ಸೋಮವಾರ, ಜನವರಿ 15, 2024

ಬದುಕು ಬರಹ (ಕವಿತೆ) - ಶಿವಾ ಮದಭಾಂವಿ, ಗೋಕಾಕ.

ಬದುಕಿನ ಆಗುಹೋಗುಗಳೇ
ಕವಿ ಮನದಲ್ಲಿನ
 ಪ್ರತಿ ಪದಗಳು

ಮನಸ್ಥಿತಿಯ ಮಾತುಗಳೇ
ಅರಳಿ ಬರುವವು ಹೂವುಗಳು

ಒತ್ತಡದಲ್ಲೆಂದೂ ಬರದು
ಒಂದೂ ಪದಪುಂಜಗಳು

ಮನಶ್ಯಾಂತಿಗೆ ಬೇಕು ನಿದ್ದೆ
ನಿದ್ದೆ ಮಾಡಿ ಚಿಂತೆಗೆ ಕೊಟ್ಟು ಗುದ್ದು

ಏಳಿ ಏದ್ದೇಳಿ ಒಳ್ಳೆಯ ಯೋಚನೆ ಹೊತ್ತು
ನಿಮ್ಮ ಬದುಕು ರೂಪ ಮಾಡಿಕೊಳ್ಳಿ ಮುತ್ತು.

- ಶಿವಾ ಮದಭಾಂವಿ, ಗೋಕಾಕ.


ಮರಣ ಮಾಲಿಕೆ (ಕವಿತೆ) - ಬಿ ಎಂ ಮಹಾಂತೇಶ.

ಬದುಕಿನ ಮರಕೆ ಸುತ್ತಿದ,
ಕರುಳ ಬಳ್ಳಿಗಳನು ಕ್ಷಣದಲೆ ಬಿಡಿಸುವ,
ಸಾವೇ ನೀನೇದೆಂತ ಅದ್ಭುತ..
ನೀ ಮಾತಿಗಿಂತ ಹರಿತ...

ನಾನು ನನ್ನೆದೆಂಬುವ,
ಸೊಕ್ಕನು ಕುಕ್ಕುವ,
ನೆತ್ತಿಯ ಮೇಲಿನ ಹದ್ದೆ...
ತಿಳಿಯಲಿಲ್ಲ ನೀ ಬಂದ ಸದ್ದೆ..

ಇಳೆಯಗಲದ ಬಯಕೆಗಳನು,
ಮುಗಿಲಗಲದ ಕನಸುಗಳನು,
ಹೊತ್ತು ಸಾಗುವ ಪಯಣಕೆ...
ಒಮ್ಮೆಲೇ ಹಾಕುವೆ ಮರಣ ಮಾಲಿಕೆ...

ಎನಗರಿವಿಲ್ಲ ನಿನ್ನಾಗಮನ,
ಆದರೂ ನಿನ್ನ ಮೇಲೆಯೇ ನನ್ನ ಗಮನ,
ಒಂದಲ್ಲ ಒಂದು ದಿನ ನೀ ಬರುವುದು ಖಚಿತ...
ಬಂದಾಗ ನನ್ನ ನೆನಪುಗಳು ಮಾತ್ರ ಇಲ್ಲಿ ಪರಿಚಿತ...

- ಬಿ ಎಂ ಮಹಾಂತೇಶ
SAVT ಕಾಲೇಜ್ ಕೂಡ್ಲಿಗಿ
ವಿಜಯನಗರ,
9731418615

ಶುಕ್ರವಾರ, ಜನವರಿ 5, 2024

ಪ್ರೀತಿಯ ಅರಂಭ(ಕವಿತೆ) - ಆದರ್ಶ್ ಪಟೇಲ್, ಚಿಕ್ಕಮಗಳೂರು.

ಆರಂಭವೇ ನಿನ್ನಿಂದ ಈ ಪ್ರೀತಿಗೆ
ನಿನ್ನ ಕಂಡೊಡನೆ ನೂರಾರು ಕನಸುಗಳ ಹೆಣೆದೆ
ಹೇಳದೆ ಬಂದ ಒಲವನು ನಾ ಹೇಗೆ ಬೇಡವೆನ್ನಲೆ 
ಕನ್ನಡಿಯ ಮುಂದೆ ನಿಂತು ಕಣ್ಣು ಹೊಡೆಯೋದನ್ನು
 ನಿನಗಾಗಿ ಕಲಿತಿರುವೇನು

ಕನಸಿನ ಕಂಗಳಿಗೂ ನಿನ್ನದೇ ಅಲೆ 
ಈ ಉಸಿರಿಗೆ ಅನಿವಾರ್ಯ ನಿನ್ನದೇ ಪ್ರದಕ್ಷಿಣೆ
ಸ್ಮರಣೆಯ ಮಾಡುವೆ ನಿನ್ನದೇ ಹೆಸರನು
ರಾಶಿ ಕನಸುಗಳ ಹೊತ್ತು ತಂದೆ ನನ್ನೆದೆಯ ಹೊಸ್ತಿಲಲ್ಲಿ

ನೀನೊಮ್ಮೆ ಕನಸುಗಳ ಬಿತ್ತಿ ಬಾ ನಾ ಪ್ರೇಮ ಲೋಕವ ಕಟ್ಟುವೆ 
ಅಲೆದಾಡುವ ಈ ಮನಸ ಮನಸಾರೆ ಆಲಂಗಿಸಿ ಸೊಗಸಾದ ಕಥೆಯ ಬರೆಯಲು ಬಾ
ಸೃಷ್ಟಿಯೇ ಒಮ್ಮೆ ದೃಷ್ಟಿಯ ತೆಗೆಯಬೇಕು ಹೀಗೆ ಜೊತೆಯಾಗಿರೋಣ ಬಾ
ಅಂತರಂಗದಲ್ಲಿ ಅಲಂಕೃತಳಾಗಿ ನಲಿಯು ಬಾ
ಈ ಪ್ರೀತಿಯೆಂಬ ಹಾಡಿಗೆ ಹೊಸ ಶೀರ್ಷಿಕೆ ನೀನಾಗು ಬಾ.

- ಆದರ್ಶ್ ಪಟೇಲ್
ಚಿಕ್ಕಮಗಳೂರು.

ಬೆಂಕಿ ಮತ್ತು ಹೊಗೆ (ಕವಿತೆ) - ಪ್ರೊ ಗಂಗಾರಾಂ ಚಂಡಾಲ, ಮೈಸೂರು.

ಪಾರ್ಲಿಮೆಂಟ್ ಒಳಗೆ ಬೆಂಕಿ ಇಲ್ಲ ಹೊಗೆ ಮಾತ್ರ ಸಹಕರಿಸಿ. 

ವಿರೋಧಿ ತಲೆಯೊಳಗೆ
ಬೆಂಕಿ ಬಿದ್ದಿದೆ ಅಧಿಕಾರ ಇಲ್ಲದೆ.

ಜನರ ಹೊಟ್ಟೆ ಒಳಗೆ ಬೆಂಕಿ 
ಮಹಾಭಾರತ ಸಾಕ್ಷಿಯಾಗಿ .

ಭೂಮಿಗಾಗಿ ಸಂತತಿಗಾಗಿ ಕುಟುಂಬಕ್ಕಾಗಿ ಬೆಂಕಿ ಹಚ್ಚು ಹೊಗೆ ಹಾಕು. 

ಕರೋನಾ ಸಮಯ ಶ್ವಾಸಕೋಶದಲ್ಲಿ ಬೆಂಕಿ 
ಔಷಧಿ ಇಲ್ಲ. 

ಕಿಡ್ನಿಯಲ್ಲಿ ಬೆಂಕಿ  ತಂದಿದೆ ಕಲ್ಲು 
ನೀರು ಕುಡಿಯಿರಿ. 

ಹೊಗೆ ಜಾಸ್ತಿ ಪಾದಗಳು ತೊಡೆಗಳು ಅಲುಗಾಡುತ್ತಿವೆ. 

ಜನರ ಪ್ರತಿನಿಧಿ ಸಭೆಯಲ್ಲಿ ನಾಲಿಗೆ ಉಗುಳುತ್ತಿದೆ ಹೊಗೆ. 

ಯುವಕರ ಕೂದಲು ಬೆಳ್ಳಗಾಗಿವೆ ಹೊಗೆಯಿಂದ. 

ಬಂಡವಾಳ ಬೆಳೆಯುತ್ತಿದೆ ಕನಸುಗಳು ಕಮರಿವೆ ಉದ್ಯೋಗ ಸಿಗದೆ. 

