ಗುರುವಾರ, ಮಾರ್ಚ್ 30, 2023

ಶ್ರೀ ರಾಮನವಮಿ (ಕವಿತೆ) - ಶಾರದ ದೇವರಾಜ್ ಎ ಮಲ್ಲಾಪುರ.

 ರಾಮ  ಬಾ....
 ಶ್ರೀರಾಮ  ಬಾ....
 ರಾಮ  ಬಾ....
 ರಘುರಾಮ  ಬಾ.... l2l

   ಕೌಸಲ್ಯೆಯಾ.... 
ಸುತನೆ ನೀ ಬಾರೋ
 ದಶರಥನಾ....
 ನಂದ ಕಿಶೋರ ನೀ ಬಾರೋl2l

  ರಾಮ  ಬಾ....l2l

 ಭರತ ಲಕ್ಷ್ಮಣ ರಾ....
 ಪ್ರಿಯ ಅಗ್ರಜನೇ ಬಾರೋ....
 ರಾಮ ರಾಜ್ಯದಾ....
 ಶ್ರೀಹರಿ ಅವತಾರವೇ ನೀ ಬಾರೋl2l

 ರಾಮ ಬಾ....l2l

 ಸೀತಾದೇವಿಯಾ....
 ಜೀವನಾಡಿಯೇ ನೀ ಬಾರೋ....
 ಲವಕುಶ ರಾ....
 ಜನ್ಮದಾತನೇ ನೀ ಬಾರೋ....l2l

 ರಾಮ ಬಾ....l2l

 ಆಂಜನೇಯ ನಾ....
 ಪ್ರಿಯ ಜೀವವೇ ನೀ ಬಾರೋ....
 ವಾನರಾ   ಕುಲದಾ....
 ಶ್ರೇಷ್ಠ ದೈವವೇ ನೀ ಬಾರೋ....l2l

 ರಾಮ  ಬಾ....l2l

 ಸೀತಾಮಾತೆ ಯಾ....
 ಅಪಹರಿಸಿದಾ....
 ರಾವಣಸುರನಾ....
 ಸದೆಬಡಿದ....l2l

 ರಾಮ  ಬಾ....l2l

 ಸತ್ಯ ಧರ್ಮ ದಾ.... ನೆಲೆಯಾದೆ
 ನ್ಯಾಯನೀತಿಗೆ.... ನೀ ತಲೆಬಾಗಿದೆ
 ಭುವನದೊಳೆಲ್ಲಾ ....ಏಕಪತ್ನಿಸ್ತನಾದೆ
  ಧರೆಯ ಜನರೆಲ್ಲ ....ನಮಿಸುವವನಾದೆl2l

 ರಾಮ  ಬಾ....l2l

 ರಾಮನೆಂಬುವ ಭಕ್ತಿಯ ತುಂಬುತ
 ಹನುಮನೆಂಬುವ ಶಕ್ತಿಯ ಬೆರೆಸುತ
  ಲೋಕೋದ್ಧಾರಕ್ಕೆ ಸಹಿಸಿ ಶ್ರಮಿಸುತ
 ಭಕ್ತ ರೆಲ್ಲರನು ಹರಸಿ ಹಾರೈಸುತl2l

 ರಾಮ  ಬಾ....l2l
 - ಶಾರದ ದೇವರಾಜ್ 
 ಎ  ಮಲ್ಲಾಪುರ.

ಸೃಷ್ಟಿಯೊಳಗೆ ವಿಸ್ಮಯ ಶಕ್ತಿ (ಕವಿತೆ) - ಶ್ರೀ ವೆಂಕಟೇಶ ಬಡಿಗೇರ್.

ಕಣ್ತುಂಬ ಪ್ರೀತಿಯ ಮಮತೆಯ ಹಣತೆಗಳು
ಮೋಡದ ತೆರೆ ಮರೆಯಲಿ
ಗೋಚರಗೊಂಡುಮರೆಯಾದ ಅಗೋಚರ ಚಂದ್ರ ನನ್ನಪ್ಪ
ಕ್ಷಣಿಕ ಸಂಬಂಧ ನಾವು ಮಣ್ಣ ಕುಸುಮಗಳು!!

ದ್ವೇಷ ಅಸೂಯೆ ನಾನೆಂಬ
ಕಿಚ್ಚು ಕೊಚ್ಚು
ಎದೆಯ ಬೆಂಕಿ ನಂದಿಸು
ಸರ್ವರ ಉಸಿರೊಳಗೆ
ಹೊತ್ತಿಸಿಬಿಡು ಜ್ಞಾನಜ್ಯೋತಿಗಳು!!


 ಸೃಷ್ಟಿಯೊಳಗೆ ವಿಸ್ಮಯ ಶಕ್ತಿ
ಮಾನವ ನಡೆದಾಡುವ ದೇವರು
ಕಾರುಣ್ಯ ಚಿನ್ಮಯಿ
ನಗುವ ನಕ್ಷತ್ರಪುಂಜಗಳಲಿ
ಮಿಂಚೊಂದು ಜಾರಿತು
ಮಳೆ ಹನಿ ಹನಿಯಾಗಿ ಧರೆಗೆ ಇಳಿಯಿತು!!

ಹಸಿರು ಚಿಗುರೊಡೆದು ನಗುವ ಹೂವು
ಕಾಯಿ ಹಣ್ಣಾಗಿ ಸಿಹಿಯಾಗೋಣ
ಹೊಂಬಣ್ಣ ಮೂಡಿಬರಲಿ
ಬದುಕ ಬಣ್ಣದೊಳಗೆ
ಹೂ ಬಾಡದರೊಳಗೆ ಒಮ್ಮೊಮ್ಮೆ ಸುಂದರವಾಗಿ ನಕ್ಕು ಬಿಡು!!

ಸೃಷ್ಟಿ ಚೈತನ್ಯ ಗುಡಿಯೊಳಗೆ 
ದಿವ್ಯ ಜ್ಯೋತಿ ಬೆಳಗಲಿ
ತೇಲಿ ಬರುವ ಮೋಡದಲಿ
ಹಕ್ಕಿಯಂತೆ ಹಾರೋಣ
ಬೇಲಿ ಬಳ್ಳಿಯಲಿ ನಗುವ ಚಿಕ್ಕ ಚಿಕ್ಕ ಹೂವಾಗೋಣ!!
- ಶ್ರೀ ವೆಂಕಟೇಶ ಬಡಿಗೇರ್, ಜಿಲ್ಲಾಧ್ಯಕ್ಷರು
 ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್, ವಿಜಯನಗರ ಜಿಲ್ಲಾ ಘಟಕ.


ನಾಗರೀಕತೆ (ಸಣ್ಣ ಕತೆ) - ಮಾಲತಿ ಮೇಲ್ಕೋಟೆ.

ಶಿಕ್ಷಕಿಯಾಗಿ ನನ್ನ ಮೊದಲ
ನೇಮಕಾತಿ ಕುಗ್ರಾಮವೊಂದಕ್ಕೆ
ಆದಾಗ ಮನೆಯಲ್ಲಿ ಬಹಳ
ವಿರೋಧವಿತ್ತು.ನನ್ನ ಹುಮ್ಮಸ್ಸನ್ನು ನೋಡಿ,ತಂದೆ-
ಯವರು ಆ ಗ್ರಾಮಕ್ಕೆ ೪ಕಿ.ಮೀ.
ದೂರದಲ್ಲಿದ್ದ ಸ್ವಲ್ಪ ದೊಡ್ಡ
ಹಳ್ಳಿಯೊಂದಕ್ಕೆ ನನ್ನ ಜೊತೆ
ಬಂದು,ಮನೆ ಮಾಡಿಕೊಟ್ಟು
೪ದಿನ ನನ್ನ ಜೊತೆಯಲ್ಲಿದ್ದು
ಹಿಂದಿರುಗಿದರು.ನಾನು ವಾಸ-
ವಾಗಿದ್ದ ಹಳ್ಳಿಯಿಂದ ಬೆಳಿಗ್ಗೆ
೯ಕ್ಕೆ,ಸಂಜೆ ನನ್ನ ಶಾಲೆಯಿದ್ದ
ಗ್ರಾಮದಿಂದ ೫-೩೦ಕ್ಕೆ ವಾಪಸ್
ಬರಲು ಬಸ್ ಅನುಕೂಲವಿತ್ತು.
೧೫-೨೦ ನಿಮಿಷದ ಪ್ರಯಾಣ-
ವಷ್ಟೇ.ಕಿಟಕಿಗೆ ಮುಖವಿಟ್ಟು
ಪ್ರಕೃತಿ ಸೌಂದರ್ಯವನ್ನು
ಸವಿಯುತ್ತಾ ಸಮಯ ಕಳೆ-
ಯುವುದೇ ತಿಳಿಯುತ್ತಿರಲಿಲ್ಲ.

         ಅರ್ಧ ದಾರಿಯಲ್ಲಿ ಒಂದು
ಸಾರಾಯಿ ಅಂಗಡಿಯಿತ್ತು.ಸಂಜೆ
ವಾಪಸ್ ಬರುವಾಗ ೭-೮ ಜನ
ಹಳ್ಳಿಗರು ಅಲ್ಲಿರುತ್ತಿದ್ದರು.
ನನಗಂತೂ ಅವರನ್ನು ನೋಡಿದರೇ ಕೋಪ ಬರುತ್ತಿತ್ತು.

          ೪ ತಿಂಗಳವರೆಗೆ ಎಲ್ಲವೂ
ಸುಸೂತ್ರವಾಗಿತ್ತು..ಒಂದು 
ದಿನ ಸಂಜೆ ಬಸ್ ಬರಲೇ ಇಲ್ಲ.
ಶಾಲೆಯಿಂದ ನನ್ನ ಹೊರತು
ಇನ್ನಿಬ್ಬರು ಹುಡುಗರು ಆ ಬಸ್
ಹತ್ತಿ ನಾನು ವಾಸವಿದ್ದ ಗ್ರಾಮಕ್ಕೆ
ಹೋಗುತ್ತಿದ್ದೆವು.ಆರರವರೆಗೂ
ಕಾದು ಆ ಹುಡುಗರೊಡನೆ
ನಡೆಯುತ್ತಾ ಹೊರಟೆ.ನಡೆದು
ಹೋದರೆ ಒಂದು ಗಂಟೆಯ
ದಾರಿ.ಕತ್ತಲಾವರಿಸುತ್ತಿತ್ತು.

      ಅರ್ಧ ದಾರಿ ಹೋಗುತ್ತಿ-
ದ್ದಂತೆ ಸಾರಾಯಿ ಅಂಗಡಿ,
ಮುಂದಿದ್ದ ಅದೇ ಏಳೆಂಟು ಜನ
ಕಂಡರು.ಅಷ್ಟು ದೂರದಿಂದಲೇ
ನನಗೆ ಭಯ ಶುರುವಾಯ್ತು.
ನನ್ನ ಜೊತೆಯಿದ್ದ ಹುಡುಗರು
ಏಳೆಂಟು ವರ್ಷದವರು.ಬೇರೆ
ದಾರಿಯಿಲ್ಲದೆ ಧೈರ್ಯ 
ಒಗ್ಗೂಡಿಸಿಕೊಂಡು ನಡೆದೆ.
ಅವರೆಲ್ಲರೂ ಒಟ್ಟಾಗಿ ನನ್ನತ್ತ
ಬರತೊಡಗಿದರು.ನನಗಂತೂ
ಜಂಘಾಬಲ ಉಡುಗಿಹೋಯ್ತು
ಕರೆದರೆ ಓ ಅನ್ನಲೂ ಯಾರೂ
ಇಲ್ಲದಂಥ ನಿರ್ಜನ ಪ್ರದೇಶ.
        
   ‌‌.       ಎಲ್ಲರೂ ಒಟ್ಟಾಗಿ ಕೈ
ಮುಗಿಯುತ್ತಾ,"ಅಡ್ಬಿದ್ದೆ 
ಮ್ಯಾಡಮ್ಮೋರೆ,ನಮ್ ಐಕ್ಳಿಗೆ
ಪಾಠ ಏಳ್ಕೊಡೋ ದ್ಯಾವ್ರು
ನೀವು"ಎಂದರು.ಸ್ವಲ್ಪ ಧೈರ್ಯ
ಬಂತು."ಈ ದಿನ ಬಸ್ ಬಂದಿಲ್ವ"
ಎಂದ ಒಬ್ಬಾತ.ನಾನು ಇಲ್ಲವೆಂದು ತಲೆಯಾಡಿಸಿದೆ.
"ನಿಮ್ ಅಳ್ಳೀವರ್ಗೂ ಬುಟ್
ಬರಾದಾ ಮ್ಯಾಡಮ್ಮೋರೆ"ಎಂದ
ಮತ್ತೊಬ್ಬ.ನಾನು ಬೇಡವೆಂದೆ.
ನನ್ನ ಜೊತೆಯಿದ್ದ ಹುಡುಗರಿಗೆ
"ಮ್ಯಾಡಮ್ಮೋರ್ನ ಜ್ವಾಪಾನ್ವಾಗಿ
ಕರ್ಕೊಂಡೋಗ್ರೋ"ಎಂದು
ತಾಕೀತು ಮಾಡಿ ಮತ್ತೆ ನಡು
ಬಾಗಿ ಕೈಮುಗಿದರು.ಅನಾಗರಿಕ-
ರಂತೆ ಕಂಡ ಅವರಲ್ಲಿದ್ದ ಒಳ್ಳೆಯತನವನ್ನು ಕಂಡು
ಮನಸ್ಸು ಮೂಕವಾಯಿತು.
- ಮಾಲತಿ ಮೇಲ್ಕೋಟೆ.

ಎಲ್ಲಿಯ ಬಂಧ (ಕವಿತೆ) - ಮಧುಮಾಲತಿ ರುದ್ರೇಶ್.

ಹೂವಿನೊಂದಿಗೆ ನಾರಿಗೂ ಸ್ವರ್ಗದ ಭಾಗ್ಯ 
ಸಜ್ಜನರ ಸಹವಾಸದಿಂದ ಆಗಬೇಕಿದೆ ಯೋಗ್ಯ 

ಎಲ್ಲಿಯ ಹೂವೊ ಯಾವ ಚರಕದ ದಾರವೊ
 ಬಂಧ ಬೆಸೆದು ಮಾಲೆಯದು ಧನ್ಯವೊ

 ಯಾವ ಕಡಲಲೆಯಲ್ಲೊ ಅಡಗಿದ್ದ ಲವಣ 
ಯಾವುದೋ ಮನೆಯ ಪ್ರಸಾದದ ರುಚಿಗೆ ಕಾರಣ

 ಯಾವ ಕಾಮಧೇನುವಿನ ಕ್ಷೀರವದು ತಾ
 ಯಾವುದೋ ಹಸುಗೂಸಿಗೆ ಆಗುವುದು ಜೀವಾಮೃತ

 ಯಾವುದೋ ತೋಟದಿ ಸೊಂಪಾಗಿ ಚಿಗುರಿದ ಮಾಮರ
 ಯಾವ ಮರಿ ಕೋಗಿಲೆಯ ಕಂಠದಲಿ ಹೊರಟ ಸುಸ್ವರ

 ಅದಾವ ಹೂದೋಟದಿ ಅರಳಿದ ಸುಮದ ಮಕರಂದ
  ಅದಾವುದೋ ಭೃಂಗ ಸಂಗಕೆ ಸೋತು ಸವಿಜೇನಾದ ಅಂದ

 ಪ್ರಕೃತಿಯ ಅಂಗಳದಿ ಪ್ರತಿ ಕಣಕಣವೂ ಧನ್ಯ 
ಭಗವಂತನ ಮಡಿಲಿನಲಿ ಪ್ರತಿ ಜೀವಿಯು ಮಾನ್ಯ 
- ಮಧುಮಾಲತಿ ರುದ್ರೇಶ್,
ಬೇಲೂರು.


ನನ್ನವರು (ಕವಿತೆ) - ಸಬ್ಬನಹಳ್ಳಿ ಶಶಿಧರ.

ಇವರೆಲ್ಲರು ನನ್ನವರು
ದಿನಪಮಾನ ಮಾಡುವವರು
ಒಳಗೊಳಗೆ ಕುದಿವವರು
ಹೊರಗೆ ತೋರಗೊಡದವರು.

ಮಾನಾಪಮಾನಗಳು 
ದಿನ ನನಗವೆ ಬಿರುದುಗಳು
ಮೂದಲಿಕೆ ಮಾತುಗಳು
ನನ್ನೇಳಿಗೆ ಮಜಲುಗಳು.

ಅವರೆನ್ನ ಪರಮಾಪ್ತರು
ಮುಖಸ್ತುತಿಯ ಮನುಜರು
ಹಿಂದೆ ತೆಗಳಿ ಜರಿವವರು
ಮುಂದೆ ಹೊಗಳಿ ನಗುವವರು.

ನನಗವರೆ ಗುರು ಹಿರಿಯರು
ನನ್ನ ಬದುಕಿನ ಮಹಾಗಣ್ಯರು
ನನ್ನ ಹಾದಿಯ ಪುರುಷರು
ನನಗೆ ದಾರಿ ತೋರಿದವರು 

ಈ ಪೆದ್ದನ ತಿದ್ದಿದವರು 
ಪ್ರೀತಿಯಿಂದ ಕಂಡವರು
ಬದಲಾಗದ ನನ್ನವರು
ನನ್ನ ಬದಲು ಮಾಡಿದವರು.
   
     
- ಸಬ್ಬನಹಳ್ಳಿ ಶಶಿಧರ.

ಬಯಲುಡುಗೆಯ ಬೊಂತಾದೇವಿ (ಲೇಖನ) - ಶ್ರೀಮತಿ ಸುಲೋಚನಾ ಮಾಲಿಪಾಟೀಲ, ಧಾರವಾಡ.

