ಭಾನುವಾರ, ಫೆಬ್ರವರಿ 26, 2023

ನೀ ನನ್ನವಳೇ (ಕವಿತೆ) - ಬಿ.ಹೆಚ್.ತಿಮ್ಮಣ್ಣ.

ಸತಿ ಹಿತ ಬಹುಸೋನೆ ಪತಿದೇವ
ಅದರಲ್ಲಿ ಕಾಣುವನು ಒಲಿದ ಭಾಗ್ಯವ
ದೇವರಲ್ಲಿ ಬೇಡುವನು ಕೈ ಮುಗಿದು ವರವ
ನಮ್ಮಿಬ್ಬರ ಬಾಂಧವ್ಯ ಹೀಗೆ ಇರಲಿ ಮಹಾದೇವ

ಹೆಂಡತಿಯ ಆಸೆಗಳಿಗೆ ಕುಂದು ತರದವ ಗಂಡ ಬಲು ಅಂದ
ಕೇಳುವನು ಆಕೆಗೆ ನೀನು ಸುಮಂಗಲೆಯಾಗಿರು ಚಂದ
ಅಂಗಗಳು ನಿನ್ನವಾದರೆ ಸಂಕೇತಗಳು ನನ್ನವು
ಕಾಣುವೆ ನನ್ನೊಲವೆ ನೀನು ರತಿದೇವಿಯ ವರವು

ತಲೆಯ ಜಡೆ ನಿನ್ನದಾದರೆ,
ಮುಡಿದ ಮಲ್ಲಿಗೆ ನನ್ನದು
ಹುಬ್ಬಿನ ಮೇಲಿರುವ ಹಣೆಯು ನಿನ್ನದಾದರೆ,
ರವಿಯಂತೆ ಹೊಳೆವ ಸಿಂಧೂರ ನನ್ನದು
ಸಂಪಿಗೆಯ ನಾಸಿಕವು ನಿನ್ನದಾದರೆ,
ನಕ್ಷತ್ರದಂತೆ ಮಿನುಗುವ ನತ್ತು ನನ್ನದು
ಕತ್ತು ನಿನ್ನದಾದರೇನಂತೆ,
ಹೋಲಾಡುವ ತಾಳಿಯ ಸೌಭಾಗ್ಯ ನಾ ಕೊಟ್ಟಿದ್ದಲ್ಲವೇ

ಕಮಲದ ಕೈಗಳು ನಿನ್ನವಾದರೆ,
ಮಿಂಚುವ ಬಳೆಗಳು ನನ್ನವು
ನವಿಲಿನ ನಡಿಗೆಯ ಕಾಲು ನಿನ್ನವಾದರೆ,
ಘಲ್ ಘಲ್ ಸದ್ದು ಮಾಡುವ ಗೆಜ್ಜೆ ನನ್ನವು
ಕಾಲ್ಬೆರಳುಗಳು ನಿನ್ನಾವಾದರೆ,
ಚಟ್ ಚಟ್ ಸದ್ದು ಮಾಡುವ ಕಾಲುಂಗುರ ನನ್ನವಲ್ಲವೇ

ಇವೆಲ್ಲವೂ ನನ್ನವುಗಳಾದರೆನಂತೆ,
ನೀನು ನನ್ನವಳಾಗಿರುವಾಗ
ಹೇ..ಸತಿ ಮನ್ಮಥಿಯೇ,
ನೀನೆ ನನ್ನ ಬಾಳಿನ ದೇವಿ

- ಬಿ.ಹೆಚ್.ತಿಮ್ಮಣ್ಣ


ಸಾವನ ದುರ್ಗ (ಕವಿತೆ) - ಲಕ್ಷ್ಮಿ ಕಿಶೋರ್ ಅರಸ್.

ಕೋಟಿಗೊಳ ಕೋಟೆ
ಏಳು ಸುತ್ತಿನ ಕೋಟೆ
ದುರ್ಗಗಳ ದುರ್ಗಾ
ಸಾವಣದುರ್ಗ.
ಅಭೇದ್ಯ -ಅಸಾಧ್ಯ
ನಿರ್ಮಾಣ ಅನರ್ಘ್ಯ
ವಿಶಿಷ್ಟ- ಬಲಿಷ್ಠ
ಸಮರ್ಥ ಶಿಕಾಯ
ಬಂಡೆಗಳ ದೊರೆ!
ಏಕಶಿಲಾ ಸೆರೆ
ನಾಡಪ್ರಭುಗಳು ಮೆರೆದ
ಸಾವಂದಿಶ್ವರನ ನೇಲೆ
ದಳವಾಯಿಗಳ ,ಸಾವಿನ ದುರ್ಗ
ಉಗ್ರಂ ವೀರಂ ಸಾವಣದುರ್ಗ!
ಕಸ್ತೂರಿ ಕರಿಗುಡ್ಡ
ಹಾಲಂತ ಬಿಳಿಗುಡ್ಡ
ಹೊಯ್ಸಳ ಬಲ್ಲಾಳ
ಸಾಮಂತರಾಯನ ಸೇನಾನೇಲೆ
ಏಕಶಿಲಾ ಮಹಾಗಣಿ
ಕೆಂಪೇಗೌಡರ ದ್ವಿತಿಯ ರಾಜಧಾನಿ!
ವಿವಿಧ ಪ್ರಭೇದಗಳ ಅಡವಿ 
ಕರಿಗಳ ನೆಚ್ಚಿನದುರ್ಗ
ಸಿಡಿಲಿಗು ಬೆಚ್ಚದ ಕಲ್ಲಿನ ಕೋಟೆ
ಬಲು ಕಠಿಣವಿ ದುರ್ಗದ ಕೋಟೆ
ದುರ್ಗಮ ಅತಿ ದುರ್ಗಮ
ವೀರರ ತವರು ಸಾವನದುರ್ಗ!

- ಲಕ್ಷ್ಮಿ ಕಿಶೋರ್ ಅರಸ್, ಆಂಗ್ಲ ಉಪನ್ಯಾಸಕರು.


ಶನಿವಾರ, ಫೆಬ್ರವರಿ 25, 2023

ಮಳೆಯ ಮಹತ್ವ (ಕೃತಿ ಪರಿಚಯ) - ವರುಣ್‌ರಾಜ್‌ ಜಿ.


ಮಳೆಯಿಂದ ಬರುವ ನೀರಿನ ಮೂಲಕ್ಕೆ ದೇವಮಾತೃಕ ಎನ್ನುವರು. ಮಳೆಯಿಂದಲೇ ನದಿ, ಕೆರೆ-ಕಟ್ಟೆಗಳಿಗೆ ನೀರು. ಅಂತರ್ಜಲಕ್ಕೂ ಮಳೆಯೇ ಮೂಲ. ಮಳೆ ಇಳೆಯ, ಇಳೆಯ ಜನರ ಬಾಳಿಗಾಧಾರ. ಮಳೆಯಿಂದಲೇ ಬೆಳೆ, ಬೆಳೆಯಿಂದಲೇ ಬದುಕು. ಜಲವೇ ನಮ್ಮ ಜೀವನ. ಆಹಾರವಿಲ್ಲದೆ ಮನುಷ್ಯ ಸ್ವಲ್ಪಕಾಲ ಜೀವಿಸಬಹುದಾದರೂ ನೀರಿಲ್ಲದೇ ಬದುಕಲಾರ. ಕೇವಲ ಮನುಷ್ಯನಿಗಷ್ಟೇ ಅಲ್ಲ, ಲೋಕದ ಸಕಲ ಜೀವ ಜಂತುಗಳಿಗೂ, ಗಿಡ ಮರಗಳಿಗೂ ನೀರು ಬೇಕೇ ಬೇಕು. ಮಳೆ ಹೆಚ್ಚಾದರೂ, ಕಡಿಮೆಯಾದರೂ ಜನರಿಗೆ ಸಂಕಷ್ಟ ತಪ್ಪಿದಲ್ಲ.

ವಿಜ್ಞಾನ, ತಂತ್ರಜ್ಞಾನ ಎಷ್ಟೇ ಮುಂದುವರಿದರು ನೀರನ್ನು ಕೃತಕವಾಗಿ ತಯಾರಿಸಲಾಗುವುದಿಲ್ಲ. ಆದರೆ, ಮಳೆಯ ಮಹತ್ವವನ್ನು ಅರಿತು ಪರಿಸರ ಸಂರಕ್ಷಣೆ ಮಾಡುತ್ತಾ, ವೈಜ್ಞಾನಿಕ ವಿಧಾನಗಳ ಮೂಲಕ ಮಳೆಯ ನೀರನ್ನು ಸದ್ಬಳಕೆ ಮಾಡಿಕೊಳ್ಳಬಹುದು. ನಮ್ಮ ಮುಂದಿನ ಪೀಳಿಗೆಗೆ ಶುದ್ಧವಾದ ಗಾಳಿ, ನೀರು, ಆಹಾರಗಳನ್ನು ಉಳಿಸಿ ಹೋಗುವುದು ನಮ್ಮ ಮೇಲಿರುವ ಜವಾಬ್ದಾರಿ. ಈ ನಮ್ಮ ಜವಾಬ್ದಾರಿಯನ್ನು ಮನವರಿಕೆ ಮಾಡಿಕೊಡುವ ಪ್ರಯತ್ನವೊ ಎಂಬಂತೆ ಮಾನ್ಯ ಡಾ. ಜಿ. ಶರಶ್ಚಂದ್ರ ರಾನಡೆ ಯವರು ಮಳೆಯ ಮಹತ್ವ ಎಂಬ ಕೃತಿ ಮೂಡಿ ಬಂದಿದೆ.

ಮಳೆಯ ಮಹತ್ವವನ್ನು ಮತ್ತು ಸಂರಕ್ಷಣಾ ಕ್ರಮಗಳನ್ನು ವಿವರವಾಗಿ ತಿಳಿಸುವ ಒಟ್ಟು ೧೭ ವೈಶಿಷ್ಟ್ಯಪೂರ್ಣ ಲೇಖನಗಳನ್ನು ಒಳಗೊಂಡಿರುವ ಈ ಕೃತಿ, ತೀವ್ರವಾದ ಆಸಕ್ತಿ ಮತ್ತು ಆಳವಾದ ಅಧ್ಯಾಯನದಿಂದ ಮೂಡಿಬಂದದ್ದು. ನಾವು ಈ ಲೇಖನಗಳನ್ನು ಎರಡು ಭಾಗಗಳಾಗಿ ವಿಂಗಡಿಸಿ ನೋಡಬಹುದು. ಒಂದು, ರೈತರ ಅಥವಾ ಜನಸಾಮಾನ್ಯರ ದೃಷ್ಠಿಯಲ್ಲಿ ಮಳೆಯನ್ನು ನೋಡುವ ವಿಧಾನ. ಇಲ್ಲಿ, ಮಳೆಯ ಕುರಿತಾದ ಜನಪದರ ನಂಬಿಕೆಗಳು, ಆಚರಣೆಗಳು, ಸರ್ವಜ್ಞ, ತಿರುವಳ್ಳುವರ್‌ ಮುಂತಾದವರ ಬರಹಗಳಲ್ಲಿ ಮಳೆ ವ್ಯಕ್ತಗೊಂಡಿರುವ ಬಗೆ, ಮಳೆ ನಕ್ಷತ್ರಗಳು, ಮಳೆಯ ಕುರಿತಾದ ಗಾದೆಗಳು, ಮಳೆಯ ಕುರಿತಾದ ಪೌರಾಣಿಕ ಮತ್ತು ಸಾಂಸ್ಕೃತಿಕ ಐತಿಹ್ಯಗಳನ್ನು ಆಸಕ್ತಿಕರವಾಗಿ ವಿಶ್ಲೇಷಿಸಲಾಗಿದೆ.

ಇನ್ನು ಎರಡನೇ ಭಾಗವು ಸಂಪೂರ್ಣ ಮಳೆಯ ವೈಜ್ಞಾನಿಕ ವಿಶ್ಲೇಷಣೆಗೆ ಸಂಬಂಧಿಸಿದ್ದು. ಚಂಡಮಾರುತಗಳ ವಿವರ, ಮಾನ್ಸೂನ್‌ ಮಳೆಯ ವಿವರಗಳು, ಹನಿ ನೀರಾವರಿ, ಇಂಗುತ್ತಿರುವ ಅಂತರ್ಜಲ ಮತ್ತು ಅದಕ್ಕೆ ಪರಿಹಾರಗಳು, ಜಲಾನಯನ ಅಭಿವೃದ್ಧಿ ಯೋಜನೆಗಳು ಮತ್ತು ಅವುಗಳ ಮಹತ್ವ, ಜಲಭಾಗ್ಯ ಮತ್ತು ಕೃಷಿ ಸಂಚಾಯಿ ಯೋಜನೆಗಳ ವಿವರ, ಜಲ ಮಾಲಿನ್ಯ ಮತ್ತು ಅವುಗಳನ್ನು ತಡೆಗಟ್ಟುವ ಕ್ರಮಗಳನ್ನು ಇಲ್ಲಿ ವಿವರಿವಾಗಿ ಚರ್ಚಿಸಲಾಗಿದೆ.