ತುತ್ತಿನ ಚೀಲ ತುಂಬುವಂತೆ ಪಾರ್ಲಿಮೆಂಟ್ ಒಳಗೆ ಹೊಗೆ ಹಾಕಿರುವರಂತೆ. 

ಬೆಂಕಿಯಲ್ಲಿ ಬೇಯದೆ ಹೊಗೆಯಲ್ಲಿ ಉಸಿರು ಕಟ್ಟಿ ಸಾಯದೆ ಉಳಿದ ಯುವಕರು. 

ವಿಮಾನ ಉರಿದು ಕಣ್ಣುಗಳಲ್ಲಿ
ಮೂರನೇ ಕಣ್ಣು ತೆರೆದು ಹೊಗೆ. 

ಬೆನ್ನು ಮೂಳೆ ಮುರಿದ ಆಡಳಿತ 
ಯುವಕರ ಚರ್ಮ ಸುಲಿದು ನಾಯಿಪಾಡು. 

ಜೀರ್ಣ ಆಗದ ಉಚಿತ ಆಹಾರ 
ನಿರುದ್ಯೋಗ ಏನಿಲ್ಲ ವಿರೋಧಿ ಪಕ್ಷ ಮಸಲತ್ತು.

ಮದುವೆಗಳು ನಡೆಯುತ್ತಿವೆ 
ಕಷ್ಟ ಏನಿಲ್ಲ ಬಸ್ಸು ವಂದೇ ಭಾರತ ರೈಲು ತುಂಬಿ ತುಳುಕುತ್ತಿವೆ.

-ಪ್ರೊ ಗಂಗಾರಾಂ ಚಂಡಾಲ, ಮೈಸೂರು.

ನನ್ನಂತರಾತ್ಮ ನನಗೆ ಭೇಟಿಯಾದಾಗ (ಲೇಖನ) - ಕು.ತ್ರಿವೇಣಿ ಆರ್.ಹಾಲ್ಕರ್(ಶ್ರೀಷಡ್ಯಜ).

ಯಾಕೆ,ಯಾಕೆ, ಯಾಕೆ???....
ಈ ಪ್ರಶ್ನೆಯೊಂದೆ ನನ್ನ ಮನಸ್ಸನ್ನು ಸದಾ ಕೊರೆಯುತ್ತಿರುತ್ತದೆ.
ಅದನ್ನ ನನಗೆ ನಾನೇ ಕೇಳಿಕೊಂಡು ಕೇಳಿಕೊಂಡು ನನ್ನ ಕಣ್ಣೀರಿನ ಬುಗ್ಗೆಯು ಜಲಪಾತ ಧುಮುಕುವ ರಭಸದಷ್ಟೇ ಜೋರಾಗಿ ಧುಮುಕಿಬರುತ್ತಿದ್ದವು. ಆದರೆ ಕಾರಣ ಮಾತ್ರ ಸ್ಪಷ್ಟವಾಗಿ ತಿಳಿಯಲೇ ಇಲ್ಲ.

ಅದೇನೋ ಗೊತ್ತಿಲ್ಲ ಯಾಕಂತ, ನನ್ನ ನಂಬಿಕೆ ಮತ್ತು ಪ್ರೀತಿಗೆ ಪಾತ್ರವಾದವರೇ ನನ್ನ ನಂಬೋದಿಲ್ಲ, ನನ್ನ ಜೊತೆಗಿರುವುದಿಲ್ಲ. ನಾ ಇಷ್ಟಪಟ್ಟಿದ್ದೆಲ್ಲಾ ಕಂಡ ಕನಸಿನಂತೆ ಮಾಯಾವಾಗುತ್ತವೆ ಯಾಕೆ?.. ಮತ್ತೆ ಅದೇ ಪ್ರಶ್ನೆ ನನ್ನಲ್ಲಿ. ಯಾಕೆ ನಾನು ಮಾಡಿದ್ದೆಲ್ಲಾ ತಪ್ಪಾ? ಅವರ ಸ್ನೇಹ, ನಂಬಿಕೆ, ಪ್ರೀತಿ ಬಯಸಿದ್ದೆ ತಪ್ಪಾಯಿತಾ ಅಥವಾ ಅದನ್ನ ಅವರಿಗೆ ನೀಡಿದ್ದು ಅತಿಯಾಯಿತಾ?..ಮತ್ತೆ ಅದೇ ಕಾರಣದ ಬೆನ್ನತ್ತಿ ಹೊರಟಿತ್ತು ಮನಸ್ಸು. ಬಹಳಷ್ಟು ಪ್ರಶ್ನೆಗಳ ಸರಮಾಲೆ,ನಾನಷ್ಟು ಕೆಟ್ಟವಳಾ? ಅವರಿಗೆ ಕಿಂಚಿತ್ತೂ ಖುಷಿಯ ನೀಡಲಾಗದ ಅಸಹಾಯಕಿಯಾ? ನನ್ನ ಕಂಡು ಅವರ ಮುಖದ ಮೇಲೆ ನಗು ಬರಲಾರದಷ್ಟು ಕೂರುಪಿಯಾ? ನಾನೆಂದರೆ ಅಷ್ಟು ಅಸಹ್ಯವಾ? ಅವರ ನಂಬಿಕೆಗೆ ನಾನು ಅನರ್ಹಳಾ? ಏನದು ಕಾರಣ ನನಗೆ ಅರ್ಥವಾಗದ ಕಾರಣ ಏನದು....

ಇದನ್ನೇ ಚಿಂತಿಸಿ ಚಿಂತಿಸಿ ಕೊರಗುವ ಹೊತ್ತಿಗೆ,ಅದೇನೊ ಅಂತರಾತ್ಮವಂತೆ ನಾನದನ್ನೂ ಇಲ್ಲಿಯವರೆಗೂ ಕಂಡಿರಲಿಲ್ಲ, ಅದರೊಂದಿಗೆ ಮಾತನಾಡಿರಲಿಲ್ಲ. ಅಂದು ಅದೇನಾಯಿತೋ ನನ್ನ ಚಿಂತನೆಯನ್ನು ಕಂಡು ಅದಾಗಿಯೇ ನನ್ನೊಂದಿಗೆ ಮಾತಿಗಿಳಿದು ಬಿಟ್ಟಿತು. ಅದೇಗೆ ಮಾತನಾಡುತ್ತದೆಂದು ನೀವದರ ಜೊತೆಗೆ ಮಾತನಾಡಿದಾಗಲೇ ಅರ್ಥವಾಗುತ್ತದೆ. ನನಗೆ ಕೇಳಿತದು ”ಏನದು? ಏನು ನಿನ್ನ ಸಮಸ್ಯೆ? ಏಕೆ ಹುಚ್ಚಿಯಂತೆ ತಲೆಯನ್ನು ಪರಪರ ಅಂತ ಕೆರೆದುಕೊಳ್ಳುತ್ತಾ ಅಷ್ಟು ಚಿಂತಿಸುತ್ತಿರುವೆ?ಏನದು“ ಎಂದು ಒಮ್ಮೆಲೇ ಕೇಳಿಬಿಟ್ಟಿತು. ನಾನು ಇದ್ಯಾರಪ್ಪ ನನ್ನ ಪ್ರಶ್ನೆ ಮಾಡೊದಕ್ಕೆ, ನನ್ನಿಷ್ಟ ಕಷ್ಟ ಕೇಳೊದಕ್ಕೆ ಅಂತ ಸುಮ್ಮನಾದೆ. ಆದರೆ ಚಿಂತೆಗೀಡಾಗಿದ್ದ ಮನಸ್ಸಿಗೆ ಮಾತಾಡಲು ಯಾರಾದರೂ ಸಿಕ್ಕರೆ ಸಾಕು ಎಂಬಂತೆ ನನ್ನ ಮಾತು ತಾನಾಗಿಯೇ ನಿಧಾನವಾಗಿ ಹೊರಬರತೊಡಗಿದವು. ”ಚಿಂತೆ ಯಾಕೆಂದರೆ ಏನು ಅಂತ ಹೇಳಲಿ ನಿನಗೆ ಹಾಗೇ ಆಗುತ್ತದೆ. ನನ್ನೊಂದಿಗೂ ಕಷ್ಟ ಸುಖದಲ್ಲಿ ಯಾರಾದರೂ ಇರಬೇಕು. ನಾನು ಅವರೊಂದಿಗೆ ಮನಸ್ಸು ಬಿಚ್ಚಿ ಮಾತಾಡಬೇಕು. ಅವರ ಪ್ರೀತಿ ಗಳಿಸಬೇಕು, ನನ್ನವರು ಅಂತ ಹೇಳಿಕೊಳ್ಳಲು ಅವರು ಬೇಕು ಅನಿಸುತ್ತದೆ. ಆದರೆ ಅದು ಸಾಧ್ಯವಾಗದ  ಮಾತು, ನನ್ನವರು ನನ್ನ ನಂಬೋದೆ ಇಲ್ಲ, ನನ್ನೊಂದಿಗೆ ಮಾತಾಡುವುದಿಲ್ಲ, ನನ್ನೊಂದಿಗೆ ಇರುವುದಿಲ್ಲ, ಬೇಗ ನನ್ನಿಂದ ದೂರವಾಗಿಬಿಡುತ್ತಾರೆ .. ಯಾಕೆ ಅಂತ ತಿಳಿಯದೆ ಅಳು ಬಂದು ಇಷ್ಟು ಚಿಂತಿಸುತ್ತಿರುವೆ. ನಾನೇನು ಮಾಡಲಿ, ಎಲ್ಲರನ್ನೂ ಬಿಟ್ಟು ದೂರ ಒಬ್ಬಂಟಿಯಾಗಿ ಇರಲು ನನಗೆ ಸಾಧ್ಯವಾಗುತ್ತಿಲ್ಲ. ಮಾನವ ಸಮಾಜ ಜೀವಿಯೆಂಬಂತೆ ಅವರಿವರ ಸಂಗ ಬಯಸಲು ಮುಂದಾಗುತ್ತದೆ ನಾನೇನು ಮಾಡಲಿ “ ಎಂದು ಕಣ್ಣಂಚಲ್ಲಿ ನೀರು ತುಂಬಿಕೊಂಡು ಅದಕ್ಕೆ ಹೇಳಿದೆ.. 