ಸವಾಲಕ್ಷ ದೇಶದ ರಾಜಧಾನಿ  ಮಾಂಡವ್ಯಪುರದಲ್ಲಿ ಮಹಾದೇವ ಭೂಪಾಲನ ತಂಗಿ ನಿಜದೇವಿ ಅಕ್ಕಮಹಾದೇವಿಯಂತೆ ನಿಷ್ಕಳಂಕ ಮಲ್ಲಿಕಾರ್ಜುನನ ಭಕ್ತಳಾಗಿದ್ದಳು. ಮಾಂಡವ್ಯ ಪುರದ ತುಂಬೆಲ್ಲ ಶಿವದೇವಾಲಯಗಳು, ಶಿವಲಿಂಗಗಳು, ಹೂಬನಗಳು ತುಂಬಿಕೊಂಡಿದ್ದವು. ಆತನ ಆಸ್ಥಾನದಲ್ಲಿ ಬೇರೆ ದೇವರ ಪೂಜಿಸದೆ ನಿಷ್ಕಳಂಕ ಮಲ್ಲಿಕಾರ್ಜುನನನ್ನೇ ಪೂಜಿಸುವ ಕಟ್ಟಾಜ್ಞೆ ಆಗಿತ್ತು. ಒಂದು ದಿನ ಮಾಂಡವ್ಯಪುರಕ್ಕೆ ಬಂದ ಒಬ್ಬ ವ್ಯಾಪಾರಿ ತನ್ನ ಕೊರಳಲ್ಲಿದ್ದ ಲಿಂಗವ ಅಂಗೈಯಲ್ಲಿಟ್ಟು ಪೂಜಿಸಿದ್ದ ಎಂಬ ಕಾರಣಕ್ಕೆ ಆತನ ಕೈ ಕಾಲುಗಳಿಗೆ ಕೊಳ ತೊಡಿಸಿ ಒಲಗಕ್ಕೆ ಕರೆತರಲಾಗಿತ್ತು. ಆ ವ್ಯಾಪಾರಿ ಕಲ್ಯಾಣದಿಂದ ಬಂದಾತ ಮತ್ತು ಆತನಲ್ಲಿರುವ ವಚನ ಗ್ರಂಥಗಳ ಬಗ್ಗೆ, ಲಿಂಗಪೂಜೆಯ ಬಗ್ಗೆ ಊರ ಜನರಿಂದ ಮಹಾದೇವ ಭೂಪಾಲನು ಅರಿತಿದ್ದ. ಅದಕ್ಕಾಗಿ ಆತನಲ್ಲಿದ್ದ ವಚನ ಗ್ರಂಥಗಳನ್ನು ಕಸಿದುಕೊಂಡು ಕಂಬಕ್ಕೆ ಕಟ್ಟಿ ವಧಾಸ್ಥಾನದಲ್ಲಿ ನಿಲ್ಲಿಸಲಾಗಿತ್ತು. ಆತ ಹಿಮ ಸುರಿವ ರಾತ್ರಿಯ ಚಳಿ ಲೆಕ್ಕಿಸದೆ ಬಸವಣ್ಣನವರ ವಚನಗಳನ್ನು ರಾಗಬದ್ಧವಾಗಿ ಹಾಡುತ್ತಲಿದ್ದ. ನಿದ್ದೆಯಿಲ್ಲದೆ ಚಡಪಡಿಸುವ ರಾಜನ ತಂಗಿ ನಿಜದೇವಿಗೆ ಆತನ ವಚನ ಗಾಯನದಲ್ಲಿದ್ದ ಅಗಾಧ ಶಕ್ತಿಯ ಸತ್ಯದ ಬೆಳಕು ಗೋಚರಿಸಿವಂತೆ ಕಂಡಿತು. ರಾಜ ಆತನಿಂದ ವಶಪಡೆದ ವಚನ ಗ್ರಂಥಗಳನ್ನು ನೋಡುವ ಹಂಬಲ ಹೆಚ್ಚಾಗಿ ಅಣ್ಣನ ಕೋಣೆಗೆ ಹೋಗಿ ನೋಡಲು, ಅವಳಣ್ಣ ಚಿಕ್ಕ ಹಣತೆಯ ಮೂಲಕ ಗ್ರಂಥಗಳನ್ನ ಒದುತ್ತಿದ್ದನು. ಇದನ್ನು ಕಂಡ ನೀಜದೇವಿ ಮಾರುವೇಷದಲ್ಲಿ ವ್ಯಾಪಾರಿಯ ಬಳಿ ಬಂದು ಆತನಲ್ಲಿದ್ದ ಇನ್ನಷ್ಟು ವಚನಗಳು ತನಗೆ ಬೇಕೆಂದು ಕೇಳಲಾಗಿ, ತನ್ನ ಜೊಳಿಗೆಯಲ್ಲಿ ಉಳಿದಿರುವ ನಾಲ್ಕೈದು ತಾಳೆಗೆರೆಯಲೆಗಳನ್ನು ತೆಗೆದುಕೊಳ್ಳಲು ಹೇಳಿದ. 
ನಿನ್ನ ಹಾಡಿನಲ್ಲಿನ ವಿನಯ ಬಹಳ ಇಷ್ಟವಾಯಿತು. ಆದರೆ ಇವರುಗಳು ನಿನ್ನನ್ನು ಜೀವಂತವಾಗಿ ಬಿಡುವುದಿಲ್ಲವೆಂದು ನಿಜದೇವಿ ಹೇಳಿದಾಗ 'ಉರಿವ ಬೆಂಕಿ, ಹರಿವನದಿ,  ಚಿಗುರೊಡೆದ ಹಸಿರು, ಸೊಯ್ಯನೆ ಬೀಸುವ ಗಾಳಿ, ಮಳೆಗೆ ಯಾರು ಅಪ್ಪಣೆಯೂ ಆಕ್ಷೇಪಣೆಯೂ ಬೇಕಾಗಿಲ್ಲವೆಂಬ ವ್ಯಾಪಾರಿಯ ಮಾತು ಕೇಳಿ ಅವಳಲ್ಲಿದ್ದ ಆಸೆಯು ಅರಮನೆಯ ತ್ಯಜಿಸಿ ಬಯಲೋಳಗಿನ ದೇವರನ್ನು ಕಾಣುವ ಹಂಬಲಕ್ಕೆ ದಾರಿಮಾಡಿಕೊಟ್ಟಂತಾಯಿತು.  ನೀಜದೇವಿ ವಚನಗಳ ತಾಳೆಗೆರೆಗಳು  ತೆಗೆದುಕೊಳ್ಳುವಷ್ಟರಲ್ಲಿ ಯಾರೋ ನುಸುಳಿದಂತೆ ನೆರಳನ್ನು ಕಂಡಳು. ದ್ವಾರಪಾಲಕನ ಮುಖ ತಪ್ಪಿಸಿ ಬಂದ ನಿಜದೇವಿಗೆ ಒಬ್ಬರಹಿಂದೆ ಒಬ್ಬರಂತೆ ಸೆರೆವಾಸದಲ್ಲಿದ್ದ ಸಾತ್ವಿಕರು ಸೇರಿ ರಾಜಧಾನಿಯನ್ನು ದಾಟಿ ಹೋಗಲು ಮಾತಾಡಿಕೊಳ್ಳುವದನ್ನು ಕೇಳಿ, ನಿಜದೇವಿ ಕೂಡ ವ್ಯಾಪಾರಿಯ ಕೊಳಬಿಚ್ಚಿ ಎಲ್ಲರೊಡನೆ ತಾನು ಅರಮನೆಯ ಕಟ್ಟುಪಾಡು ತ್ಯಜಿಸಿ ಅವರೊಂದಿಗೆ ಹೊರಟಳು.
ನಿಜದೇವಿಗೆ ಅರಮನೆಯ ಕಟ್ಟುಪಾಡುಗಳನ್ನು ಮೀರಿ ಹೊರಟ ಸಂಭ್ರಮ ಸಂತಸ ಅವಳಲ್ಲಿ ತುಂಬಿತ್ತು. ಅರಮನೆಯ ಸಂಪ್ರದಾಯದಲ್ಲಿ ಎಲ್ಲಿ ಹೋದರು ಬಾಗಿ ನಮಿಸುವ ಕೈಗಳು, ಎಲ್ಲೆಡೆ ಹೂದೋಟಗಳು, ಓಲಗದ ಶಿಸ್ತು, ಪೂಜೆ ಪುನಸ್ಕಾರಗಳ ನಡುವೆ ಬಂಧಿಯಾಗಿ ಬದುಕುವಂತಿದ್ದ ನಿಜದೇವಿಗೆ ಬಯಲೋಳಗಿನ ಸ್ವಚ್ಛಂದದಲಿ ತಿರುಗಾಡಿ ಬಯಲೊಳಗೆ ಬಿಡಾಡಿ ಹಾಗೆ ಇರುವ ದೇವರನ್ನು ಹುಡುಕುವ ಹಂಬಲ ಅವಳದ್ದಾಗಿತ್ತು. ಹೋಗುವ ದಾರಿ ಅರಿತಿಲ್ಲ, ಊರು ತಿಳಿದಿಲ್ಲ, ಹಸಿವಿಲ್ಲ, ನೀರಡಕೆಯಿಲ್ಲ, ನೆರಳಿಲ್ಲದ ಬಯಲೋಳು ಬಿಡಾಡಿ ದೇವರನ್ನು ತಿಳಿಯುವ ಅರಿಯುವ ಲೋಕದ ಹಂಬಲದಲ್ಲಿ, ಜೊತೆಗಿದ್ದ ಸಾತ್ವಿಕರ ದಾರಿ ಸಾತ್ವಿಕರಿಗಾದರೇ, ನಿಜದೇವಿಯ ಹಾದಿ ಕಲ್ಲುಮುಳ್ಳಿನದಾಗಿತ್ತು. ಊರು ಕಂಡಲ್ಲಿ ಮಲಗಿ, ನೀರು ಕಂಡಲ್ಲಿ ಮಿಂದು ಮೂರು ಲೋಕದ ಮಾಯಾಗಾರನ ಬಿಡಾಡಿ ಹಾಗೆ ನಲಿದು ಅರಿವಿನ ಬೆಳಕು ಹುಡುಕುತ್ತಿದ್ದಳು. ತೊಟ್ಟ ಬಟ್ಟೆಯ ಮೇಲೆ ಮೋಹವಿಲ್ಲ, ಹಸಿವೆನಿರಡಕೆಯ ಹಂಗಿಲ್ಲ, ವ್ಯಾಪಾರಿಯಿಂದ ಪಡೆದ ವಚನಗಳ ಒಂದೊಂದು ತಾಳೆಗೆರೆಯ ಸಾರವು ಅತಿಮೂಲ್ಯವೆನಿಸಿತು. ಎಲ್ಲಿಯೂ ಕಾಣದ  ಬಿಡಾಡಿ ದೇವರನ್ನು ಕಂಡು ಮಾತನಾಡಿಸುವ ಹವಣಿಕೆಯಲ್ಲಿ ಸೋತು ಕೊನೆಗೆ ಎಲ್ಲೂ ಕಾಣದ ದೇವರು ತನ್ನೊಳಗಿರುವನೆಂದು ಹಟತೊಟ್ಟ ಯೋಗಿಗಳಂತೆ ಮಾತಾಡಿದಳು. ಯಾರ ಅನುಭವಕ್ಕೆ ಬಾರದ ದೇವರನ್ನ ಅಂತರಂಗದ ಅರಿವಿನಲ್ಲಿ ದಿನದಿನವೂ ಕಾಣುತ್ತ ಅರಿಯುತ್ತ ಕಲ್ಯಾಣದ ದಾರಿ ಹಿಡಿದಳು. ಅರಣ್ಯದೊಳಗಿನ ದಾರಿಯಲ್ಲಿ ಕಾಡುಪ್ರಾಣಿಗಳ ಗರ್ಜನೆ, ಹಕ್ಕಿಗಳ ಕಲರವ, ನಾರಿ ನಾಯಿಗಳು ಕೂಗಾಟದ ಮಧ್ಯೆ ನಿಸ್ಸೋತು ಮಣ್ಣಿನ ಏರುದಿಬ್ಬಿನ ಮೇಲೆ ಮಲಗಿದ ನಿಜದೇವಿಗೆ ಕಾಡೆಲ್ಲ ಹೊತ್ತಿ ಧಗಧಗ ಉರಿಯುತ್ತಿದ್ದಂತೆ ಮೇಲೆ ಏಳಲು ಆಗದೇ 'ಎಲೇ ಬಿಡಾಡಿ ಇಲ್ಲಿಯ ತನಕ ಬಂದೆಯಾ? ಅನ್ನುತ್ತಾ ಅಲ್ಲಿಯೇ ಕುಸಿದು ಬಿದ್ದಳು.  
ಮರುದಿನ ಎಚ್ಚರವಾದಾಗ ಕಾಡು ಜನಾಂಗದ ಹಟ್ಟಿಯಲ್ಲಿ ಮಲಗಿರುವುದನ್ನು ಕಂಡಳು. ಆ ಹಟ್ಟಿಯ ದೊರೆಯ ಹೆಂಡತಿ ನಿಜದೇವಿಯ ಅಂಗಾಲದಲ್ಲಿ ಆದ ಗುಳ್ಳೆಗಳಿಗೆ ಮನೆ ಮದ್ದನ್ನು ಹಚ್ಚುತ್ತಿದ್ದಳು. ಕಲ್ಲು ಮುಳ್ಳಿಗೆತಾಗಿ ಮೈಮೇಲಿನ ಬಟ್ಟೆಗಳೆಲ್ಲ ತುಂಡು ತುಂಡಾಗಿದ್ದವು. ಅಲ್ಲಲ್ಲಿ ಮೈ ತುಂಬ ಮಸಿತುಂಬಿದ ಚಿಕ್ಕಪುಟ್ಟ ಸುಟ್ಟು ಗಾಯಗಳಾಗಿದ್ದವು. ಅಂತಹ ಅವಸ್ಥೆಯಲ್ಲಿ ಇದ್ದವಳನ್ನು ಕಂಡ ಹಟ್ಟಿ ದೊರೆ ಅವಳ ಸೌಂದರ್ಯಕೆ ಮನಸೋತು ಮದುವೆಯಾಗುವ ಆಸೆಯನಿತ್ತ. ಕಾಡು ದೇವಿಯ ಪೂಜಾರಿ ಅದಕೆ ಸಮ್ಮತಿ ನೀಡಿ, ನಿಜದೇವಿಗೂ ಏನು ಬೇಕು ಕೆಳೆಂದಾಗ ' ಯಾವ ಮೈ ಯಾರಿಗೆ ಆಸೆ ಚಿಗುರಿತೋ ಆ ಮೈ ವಾಸನೆ ನನಗಿಲ್ಲ. ಅದು ಬಿಡಾಡಿ ದೇವನೆ ಸ್ವತ್ತು. ಇದೋ ಲೋಕವೇ ನೋಡಿಕೊಳ್ಳಲಿ ಬಯಲಾದೆನು ಎನ್ನುತ್ತಾ ತನ್ನ ಮೈಮೇಲಿನ ಅಳಿದುಳಿದ ಬಟ್ಟೆಯನ್ನೆಲ ಕಿತ್ತೆಸೆದಳು. ಅಲ್ಲಿಯೇ ಕುಳಿತ ಹಟ್ಟಿ ದೊರೆಯ ಹೆಂಡತಿ ಓಡಿಹೋಗಿ ಒಂದು ಕೌದಿ ಯಿಂದ ಅವಳ ಮೈ ಮುಚ್ಚಿದಳು. ಹಳೆ ಬಟ್ಟೆಯ ಹೊಸ ಹೊಂದಾಣಿಕೆಯಲ್ಲಿ ಕಾಶ್ಮೀರದ ವಿಧವಿಧ ಚಿತ್ತಾರದಂತೆ ಬಿಳಿದಾರದ ಗೆರೆಗಳಿದ್ದವು. 'ಈರುಳ್ಳಿಯ ಸಿಪ್ಪೆ ಸುಲಿದಂತೆ ಅಲ್ಲೆನಿದೆ ಬಟ್ಟೆಯ ಒಂದೊಂದು ಪದರು ಬಿಚ್ಚಿದರೆ ಅದೇ ಬಯಲು, ಕೂಡಿಸಿ  ಜೊಡಿಸಿದರೆ ಹೊಸ ಹೊದಿಕೆ'. ನಿಜದೇವಿಯ ಚಿತ್ತ ಕೌದಿಯ ಚಿತ್ತಾರ ಕಾಣುವುದರಲ್ಲೆ ಆ ಬಿಡಾಡಿ ದೇವನು ಈ ಕೌದಿಯಲ್ಲೆ ಇದ್ದಾನೆಂದು ಭಾವಿಸಿದವಳು. ಅಲ್ಲಿಂದ ಬೊಂತೆಯನ್ನು ಹೊತ್ತುಕೊಂಡು ಕಲ್ಯಾಣದತ್ತ ನಡೆದಳು. ಆಕೆ ಹೊದ್ದುಕೊಂಡಿದ್ದ ಬೊಂತೆಯನ್ನು ಕಂಡು ಲೋಕವೆಲ್ಲ ಬೊಂತಾದೇವಿಯೆಂದು ಅವಳನ್ನು ಕರೆಯತೊಡಗಿತು.
ಮಾರನೆ ದಿನ ಗೊದಾವರಿ ಹೊಳೆದಾಟಿ ಕಲ್ಯಾಣಕ್ಕೆ ಬಂದಾಗ, ಬಾಯಾರಿ ಬಂದವರಿಗೆ  ತುಂಬಿಟ್ಟು ಅರವಟ್ಟೆಗಳು, ಅನ್ನಾಹಾರ ಛತ್ರಗಳು, ಜನರ ನಡೆನುಡಿಯೊಳಗಿನ ನಯವಿನಯವನ್ನ ಕಂಡಳು. ಸ್ವರ್ಗವೇ ಕಣ್ಣೆದಿರು ನಿಂತತನಿಸಿತು. ತನ್ನ ಮನಸ್ಸಿಗೆ ತೋಚಿದ ಹಾಗೆ ಅಲ್ಲಲ್ಲಿ ಮಲಗಿ ದಿನ ಕಳೆದಳು. ತಾನು ಅರಮನೆಯಲ್ಲಿ ಕಲಿತಿದ್ದು ವೇದ ಶಾಸ್ತ್ರ, ಪುರಾಣ ಪೌರೋಹಿತ ವೇದಗಳು ಯಾವ ಅನುಭಾವ ಕೊಡಲಿಲ್ಲವೋ  ಅದಕ್ಕಿಂತ ಮಿಗಿಲಾದ ಅನುಭವ ಕಲ್ಯಾಣದ ಪ್ರಜೆಗಳಲ್ಲಿ ಶರಣಶರಣೆಯರ ನಡೆ ನುಡಿ ಆಲೋಚನೆಗಳಲ್ಲಿ ಕಂಡಳು. ಅನುಭಾವ ಮಂಟಪದಲ್ಲಿ ಹೆಣ್ಣುಗಂಡೆಬ ಭೇದವಿಲ್ಲದ, ಶಾಸ್ತ್ರ ಸಂಪ್ರದಾಯಗಳಿಲ್ಲದ ನಯ ವಿನಯದಿಂದಿರುವ ಅರಿವಿನ ಹೊಳೆಯಲ್ಲಿ ಮಿಂದು ಸಂತಸಪಟ್ಟಳು. ಎಲ್ಲರ ಉಸಿರೊಳಗೆ, ಮನದೊಳಗೆ ಆ
 ಬಿಡಾಡಿ ದೇವನೇ ನೆಲೆಸಿರುವುದನ್ನು ಕಂಡು, ಕೆಲಕಾಲ ಮಾತಿಲ್ಲದೆ ಮೌನದಲ್ಲಿಯೇ ಎಲ್ಲವನ್ನು ಅನುಭವಿಸಿದಳು. ಬಸವಣ್ಣನವರು ಪ್ರತಿಯೊಬ್ಬರ ಹತ್ತಿರ ಹೋಗಿ ಅಂತಃಕರಣದಿಂದ ಮುಟ್ಟಿ ಮಾತನಾಡಿಸುವುದುನ್ನು ಕಂಡು ಸಾಕ್ಷಾತ್ ಬಿಡಾಡಿ ದಯಾಮೂರ್ತಿಯ ಕಂಡ ಅನುಭಾವ ಅವಳಿಗಾಯಿತು. ಅದೇ ದಿನ ರಾತ್ರಿ ಯಾರ ಊಹೆಗೂ ನಿಲುಕದ ಕಲ್ಪಿಸದ ಕಲ್ಯಾಣತುಂಬ ಕಿರುಚಾಟ, ಮಕ್ಕಳ ಆಕ್ರಂದನ, ಶರಣರ ಮನೆಗಳು ಬೆಂಕಿಗಾಹುತಿಯಾಗಿದ್ದವು. ಬೊಂತೆಯೊಳಗೆ ಮುದುಡಿ ಕುಳಿತ ಬೊಂತಾದೇವಿ ಏನು ನಡೆಯುತ್ತಿದೆ ಎಂಬುದು ಅರಿವಾಗುವ ಮೊದಲೆ ಶರಣರೆಲ್ಲ ಬಯಲೊಳಗೆ ಬಿಡಾಡಿಯ ಕುರುಹು ಹುಡುಕುತ್ತಿದರು. ಯಾರೋ ಬಂದು ಏ ಹುಚ್ಚಿ ಏನು ಹುಡುಕುತ್ತಿಯಾ ಎಂದು ಕೇಳಿದ. ಮಮಕಾರದ ಮುತ್ತು ಕಳೆದುಕೊಂಡೆನು. ನೀನು ಕಂಡಿಯೆನಪ್ಪಾ. ನಿನ್ನೆಯ ದಿನ ಇದೇ ಹಾದಿಯಲ್ಲಿ ಅಣ್ಣನವರ  ಜೊಳಿಗೆಯಲ್ಲಿತ್ತು, ಅದಕ್ಕೂ ಮೊದಲು ಶರಣರ ಜಂಗಮ ದಾಸೋಹದ  ಊಟದ ಬಟ್ಟಲಲ್ಲಿತ್ತು, ಓಂ ಮುತ್ತಿನ ಬೆಲೆ ನಿನ್ನ ಕೈಯೊಳಗಿನ ಅವುಗಳಿಗೆ ತಿಳಿಯದು. ಕಂಡರೆ ಹೇಳಿಕೊಟ್ಟ ಭಂಟನೇ! ನಾನೊಂದು ಬಿಡಾಡಿ ಮುತ್ತೊಂದು ಕಳೆದುಕೊಂಡೆವು ಎನ್ನುತ ಅಳುತ ನಗುತ ಮರುಗತೊಡಗಿದಳು. ಕಲ್ಯಾಣದ ಶರಣರ ಸನ್ನಿಧಾನದಲ್ಲಿ ದಿನದಿಂದ ದಿನಕ್ಕೆ ಪರಿಚಿತಳಾಗಿ  ಅರಿವು ಹುಡುಕುತ್ತಾ ಊರ ಹೊರಗೂ ಒಳಗೂ ಘಟದೊಳಗೂ ಬಯಲಾಗುತ್ತ, ಬೊಂತೆಯೊಳಗೂ ಬಯಲಾದ ಶರಣೆ ಬೊಂತಾದೇವಿ. ಇವಳ ವಚನಗಳ ಅಂಕಿತನಾಮ ಬಿಡಾಡಿ. ಅವಳ ಆರು ವಚನಗಳು ಸಿಕ್ಕಿವೆ. ಅವುಗಳಲ್ಲಿ ಬಯಲಿನ ಕಲ್ಪನೆಯೇ ಪ್ರಮುಖವಾಗಿದೆ.
 
ಊರ ಒಳಗಣ ಬಯಲು, 
ಊರ ಹೊರಗಣ ಬಯಲೆಂದುಂಟೆ ?
ಊರೊಳಗೆ ಬ್ರಾಹ್ಮಣ ಬಯಲು, 
ಊರ ಹೊರಗೆ ಹೊಲೆಬಯಲೆಂದುಂಟೆ ?
ಎಲ್ಲಿ ನೋಡಿದಡೆ ಬಯಲೊಂದೆದ
ಬಿತ್ತಿಯಿಂದ ಒಳಹೊರಗೆಂಬ ನಾಮವೈಸೆ. 
ಎಲ್ಲಿ ನೋಡಿದಡೆ ಕರೆದಡೆ ಓ ಎಂಬಾತನೆ ಬಿಡಾಡಿ.

ಬೀಡಾಡಿಯೆಂದರೆ ಯಾವ ಎಲ್ಲೆಗಳೂ ಇಲ್ಲದ ಬಯಲು ರೂಪ ಪಡೆದ ಶಿವನು. ಸ್ವತಂತ್ರ ಮನೋಭಾವದ ಬೊಂತಾದೇವಿಯ  ಕಲ್ಪನೆಯಲ್ಲಿ, ಅವಳ ಶಿವ ಯಾವುದರಲ್ಲೂ ಬಿಳುವಹಾಗಿಲ್ಲ. ಎಲ್ಲೆಡೆಯೂ ಎಲ್ಲದರೊಳಗೆಯೂ ಬೀಡಾಡಿಯಾಗಿ ನೆಲೆಸುತ್ತಿರುತ್ತಾನೆ. ಯಾವುದೆ ಕಟ್ಟುಪಾಡುಗಳು ಆತನಿಗಿಲ್ಲ, ಲಯದೊಳಗಿರುವ  ಬಯಲುರೂಪಿಯಾಗಿದ್ದವನಿಗೆ ಬೀಡಾಡಿಯ ಹೆಸರನ್ನಿಟ್ಟ ಬೊಂತಾದೇವಿಯ ಭಕ್ತಿಯ ಪರಾಕಾಷ್ಠೆಯಾಗಿದೆ.  ಈ ವಚನದಲ್ಲಿ ಬಯಲೆಂಬ ದೇವರು, ಬಾಹ್ಯಾ, ಮತ್ತು ಸಮಾಜ ಎಂಬ ಮೂರು ಪ್ರಕಾರದಲ್ಲಿ ಧ್ವನಿಸುತ್ತದೆ. ಸಮಾಜದೊಳಗಿನ ಎಲ್ಲಾ ಜೀವಿ ಆಂತರಿಕ ಸಂಬಂಧವನ್ನು ಹೊಂದಿದ್ದೇನೆ ಆಗಿದ್ದಾರೆಂಬುದು ಅವಳ ನಿಲುವು. ವರ್ಣಭೇದ ನೀತಿಯ ಸಮಾಜದೊಳಗೆಕರಿಯರು- ಬಿಳಿಯರು, ಮತ್ತು ಸವರ್ಣಿಯರು ಅಸ್ಪೃಶ್ಯರು ಮುಂತಾದ ಪಂಗಡನೊಳಗೊಂಡ ಈ ಬಯಲನ್ನು ಹೀಗೆ ವಿಭಜಿಸಬಹುದೆ? ಎಂಬುದು ಬೊಂತಾದೇವಿಯ ಪ್ರಶ್ನವಾಗಿದೆ. ಮಾನವರ ನಡುವೆ ಅಡ್ಡಗೊಡೆಕಟ್ಟಿ ಒಳಗಣ ಹೊರಗಣ ಎಂದು ಹೆಸರು ಕೊಡುವುದುಂಟೆ
ಎಂಬ ಪ್ರಶ್ನೆ ಶ್ರೇಣಿಕೃತ ಸಮಾಜದ ಅತಾರ್ಕಿಕತೆಯ ಮೇಲೆ ಬೆಳಕು ಚೆಲ್ಲುತ್ತದೆ. ಎಲ್ಲೆಡೆ ಇರುವ ಶಿವ ಯಾರೇ ನಂಬಿಕರೆದರೂ ಓಂ ಎನ್ನದಿರುತ್ತಾನೆಯೇ?  ಎಂಬ ಆತ್ಮವಿಶ್ವಾಸ ಅವಳದಾಗಿದೆ. ಆಧ್ಯಾತ್ಮದ ತುದಿಯನ್ನು ಮುಟ್ಟಿದ ಶರಣೆಬೊಂತಾದೇವಿಯ ಮನಸ್ಸು ಸಮತಾಭಾವದಿಂದ ಹಾಗೂ ಸಾಮಾಜಿಕ ಕಳಕಳಿಯಿಂದ ತುಂಬಿತ್ತು ಎನ್ನುವುದಕ್ಕೆ ಈ ವಚನವೇ ಸಾಕ್ಷಿಯಾಗಿದೆ.