ಮೊದಲ ಭಾಗದಲ್ಲಿ ಜನ ಮಳೆಯೊಂದಿಗೆ ಇಟ್ಟುಕೊಂಡಿದ್ದ ಸಾಂಸ್ಕೃತಿಕ ಸಂಬಂಧಗಳನ್ನು ವಿವರಿಸುತ್ತಾ, ಈ ಸಂಬಂಧಗಳು ಇತ್ತೀಚೆಗೆ ತಪ್ಪಿಹೋಗುತ್ತಿರುವುದನ್ನು ಮತ್ತು ಅದರಿಂದಾಗುವ ಅಪಾಯಗಳನ್ನು ಮನಗಾಣಿಸಲು ಪ್ರಯತ್ನಿಸಲಾಗಿದ್ದು, ಎರಡನೇ ಭಾಗದಲ್ಲಿ ಅಂಕಿಅಂಶಗಳ ಸಹಿತವಾಗಿ ಮಳೆಯನ್ನು ವೈಜ್ಞಾನಿಕ ದೃಷ್ಠಿಕೋನಗಳಿಂದ ವಿವರಿಸುತ್ತಾ, ಮಳೆಯ ನೀರಿನ ಸದ್ಬಳಕೆ ಮತ್ತು ಸಂರಕ್ಷಣೆಯ ಕ್ರಮಗಳನ್ನು ಸವಿಸ್ತಾರವಾಗಿ ಚರ್ಚಿಸಲಾಗಿದೆ.

ಕೃತಿಕಾರರು ಜಲ ಸಂರಕ್ಷಣೆಯ ಕುರಿತು ಮಾತನಾಡುತ್ತಾ, ಹೇಳುವ “ಈ ಜಗತ್ತಿನಲ್ಲಿ ಮೂರನೇ ಮಹಾಯುದ್ಧ ನಡೆದರೆ ಅದು ನೀರಿಗೋಸ್ಕರ ಎಂಬ ಅನುಮಾನವಿಲ್ಲ. ಆ ಅನುಮಾನ ನಿಜವಾಗುವ ಆತಂಕ ಈಗೀಗ ಸ್ಪಷ್ಟವಾಗತೊಡಗಿದೆ. ನೀರಿನ ಬಳಕೆಯಲ್ಲಿ ಅದನ್ನು ಉಳಿಸಿಕೊಳ್ಳುವಲ್ಲಿ ಒಂದು ಶಿಸ್ತು ಬರದಿದ್ದರೆ ಹನಿ ನೀರಿಗೂ ಕಷ್ಟಪಡಬೇಕಾದ ಸ್ಥಿತಿ ತಲುಪಲು ಹೆಚ್ಚು ಕಾಲ ಉಳಿದಿಲ್ಲ” ಎಂಬ ಮಾತನ್ನು ನಾವೆಲ್ಲರೂ ಬಹಳ ಗಂಬೀರವಾಗಿ ಪರಿಗಣಿಸಬೇಕಿದೆ. ಇಂತಹ ಹಲವು ಎಚ್ಚರಿಕೆಗಳನ್ನು ಮತ್ತು ಅವುಗಳಿಗೆ ಸೂಕ್ತ ಪರಿಹಾರ ಕ್ರಮಗಳನ್ನೂ ಒಳಗೊಂಡ ಈ ಕೃತಿಯನ್ನು ನಾವೆಲ್ಲರೂ ಓದಿ- ಓದಿಸಿ, ಅದನ್ನು ಅನುಸರಿಸಬೇಕು.

ಜಲ ಸಂರಕ್ಷಣೆ ಮತ್ತು ನೀರಿನ ಸದ್ಬಳಕೆ ನಮ್ಮ ಮೇಲಿರುವ ಜವಾಬ್ದಾರಿಯಷ್ಟೇ ಅಲ್ಲ, ಇದು ನಮ್ಮ ಮುಂದಿನ ಪೀಳಿಗೆಯ ಅಳಿವು ಉಳಿವಿನ ಪ್ರಶ್ನೆಯೂ ಹೌದು. ಇಂದು ಜಲಮಾಲಿನ್ಯದ ಕಾರಣದಿಂದಾಗಿ ಮಾನವ ಹಲವು ರೀತಿಯ ರೋಗ - ರುಜಿನಗಳಿಗೆ ತುತ್ತಾಗುತ್ತಿರುವುದು ನಮ್ಮಗೆಲ್ಲ ತಿಳಿದ ವಿಚಾರವೇ. ಇಷ್ಟಾದರೂ ನಾವಿನ್ನೂ ಎಚ್ಚೆತ್ತುಕೊಳ್ಳದೇ ಇರುವುದು ದುರಂತ. ಜಲ ಸಂರಕ್ಷಣೆ ಹಾಗೂ ಅಂತರ್ಜಲ ಮರುಪೂರಣಕ್ಕೆ ಸಂಬಂಧಿಸಿದಂತೆ ಹೊಸ ಹೊಸ ವೈಜ್ಞಾನಿಕ ಸಂಶೋಧನೆಗಳು, ಆವಿಷ್ಕಾರಗಳು ಜಗತ್ತಿನಾದ್ಯಂತ ನಡೆಯುತ್ತಲೇ ಇವೆ. ಆದರೆ, ಇವುಗಳನ್ನು ಅನುಸರಿಸುವವರ ಸಂಖ್ಯೆ ಮಾತ್ರ ಬೆರಳೆಣಿಕೆಯಷ್ಟು. ಈ ಸಂಬಂಧ ಸರ್ಕಾರವು ಹಲವು ಯೋಜನೆಗಳನ್ನು ತಂದಿದ್ದರೂ ಅವು ಜನರಿಗೆ ತಲುಪದೇ ಕೇವಲ ದಾಖಲೆಗಳಲ್ಲಿ ಮಾತ್ರ ಉಳಿಯುವಂತಾಗಿದೆ. ಅನೇಕ ಸಂಘ ಸಂಸ್ಥೆಗಳು ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಕಾರ್ಯಗಳನ್ನು ನಿರಂತರವಾಗಿ ಮಾಡುತ್ತಲೇ ಇವೆ. ಇನ್ನಾದರೂ ನಾವು ಪರಿಸ್ಥಿತಿಯ ತೀವ್ರತೆಯನ್ನು ಅರಿಯಬೇಕಾಗಿದೆ ಮತ್ತು ನಮ್ಮ ಮುಂದಿನ ಪೀಳಿಗೆಯವರಿಗೂ ಈ ಅರಿವನ್ನು ಮೂಡಿಸಬೇಕಾಗಿದೆ. ಈ ನಿಟ್ಟಿನಲ್ಲಿ ಮಾನ್ಯ ಶರಶ್ಚಂದ್ರರದ್ದು ಒಂದು ಸಾರ್ಥಕ ಪ್ರಯತ್ನ ಎನ್ನಬಹುದು.

ಮಳೆಯ ಮಹತ್ವವನ್ನು ತಿಳಿಸುವ ಉದ್ದೇಶದಿಂದಲೇ ರಚನೆಯಾಗಿರುವ ಈ ಮಹತ್ವದ ಕೃತಿಯ ಕುರಿತು ಒಂದೆರಡು ಅನಿಸಿಕೆಗಳನಷ್ಟೇ ಇಲ್ಲಿ ಹಂಚಿಕೊಳ್ಳಲಾಗಿದೆ. ಇಂತಹ ಕೃತಿಯನ್ನು ಓದುವುದು - ಅನುಸರಿಸುವುದು ಈ ಕ್ಷಣದ ಅನಿವಾರ್ಯವಾಗಿದ್ದು, ಓದುಗರು ಪುಸ್ತಕವನ್ನು ಕೊಂಡು ಓದಿ ಮತ್ತಷ್ಟು ಮಾಹಿತಿ ಹಾಗೂ ಜ್ಞಾನವನ್ನು ಪಡೆದು ವಿಸ್ತರಿಸಿಕೊಳ್ಳಬಹುದು. ಪುಸ್ತಕಕ್ಕಾಗಿ ಸಂಪರ್ಕಿಸಿ: ಡಾ. ಜಿ. ಶರಶ್ಚಂದ್ರ ರಾನಡೆ #೯೦೦೮೨೩೧೬೮೬.

-    ವರುಣ್‌ರಾಜ್‌ ಜಿ.

ಅಧ್ಯಕ್ಷರು, ವಿಚಾರ ಮಂಟಪ ಬಳಗ.

#೯೪೪೮೨೪೧೪೫೦


( ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ : 9113036287 ವಾಟ್ಸಪ್‌ ಮಾತ್ರ)

ಕಾಯುತ್ತಲೇ ಇರುವೆ ನಿನಗಾಗಿ (ಕವಿತೆ) -ತರುಣ ಈಶಪ್ಪ ಪೂಜಾರ.

ಹುಣ್ಣಿಮೆಯ ಬೆಳದಿಂಗಳ ಚಂದಿರನೇ ನಾಚುವ ಹಾಗಿದೆ,
ನಿನ್ನ ಮುಖ ಕಮಲ. 
ಈ ನಿನ್ನ ನಗುವ ಬೆಳದಿಂಗಳ ಕಂಡು ಅರಳಿದೆ ಕಮಲ.

ನಕ್ಷತ್ರದ ಕಾಂತಿಯನ್ನೇ ಕನ್ನಡಿಯಲಿ
ಪ್ರತಿಬಿಂಬಿಸುವ ಚೆಲುವೆ ನೀನು.
ರಾತ್ರಿ ಚಂದ್ರನಿಗೆ ಚಂದದ ಪೈಪೋಟಿ ನೀನು.

ನಿನ್ನ ನಾಚಿಕೆಯೇ ನಿನಗೆ ಅಲಂಕಾರ,  ಮಿಂಚುತಿದೆ ನಿನ್ನ ಕೊರಳಲಿ ನಕ್ಷತ್ರದ ಹಾರ.

ನಾ ಸೋತು ಹೋದೆ ಗೆಳತಿ!!
ಮಿಂಚಿನ ನಿನ್ನ ಚೆಲುವ ನಡಿಗೆಗೆ, 
ನಿನ್ನ ನೋಟದ ಸೆಳೆತಕೆ, 
ನಿನ್ನ ಕಿವಿ ಜುಮುಕಿಯ ವೈಯಾರದ ನಾಟ್ಯಕ್ಕೆ, 

ನೀ ಎತ್ತ ಹೋದೆ ಗೆಳತಿ. 
ನಿನ್ನ ನೆನಪಿನ ಬಾಣಗಳು ನನ್ನ ಇರಿಯುತಿವೆ. 
ನಾನಿನ್ನೂ ನಿನ್ನ ದಾರಿಯ ಕಾಯುತ್ತಲೇ ಇರುವೆ.


- ತರುಣ ಈಶಪ್ಪ ಪೂಜಾರ, 8884996149.


ಶರೀಫನ ತಂಬೂರಿ (ಕವಿತೆ) - ಮಹಮ್ಮದ್ ರಫೀಕ್, ಕೊಟ್ಟೂರು.

ನನ್ನ‌ ಪ್ರಶ್ನೆಗಳಿಗೆ ಅವರು ಉತ್ತರ  ನೀಡಲಿಲ್ಲ
ಅವರೂ ಪ್ರಶ್ನೆಗಳಲ್ಲೇ ಉತ್ತರಿಸಿದರು
ಪ್ರಶ್ನೆಗೆ ಪ್ರಶ್ನೆಯೇ ಉತ್ರರವಾದೀತೇ?

ಉತ್ತರಗಳಿಲ್ಲದ ಪ್ರಶ್ನೆಗಳು
ನನ್ನ ಬಳಿಯೂ ಇರುವಾಗ 
ನನ್ನದೂ ತಪ್ಪಲ್ಲವೆಂದು ಹೇಗೆ ಹೇಳಲಿ?

ಹಾಗೇ ಅಳು ಒತ್ತರಿಸಿ
ಬರುತ್ತಿದೆ
ಹೃದಯದ ಭಾರ ಹೆಚ್ಚುತ್ತಿದೆ
ಮನದಾಳದ ದು:ಖ ನೋವುಗಳಿಂದಲ್ಲ
ನನ್ನವರು ದೂರವಾಗುತ್ತಿದ್ದಾರೆಂಬ ದುಗುಡದಿಂದ

ತಪ್ಪು ಒಪ್ಪುಗಳ ನಡುವೆ
ಒಪ್ಪವಾಗಿಹ ಬದುಕು
ಪ್ರಶ್ನೆಗಳಲೇ ಕಂದಕವಾಗದಿರಲಿ
ನಾನು ನಿನಗೆ ಸೋಲಬೇಕೆಂದಿದ್ದೆ
ನನ್ನೊಳಗಿನ ನೀನು ಸೋಲಲಿಲ್ಲ
ನಾನು ಗೆಲ್ಲಲಾಗುತ್ತಿಲ್ಲ!