ಒಂದು ಕ್ಷಣ ಅದು ಕೂಡ ಮೌನವಾಗಿತ್ತು. ನಂತರ ಸಮಾಧಾನದಿಂದ ತನ್ನ ಮಾತನ್ನು ಶುರು ಮಾಡಿತು, ನಾನು ಸುಮ್ಮನೆ ಅದರ ಮಾತನ್ನಾಲಿಸತೊಡಗಿದೆ  ”ನೋಡು ನಿನ್ನಲ್ಲಿ ಯಾವುದೇ ದೋಷಗಳಿಲ್ಲ ,ಆದರೆ ನಿನಗೆ ಈ ಸಮಾಜದ ಬಗ್ಗೆ ಅರಿವಿಲ್ಲ ಅಷ್ಟೇ, ಇಲ್ಲಿ ಯಾರು ಶಾಶ್ವತವಲ್ಲ, ಎಲ್ಲಾ ಕ್ಷಣಿಕವಷ್ಟೇ. ಯಾವಾಗ,ಯಾರು, ಹೇಗೆ,ಎಲ್ಲಿ,ಯಾರನ್ನ ಬಿಟ್ಟೊಗುತ್ತಾರೊ ಗೊತ್ತಿಲ್ಲ, ನೀನಿದನ್ನು ಮೊದಲು ಅರಿತುಕೊಂಡು ಸಮಾಧಾನಪಟ್ಟಿಕೊ. ನಿನ್ನವರು ಸದಾ ಜೊತೆಗಿರಲು ಸಾಧ್ಯವಿರುವುದಿಲ್ಲ, ಅವರಿಗೆ ಅವರದೆ ಆದ ಜವಾಬ್ದಾರಿ,ಕನಸು ಹಾಗೂ ಕೆಲಸಗಳಿರುತ್ತವೆ, ಕೇವಲ ನಿನ್ನ ಜೊತೆಯಿದ್ದರೆ ಅವರು ಅದನ್ನು ನಿಭಾಯಿಸುವುದು ಹೇಗೆ?. ನಿನಗೆ ಕಷ್ಟ ಅಂತ ಬಂದಾಗ ಯಾರು ನಿನ್ನ ಸಮೀಪಕ್ಕೆ ಸುಳಿಯುತ್ತಾರೋ ಅವರು ಯಾವಾಗಲೂ ನಿನ್ನವರಾಗಿಯೇ ಇರುತ್ತಾರೆ, ದೈಹಿಕವಾಗಿ ಅಲ್ಲದಿದ್ದರೂ ಮಾನಸಿಕವಾಗಿ ಮನಸ್ಸಲ್ಲುಳಿಯುತ್ತಾರಷ್ಟೇ ಅದನ್ನ ನೀನು ಅರ್ಥ ಮಾಡಿಕೊ. ನಿನ್ನ ಯಾರು ನಂಬೋದಿಲ್ಲ ಅಂತ ನಿನ್ಯಾಕೆ ಅಂದುಕೊಳ್ಳುತ್ತಿಯಾ, ನಿನ್ನ ಮೇಲೆ ನಂಬಿಕೆಯಿಟ್ಟು ಬದುಕುತ್ತಿರುವವರು ಬಹಳಷ್ಟು ಜನವಿರುತ್ತಾರೆ, ನಿನ್ನ ಹಿಂದೆಯೆ ಇರುತ್ತಾರವರು, ನೀ ಕೇವಲ ನಿನ್ನ ಮುಂದಿರುವವರನ್ನಷ್ಟೇ ನೋಡಿದರೆ ಹಿಂದಿರುವವರು ಹೇಗೆ ಕಾಣಬಲ್ಲರು. ನೀನು ಕಷ್ಟ ಸುಖದಲ್ಲಿ ಯಾರಾದರೂ ಇರಬೇಕು ಅಂತಿಯಲ್ಲ ಅದು ಸರಿ ಆದರೆ ನಿನ್ನ ಕಷ್ಟವನ್ನ ಯಾರ ಹತ್ತಿರವು ಹೇಳಿಕೊಳ್ಳಬೇಡ, ಸಾಧ್ಯವಾದರೆ ನಿನ್ನ ಖುಷಿಯಲ್ಲಿ ಎಲ್ಲರಿಗೂ ಪಾಲು ನೀಡು. ನಿನ್ನ ಯಾರು ಪ್ರೀತಿಸದಿದ್ದರೂ ಪರವಾಗಿಲ್ಲ ನೀನು ಎಲ್ಲರನ್ನ ಪ್ರೀತಿಸು, ಅದರಲ್ಲೇ ನಿನ್ನ ಖುಷಿಯನ್ನ ಕಂಡ್ಕೊ ಅಷ್ಟೇ. ನೀನ್ ಹಿಂಗೆ ಚಿಂತಿಸುತ್ತಾ ಕೂತರೆ ನಿನ್ನ ಅಮೂಲ್ಯವಾದ ಸಮಯ ಹಾಳಾಗುತ್ತದಷ್ಟೇ. ಚಿಂತೆ,ದುಃಖ ಇವುಗಳೆಲ್ಲ ಬರದ ಹಾಗೆ ತಡೆದು ಖುಷಿ ಪಡಲು ಕಾರಣಗಳನ್ನ ಹುಡುಕಬೇಕು ಅದನ್ನೆಲ್ಲಾ ಬಿಟ್ಟು ಈ ತರಹ ಅಳುತ್ತಾ ಕೂತರೆ, ಜೀವನದ ಅಂತ್ಯದವರೆಗೂ ಹೀಗೆ ಅಳುತ್ತಲೇ ಕೂರಬೇಕಾಗುತ್ತದೆ. ಅರ್ಥವಾಯಿತಾ ನಾನು ಹೇಳಿದ್ದು. ನಿನಗೆ ಏನಾದರೂ ಮಾತನಾಡಬೇಕೆನಿಸಿದರೆ ನನ್ನೊಂದಿಗೆ ಮಾತನಾಡು ಅದನ್ನೆಲ್ಲಾ ಬಿಟ್ಟು ಚಿಂತೆ ಮಾಡುತ್ತಾ ಕೂರಬೇಡ, ಆಯ್ತಾ?? ಸರಿ ಎದ್ದೇಳು ಈಗ ಹೋಗಿ ಮುಖ ತೊಳೆದು ಸ್ವಲ್ಪ ನಗುವನ್ನ ಮುಖದಮೇಲಿರಿಸಿ ನಿನ್ನ ಕೆಲಸ ಮಾಡು ಹೋಗು.. ಬೈ ಬೈ“ ಎಂದು ಹೇಳಿ ಮಾಯವಾಯಿತು. ಒಂದು ಕ್ಷಣ ನನ್ನಂತರಾತ್ಮ ಹೇಳಿದ್ದೆಲ್ಲಾ ಸತ್ಯ ಎಂದೆನಿಸಿತು. ಅದರ ಧೈರ್ಯದ ಮಾತು ಕೇಳಿ ಇಷ್ಟೊತ್ತು ಸುಮ್ನೆ ಅತ್ತ್ನಲ್ಲಾ ನಾನು ದಡ್ಡಿ ಎಂದು ಮನಸ್ಸಿನಲ್ಲೆ ನನ್ನ ನಾನೇ ಬೈದುಕೊಂಡೆ. ಅದು ಹೇಳಿದೆ ತರಹ ನಾನಿದ್ದರೆ ಬದುಕು ಸುಂದರವಾಗಿರುತ್ತದಲ್ಲವೇ ಎಂದೆನಿಸಿತು. ಆದರೆ ಆ ಕ್ಷಣಕ್ಕೆ ಮಾತ್ರ ನನ್ನಂತರಾತ್ಮವೇ ನನ್ನ ಪರಮಮಿತ್ರವಾಯಿತು.