ಅರಿವೆ ಬಿಡಾಡಿ ಅರಿಯದೆ ಬಿಡಾಡಿ
ಮಾರನೆ ಬಿಡಾಡಿ, ಮರೆಯದೆ ಬಿಡಾಡಿ 
ಅರಿವರತು ಕುರುಹಿಲ್ಲದಾತ ನೀನೆ ಬಿಡಾಡಿ

ಅರಿವೆಂಬುದು ಯಾವುದೇ ಬಂಧನಕ್ಕೊಳಗಾದ ಮುಕ್ತ ಹರಿವಿನ ಜ್ಞಾನ. ಅರಿಯದೆ ಇರುವುದು ಕೂಡ ಅರಿವಿನ ನೆರಳಿನಂತಿರುವ  ಅಜ್ಞಾನದ ಭಾವನೆಗಳು. ಮಾರವು (ಮರುಳ) ಒಂದರ್ಥದಲ್ಲಿ ಬಿಡಾಡಿ ಕಾರಣ ಮರೆಯಬೇಕೆಂಬ ಉದ್ದೇಶ ಯಾವ ಸಧ್ಭಕ್ತನಿಗೂ ಇರುವುದಿಲ್ಲ ಅದಕಾಗಿ ಜ್ಞಾಪಕಕ್ಕೆ ಬಾರದ, ಬಂಧಿಯಿಲ್ಲಿಲ್ಲದ ಅದು ಕೂಡ ಮುಕ್ತವಾಗಿ ಸಂಚರಿಸುವ ಭಾವವಾಗಿದೆ. ಜ್ಞಾನದ ನಿರಂತರ ಶೋಧನೆಯಲ್ಲಿ ಸ್ಥೂಲ, ಸೂಕ್ಷ್ಮ, ಕಾರಣ ಇವುಗಳ ಬಂಧನದಿಂದ  ಹೊರಗಿದ್ದು ಸತ್ಯವನ್ನು ಹುಡುಕುವ ಜ್ಞಾನಾರ್ಜನೆಯ ಪ್ರಾಮಾಣಿಕ ಪ್ರಯತ್ನ ಕೂಡ ಮುಕ್ತ, ಸ್ವತಂತ್ರ ಬಿಡಾಡಿಯೇ ಎಂದೆನ್ನುತ್ತಾಳೆ. ಕುರುಹಿನ ಸಂಕೋಲೆಗೆ ಸಿಗದ, ಅದರ ಬಂಧನಕ್ಕೊಳಪಡದ ನೀನೆ ಬಿಡಾಡಿ ದೇವರು ಎಂದು ಹೇಳಿದ್ದಾಳೆ ಬೊಂತಾದೇವಿ.

- ಶ್ರೀಮತಿ ಸುಲೋಚನಾ ಮಾಲಿಪಾಟೀಲ, ಧಾರವಾಡ.

ಕೇಳಿಲ್ಲಿ.. ಕವಿಯಾರು (ಕವಿತೆ) - ಬಿ. ಎಂ. ಮಹಾಂತೇಶ.

ಎಳೆ ಅಳಿಲಿನ
ಕುಲದವನು...
ಒಳಒಳಗೇನೆ
ಒಬ್ಬನೇ ಕುಣಿಯುವವನು...

ಕತ್ತಲಲ್ಲಿ ಬೆಳಕನು
ಹುಡುಕುವ ಬಣ್ಣವ ಸವರಿ...
ಎಲ್ಲಿಲ್ಲದ ಲೋಕವನ್ನೇ ಸೃಷ್ಟಿಸುವುದು
ಇವನ ಕಲ್ಪನೆಯ ಗಾನಲಹರಿ...

ಕಂಡರೂ ಇವನು
ಎಲ್ಲರ ಕಣ್ಣಿಗೆ ಹುಚ್ಚ...
ಬರೆಯುವನು ಮನಸಿನಿಂದ
ಎಲ್ಲವನು ಸ್ವಚ್ಛ...

ಎಲ್ಲರು ಬಾಯಲ್ಲಾಡುವ ಮಾತನ್ನು
ಇವ ಬರೆದು ತೋರಿಸುವ...
ಅದರ ಜೊತೆಗೆ, ಪದಗಳಿಗೆ
ತುಂಬುವ ಭಾವ ಮತ್ತು ಜೀವ...

ಕವಿಯಾದವನು ಆಗಿರುವನಂತೆ
ಬುದ್ದಿವಂತ ಹುಚ್ಚ ಇಲ್ಲವೇ ರಸಿಕ...
ಜೊತೆಗೆ ಪ್ರಕೃತಿ ಸೌಂದರ್ಯ
ಸವೆಯುವ ಸವಿಕ...

ಒಟ್ಟಾರೆ ಆಗಿರುವ ಲೇಖನಿಯ
ಹೆಂಡತಿ ಮತ್ತು ಪದಗಳ ತಾಯಿ...
ಅವುಗಳಿಗೆ ಅರ್ಥದ ಹಾಲುಣಿಸಿ
ಹಾಡುವ ವಿಧ ವಿಧದ ಲಾಲಿ...
- ಬಿ. ಎಂ. ಮಹಾಂತೇಶ
ವಿಜಯನಗರ
9731418615.

ಪವಿತ್ರ ರಮ್ದಾನ್ ಪ್ರಾರಂಭ ಚಂದ್ರೋದಯ (ಲೇಖನ) - ಇಂಗಳಗಿ ದಾವಲಮಲೀಕ.

ಈದ್‌ ಮುಬಾರಕ್‌: ಈದ್‌ ಹಬ್ಬಕ್ಕೂ ಮತ್ತು ಚಂದ್ರ ದರ್ಶನಕ್ಕೂ ಇರುವ ಸಂಬಂಧವೇನು..?
 ಈದ್ ಮುಸ್ಲಿಮರ ದೊಡ್ಡ ಹಬ್ಬ. ಇಸ್ಲಾಮಿಕ್ ಕ್ಯಾಲೆಂಡರ್ ಪ್ರಕಾರ, ಒಂಬತ್ತನೇ ತಿಂಗಳಲ್ಲಿ ಉಪವಾಸವನ್ನು ಆಚರಿಸಲಾಗುತ್ತದೆ ಮತ್ತು ನಂತರ ರಂಜಾನ್ ಕೊನೆಯ ದಿನದಂದು ಈದ್ ಹಬ್ಬವನ್ನು ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ. ಚಂದ್ರನ ದರ್ಶನದ ಪ್ರಕಾರ ಈದ್ ಆಚರಿಸುವ ದಿನಾಂಕವನ್ನು ನಿರ್ಧರಿಸಲಾಗುತ್ತದೆ. ಚಂದ್ರ ದರ್ಶನ ಪಡೆದ ದಿನವನ್ನು 'ಚಾಂದ್ ಮುಬಾರಕ್' ಎಂದು ಕರೆಯಲಾಗುತ್ತದೆ. ಈದ್ ಉಲ್ ಫಿತರ್‌ನ ದಿನದಂದು, ಜನರು ನಮಾಜ್ ಮಾಡಲು ಮುಂಜಾನೆಯೇ ಬೇಗ ಎಳುತ್ತಾರೆ. ಇದರ ನಂತರ, ಒಬ್ಬರನ್ನೊಬ್ಬರು ಪರಸ್ಪರ ಅಭಿನಂದಿಸುವ ಮೂಲಕ ಹಬ್ಬವು ಪ್ರಾರಂಭವಾಗುತ್ತದೆ.
*ಈದ್‌ ಮುಬಾರಕ್‌*
1. ಈ ಬಾರಿ ಈದ್ ಉಲ್ ಫಿತರ್‌ನ್ನು ಯಾವಾಗ ಆಚರಿಸಲಾಗುತ್ತದೆ..?
ಈ ಬಾರಿ ಸೌದಿ ಅರೇಬಿಯಾ ಮತ್ತು ಭಾರತದಲ್ಲಿ ಚಂದ್ರ ಒಟ್ಟಿಗೆ ಕಾಣಿಸಿಕೊಳ್ಳಲಿದೆ.  ಸೌದಿ ಅರೇಬಿಯಾದಲ್ಲಿ ಚಂದ್ರನ ದರ್ಶನವಾದಾಗಲೆಲ್ಲಾ ಭಾರತದಲ್ಲಿ ಈದ್ ಅನ್ನು ಘೋಷಿಸಲಾಗುತ್ತದೆ, ಆದರೆ ಈ ಬಾರಿ ಭಾರತ ಮತ್ತು ಸೌದಿ ಅರೇಬಿಯಾದಲ್ಲಿ ಈದ್ ಹಬ್ಬವನ್ನು ಒಟ್ಟಿಗೆ ಆಚರಿಸಲಾಗುತ್ತದೆ. ಈದ್‌ನಲ್ಲಿ ಚಂದ್ರನ ಪ್ರಾಮುಖ್ಯತೆ ಏನು ಎಂದು ತಿಳಿಯೋಣ.
2. ಈದ್ ಅನ್ನು ಚಂದ್ರನ ನಂತರ ಏಕೆ ಘೋಷಿಸಲಾಗುತ್ತದೆ?
ಈದ್ ಮತ್ತು ಚಂದ್ರ ಪರಸ್ಪರ ಬಹಳ ಆಳವಾದ ಸಂಬಂಧವನ್ನು ಹೊಂದಿವೆ. ಈದ್ ಉಲ್ ಫಿತರ್‌ನ್ನು ಹಿಜ್ರಿಯ ಹತ್ತನೇ ತಿಂಗಳ ಮೊದಲ ದಿನದಂದು ಆಚರಿಸಲಾಗುತ್ತದೆ ಮತ್ತು ಈ ಕ್ಯಾಲೆಂಡರ್‌ನಲ್ಲಿ ಹೊಸ ತಿಂಗಳು ಚಂದ್ರನ ದರ್ಶನದೊಂದಿಗೆ ಪ್ರಾರಂಭವಾಗುತ್ತದೆ. ಶವ್ವಾಲ್ ಎಂಬ ಹೊಸ ತಿಂಗಳ ಆರಂಭವನ್ನು ಗುರುತಿಸಲು ರಂಜಾನ್ ನಂತರ ಈದ್ ಅನ್ನು ಸಹ ಆಚರಿಸಲಾಗುತ್ತದೆ. ಚಂದ್ರನನ್ನು ನೋಡುವವರೆಗೆ ಶವ್ವಾಲ್ ಪ್ರಾರಂಭವಾಗುವುದಿಲ್ಲ ಎಂದು ಹೇಳಲಾಗುತ್ತದೆ.
*3. ಈದ್‌ ಉಲ್‌ ಫಿತರ್‌ ಮಹತ್ವ:*
ಈದ್ ಉಲ್‌ ಫಿತರ್‌ ದಿನವು ಅಲ್ಲಾಹುನಿಗೆ ಧನ್ಯವಾದ ಹೇಳುವ ದಿನ. ಈ ದಿನ, ಮೊದಲ ಪ್ರಾರ್ಥನೆಯನ್ನು ಬೆಳಿಗ್ಗೆ ನೀಡಲಾಗುತ್ತದೆ, ಇದರ ನಂತರ ಜನರು ವಿಶೇಷ ಖಾದ್ಯವನ್ನು ಅಥವಾ ಸಿಹಿತಿಂಡಿಗಳನ್ನು ತಿನ್ನುತ್ತಾರೆ. ಇದರ ನಂತರ, ಜನರು ಪರಸ್ಪರ ತಬ್ಬಿಕೊಂಡು ಉಡುಗೊರೆಗಳನ್ನು ನೀಡಿ ಈದ್ ಹಬ್ಬವನ್ನು ಅಭಿನಂದಿಸುತ್ತಾರೆ.
*4. ಈದ್‌ ಮತ್ತು ಚಂದ್ರನ ನಡುವಿನ ಸಂಬಂಧ:*
ಅದೇ ಸಮಯದಲ್ಲಿ, ಕೆಲವು ಧರ್ಮಗುರುಗಳು ಒಂದು ಸ್ಥಳದಲ್ಲಿ ಚಂದ್ರನನ್ನು ನೋಡಿದ ನಂತರ ಈದ್‌ ಆಚರಿಸುವಂತೆ ಮನವಿಯನ್ನು ಮಾಡುತ್ತಾರೆ. ಇದನ್ನು ಮಾಡುವ ಕೆಲವು ಧರ್ಮಗುರುಗಳು ಪ್ರತಿಯೊಂದು ದೇಶದಲ್ಲೂ ಪ್ರತ್ಯೇಕವಾಗಿ ಚಂದ್ರನನ್ನು ನೋಡಬೇಕೆಂಬ ಸಂಪ್ರದಾಯವಿಲ್ಲ ಎಂದು ಹೇಳುತ್ತಾರೆ. ಇಮಾಮ್ ಅಬು ಹನೀಫಾ ಮತ್ತು ಪ್ರವಾದಿಯವರು ಒಂದೇ ದಿನದಲ್ಲಿ ಉಪವಾಸ ಮಾಡಬೇಕು ಮತ್ತು ಎಲ್ಲರೂ ಒಂದೇ ದಿನ ಅದನ್ನು ಮುರಿಯಬೇಕು ಎಂದು ಹೇಳುವುದು ಇದರ ಹಿಂದಿನ ಅವರ ತರ್ಕವಾಗಿದೆ. ಏಕೆಂದರೆ ಚಂದ್ರನು ಉದಯಿಸಿದಾಗ, ಚಂದ್ರಮಾಸವು ಪ್ರಾರಂಭವಾಗುತ್ತದೆ. ಇದಲ್ಲದೆ, ಕೆಲವು ಧರ್ಮಗುರುಗಳು ಮತ್ತೊಂದು ವಾದವನ್ನು ನೀಡುತ್ತಾರೆ. ಮೆಕ್ಕಾ ಮುಸ್ಲಿಮರಿಗೆ ಅತ್ಯಂತ ಪವಿತ್ರವಾದ ಸ್ಥಳ ಮತ್ತು ಅಲ್ಲಿ ಚಂದ್ರನು ಕಾಣಿಸಿಕೊಂಡಿರುವಾಗ, ಬೇರೆಡೆ ಚಂದ್ರನಿಗಾಗಿ ಏಕೆ ಕಾಯಬೇಕು, ಅದರ ಆಧಾರದ ಮೇಲೆ ನಾವು ಈದ್ ಅನ್ನು ಆಚರಿಸಬಹುದು ಎಂದು ಅವರು ಹೇಳುತ್ತಾರೆ. ಚಂದ್ರನು ಬರಿಗಣ್ಣಿಗೆ ಗೋಚರಿಸಿದ ತಕ್ಷಣ ಹಿಜ್ರಿ ವರ್ಷದ ಚಂದ್ರಮಾಸವು ಪ್ರಾರಂಭವಾಗುತ್ತದೆ ಎಂದು ಕೆಲವು ಧರ್ಮಗುರುಗಳು ಹೇಳುತ್ತಾರೆ. ಎಲ್ಲರೂ ಇದನ್ನು ಒಪ್ಪುತ್ತಾರೆ, ಆದರೂ ಈದ್ ಚಂದ್ರನ ಬಗ್ಗೆ ವಿಭಿನ್ನ ಅಭಿಪ್ರಾಯಗಳು ಊಹೆಗೂ ಮೀರದ್ದು. ಈದ್‌ನ್ನು ಆಚರಿಸುವ ಮುಸ್ಲಿಮರು ಸತತ ಒಂದು ತಿಂಗಳುಗಳ ಪೂರ್ಣ ಉಪವಾಸದಿಂದಿದ್ದು ಅಲ್ಲಾಹುನನ್ನು ಪ್ರಾರ್ಥಿಸುತ್ತಾರೆ. ಈದ್‌ ಹಬ್ಬವನ್ನು ಆಚರಿಸುತ್ತಿರುವ ಎಲ್ಲಾ ಮುಸ್ಲಿಂ ಬಾಂಧವರಿಗೂ ಈದ್‌ ಹಬ್ಬದ ಶುಭಾಶಯಗಳು.
    - ಇಂಗಳಗಿ ದಾವಲಮಲೀಕ.


ಶನಿವಾರ, ಮಾರ್ಚ್ 25, 2023

ಕವಿ (ಕವಿತೆ) - ಲಕ್ಷ್ಮಿ ಕಿಶೋರ್ ಅರಸ್

ತೋಚಿದ್ದನ್ನು ಗೀಚಿದವನಲ್ಲ
ಕಂಡದ್ದು ಕಂಡ ಹಾಗೆ
ಇದ್ದದ್ದು ಇದ್ದ ಹಾಗೆ
ಜಗದೋಪಕಾರಕ್ಕೆ ಬರೆದವನು

ತುಂಬಾ ಹೆಚ್ಚಾಗಿ ಕಲಿತವನಲ್ಲ
ಪಂಡಿತರಷ್ಟು ತಿಳಿದವನಲ್ಲ
ತನಗೆ ತಿಳಿದದ್ದನ್ನು ತಿಳಿಹೇಳುವವನು
ಜಗವು ತಿಳಿಯಲೆಂದು ಹಾತೊರೆದವನು
ಹೆಂಡಸರಾಯಿ ಕುಡಿದವನಲ್ಲ
ಕುಡಿದರೂ ನಿಯಮ ಮೀರಿದವನಲ್ಲ
ಮದ್ಯಪಾನ ಹಾನಿಕಾರವೆಂದು ಹೇಳಿದವನು
ಕುಡಿಯಬೇಡಿರೆಂದು ಬೇಡಿಕೊಂಡವನು

ಬಾನಾಡಿಗಳಿಗೆ ಬಣ್ಣ ಹಚ್ಚಿದವನು
ಪ್ರಕೃತಿ ಅಂದದ ಗರಿಬಿಚ್ಚಿದವನು
ಖಗ-ಮೃಗಗಳ ಚರಿತ್ರೆ ಸೃಷ್ಟಿಸಿದವನು
ರೆಕ್ಕೆ ಇಲ್ಲದೆ ಬಾಣಂಗಳಕ್ಕೆ ಹಾರಿದವನು

ಕಾವ್ಯದ ಮುಖೇನ ಎಚ್ಚರಿಸುವವನು
ಮದ-ಮತ್ಸರವ ಬಿಟ್ಟು ಬಾಳಿದವನು
ಜಗದ ಒಳಿತಿಗೆ ಸದಾ ಚಿಂತಿಸುವವನು
ಕಾಣದ ಕಡಲಲ್ಲಿ ನಾವಿಕನಾದವನು

ಲೇಖನಿಯಲ್ಲಿ ಉತ್ತವನು ಕವಿ
ಕಥೆ- ಕವನಗಳ ಬಿತ್ತವನು ಕವಿ
ಪುಸ್ತಕದ ಬೆಳೆ ತೆಗೆದವನು ಕವಿ
ನಿಸರ್ಗದ ಅಂಗರಕ್ಷಕನು ಕವಿ.

- ಲಕ್ಷ್ಮಿ ಕಿಶೋರ್ ಅರಸ್,
ಯವಕವಿ ಹಾಗೂ ಆಂಗ್ಲ ಉಪನ್ಯಾಸಕರು.

ಮಂಗಳವಾರ, ಮಾರ್ಚ್ 21, 2023

ಹೊಸತನದ ಯುಗಾದಿ (ಕವಿತೆ) - ಶ್ರೀಮತಿ ಹೆಚ್. ಎಸ್. ಪ್ರತಿಮಾ.

 ಬೇವು ಬೆಲ್ಲವ ಸಮಾನವಾಗಿ ಸವಿಯುತ
 ಕಷ್ಟ ಸುಖವ  ಎದುರಿಸುವ ಶಕ್ತಿ ನೀಡಲುತಲಿ 
 ದುಃಖವ ಮರೆಯಲು ಶಕ್ತಿಯ ನೀಡುತಲಿ
 ಛಲದಿ ಬಾಳಲು ದೇವನು  ಆಶೀರ್ವದಿಸುತಲಿ//1//

 ಹಿಂದೂಗಳ ಹೊಸ ವರ್ಷವೂ ಇದು
 ಹೊಸ ಚಿಗುರಿನ ಅಂದದ ಗರಿಮೆಯಿದು 
 ಎಲ್ಲಡೆಯೂ ಸಂಭ್ರಮದಿ ಆಚರಿಸುತಲಿ
 ಒಬ್ಬರಿಗೊಬ್ಬರು ಶುಭ ಕೋರುತಲಿ//2//


 ಮುಂಜಾನೆಯಲಿ ಮೈತುಂಬ ಎಣ್ಣೆಹಚ್ಚುತಲಿ  
 ಬಿಸಿ ನೀರಿನ ಜಳಕವ ಮಾಡಿ ಶುದ್ಧರಾಗುತಲಿ 
ಪೂಜೆಯ ಮಾಡುತ  ದೇವನ ಸ್ಮರಿಸುತ
 ಎಲ್ಲಡೆಯು ಸಂಭ್ರಮದಿ ಒಂದುಗೂಡಿ ಆಚರಿಸುತ//3//

 ವಿಧವಿಧವಾದ ಭಕ್ಷ ಭೋಜನವನು ಮಾಡುತಲಿ
 ಸುಂದರ ವಾತಾವರಣದಲ್ಲಿ ಒಟ್ಟಾಗಿ ಸೇರುತಲಿ
 ಎಲ್ಲರೂ ಹೊಸ ಉಡುಪನ್ನು ಧರಿಸುತಲಿ
 ಹೊಸತನದ ಯುಗಾದಿಯನ್ನು ಆಹ್ವಾನಿಸುತಲಿ//4//

 ಹಳೆಯ ಕಹಿಗಳನ್ನೆಲ್ಲ ಮರೆಯುತಲಿ ಎಲ್ಲ
ಹೊಸತನದ  ಸಿಹಿಯನ್ನು  ಬಯಸುತಲಿ  ಮೆಲ್ಲ
 ಎಲ್ಲರೂ ಒಂದುಗೂಡುತಲಿ ಚಂದದಲಿ
 ಸಂತಸದಿ ಬಾಳೋಣ  ಆನಂದದಲಿ//5// 
- ಶ್ರೀಮತಿ ಹೆಚ್. ಎಸ್. ಪ್ರತಿಮಾ, ಹಾಸನ್, ಸಾಹಿತಿ. ಶಿಕ್ಷಕಿ. ಹಾಸನ.

'ನವ ವಸಂತದ ಚಿಗುರಲು ಯುಗಾದಿ ಹಬ್ಬದ ಸಂಭ್ರಮ' (ಕವಿತೆ) - ಎಸ್. ರಾಜು ಸೂಲೇನಹಳ್ಳಿ.