ಶರೀಫನ  ತಂಬೂರಿ ಶೃತಿ ಹಿಡಿಯಬೇಕಿದೆ
ನನ್ನ ಮನೆಯಂಗಳದ
ಮಣ್ಣಿನಲಿ ಒಡಮೂಡಿದ
ಗಣೇಶ ಪಕ್ಕದ ಮನೆಯ
ಗೌರಿಯ ತೊಡೆಯೇರಿ ಕುಳಿತಿರಲು

- ಮಹಮ್ಮದ್ ರಫೀಕ್, ಕೊಟ್ಟೂರು.

ಮಾರಬೇಡಿ ಮತಗಳ (ಕವಿತೆ) - ಶ್ರೀಮತಿ ಸುಲೋಚನಾ ಮಾಲಿಪಾಟೀಲ.

ಸಮಾಜಕ್ಕೆ ಸಹಕರಿಸಿ
ಸಮರ್ಪಿಸುವ ಸವಲತ್ತುಗಳಲ್ಲಿ
ಅಭ್ಯರ್ಥೀಯ ದಿಶೆಯ
ಅರಿತುಕೊಳ್ಳಿ 
ನಿಮ್ಮ ಮತ ಚಲಾವಣೆಯ
ಹಕ್ಕಿನ ಮೌಲ್ಯ ಎಷ್ಟಿಹುದಿಲ್ಲಿ 
ತಿಳಿದುಕೊಳ್ಳಿ

ಪ್ರಜೆಗಳೇ ಮೊಡಿಗೆ ಮರುಳಾಗಿ
ಮಾರಿಕೊಳ್ಳಬೇಡಿ ಮತಗಳ
ದೂರವಿರಿ ದುರ್ನಡತೆಯ ಪರ
ಚುನಾವಣೆಯ ನಂತರ ನಿಮ್ಮನ್ನು
ಐದು ವರ್ಷ ನೋಡದವರು
ಮತ ಬೇಡಿಕೆಯನಿಟ್ಟು 
ಆಮೀಶ ಒಡ್ಡುವರು 

ಸಂವಿಧಾನವ ಕಟ್ಟಿ
ಸಮಪಾಲು ಸಮಬಾಳೆಂಬಲ್ಲಿ
ಸಮಾನತೆಯ ತಂದ
ಬಸವ ಅಂಬೇಡ್ಕರರ 
ವಿಚಾರಧಾರೆಯ ಮರೆತು
ಲೆಕ್ಕ ಹಾಕುತಿಹರು 
ತಮ್ಮ ತಮ್ಮ ಪಂಗಡಗಳ 
 
ಕಾಯಕಕ್ಕೆ ಬೆಲೆ ಕೊಡದೆ
ಆಗಿಹೋದರು ಸೋಮೆರಿಗಳು
ಸತ್ಯದ ನಡೆ ನುಡಿಮರೆತು
ಕೈವಶವಾಗಿದೆ ದುಷ್ಟ ದಲ್ಲಾಳಿಗಳ
ಬಡವರ ಹಿತ ದೃಷ್ಟಿಕೋನದಲ್ಲಿ
ಇರದ ಫಲಾಪೆಕ್ಷೆಯ ಕಾರ್ಯಗಳ

ಒಂದು ದಿನದ ಚಲಾವಣೆಗೆ
ಮಾರಬೇಡಿ ಮತಗಳ 
ಜನರ ಮನಗಳ ಮೆಚ್ಚಿಸಲು
ಹಂಚುವರು ಸೀರೆ ವಸ್ತುಗಳ
ಕೈಯಲ್ಲಿ ಸಾವಿರ ಸಾವಿರ
ಹಣವನಿತ್ತು ನಮಿಸುವರು ಪಾದಂಗಳ
 
ಕೇಳಿ ನಾಗರಿಕರೇ ಎಚ್ಚರ
ಬಹಮೌಲ್ಯವಾದ ನಿಮ್ಮ ಮತ
ಹಾಕಿರಿ ಅರಿವಿನಲಿ
ಮುಂದಿನ ಐದು ವರ್ಷ
ನೀವು ಒಪ್ಪಿದ ಸರಕಾರವಿರಲಿ
ನಿಮ್ಮ ಬೇಕುಬೇಡಿಕೆ ಪೂರೈಸುವಲ್ಲಿ

- ಶ್ರೀಮತಿ ಸುಲೋಚನಾ ಮಾಲಿಪಾಟೀಲ, ಧಾರವಾಡ.

ಗೆಳತಿಗೊಂದು ಉತ್ತರ (ಕವಿತೆ) - ಖಾಶೀ.

ಅಹುದಹುದು
ಗೆಳತಿ.....
ನಿನ್ನಂತರಾಳದ
ದಣಿಯು
ನನ್ನ ಮನದೊಳಗೆ
ನುಸುಳಿ.....
ನೀನನ್ನ ಕರೆಯುವ
ಪರಿಯು ಇರಿಯುತಿಹುದು.

ನನ್ನ ಬರುವಿಕೆಗಾಗಿ
ಪರಿತಪಿಪ
ನಿನ್ನ ತನುಮನವ
ನಾನೆಂತು 
ಸಂತೈಪೆನೆಂಬ
ಕೊರಗಲಿಹೆನೂ.

ನನ್ನ ಬದುಕಿನ
ಹಾದಿ ,ಸವೆಸವೆದು
ಹೋಗುವ ಮುನ್ನ
ಬಂದು ಸೇರುವೆ ನಾನು
ಆ ನಿನ್ನ 
ಹೃದಯದರಮನೆಯನು.

ಬಿಟ್ಟುಬಿಡು
ನಿನ್ನೆಲ್ಲ ಹಮ್ಮುಬಿಮ್ಮುಗಳ
ಚಿಂತೆ ಚೀತ್ಕಾರಗಳ
ತೊರೆದುಬಿಡು
ನಿನ್ನ ಸಕಲ
ದು:ಖ ದುಮ್ಮಾನಗಳ.

ನಾನಿರಲು ನಿನ್ನೊಡನೆ
ಬೇರೇನು ಬೇಕಿನ್ನು
ನಾಕವೇ ಬಂದಂತೆ
ನಿನ್ನೆದುರಿಗೇ.
-ಖಾಶೀ, (ಖಾದ್ರಿ ವೆಂಕಟ ಶ್ರೀನಿವಾಸನ್).


ಜಂಗಮವಾಣಿ (ಕವಿತೆ) - ಮಾಲತಿ ಮೇಲ್ಕೋಟೆ.

ಗೋಡೆ ಗಡಿಯಾರ ಬೇಕಿಲ್ಲ
ಕೈ ಗಡಿಯಾರವು ಬೇಕಿಲ್ಲ
ಅಕ್ಷರ ಬರೆಯಲೆಬೇಕಿಲ್ಲ
ಪುಸ್ತಕಗಳೂ ಬೇಕಿಲ್ಲ
 ಜಂಗಮವಾಣಿಯು ಇಹುದಲ್ಲ

ಬಾನುಲಿಯೂ ಬೇಕಿಲ್ಲ
ಧ್ವನಿಮುದ್ರಕವೂ ಬೇಕಿಲ್ಲ
ಛಾಯಾಗ್ರಹಣ ಮಾಡಬೇಕೇ
ಗಣಕಯಂತ್ರ ಬೇಕಿದೆಯೇ
ಜಂಗಮವಾಣಿ ಇಹುದಲ್ಲ

ಸ್ನೇಹಿತರೂ ಬೇಕಿಲ್ಲ
ಸಂಬಂಧಿಕರೂ ಬೇಕಿಲ್ಲ
ಕೈಯಲಿ ಹಣವೂ ಬೇಕಿಲ್ಲ
ಏನನು ನೆನಪಿಡಬೇಕಿಲ್ಲ
ಜಂಗಮವಾಣಿ ಇಹುದಲ್ಲ

ವಿಳಾಸ ತಿಳಿಯಬೇಕಿಲ್ಲ
ನಕ್ಷೆ ಇದರಲಿ ಇಹುದಲ್ಲ
ಅರ್ಥ ತಿಳಿಯಬೇಕಿಲ್ಲ
ಇದರಲಿ ಎಲ್ಲವೂ ಇಹುದಲ್ಲ

ತಾಯ್ತಂದೆ ಮಕ್ಕಳಲಿ 
ಅಂತರ ಬೆಳೆಯುತ್ತಿಹುದಲ್ಲ
ಪಕ್ಕದಲೇ ಇದ್ದರೂ 
ಮೊಗ ನೋಡಲು ಬಿಡುವಿಲ್ಲ

ಮುಟ್ಟಿದರೊಮ್ಮೆ ಸಾಕಿದಕೆ
ಜಂಗಮವಾಣಿಯೆ ಮಾಡುವುದು
ಮನುಜ ಮನುಜರನ್ನು ಮಾತ್ರ
ಮುಟ್ಟಲು ಈಗ ಬಿಡುವಿಲ್ಲ

ವೈಜ್ಞಾನಿಕ ಪ್ರಗತಿಯಿದು
ಸಂಬಂಧಗಳನೇ ಕೊಂದಿತು
ಮನ: ಶಾಂತಿಯ ತಿಂದಿತು
ಆರೋಗ್ಯವನು ಕೆಡಿಸಿತು

 ಜಂಗಮವಾಣಿ ಇರದೆಯೆ
ಬದುಕಲಾರೆವು ನಾವೀಗ
ಜಂಗಮವಾಣಿಯೊಂದಿರೆ
ಮನುಜರೇ ಬೇಕಿಲ್ಲ
- ಮಾಲತಿ ಮೇಲ್ಕೋಟೆ.


ಜಗವ ಪಾಲಿಸು ಶಿವನೇ (ಕವಿತೆ) - ಶಾರದ ದೇವರಾಜ್, ಎ. ಮಲ್ಲಾಪುರ.

ಸಲಿಲದೊಳು ಮಿಂದೆದ್ದು
 ವಲ್ಕಲವ ಧರಿಸಿದ್ದು
 ಉದಯದ ತಂಗಾಳಿಯಲಿ
 ಹರನ ಶೋಭಿಯ  ಸ್ರವಿಸುತ್ತಿರಲುl

 ಜಗದೊಡೆಯನ ಶೋಭಿಯ 
ಕಣ್ತುಂಬಿಕೊಳ್ಳಲು ವಿಭಕ್ತಿಯಿಂದ
 ಕೂಡಿದ್ದು ಇಂಚರದಿ ಬೇಡುತಾ  ಸನ್ನಡತೆಯ ಕೋರಿದೆನು ವಾಗ್ದಾನ ಬೇಡುತl

 ಜಗದೊಳಿಹ ಜನರ ದುಗುಡವ
 ಕಂಡು ಚಕಿತವು ಜನಿಸಿದ್ದು
 ಮನದಿ ಕಾರ್ಮೋಡವು ಜರುಗಿ
 ಕಣ್ಗಳಲ್ಲಿ  ಅಶ್ರೂರಸ ತುಂಬಿದ್ದು
 ಲೋಪವಾಯಿತು ಎನ್ ಮನದ 
ವ್ಯಾಪದ ಸಮಷ್ಟಿ  ಬಯಕೆಗಳುl

 ಬೆಸೆಯುವೆ ಭಗವಂತನೇ
 ದೌರ್ಜನ್ಯವ ನಿಷೇಧಿಸಿ   ನಿಸ್ಸಾರವಾಗಿ ನುಡಿಯುವ ಆಣತಿಗೆ
 ಭಂಗಿಸಿ ಆಡುವವರಿಗೆ ಪುಂಜ  ನೀಡು
  ಸಮಸ್ಟಿಯ ಕೀಳು ಗೈಮೆಗೆ
 ಸಿದಿಗೆ ಕಟ್ಟಿ ತಿಲಾನ್ನ ಬಿಡುl
 - ಶಾರದ ದೇವರಾಜ್, ಎ. ಮಲ್ಲಾಪುರ.


ಮಂಗಳವಾರ, ಫೆಬ್ರವರಿ 21, 2023

ಯಶಸ್ವಿಯಾದ ಸರ್ವಜ್ಞ ಹಾಗೂ ರಾಮಕೃಷ್ಣ ಪರಮಹಂಸರ ಕುರಿತಾದ ಉಪನ್ಯಾಸ ಕಾರ್ಯಕ್ರಮ.