- ಕು.ತ್ರಿವೇಣಿ ಆರ್.ಹಾಲ್ಕರ್(ಶ್ರೀಷಡ್ಯಜ)
ಗೊಬ್ಬರವಾಡಿ ಕಲ್ಬುರ್ಗಿ ಜಿಲ್ಲೆ
ಕೃಷಿ ಮಹಾವಿದ್ಯಾಲಯ ಕಲಬುರ್ಗಿಯ ವಿದ್ಯಾರ್ಥಿನಿ.

ನೆನಪಿನಂಗಳದ ಚಿತ್ತಾರ (ಲೇಖನ) - ಸುನಂಚಿ, ಉರಗನಹಳ್ಳಿ.

ಬಾಲ್ಯದ ನೆನಪು
ಬಳಿ ಬಂದು
ಮಗುವಾಗಿಸಿದ ದಿನ
ಹರೆಯ ಪ್ರಾಯದ 
ಗೋಡೆ ಮೇಲೆ
ಹಳೆಯ ನೆನಪಿನ
ದೀಪ ಹಚ್ಚಿದ ಕ್ಷಣ

ಮಾಸದ ನೆನಪು
ಎಂದಿಗೂ ತಂಪು
ಬಾಲ್ಯದ ಬದುಕು
ಬಾಳಿನ ಬೆಳಕು


ಬಾಲ್ಯ ಪ್ರತಿಯೊಬ್ಬರ ಜೀವನದಲ್ಲಿ ಬಂದೋಗುವ ಒಂದು ಅದ್ಭುತ ಕಾಲಘಟ್ಟ.ನಾವೀಗ ಅದನ್ನು ನೆನಪಿನ ಪರದೆಯನ್ನು ಸರಿಸಿ ನೋಡಲು ಮಾತ್ರವೇ ಸಾಧ್ಯ.ಅಂದಿನ ದಿನಗಳಲ್ಲಿ ಮಾಡಿದ ಚೇಷ್ಟೆ, ಆಡಿದ ಮಾತು,ಓಡಿದ ಜಾಗ ಎಲ್ಲವೂ ಕಣ್ಣ ಮುಂದೆ ಬಂದಾಗ ಒಮ್ಮೆ ನಾವು ಮತ್ತೆ ಮಗುವಾಗಿ ಬಿಡುತ್ತೇವೆ.ಹೌದು ಬಾಲ್ಯವೆಂದರೆ ಹಾಗೆ ಅಲ್ಲವೇ ಯಾವುದೇ ರೀತಿಯ ಗಂಡು ಹೆಣ್ಣೆಂಬ ತಾರತಮ್ಯವಾಗಲಿ,ಜಾತಿ ಮತಗಳೆಂಬ ಭೇದ ಭಾವವಾಗಲಿ ಕಾಣಿಸದು.ಅಲ್ಲಿ ಗೆಳೆತನವೆಂಬ ಬಿಗಿ ದಾರದಿಂದ ಬೆಸೆದು ಪ್ರೀತಿಯೆಂಬ ಹೂವಿನ ತೋಟದಲ್ಲಿ ಕೂಡಿ ಆಡುವುದೇ ಬಾಲ್ಯ ಜೀವನದ ಒಂದು ಸೊಬಗು‌.ಬಾಲ್ಯಾವಸ್ಥೆ ಮನುಜ ಜೀವನದ ಬಹುದೊಡ್ಡ ವರವೆಂದು ಹೇಳಿದರೂ ತಪ್ಪಾಗಲಾರದು.ಬಾಲ್ಯ,ಯವ್ವನ,ಹಾಗೂ ಮುಪ್ಪು ಈ ಮೂರು ಭೂಮಿಯ ಮೇಲಿನ ಪ್ರತೀಯೊಂದು ಜೀವಿಗೂ ಸಹಾ ಸಂಭವಿಸಬಹುದಾದಂತಹ ಕಾಲ ನಿಯಮ.ಕಾಲ ಕಳೆದಂತೆ ಇವುಗಳು ಸಹಾ ನಮಗರುವಿಲ್ಲದಂತೆ ಉರುಳಿ ಬಿಡುತ್ತವೆ.ಆದರೆ ನಾವು ಕಳೆದ ದಿನಗಳು ಅನುಭವಿಸಿದ ಕ್ಷಣಗಳು ಮಾತ್ರ ಸದಾ ನಮ್ಮೊಂದಿಗೆ ನೆನಪುಗಳಾಗಿ ಉಳಿದುಕೊಳ್ಳುತ್ತವೆ.ಉರುಳಿದ ದಿನಗಳನ್ನು ಅರಳಿದ ಹೂವುಗಳ ಹಾಗೆ ಮುಖದಲ್ಲಿ ನೆನಪಿನ ನಗು ತುಂಬಿಕೊಳ್ಳಲಷ್ಟೇ ಸಾಧ್ಯ. ಮೊನ್ನೆಯ ದಿನ ಬಾಲ್ಯ ಗೆಳೆಯ ಗೆಳತಿಯರೆಲ್ಲರೂ ಸೇರಿದ ದಿನ ಬಾಲ್ಯದ ನೆನಪುಗಳು ಮರುಕಳಿಸಿದಾಗ ನಾವೆಲ್ಲ ಆ ಒಂದು ಕ್ಷಣ ಮಕ್ಕಳಾಗಿ ಬಿಟ್ಟಿದ್ದೆವು.ಅಂದು ಕುಣಿದಾಡುತ್ತ ಓಡಾಡಿದ ಕಾರಿಡಾರ್, ನಾವು ಹಚ್ಚಿದ ತೆಂಗಿನ ಗಿಡ, ಕೂಡಿ ಆಡಿದ ಮೈದಾನ, ಕುಳಿತು ಪಾಠ ಕೇಳಿದ ತರಗತಿ,ಪ್ರತೀದಿನ ಹಾಕಿಕೊಂಡು ಬರುತ್ತಿದ್ದ ನೀಲಿ ಸಮವಸ್ತ್ರ, ಗುರುಗಳು ಬರೆಯುತ್ತಿದ್ದ ಬ್ಲಾಕ್ ಬೋರ್ಡ್‌, ಗೋಡೆಯ ಮೇಲೆ ನೇತು ಹಾಕಿದ್ದ ಚಿತ್ರ ಪಟಗಳು ಎಲ್ಲವೂ ಎಲ್ಲರನ್ನೂ ಒಮ್ಮೆ ನಮ್ಮ ಬಾಲ್ಯಕ್ಕೆ ಕರೆದುಕೊಂಡು ಹೋಗಿದ್ದವು.ಅದೆಷ್ಟೋ ವರ್ಷಗಳಿಂದ ಒಬ್ಬರನ್ನೊಬ್ಬರು ನೋಡಿರಲಿಲ್ಲ ಕೈ ಕುಲುಕಿ ಮಾತನಾಡಿರಲಿಲ್ಲ.ಆದರೆ ಆ ಒಂದು ದಿನ ನಾವೆಲ್ಲರೂ ಸೇರಿಕೊಳ್ಳಲು ಕಾರಣವಾಗಿತ್ತು.ನಮ್ಮ ಗುರುಗಳಾದ ಸುಮಿತ್ರಾ ಮಿಸ್ ಸತತವಾಗಿ ಸುಮಾರು
 ಇಪ್ಪತ್ತೈದು ವರ್ಷಗಳಿಂದ ನಮ್ಮೂರಿನ ನಮ್ಮ ಶಾಲೆಯಲ್ಲಿ ಮುಖ್ಯ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಿ ಇದೀಗ ತಮ್ಮ ವೃತ್ತಿ ಜೀವನಕ್ಕೆ ವಿದಾಯ ಹೇಳಬೇಕಿರುವುದು ಅನಿವಾರ್ಯ ಸನ್ನಿವೇಶವಾಗಿದ್ದರಿಂದ ನಾವೆಲ್ಲರೂ ಅವರಿಗೆ ಗುರುವಂದನಾ ಸಲ್ಲಿಸಲು ಸೇರಿದ್ದೆವು.ಕಾಲಿನ ಚಪ್ಪಲಿಗಳನ್ನು ಹೊರಗೆ ಬಿಟ್ಟು ಶಾಲೆಯೊಳಗೆ ಹೊಕ್ಕೊಡನೆ ಸುಮಿತ್ರಾ ಮಿಸ್ ಅವರನ್ನು ಮಾತನಾಡಿಸಿ ಅಂದು ಪುಟ್ಟ ಪುಟ್ಟ ಹೆಜ್ಜೆಗಳನ್ನು ಹಾಕಿಕೊಂಡು ಓಡಾಡಿದಂತೆ ಇಂದು ಸಹಾ ಎಲ್ಲರೂ ಮಿಸ್ ರವರ ಹಿಂದೆ ಮುಂದೆ ಓಡಾಡಿದೆವು.ನಂತರ ಪ್ರಭು ಸರ್,ಸಂಜೀವ್ ಸರ್,ಕವಿತಾ ಮಿಸ್ ರನ್ನು ಗೌರವಾದರದಿಂದ ಮಾತನಾಡಿಸಿದೆವು.ಪೂರ್ಣಿಮಕ್ಕ,ವಿಜಯಲಕ್ಷ್ಮಿ ಅಕ್ಕ,ಮೇಘನಕ್ಕ,ಗೀತಕ್ಕ,ಅಶ್ವಿನಿ ಅಕ್ಕ, ಭರತ್ ಅಣ್ಣ,ನಾಗರಾಜ್ ಅಣ್ಣ,ನಿತೀಶ್ ಅಣ್ಣ,ಮತ್ತೊಬ್ಬ ಭರತ್ ಅಣ್ಣ ರಾಕೇಶ್ ಅಣ್ಣ,ಮುರಳಿ,ಪ್ರೀತಿ,ಸಚಿನ್,ಕಾವ್ಯ,ಪವಿತ್ರಾ,
ವಸಂತ್,ಮೇಘರಾಜ್,ಅಮಿತ್,ಪ್ರಜ್ವಲ್,ಹಾಗೂ ನಾನು ಎಲ್ಲರೂ ಅಲ್ಲಿ ಹಾಜರಿದ್ದೆವು.ಕಾರಿಡಾರ್ ನಲ್ಲಿಯೇ ಎಲ್ಲರೂ ಬೆಂಚಿನಲ್ಲಿ ಕುಳಿತುಕೊಂಡು ಸ್ವಲ್ಪ ಹೊತ್ತು ಹರಟೆ ಹೊಡೆದೆವು.ವಾಸ್ತವ ಜೀವನದಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡಿದ್ದರ ಕೆಲಸ ಕಾರ್ಯ ಓದಿನ ಕುರಿತು ಒಬ್ಬರನ್ನೊಬ್ಬರು ಕೇಳಿ ತಿಳಿದುಕೊಳ್ಳುವ ಮೂಲಕ ಕಾಲ ಕಳೆದವು.ಆದಾದನಂತರ ಗುರುವಂದನಾ ಕಾರ್ಯಕ್ರಮ ತಯಾರಿ ತರಗತಿ ಕೋಣೆಯಲ್ಲಿ ನಡೆಯಿತು.ದೇವತೆಗಳಂತೆ ನೆರೆದಿದ್ದ ಮುದ್ದು ಮಕ್ಕಳ ಎದುರಿನಲ್ಲಿ ಸುಮಿತ್ರಾ ಮಿಸ್ ಗುರು ವಂದನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ನಂತರ ಸಂಜೀವ್ ಸರ್  ನಿರೂಪಣೆ ವಹಿಸಿಕೊಂಡು ಎಲ್ಲರನ್ನೂ ಸ್ವಾಗತಿಸಿದರು.ತದನಂತರ ಹಳೆಯ ವಿದ್ಯಾರ್ಥಿಗಳಾದ ನಾಗರಾಜ್ ಹಾಗೂ ನಿತೀಶ್ ಅಣ್ಣ ಪ್ರಾರ್ಥನಾ ಗೀತೆ ಹಾಡುವ ಮೂಲಕ ಕಾರ್ಯಕ್ರಮ ಮುನ್ನಡೆಸಿದರು. 