ನಮ್ಮ ಭಾರತ ದೇಶ ಸಂಸ್ಕೃತಿ ಪ್ರಧಾನ ಹೊಂದಿರುವ ಹಾಗೂ ಅನೇಕ ಇತಿಹಾಸ ಪುರಾವೆಗಳು ಒಳಗೊಂಡ ಇಡೀ ಜಗತ್ತು ಹಿಂತಿರುಗಿ ನೋಡುವ ರೀತಿ ಆಚರಸುವ ಸಂಪ್ರದಾಯ ದೇಶ ಇದಾಗಿದೆ ಆದರಲ್ಲಿ ನಮಗೆ ಯುಗಾದಿ ಬಂತೆಂದರೆ ಸಾಕು ನವನವೀನ ಉಡುಗೆ ತೊಟ್ಟು, ಅಮ್ಮ ಮಾಡಿದ ಹೆಬ್ಬೊಟ್ಟು ಸಿಹಿ ತಿನಿಸುಗಳ ಭರಾಟೆ ಜೋರಾಗಿ ಇರುತ್ತದೆ, ಇದರ ಜೊತೆಗೆ ಪ್ರಕೃತಿಯು ಬೆರೆಯುದರೊಂದಿಗೆ  ಹೊಸತನಕ್ಕೆ ಸಾಕ್ಷಿ ಸಿಕ್ಕಿಹದು ಎಲೆಗಳು ಉದುರಿಸಿ ಹೊಸ ಚಿಗುರು ತೋರುವ ಮೂಲಕ ಹಬ್ಬಕ್ಕೆ ಕಳೆ ತಂದಿಹವು.
ಒಂದು ವಿಷಾದವು ತಲೆ ತಲೆಮಾರುಗಳಿಂದ ಬಂದಿರುವ ಪರಿಸರ ಬದಲಾವಣೆ ಇತ್ತೀಚೆಗೆ ಅಂತರ್ಜಲ ಮಟ್ಟ ಆಧುನಿಕತೆಯ ವೇಗ ಬೆಳೆವಣೆಗೆಯು ತ್ವರಿತ ಗತಿಯಲ್ಲಿ ಸಾಗುತ್ತಿದೆ ಆದರೆ ಪರಿಸರದೊಡನೆ ಜೀವಿಸುವ ಮಾನವ ಯಾಂತ್ರಿಕ ಬದುಕಿಗೆ ಜಾರಿ ತನ್ನೊಡಲ ಗಿಡ ಮರಗಳನ್ನು ಬೆಳೆಸುವ ನಿಟ್ಟಿನಲ್ಲಿ ಶ್ರಮ ವಹಿಸುತ್ತಿಲ್ಲ ಒಂದು ಮನೆಯ ನೀರ್ಮಾಣ ಮಾಡಿದರೆ ಮನೆಯ ಅಂಗಳದಲ್ಲಿ ರಂಗೋಲಿ ಇರದ ಜಾಗ ಖಾಲಿ ಇರದೇ ತನ್ನ ಐಷಾರಾಮಿ ಕಾರು, ದ್ವಿಚಕ್ರ ವಾಹನ ನಿಲ್ಲಿಸಲು ಕಾಂಪೌಂಡ್ ಗೆ ಒತ್ತು ಕೊಡುವನೇ ಹೊರತು ತಾನು ಒಂದಷ್ಟು ಹೂ ಬಳ್ಳಿ, ಗಿಡ ತಂಪಾದ ವಾತಾವರಣ ನಿರ್ಮಾಣ ಮಾಡುವ ಸೋಜಿಗಕ್ಕೆ ಹೋಗುವುದಿಲ್ಲ ಎಲ್ಲವೂ ನಶಿಸುತ್ತಿದೆ. ಪ್ರಕೃತಿಯ ಮಾತೆಯು ಮುನಿಸಿಕೊಂಡು ಸುನಾಮಿ, ಜಲಪ್ರವಾಹ, ರೂಪ ಪಡೆದು ನಮ್ಮನ್ನೆ ನಾಶಕ್ಕೆ ಕಾರಣವಾಗಿದೆ. ಬೇಸಿಗೆಯ ತಾಪ ಒಂದೆಡೆ ಇಡೀ ಅರಣ್ಯವೆಲ್ಲ ಬೋಳಾದರೆ ಮತ್ತೊಂದೆಡೆ ಬೆಂಕಿ ಅವಘಡಕ್ಕೆ ನಾಂದಿ ಆಗುತ್ತಿದೆ. ಮೊದಲೆಲ್ಲ ಯುಗಾದಿ ಹಬ್ಬ ಆಚರಣೆ ಸಂದರ್ಭದಲ್ಲಿ ಏನೋ ತಳಮಳ ಮನೆಯ ಬಾಗಿಲ ತೋರಣ ಕಟ್ಟಿ ಎಲ್ಲರೊಡನೆ ಬೆರೆತು ಖುಷಿ ಪಡುವುದೇ ಒಂದು ಸಂಭ್ರಮ ಆಗಿತ್ತು.

 ಇಂದಿನ ದಿನಮಾನಗಳಲ್ಲಿ ಮನೆಯಲ್ಲಿ ಇರಬೇಕಾದ ಹತ್ತಾರು ಜನ ನಗರೀಕರಣದ ಧನ ಸಂಪಾದನೆ ಗುರಿಯಾಗಿಸಿ ಪೂರ್ವಜರ ಆಸ್ತಿ ಮನೆ ಉಳಿಸಲು ವಯಸ್ಸಾದ ಮುದ ಜೀವಗಳ ಬಿಟ್ಟು ಹೋಗಿಹವು ಮರಳಿ ದೂರದಿಂದ ಬಂದವರು ಇರೋದು ಮೂರೇ ದಿನ ಆದರಲ್ಲಿ ಅವರೊಡನೆ ನಾಲ್ಕು ಮಾತನಾಡಲು ಸಮಯವಿರದ ಪರಿಸ್ಥಿತಿ ನಿರ್ಮಾಣವಾಗಿದೆ. ಬರೀ ಸೆಲ್ಫಿ ಪೋಟೋಗಳ ಅಬ್ಬರ ಕಾಣುತ್ತಿದೆ. ಹಿರಿಯ ಜೀವಗಳಿಗೆ ಮಕ್ಕಳು ಮತ್ತು ಮೊಮ್ಮಕ್ಕಳು ಇರೋದ ಕಂಡು ಅವರ ಮನಸ್ಸಿನ ಉಲ್ಲಾಸಕ್ಕೆ ಪಾರವೇ ಇರೋದಿಲ್ಲ ಆದು ಕೆಲವು ದಿನಗಳ ಮಾತ್ರ ಸಾಧ್ಯ ಆದರೆ ಯಥಾ ಪ್ರಕಾರ ಯುಗಾದಿ ಹಬ್ಬ ಮುಗಿದ ಮರುದಿನವೇ ಹೊರಡುವರು ಮತ್ತೇ ಊರಿನತ್ತ ಮುಖಮಾಡಲು ಇಂತಹ ಸಡಗರಕ್ಕೆ ಒಂದು ವರ್ಷದವರೆಗೆ ಕಾಯುವಿಕೆ ನೋವು ಹೇಳತೀರದು. ಇಳಿ ವಯಸ್ಸಿನಲ್ಲಿ ಜೊತೆಗಿದ್ದು ಆಸರೆ ಆಗುತ್ತಾ ಅವರ ಯೋಗಕ್ಷೇಮ ವಿಚಾರಣೆ ಮಾಡಿ ನಾಲ್ಕು ಪ್ರೀತಿ ಮಾತುಗಳು ಆಡುವ ಅವಕಾಶ ಕೂಡ ಇರದು.

ಒಮ್ಮೆ ಯೋಚಸೋಣ ಅವಿಭಕ್ತ ಕುಟುಂಬಗಳು ಬೀದಿಗೆ ಬಿದ್ದಿವೆ ಬದಲಾಗಿ ವಿಭಕ್ತ ಕುಟುಂಬ ಆಗಿ ಪ್ರಸ್ತುತ ಏಕ ಕುಟುಂಬ ಆಗಿ ಮಾರ್ಪಟ್ಟಿದೆ ಆದಕ್ಕೆ ಮೂಲ ಕಾರಣ ನಾವು ಸಾಗುತ್ತಿರುವ ಬದುಕು ಕೇವಲ ಉದ್ಯೋಗ ಹರಿಸಿ ಓದುತ್ತಿರುವ ಪೀಳಿಗೆ ಇಂದು ಆದರ ಭವಿಷ್ಯ ಹೆಚ್ಚಾಗಿ ಏನು ಕಲಿಯದೇ ಹಾಗೇ ಸಮೂಹ ಮಾಧ್ಯಮಕ್ಕೆ ಜೊತು ಬಿದ್ದು ಎಲ್ಲವನ್ನೂ ಕಳೆದುಕೊಂಡು ಎಲ್ಲೆಂದರಲ್ಲಿ ಮಧ್ಯೆದಲ್ಲೇ ರೋಗಗಳು ಅವರಿಸಿ ಸಾವು ಸಂಭವಿಸುತ್ತದೆ. ಪ್ರತಿಯೊಬ್ಬ ಯುವಕರು ಉದ್ಯೋಗ ಹರಿಸಿ ನಗರಗಳತ್ತ ಮುಖ ಮಾಡದೇ ಹಳ್ಳಿಗಳಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅನೇಕ ಯೋಜನೆಗಳನ್ನು ಸರಿಯಾಗಿ ಉಪಯೋಗ ಮಾಡಿಕೊಂಡು ತೃಪ್ತಿ ರೀತಿಯಲ್ಲಿ ಇದ್ದುದ್ದರಲ್ಲಿ ಜೀವನ ಸಾಗಿಸಿದರೆ ದೀರ್ಘ ಕಾಲ ಬಾಳುತ್ತೇವೆ ನೆಮ್ಮದಿಯ ಜೀವನ ನಮ್ಮದಾಗುತ್ತದೆ. ಹೆತ್ತವರ ಆರೈಕೆ ಮಾಡಿದರೆ ನಮ್ಮನ್ನ ಸಹ ಮುಂದಿನ ಪೀಳಿಗೆಯು ಹಾಗೇ ಸೇವೆ ಮಾಡಲ್ಲರು. ಹಣವೇ ಮುಖ್ಯ ಎಂಬ ಬಹುದೊಡ್ಡ ಗುರಿ ಇದಕ್ಕೆ ಮುಖ್ಯ ಪ್ರೇರಣೆ ಆಗಿದೆ. ಆದನ್ನ ಮನಸ್ಸಲ್ಲಿ ಹೊರ ತಗೆದು ಸಂಬಂಧಗಳು ಮುಖ್ಯ ಎಲ್ಲರೂ ಒಂದುಗೂಡಿ ಬಾಳಿದರೆ ಸುಖ ಸ್ವರ್ಗ ಸುಖ ನಮಗೆ ದೊರೆಯುತ್ತದೆ ಎಂಬ ಭಾವನೆ ಪ್ರತಿಯೊಬ್ಬರಲ್ಲಿ ಹುಟ್ಟಬೇಕು ಆದೇ ನನ್ನ ಆಶಾ ಭಾವನೆ ಎನ್ನಬಹುದು. 

ನಾ ಕಂಡಂತೆ ಮಕ್ಕಳಲ್ಲಿ ಸಾಮಾಜಿಕ, ಸಾಂಸ್ಕೃತಿಕ, ಮಾನವೀಯ, ಧಾರ್ಮಿಕ ಮೌಲ್ಯಗಳು ಕಣ್ಮರೆ ಆಗಿವೆ ಶೈಕ್ಷಣಿಕ ವ್ಯಾಪಾರೀಕರಣದ ಮುಖ್ಯ ಗುರಿಯಾಗಿಸಿ ಸಂಸ್ಥೆಗಳು ಕಲಿಸಬೇಕಾದದ್ದು ಸಂಸ್ಕೃತಿ ವಿಚಾರ ತಲೆಗೆ ಹತ್ತಿಸದೇ ಉತ್ತಮ ದರ್ಜೆ ಉತ್ತೀರ್ಣರಾಗಿ ಹೊರ ಹೊಮ್ಮುತ್ತಿದ್ದಾರೆ ಹೊರತು ಹಳ್ಳಿಗಳ ಸಂಪ್ರದಾಯ ಆಚರಣೆ ಪರಿಚಯ ಮಾಡಿಕೊಡುವವರಿಲ್ಲ ಯಾಕೆಂದರೆ ಅವರಿಗೂ ಅವುಗಳ ತಿಳಿದುಕೊಳ್ಳುವ ತವಕವಿಲ್ಲ. ಇನ್ನೇನು ಹೇಳಿಕೊಟ್ಟಾರು ಇವೆಲ್ಲ ಮುಂದಿನ ದಿನಗಳಲ್ಲಿ ಯುಗಾದಿ ಹಬ್ಬದ ಪೂಜೆ ಪುರಸ್ಕಾರಗಳು ಹಾಗೂ ಆಚರಣೆಗಳ ವಿವರಣೆ ಕೇವಲ ಪೋಟೋಗಳಲ್ಲಿ ನೋಡುವ ದಿನಗಳು ದೂರವಿಲ್ಲ ನನ್ನ ಕಳವಳ ಎಂದು ವಿಷಾದಿಸುತ್ತಾ ಈ ಲೇಖನ ಅನುಭಾವ ಸಾರಿ ಸೇರಿಕೊಂಡು ಬರೆದಿದ್ದೇನೆ ತಪ್ಪದೇ ಓದಿ ಅಭಿಪ್ರಾಯ ತಿಳಿಸಿ ಮಿತ್ರರೇ.

- ಎಸ್. ರಾಜು, ಸೂಲೇನಹಳ್ಳಿ
ಕಾದಂಬರಿಕಾರ.
ಮೊ :9741566313.

ತಿಮ್ಮಾಪುರ ಹನುಮ ದೇವರ ಒಂದು ಅವಲೋಕನ (ಕೃತಿ ಪರಿಚಯ) - ದಯಾನಂದ ಪಾಟೀಲ.


ಬಾಗಲಕೋಟೆ ಜಿಲ್ಲೆ ಹುನುಗುಂದ ತಾಲೂಕಿನ ಲೇಖಕರು ಹಾಗೂ ಪತ್ರಕರ್ತರಾದ ಜಗದೀಶ ಹದ್ಲಿ ಅವರ ಶ್ರೀ ಮಾರುತೇಶ್ವರ ಮಹಿಮೆ  ಪುಸ್ತಕವನ್ನು ಪ್ರಕಟಿಸಿದ್ದಾರೆ ಏಕೆಂದರೆ  ಲೇಖಕರ ಊರಾದ ತಿಮ್ಮಾಪುರ ಹನುಮ ದೇವರ ಅಪರೂಪದ ಪವಾಡಗಳನ್ನು ಪುಸ್ತಕದಲ್ಲಿ ವಿಶ್ಲೇಷಣೆ ಮಾಡಿದ್ದಾರೆ,
ಪರಮ ಪಾವನೆಯಾದ ಮಾತೆ ಅಂಜನಾದೇವಿ ಹನುಮಂತನ ಅಷ್ಟಸಿದ್ದಿಗಳು ಸಿದ್ದಿಸಲಿ ನವ  ನಿಧಿಗಳ ದಾಸನಾಗು ಎಂಬ ವರವನ್ನು ಕೊಡುತ್ತಾಳೆ , ಶ್ರೀರಾಮಚಂದ್ರನ ಕೃಪಾಕಟಾಕ್ಷಕ್ಕೆ ಪಾತ್ರನಾಗಿರುವ ದಿವ್ಯ ತೇಜಸ್ಸು  ಹೊಂದಿರುವ  ಪರಮ ಪಾವನನಾ ದ ಮಾರುತಿಯನ್ನು ಭಕ್ತಿಯಿಂದ ಪೂಜೆ ಮಾಡುತ್ತಾ ದೈನಂದಿನ ಕಾರ್ಯ ಮಾಡಿದರೆ ಯಶಸ್ಸು ಸಿದ್ಧಿಸುತ್ತದೆ ಎಂಬ ನಂಬಿಕೆ ಇದೆ,
ಹನುಮಂತ ಕರ್ನಾಟಕದ ಹಂಪಿ ಹತ್ತಿರ ಇರುವ ಅಂಜನಾದ್ರಿ ಬೆಟ್ಟದಲ್ಲಿ ಹುಟ್ಟಿ ಬೆಳೆದ ಎಂಬುದು ಪೌರಾಣಿಕ ಹಿನ್ನೆಲೆ ಇದೆ ಇಂದಿಗೂ ಅಲ್ಲಿ ಹನುಮಂತನ ಭಕ್ತರು ಪ್ರವಾಸಿಗರು ಹೋಗಿ ಅಂಜನಾದ್ರಿ ಬೆಟ್ಟದ ದರ್ಶನ ಮಾಡುತ್ತಾರೆ  ನಿಸರ್ಗದ ಸುಂದರತೆಯನ್ನು ಕಣ್ತುಂಬಿ ಕೊಳ್ಳುತ್ತಾರೆ ಹನುಮನ ಭಕ್ತರು ಅಂಜನಾದ್ರಿ ಬೆಟ್ಟವನ್ನು ಪುಣ್ಯ ಕ್ಷೇತ್ರ ಎಂದು ಬಲವಾಗಿ ನಂಬಿದ್ದಾರೆ ಇದಕ್ಕೆ ಅಲ್ಲವೇ ಭಕ್ತಿಯ ಪರಾಕಾಷ್ಠೆ ಹೇಳುವುದು?
ಅಂಜನಾದ್ರಿ ಬೆಟ್ಟ ನಿಸರ್ಗ ತಾಣವಾಗಿ ಪೌರಾಣಿಕ ಹಿನ್ನೆಲೆಯಿಂದ ಜಗತ್ತಿನಲ್ಲಿ ಪ್ರಸಿದ್ಧ ಯಾತ್ರಾ ಸ್ಥಳದಲ್ಲಿ ಒಂದಾಗಿ ನಿಂತಿದೆ ಅಲ್ಲಿ ಹನುಮಂತನ ಶಕ್ತಿ ಇದೆ ಭಕ್ತರಿಗೆ ಬೇಡಿದ ವರ ನೀಡುವ ಪುಣ್ಯ ಸ್ಥಳ ಅಂಜನಾದ್ರಿ ಬೆಟ್ಟ ಅಂದರೆ ತಪ್ಪಾಗಲಾರದು,
ಹನುಮಂತನ ಭಕ್ತಿ ಶ್ರೇಷ್ಠವಾದದ್ದು ಭಕ್ತಿಯಲ್ಲಿಯೇ ಶಕ್ತಿ ಇದೆ ಮಾನವ ಲೋಕಕ್ಕೆ ಹನುಮಂತ ತಿಳಿಸಿಕೊಟ್ಟಿದ್ದಾನೆ ಲಂಕಾಕ್ಕೆ ಹೋಗುವ  ಸಲುವಾಗಿ ಸೇತುವೆಯನ್ನು ನಿರ್ಮಿಸಬೇಕಾಗಿತ್ತು, ಹನುಮಂತನು ಕಲ್ಲಿನ ಮೇಲೆ ಶ್ರೀ ರಾಮ್ ಎಂದು ಬರೆದರೆ ಆಕಲ್ಲು ತೇಲಿ ಹೋಗುತ್ತಿತ್ತು ಇದು ಹನುಮಂತನ ಭಕ್ತಿ ತೋರಿಸುತ್ತದೆ ಶ್ರೀರಾಮಚಂದ್ರನು ಆತ ಅವತಾರಿ  ಪುರುಷ ರಾವಣನನ್ನು ಕೊಂದು   ರಾಕ್ಷಸರನ್ನು ಸಂಹಾರ ಮಾಡಿದ, ಆದರೆ ನಾವು ಶ್ರೀರಾಮಚಂದ್ರನ ಗುಡಿಗಳನ್ನು ಕಟ್ಟಿಲ್ಲ ಆದರೆ ಅವನ ಭಕ್ತ ಹನುಮಂತನ ಗುಡಿ ಕಟ್ಟಿರುವುದು ಇದು ಭಕ್ತಿಗೆ ಇರುವ ಶಕ್ತಿ
ಭಕ್ತಿಗೆ ವಿದ್ಯೆ ಬೇಕು ಮನಸ್ಸು ಬೇಕು ಆಸೆ ಆಮೀಷಗಳನ್ನು ತೊರೆದು ತ್ಯಾಗಿ ಆಗಬೇಕು ಭಾರತೀಯ ಆಧ್ಯಾತ್ಮಿಕ ಕ್ಷೇತ್ರದಲ್ಲಿ ಭಕ್ತಿಯಿಂದಲೇ ಮುಕ್ತಿ ಪಡೆದವರು ಸಾಕಷ್ಟು ಜನ ಇದ್ದಾರೆ ಅದಕ್ಕಾಗಿಯೇ ಇರಬೇಕು ರಾಮಾಯಣದಲ್ಲಿ ಹನುಮಂತ ಹನುಮಂತ ಗಾಗಿ ಒಂದು ಅಧ್ಯಾಯವಿದೆ ಅದಕ್ಕೆ ಸುಂದರ ಕಾಂಡ ಹನುಮಂತನ ಶಕ್ತಿ ಸಾಮರ್ಥ್ಯವನ್ನು ವಾಲ್ಮೀಕಿ ಮಹರ್ಷಿ ರಾಮಾಯಣ ಸುಂದರಕಾಂಡದಲ್ಲಿ  ಚೆನ್ನಾಗಿ ನಿರೂಪಿಸಿದ್ದಾರೆ,
ಈ ಸೇವೆ  ಅನ್ನುವ  ಶಬ್ದಕ್ಕೆ ಅರ್ಥವಿಲ್ಲ ಯಾರು ಯಾರಿಗೂ ಸಂಬಂಧವಿಲ್ಲ ಸೇವಕ ಎಷ್ಟೇ ನಿಷ್ಠೆಯಿಂದ ದುಡಿದ ರೂ ಮಾಲೀಕ ಸೇವಕನಿಗೆ ಸಹಾಯ ಮಾಡೋದಿಲ್ಲ ಮಾಲಿಕ ಸರಿ ಇದ್ದರೆ ಸೇವಕ ಸರಿ ಇರುವುದಿಲ್ಲ ಇಂಥ ಪರಿಸ್ಥಿತಿಯಲ್ಲಿ ಸಾಗಿದೆ  ಕೆಡುಕು ವಿಚಾರಗಳು ನಮ್ಮನ್ನು ಅದೋಗತಿಗೆ ತೆಗೆದುಕೊಂಡು ಹೋಗಿದೆ ,
ಸುಂದರಕಾಂಡದಲ್ಲಿ ಹನುಮಂತನ ಧೈರ್ಯ ಸಾಹಸ ಮಡುಗಟ್ಟಿ ನಿಂತಿದೆ ರಾಮನ ದೂತನಾದ ಹನುಮಂತ ವಿಜಯ ಪತಾಕಿ ಹಾರಿಸುವ ಸಾಕಷ್ಟು ಘಟನೆಗಳು ಈ ಅಧ್ಯಾಯದಲ್ಲಿ ಮೂಡಿಬಂದಿದೆ, ಬಹಳಷ್ಟು ಯುವಕರಿಗೆ ಹನುಮಂತ ಆದರ್ಶ ನಾಯಕ ಸಾಹಸದಿಂದ ಕೂಡಿದ ಕೆಲಸದಲ್ಲಿ ಜೈ ಹನುಮಾನ್ ಅಭಿಮಾನದಿಂದ ಸಂತೋಷ ಪಡುತ್ತಾರೆ ಆಂಜನೇಯ ರೂಪ ಗುಣ ಶೀಲ ಕೃತಿ ವಿವೇಕ ಸಹನಶೀಲತೆ ಬುದ್ಧಿ ಎಲ್ಲವೂ ಹೃದಯಸ್ಪರ್ಶಿ ಅವನ ಗುಣ ಹೆಚ್ಚು ಸೌಂದರ್ಯಯುಕ್ತವಾಗಿದೆ, ಪುರಂದರದಾಸರು ಸುಂದರ ಮೂರುತಿ ಮುಖ್ಯ ಪ್ರಾಣಮನಿಗೆ ಬಂದ ಎಂದು ಹಾಡಿ ಹೊಗಳಿದ್ದಾರೆ,
ಯಾರ ಮುಂದೆಯೂ ಆತ ಎದೆ  ಗುಂದಲಿಲ್ಲ ಯಾರನ್ನು ಬಲದಿಂದ ಗೆಲ್ಲಬೇಕು ಯಾರ ಯಾರನ್ನು ದೈಹಿಕ ಸಾಮರ್ಥ್ಯದಿಂದ ಗೆಲ್ಬೇಕು ಇoಥ ಕಠಿಣ ಪರಿಸ್ಥಿತಿ ಇದ್ದರೂ ಕೂಡ ಜೈಶೀಲ ನಾದನು ಸಮಾಜದಲ್ಲಿ ವಿಕಾರಗೊಳಿಸುವ ಸನ್ನಿವೇಶ  ಹೇರಳವಾಗಿದ್ದರೂ ಕೂಡ ವಿಕಾರಕ್ಕೆ ಬಲಿಯಾಗಲಿಲ್ಲ ಆತನೇ ನಿಜವಾದ ಧೀರ ಮಾರುತಿ ಯಾವ ಕೆಟ್ಟ ವಿಚಾರಕ್ಕೆ ಒಳಗಾಗದೆ ಸ್ವಾಮಿ ಕಾರ್ಯ ದಲ್ಲಿ ಭಕ್ತಿ ನಿಷ್ಠೆ ನಿಷ್ಠೆ ತನ್ನನ್ನು ತಾನು ತೊಡಗಿಸಿಕೊಂಡು ಮಾರುತಿಯ ರುದ್ರದೇವನ ಅವತಾರ ಶಿವ ಪುರಾಣ ಹೇಳುತ್ತದೆ,
ತಿಮ್ಮಾಪುರ ಹನುಮಂತ ದೇವರ ಪೂಜಾರಿಗಳು ಹರಪನಹಳ್ಳಿ ದೇಸಾಯಿರು ತಿಳಿದು ಬರುತ್ತದೆ ಇವರು ಒಂದು ಕಾಲದಲ್ಲಿ ಹರಪನಹಳ್ಳಿಯ ಊರನ್ನು ಬಿಟ್ಟು ಬರುವ ಕಾಲಕ್ಕೆ ಇಲಕಲ್ ತಾಲೂಕಿನ ದಮ್ಮೂರು ಗುಡ್ಡದಲ್ಲಿ ಬರುತ್ತಿರುವ ಮನಸ್ಸು ಶಕ್ತಿಯಾಗಿ ಒಂದು ಕಲ್ಲಿನ ಮೇಲೆ ನಿಂತರಂತೆ,
ವಿಜಯಪುರ ಬಾಗಲಕೋಟೆ ಜಿಲ್ಲೆಯಲ್ಲಿ ಐದು ಪ್ರಾಣ ದೇವರನ್ನು  ಜಾಗೃತ ದೇವರು ಕರೆಯಲಾಗಿದೆ ಹಲಗಣಿ ಯಲಗೂರು ತುಳಸಿಗೇರಿ ಆಚನೂರು ಹಾಗೂ ಕೋರಬಾರ ಜಾಗೃತ ಹನುಮಂತ ದೇವರು ಹೇಳಬಹುದು
ಹುನಗುಂದ ಹುನುಗುಂದ ತಾಲೂಕಿನ ಕಿರಸುರು ಹಡಗಲಿ ತಿಮ್ಮಾಪುರ ಮೂರು ಗ್ರಾಮಗಳಲ್ಲಿ ಜಾತ್ರೆ ನಡೆಯುತ್ತದೆ ಪ್ರಾರಂಭಗೊಂಡ 24 ಗಂಟೆಗಳಲ್ಲಿ ಮೂರು ಗ್ರಾಮಗಳಲ್ಲಿ ಜಾತ್ರೆ ನಡೆಯುತ್ತದೆ,
ಒಬ್ಬ ಪೂಜಾರಿ ನಾಲಿಗೆಯನ್ನು ಕತ್ತಿಸಿಕೊಂಡು ಆ ನಾಲಿಗೆಯನ್ನು ಮರಳಿ ಜೋಡಿಸಿಕೊಂಡ ನಂತೆ ಇನ್ನೊಬ್ಬ ಪೂಜಾರಿ ಕಾಲಿನ ಚಿಪ್ಪನ್ನು ಕುರಿದುಕೊಂಡು ದೀಪವನ್ನು ಹಚ್ಚಿದನಂತೆ ಎಂಬ ನಂಬಿಕೆ ಇದೆ ಆ ಮಹಾಪುರುಷರ ಸಮಾಧಿ ಕಟ್ಟೆ ಹೇಳಲಾಗಿದೆ,
ಜನಾದ್ರಿ ಮನೆತನದ ಹಿರಿಯೊಬ್ಬರು ಹತ್ತಿ ವ್ಯಾಪಾರಕ್ಕಾಗಿ ಹಳ್ಳಿಗಳಲ್ಲಿ ತಿರುಗಾಡುತ್ತಿದ್ದರು ತಿಮ್ಮಾಪುರಕ್ಕೆ ಹೋದರೆ ಮಧ್ಯಾಹ್ನದ ವೇಳೆ ಕೆರೆ ಹತ್ತಿರ ಗಿಡದ ಕೆಳಗೆ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರು ಅಲ್ಲಿ ಹನುಮಂತ ದೇವರ ಮೂರ್ತಿ ಇತ್ತು ಮಂಪ ರು ನಿದ್ದಿಯಲ್ಲಿ ಹನುಮ ದೇವರ ಬಂದು ನೀನು ಇಲ್ಲಿಂದ ಅವರಿಗೆ ವಾಯುವ್ಯ ದಿಕ್ಕಿಗೆ ಹೋಗಿ ನಂತರ ಊರು ಸೇರಬೇಕು ನಿನಗೆ ಒಳ್ಳೆಯ ವ್ಯಾಪಾರವಾಗಿ ಸಂಪತ್ತು ಆಸ್ತಿ ಗಳಿಸುತ್ತಿ ಹೇಳಿದಂತಾಗುತ್ತದೆ ಅವರು ಆ ರೀತಿ ಮಾಡಿದರಂತೆ ಈಗಲೂ ಸಹ ಹುನಗುಂದದ ಜನಾದ್ರಿ ಕುಟುಂಬದವರು ತಿಮ್ಮಾಪುರ ಮಾರುತಿ ದೇವಸ್ಥಾನಕ್ಕೆ ಭಕ್ತಿಯಿಂದ ಸೇವೆ ಮಾಡುತ್ತಾ ಬಂದಿದ್ದಾರೆ,
ಗ್ರಾಮದ ಕೆಲವು ಸಂದ ಸಮುದಾಯಗಳಲ್ಲಿ ಮದುವೆಯಾಗುವ ಪೂರ್ವದಲ್ಲಿ ಹನುಮಂತ ದೇವರಿಗೆ ದೀಡ್ ನಮಸ್ಕಾರ ಹಾಕುವ ಪದ್ಧತಿ ಇದೆ ನಂತರ ಗೋಪಾಳ ತುಂಬಿಸುವ ಪದ್ಧತಿ ಇದೆ ರೆಡ್ಡಿ ಸಮುದಾಯದಲ್ಲಿ ವರ್ಷಕ್ಕೆ ಒಂದು ಕುಟುಂಬದಲ್ಲಿ ಒಂದೇ ವಿವಾಹ ಎಂಬ ನಿಯಮ ಇದ್ದು  ಎರಡು ಮದುವೆ ಆದರೆ ಆ ಕುಟುಂಬದಲ್ಲಿ ಸಮಸ್ಯೆಗಳು ಕಾಡುತ್ತವೆ,
ಲೇಖಕರು ಹನುಮದೇವರ ಬಗ್ಗೆ ಸವಿಸ್ತಾರವಾಗಿ ವಿವರಿಸಿದ್ದಾರೆ ಮತ್ತೆ  ಕೃತಿಗಳು ಬರುವಂತಾಗಲಿ ಎಂಬುದು ಸಹೃದಯಗಳ ಶುಭ ಹಾರೈಕೆ.
- ದಯಾನಂದ ಪಾಟೀಲ, ಅಧ್ಯಕ್ಷರು ಭಾರತೀಯ ಕನ್ನಡ ಸಾಹಿತ್ಯ ಬಳಗ ಮಹಾರಾಷ್ಟ್ರ.

