿಯಾಗದಿರು (ಕವಿತೆ) - ಬಸವರಾಜ.ಹೆಚ್.ಹೊಗರನಾಳ

ಅಂದವ ನೋಡಿ ಮರುಳಾದೆ
ಚೆಂದದ ಮಾತಿಗೆ ಬೆರಗಾದೆ |
ಸಿಗುವಿ  ಎಂದು ಭಾವಿಸಿ
ಹಲವಾರು ಕನಸ ಕಟ್ಟಿದೆ ll
    
ನೀನು ಸಿಕ್ಕರೆ ಸಾಧನೆಗೆ ಮೀರಿದ ಮಾತೇ ಇಲ್ಲ ಎಂದೇ
ನಿನ್ನ ಪ್ರೀತಿಯ ಮುಂದೆ ಬೇರವಾ ಪ್ರೀತಿಯು ಇಲ್ಲ ಎಂದೇ |
ಆದರೇ ಪ್ರೀತಿಸುವ ಮುನ್ನ ಯೋಚಿಸಲೇ ಇಲ್ಲ ಊಸರವಳ್ಳಿಯಂತ ನಿನ್ನ ಭಾವಗಳ ಬದಲಾವಣೆಯನ್ನು
 ನಾ ಕಾಣಲೇ ಇಲ್ಲಲ್ಲಿll

ಕಣ್ಣಿಗೆ ಕಾಣುವ ಛಾಯೆಗೆ ನಾ ಮರುಳಾದೆ
ನಕ್ಕು - ನಗಿಸುವ ನಾಟ್ಯಕ್ಕೆ ನಾ ಬೆರಗಾದೆ |
ಬಿಟ್ಟು ಹೋಗುವ ಕೆಟ್ಟ ಪ್ರೀತಿಗೆ ನಾ ಮರುಗಿದೆ
ದಿಟ್ಟ ನಿರ್ದಾರವ ತೊರೆದು ದಟ್ಟ ಭಾವನೆಗಳ ಮೋಹದಿ ಸಿಲುಕಿದೆll

ನಡೆಯಲೇ ನಾ ಈ ಪ್ರೀತಿಯ ಹಿಂದೆ,
ಬದಲಾಗಬಹುದಾಗಿದೆ ನನ್ನ ಬದುಕು ಇಂದೇ |
 ಈ ಹಿಂದೆ-ಮುಂದಿನ ಬದುಕಿಗೆ ಇಂದಿನ ಪಯಣವೇ ಕಾರಣ 
ಈಗಿನ ಕ್ಷಣಗಳೇ ನೀಡುವುದು ನಮ್ಮ ಬದುಕಿಗೆ ಪ್ರೇರಣೆ ll

ಕಲಿಯಲು ಬಂದೇ ನಾ ಹಲವಾರು ಕನಸ ಹೊತ್ತು,
ಕನಸಿಗಾಗಿ ತೊರೆದು ಬಂದೇ ಅಮ್ಮನ ಪ್ರೀತಿಯ ತುತ್ತು | ಮರುಳಾಗಿಸಿ ನರಳಾಡಿಸಿದೆ ಇಲ್ಲಿ ಪ್ರೀತಿ -ಪ್ರೇಮದ ಮತ್ತು,
ಮತ್ತೆ ತೊರೆದು ನಡೆದರೇ ಇವೆಲ್ಲವನು ಈ ಹೊತ್ತು |
ಮುಂದೊಂದು ದಿನ ಜಗವೇ ಮೆರೆಸುವುದು
ನನ್ನ ಹೆಗಲ ಮೇಲೆ ಹೊತ್ತುll
     
- ಬಸವರಾಜ.ಹೆಚ್.ಹೊಗರನಾಳ.



(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಶ್ರೇಷ್ಠ ಮಹಾನಾಯಕ(ಕವಿತೆ) - ವೈಷ್ಣವಿ ರಾಜಕುಮಾರ್, ಕರಕ್ಯಾಳ.

ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ 
ದೇಶವಾದ ಭಾರತಕ್ಕೆ ಸಂವಿಧಾನ ರಚಿಸಿ,
ದೇಶಕ್ಕೆ ಭದ್ರಬುನಾದಿ ಒದಗಿಸಿದ್ದಾರೆ,
ಸಂವಿಧಾನ ರಚನಾ ಕರಡು ಸಮಿತಿಯ ಅಧ್ಯಕ್ಷರಾಗಿದ್ದಾರೆ.

ಸವಿಧಾನ ಭಾರತದ ಪಾಲಿನ ಪವಿತ್ರ ಗ್ರಂಥ,
ಆ ಗ್ರಂಥದ ನಿಯಮಗಳು ಪಾಲಿಸಬೇಕೆಂದು ಹೇಳಿದ್ದಾರೆ,
ನಮ್ಮ ಹಕ್ಕಿಗಾಗಿ ನಾವೇ ಹೋರಾಡಬೇಕೆಂದು ಹೇಳಿದ್ದಾರೆ,
ಮಹಾನ್ ಮಾನವತಾವಾದಿ ಡಾll ಬಿ ಆರ್ ಅಂಬೇಡ್ಕರ್.

ಅವರ ಒಂದೊಂದು ಮಾತುಗಳು ಅದ್ಭುತ,
ಕೇಳಿದ ಕಿವಿಗಳಿಗೆ ಸ್ಫೂರ್ತಿದಾಯಕ,
ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಪ್ರೇರಣೆ,
ಭಾರತಕ್ಕೆ ಒಂದು ದೊಡ್ಡ ಕೊಡುಗೆ ನೀಡಿದ ಪ್ರಸಿದ್ಧ ನಾಯಕ.