ಹಳೆಯ ವಿದ್ಯಾರ್ಥಿಗಳಿಂದ ಪರಿಚಯ ಹಾಗೂ ಅನಿಸಿಕೆ ಹಂಚಿಕೊಳ್ಳುವುದಾಗಿ ಹೇಳಿದಾಗ ಮೊದಲು ಸಚಿನ್ ನಿಂದ ಪ್ರಾರಂಭಗೊಂಡಿತು.ತನ್ನ ಹೆಸರು,ಮಾಡಿದ ವ್ಯಾಸಾಂಗ,ಮಾಡುತ್ತಿರುವ ಕೆಲಸದ ಬಗ್ಗೆ ಪರಿಚಯಿಸಿಕೊಂಡು ಕೆಲವು ಅತ್ಯುತ್ತಮ ಹಿತನುಡಿಗಳಿಂದ ಭಾಷಣವನ್ನು ಕೊನೆಗಾಣಿಸಿದ.ಹೀಗೆ ಪ್ರತಿಯೊಬ್ಬರು ತಮ್ಮ ತಮ್ಮ ಕೆಲಸದ ಬಗ್ಗೆ ಯಾವುದೇ ಮುಜುಗರವಿಲ್ಲದೆಯೇ ಮುಕ್ತವಾಗಿ ವ್ಯಕ್ತಪಡಿಸಿದರು. ಬಬ್ಬೊಬ್ಬರು ಒಂದೊಂದರಲ್ಲಿ ಆಸಕ್ತಿ ಹೊಂದಿದವರಾಗಿದ್ದು ಹೆಮ್ಮೆಯಿಂದ ಹೇಳಿಕೊಂಡರು.ಒಬ್ಬರು ಕೃಷಿಯಲ್ಲಿ,ಮತ್ತೊಬ್ಬರು ಕಂಪನಿಯಲ್ಲಿ,ಮತ್ತೆ ಕೆಲವರು ಕೆಲಸದ ಹುಡುಕಾಟದಲ್ಲಿ,ಮಗದೊಬ್ಬರು ಓದು,ಮನೆ ಹೀಗೆ ತಮ್ಮ ತಮ್ಮ ಅನುಭವದ ಅನಿಸಿಕೆಗಳೊಂದಿಗೆ ಸುಮಿತ್ರಾ ಮಿಸ್ ರವರ ಕುರಿತು ಗೌರವಾಭಿಮಾನ ಹಾಗೂ ಪ್ರೀತಿ ಪೂರ್ವಕವಾದ ಹಿತವಚನಗಳನ್ನಾಡಿ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ಮೂಡಿಸಿದರು.ಭವಿಷ್ಯದ ಬೆಳಕನ್ನು ಕಾಣ ಹೊರಟಿರುವ ಮುಗ್ಧ ಮಕ್ಕಳಿಗೆ ನೀವು ನಿಮ್ಮ ನಿಮ್ಮ ಕನಸನ್ನು ಬೆನತ್ತಿ ಹೋಗಿ ಎಂಬುದಾಗಿಯೂ ಹಾಗೂ ಹೆಚ್ಚಿನ ಓದಿನಿಂದಲೇ ಎಲ್ಲವೂ ಅಲ್ಲ  ಎಂಬ ಸಾಧನಾ ಮಂತ್ರವನ್ನು ತಿಳಿಯ ಪಡಿಸಿದರು.ನಮ್ಮೆಲ್ಲರ ಮಾತಿನ ನಂತರ ಸುಮಿತ್ರಾ ಮಿಸ್ ತಮ್ಮ ಜೀವನಾನುಭವ, ಬದುಕು, ಭರವಸೆ,ನಮ್ಮ ಬಾಲ್ಯದ  ದಿನದ ಮೆಲುಕು, ಸಾಧನಾ ಮಾರ್ಗದ ಕೆಲ ಹಿತನುಡಿ,
ಹಳೆಯ ವಿದ್ಯಾರ್ಥಿಗಳ ವ್ಯಕ್ತಿತ್ವ ಹಾಗೂ ಆಸಕ್ತಿದಾಯಕ ಕ್ಷೇತ್ರದ ಕುರಿತು ಒಂದಷ್ಟು ವಿಚಾರಗಳನ್ನು ಹರುಷದಿಂದ ಹಂಚಿಕೊಂಡರು. ಕಾರ್ಯಕ್ರಮದ ಕೊನೆಯಲ್ಲಿ ಶಾಂತವಾಗಿ ಕುಳಿತಿದ್ದ ಮಕ್ಕಳಿಗೆಲ್ಲ ಕೆಲವರು ಲೇಖನಿ ಹಾಗೂ ಸಿಹಿ ವಿತರಣೆ ಮಾಡಿದರು.ಇಳಿ ಸಂಜೆಯ ಸವಿ ಸಮಯ ಶಾಲೆಯ ಹಿಂಬದಿಯಲ್ಲಿರುವ ಮೈದಾನದಲ್ಲಿ ಮಿಸ್ ನಡುವೆ ನಿಂತು ಫೋಟೋಗಳನ್ನು ತೆಗೆಸಿಕೊಂಡು ಹರುಷಗೊಂಡೆವು.ಮತ್ತೆ ಆ ಬಾಲ್ಯದ ನೆನಪಿನಂಗಳದಲ್ಲಿ ಮಕ್ಕಳಾಗಿ ವಿಹರಿಸಿದೆವು.ಈ ರೀತಿಯಲ್ಲಿ ಅಂದು ಕುಳಿತಿದ್ದ ಬೆಂಚಿನಲ್ಲಿ ಇಂದು ಕುಳಿತು,ಅಂದು ಓಡಾಡಿದ ಕಾರಿಡಾರ್ ನಲ್ಲಿ ಇಂದು ಓಡಾಡಿ,ಅಂದು ಬೆರೆತಿದ್ದ ಸ್ನೇಹಿತರೊಂದಿಗೆ ಇಂದು ಬೆರೆತು ಮತ್ತೆ ಬಾಲ್ಯದ ಸುಂದರ ದಿನಗಳನ್ನು ಕ್ಷಣಗಳನ್ನು ಬರಮಾಡಿಕೊಂಡು ಬಹಳ ಸಂತೋಷದಿಂದ ಸಂಭ್ರಮಿಸಿದೆವು.ಬಿದ್ದು ಎದ್ದಂತಹ ನೆನಪು, ಹಾಡಿ ಕುಣಿದಂತಹ ನೆನಪು, 
 ನೆನಪು,ಆ ದಿನ ನಾವುಗಳೆಲ್ಲರೂ ಮಾಡಿದಂತಹ ತರಲೆ ತುಂಟಾಟಗಳು ಹಾಗೆ ಕಣ್ಣೆದುರಿಗೆ ಬಂದು ಬಿಡುತ್ತಿದ್ದವು.ನಮ್ಮ ಶಾಲೆ,ನಮ್ಮ ಗುರು,ನಮ್ಮ ಬಾಲ್ಯ ಜೀವನ ಪರ್ಯಂತ ನೆನಪುಳಿಯುವಂತಹ ಒಂದು  ಅದ್ಭುತ ಬದುಕು.ಮಾತ್ರವಲ್ಲದೆ ನಮ್ಮ ಮಿಸ್ ಸ್ಥಾನವನ್ನು ಇದುವರೆಗೂ ಯಾರು ತುಂಬಿಲ್ಲ ತುಂಬಲಾಗುವುದೂ ಇಲ್ಲ.ಹೀಗೆ ಪ್ರತೀ ಹೆಜ್ಜೆಯಲ್ಲೂ ನಮ್ಮನ್ನು ತಿದ್ದಿ ತೀಡಿ ಮುಂದೆ ತಂದು ಬೆಳೆಸಿದವರು ನಮ್ಮ ಸುಮಿತ್ರಾ ಮಿಸ್.ಅವರ ಮೂಲಕ ಅದೆಷ್ಟೋ ಮಕ್ಕಳು ಜ್ಞಾನ ಸಾಗರವನ್ನು ಸೇರುವಂತಾಯಿತು.ಆಸಕ್ತಿದಾಯಕ ಕ್ಷೇತ್ರದಲ್ಲಿ ಸ್ಪೂರ್ತಿ ಪಡೆಯುವಂತಾಯಿತು.ಅವರು ಅಂದು ಬಿತ್ತಿದ ಅಕ್ಷರ ಬೀಜ ಇಂದು ಹೆಮ್ಮರವಾಗಿ ಬೆಳೆದು ನಿಲ್ಲುವಂತಾಯಿತು.ಸುಮಿತ್ರಾ ಮಿಸ್ ಅನಿವಾರ್ಯವಾಗಿ ವೃತ್ತಿ ಜೀವನದಿಂದ ದೂರ ಸರಿಯುವಂತಾಗಿರಬಹುದು ಆದರೆ  ನಮ್ಮಂತಹ  ಲಕ್ಷಾಂತರ ವಿದ್ಯಾರ್ಥಿಗಳ ಹೃದಯಂತದಾಳಲ್ಲಿ ಸದಾ ಶಾಶ್ವತವಾಗಿ ನೆಚ್ಚಿನ ಗುರುವಾಗಿಯೇ ನೆಲೆಸಿರುತ್ತಾರೆ.ಅವರ ಸಹಯೋಗದಲ್ಲಿ ನಮ್ಮ ವಿದ್ಯಾಭ್ಯಾಸ ನಡೆದಿರುವುದು ಬಾಳಿನ ಮನೆಗೆ ಅಡಿಪಾಯ ಹಾಕಿದಂತಾಗಿದೆ.ಭವಿಷ್ಯದ ಬಾಗಿಲಿಗೆ ಹೊನ್ನ ಕಳಶವಿಟ್ಟಂತಾಗಿದೆ.ಅವರಲ್ಲಿ ಶಿಕ್ಷಣಭ್ಯಾಸ ಮಾಡಿದ ನಾವುಗಳೇ ಅದೃಷ್ಟಶಾಲಿಗಳು ಎಂದು ಆತ್ಮಸಾಕ್ಷಿಯಾಗಿ ಹೇಳಿಕೊಳ್ಳುತ್ತೇವೆ.ಹೀಗೆ ಗುರುವಂದನಾ ಕಾರ್ಯಕ್ರಮದ ದಿನ ಗೆಳೆತನ,ನೆನಪು,ಅನಿಸಿಕೆ, ಆನಂದದ ಮಳೆಗರೆದು ನಮ್ಮೆಲ್ಲರ ಮನ ತಂಪಾಯಿತು.....