ಭೂಒಡಲ ಹಸಿರು‌(ಕವಿತೆ) - ಶಿವಾ ಮದಭಾಂವಿ.

ಬಂತು ಬಂತು ಯುಗಾದಿಯು
ಸಿರಿವನಗಳ ಸಂಭ್ರಮವು

ಹಳೆಬೇರುಗಳ ಜೊತೆಗೆ
ಹೊಸ ಚಿಗುರುಗಳ ಬೆಸುಗೆಯು

ತಿಳಿಸುವವು ಜೀವನದ ಪರಿಯ
ಮಾವು ಬೇವುಗಳು ಮನುಜ ನೀ ತಿಳಿಯ

ಕಹಿ ಸಿಹಿಗಳು ನೂರೆಂಟು
ಬೆರೆತು ಬಾಳು ನೀ ಸ್ವರ್ಗವುಂಟು

ಹೊಸ ವರುಷದ ಹೊಸ ಭಾವಗಳ ಜೊತೆ
ಮರೆಯುತಾ ಸಾಗೋಣ ಕಹಿಗಳ ವ್ಯಥೆ

 ಪ್ರಕೃತಿಯ  ಹಸಿರು ಹಾಸುಹೊಕ್ಕಾಗಿ
ತಿಳಿಯೊ ಮನುಜ ಜೀವನವ ಚೊಕ್ಕಾಗಿ

ವರ್ಷಕ್ಕೊಮ್ಮೆ ಪ್ರಕೃತಿಗಳ  ಚೈತ್ರಶಾಲೆ
ಭೂಒಡಲೆಲ್ಲ ಹಸಿರು ಹಸಿರಿನ ಮಾಲೆ

- ಶಿವಾ ಮದಭಾಂವಿ,
ಗೋಕಾಕ.
# 8951894526

ಹೊಸ ವರುಷದ ಬುನಾದಿ, ಈ ಯುಗಾದಿ (ಕವಿತೆ) - ಬಿ.ಎಂ. ಮಹಾಂತೇಶ.

ತನಿ, ಅತನಿಗಳೆಂಬ ಎಲೆ
ಕಾಯಿ ಹೊತ್ತ ಮರಗಳು
ಅವುಗಳ ಸುರಿಸಿ ಹೊಸತನವ
ಬಯಸುವ ಕಾಲವಿದು...

ನರಜೀವಿಯ ಹಳೆ ತೊಗಲು
ಕಳೆದು, ಹೊಳೆಯುವ
ಹೊಸ ಬಣ್ಣ ತಿರುಗುವ
ಸಂತಸದ ವಸಂತ ಕಾಲವಿದು...

ರವಿ ಬರುವ ಮುನ್ನ
ಎದ್ದು, ಕೋಗಿಲೆಯ ನವ
ರಾಗವ ಕೇಳುತ, ವಿಶೇಷವಾಗಿ
ರತ್ನಪಕ್ಷಿಯ ಹುಡುಕುವ ಕಾಲವಿದು...

ಹಸುಗೂಸಂತೆ ನಗುವ ಮಾವಿನೆಲೆಯ,
ತೋರಣವ ಕಟ್ಟಿ, ಬೇವು ಬೆಲ್ಲವನು
ಸೇರಿಸಿ ಕುಟ್ಟಿ, ಸಮನಾಗಿ
ಸವಿಯುವ ಕಾಲವಿದು...

ಹಾಕಿದೆ ಈ ಕಾಲವು
ಹೊಸತನು, ಹೊಸತನ
ಹೊಸ ಮನಕೆ ಬುನಾದಿ...
ಅದುವೇ ನಮ್ಮ ಈ ನಾಡಹಬ್ಬ
ನವ ವಸಂತದ ಯುಗಾದಿ...

- ಬಿ.ಎಂ. ಮಹಾಂತೇಶ.
ವಿಜಯನಗರ
9731418615

ಯುಗಾದಿಯ ಹೊಸ ಪರ್ವಾರಂಭ (ಲೇಖನ) - ಶ್ರೀಮತಿ ಸುಲೋಚನಾ ಮಾಲಿಪಾಟೀಲ.

ಪ್ರಕೃತಿಯಲ್ಲಿ ಸುಂದರವಾದ ಬದಲಾವಣೆಯ ನಿಯಮಕ್ಕೆ ನಮ್ಮ ಪೂರ್ವಜರು, ಸೃಷ್ಟಿಯಿಂದ ತಮ್ಮ ಅನುಭವಕ್ಕೆ ಬರುವ ಹೊಸ ಪರ್ವ ಅದುವೇ ಯುಗಾದಿ ಹಬ್ಬವೆಂದು ಆಚರಣೆಯಲ್ಲಿ ತಂದರು. ಈ ಹಬ್ಬ ಶುಭ ಸಂದೇಶವನ್ನು ಸಾರುತ್ತ ಶುಭ ಕಾರ್ಯಗಳನ್ನು ಮಾಡಲು ಸೂಚಿಸುವ ಶುಭದಿನವು ಕೂಡವಾಗಿದೆ. ಬದುಕಿನ ಅರ್ಥವನ್ನೇ ತಿಳಿಸಿ ಮನದಟ್ಟು ಮಾಡಿಸುವ ಹಬ್ಬವಾಗಿದೆ. ಜೀವನ ಬರೀ ಆನಂದದ ಕೂಟವಲ್ಲದೇ ಹಾಗೇ ದುಃಖದ ಕೂಟವು ಅಲ್ಲ. ಜೀವನದಲ್ಲಿ ಸುಖ ದುಖಃ, ನೋವು ನಲಿವು, ಏರು ಇಳಿವು, ಬೆಳಕು ಕತ್ತಲೆ, ಮೇಲು ಕೀಳು ಇವೆಲ್ಲವುಗಳನ್ನ ತಿಳಿದು, ಅರಿತು ಬದುಕುವ ಜೀವನವನ್ನ ಯುಗಾದಿ ಹಬ್ಬ ಕಲ್ಪಿಸುತ್ತದೆ. ಉದುರುವಿಕೆ; ಅರಳುವಿಕೆ; ಅಗಲುವಿಕೆ; ಚಿಗುರುವಿಕೆಯ ಪರಿಪೂರ್ಣ ಕಾರ್ಯಚಕ್ರದ ಗತಿಯನ್ನು ಸೂಚಿಸಿ ನವನವಿನತೆಯಲ್ಲಿ ಕಂಗೊಳಿಸುವ ಪರಿಸರವನ್ನ, ಹಸಿರು ಚಿಗುರು ಮೊಗ್ಗುಗಳಿಂದ ತುಂಬಿದ ಕಾನನವನ್ನ ಹೊಸ ಪರ್ವವೆಂದು ಕರೆಯುತ್ತೇವೆ. ಅದನ್ನೆ ಹೊಸವರ್ಷವನ್ನು ನಮ್ಮ ಭಾರತೀಯರು ವೈವಿಧ್ಯತೆಯ ಮೆರಗಿನಲ್ಲಿ ಆಚರಿಸುವ

ಯುಗಾದಿ ಹಬ್ಬವಾಗಿದೆ. ದೇಶದ ರೈತರು ಈ ಹಬ್ಬವನ್ನು ಗೌರವಿಸುವ ಮತ್ತು ಹೊಸ ಬೆಳೆಯನ್ನು ಸಂಭ್ರಮಿಸುವ ಹಬ್ಬವಾಗಿದೆ. ಹೊಸ ಪರ್ವದ ಸೃಷ್ಟಿಯಲ್ಲಿ ಕೋಗಿಲೆಗಳು ತಮ್ಮ  ಧ್ವನಿ ಮಾಧುರ್ಯ ಕೇಳಿಸುತ್ತ ವಸಂತ ಋತುವಿನ ಆಗಮನವನ್ನ ತಮ್ಮ ಮೂಲಕ ಹರಿಬಿಡುತ್ತವೆ. ಅಂದರೆ ಯುಗಾದಿಯ ಮುನ್ಸೂಚನೆ ನೀಡುತ್ತಾ ಹಬ್ಬವನ್ನ ಸ್ವಾಗತಿಸುತ್ತದೆ. ಯುಗಾದಿಯಿಂದ ಸೃಷ್ಟಿಯಲ್ಲಿ ನವ ಚೈತನ್ಯದ ಕ್ರಿಯಾಶಿಲತೆಯ ವಾತಾವರಣ ಎಲ್ಲೆಡೆಯೂ ಬಿಂಬಿತವಾಗಿದೆ. ಯುಗಾದಿ ನಾಡಿನಲ್ಲೆಯಲ್ಲ ವಿಶ್ವಕ್ಕೂ ಅದರದೇಯಾದ ಗಾಢತೆ ಬೀರುವ, ಸುಖ ಶಾಂತಿಯನ್ನ ನೀಡುವ ವಜ್ರ ಸಮಾನ ಕಾಲವಾಗಿದೆ. ಹೃದಯ ವೈಶಾಲ್ಯತೆ ಹೊಂದಿದ ಶಿವಶರಣರಿಗೆ, ಮುಕ್ತಿ ಬಯಸುವ ಆರಾಧಕನಿಗೆ,  ತಮ್ಮ ಕಾಯಕದಲ್ಲಿಯೇ ತೃಪ್ತಿ ಕಾಣಬಯಸುವವರಿಗೆ, ಪರಿಸರದ ಬಯಲೊಳಗೆ ಬಯಲಾಗಿನಿಂತ  ಶಿವ ಅವರ ಭಕ್ತಿಯ ಫಲವನ್ನು ನೀಡಲು ಧರೆಗೆ ಬಂದಿದ್ದಾನೆ ಎಂಬ ಸಂದೇಶ ನೀಡುವ ಮಹಾಪರ್ವವೇ ಯುಗಾದಿ ಹಬ್ಬವಾಗಿದೆ.

'ಶತಾಯುರ್ವಜ್ರ ದೇಸಾಯಿ ಸರ್ವಸಂಪತ್ಕರಾಯಚ
ಸರ್ವಾರಿಷ್ಟವಿನಾಶಾಯ ನಿಂಬಕಂ ದಳ ಭಕ್ಷಣಂ'.

ಶತಾಯುಷಿಯಾಗಿ ಬದುಕಲು ವಜ್ರದಂತಹ ದೇಹದಲ್ಲಿ ಶಾಂತಿ, ಶಕ್ತಿ ಸಾಮಾರ್ಥ್ಯ, ನೆಮ್ಮದಿಯನ್ನ ಬೇವು ಬೆಲ್ಲ ಸವಿಯುದರಿಂದ ಆ ದೇವರು ವಿಶ್ವದಲ್ಲಿ ಸಿಹಿಕಹಿಯ ಮರ್ಮವನ್ನು ತಿಳಿಸಿದ್ದಾನೆ. ಹಬ್ಬದಲ್ಲಿ ಉಪಯೋಗಿಸುವ ಮಾವು ಬೇವಿನ ಮಹಿಮೆಯನ್ನು ಸಾರಿದ್ದಾನೆ.

ಸುಂದರವಾಗಿ ಅಲಂಕೃತಗೊಂಡ ಬಣ್ಣಬಣ್ಣದ ರಂಗೋಲಿಯಿಂದ ಯುಗಾದಿ ಹಬ್ಬ ಪ್ರಾರಂಭವಾಗುತ್ತದೆ. ಬಾಗಿಲಿಗೆ ಮಾವಿನ ತೊಳಲಿನ ತೋರಣ ಕಟ್ಟುವುದರಿಂದ ಶುದ್ಧವಾದ ಆಮ್ಲಜನಕ ನೀಡುವದಲ್ಲದೆ. ಧನಾತ್ಮಕ ಶಕ್ತಿಯನ್ನು ಮನೆಯಲ್ಲಿ, ವ್ಯಾಪಾರದಲ್ಲಿ ದೊರಕಿಸಿಕೊಡುತ್ತದೆ. ನಕಾರಾತ್ಮಕ ಶಕ್ತಿಯನ್ನು ದೂಡಿ ಸಕಾರಾತ್ಮಕ ವಾತಾವರಣ ನಿರ್ಮಾಣ ಮಾಡುತ್ತದೆ. ಮಾವಿನ ಜೊತೆ ಬೇವಿನ ಎಲೆಗಳನ್ನು ಕಟ್ಟುವುದರಿಂದ ರೋಗನಿರೋಧಕ ಶಕ್ತಿಯು ಗಾಳಿಯ ಜೊತೆಗೆ ಮನೆಯೊಳಗೂ ಪ್ರವೇಶಿಸಿ ಉತ್ತಮ ವಾತಾವರಣ ನಿರ್ಮಾಣ ಮಾಡುತ್ತದೆ. ಯುಗಾದಿ ಹಬ್ಬದಲ್ಲಿ ಎಣ್ಣೆಸ್ನಾನ ಮಾಡುವ ಪ್ರಯೋಜನಗಳು ಅದೆಷ್ಟೋ ಜನರಿಗೆ ತಿಳಿದೆ ಇರುವುದಿಲ್ಲ. ದೇಹದಲ್ಲಿನ ಉಷ್ಣಾಂಶವನ್ನ ನಿಯಂತ್ರಿಸುತ್ತದೆ. ದೆಹದಲ್ಲಿನ ಕುಂಡಲಿನಿ ಚಕ್ರಗಳು ಜಾಗೃತವಾಗಿ ಕ್ರಿಯಾಶಿಲವಾಗುತ್ತವೆ. 