ವಿಚಾರ ಮಂಟಪ ಬಳಗ ಹಾಗೂ ಕರ್ನಾಟಕ ರಾಜ್ಯ ಸ್ಪಂದನ ಸಿರಿವೇದಿಕೆ ಹಾಸನ ಇವರ ಜಂಟಿ ಸಹಯೋಗದಲ್ಲಿ ದಿನಾಂಕ ೨೧.೦೨.೨೦೨೩ ರಂದು ಸಂಜೆ ೦೭:೦೦ ಕ್ಕೆ ಗೂಗಲ್‌ ಮೀಟ್‌ ಆನ್‌ಲೈನ್‌ ಜಾಲತಾಣದಲ್ಲಿ ಸಂತಕವಿ ಸರ್ವಜ್ಞ ಹಾಗೂ ಪರಮಹಂಸ ರಾಮಕೃಷ್ಣರ ಜಯಂತಿಯ ಪ್ರಯುಕ್ತ ಉಪನ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಸಂತಕವಿ ಸರ್ವಜ್ಞ ಎಂಬ ವಿಷಯದ ಕುರಿತು ಮಾತನಾಡಿದ ಸಂಶೋಧಕರಾದ ಪ್ರಭುಕುಮಾರ ಪಿ ಇವರು ಸರ್ವಜ್ಞನ ಕುರಿತು ನಮಗೆ ಯಾವ ಅಧಿಕೃತ ಮಾಹಿತಿಯೂ ಲಭ್ಯವಿಲ್ಲದಿದ್ದರೂ ಅವನ ಕುರಿತಾದ ಐತಿಹ್ಯಗಳು, ಕೆಲವು ಸಂಶೋಧನೆಗಳು ಹಾಗೂ ಸ್ವತಃ ಸರ್ವಜ್ಞನೇ ರಚಿಸಿರುವ ತ್ರಿಪದಿಗಳ ಆಧಾರದಲ್ಲಿ ಸರ್ವಜ್ಞನ ಊರು, ತಂದೆ ತಾಯಿ ಇತ್ಯಾದಿ ವಿವರಗಳನ್ನು ಊಹಿಸಲಾಗಿದೆ. ಬಸವರಸ ಹಾಗೂ ಮಾಳಿ ಸರ್ವಜ್ಞನ ತಂದೆ ತಾಯಿಗಳೆಂದು, ಇವನ ನಿಜ ನಾಮ ದೇವದತ್ತ ಅಥವಾ ಪುಷ್ಟದತ್ತನೆಂದು, ಇವನ ಊರು ಈಗಿನ ಹಾವೇರಿ ಜಿಲ್ಲೆಯ ಮಾಸೂರು ಎಂದು ತಿಳಿದುಬಂದಿದೆ. ಒಂದು ಐತಿಹ್ಯದ ಪ್ರಕಾರ ಮಕ್ಕಳಿಲ್ಲದ ಬಸವರಸನು ಮಕ್ಕಳ ಭಾಗ್ಯಕ್ಕಾಗಿ ಕಾಶಿಯಾತ್ರೆಗೆ ಹೋಗಿ ಮರಳಿ ಬರುವ ಹಾದಿಯಲ್ಲಿ ಮಾಳಿಯನ್ನು ಸಂಧಿಸಿದ ಕಾರಣದಿಂದ ಸರ್ವಜ್ಞನು ಹುಟ್ಟಿದನೆಂದು ಹೇಳಲಾಗುವುದು. ಆದರೆ ಸರ್ವಜ್ಞ ʼಊರೆಲ್ಲ ನೆಂಟರು, ಕೇರಿಯಲ್ಲ ಬಳಗ ಎಂಬಂತೆ ಬದುಕಿದವನು.

      ಸರ್ವಜ್ಞ ತನ್ನ ಒಂದು ವಚನದಲ್ಲಿ “ಸರ್ವಜ್ಞನೆಂಬವನು ಗರ್ವದಿಂದಾವನೆ, ಸರ್ವರಿಂದೊಂದು ನುಡಿಕಲಿತು ವಿದ್ಯಯಾ ಪರ್ವತವೇ ಆದ ಸರ್ವಜ್ಞ” ಎಂದು ಹೇಳಿರುವನು. ಈ ವಚನವು ಒಂದು ಕಡೆ ಒಬ್ಬ ವ್ಯಕ್ತಿ ಸರ್ವಜ್ಞನೆಂದು ಕರೆಸಿಕೊಳ್ಳಬೇಕಾದರೆ ಅಥವಾ ಅವನು ಸರ್ವವನ್ನೂ ಅರಿಯಬೇಕಾದರೆ ಅವನಿಗಿರುವ ಮಾರ್ಗ ಏನು ಎಂಬುದನ್ನು ಹೇಳುತ್ತಲೇ, ಮತ್ತೊಂದು ಕಡೆ ಸರ್ವಜ್ಞನು ತನ್ನ ವ್ಯಕ್ತಿತ್ವವನ್ನು ಕುರಿತು ತಾನೇ ಹೇಳಿಕೊಂಡಂತೆ ಇದೆ. ಇಂತಹ ಸಂಕೀರ್ಣವಲ್ಲದ, ಸರಳವಾದ, ಅಲಂಕಾರವಿಲ್ಲದ, ರೂಪಕಗಳಿಂದ ಕೂಡಿದ ಸಾವಿರಾರು ವಚನಗಳನ್ನು ಸರ್ವಜ್ಞ ರಚಿಸಿದ್ದಾನೆ.

      ತನ್ನ ಸುದೀರ್ಘವಾದ ಜೀವನಾನುಭವ, ಜೀವನ ಧರ್ಮ, ಜೀವ ಪೋಷಕ ತತ್ತ್ವಗಳನ್ನು ಆನೆಯನ್ನು ಕನ್ನಡಿಯಲ್ಲಿ ತೋರಿಸುವ ಹಾಗೆ ಮೂರೇ ಮೂರು ಸಾಲುಗ ತ್ರಿಪದಿಗಳ ಮೂಲಕ ಸರ್ವಜ್ಞ ನಮಗೆ ಕಾಣಿಸಿದ್ದಾನೆ. ಸರ್ವಜ್ಞನ ಕೆಲವು ವಚನಗಳಲ್ಲಿ ಮಾತಿನ ಚಮತ್ಕಾರವಿದ್ದರೆ, ಮತ್ತೆ ಕೆಲವುಗಳಲ್ಲಿ ವಿಡಂಬನಾತ್ಮಕತೆ, ಮತ್ತೆ ಕೆಲವುಗಳಲ್ಲಿ ನೀತಿ ಬೋಧನೆ ಪ್ರಧಾನವಾದ ಅಂಶಗಳು ಮುಖ್ಯವಾಗಿ ಕಾಣಬರುತ್ತವೆ. ಸರ್ವಜ್ಞನ ರಸಿಕನಾಡಿದ ಮಾತು ಶಶಿಯುದಿಸಿ ಬಂದಂತೆ, ಸಾಲವನು ಕೊಂಬಾಗ ಹಾಲೊಗರುಂಡಂತೆ, ನಡೆವುದೊಂದೆ ದಾರಿ ಸುಡುವುದೊಂದೆ ಅಗ್ನಿ ಮುಂತಾದ ತ್ರಿಪದಿಗಳಲ್ಲಿ ಮೇಲೆ ಚರ್ಚಿಸಿದ ಅಂಶಗಳನ್ನು ಸ್ಪಷ್ಟವಾಗಿ ಗುರುತಿಸಬಹುದು ಎಂದರು.

 

ಪರಮಹಂಸ ರಾಮಕೃಷ್ಣರು ಎಂಬ ವಿಷಯದ ಮೇಲೆ ಮೊದಲನೆಯದಾಗಿ ಗುಡಿಬಂಡೆಯ ಶಿಕ್ಷಕರಾದ ಡಿ.ಎಲ್.‌ ಪರಿಮಳಾ ಅವರು ಮಾತನಾಡುತ್ತಾ, ಒಬ್ಬ ಸಾಮಾನ್ಯ ಮಾನವನಾಗಿ ಜನಿಸಿದ ರಾಮಕೃಷ್ಣ ಪರಮಹಂಸರು ದೈವೀ ಪುರುಷರಾಗಿ ದೇಶ ವಿದೇಶಗಳಲ್ಲಿ ಹೆಸರುವಾಸಿಯಾದವರು. ಭಾರತದ ಸಂಸ್ಕೃತಿ ಆಧ್ಯಾತ್ಮಿಕತೆಯನ್ನು ದೇಶ ವಿದೇಶಗಳಿಗೆ ಪಸರಿಸಿದವರು.

ಗಂಗಾಧರ ಅಥವಾ ಗದಾಧರ ಎಂಬುದು ರಾಮಕೃಷ್ಣ ಪರಮಹಂಸರ ಮೊದಲ ಹೆಸರು. ಇವರು ಜನಿಸಿದ್ದು ೧೮೩೬ ರಲ್ಲಿ. ಹುಟ್ಟಿನಿಂದಲೇ ಚತುರನೂ ಚಾಲಾಕಿಯೂ ಆಗಿದ್ದ ರಾಮಕೃಷ್ಣರು ಅಷ್ಟೇ ತುಂಟ ಸ್ವಭಾವದವರೂ ಆಗಿದ್ದರು. ಇವರಿಗೆ ಶಾಲೆಯಲ್ಲಿ ಸಿಗುತ್ತಿದ್ದ ಔಪಚಾರಿಕ ಶಿಕ್ಷಣದಲ್ಲಿ ಆಸಕ್ತಿ ಇರಲಿಲ್ಲ. ಶಾಲೆಯನ್ನು ತೊರೆದು ನಾಟಕ ಕಲಿಯಲು ಹೋಗುತ್ತಿದ್ದರು. ತಮ್ಮ ೨೦ ನೇ ವಯಸ್ಸಿನಲ್ಲಿಯೇ ದಕ್ಷಿಣೇಶ್ವರದ ಕಾಳಿಯ ಅನುಗ್ರಹಕ್ಕೆ ಪಾತ್ರರಾಗುವರು. ತಮ್ಮನ್ನು ಸದಾ ಕಾಡುತ್ತಿದ್ದ, ಈ ಜೀವನದ ಗುರಿ ಏನು?, ದೇವರು ಎಂದರೇನು?, ಈ ಜಗತ್ತಿನ ಸ್ವರೂಪ ಯಾವುದು ಇತ್ಯಾದಿ ಪ್ರಶ್ನೆಗಳಿಗೆ ತಮ್ಮ ಧ್ಯಾನದಲ್ಲಿಯೇ ಉತ್ತರಗಳನ್ನು ಪಡೆದುಕೊಳ್ಳತ್ತಾ, ಜಾತಿ ಧರ್ಮಗಳನ್ನು ಮೀರುವ ಸರ್ವರನ್ನು ಸಮಾನವಾಗಿ ಕಾಣುವ, ಸಕಲ ಚರಾಚರಗಳಲ್ಲಿ ದೇವರನ್ನೇ ಕಾಣುವ ಸಂದೇಶವನ್ನು ಜಗತ್ತಿಗೆ ಕೊಟ್ಟವರು ರಾಮಕೃಷ್ಣ ಪರಮಹಂಸರು.

ʼವಸುದೈವ ಕುಟುಂಬಕಂʼ ಎಂಬ ವಾಕ್ಯವನ್ನು ಯಥಾವತ್ತಾಗಿ ಪಾಲಿಸುತ್ತಿದ್ದವರು, ಅದರಂತೆ ಬದುಕಲು ತಮ್ಮ ಶಿಷ್ಯ ಕೋಟಿಗೆ ನಿತ್ಯ ಮಾರ್ಗದರ್ಶನ ಮಾಡಿದವರು ರಾಮಕೃಷ್ಣ ಪರಮಹಂಸರು. ತಮ್ಮ ಜೀವಿತಕಾಲವನ್ನೆಲ್ಲ ಪ್ರವಚನ ಬೋಧನೆಗಳ ಮೂಲಕ ಕಳೆದ ರಾಮಕೃಷ್ಣರು ಗಂಟಲು ಬೇನೆಗೆ ತುತ್ತಾಗುವರು. ಇಷ್ಟಾದರೂ ತಮ್ಮ ಕಾರ್ಯವನ್ನು ಬಿಡದೇ ಸದಾ ಕ್ರಿಯಾಶೀಲರಾಗಿರುತ್ತಿದ್ದ ಇವರು ೧೮೮೬ ಆಗಸ್ಟ್‌ ೧೬ ರಂದು ತಮ್ಮ ದೇಹವನ್ನು ಬಿಟ್ಟರು. ಅವರು ದೈಹಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ಸಹ ಅವರ ಜ್ಞಾನ, ಅನುಭವದ ಭೋದನೆಗಳು ನಮಗೆ ನಿತ್ಯ ಮಾರ್ಗದರ್ಶಿಗಳಾಗಿದ್ದು, ಇವರ ಚಿಂತನೆಗಳನ್ನು ಬೋಧನೆಗಳನ್ನು ನಾವು ಸದಾ ಕಾಲ ಅನುಸರಿಸಿ ಅವರು ತೋರಿಸಿದ ಜ್ಞಾನದ ಬೆಳಕಿನಲ್ಲಿ ನಮ್ಮ ಜೀವನಗಳನ್ನು ಹಸನುಗೊಳಿಸಿಕೊಳ್ಳಬೇಕು ಎಂದು ಹೇಳಿದರು.