- ಸುನಂಚಿ, ಉರಗನಹಳ್ಳಿ.
ದ್ವಿತೀಯ ಎಂ.ಎ...
ಜ್ಞಾನ ಸಹ್ಯಾದ್ರಿ ಶಂಕರಘಟ್ಟ 
ಶಿವಮೊಗ್ಗ...

ಯೋಗ (ಕವಿತೆ) - ಅರಬಗಟ್ಟೆ ಅಣ್ಣಪ್ಪ.

ನನಗೆ ಒಳ್ಳೆಯ ಕವಿಯಾಗುವ
ಯೋಗವಿಲ್ಲದಿರಬಹುದು
ರಸವು ರವಿಯಂತೆ ಉದಯಿಸುತ್ತದೆ
ನನ್ನ ಬದುಕೆಲ್ಲ ಹೂವು!

ನನಗೆ ಒಳ್ಳೆಯ ಸಂಗಾತಿಯಾಗುವ
ಯೋಗವಿಲ್ಲದಿರಬಹುದು
ಭಾವವು ಮಳೆಯಂತೆ ಸುರಿಯುತ್ತದೆ
ನನ್ನ ಬದುಕೆಲ್ಲ ಹಸಿರು!

ನನಗೆ ಒಳ್ಳೆಯ ಗುರುವಾಗುವ
ಯೋಗವಿಲ್ಲದಿರಬಹುದು
ಅರಿವು ವಜ್ರದಂತೆ ಮಿನುಗುತ್ತದೆ
ನನ್ನ ಬದುಕೆಲ್ಲ ಕನ್ನಡಿ!

ನನಗೆ ಒಳ್ಳೆಯ ಓದುಗನಾಗುವ
ಯೋಗವಿಲ್ಲದಿರಬಹುದು
ಆನಂದವು ಹೊಳೆಯಂತೆ ಹರಿಯುತ್ತದೆ
ನನ್ನ ಬದುಕೆಲ್ಲ ಸಾಗರ!

ನನಗೆ ಒಳ್ಳೆಯ ಬಂಧುವಾಗುವ
ಯೋಗವಿಲ್ಲದಿರಬಹುದು
ಸ್ನೇಹವು ಬೇರಿನಂತೆ ಇಳಿಯುತ್ತದೆ
ನನ್ನ ಬದುಕೆಲ್ಲ ಹೆಮ್ಮರ!