ಇನ್ನು ಮಾವು ಬೇವು ಬೆಲ್ಲದ ಜೊತೆ ತಿನ್ನುವುದರಿಂದ ಸರ್ವ ಅನಿಷ್ಟಗಳು ನಾಶಹೊಂದುತ್ತವೆ. ಬೆಲ್ಲ -ಸಂತೋಷ,  ಉಪ್ಪು- ಆಸಕ್ತಿ, ಬೆವು- ಕಹಿಯನ್ನು, ಹುಸಿ ಮಾವು- ಹೊಸ ಹೊಸ ಸವಾಲುಗಳನ್ನ ಎದುರಿಸುವ ಶಕ್ತಿಯನ್ನು ಮಾವು ಬೇವಿನ ಪಚ್ಚಡಿಯ ಸೇವನೆಯಿಂದ ಈ ಎಲ್ಲ ಶಕ್ತಿಸಾಮರ್ಥ್ಯಗಳನ್ನಗಳಿಸುತ್ತೆವೆ. ಒಟ್ಟಾರೆ ಸಿಹಿಕಹಿಯ ಸ್ವಾದ ಅನುಭವಿಸಿ ಬದುಕಿನಲ್ಲಿ ಎಲ್ಲವನ್ನು ಸಮತೋಲನದಿಂದ ಕಾಪಾಡಿಕೊಳ್ಳುವುದನ್ನು ಸೂಚಿಸುತ್ತದೆ. ಮನೆಯಲ್ಲಿ ಸಿಹಿ ಅಡುಗೆಮಾಡಿ ಕುಟುಂಬದವರೆಲ್ಲ ಸವಿದು ನೆರೆಹೊರೆಯವರ ಜೊತೆಗೂ ಸಿಹಿಯನ್ನು ಹಂಚಿಕೊಳ್ಳುವದಾಗಿದೆ. ಮುಂದಿನ ಹೊಸ ಪರ್ವ ಬರುವವರೆಗೂ ದೇವರ ಕೃಪಾಕಟಾಕ್ಷ ನಮ್ಮಮೇಲೆಯಿರಲೆಂದು ಪ್ರಾರ್ಥಿಸುವ ಹಬ್ಬವಾಗಿದೆ. ಹೊಸ ಉಡುಪುಗಳನ್ನು ಧರಿಸಿ ಕುಟುಂಬದವರೆಲ್ಲ ಹೊಸ ಆಲೋಚನೆಗಳಲ್ಲಿ ಕ್ರಿಯಾಶೀಲತೆಯಲ್ಲಿ ತೊಡಗುವ ಹಬ್ಬವಾಗಿದೆ.
ಹೊಸತವನ್ನು ಆಹ್ವಾನಿಸುವ ವಸಂತ ಋತುವಿನಲ್ಲಿ ಪ್ರಕತಿಯ ರಮ್ಯ ಸೊಬಗನ್ನು ಆಸ್ವಾದಿಸುವುದೇ ಒಂದು ಖುಷಿ. ಹಬ್ಬದ ಹಿನ್ನೆಲೆ ಏನೇ ಇದ್ದರೂ, ವೃಕ್ಷ ರಕ್ಷಣೆಯಲ್ಲಿ ಸೃಷ್ಟಿಯ ಸಂರಕ್ಷಣೆಯನ್ನು ಬೆಳೆಸುತ್ತ ಯುಗಾದಿಯ ಹಬ್ಬ ಆಚರಿಸೋಣ.

- ಶ್ರೀಮತಿ ಸುಲೋಚನಾ ಮಾಲಿಪಾಟೀಲ, ಧಾರವಾಡ.

ಬಡಪಾಯಿ ಬದುಕೇ ಹಂಗೆ ಕಣ್ರೀ (ಕವಿತೆ) - ವಿನಯ್ ಎಸ್.ಕೆ.

ಹುಟ್ಟು , ಸಾವು ಎಂಬ 2 ದಿನದ ಸಂತೆ....
ಇಲ್ಲಿ ಎಲ್ಲರದ್ದೂ ಅವರ ಅವರದ್ದೇ ಚಿಂತೆ....

ನಂಬುವರು ಇಲ್ಲಿ ಬೇಗನೇ ಅಂತೆ ಕಂತೆ....
ಸಿಗುವುದೇ ಇಲ್ಲ ಕಣ್ರೀ ಬಡಪಾಯಿ ಬದುಕು ಮತ್ತೆ ಮತ್ತೆ...

ಹಾಗಾಗಿ
ಸಾಗಿಸಿ ಮುಂದುವರೆಸಿ ಬಡಪಾಯಿ ಬದುಕನ್ನು ಪರಮಾತ್ಮನು ಮೆಚ್ಚುವಂತೆ....

ಹೋಗುವ ಮುನ್ನ ಹೊತ್ತೋಯಿ   ಪ್ರೀತಿ , ವಿಶ್ವಾಸ , ನಂಬಿಕೆ , ಗೌರವ , ಒಳ್ಳೆತನವನ್ನು ಕಂತೆ ಕಂತೆ ....

- ವಿನಯ್ ಎಸ್.ಕೆ.

ಯುಗಾದಿ (ಕವಿತೆ) - ತುಳಸಿದಾಸ ಬಿ. ಎಸ್.

ಮಡಿಗೊಂಡ ಮನೆ ಮನದಿ
ಸ್ವಾಗತವು ಬಾರೊ
ಬ್ರಹ್ಮ ಬ್ರಹ್ಮಾಂಡವನು
ಸೃಷ್ಟಿಸಿದ ದಿನ ಬಾರೊ

ಆ ರವಿಗೆ ನಮಿಸುತ
ಪಂಚಾಂಗ ಕೇಳುತ
ಸಿಹಿ ಕಹಿಯ ಸವಿಯುವ
ಹೊಸ ದಿನವೆ ಬಾರೊ

ಚೈತ್ರ ಮಾಸದಿ ಭಾವ
ಚಿಗುರಿಸುತ ಬಾರೊ
ಸಮೃದ್ಧಿ ಸಂಪತ್ತು
ಸಂತಸವ ತಾರೊ

ಎಲ್ಲ ಪ್ರಾಯದ ಜನಕೆ
ಮಲ್ಲಿಗೆಯಾಗುತ ಬಾರೊ
ಸಮರಸಕೆ ಹೊಂದುವ
ಶಕ್ತಿ ತುಂಬಲು ಬಾರೊ

ಅಳಿಸಿ ಉಳಿಸಿತ ಜೀವಿ
ತಿಳಿದು ನಡೆಸಲು ಬಾರೊ
ಜಗವ ಕದಿಲಿಸುತಲಿ
ಜಡವ ಓಡಿಸು ಬಾರೊ
- ತುಳಸಿದಾಸ ಬಿ. ಎಸ್.,
ಶಿಕ್ಷಕರು, ಸಿಂಧನೂರು.

ಮತ್ತೆ ಬಂತು ಯುಗಾದಿ (ಕವಿತೆ) - ಆಶಾ ಎಲ್. ಎಸ್.

ನವವರುಷಕೆ ನಾಂದಿ ಯುಗಾದಿಯು
ಚೈತ್ರದಲಿ ವಸಂತಾಗಮನ ಆಗಿಹುದು
ನವಸಂವತ್ಸರದ ಸಂಭ್ರಮದಿ ಸರ್ವರು
ಶುಭಕೃತವು ತರಲಿ ಶುಭವೆಲ್ಲರಿಗೂ 

ಎಲ್ಲೆಡೆ ತಳಿರು ತೋರಣವು
ನಾಡು ಹಸಿರಿನಿಂದ ಸಿಂಗಾರಗೊಂಡಿಹುದು
ನವ ಉಲ್ಲಾಸ ಹರಷವು ಮೇಳೈಸಿಹುದು
ಮಧುವರಸಿ ಬಂದಿಹವು ದುಂಬಿಗಳು

ಮಾವು ಬೇವು ಗಿಡಮರಗಳು
ಚಿಗುರೊಡೆಯುವ ಪರ್ವವಿದು
ಕೋಗಿಲೆಗಿದುವೆ ಮುದವು
ಕುಹೂಗಾನ ಮನಕಾನಂದವು

ಹಸಿರು ಮಾವು ಬೇವಿನ ತೋರಣಕಟ್ಟಿ
ಎಲ್ಲರೂ ಕೂಡಿ ಹೋಳಿಗೆ ಸವಿದು
ಸಂಭ್ರಮದಿ ಕಾತುರದಿ ಚಂದಿರನ ನೋಡಿ
ಬೇವು ಬೆಲ್ಲವ ಹಂಚಿ ಹಿರಿಯರ 
ಆಶೀರ್ವಾದವ ಪಡೆಯುವ

ಬೇವು ಬೆಲ್ಲದಂತೆ ಸಮನಾಗಿ
ಜೀವನವ ನಡೆಸೋಣ
ಹಳೆ ಎಲೆ ಕಳಚಿ ಹೊಸದಾಗಿ
 ಚಿಗುರುವ ಪ್ರಕೃತಿಯಂತೆ

ಹಳೆಯದೆಲ್ಲಾ ಮರೆತು ಹೊಸತು
ಅಳವಡಿಸಿಕೊಳ್ಳೋಣ
ಹಸಿರು ತುಂಬಿರುವ ಪ್ರಕೃತಿಯಂತೆ
ಎಲ್ಲರ ಜೀವನವು ನಳನಳಿಸಲಿ

ಈ ಹೊಸ ವರುಷ ಹೊಸ ಹರುಷ
ಹೊಸ ಹುರುಪು ತರಲಿ ಎಲ್ಲರ ಬಾಳಲಿ
- ಆಶಾ ಎಲ್ ಎಸ್, ಶಿವಮೊಗ್ಗ.

ಅಪ್ಪನ ಪ್ರಪಂಚ (ಕವಿತೆ) - ಕೆ . ಅರ್ಪಿತ.

ಹೆಗಲ ಮೇಲೆ ಕೂರಿಸಿಕೊಂಡು ಅವನು ಕಾಣದ ಜಗತ್ತನ್ನು ಮಕ್ಕಳಿಗೆ ತೋರಿಸಿದನು,
ಎಷ್ಟೇ ಕಷ್ಟಗಳಿದ್ದರೂ ತೋರಿಸಿಕೊಳ್ಳದೆ ಮಕ್ಕಳ ಜೀವನಕ್ಕಾಗಿ ದಣಿದನು,

ತಾಯಿಯನ್ನು ಮಾತ್ರ ಹೊಗಳುವ ಮಕ್ಕಳಿಗೆ ತಂದೆಯ ಬೆವರ ಹನಿ ಕಾಣದಾಯಿತು,
 ಕುಟುಂಬದ ಜವಾಬ್ದಾರಿಗಾಗಿ ಅವನ ಅರ್ಧ ಆಯಸ್ಸು ಅಲ್ಲಿಯೇ ಕಳೆದು ಹೋಯಿತು,

ಮುಪ್ಪಿನ ಕಾಲದಲ್ಲಿ ಮಕ್ಕಳು ನೆರವಾಗುವರು ಎಂದು ತಂದೆ ನಂಬಿದನು,
ಅವನು ಮಾಡಿದ ಆಸ್ತಿ ಮಕ್ಕಳಿಗೆ ಬೇಕಾಯಿತು ಆದರೆ ಅವನು ಯಾರಿಗೂ ಬೇಡವಾದನು,

ಯಾರಿಗೂ ಭಾರವಾಗಬಾರದೆಂದು ಮಕ್ಕಳು ವೃದ್ದಾಶ್ರಮಕ್ಕೆ ಸೇರಿಸಿದರು,
ಅದೇ ಸ್ಥಿತಿ ಅವರಿಗೂ ಬರಬಹುದೆನ್ನೂದ ಮರೆತಿರುವರು,

ಮಕ್ಕಳಿಗಾಗಿ ಕಟ್ಟಿದ ಕನಸಿನ ಕೋಟೆಯು  ಕನಸಾಗಿಯೇ ಉಳಿಯಿತು,
ಏನು ನಿರೀಕ್ಷೆಗಳಿಲ್ಲದ ತ್ಯಾಗ ಅವನಿಗೆ ಮುಳುವಾಯಿತು
ಇಲ್ಲಿಯೂ ತಂದೆಯ ನೋವು ಯಾರಿಗೂ ಕಾಣದಾಯಿತು,

ದೇವರಿಗಿಂತ ಮಿಗಿಲು ಸರಿಸಾಟಿ ಇಲ್ಲ ನಿಮಗ್ಯಾರು.
ನನ್ನಪ್ಪ ನನ್ನ ಪ್ರಪಂಚ.
- ಕೆ . ಅರ್ಪಿತ.

ಯುಗಾದಿ ಹಬ್ಬ (ಕವಿತೆ) - ಶಾರದ ದೇವರಾಜ್ ಎ, ಮಲ್ಲಾಪುರ.

ಬಂತು ಬಂತು ಯುಗಾದಿ ಹಬ್ಬ
 ಸಂಭ್ರಮ ಸಂತಸ ತರುವ ಹಬ್ಬ
 ಬಗೆ ಬಗೆ  ಭೋಜ್ಯವ ಸವಿಯುವ ಹಬ್ಬ
 ರಂಗು ರಂಗಿನ ತೋರಣದ ಹಬ್ಬl

 ಎಣ್ಣೆ ಮಜ್ಜನವ ಮಾಡುವ ಹಬ್ಬ
 ವಸಂತ ಕಾಲದಿ  ಮೂಡುವ ಹಬ್ಬ
 ಹೊಸತನದಲಿ ಮನ ಸೆಳೆಯುವ ಹಬ್ಬ
 ಬೇವು ಬೆಲ್ಲವ ತಿನ್ನುವ ಹಬ್ಬl

l ಬಂತು ಬಂತು ಯುಗಾದಿ ಹಬ್ಬl

 ಭೂತಾಯಿಗೆ  ಹೊನ್ನಾರು ಹೂಡುವ ಹಬ್ಬ
 ದನ ಕರುಗಳಿಗೆ ಸಿಂಗಾರದ ಹಬ್ಬ
  ಬಿತ್ತಿ ಬೆಳೆಯುವ ಭೂತಾಯಿಗೆ  ನಮಿಸುತ
 ಸಾರ್ಥಕಗೊಳಿಸುವ ಸಂಭ್ರಮದ ಹಬ್ಬl

l ಬಂತು ಬಂತು ಯುಗಾದಿ ಹಬ್ಬl

 ಗಿಡ ಮರಗಳಲಿ ಚಿಗುರಿನ ಹಬ್ಬ
 ಮನೆಮನಗಳಲಿ ನಲಿಯುವ ಹಬ್ಬ
 ಪ್ರಕೃತಿಯೇ   ಪಳ ಪಳ  ಹೊಳೆಯುವ ಹಬ್ಬ
 ಹರಸಿ ಹಾರೈಸುವ ಹರುಷದ ಹಬ್ಬl

l ಬಂತು ಬಂತು ಯುಗಾದಿ ಹಬ್ಬl

 ಹೊಳೆಯುವ ಚಂದ್ರನ ನೋಡುವ ಹಬ್ಬ
 ಬಾನಲಿ  ಬೆರಗನು ತರುವ ಹಬ್ಬ
 ಸಿಹಿ ಕಹಿ ಸಮರುಚಿ ತೋರುವ ಹಬ್ಬ
  ವರುಷಕೊಂದೆ ಯುಗಾದಿ ಹಬ್ಬl

l ಬಂತು ಬಂತು ಯುಗಾದಿ ಹಬ್ಬl

 ಸಂಸ್ಕೃತಿ ಸಂಯಮವ ತೋರುವ ಹಬ್ಬ
 ಸುಂದರ ಬದುಕಲಿ ಸಂತಸದ ಹಬ್ಬ
 ಸಡಗರ  ಸಂತೃಪ್ತಿ ಕೊಡುವ ಹಬ್ಬ
 ಹೊಳೆಯುವ ಮನಸಿಗೆ ಹೊಸದಾದ ಹಬ್ಬl
l ಬಂತು ಬಂತು ಯುಗಾದಿ ಹಬ್ಬ

- ಶಾರದ ದೇವರಾಜ್
 ಎ, ಮಲ್ಲಾಪುರ.

ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ವತಿಯಿಂದ ನೈಪುಣ್ಯ ಕೌಶಲ್ಯ ಅಭಿವೃದ್ಧಿ ಕೇಂದ್ರದ ಉದ್ಘಾಟನೆ.


17/3/2023 ರಿಂದ 18/3/2023
ಎರಡು ದಿನಗಳ ಕೌಶಲ್ಯ ತರಬೇತಿಯನ್ನು ಉತ್ತರ ವಿಶ್ವವಿದ್ಯಾಲಯದ ವತಿಯಿಂದ ನೈಪುಣ್ಯ ಕೌಶಲ್ಯ ಅಭಿವೃದ್ಧಿ ಕೇಂದ್ರದ ಉದ್ಘಾಟನೆಯನ್ನು ಮಾನ್ಯ ಕುಲಪತಿಗಳಾದ ನಿರಂಜನ ವಾನಳ್ಳಿ ಅವರು ಉದ್ಘಾಟನೆ ಮಾಡಿ ಮಾತನಾಡುತ್ತಾ ಈ ಆಧುನಿಕ ಕಾಲಘಟ್ಟದಲ್ಲಿ ತುಂಬಾ ಯುವಜನರು ಕೆಲಸವಿಲ್ಲದೆ ಅಲೆಯುತ್ತಿದ್ದಾರೆ ಅವರಲ್ಲಿ ಇರುವ ಕೌಶಲ್ಯದ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಈ ಕೌಶಲ್ಯ ಅಭಿವೃದ್ಧಿ ಕೇಂದ್ರ ಪ್ರಮುಖ ಪಾತ್ರವನ್ನು ವಹಿಸಲಿದೆ ಇದರ ಸದುಪಯೋಗವನ್ನು ಎಲ್ಲಾ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಪ್ರತಿಯೊಬ್ಬರಲ್ಲೂ ಅಗಾಧವಾದ ಶಕ್ತಿ ಇರುತ್ತದೆ ಆ ಕೆಲಸವನ್ನು ಹೊರತೆಗೆಯುವ ಕೆಲಸವನ್ನು ನಾವು ಮಾಡಬೇಕು ತುಂಬಾ ಜನಕ್ಕೆ ಇಂಗ್ಲಿಷ್ ಎಂದರೆ ಭಯ ಇಂಗ್ಲಿಷ್ ಬರದೇ ಇರುವ ಒಂದೇ ಒಂದು ಕಾರಣಕ್ಕೆ ಸಂದರ್ಶನದಲ್ಲಿ ವಿಫಲರಾಗುತ್ತಿರುತ್ತಾರೆ. ಕೆಲಸ ಸಿಗದೇ ಆಗುತ್ತಿರುತ್ತದೆ.
 ಧೈರ್ಯದಿಂದ ಮುನ್ನುಗ್ಗಿದರೆ ಕಲಿತರೆ ಎಲ್ಲವೂ ಸಾಧ್ಯವಾಗುತ್ತದೆ ಈ ಕೇಂದ್ರದಿಂದ ಇಂಗ್ಲಿಷ್ನ್ನು ಕಲಿಸುವ ಕೆಲಸವನ್ನು ಮಾಡಲಾಗುತ್ತದೆ ಎರಡು ದಿನಗಳ ಕಾಲ ಮೈಸೂರಿನ ಫೋಕಸ್ ಅಕಾಡೆಮಿಯಿಂದ ಬಂದಿರುವ ಮುರಳಿಧರನ್ ಮತ್ತು ಉಮೇಶ್ ಅವರು ನಿಮಗೆ ಕೌಶಲ್ಯವನ್ನು ಅಭಿವೃದ್ಧಿಪಡಿಸಿಕೊಳ್ಳುವ ನಿಟ್ಟಿನಲ್ಲಿ ತರಬೇತಿಯನ್ನು ಕೊಡಲಿದ್ದಾರೆ ಅದನ್ನು ಸದುಪಯೋಗ ಪಡಿಸಿಕೊಳ್ಳಿ ಎಂದರು. ಮೌಲ್ಯಮಾಪನ ಕುಲ ಸಚಿವರಾದ ಡಾ. ಡಿ ಡಾಮಿನಿಕ್ ಅವರು ಮಾತನಾಡುತ್ತಾ ವಚನ ಚಳುವಳಿ ಪ್ರಮುಖವಾಗಿ ಕೌಶಲ್ಯವನ್ನು ಅಭಿವೃದ್ಧಿಪಡಿಸುವ ಗೌರವಿಸುವ ಕೆಲಸವನ್ನು ಮಾಡುತ್ತಲೇ ಬಂದಿದೆ ಅವರು ಮಾಡುವ ಕಾಯಕವನ್ನು ಶ್ರದ್ಧೆಯಿಂದ ನಿಷ್ಠಯಿಂದ ಮಾಡುವುದನ್ನು ವಚನ ಚಳುವಳಿ ಎತ್ತಿ ಹಿಡಿಯುತ್ತದೆ ನಮ್ಮಲ್ಲಿರುವ ಭಯಗಳನ್ನ ವರದಬ್ಬಿದರೆ ಮುನ್ನಡೆಯು ಸಾಧ್ಯವಾಗುತ್ತದೆ 
ಕಾರ್ಯಕ್ರಮಕ್ಕೆ ಸ್ವಾಗತವನ್ನು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ನಿರ್ದೇಶಕರಾದ ಡಾ.ಡಿ ಕುಮುದಾ ಅವರು ಮಾಡಿದರು. ಕಾರ್ಯಕ್ರಮದ ನಿರೂಪಣೆಯನ್ನು ನಂದೀಶ್ ಅವರು ನೆರವೇರಿಸಿದರು. ಹಾಗೆಯೇ ವಂದನಾರ್ಪಣೆಯನ್ನು ವಾಣಿಜ್ಯಶಾಸ್ತ್ರ ವಿಭಾಗದ ಮಮತಾ ಅವರು ಮಾಡಿದರು. ಕಾರ್ಯಕ್ರಮದ ಸಂಘಟನೆಯನ್ನು ಅಚ್ಚುಕಟ್ಟಾಗಿ ಇಂಗ್ಲಿಷ್ ವಿಭಾಗದ ಬೀನ ಅವರು ನೆರವೇರಿಸಿದ್ದರು. ಮೊದಲನೆ ದಿನ ಕಲಾನಿಕಾಯದ ವಿದ್ಯಾರ್ಥಿ ಗಳಿಗೆ ತರಬೇತಿ ಕೊಡಲಾಯಿತು. ಎರಡನೆ ದಿನ ವೇಳೆ ವಿಜ್ಞಾನ ವಿದ್ಯಾರ್ಥಿಗಳಿಗೆ ತರಬೇತಿಯನ್ನು ಕೊಡಲಾಯಿತು.

ಸೋಮವಾರ, ಮಾರ್ಚ್ 20, 2023

ಸೊನ್ನೆ (ಕವಿತೆ) - ಕಾಡಪ್ಪಾ ಮಾಲಗಾಂವಿ.

ಸೊನ್ನೆ ಕಂಡುಹಿಡಿದವ ಆರ್ಯಭಟ
ಸಕಲ ಕಡೆ ನೀನೆ ಬಂಟ
ಆಕಡೆ, ಇಕಡೆ ಸಂಬಂದ ಬೆಳೆಸುವ ನಂಟ

ಗಣಿತದಲ್ಲಿ ಇದಕ್ಕೆ ಸೊನ್ನೆ
ನೀನು ಎಲ್ಲಿದ್ದರು ಮಾನ್ಯ
ನಿನ್ನ ಸ್ತಾನ ಅನನ್ಯ

ಹೇಳುವರು ನಿನಗೆ ಪುಜೆ
ನಿನ್ನ ಆಕಾರಕ್ಕೆ ಸದಾ ಪೂಜೆ
ದೇಶದ ಮೆಚ್ಚಿನ ಶ್ರೇಷ್ಟ ಪ್ರಜೆ

ನಿನ್ನ ನಾಮಕರಣ ಜೀರೊ
ಸ್ತಾನ ಪಲ್ಲಟವಾದರ ಹೀರೊ
ನಿಂದೆ ಎಲ್ಲ ಕಡೆ ದರ್ಬಾರು

ನಿನ್ನ ಆಕಾರ ದುಂಡ
ನೀ ಇಲ್ಲವಾದರ ದಂಡ
ನಿಜವಾಗಿಯೊ ನೀನು ಪ್ರಚಂಡ

ನಿನ್ನ ಅರಿತವರು ಜಾಣ
ಲೆಕ್ಕ ಶಾಸ್ತ್ರದಲ್ಲಿ ಹೊರಣ
ಸರ್ವ ಕ್ಷೇತ್ರದಲ್ಲಿ ಇರುವದು ನಿನ್ನ ಚರಣ

ಸಸಾರದಲ್ಲಿ ಪ್ರವೇಶ ಮಾಡಿದರೆ ಸಂಸಾರ
ಆಗಾಗ ತೋರುವೆ ಚಮತ್ಕಾರ
ನಿನ್ನ ಶಕ್ತಿ ಪ್ರಾಬಲ್ಯ ಅಪಾರ

ನಿನ್ನಿಂದ ಶಬ್ದಕ್ಕೆ ಅಲಂಕಾರ
ನೀನು ಸರ್ವ ವ್ಯಾಪ್ತಿಯ ಹರಿಕಾರ
ನೀನೆ ಜಗತ್ತಿನ ಓಂ ಕಾರ

- ಕಾಡಪ್ಪಾ ಮಾಲಗಾಂವಿ, ಶಿರೋಳ.