ಕೀಳು ಜಾತಿಯವರೆಂದು ಅವಮಾನ ಮಾಡಿದರು,
ಅವಮಾನ ಪಡೆಯಲಿಲ್ಲ ಆ ನಾಯಕ,
ಎಲ್ಲಿ ಅವಮಾನ ಇದೆಯೋ ಅಲ್ಲಿ ಗೆಲುವು ಇದೆಯೆಂದು
ಎದ್ದುನಿಂತಿದ ಮಹಾನಾಯಕ,
ಡಾll ಬಿ ಆರ್ ಅಂಬೇಡ್ಕರ್.

ಅವರು ಮಾಡಿದ ಸಾಧನೆಗಳು,
ಅವರು ನಮಗೆ ಕೊಟ್ಟ ಕೊಡುಗೆಗಳು,
ನಮ್ಮ ಜೀವನದ ಅಸ್ತ್ರವಾಗಿವೆ,
 ನಮಗೆ ಬದುಕಲು ಸ್ಪೂರ್ತಿ ತುಂಬಿದ್ದಾರೆ,
ಡಾll ಬಿ ಆರ್ ಅಂಬೇಡ್ಕರ್. ಜೈ ಭೀಮ್.

- ವೈಷ್ಣವಿ ರಾಜಕುಮಾರ್, ಕರಕ್ಯಾಳ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಸಮರವು ಬೇಡ (ಕವಿತೆ) - ರಾಜು ನಂಜಪ್ಪ, ನೆಲಗದರನಹಳ್ಳಿ.

ಎಷ್ಟೆಲ್ಲಾ ಆಯುಧ
ಎಷ್ಟೆಲ್ಲಾ ಸೈನಿಕರು
ಒಂದು ದೇಶದ ಮೇಲೆ
ಇನ್ನೊಂದು ದೇಶ
ಹನ್ನೊಂದು ದೇಶದ ಮೇಲೆ
ಮತ್ತೊಂದು ದೇಶ
ಹೆಣಗಳ ಲೆಕ್ಕ ತಪ್ಪಬಾರದು
ಒಂದು ತಲೆಗೆ ಎರಡೂ ತಲೆ
ಹತ್ತು ತಲೆಗೆ ಇಪ್ಪತ್ತು
ದೇಶಕೆ ಇದೆ ಆಪತ್ತು
ಪರಮಾಣು ಅಸ್ತ್ರ
ನೋಡಿ ಜಲಜಾಸ್ತ್ರ
ಲಕ್ಷ ಭುವಿಯ ಸುಡುವ
ಸಾಮರ್ಥ್ಯವಿದೆ ನಮಗೆ
ಒಂದು ಭುವಿಯ ಹುಟ್ಟು
ನಮಗಿಲ್ಲ ಯೋಗ್ಯತೆ
ಕರುಣೆಯ ಕಣ್ಣು
ಹಿಂಗಿ ಹೋಗಿದೆ
ಮಿಲಿಟರಿಗೆ ಹಣ
ನೀರಿನಂತೆ ಹರಿದಿದೆ
ಹೆಣಗಳ ಬಾಚಲು
ಕಾದಿವೆ ಪಿಶಾಚಿಗಳು
ನೆಮ್ಮದಿಯ ನಾಳೆ
ಯಾರಿಗೂ ಬೇಕಿಲ್ಲ
ರಕ್ತವನ್ನು ಕುಡಿಯಲು 
ಭೂತಾಯಿ ಬಯಸಿಲ್ಲ 
ರಕ್ಷಿಸಲು ಯುದ್ಧವಿರಲಿ
ಭಕ್ಷಿಸಲು ಬೇಡ 
ಸಮರವೇ ಜೀವನವಲ್ಲ
ಸಮರಸವು ಜೀವನ!! 
- ರಾಜು ನಂಜಪ್ಪ, ನೆಲಗದರನಹಳ್ಳಿ, ಬೆಂಗಳೂರು.



(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಧನ್ಯರಾಗುವ (ಕವಿತೆ) - ಶ್ರೀ ತುಳಸಿದಾಸ ಬಿ ಎಸ್

ಒಣಗಿದೆದೆಗೆ ನಿನ್ನ ಪ್ರೀತಿ
ಒರತೆಯಾಗಿದೆ
ಮಳಗೆ ಭೂಮಿ ನೆನೆದ ಹಾಗೆ
ಮನವು ಅರಳಿದೆ

ಬೆಂಕಿಯಂತೆ ದಹಿಸೊ ಚಿಂತೆಗೆ
ಮಂಜೆ ಆದೆ ನೀ
ಬೆಳವ ಚಂದ್ರನ ಹಾಗೆ ದಿನವು
ಒಲವು ತಂದೆ ನೀ

ನಾಳೆ ಸೂರ್ಯನ ಬೆಳಗಿನಂತೆ
ಖಾತ್ರಿ ಬದುಕಿಗೆ
ಹಾಲು ಜೇನಿನ ಸವಿಯ ಹಾಗೆ
ಹೆಣ್ಣೆ ಬದುಕಿಗೆ

ನೆನೆಪೆ ನಿನದು ಗಂಧದಂತೆ
ಬದುಕಿನಾಟದಿ
ಕಷ್ಟ ಕರಗೊ ಮೋಡದಂತೆ
ನಿನ್ನ ಮಾತಿದೆ

ಏರು ಇಳುವಿನ ಅಲೆಗಳಂತೆ
ನೋವು ನಲಿವಿದೆ
ಜಗವು ಮೆಚ್ಚುವಂತೆ ಬಾಳಿ
ಧನ್ಯರಾಗುವ

 - ಶ್ರೀ ತುಳಸಿದಾಸ ಬಿ ಎಸ್
  ಶಿಕ್ಷಕರು ಸಿಂಧನೂರು.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...