ನನಗೆ ಒಳ್ಳೆಯ ನಾನಾಗುವ
ಯೋಗವಿಲ್ಲದಿರಬಹುದು
ನಿಮ್ಮಲ್ಲಿ ನಿಮ್ಮಂತೆ ನಾನಿರುವೆ
ನನ್ನ ಬದುಕೆಲ್ಲ ನಿಮ್ಮದು!
- ಅರಬಗಟ್ಟೆ ಅಣ್ಣಪ್ಪ.

ಮುನ್ನಡೆ ನೀ ಒಂಚೂರು (ಕವಿತೆ) - ಜೀನಮ್ ಮಲ್ಲಾಡಿಹಳ್ಳಿ.

ಹುಟ್ಟೂರು ಬೇಳದೂರು ಇದ್ದೂರೂ ಕೊಟ್ಟೂರು
ಸತ್ತಾಗ ಹೊರುವರು ನಿನ್ನ ಹೆಂಗಾರು
ಸರಳಿಲ್ಲದೆ ನೀ ಬಾಳಿದ್ದು  ಎಸೂರು
ಆದರ್ಶವಾಗಿರು ಇರುವವರೆಗೆ ಒಂಚೂರು

ಇದ್ದಂತೆ ನೀ ಇದ್ದರೆ ಸೈ ಎನ್ನದು ಈ ಸೂರು
ನಿರ್ಧರಿಸು ಬದಲಾವಣೆಯ ಹೇಂಗಾರು
ಪ್ರಕೃತಿಯನೆ ಬದಲಾಯಿಸದೆ ಮುಂಗಾರು
ಎದೆಗೆಡದೆ ಮುನ್ನಡೆ ನೀ ಒಂಚೂರು

ಸುಮ್ಮನಾಗುವರು ಒಂದಿನ ವಿಮರ್ಶೆ ಕೊಟ್ಟೋರು
ನೀ ಗೆದ್ದರೆ ಜೊತೆ ನಿಲುವರು ನಿನ್ನೋರು
ಬೆನ್ನು ತಟ್ಟುವರು ನಿನ್ನ ಏಳಿಗೆ ಮೆಚ್ಚೂರು
ಪೀಳಿಗೆಯ ಏಳಿಗೆಗೆ ಮುನ್ನಡೆ ನೀ ಒಂಚೂರು 

ನಿನ್ನ ಏಳಿಗೆಯಲಿ ಹಿಗ್ಗುವುದು ಹುಟ್ಟೂರು
ನೀ ಬೆಳೆದಂತೆ ಬೆನ್ ತಟ್ಟುವುದು ಬೆಳದೂರು
ನಿನ್ನ ಹೆಸರ ಬೆಳೆಸುವುದು ಇದ್ದೂರು
ಸಂಭ್ರಮದಿ ಸಾಗುವುದು ಕೊಟ್ಟೂರು

ಇನ್ನಾದರೂ ಮುನ್ನಡೆ ನೀ ಒಂಚೂರು.

- ಜೀನಮ್ ಮಲ್ಲಾಡಿಹಳ್ಳಿ.

ಬದುಕ ಪಯಣ(ಕವಿತೆ) - ಸೌಮ್ಯ ಯು.ಜಿ.

ಬಾಡಿಗೆ ಬದುಕಿನಲ್ಲಿ ಪ್ರತಿ ದಿನವೂ 
ಕಂಬನಿಯ ಸುಂಕವ  ಕಟ್ಟಿ
ಬಾಯಿಬಿಡುತ್ತಿದೆ ಬಡಪಾಯಿ ಜೀವ

ಬಡತನದ ಬೆಂಕಿಯಲ್ಲಿ ಬೆಯಲಾರದೆ
ಋಣದ ಭಾರವ ಹೊರಲಾಗದೆ 
ಆದರ್ಶ ಬದುಕ ಬದುಕುವ 
ಕನಸ ಹೊತ್ತು 
ಬಾಡಿಗೆಯ ಬದುಕ ಸಾಗುತ್ತಿದೆ ಬಡಜೀವ

ಬದುಕ ಹೇಗೆ ಬದುಕಿದರೆ ಬಲಾದಿತು
ಎಂಬ ಚಿಂತೆಯಲ್ಲಿ
ಪ್ರತಿಕ್ಷಣವೂ ಸಾಗುತ್ತಿದೆ ಜೀವವು ಚಿತೆಯತ್ತ
ಬಾಡಿಗೆಯ ಬದುಕ  ಸಾಗುತ್ತಿದೆ ಬಡಪಾಯಿ ಜೀವ

ಬಿಸಿಲ ಬೇಗೆಯ ಬರಕ್ಕೆ
ಜಲವಿಲ್ಲದೆ ಒದ್ದಾಡಿ
ಕೂಳು ತಿನ್ನಲು ಬಿಡದ ಜವಾಬ್ಧಾರಿಯಲ್ಲಿ
ಬಾಡಿಗೆಯ ಬದುಕ ಸಾಗುತ್ತಿದೆ ಬಡಪಾಯಿ ಜೀವ

ಬದುಕ ಬದುಕಿ ಹೊಟ್ಟೆಬರೆ
ಈಡೇರಿಸಿ ಸಾಗಿಸಿದರೆ ಬದುಕ
ಅವರ ಪಾಡಿಗೆ ಅವರನ್ನ ಬಿಡದ            ಜನರ ಆಡಂಬರದ ಮಾತುಗಳು
ಕಿತ್ತು ಇನ್ನುತ್ತಿವೆ ಮನವ ಪ್ರತಿಕ್ಷಣವೂ
ಕಂಬನಿಯ ಸುಂಕವನ್ನು ಬೇಡುತ್ತಾ
ಬಾಡಿಗೆಯ ಬದುಕ ಸಾಗುತ್ತಿದೆ ಬಡಪಾಯಿ ಜೀವ

ಬದುಕ ಚಿಲುಮೆಯಲ್ಲಿ
ಚಿತ್ರ ಬಿಡಿಸುವ ಕನಸಹೊತ್ತು ಬಂದವರ ಬಾಳಿನಲ್ಲಿ
ವಿಧಿ ವಿಚಿತ್ರವನ್ನೇ ಬಿಡಿಸಿ 
ಅದರ ಅರ್ಥ ಹುಡುಕುವ ಸವಾಲವೊಡ್ಡಿ ನಿಂತಿದೆ 
ಈ ಬಡಪಾಯಿ ಬದುಕ ಪಯಣದಲ್ಲಿ.... 


- ಸೌಮ್ಯ ug.                 
ಕುಡಪಲಿ ಗ್ರಾಮ.           
BESM ಕಾಲೇಜ್ ಬ್ಯಾಡಗಿ.

ತಾಯಿಯ ಹಾರೈಕೆ (ಕವಿತೆ) - ಪ್ರೊ. ಜಯಶ್ರೀ ಹಿರೇಮಠ.

ನೀ ಜನಿಸಿದಂದು ನನ್ನೆಲ್ಲಾ ಕಷ್ಟ ಕರಗಿ
ಶಾಪ ವಿಮೋಚಿತಳಾದೆ ಆನಂದವಾಗಿ
ನನ್ನ ಬದುಕಿಗೊಂದು ಅರ್ಥ ಸಿಕ್ಕಿತೆಂದು
ಹಿರಿ ಹಿರಿ ಹಿಗ್ಗಿದೆ ಜೀವನವು ಬೇಕಾಗಿ//೧//

ಮಗು ನೀ ಕಂಡ ಕನಸೆಲ್ಲಾ ನನಸಾಗಲಿ
ಹಡೆದಿರುವೆ ಹಣೆ ಬರಹ ಬರೆಯಲಿಲ್ಲ
ಹೋರಾಟದಲ್ಲಿಂದು ಏಕಾಂಗಿ ನೀನು
ಗೆದ್ದಾಗ  ಜಗ ನಿನ್ನ ಹಿಂದೇ ಬರುವುದಲ್ಲ..! //೨//

ನಿನ್ನ ಹಿತ ಶತ್ರುಗಳನ್ನು ಸದಾ ದೂರವಿಡು
ಶರಣಾದ ಬದ್ಧ ವೈರಿಯನ್ನೂ ಕ್ಷಮಿಸಿಬಿಡು 
ಯುದ್ಧವೇ ಜೀವನವು  ಅಂತಾದ ಮೇಲೆ
ವೈರಿಗಳು ಎಷ್ಟಾದರೂ ಇರಲಿ ಬಿಡು//೩//