ಮಾತುಗಳ ಹಪಾಹಪಿ (ಕವಿತೆ) - ಮೋಹನ್ ಬಸಪ್ಪನಾಯಕ.

ಮೌನದೊಳಗೆ ಮಾತು ಅರಳಿಸಿ
ನೋವ ಅಳಿಸುವೆ ಎಂದು
ನೆಚ್ಚಿ ನಿಂತಲ್ಲೇ ನಿಂತಿರುವೆ....,
ಕಾಲದ ಓಟಕ್ಕೂ ಲೆಕ್ಕಿಸದೆ
ಜಗವ ಮರೆತು ಆಗಿರುವೆ ನಾ ಕಲ್ಲು......!

ನಿನ್ನ ಸದ್ದು ಕೇಳಲು
ತವಕದಲಿ ತಲ್ಲಣಿಸುತ್ತ
ಕರೆ, ಸಂದೇಶದ ಕುತೂಹಲದಲ್ಲಿಯೇ
ನನ್ನ ಮೊಬೈಲ್ ಕೂಡ ಕಾದಿದೆ..,
ಬೇಸರವಿದ್ದರೂ ಅದು ಹೇಳಲು
ನಮ್ಮಂತೆ ಮಾತು ಕಲಿತ್ತಿಲ್ಲ.....!

ಹೂತಿಟ್ಟ ಆಸೆಗಳು
ಬೆಪ್ಪಾಗಿ ಬೇಸರವನ್ನೊದ್ದು
ಆನಂದವ ಮರೆತು ಬಿಟ್ಟಿವೆ.,
ಕೈತಪ್ಪಿದ ಆನಂದದ ಕುರುಹು
ಹುಡುಕಲು ನಿನ್ನಯ ಮಾತು
ತುರ್ತು ಬೇಕಾಗಿದೆ......!

ಎದೆಯ ನಾಟಿರುವ ಕೆಂಡಗಳ
ಕೊರಳ ಕತ್ತರಿಸಿ ಕನಸುಗಳ
ಬೆಳೆಸುವ ಧಾವಂತ ನನಗೆ.....,
ದಯೆ ತೋರಿ ಮೌನವನು
ಬದಿಗಿಟ್ಟು ಮಾತುಗಳ ಬುತ್ತಿಯೊಡನೆ
ಬಳಿಗೆ ಬಂದುಬಿಡು ಗೆಳತಿ......!


    - ಮೋಹನ್ ಬಸಪ್ಪನಾಯಕ
 ಡಿ. ಸಾಲುಂಡಿ (ಗ್ರಾ ), ಧನಗಳ್ಳಿ (ಅಂ), ಜಯಪುರ (ಹೋ ), ಮೈಸೂರು (ತಾ )&(ಜಿ )-570008


ಶನಿವಾರ, ಮಾರ್ಚ್ 18, 2023

ಭಾರತೀಯ ಸಂಸ್ಕೃತಿಯ ಹೊಸ ವರ್ಷದಾರಂಭ ಯುಗಾದಿ (ಲೇಖನ) - ಶ್ರೀಮತಿ ಸುಮಂಗಲಾ ಕೃಷ್ಣ ಕೊಪ್ಪರದ.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ದ‌.ರಾ. ಬೇಂದ್ರೆಯವರ ಯುಗಾದಿ ಬಗೆಗಿನ ಹಾಡು ಯಾರಿಗೆ ಗೊತ್ತಿಲ್ಲ ಹೇಳಿ..? ಅದು ಚಲನಚಿತ್ರ ಗೀತೆಯಾಗಿಯೂ ಹೊರಹೊಮ್ಮಿದ ಸುಂದರ ಗೀತೆ....... 
ಯುಗ ಯುಗಾದಿ ಕಳೆದರು ಯುಗಾದಿ ಮರಳಿ ಬರುತ್ತಿದೆ 
ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ 
ಹೊಂಗೆ ಹೂವ ತೊಂಗಲಲಿ ಬೃಂಗದ ಸಂಗೀತ ಕೇಳಿ ಮತ್ತೆ ಕೇಳಿ ಬರುತ್ತಿದೆ..... ಈ ಅದ್ಭುತ ಸಾಹಿತ್ಯಕ್ಕೆ ಸಾವಿಲ್ಲ. ಅದೇ ರೀತಿ ರಾಷ್ಟ್ರಕವಿ ಕುವೆಂಪುರವರು ಸುರಲೋಕದ ಸುರನದಿಯಲ್ಲಿ ಮಿಂದು ಸುರಲೋಕದ ಸಂಪದವನು ತಂದು ನವಸಂವತ್ಸರ ಭೂಮಿಗೆ ಬಂದು ಕರೆಯುತ್ತಿದೆ ನಮ್ಮನ್ನು ಇಂದು ಎಂದು ರಚಿಸಿದ್ದಾರೆ. ಕೆ ಎಸ್ ನರಸಿಂಹಸ್ವಾಮಿಯವರು *ಮಾವು ನಾವು ಬೇವು ನಾವು ನೋವು ನಲಿವು ನಮ್ಮವು,* *ಹೂವು ನಾವು ಹಸಿರು ನಾವು ಬೇವು ಬೆಲ್ಲ ನಮ್ಮವು* ಎಂದರು.
      ಯುಗಾದಿ ಎಂಬುದು ಸಂಸ್ಕೃತ ಪದಗಳಾದ 'ಯುಗ' ಮತ್ತು 'ಆದಿ' ಎಂಬ ಎರಡು ಪದಗಳಿಂದ ಜೋಡಣೆಯಾಗಿದೆ. ಯುಗ ಅಂದ್ರೆ ವರುಷ ಕಾಲಘಟ್ಟ. ಆದಿ ಎಂದರೆ ಆರಂಭ. ಇದರರ್ಥ ಹೊಸ ವರುಷದ ಅಥವಾ ಹೊಸ ಯುಗದ ಆರಂಭ ಎಂದರ್ಥ. ಪುರಾಣದ ಪ್ರಕಾರ ಭಗವಾನ್ ಶ್ರೀ ಮಹಾವಿಷ್ಣುವಿನ ಅನೇಕ ಹೆಸರುಗಳಲ್ಲಿ ಯುಗಾದಿಕೃತ್ ಅಂದರೆ ಯುಗಗಳನ್ನು ಸೃಷ್ಟಿಸುವನನ್ನು ಸೂಚಿಸುವ ಹೆಸರು ಎಂದರ್ಥ.ಚಾಂದ್ರಮಾನ ಹಾಗೂ ಸೌರಮಾನ ಎಂಬ ಎರಡು ರೀತಿಯ ಆಚರಣೆಗಳನ್ನು ಹಿಂದು ಧರ್ಮದ ಜ್ಯೋತಿಷ್ಯ ಶಾಸ್ತ್ರದಿಂದ ನಿರ್ಣಯಗೊಂಡರೂ ಕರ್ನಾಟಕದಲ್ಲಿ ಚಾಂದ್ರಮಾನ ಪದ್ಧತಿ ಮೊದಲಿನಿಂದ ರೂಢಿಯಲ್ಲಿದೆ. ಅಶ್ವಿನಿ ನಕ್ಷತ್ರಕ್ಕೆ ಸೂರ್ಯನು ಪ್ರವೇಶಿಸುವ ಕಾಲವನ್ನು ಹೊಸವರ್ಷ ಎಂದು ಪರಿಗಣಿಸುತ್ತಾರೆ. ಇದೇ ಸೌರಮಾನ. ಆದರೆ ಚಂದ್ರನ ಚಲನ ಗತಿ ಆಧರಿಸಿ ಒಂದೊಂದು ತಿಂಗಳಾಗಿ 12 ಪ್ರದಕ್ಷಣೆಗಳಿಗೆ ಸರಿಯಾಗಿ ಒಂದು ಚಾಂದ್ರಮಾನ ಸಂವತ್ಸರವಾಗುತ್ತದೆ. ಸೂರ್ಯ ಮತ್ತು ಚಂದ್ರಗತಿಯನ್ನು ಅವಲಂಬಿಸಿ 11 ರಿಂದ 13 ಪೌರ್ಣಿಮೆ ಅಥವಾ ಅಮಾವಾಸ್ಯೆಗಳಿಗೊಂದು ಚಾಂದ್ರಮಾನ ಯುಗಾದಿಯಾಗುತ್ತದೆ. 

ಇತಿಹಾಸ ಮತ್ತು ಪೌರಾಣಿಕ ಹಿನ್ನೆಲೆ:
ಭಾರತವನ್ನು ಆಳಿದ ಶಾಲಿವಾಹನನು ಚೈತ್ರ ಶುದ್ಧ ಪಾದ್ಯಮಿಯಂದು ಸಿಂಹಾಸನ ರೂಢನಾದನೆಂದು, ಅಂದಿನಿಂದ ಶಾಲಿವಾಹನ ಶಕೆ ಆರಂಭವಾಯಿತು ಎಂದು ಇತಿಹಾಸ ತಿಳಿಸುತ್ತದೆ. ವರಹಮಿಹಿರಚಾರ್ಯರು ಸಹ ವರ್ಷಾರಂಭವನ್ನು ಚೈತ್ರ ಮಾಸವೆಂದು ತಿಳಿಸಿರುವರು.12ನೇ ಶತಮಾನದಲ್ಲಿ ಪ್ರಸಿದ್ಧ ಭಾರತೀಯ ಗಣಿತಜ್ಞ ಭಾಸ್ಕರಾಚಾರ್ಯರ ಖಗೋಳ ಲೆಕ್ಕಾಚಾರವುಸೂರ್ಯೋದಯದಿಂದ ಯುಗಾದಿಯ ದಿನವನ್ನು ಹೊಸ ವರ್ಷದ ಆರಂಭ, ಹೊಸ ತಿಂಗಳು ಮತ್ತು ಹೊಸ ದಿನವೆಂದು ನಿರ್ಧರಿಸಿದರು.* ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕ್ರಿ.ಪೂ. 18-02-3102 ಕ್ಕೆ ಅನುಗುಣವಾದ ಚೈತ್ರದ ಪ್ರಕಾಶಮಾನವಾದ 15ನೆಯ ಮುಂಜಾನೆ ಶ್ರೀ ಕೃಷ್ಣನು ನಿರ್ಯಾಣವನ್ನು ಪ್ರಾರಂಭಿಸಿದನು ಎಂದು ಹೇಳಲಾಗುತ್ತದೆ.* ಹೊಸ ವರ್ಷದ ಮೊದಲದಿನ ಹಾಗೂ ಬ್ರಹ್ಮಾಂಡವು ಸೃಷ್ಟಿಯಾದ ದಿನವಾಗಿರುವ ಯುಗಾದಿ ಎಂದು ಪ್ರಕೃತಿ ಮಾತೆಯು ನವಚತನ್ಯವನ್ನು ತುಂಬಿಕೊಂಡು ಪೂರ್ಣ ಪ್ರಮಾಣದ ಬಿಸಿಲಿನಲ್ಲಿ ಹಸಿರು ಹಸಿರಾಗಿ ಕಂಗೊಳಿಸುತ್ತ, ಮನುಕುಲಕ್ಕೆ ಉಡುಗೊರೆಯಾಗಿ ನೀಡುವ ಕಾಲವಿದು. ವಸಂತ ಋತುವಿನ ಆರಂಭದ ದಿನವಾದ ಚೈತ್ರ ಮಾಸ ಶುಕ್ಲಪಕ್ಷ ಪಾಡ್ಯದಂದು ಯುಗಾದಿ ಹಬ್ಬವನ್ನು ಆಚರಿಸಲಾಗುತ್ತದೆ.
* ವೇದಗಳ ಪ್ರಕಾರ,ಧರ್ಮ ಗ್ರಂಥಗಳ ಪ್ರಕಾರ ಯುಗಾದಿ ಹಬ್ಬವು ಹಲವು ಮಹತ್ತರಗಳಿಗೆ ಸಾಕ್ಷಿಯಾಗಿದೆ. ಬ್ರಹ್ಮದೇವ ಈ ಜಗತ್ತನ್ನು ಚೈತ್ರ ಶುಕ್ಲ ಪ್ರತಿಪದೇ ಅಂದರೆ ಯುಗಾದಿಯಂದು ಸೂರ್ಯೋದಯ ಕಾಲಕ್ಕೆ ಸೃಷ್ಟಿಸಿದನಂತೆ. ಬ್ರಹ್ಮದೇವನು ಅಂದೇ ಗ್ರಹ, ನಕ್ಷತ್ರ ,ಮಾಸ, ಋತು, ವರ್ಷಾಧಿಪತಿಯನ್ನು ಸೃಷ್ಟಿಸಿ ಕಾಲಗಣನೆಯನ್ನು ಆರಂಭಿಸಿದ. ನಂತರ ಜೀವರಾಶಿಯನ್ನು, ಜಲರಾಶಿ ,ಸಸ್ಯರಾಶಿ, ಬೆಟ್ಟಗುಡ್ಡಗಳನ್ನು ಸೃಷ್ಟಿಸಲು ಆರಂಭಿಸಿದ ಎಂದು ಪುರಾಣಗಳಲ್ಲಿ ಹೇಳಲಾಗುತ್ತದೆ.* ಮಹಾವಿಷ್ಣುವಿನ ದಶಾವತಾರಗಳಲ್ಲಿ ಮೊದಲನೇ ಅವತಾರ ಮತ್ಸ್ಯವತಾರ. ಈ ಅವತಾರವನ್ನು ತಾಳಿದ್ದು ಯುಗಾದಿಯ ದಿನವೆಂದು ವೇದಗಳಲ್ಲಿ ಉಲ್ಲೇಖವಾಗಿದೆ.* ಬ್ರಹ್ಮದೇವನಿಂದ ನಾಲ್ಕು ವೇದಗಳನ್ನು ಕದ್ದಂತಹ ರಾಕ್ಷಸ ಸೋಮಕಾಸುರ ಸಮುದ್ರದೊಳಗೆ ಅವಿತಿರುತ್ತಾನೆ. ಆಗ ವಿಷ್ಣು ಮತ್ಸಾವತಾರವನ್ನು ತಾಳಿ ನೀರಿನಲ್ಲಿ ಅವಿತು ಕುಳಿತಿದ್ದ ಸೋಮಕಾಸುರನನ್ನು ಸಂಹರಿಸಿ, ನಾಲ್ಕು ವೇದಗಳನ್ನು ಬ್ರಹ್ಮ ದೇವರಿಗೆ ಹಿಂತಿರುಗಿಸುತ್ತಾರೆ. ಬ್ರಹ್ಮ ದೇವರು ವೇದಗಳನ್ನು ಪಡೆದ ದಿನವೇ ಯುಗಾದಿ. *ಶ್ರೀರಾಮಚಂದ್ರನು ಲಂಕೆಗೆ ಹೋಗಿ ರಾವಣನನ್ನು ಸಂಹರಿಸಿ ಸೀತಾ ಸಮೇತ ಅಯೋಧ್ಯೆಗೆ ಆಗಮಿಸಿ ರಾಜ್ಯಭಾರ ಆರಂಭಿಸಿದ   ದಿನವೇ ಯುಗಾದಿಯ ದಿನವೆಂದು ಪುರಾಣಗಳಲ್ಲಿ ಹೇಳಲಾಗಿದೆ. *ಯುಗಾದಿಯ ದಿನ ಕಲಿಯುಗವು ಆರಂಭವಾಯಿತು ಎಂದು ವೇದವ್ಯಾಸರು ತಮ್ಮ ಗ್ರಂಥದಲ್ಲಿ ವಿವರಿಸಿದ್ದಾರೆ. ಶಾಸ್ತ್ರಗಳ ಪ್ರಕಾರ, ವೇದಗಳ ಪ್ರಕಾರ ಯುಗಾದಿಯು ಹೊಸ ವರ್ಷದ ಮೊದಲ ದಿನವಾಗಿದೆ. ಬಹಳಷ್ಟು ಶ್ರೇಷ್ಟತೆಯಿಂದ ಕೂಡಿದ ದಿನವಾಗಿದೆ.
        ಜೊತೆಗೆ ಯುಗಾದಿ ಹಬ್ಬ ಪ್ರಕೃತಿಗೆ ಕೃತಜ್ಞತೆಯ ಸಂಕೇತವಾಗಿ ಆಚರಿಸಲ್ಪಡುವ ಹಬ್ಬವಾಗಿದೆ. ವೈವಿಧ್ಯತೆಯಲ್ಲಿ ಏಕತೆಯ ಸಂದೇಶ ಸಾರುವ ನಮ್ಮ ದೇಶದ ಹಲವು ರಾಜ್ಯಗಳಲ್ಲಿ ಉದಾಹರಣೆಗೆ ಕರ್ನಾಟಕ ತೆಲಂಗಾಣ ಆಂಧ್ರಪ್ರದೇಶ ತಮಿಳುನಾಡು ಮುಂತಾದ ರಾಜ್ಯಗಳಲ್ಲಿ ವಿಶೇಷವಾಗಿ ಬಹಳ ವಿಜೃಂಭಣೆಯಿಂದ ಆಚರಿಸುತ್ತಾರೆ.