ಮುಂದೆ ರಾಮಕೃಷ್ಣ ಪರಮಹಂಸರ ಭೋದನೆಗಳನ್ನು ಕುರಿತು ಮಾತನಾಡಿದ ಶಿಕ್ಷಕಿ ಶಶಿವಸಂತ ಇವರು, ಬಂಗಾಳ ಪ್ರಾಂತ್ಯದ ಹೂಗ್ಲಿ ಜಿಲ್ಲೆಯ ಕಾಮಾರಕಪುರ ಎಂಬ ಒಂದು ಸಣ್ಣ ಗ್ರಾಮದಲ್ಲಿ ಜನಿಸಿದ ಶ್ರೀ ರಾಮಕೃಷ್ಣ ಪರಮಹಂಸರು ಭಾರತೀಯ ಸಂಸ್ಕೃತಿಯನ್ನು ದೇಶವಿದೇಶಗಳಿಗೆ ಪಸರಿಸುವಂತೆ ಮಾಡಿದವರು. ಇವರ ತಂದೆ ಖುದಿರಾಮ ಚಟ್ಟೋಪಾಧ್ಯಾಯ ಮತ್ತು ತಾಯಿ ಚಂದ್ರಮಣಿದೇವಿ. ಜನ್ಮತಃ ಧೈರ್ಯಶಾಲಿಗಳಾಗಿದ್ದ ರಾಮಕೃಷ್ಣರು ಸಜ್ಜನರು, ಸಮಾನ ಚಿತ್ತರೂ ಆಗಿದ್ದರು. ಇವರು ಶಾಲೆಯಲ್ಲಿ ಕಲಿತದ್ದು ಬಹಳ ಕಡಿಮೆಯಾದರೂ, ತಮ್ಮ ಸುತ್ತಮುತ್ತಲ ಪರಿಸರ ಹಾಗೂ ತಮ್ಮ ಆಂತರಂಗದ ಅನುಭವಗಳ ಮೂಲಕ ಪಡೆದ ಜ್ಞಾನ ಅಗಾಧವಾದದ್ದು.

ರಾಮಕೃಷ್ಣರದ್ದು ಎಲ್ಲ ಧರ್ಮಗಳನ್ನು ಒಳಗೊಂಡು ಮತ್ತು ಎಲ್ಲ ಧರ್ಮಗಳನ್ನು ಮೀರಿದ ಧರ್ಮ. ಇಂತಹ ಒಂದು ಧರ್ಮವನ್ನು ರಾಮಕೃಷ್ಣರು ಭೋಧಿಸಿದ ಕಾರಣದಿಂದ ʼಸ್ಥಾಪಕಾಯಚ ಧರ್ಮಸ್ಯʼ ಎಂಬುದಾಗಿ ಶ್ರೀ ವಿವೇಕಾನಂದರು ರಾಮಕೃಷ್ಣರನ್ನು ಸ್ತೋತ್ರ ಮಾಡಿರುವರು. ರಾಮಕೃಷ್ಣ ಪರಮಹಂಸರು ಅಷ್ಟಾಂಗ ಯೋಗಗಳಲ್ಲಿ ಕೊನೆಯ ಹಂತವಾದ ನಿರ್ವಿಕಲ್ಪ ಸಮಾಧಿ ಸ್ಥಿತಿಯನ್ನು ಸಾಧಿಸಿದ್ದರು. ಹೀಗಾಗಿಯೇ ಅವರು ಹಲವು ಘಂಟೆಗಳ, ವಾರಗಳ ಕಾಲದವರೆಗೂ ಧ್ಯಾನಸ್ಥ ಸ್ಥಿತಿಯಲ್ಲಿಯೇ ಇದ್ದು ಬಿಡಬಹುದಾದ ಶಕ್ತಿಯನ್ನು ಪಡೆದಿದ್ದರು. ಪರಮಹಂಸ ಎಂಬ ಸ್ಥಾನವೂ ಅವರ ಆಧ್ಯಾತ್ಮಿಕ ಔನತ್ಯವನ್ನು ಪ್ರತಿನಿಧಿಸುವಂತದ್ದೇ ಆಗಿದೆ. ಈ ಆಧ್ಯಾತ್ಮಿಕ ಹಂತಗಳನ್ನು ಯೋಗಿಯಾದವನು ಅನುಭವಿಸಬಹುದೇ ವಿನಃ ಅವನ್ನು ಮತ್ತೊಬ್ಬರಿಗೆ ವಿವರಿಸಲಾರನು, ಏಕೆಂದರೆ ಇದು ಮಾತಿಗೆ ಊಹೆಗೆ ಮೀರಿದ/ನಿಲುಕದ ಅನುಭವವಾಗಿರುತ್ತದೆ.

ರಾಮಕೃಷ್ಣ ಪರಮಹಂಸರ ಹೆಂಡತಿ ಶ್ರೀಮತಿ ಶಾರದಾ ದೇವಿ ಹಾಗೂ ಪ್ರಿಯಶಿಷ್ಯನಾದ ವಿವೇಕಾನಂದರು ರಾಮಕೃಷ್ಣರ ಕೀರ್ತಿಯನ್ನು ಮತ್ತಷ್ಟು ಬೆಳಗಿಸಿದವರು. ಇಬ್ಬರೂ ರಾಮಕೃಷ್ಣರ ಮಾರ್ಗದರ್ಶನದಲ್ಲಿ ಅವರು ಹೇಳಿದಂತೆ ನಡೆಯುತ್ತಾ ರಾಮಕೃಷ್ಣರ ಭೋಧನೆಗಳನ್ನು ಮುಂದಿನವರಿಗೆ ದಾಟಿಸುವ ಕೆಲಸವನ್ನು ಮಾಡಿದರು. ಎಲ್ಲ ಅಸ್ತಿತ್ವದ ಏಕತೆ, ಮಾನವರಲ್ಲಿಯೂ ಇರುವ ದೈವತ್ವ, ದೇವರ ಏಕತೆ, ಎಲ್ಲ ಧರ್ಮಗಳ ಸಾಮರಸ್ಯ ಇವು ರಾಮಕೃಷ್ಣ ಪರಮಹಂಸರು ಮುಖ್ಯವಾಗಿ ನಮಗೆ ನೀಡಿರುವ ನಾಲ್ಕು ತತ್ತ್ವಗಳು. ಇಂತಹಾ ಆಧ್ಯಾತ್ಮಜೀವಿಯ ಭೋಧನೆಗಳನ್ನು ಕಲಿತು ಅಳವಡಿಸಿಕೊಳ್ಳುವ ಮೂಲಕ ನಾವೆಲ್ಲರೂ ನಮ್ಮ ನಮ್ಮ ಜೀವನಗಳನ್ನು ಸಾರ್ಥಕಪಡಿಸಿಕೊಳ್ಳಬಹುದು ಎಂದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದ ಶ್ರೀಮತಿ ಕಲಾವತಿ ಮಧುಸೂಧನ, ರಾಜ್ಯಾಧ್ಯಕ್ಷರು, ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಇವರು ಮಾತನಾಡುತ್ತಾ, ನಮ್ಮ ಸಂಸ್ಕೃತಿ ಮತ್ತು ಆಧ್ಯಾತ್ಮದ ಎರಡು ಮೇರು ವ್ಯಕ್ತಿತ್ವಗಳಾದ ಸರ್ವಜ್ಞ ಹಾಗೂ ರಾಮಕೃಷ್ಣ ಪರಮಹಂಸರ ಕುರಿತ ಈ ಉಪನ್ಯಾಸ ಕಾರ್ಯಕ್ರಮವು ಬಹಳ ಅರ್ಥಪೂರ್ಣವಾಗಿ ಮೂಡಿಬಂದಿದೆ. ಇಂತಹ ಕಾರ್ಯಕ್ರಮಗಳು ಹೆಚ್ಚೆಚು ನಡೆಯುತ್ತಿರಲಿ, ಇಂತಹ ಸಾಧಕರ ಜೀವನ ಸಾಧನೆ ಹಾಗೂ ಭೋಧನೆಗಳು ಕೇಳುವ ಅನುಸರಿಸುವ ಮೂಲಕ ನಮ್ಮ ನಮ್ಮ ಬದುಕುಗಳನ್ನು ಹಸನಾಗಿಸಿಕೊಳ್ಳುವಂತಾಗಲಿ.

ಸರ್ವಜ್ಞನಾಗಲೀ, ರಾಮಕೃಷ್ಣ ಪರಮಹಂಸರಾಗಲೀ, ತಮ್ಮ ಅನುಭವಗಳ ಮೂಲಕವೇ ಲೋಕಕ್ಕೆ ಜ್ಞಾನ ಭೋಧನೆಯನ್ನು ಮಾಡಿದವರು. ಸಂಸ್ಕೃತಿ, ಸನ್ನಡತೆ, ದಾನ, ನೈತಿಕತೆಗಳನ್ನು ಭೋಧಿಸಿದವರು. ಇಡೀ ವಿಶ್ವಕ್ಕೆ ಇವರು ಮಾದರಿ ಶಕ್ತಿಗಳು. ಸರ್ವವನ್ನು ಅರಿತ ಸರ್ವಜ್ಞ, ತಾನು ಸರ್ವವನ್ನೂ ಅರಿತಿದ್ದರೂ ತನ್ನಲ್ಲಿ ಎಳಷ್ಟೂ ಅಹಂಕಾರವಿರಲಿಲ್ಲ. ಸರ್ವರಿಂದ ಒಂದೊಂದ ನುಡಿ ಕಲಿತು ವಿದ್ಯೆಯ ಪರ್ವತವಾದೆ ಎಂದು ಸರ್ವಜ್ಞ ಹೇಳಿಕೊಳ್ಳುವನು. ರಾಮಕೃಷ್ಣರು ಪರಮಹಂಸತ್ವವನ್ನು ಪಡೆದಿದ್ದರೂ ಎಂದೂ ಅಹಂಕರಿಸದೇ ತಮ್ಮ ಕಾಯಿಲೆಯ ದಿನಗಳಲ್ಲಿಯೂ ಶಿಷ್ಯರಿಗೆ ಜ್ಞಾನ ಭೋಧನೆ ಮಾಡುವುದರಲ್ಲಿ ಕಳೆದರು. ಇಂತಹವರ ಬರಹಗಳನ್ನು ಮತ್ತೆ ಮತ್ತೆ ಓದುವ ಅವರ ಚಿಂತನೆಗಳೊಂದಿಗೆ ಅನುಸಂಧಾನಗೊಳ್ಳುವ ಹಾಗೂ ಅವನ್ನು ಅನುಸರಿಸುವ ಮೂಲಕ ನಮ್ಮ ಬದುಕುಗಳನ್ನು ಹಸನಾಗಿಸಿಕೊಳ್ಳಬೇಕಿದೆ ಎಂದರು.

ಮತ್ತೊಬ್ಬ ಮುಖ್ಯ ಅತಿಥಿಗಳಾಗಿದ್ದ ಶ್ರೀ ಪಯಾಜ್ ಅಹಮದ್ ಖಾನ್, ರಾಜ್ಯಾಧ್ಯಕ್ಷರು, ಕರುನಾಡು ಸಾಹಿತ್ಯ ಪರಿಷತ್ತು ಇವರು ಮಾತನಾಡುತ್ತಾ, ಈ ಕಾರ್ಯಕ್ರಮವು ಬಹಳ ಅಭೂತಪೂರ್ವವಾಗಿ ಮೂಡಿ ಬಂದಿದೆ. ಜಾನಪದ ಕವಿ, ತ್ರಿಪದಿ ಬ್ರಹ್ಮ ಎನಿಸಿರುವ ಸರ್ವಜ್ಞ ಹಾಗೂ ಯುಗಪುರುಷ ನೆನಿಸಿರುವ ರಾಮಕೃಷ್ಣ ಪರಮಹಂಸರನ್ನು ಅವರ ಜನ್ಮದಿನಾಚರಣೆಯ ಪ್ರಯುಕ್ತ ಮತ್ತೆ ಮತ್ತೆ ನೆನೆಯುವುದು ಅತ್ಯವಶ್ಯಕವಾದದ್ದು, ಕೇವಲ ಅವರ ಜನ್ಮ ದಿನಾಚರಣೆಯಂದು ಮಾತ್ರವಲ್ಲದೇ ಸದಾ ಕಾಲ ಇವರ ಚಿಂತನೆಗಳು ಚರ್ಚಿಸುವ ಆಚರಿಸುವ ಕೆಲಸ ಆಗಬೇಕಿದೆ. ಈ ನಿಟ್ಟಿನಲ್ಲಿ ನಾವೆಲ್ಲ ಮುಂದುವರೆಯೋಣ ಎಂದು ಹೇಳಿದರು.

ಸಂಶೋಧನಾರ್ಥಿ ಧನುಷ್‌ ಎಚ್‌ ಶೇಖರ್‌ ಇವರು ಕಾರ್ಯಕ್ರಮವನ್ನು ಅಚ್ಚುಕ್ಕಟ್ಟಾಗಿ ನಿರ್ವಹಿಸಿದರು, ವಿಚಾರ ಮಂಟಪ ಬಳಗ ಸಂಚಾಲಕರಾದ ಗೌತಮ್‌ ಗೌಡ ಇವರು ಕಾರ್ಯಕ್ರಮವನ್ನು ಆಯೋಜಿಸಿದ್ದರು, ಕರ್ನಾಟಕ ರಾಜ್ಯ ಸ್ಪಂದನಸಿರಿ ವೇದಿಕೆಯ ಹಾಸನ ಜಿಲ್ಲಾಧ್ಯಕ್ಷರಾದ ಆಶಾ ಕಿರಣ ಎಂ, ಅಮರ್‌ ಬಿ, ಆಶಾನೂಜಿ, ರಂಗಸ್ವಾಮಿ ಎಚ್‌, ಲಕ್ಷ್ಮಿ ಕೆ. ಬಿ, ಸುರೇಶ್‌ ನೆಗಳಗುಳಿ ಮುಂತಾದವರು ಉಪಸ್ಥಿತರಿದ್ದರು.