ಕಷ್ಟವೆಷ್ಟೇ ಬರಲಿ ಧರ್ಮವನ್ನು ಬಿಡದಿರು
ಸತ್ಯ ನಿಷ್ಠೆಗೆ ಗೆಲುವು ಶತ ಸಿದ್ಧವು ತಿಳಿದಿರು
ಬದಲಾವಣೆ ಜಗದ ನಿಯಮವು ತಿಳಿ ನೀನು
ರಾಜಿಸೂತ್ರಕೆ ಬಂದರೆ ರಾಜ್ಯಭಾರ ಬಿಡದಿರು//೪//

ಸೋಲಿನಾ ನಂತರ ಗೆಲುವಿರುವುದು ತಾಳು
ಇತಿಹಾಸ ರಚಿಸಿದವರು ಸೋತವರೆ ಕೇಳು
ಅದೃಷ್ಟದ ಬಾಗಿಲು ನಿನಗೆ ತೆರೆಯ ಬೇಕಷ್ಟೇ 
ಮುಂದೊಂದು ದಿನ ಸಾಧಿಸುವೆ  ಕೇಳು//೫//

ಅಕ್ಕ, ತಂಗಿಯರ ಹಾರೈಕೆ  ನಿನಗಿರುವುದು
ಮಗ ಗೆದ್ದು ಬರಲೆಂದು ತಾಯಿ ಬೇಡುವುದು
ಎಲ್ಲೇ ಇದ್ದರೂ ನೀ ನೆಮ್ಮದಿಯಿಂದಿರು ಮಗು
ನಿನಗೆ ಪರಶಿವನ ಕೃಪೆಯು ಕವಚ ಆಗುವುದು//೬//

ಅನ್ಯಾಯವನ್ನು ನೀನಿನ್ನು  ಸಹಿಸಿದ್ದು ಸಾಕು
ಧರ್ಮ ಮಾರ್ಗದಿ ನೀನು ನಡೆಯಲೇ ಬೇಕು 
ಕತ್ತೆಗೆ ಲತ್ತೆ ಪೆಟ್ಟೇ ಕೊಡ ಬೇಕು ಎಂದಾಗ
ರೌದ್ರ ರೂಪವ ನೀನು ತಾಳಲೇ  ಬೇಕು //೭//

- ಪ್ರೊ. ಜಯಶ್ರೀ ಹಿರೇಮಠ
ಆಯುರ್ವೇದ ಮತ್ತು ಜಾನಪದ ವೈದ್ಯರು ಮತ್ತು ಸಾಹಿತಿ, ಧಾರವಾಡ.
ಮೋ. 9449819425.

ಗಝಲ್ - ನಾಗರತ್ನ ಎನ್ ನಾಯ್ಕ,ಸಿದ್ದಾಪುರ.

ಮಾಂಗಲ್ಯ ಯೋಗದ ನಾಯಕಿಗೆ 
ಮಾಂಗಲ್ಯ ಭಾಗ್ಯ ದೊರಕಲಿಲ್ಲ ಏಕೆ ಸಖಿ
 ಸರ್ವಸ್ವವನ್ನು ತ್ಯಾಗ ಮಾಡಿದ ದೇವತೆಗೆ 
ಸಂಸಾರ ಸುಖವು ಲಭಿಸಲಿಲ್ಲ ಏಕೆ ಸಖಿ

ನಾಗಕನ್ನಿಕೆಯಂತ ಅಭಿನೇತ್ರಿಗೆ ಜೀವನ ಕೈಗೆಟುಕಲಿಲ್ಲವೇಕೆ
ನಂಬರ್ ಒನ್ ನಾಯಕಿ ಅನಿಸಿಕೊಂಡ ಲೀಲಾವತಿಗೆ
 ಜೀವನ ಶೂನ್ಯ ಎನಿಸಿತಾದರೂ ಏಕೆ ಸಖಿ

ಬಣ್ಣ ಬಣ್ಣದ ಲೋಕದಲ್ಲಿ 
ತೊಳೆದರೂ ಬಣ್ಣ ಕಳೆದುಕೊಳ್ಳದ 
ಬದುಕು ಕಟ್ಟಿಕೊಂಡ ಗಟ್ಟಿಗಿತ್ತಿಯ ಜೀವನ ತಲ್ಲಣಿಸಿತಾದರೂ ಏಕೆ ಸಖಿ

 ಒಂಟಿ ಹೆಣ್ಣಿನ ಜೀವನ
 ಅಂದುಕೊಂಡಷ್ಟು ಸುಲಭವಲ್ಲ 
ಅವಳೆಲ್ಲ ಏಳು ಬೀಳುವಿನಲ್ಲಿ ಕಂದ ಜೊತೆಗಿರುವನಲ್ಲ 
ಆದರೂ ಬದುಕು ಸಾರ್ಥಕವೆನಿಸಲಿಲ್ಲ ಅನಿಸಿತ್ತಾದರೂ ಏಕೆ ಸಖಿ

 ಹೆಣ್ಣು ಕುಲಕ್ಕೆ ಮಾದರಿಯಾದ ಮಹಿಳೆ
 ಸಮಾಜಕ್ಕೆ  ಕೊಟ್ಟ ಕೊಡುಗೆ ಕಡಿಮೆಯಲ್ಲ ಹರಿಪ್ರಿಯೆ
 ಬ್ರೂಣ ಹತ್ಯೆ ಮಾಡುವವರು ಒಮ್ಮೆ ಯೋಚಿಸುವುದಿಲ್ಲ ಏಕೆ ಸಖಿ.

- ನಾಗರತ್ನ ಎನ್ ನಾಯ್ಕ,
ಸಿದ್ದಾಪುರ.

ಸಂಭ್ರಮ (ಕವಿತೆ) - ಸುಭಾಷ್ ಸವಣೂರ.

ಬಾನಂಗಳ
ಕಂಗೊಳಿಸುವುದು,
ಮಿನುಗುವ
ನಕ್ಷತ್ರದಿಂದಲ್ಲ,
ಚದುರಿದ
ತಿಳಿ ಮೋಡದಿಂದಲ್ಲ,
ಕೇವಲ ಮಾತ್ರ
ಶಶಿಯ ಬೆಳಕಿಂದ….,
ಈ ಮನಸು
ಸಂಭ್ರಮಿಸುವುದು,
ಮಾನಿನಿಯ
ಮಾದಕತೆಯಿಂದಲ್ಲ,
ಹೆಂಗಳೆಯರ 
ಸಹವಾಸದಿಂದಲ್ಲ,
ಕೇವಲ ನಿನ್ನ
ಚೆಲುವಿನ ನೋಟದಿಂದ
ಗೆಳತಿ

- ಸುಭಾಷ್ ಸವಣೂರ.

ಬುದ್ಧ ನಗುತ್ತಿದ್ದಾನೆ (ಕವಿತೆ) - ಚಂದ್ರಕಲಾ ನೀರಾಳ.

ಎತ್ತ ನೋಡಿದರೂ
ಹೊಗೆ, ಬೆಂಕಿ, ಗುಂಡಿನ
ಸುರಿಮಳೆ!
ಎತ್ತ ಸಾಗಿದರೂ
ಸಾವು, ನೋವು, ಯಾತನೆ!
ಅನಾಥರು, ಅಂಗಾಂಗ ಕಳಕೊಂಡವರು
ಅರೆಬೆಂದ ಶವಗಳು.

ಮೂಢರ ಅಟ್ಟಹಾಸಕೆ
ಬೆಲೆಯಿಲ್ಲದೆ ಹೋದ
ಮಾನವದೇಹ!
ಅಮಾನವೀಯತೆಯು
ಮೇರೆ ಮೀರಿದೆ
ಮನಸ್ಸು ಮನಸ್ಸುಗಳೊಳಗೆ
ಮೊಳೆತು ಬಲಿತು ಹೆಮ್ಮರವಾಗಿ.

ಬದುಕಿನ ಮರ್ಮವನರಿಯದೆ
ಅಜ್ಞಾನಿಯಂತೆ 
 ಹಿಂಸೆಯ ಪಥದಿ 
ಮುನ್ನುಗ್ಗುವ ಮಾನವನ
ಮೂರ್ಖತನ ಕೊನೆಗಾಣದೆ 
ಯುದ್ಧ ಭೀತಿ ತೊಲಗುವುದೇ?
ವಿಶ್ವಶಾಂತಿ ನೆಲೆಗೊಳ್ಳುವುದೇ ?

ಬುದ್ಧ ನಗುತ್ತಿದ್ದಾನೆ...
ನಗುತ್ತಲೇ ಇದ್ದಾನೆ.....!
- ಚಂದ್ರಕಲಾ ನೀರಾಳ, ಕಾಸರಗೋಡು.

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...