ಯುಗಾದಿಯ ಮಹತ್ವ
ಭಾರತ ಬಹು ಸಂಸ್ಕೃತಿಯ ತವರೂರು. ಭಾರತೀಯ ಹಬ್ಬಗಳಲ್ಲಿ ಯುಗಾದಿಗೆ ರಾಜನ ಸ್ಥಾನಮಾನ.
ನವದುವಿನಂದ ಶೃಂಗಾರಗೊಳ್ಳುವ ಇಡೀ ನಿಸರ್ಗವು ತನ್ನ ಪ್ರಿಯತಮ ವಸಂತನ ಆಗಮನಕ್ಕೆ ಕಾದು ಕುಳಿತ ಕಾಲ. ಸುಗ್ಗಿ ಮುಗಿಸಿದ  ರೈತನ ಮೊಗದಲ್ಲಿ ನಗೆಯ ಬೆಳಕು ಚೆಲ್ಲುವ ಕಾಲ. ನೂತನ ವರ್ಷಾರಂಭದ ಶುಭ ಸಂದರ್ಭದಲ್ಲಿ ನಾವಿನ್ಯತೆಯ ಸಿಹಿ ಸಿಂಚನ  ಚೆಲ್ಲುವ ಈ ಯುಗಾದಿಯು ನವ ಕನಸುಗಳಿಗೆ, ಭಾವನೆಗಳಿಗೆ ಪುಷ್ಪಗಳ ಮೃದುತ್ವವನ್ನು ಚಿಮ್ಮಿಕಿಸುತ್ತದೆ, ಇಡೀ ಸೃಷ್ಟಿಯಲ್ಲಿ ನವೋಲ್ಲಾಸ ತುಂಬುವ ದಿನ. ವಸಂತ ಋತುವಿನಿಂದ  ಮನೋಹರವಾದ ಪ್ರಕೃತಿ, ಪ್ರಾತ:ಕಾಲದಲ್ಲಿ ಪಕ್ಷಿಗಳ ನಿನಾದದಿಂದ ಉಂಟಾಗುವ ರಾಗ ರಂಜಿತವಾಗುತ್ತದೆ.  ತಾನು ನೂತನ ಜೀವನವನ್ನು ನಡೆಸಬಹುದೆಂಬ ಸಂದೇಶ ಸಾರುತ್ತದೆ. ಯುಗಾದಿಯ ಆಚರಣೆಯಿಂದ ಮನುಷ್ಯ ತನ್ನಲ್ಲಿರುವ ಅರೀಷಡ್ವರ್ಗ್ಗಳನ್ನು ಅಳಿಸಿ ನಿರ್ಮಲವಾದ, ಪರಿಶುದ್ಧವಾದ, ವ್ಯಕ್ತಿತ್ವ ಹೊಂದಲೆಂಬ ಸಂದೇಶವೇ ಯುಗಾದಿ ಹಬ್ಬ.
   ವಸಂತಋತುವನ್ನು ಸ್ವಾಗತಿಸುತ್ತಾ, ಪ್ರಕೃತಿಯಲ್ಲಿ ವಸಂತದ ಚಿಹ್ನೆಗಳು ಮತ್ತು ವಿಭಿನ್ನ ಬಣ್ಣದ ಪುಷ್ಪಗಳನ್ನು ನೋಡುತ್ತೇವೆ. ಜೀವನದ ಹೊಸತನವನ್ನು ಸ್ವೀಕರಿಸಲು ಜನರನ್ನು ಉತ್ತೇಜಿಸುವಂತಹ ವಿಶೇಷ ಹಬ್ಬ. ಮಾವಿನ ಎಲೆಗಳು ಮತ್ತು ಮಲ್ಲಿಗೆ ಹೂವಿನ ಹಾರಗಳನ್ನು ಹೆಚ್ಚಾಗಿ ಈ ಹಬ್ಬದಲ್ಲಿ ನಾವು ಬಳಸುವುದನ್ನು ಕಾಣುತ್ತೇವೆ. ಏಕೆಂದರೆ ಆಗತಾನೇ ಈ ಸಂದರ್ಭದಲ್ಲಿ ಮಾವಿನ ಗಿಡಗಳು ಹಚ್ಚಹಸಿರಿನಿಂದ ಕಂಗೊಳಿಸುತ್ತಾ ಮಾವಿನಕಾಯಿಗಳನ್ನು ಮಡಿಲಲ್ಲೊತ್ತು ಮನೆಯ ಬಾಗಿಲಿನ ತೋರಣಕ್ಕೆ ತನ್ನನ್ನು ಅಲಂಕರಿಸುವಂತೆ ಕೈಚಾಚಿ ಕರೆಯುತ್ತಿರು ತ್ತಿರುವಂತೆ ಭಾಸವಾಗುತ್ತದೆ. ಸುಗಂಧ ಭರಿತ ಮಲ್ಲಿಗೆ ಹೂವಿನ ಕಂಪು ಮನಸ್ಸಿಗೆ ಮುದ ನೀಡಿ ಮಲ್ಲಿಗೆ ಮಾಲೆಯಿಂದ ಮನೆಗಳ ಬಾಗಿಲುಗಳನ್ನ ಅಲಂಕರಿಸುತ್ತೇವೆ. ಮನಸ್ಸು ಮನಸ್ಸುಗಳನ್ನು ಬೆಸೆಯುವಂತ ಹಬ್ಬ ಯುಗಾದಿ. ಈ ದಿನದಂದು ಬೇವು ಬೆಲ್ಲದ ಸ್ವೀಕಾರ ಪ್ರಶಸ್ತವಾದುದ್ದು. ಹೇಗೆ ಹಗಲಿರುಳು, ಉಷ್ಣ ಶೀತಗಳು ಸಮವಾಗಿವೆಯೋ ಹಾಗೆ ಸುಖ ದುಃಖಗಳನ್ನು ಸಮನಾಗಿ ಪಡೆಯುವ ಸಂಕೇತವಾಗಿದೆ. ಸುಖದ ಸಂಕೇತವಾದ ಬೆಲ್ಲವನ್ನು ಮತ್ತು ಕಷ್ಟದ ಸಂಕೇತವಾದ ಬೇವನ್ನು ಸಮನಾಗಿ ಸ್ವೀಕರಿಸುವರು. ತಿಂದ ಮೇಲೆ ಬೆಲ್ಲವೋ ಹೊಟ್ಟೆಯೊಳಗೆ ಶಾಖವನ್ನು ಉಂಟು ಮಾಡಿದರೆ ಬೇವು ಆ ಶಾಖವನ್ನು ಶಮನಗೊಳಿಸುತ್ತದೆ. ಹೀಗಾಗಿ ಬೇವು ಬೆಲ್ಲದ ಮಿಶ್ರಣ ಜನವನ್ನು ತಿನ್ನುವಾಗ ಅಥವಾ ಕುಡಿಯುವಾಗ ಪೂರ್ವಜರು ಒಂದು ಶ್ಲೋಕವನ್ನು ಪಠಿಸುತ್ತಿದ್ದರು. 
*ಶತಾಯು:ವಜ್ರ ದೇಹಾಯ ಸರ್ವಸಂಪತ್ಕರಾಚ*
*ಸರ್ವಾರಿಷ್ಟ ವಿನಾಶಾಯ ನಿಂಬಕಂದಳ ಭಕ್ಷಣಂll*
  ಅಂದರೆ ನೂರು ವರ್ಷಗಳ ಆಯುಷ್ಯ. ಸದೃಢವಾದ ಆರೋಗ್ಯ, ಸಕಲ ಸಂಪತ್ತುಗಳ ಪ್ರಾಪ್ತಿಗಾಗಿಯೂ, ಸಕಲ ಅರಿಷ್ಟ ನಿವಾರಣೆಗಾಗಿಯೂ ಬೇವು-ಬೆಲ್ಲ ಸೇವನೆ ಮಾಡುತ್ತೇನೆ ಎಂದು ಪ್ರಾರ್ಥನೆ ಸಲ್ಲಿಸುತ್ತಾ ಬೇವನ್ನು ಸ್ವೀಕರಿಸುವಂತಹ ಪದ್ಧತಿಯಿತ್ತು.
    ಯುಗಾದಿ ಹಬ್ಬದ ಸಾಂಪ್ರದಾಯಿಕ ಆಚರಣೆಗಳಲ್ಲಿ ಕೆಲವೆಂದರೆ ಸೂರ್ಯ ನಮಸ್ಕಾರ, ಪಂಚಾಂಗದ ಪೂಜೆ. ಸರ್ವೇ ಸಾಮಾನ್ಯವಾಗಿದೆ. ಬೇವು-ಬೆಲ್ಲ ಜೀವನದ ಸಿಹಿಕಹಿಗಳೆರಡನ್ನು ಸಮಾನವಾಗಿ ಸ್ವೀಕರಿಸುವಂತಹ ಮನಸ್ಥಿತಿಯನ್ನು ಹೊಂದಬೇಕು ಎನ್ನುವ ಉದ್ದೇಶದಿಂದ ಆತ್ಮಸ್ಥೈರ್ಯವನ್ನು ಗಟ್ಟಿಗೊಳಿಸುವಂತಹ ಒಂದು ಸಂಪ್ರದಾಯ. ರಾಷ್ಟ್ರದ ಬೇರೆ ಬೇರೆ ಭಾಗಗಳಲ್ಲಿ ಬೇರೆ ಬೇರೆ ರೀತಿಯಾಗಿ ಬೇವು ತಯಾರಿಸಿ ಸೇವಿಸುವಂತಹ ಪದ್ಧತಿ ಇದೆ. ಒಣ ಬೇವು ಮತ್ತು ನೀರು ಬೇವು ವಿಶೇಷವಾದದ್ದು. ಮುಖ್ಯವಾಗಿ ಕರ್ನಾಟಕದಲ್ಲಿ ಎರಡು ರೀತಿಯ ಬೇವುಸೇವನೆಯ ರೂಢಿ ಇದೆ. ನೀರ್ ಬೇವಿಗಾಗಿ ಹುಣಸೆಹಣ್ಣು ನೆನೆಸಿ, ರಸ ತೆಗೆದು ಅದಕ್ಕೆ ಬೆಲ್ಲ, ಪುಟಾಣಿ ಹಿಟ್ಟು, ಒಣ ಕೊಬ್ಬರಿ, ಮಾವಿನ ಕಾಯಿ, ಯಾಲಕ್ಕಿ, ಲವಂಗ, ಮೆಣಸು, ಜಾಜಿಕಾಯಿ, ಜೇನುತುಪ್ಪ, ಗಸಗಸೆ, ಬೇವಿನ ಹೂವು, ಮಾವಿನಕಾಯಿ, ಗೋಡಂಬಿ, ದ್ರಾಕ್ಷಿ ,ಅಂಜೂರ, ಬದಾಮಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಜೊತೆಗೆ ಕುಡಿಯಲು ಹದವಾದ ರುಚಿಯಂತೆ ಸಿದ್ಧಗೊಳಿಸಿ  ಬೇವಿನ ಸ್ವಾದ ಹೆಚ್ಚಿಸಲು ಅದಕ್ಕಾಗಿ ಚಿಕ್ಕುಹಣ್ಣು, ದ್ರಾಕ್ಷಿ ಹಣ್ಣುಗಳನ್ನು ಚಿಕ್ಕದಾಗಿ ಕತ್ತರಿಸಿ ಬೇವಿನ ಹೂ ಸೇರಿಸಿ ಸಿದ್ಧಪಡಿಸುವುದು ವಾಡಿಕೆ. ಸದೃಢ ಆರೋಗ್ಯಕ್ಕಾಗಿ ಬೇವಿಗೆ ಬಳಸುವ ಪದಾರ್ಥಗಳೆಲ್ಲವೂ ಹಿತಕರ ಎಂಬ ಎಂಬುದು ಹಿರಿಯರ ಪೂರ್ವಲೋಚನೆ.
        ಹಿಂದೂಧರ್ಮದ ಪ್ರತಿಯೊಂದು ಹಬ್ಬಕ್ಕೂ ವಿಶೇಷ ಮಹತ್ವವಿದೆ. ಯುಗಾದಿಯ ಧರ್ಮಸಿಂಧು ಎಂಬ ಗ್ರಂಥದಲ್ಲಿ ಯುಗಾದಿ ಹಬ್ಬಕ್ಕೆ ಐದು ವಿಧಿಗಳನ್ನ ಸೂಚಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗುತ್ತದೆ. ಮೊದಲನೇದಾಗಿ ಹಬ್ಬದ ದಿನದಂದು ಎದ್ದ ಕೂಡಲೇ ಅಗಲವಾದ ಬಾಯಿಯ ಪಾತ್ರೆಯಲ್ಲಿ ತುಪ್ಪವನ್ನು ಹಾಕಿ ಮನೆ ಮಂದಿಯಲ್ಲ ಅದರಲ್ಲಿ ಮುಖ ನೋಡಿಕೊಳ್ಳಬೇಕು ಹಾಗೆ ಮಾಡುವುದರಿಂದ ದೃಷ್ಟಿ ದೋಷ ನಿವಾರಣೆಯಾಗುತ್ತದೆ ಎಂಬ ನಂಬಿಕೆ. ಎರಡನೆಯದು ಹರಳೆಣ್ಣೆಯಿಂದ ಅಭ್ಯಂಗ ಸ್ನಾನ ಮಾಡುವುದು ಹರಳೆಣ್ಣೆ ದೇಹವನ್ನು ತಂಪಾಗಿಸುವುದರಿಂದ ವೈಜ್ಞಾನಿಕ ಹಿನ್ನೆಲೆಯನ್ನು ಪಡೆದಿದೆ.ಮೂರನೆಯದಾಗಿ ಹೊಸ ಬಟ್ಟೆ ಧರಿಸಿ ಮನೆಯವರೆಲ್ಲ ಕುಲದೇವರನ್ನು ಇಷ್ಟ ದೇವರನ್ನು ಆರಾಧನೆ ಮಾಡುವ ಪದ್ಧತಿ. ನಾಲ್ಕನೆಯದು ಹಬ್ಬದಂದು ಪಂಚಾಂಗ ಪಠಣ ಹಾಗೂ ಶ್ರವಣದಿಂದ ವಿಶೇಷವಾದ ಫಲಗಳು ಪ್ರಾಪ್ತಿಯಾಗುತ್ತವೆ. ಪಂಚಾಂಗದಿಂದ ತಿಥಿಯ ಬಗ್ಗೆ ತಿಳಿದರೆ ಶ್ರೇಯಸ್ಸು ಉಂಟಾಗುತ್ತದೆ. ನಕ್ಷತ್ರದಿಂದ ಪಾಪ ಪರಿಹಾರ. ಯೋಗದಿಂದ ರೋಗ ನಿವಾರಣೆ. ಕರಣದಿಂದ ಕಾರ್ಯಸಿದ್ಧಿಯಾಗುತ್ತದೆ ಎಂದರು. ಜೊತೆಗೆ ಆರೋಗ್ಯ ಬಲವರ್ಧನೆಗಾಗಿ ಬೇವು-ಬೆಲ್ಲ ಸೇವನೆ ಎಂಬ ಮಾತುಗಳು ಶಾಸ್ತ್ರಗಳಲ್ಲಿ ಉಲ್ಲೇಖಿತ. ಅಲ್ಲದೆ ಈ ದಿನದಂದು  ಸಾಯಂಕಾಲ ಸೌಂದರ್ಯಲಹರಿ, ವಿಷ್ಣು ಸಹಸ್ರನಾಮ ಪಾರಾಯಣ ಮಾಡಿದರೆ ಮನೋ ಸಂಕಲ್ಪ ಸಿದ್ಧಿಯಾಗುತ್ತದೆ ಎಂಬ ನಂಬಿಕೆ.
ಚಂದ್ರ ದರ್ಶನ ಪಾಠದ ನಂತರ ಬಿದಿಗಿಯ ದಿನ ಸ್ನಾನ ಪೂಜಾರಿಗಳನ್ನು ಮುಗಿಸಿ ಸಂಜೆ ಚಂದ್ರದರ್ಶನ ಮಾಡಿ ನಮಸ್ಕರಿಸುವ ಸಂಪ್ರದಾಯವಿದೆ ಗಣೇಶ ಚತುರ್ಥಿಯ ದಿನದಂದು ಚಂದ್ರನನ್ನು ನೋಡಿ ಅತೀವ ಸಂಕಷ್ಟಕ್ಕೆ ಒಳಗಾಗಿರುವವರು ಯುಗಾದಿ ಬಿದಿಗೆ ಚಂದ್ರನನ್ನು ನೋಡಿ ಕ್ಷೀರಸಮುದ್ರದಲ್ಲಿ ಜನಿಸಿದವನೇ ಶ್ರೀ ಲಕ್ಷ್ಮಿ ದೇವಿಯ ಸಹೋದರನೇ ಶಿವನ ಜೊತೆಯಲ್ಲಿರುವ ಬಾಲಚಂದ್ರ ನಿನಗೆ ನಮಸ್ಕಾರ ಎಂದು ನಮಸ್ಕರಿಸಿ ಪ್ರಾರ್ಥಿಸಿ ಹೊಸ ಬಟ್ಟೆಯ ಒಂದು ವೇಳೆಯನ್ನು ಚಂದ್ರನಿಗೆ ಅರ್ಪಿಸಿದರೆ ಪಾಪ ಪರಿಹಾರವಾಗಿ ಸುಖ ಶಾಂತಿಗಳು ಶಾಶ್ವತವಾಗಿ ಸಿಗುತ್ತವೆ ಎಂಬ ನಂಬಿಕೆ. 
       ಸನಾತನ ಧರ್ಮವನ್ನು ಗೌರವಿಸುವ ನಮಗೆ ನೂತನ ವರ್ಷ ಯುಗಾದಿಯಾದರೂ ನಾವು ಪಾಶ್ಚಿಮಾತ್ಯರ ಅನುಕರಣೆ ಮಾಡಿ ಜನವರಿ ಒಂದರಂದು ಹೊಸ ವರ್ಷದ ಆಚರಣೆ ಮಾಡುತ್ತಿರುವುದು  ವಿಪರ್ಯಾಸ. ಇನ್ಮುಂದೆಯಾದರೂ ನಮ್ಮ ದೇಶದ ಹೊಸ ವರ್ಷದ ಆಚರಣೆ ಬದಲಾವಣೆಗೊಳ್ಳುವುದೋ ಕಾದು ನೋಡಬೇಕು. ಪ್ರಕೃತಿಯೊಂದಿಗೆ ಅವಿನಾಭಾವ  ಸಂಬಂಧ ಹೊಂದಿದ ಈ ಯುಗಾದಿಯ ಹಬ್ಬದ ಸಂಭ್ರಮದ ಈ ಶುಭಕೃತ ನಾಮ ಸಂವತ್ಸರ ಸರ್ವರಿಗೂ ಆರೋಗ್ಯ ,ಸುಖ ಶಾಂತಿ ನೆಮ್ಮದಿ ನೀಡಲೆಂದು ಭಗವಂತನಲ್ಲಿ ಪ್ರಾರ್ಥನೆಯೊಂದಿಗೆ ನನಗೆ ನನ್ನ ಬಾಲ್ಯದ ದಿನಗಳನ್ನು ನೆನಪಿಸಿಕೊಳ್ಳುವಂತ *ಸ್ವರಚಿತ ಕವನ ನೆನಪಿಗೆ ಬಂತು*
*ನಮ್ಮ ಬಾಲ್ಯದಲ್ಲಿ ಯುಗಾದಿ ಸಂಭ್ರಮ*

*ಬ್ರಹ್ಮಾಂಡದ ಸೃಷ್ಟಿಯ ಮೊದಲ ರವಿಯ ಕಿರಣ*
*ಯುಗಾದಿಯ ಹೊಸ ವರುಷದ ಆರಂಭದ ಕ್ಷಣl*
*ಕೊಪ್ಪಳ ಜಿಲ್ಲೆಯ ಪುಟ್ಟಗ್ರಾಮ ಅಳವಂಡಿ*
*ಬಾಲ್ಯವ ಕಳೆದೆನಿಲ್ಲಿ ಅಮ್ಮನ ಮಡಿಲಲ್ಲಾಡಿl*
*ಎಳ್ಳೆಣ್ಣೆ ಸ್ನಾನಮಾಡಿ ಹೊಸಲಂಗರವಿಕೆ ಧರಿಸಿ*
*ಮಾರುದ್ದಜಡೆ ಹೆಣೆದು ರಿಬ್ಬನ್ನಿನಿಂದ ಸಿಂಗರಿಸಿl*
*ಕಾಲ್ಗೆಜ್ಜೆ ಹಾಕಿ ಹೆಜ್ಜೆಯ ಸದ್ದು ಮಾಡುತ* 
*ಮನೆ ಬಾಗಿಲಿಗೆ ಮಾವಿನ ತೋರಣ ಕಟ್ಟುತl*
*ಸಗಣಿ ಗೋಮೂತ್ರದಿ ಸಾರಣೆಯ ಮಾಡಿದೆವು*
*ರಂಗೋಲಿಯ ಚಿತ್ತಾರ ಬಿಡಿಸಿ ನಕ್ಕು ನಲಿದೆವುl*
*ಹೂಹಣ್ಣುಕಾಯಿ ಕರ್ಪೂರದಿ ದೇವರ ಆರಾಧನೆ*
*ಹೋಳಿಗೆ ಪಾಯಸ ಬೇವು ಬೆಲ್ಲದ ಸಮರ್ಪಣೆl*
*ಹಣ್ಣೆಲೆಗಳುದುರಿ ಗಿಡದಿ ಚಿಗುರೆಲೆಗಳು ನಾಚಿನಿಂತವು*
*ಹಸಿರಸಿರಿಗೆ ನಸುನಾಚುತಲಿ ಗೆಳತಿಯರೆಲ್ಲಾ ಕೂಡಿ ನಲಿದೆವುl*
*ಬೇವುಬೆಲ್ಲ ಸವಿಯುವ ನಮ್ಮತಲೆ ನೇವರಿಸಿದಳಮ್ಮ*
*ಕಷ್ಟಸುಖಗಳೇನೇ ಬರಲಿ ಎದೆಗುಂದದಿರಿಯಂದನಪ್ಪl*
*ಶಾಲೆಯ ಮೇಷ್ಟ್ರುಗಳ ಮನೆ ಮನೆಗೆ ತೆರಳಿದೆವು* 
*ಬೇವು ಬೆಲ್ಲವ ನೀಡುತ ಹೊಸವರುಷದ ಶುಭ ಕೋರಿದೆವುl*
*ವರುಷಕೊಂದು ಹೊಸತುದಿನ ಸವಿನೆನಪಿನ ಕಂಪನ* 
*ಯುಗಯುಗಾದಿ ಕಳೆದರೂ ಬಾಲ್ಯದ ಸಂಭ್ರಮದಾಲಿಂಗನ।* 
           ಒಂದು ಕಡೆ ವಸಂತ ಮಾಸವನ್ನು ಆಲಂಗಿಸುವ ಯುಗಾದಿ ಹಬ್ಬ ಸಂಭ್ರಮ ತಂದುಕೊಟ್ಟರೆ, ಮತ್ತೊಂದು ಕಡೆ ಆತಂಕದ ಸೃಷ್ಟಿಯನ್ನು ಮೂಡಿಸುತ್ತಿರುವುದು ಜಾಗತಿಕ ತಾಪಮಾನ.ಹವಮಾನ ಬದಲಾವಣೆಯೊಂದಿಗೆ ಜಾಗತಿಕ ತಾಪಮಾನವು ಸಹ  ವರ್ಷದಿಂದ ವರ್ಷಕ್ಕೆ  ಏರಿಕೆಯಾಗುವುದನು ಗಮನಿಸುತ್ತಲೇ ಬಂದಿದ್ದೇವೆ. ಸಾಗರಗಳ ಪ್ರವಾಹವು ಜಗತ್ತಿನ ವಿವಿಧ ಭಾಗಗಳಲ್ಲಿ ಶಾಖವನ್ನು ಪ್ರವಹಿಸುತ್ತದೆ. ಇದರ ಪರಿಣಾಮವಾಗಿ ಕೆಲವು ಪ್ರದೇಶಗಳು ತಂಪಾದ ಹವಮಾನವನ್ನು ಅನುಭವಿಸಿದರೆ, ಮತ್ತೆ ಕೆಲವು ಪ್ರದೇಶಗಳು ಬೆಚ್ಚನೆಯ ಹವಮಾನವನ್ನು ಅನುಭವಿಸುತ್ತವೆ. ಆದ್ದರಿಂದ ಹವಮಾನ ಬದಲಾವಣೆಗಳು ವಿವಿಧ ಪ್ರದೇಶಗಳಲ್ಲಿ ಬದಲಾಗುತ್ತವೆ.
       2009ರಲ್ಲಿ ಸೈಂಟಿಫಿಕ್ ಅಮೆರಿಕನ್ ನಲ್ಲಿ ಪ್ರಕಟವಾದ ಲೇಖನದ ಪ್ರಕಾರ ಜಾಗತಿಕ ತಾಪಮಾನವು ಪ್ರತಿ ವರ್ಷ ಸುಮಾರು 1,50,000 ಸಾವುಗಳಿಗೆ ಏರಿಕೆಯಾಗಿದೆ ಎಂದು ಡಬ್ಲ್ಯೂ ಎಚ್ ಓ(WHO) ನ ಹವಮಾನ ಸಂಶೋಧಕರು ಸೂಚಿಸುತ್ತಾರೆ. ತಾಪಮಾನ ಏರಿಕೆಗೆ ಜಾಗತಿಕ ತಾಪಮಾನವು ಸಹ ಕಾರಣವಾಗಿದೆ. ಭೂಮಿಯ ಮೇಲ್ಮೈ ಸಂಪೂರ್ಣ ಸೌರಶಕ್ತಿ ಸುಮಾರು ಪ್ರತಿಶತ 75% ರಷ್ಟು ಹೀರಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ತಾಪಮಾನ ಹೆಚ್ಚಳಕ್ಕೆ ಇದು ಸಹ ಕಾರಣವಾಗಿದೆ. ಜಾಗತಿಕ ತಾಪಮಾನ ಏರಿಕೆಯೂ ಹಿಮನದಿಗಳು, ಸಮುದ್ರ ಮಟ್ಟ ಏರಿಕೆ, ಕರಾವಳಿ ಪ್ರದೇಶಗಳ ಪ್ರವಾಹ ಮತ್ತು ಒಟ್ಟಾರೆ ತಾಪಮಾನ ಏರಿಕೆಗೆ ಕಾರಣ. ತಾಪಮಾನ ಏರಿಕೆಯಿಂದಾಗಿ ಹಲವು ಸಾಂಕ್ರಾಮಿಕ ರೋಗಗಳು ತಲೆದೂರುವುದಲ್ಲದೆ ವಾತಾವರಣದಲ್ಲಿ ಸಹ ಹಲವು ವೈಪರಿತ್ಯಗಳಿಗೆ ಕಾರಣವಾಗುತ್ತದೆ. ಇದರಿಂದಾಗಿ ಸುಖ ಜೀವನ ಕಷ್ಟ ಸಾಧ್ಯ. ಜಾಗತಿಕ ತಾಪಮಾನದ ಸಮತೋಲನಕ್ಕೆ ನಮ್ಮೆಲ್ಲರಿಂದ ಸಾಧ್ಯವಾದಷ್ಟು ಸಹಾಯ ಮಾಡೋಣ. ಮನುಷ್ಯ ತನ್ನ ಸ್ವಾರ್ಥಕ್ಕೆ ಗಿಡಮರಗಳನ್ನು ಕಡಿಯುತ್ತಿರುವುದರಿಂದ ತಾಪಮಾನ ಏರಿಕೆಯಾಗುತ್ತಿದೆ ಆದ್ದರಿಂದ ಪ್ರತಿಯೊಬ್ಬರೂ ಸಸ್ಯಗಳನ್ನು ನೆಡುವೆ ಮೂಲಕ ವಾತಾವರಣದಲ್ಲಿ ಸಮತೋಲನವನ್ನು ತರುವಲ್ಲಿ ಭಾಗಿಗಳಾಗೋಣ. ಕಾಡುಗಳ ನಾಶವನ್ನು ತಡೆಗಟ್ಟಬೇಕು. ಪ್ರಕೃತಿಯಲ್ಲಿ ಸಮತೋಲನವನ್ನು ತಂದಾಗ ಮಾತ್ರ ಮುಂದಿನ ಪೀಳಿಗೆ ನೆಮ್ಮದಿಯಿಂದ ಜೀವಿಸಲು ಸಾಧ್ಯ.

- ಶ್ರೀಮತಿ ಸುಮಂಗಲಾ ಕೃಷ್ಣ ಕೊಪ್ಪರದ, ಇಲಕಲ್.



ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...