                                                         - ವರದಿ : ವರುಣ್‌ರಾಜ್‌ ಜಿ.


 (ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ : 9113036287 ವಾಟ್ಸಪ್‌ ಮಾತ್ರ)

ಇಬ್ಬನಿ ಓಕಳಿ (ಕವಿತೆ) - ಶ್ರೀಮತಿ ಎಸ್. ಎಂ. ಬಳ್ಳಾರಿ.

ಚುಮುಚುಮು ಚುಮುಕುವ ಚಳಿಯಲ್ಲಿ
ನೇಸರನು ಪ್ರವೇಶಿಸುವ ವೇಳೆಯಲ್ಲಿ
ಹಬೆಯು ಕರಗಿ ಭಾಷ್ಪ ರೂಪ ತಾಳಿ
ಎತ್ತ ನೋಡಿದರತ್ತ ಇಬ್ಬನಿ ಓಕಳಿ

ಮಂಜು ಹೂಗಳ ಮೇಲೆ ಮುತ್ತಿನ ಇಬ್ಬನಿ
ಮಂದ ಮುಡಿಯುಟ್ಟು ನಾಚಿ ನಿಂತಂತೆ ರಾಗಿಣಿ
ನಲ್ಲನ ಮನಸೂರೆಗೊಳ್ಳಲು ಸಜ್ಜಾಗಿದೆ
ಇಲ್ಲವೇ ಮಾಧವನ ಮುಡಿಗೇರಲು ಮುಂದಾಗಿದೆ

ಮುಂಜಾವಿನ ಮಂಜಿನ ಮುಸುಕಿನಲಿ
ಹಸಿರೆಲೆ ಹಾಸಿಗೆ ಹಂದರದಲಿ
ಇಬ್ಬನಿ ಮುತ್ತಿನ ತೋರಣ ಕಟ್ಟಿದೆ 
ಮುತ್ತೆಂದು ಮುಟ್ಟಲು ಹೋದರೆ ಕರಗಿದೆ 

ಶರವೇಗದಿ ಜಾರಿದ ಇಬ್ಬನಿಯು ಮಂದ 
ಧರೆಯನು ತವಕದಿ ಸೇರುವ ಬಂಧ
ಚಿಗುರೆಲೆ ಹುಲ್ಲಲ್ಲಿ ಹರಡಿದ ಅಂದ 
ಪ್ರಕೃತಿ ರಮ್ಯತೆ ನೋಡಲು ಚೆಂದ

- ಶ್ರೀಮತಿ ಎಸ್. ಎಂ. ಬಳ್ಳಾರಿ.

ಮೊಗವಾಡ ಲೋಕ (ಕವಿತೆ) - ಕಾಜಲ ಆನಂದ ಹೆಗಡೆ.

ಲೇ ಮಾನವಾ ಬಂದೇ ಬಿಟ್ಟೀಯಾ ಈ ಜನುಮಕ
ನೀನು ಲೋಕವನ್ನೇ ಆಳುತಿದೆಯಲ್ಲಾ ನಿನ್ನ ಸ್ವಾರ್ಥಕ
ಮಾಡುವುದನ್ನೇ ಮರೆತು ಬಿಟ್ಟೆಯಲ್ಲಾ  ದೇವರ ಕಾಯಕ
ಮಾನವೀಯತೆ ಎಂಬುದು ಇಲ್ಲಾ ಈ ಜನಕ
ಎಷ್ಟು ಹೇಳಿದರು ಅಷ್ಟೇ ಇದೆ ನಿನ್ನ ಕರ್ಮಕ
ಒಳ್ಳೆಯವನಾಗಿ  ಬಾಳು ಈ ಜಗಕ
ಅಳೆಯದಿರು ಎಂದಿಗೂ ಆಸ್ತಿ ಪಾಸ್ತಿ ಸಿರಿತನದ ಕನಕ
ಚಿರುರುಣಿ ಯಾಗಿರು ಸದಾ ಬಡವರ ಪಾಲಕ
ದುಡಿಸಿಕೊಳ್ಳುವವರನ್ನು  ಕೊಲ್ಲದಿರು ನೀ ಮಾಲೀಕ
ತಳ್ಳದಿರು ಯಾರನ್ನು ಪಾತಾಳಕ
ಕರೆದರೂ ಓ ಎನ್ನದಿರುವನು ಆ ನಾಯಕ
ಕಳೆದುಕೊಳ್ಳುವೆ ಎಲ್ಲವನು ವಯಸ್ಸಾದ ಬಳಿಕ
ಸೇರುವೆ ಒಂದು ದಿನ ಆ ಸ್ವರ್ಗಕ
ಎಲೆ ಮಾನವಾ ಏನೆಂದು ಹೋಗಳಲಿ ನಿನ್ನ ನಾಮಕ
ಇದುವೇ ಈ ಪ್ರಪಂಚದ ನಾಟಕ...

- ಕಾಜಲ ಆನಂದ ಹೆಗಡೆ, ನವಲಿಹಾಳ.

ನಿಮಗಿದು ಬೇಕಿತ್ತಾ ಶಿವನೆ (ಕವಿತೆ) - ಬಸವರಾಜ ಮೈದೂರ ಚಿಕ್ಕಮರಳಿಹಳ್ಳಿ.

ಅವನು ಅಸವಾಲದ
ದೇವರು ಅಂತಿವಿ..

ಅದೆ ದೇವಸ್ಥಾನದಲ್ಲಿ ನಮ್ಮನ್ನು 
ಕಾಯಲು ಸಿ ಸಿ ಕ್ಯಾಮೆರಾ ಇಡತಿವಿ..

ಹೆಣ್ಣು ಗಂಡು 
ಎರಡೇ ಜಾತಿ ಅಂತಿವಿ..

ಊರ ತುಂಬಾ ನೂರೆಂಟು 
ಜಾತಿಯ ಹುಟ್ಟು ಹಾಕ್ತಿವಿ..

ಸರಾಯಿ ಊರಿಗೆ 
ಮಾರಕ ಅಂತಿವಿ..

ಅದೆ ಸರಾಯಿನ ಅಗಸಿ ಬಗಸಿ
ಬಾಗಿಲಲ್ಲಿ ತಂದು ಇಡತಿವಿ.. 

ನಾವು ಇಲ್ಲಿಂದ ಏನನ್ನೂ 
ತೊಗೊಂಡು ಹೋಗಲ್ಲ ಅಂತಿವಿ..

ಕದ್ದು ಮುಚ್ಚಿ ಕೋಣೆಯಲ್ಲಿ 
ದುಡ್ಡಿನ ಬಣವಿ ವಟ್ಟತವಿ..

- ಬಸವರಾಜ ಮೈದೂರ ಚಿಕ್ಕಮರಳಿಹಳ್ಳಿ, 7259326361.


ಭಾನುವಾರ, ಫೆಬ್ರವರಿ 19, 2023

ಮಾತನಾಡುವವರಿಗೇನು ಗೊತ್ತು ಮೌನದ ಕಿಮ್ಮತ್ತ (ಕವಿತೆ) - ಬಸವರಾಜ್ ಎಚ್. ಹೊಗರನಾಳ.

ಸುಮ್ಮನಿರು ನೀನು ನೂರು ಜನ ನೋರೊಂದು ಮಾತನಾಡಲಿ
ಸುಮ್ಮನಿರು ನೀನು ನಿನ್ನ ಕನಸು ನನಸಾಗುವವರೆಗೂ
ಸುಮ್ಮನಿರು ನೀನು ನೀ ಅಂದುಕೊಂಡಂತಹ ಕಾರ್ಯ ನೆರವೇರುವವರೆಗೂ
ಬಿಡದೇ ಕಾಣುತ್ತಿರು ನೀ ಸಧಾ ಸಾಧನೆಯ ಹಾದಿಯನು ll

ಸುಮ್ಮನಿರು ನೀನು ಹಲವಾರು ಅಪಮಾನಗಳನ್ನ ಸಹಿಸಿಕೊಂಡು
ಸುಮ್ಮನಿರು ನೀನು ಎಲ್ಲರೂಳಗೊಂದಾಗಿ ಮಂಕುತಿಮ್ಮನಂತೆ
ಸುಮ್ಮನಿರು ನೀನು ದಬ್ಬಾಳಿಕೆಯನು ಸಹಿಸಿಕೊಂಡು
ಬಿಡದೇ ಕಾಣುತ್ತಿರು ನೀ ಸಧಾ ಸಾಧನೆಯ ಹಾದಿಯನು ll 

ಸುಮ್ಮನಿರು ನೀನು ನಿನ್ನ ಮಾತಿಗೆ ಬೆಲೆ ಸಿಗುವವರೆಗೂ
ಸುಮ್ಮನಿರು ನೀನು ಬೇರೆಯವರ ಮಾತಿಗೆ ಕಿವಿ ಕೆಳದಂತೆ ಕಿವುಡನಾಗಿ 
ಸುಮ್ಮನಿರು ನೀನು ನಿನ್ನ ಬಗ್ಗೆ ಮಾತಾಡಿದ ಎಲ್ಲರಿಗೂ ಉತ್ತರ ಸಿಗುವವರೆಗೂ
ಬಿಡದೇ ಕಾಣುತ್ತಿರು ನೀ ಸಧಾ ಸಾಧನೆಯ ಹಾದಿಯನು ll

ಸುಮ್ಮನಿರು ನೀನು ಮಾತನಾಡುವವರ ಮಾತು ಮುಗಿಯುವವರೆಗೂ
ಸುಮ್ಮನಿರು ನೀನು ನಿನ್ನನ್ನು ಎಲ್ಲರೂ ಗೌರವದಿಂದ ಕಾಣುವವರೆಗೂ
ಸುಮ್ಮನಿರು ನೀನು ನಿನ್ನನ್ನು ಅತಿಥಿಯಾಗಿ ಆಹ್ವಾನಿಸುವವರೆಗೂ
ಬಿಡದೇ ಕಾಣುತ್ತಿರು ನೀ ಸಧಾ ಸಾಧನೆಯ ಹಾದಿಯನು ll 

ಸುಮ್ಮನಿರು ನೀನು ಮಾತನಾಡುವವರ ಮಾತು ಮುಗಿಯುವವರೆಗೂ
ಸುಮ್ಮನಿರು ನೀನು ನಿನ್ನ ಮೌನದ ಹಿಂದೆ ಇರುವ ಮಹತ್ವ ತಿಳಿಯುವವರೆಗೂ
ಸುಮ್ಮನಿರು ನೀನು ಸಾಧನೆಯ ನೋಡಿ ಸಿಳ್ಳೆ ಹಾಕಿ ಶಾಲು ಹೊದಿಸುವವರೆಗೂ
ಬಿಡದೇ ಕಾಣುತ್ತಿರು ನೀ ಸಧಾ ಸಾಧನೆಯ ಹಾದಿಯನು ll

- ಬಸವರಾಜ್ ಎಚ್. ಹೊಗರನಾಳ.

ಬಂದಿದೆ ಶಿವರಾತ್ರಿ (ಕವಿತೆ) - ಶಾರದ ದೇವರಾಜ್,ಎ ಮಲ್ಲಾಪುರ.

ಬಂದಿದೆ ಶಿವರಾತ್ರಿ
 ಜಗದೊಡೆಯನ ಮಹಾರಾತ್ರಿ
 ಭಗವಂತನ ಭಜಿಸುವ ರಾತ್ರಿ
 ಶಿವ ಭಕ್ತನು ಶಿವನನ್ನು ಸ್ಮರಿಸುವ ರಾತ್ರಿl

 ಜಡೆಯಲಿ   ಗಂಗೆಯನು
 ತಲೆಯಲ್ಲಿ ಚಂದಿರನು
 ಕೊರಳಲ್ಲಿ  ಸರ್ಪವನು
ಧರಿಸಿಹನು ನಮ್ಮ ಪರ ಶಿವನುl

 ಕೈಲಾಸದ ವಾಸಿ 
ತಾಯಿ ಪಾರ್ವತಿ ಪಟ್ಟದರಸಿ
 ಹಣೆಯಲ್ಲಿ ತ್ರಿನೇತ್ರ ಧರಿಸಿ
 ಕಾಪಾಡುವ ನಮ್ಮನ್ನು ಹರಸಿl

 ಹರನೆಂದರೆ ತ್ರಿನೇತ್ರ 
  ಪೂಜಿಪೆ  ಬರುವನು ನಮ್ಮತ್ರ 
ಬಂದು ಕಳೆವನು ದುಗುಡವ 
ಸಿರಿಯ ತೋರಿ ನಮ್ಮನು ಹರಸುವl

 ನೋಡಲು ಶಿವಲಿಂಗ ರೂಪ 
ತೋರುವನು ಮಂಗಳ ರೂಪ
 ತೊರೆಸುವನು  ಕೃತ್ಯ ರೂಪ 
ಬರೆಯುವನು ಹಣೆಬರಹದ ಪ್ರತಿರೂಪl

 ಭಕ್ತಿಗೆ ಒಲಿಯುವವನು
 ಮುಕ್ತಿ ಕೊಡುವವನು
 ಆಡಂಬರವ ವಲ್ಲದವನು
 ನಮ್ಮ ದಿಗಂಬರ ರೂಪದ  ಶಿವನುl

 ಹರನೆಂದರೆ ಭಯವಿಲ್ಲ
  ಹರ ಮನಿದರೆ ಬದುಕಿಲ್ಲ
 ಹರನಿಲ್ಲದ ಸ್ಥಳವಿಲ್ಲ 
ಹರನಿಲ್ಲದೆ ಒಲವಿಲ್ಲl

  ಸತಿದೇವಿಯ ಪರದೈವ
 ಶ್ರೀ ಗಣೇಶನ ಕುಲದೈವ
 ಭಕ್ತ ಕುಲಕೆ ಕುಲ ತಿಲಕ 
 ಸಂತ್ರಸ್ತರಿಗೆ ಪರಿಪಾಲಕl

 ವಿಭೂತಿಪ್ರಿಯ ದಿಗಂಬರ
 ಬಯಸಲಾರನು ಆಡಂಬರ 
ನಾಟ್ಯಪ್ರಿಯ ನಟರಾಜ 
ನಿಷ್ಠೆ ಪ್ರಿಯ ಗುಣ ತೇಜl

 ಸಮುದ್ರ ಮಥನದಲಿ
ವಿಷವ ಕುಡಿಯುತಲಿ 
ಅಮೃತವ  ಉಳಿಸುತಲಿ 
ಮನುಕುಲವ ಬೆಳಗುತಲಿl

 ನಿನ್ನಂದಕೆ ಮರುಳಾದಳು ಗೌರಿ
 ನೀನಿರದೆ ಇರಲಾರದ ಸುಂದರಿ
 ನಿನ್ನೊಡನೆ ಜಗ ಪಾಲಿಸುವ ಪರಿ 
ನಿನಗಾಗಿ ಸದಾ ಪರಿತಪಿಸುವ ಸಿರಿl

 ಶಿವನೆಂದರೆ ಅಭಯ
 ನನಗಾಗಿ ನೀಡುವೆಯಾ
 ನನ್ನ ಭಕ್ತಿಯ ಮೆಚ್ಚುವೆಯ
 ನಿನ್ನ ಸೇವೆಗೆ ದಾರಿ ತೋರಿಸುವೆಯಾl

 - ಶಾರದ ದೇವರಾಜ್,
ಎ ಮಲ್ಲಾಪುರ.

ಕಲ್ಲಿನ ಕ್ವಾರೆ (ಸಣ್ಣ ಕತೆ) - ಸುನಿಲ್ ಐ. ಎಸ್.

ನಾಗೇನಹಳ್ಳಿ ಹೇಳಿಕೊಳ್ಳದಷ್ಟು ಪ್ರಗತಿಯನ್ನು ಕಾಣದ ಮಧ್ಯ ಕರ್ನಾಟಕದ ಗುಡ್ಡಗಳ ತುದಿಯಲ್ಲಿರುವ ಒಂದು ಪುಟ್ಟ ಹಳ್ಳಿ, ಪ್ರಗತಿಯನ್ನು ಪಟ್ಟಣವನ್ನು ಬಹುದೂರದಿಂದ ನೋಡುವ ಅಲ್ಲಿನ ಜನರು ಮುಕ್ಕಾಲು ಪಾಲು ಕೃಷಿಕರು, ಕಾಲು ಪಾಲು ಅರೇ  ಕೃಷಿಕರು. ಪ್ರತಿನಿತ್ಯವೂ ಕಲ್ಲು ಬಂಡೆಗಳ ಜೊತೆ ಹೋರಾಡುವುದೇ ಅವರ ಬದುಕು.
      ಆ ಊರಿನಲ್ಲೊಂದು ಬಡಕುಟುಂಬ ವಾಸವಾಗಿತ್ತು. ಪ್ರಕೃತಿಗೆ ಅಂಟಿಕೊಂಡು ಬದುಕಿದರು ಕಿಡಿಗೇಡಿಗಳ ಸಹವಾಸದಿಂದ ಬದುಕು ಕಟ್ಟಿಕೊಳ್ಳಲು ಸೆಣೆಸಿದ ಕ್ವಾರೆಯ ತಡಿಯ ಕುಟುಂಬದ ಬದುಕಿನ ಚಿತ್ರಣವಿದು. ಮಾದಪ್ಪ ಆ ಊರಿನ ಬಲವಾದ ಆಳು, ಅವನು ಕಲ್ಲು ಹೊಡೆಯಲು ಹೊರಟನೆಂದರೆ ಅವನ ಹಿಂದೆಯೇ ಮಾದಮ್ಮ ಬುತ್ತಿ ಕಟ್ಟಿಕೊಂಡು ಹೊರಡುವಳು. ಆತ  ಓದಿದ್ದು ಆರನೇ ತರಗತಿಯಾದರು, ಕಲ್ಲಿನ ಕೆಲಸದಲ್ಲಿ ಬಲು ಚಾಣಾಕ್ಷ, ತಂದೆಯಿಂದ ಬಂದ ಬಳವಳಿಯನ್ನು ಚಾಚೂತಪ್ಪದೆ ಪಾಲಿಸಿದ ನಿಷ್ಠಾವಂತ ಪ್ರಾಣಿಯದು. ಮಳೆಯೂ ಜೋರಾಗಿ ಬಂದು ಬಂಡೆಯು ತುಂಬಿದಾಗಲೇ ಆತನಿಗೆ  ರಜಾ ಹಾಗೂ ಬಟವಾಡೆಯ ದಿನದಂದು ರಜವೂ ಹೌದು, ಮಜವೂ ಹೌದು. ಸರಾಬು ಕುಡಿಯುವುದು, ಮಾತನಾಡುವುದು, ಕುಣಿಯುವುದು, ರಾತ್ರಿಯೆಲ್ಲ ನಡೆಯುತ್ತಾ ಇರುತ್ತಿತ್ತು. ಯಾರಾದರೂ ಬೈದರೆ ಇಬ್ಬರು ಸುಮ್ಮನಿರುತ್ತಿದ್ದರು, ಇಲ್ಲ ಸುಸ್ತಾಗಿ ತೆಪ್ಪಗೆ ಮಲಗುತ್ತಿದ್ದರು.
     ಮಾದಪ್ಪ ವಾರದ ತುಂಬೆಲ್ಲ ಬಿಗಿಯಾಗಿ ಕಲ್ಲು ಹೊಡೆಯುತ್ತಾನೆ. ಕಲ್ಲಿನಲ್ಲಿ ಸೈಜು, ಬೊಡ್ರಸ್ಸು,ದುಂಡಿ, ಜಲ್ಲಿ ಮುಂತಾದ ವೆರೈಟಿ ಇರುತ್ತದೆ. ಮಾರಿದಷ್ಟು ಕೂಲಿ ಇರುತ್ತಿದ್ದರಿಂದ ವಿಶ್ರಾಂತಿಯಿಲ್ಲದೆ ಕೆಲಸ ಮಾಡುವನು. ಬಂಡೆಯ ಕೆಲಸದ ಬಗ್ಗೆ ಬಹು ಚಾಣಾಕ್ಷನಾಗಿದುದರಿಂದ ಅಪಾಯಕ್ಕೆ ತಕ್ಕಷ್ಟು ಕೊರತೆಯಿರಲಿಲ್ಲ.
     ಆದರೂ ಈಗೊಮ್ಮೆ-ಆಗೊಮ್ಮೆ ಬರುವ ಅಧಿಕಾರಿಗಳ ಬಾಯಿಗೆ ಒಂದಿಷ್ಟು ಸುರಿಯಬೇಕಿತ್ತು. " ಈ ಸುಡುವ ಬಿಸಿಲಿನಲ್ಲಿ ಕಷ್ಟ ಪಟ್ಟು ದುಡಿದ ಹಣವನ್ನೆಲ್ಲ ಯಾವುದೇ ಮುಲಾಜಿಲ್ಲದೆ ಬಂದು ದೋಚುತ್ತಾರೆ ಮುಂಡೇ ಮಕ್ಳು ಇವ್ರಿಗೆ ಕರುಣೇನೇ ಇಲ್ವಾ?" ಎಂದು   ಹಿಡಿಶಾಪ ಹಾಕುತ್ತಲೇ ಕಾಸು ಕೊಡುತ್ತಿದ್ದ. ಅದು ಅವನನಿಗೆ ಅನಿವಾರ್ಯವೂ ಆಗಿತ್ತು,ಕಾರಣ ಕೊಡಲಿಲ್ಲವೆಂದರೆ ಮುಂದೆ ತನಗೆ ತೊಂದರೆ ತಪ್ಪಿದ್ದಲ್ಲ ಎಂದು ತನಗೆ ಗೊತ್ತೇ ಇತ್ತು. ವ್ಯವಸ್ಥೆಯನ್ನು  ಚೆನ್ನಾಗಿ ಬಲ್ಲವನಾಗಿದ್ದನು, ಹಳ್ಳಿಯ ರಾಜಕೀಯ ಆತನಿಗೆ ತಿಳಿದಿತ್ತು. ರಾಜಕೀಯಕಿಂಥ ಹೊಲಸು ಕೆಲಸ ಮತ್ತೊಂದಿಲ್ಲ ಎಂಬ ಭಾವನೆ ಅವನದು. ಹಳ್ಳಿಯ ಪರಿಸ್ಥಿತಿಯು       ಹಾಗೆಯೇ ಇತ್ತು.
     ಇತ್ತ ಮಾದಿಯೂ ಗಂಡನಿಗೆ ಸಹಾಯವಾದ ಕೆಲಸಗಳನ್ನು ಮಾಡುತ್ತಿದಳು ಇಲ್ಲೊಂದಿಷ್ಟು- ಅಲ್ಲೊಂದಿಷ್ಟು ಸಿಡಿದಿರುವ ಚೂರುಗಳನ್ನು ಆಯುವ, ಗುಡಿಸುವ  ಕೆಲಸ ಅವಳದು, ಪ್ರತಿನಿತ್ಯವೂ ಬಿರುಗಾಳಿಯ ಜೊತೆ ಸೆಣಸಾಡಬೇಕಿತ್ತು.
     ಇ ಕುಟುಂಬ  ಸ್ವಂತ   ಜಮೀನನ್ನು ಹೊಂದಿರಲಿಲ್ಲ ಮದುವೆಯ ನಂತರ ಅವರಿಬ್ಬರು ಬೇರೆಯವರ ಜಮೀನನ್ನು ಬಾಡಿಗೆಗೆ ಪಡೆದು  ಮನೆಗೆ  ಬೇಕಾಗುವಷ್ಟು  ಕಾಳು -ಕಡ್ಡಿಗಳನ್ನು ಬೆಳೆದು ಸಂಸಾರ ಸಾಗಿಸುತ್ತಿದ್ದರು. ಅವರಿಗೆ ಇಬ್ಬರು ಮಕ್ಕಳು, ಒಬ್ಬನು ಹಿರಿಯಮಗ ಲೋಕ  ಮತ್ತೊಬ್ಬ ಜೇಮ್ಲ. ಚಿಕ್ಕ ಮಕ್ಕಳಿಗೆ ಕರೆದುಕೊಂಡೇ ಗಂಡ-ಹೆಂಡಿರು ವ್ಯವಸಾಯ ಮಾಡಿ ಒಂದಿಷ್ಟು ಸೂರು ಮಾಡಿಕೊಂಡರು. ತಕ್ಕಮಟ್ಟಿಗೆ ಕಡಿಮೆಯೇನೂ ಇಲ್ಲದಂತೆ ಅವರ ಜೀವನ ಸಾಗುತ್ತಿತ್ತು. ಮಕ್ಕಳು ದೊಡ್ಡವರಾದಮೇಲೆ ಅವರ ಅವಶ್ಯಕತೆಗಳು ಹೆಚ್ಚಾದವು. ಬಾಡಿಗೆ ಹೊಲವೂ ಹೋದ ಮೇಲೆ ಮಾದ ತಮ್ಮ ಊರಿನ ಸರ್ಕಾರಿ ಗೋಮಾಳವನ್ನು ಹೊಡೆಯಲು ಶುರುಮಾಡಿದ್ದ ರಜಾದಿನಗಳಲ್ಲಿ ಉಳುಮೆ ಬಿತ್ತನೆ ಕಾರ್ಯಗಳು ನಡೆಯುತ್ತಿದ್ದವು. ಎರಡು ಎಕರೆ ಜಮೀನು ಅಲ್ಲಿ ಸಿಕ್ಕಿದ್ದು ಸಾಕಾಗುವಷ್ಟು ಬೆಳೆಯನ್ನು ಅಲ್ಲಿಯೇ ಬೆಳೆಯತೊಡಗಿದರು. ಮಾದಿ ಕುಟುಂಬದ ಏಳಿಗೆಯಲ್ಲಿ ತನ್ನ ನಗುವನ್ನು ಕಂಡಳು.
     ಈಗ ಹಿರಿಯ ಮಗ ಲೋಕ ಹತ್ತನೇ ತರಗತಿ, ಜೆಮ್ಲ ಎಂಟನೇ ತರಗತಿ ಓದುತ್ತಿದ್ದಾರೆ. ಪಕ್ಕದೂರಿನಿಂದ ಹೊಳಗುಂದಿಗೆ  ನಡೆದೇ ಶಾಲೆಗೆ ಬರಬೇಕು. ತಾವಿಬ್ಬರು  ದುಡಿದರು ಮಕ್ಕಳಿಗೆ ಸರಿಯಾದ ಶಾಲೆಗೆ ಸೇರಿಸದ ಪರಿಸ್ಥಿತಿಯಲ್ಲಿದ್ದೇವೆ ಎಂದು ಅಡುಗೆ ಮನೆಯ ರಾಮಾಯಣ ಶುರುಮಾಡಿದಳು. ಗಂಡನ ಹತ್ತಿರ ಪ್ರಸ್ತಾಪಿಸಿದರು ಮಾದಿನ ಬಿಟ್ಟು ಅವನಿಲ್ಲ ಎಂಬುದು ಆಕೆಗೆ  ಚೆನ್ನಾಗಿ ತಿಳಿದಿತ್ತು. ಈಗೀಗ ಕಲ್ಲನ್ನು ಕೊಳ್ಳುವವರಿಲ್ಲದೆ ಜನ ಬೇರೆ ಮಾರ್ಗವನ್ನು ಕಂಡು ಕೊಂಡಿದ್ದಾರೆ, ದೊಡ್ಡ ದೊಡ್ಡ ಮಶೀನ್ಗಳು ಅಳತೆಯ ಕಲ್ಲನ್ನು ಒಡೆಯುತ್ತವೆ. ನಮ್ಮ ಕೆಲಸಕ್ಕೆ ಬೆಲೆ  ಎಲ್ಲಿದೆ, ಎನ್ನುತ್ತಲೇ ಬಂದಷ್ಟು ಬರಲಿ ಹೋದಷ್ಟು ಹೋಗಲಿ ಎಂದು  ಹೋಗುವ   ಪರಿಸ್ಥಿ ತಿ. ಒಂದೆರೆಡು ದಿನ ರಜವಾದರೆ, ಎಣ್ಣೆಗೂ ಆಹಾರಕ್ಕೂ ಪರದಾಡಬೇಕಾದ ಪರಿಸ್ಥಿತಿ ಇನ್ನೆಲ್ಲಿಯ  ಓದು ಇನ್ನೆಲ್ಲಿಯ         ಒಳ್ಳೆ ಬಟ್ಟೆ.? ಆದರೂ ಮನೆಯಲ್ಲಿ ಎರಡೊತ್ತು ಓಲೆ ಉರಿಯಲೇಬೇಕು ಜನ ಏನಂದಾರು ಎಂಬುದು ಮಾಡಿಯ ಗೋಳು. ಇಬ್ಬರು ಪರಸ್ಪರ ಅರ್ಥಮಾಡಿಕೊಂಡಿದ್ದರು ಎಂತಹ   ಪರಿಸ್ಥಿತಿಯಲ್ಲೂ ವಿಚಲಿತರಾಗದ ಮನಸ್ಥಿತಿ ಅವರದು. ಬಡತನ ನಮಗಿರಲಿ ಬಾಳು ಮಕ್ಕಳಿಗಿರಲಿ ಎಂಬುದು ಅವರ ಬದುಕಿನ ತತ್ವ ಅದಕ್ಕಾಗಿ ಎಂಥಹ ಕಾರ್ಯವನ್ನಾದರೂ ಮಾಡುತ್ತಾರೆ. ಆ ಒಂದು ರೊಕ್ಕ ಭಗವಂತ ತುತ್ತು ಅಣ್ಣ ಕರುಣಿಸಿದ್ದ. ಆದರೆ ಬಂಡೆಗಳನ್ನು ಒಡೆಯುವುದು ಪ್ರಕೃತಿಯ ನಾಶಮಾಡಿದಂತೆ ಎಂದು ಅವರಿಗೆ ತಿಳಿದಿದೆ. ಅದಕ್ಕಾಗಿಯೇ ಭೂಮಿಯನ್ನು ಉಳುಮೆ ಮಾಡುತ್ತಿದ್ದಾರೆ.
     ಒಂದು ದಿನ ಮಾದಿಗೆ ವಿಪರೀತ ಜ್ವರ ಬಂದಿದ್ದು ಮಾದ ಲೋಕನಿಗೆ ಕಾಸುಕೊಟ್ಟು ದವಾಖಾನೆಗೆ ತೂರಿಸಲು ಹೇಳಿ ಹೋಗಿದ್ದ. ಕೆಲಸ ಮುಗಿಸಿ ಬರುವುದಾಗಿ ಹೇಳಿದ್ದ ಅದರಂತೆಯೇ ಮಧ್ಯಾನ ಮನೆಗೆ ಹೋದನು. ಮನೆಗೆ ಬೀಗ ಹಾಕಿರುವುದನ್ನು ನೋಡಿ ಅಲ್ಲಿದ್ದವರಿಗೆ ವಿಚಾರಿಸಿದ. ಕಮಲಿ ಎನ್ನುವವಳು "ಇಲ್ಲೊ ಯಣ್ಣ ಮಾದಕ್ಕ ಕಾಣಲೇ ಇಲ್ಲ ನೋಡು ನಾನು ಇವಾಗ್  ಬಂದೀನಿ ಎಂದಳು. ಬಹುಷಃ ಹಾಗೆಯೇ ಮಲಗಿರಬೇಕೆಂದು ಮನೆಗೆ ಬಂದನು.ಎಲ್ಹೋಗಿರಬಹುದು.? ಗುಮಾನಿಯಿಂದ ಬರುತ್ತಿದ, ಆಗ ನಿಂಗಣ್ಣ "ಮಾದ ಮಾಡಿನ  ಪಟ್ಣದ  
ಹೈದರು ಕಾರಲ್ಲಿ ಕರ್ಕೊಂಡ್ ಹೋದ್ರು ಕಣಣ್ಣ" ಎಂದ.  ಮಾದ       ತಬ್ಬಿಬ್ಬಾದ ಅದೇ ಮಾದಪ್ಪ " ನಿಮ್ ಹೊಲತಾವ್ ಹೋಗ್ತಾ ಇದ್ರು " ಎಂದನು. ಮಾದನಿಗೆ ಹೆದರಿಕೆ ಶುರುವಾಯಿತು. "ಮೊದಲೇ ಸರ್ಕಾರಿ ಗೋಮಾಳ ಯಾರಾದರೂ ತಕರಾರು ತೆಗೆದರೋ ಶಿವ!" ಎಂದು ಓಡಲು ಶುರುಮಾಡಿದ,  ಆತನ ಓಟಕ್ಕೆ ಕಲ್ಲು-ಮುಳ್ಳುಗಳೇ ಹೂವಾಗಿ ಪರಿವರ್ತನೆಯಾದವು, ಹಿಂದೆ ಧೂಳು ಬಿರುಗಾಳಿಯನ್ನೇ ಮೀರಿಸುವಂತಿತ್ತು, ಎಂಬಂತೆ ಕ್ಷಣಮಾತ್ರದಲ್ಲಿಯೇ ಮೈಲುದೂರದ ಹೊಲ ತಲುಪಿದ. ಮಾದಿಯನ್ನು ಕಂಡೊಡನೆ ಸಮಾಧಾನವಾಯ್ತು ಕೇಳಿ ವಿಚಾರಿಸಿದ, " ಹೊಲವನ್ನು ನಮ್ಮ ಹೆಸ್ರಿಗೆ ಮಾಡಿ ಕೊಡ್ತಾರಂತೆ ಅದಕ್ಕೆ ಸೈನು-ಗೀನು ಮಾಡುಸ್ತಾವ್ರೆ " ಎಂದಳು ಮಾದಿ. ಮಾದಪ್ಪನಿಗೆ ಎಲ್ಲಿಲ್ಲದ ಸಂತೋಷ, ಅವರು ಕೇಳುವ ಮೊದಲೇ ನೂರು ರೂಪಾಯಿ ಕೊಟ್ಟನು. " 'ಬುದ್ದಿ ಈರೋದಿಸ್ಟು ಹೊಲ ಹೊಟ್ಟೆಗೆ ಬಟ್ಟೆಗೆ ಇದೇ ಗತಿ  ಯಂಗಾರ ಮಾಡಿ ವಸಿ ಲಗೂನ ನಂಹೆಸ್ರಿಗೆ ಮಾಡ್ಸಿ ಕೊಡಿ ಬುದ್ದಿ " ಎಂದನು. ಮಾದಿ ಮಾದನಿಗೆ ಸಾತ್ ಕೊಡುವವಳಂತೆ " ಹೂಂ ಬುದ್ಯರ" ಎಂದಳು. ಸರಿ ಸರಿ ಎಂದು ಅವರು ಸರಸರನೆ  ಹೊರಟೇ ಹೋದರು. ಇ ಸುದ್ದಿಯನ್ನು ಕೇಳಿದ ಮಾದಿಯ ಜ್ವರವೂ ಕ್ಷಣಮಾತ್ರದಲ್ಲಿ ಹೊರಟೆ ಹೋಗಿತು. ಮನೆಗೆ ಹೋಗಿ ದೇವರಿಗೆ ದೀಪ ಹಚ್ಚಿದಳು, ಮಕ್ಕಳು ಶಾಲೆಯಿಂದ ಬಂದಿದ್ದರು. ಮನೆಯಲ್ಲಿ ಆವತ್ತು ಸಿಹಿ, ಮಾದನಿಗೆ ಒಂದು ಕ್ವಾಟ್ರು ಹೆಚ್ಚಿಗೆ ಸಿಕ್ಕಿತು.
       ಹೀಗೆ ಹಲವಾರು ದಿನಗಳು ಕಳೆದಿದ್ದವು 'ಉಳುವವನೇ ಭೂಮಿಯ ಒಡೆಯ ' ಎಂಬ ಕಾನೂನು ಜಾರಿಗೆ ಬಂದು ಬಹಳ ದಿನಗಳು ಕಳೆದು
ಉಳುವವರಿಗೆ ಭೂಮಿಯು ಬಂದಿತ್ತು. ಆಗಲು ಮಾದ ಮಾದಿಯರಿಗೆ ಜಮೀನಿನ ಹಕ್ಕುಪತ್ರ ಬಂದಿರಲಿಲ್ಲ. ಬರುತ್ತದೆ ಕಾಯಿರಿ ಎಂಬುದು  ಆ ಊರಿನ ಸೆಕ್ರೆಟರಿ ಆದ ಮಂಜಣ್ಣನ ಮಾತು. ಭೂ ರಹಿತ ರೈತರ ಯೋಜನೆಗೆ ಅರ್ಜಿಯನ್ನು ಹಾಕಿ  ಮಂಜೂರು ಮಾಡಿಸಲು 50,000 ರೂಪಾಯಿ ಪಡೆದಿದ್ದನು. " ಮಂಜಣ್ಣ ತಿಳಿದವ್ನೆ ಬಿಡು ಅವ್ನೆ ಮಾಡಿಸ್ತಾನೆ ಎಷ್ಟೇ ಆದ್ರು ನಮ್ಮಕ್ಕನ ಮಗ ಅವ್ನು " ಎಂಬುದು ಮಾದಿಯ ಹಠ ಆದರೆ ಮಾದನಿಗೆ ಅವನೆಂಥವನೆಂದು ಗೊತ್ತಿತ್ತು   " ನಂಗೇನ್ ಬೇಕು ಉರೋರ್ ಉಸಾಬ್ರಿ ನಮ್ ಪಾಲಿಂದು ನಮ್ಗೆ ಬಂದ್ರೆ ಸಾಕು " ಎಂದುಕೊಳ್ಳುತ್ತಿದ್ದ. ಆದರೆ ಆಟ ಬೇರೆಯದೇ ಮಾಡಿದ್ದ ಮಂಜಣ್ಣ. ಮಾದ - ಮಾದಿ ಕಷ್ಟ ಪಟ್ಟು ತೆಗೆದ ಗೋಮಾಳಕ್ಕೆ ಈಗ ಈರಣ್ಣನ ಹೆಸರ ಮೇಲೆ ಸಾಗುವಳಿ ಬಂದಿದೆಯಂತೆ ಹಾಗಾಗಿ ಆ ಜಮೀನಿಗೆ ಆತನೇ ಒಡೆಯ ಎಂಬ ಸುದ್ದಿ ತಡವಾಗಿಯಾದರೂ ಊರಿನವರ ಬಾಯಿಯ ಸುದ್ದಿಯಾಗಿತ್ತು,ಆಧಾರವು ಕೂಡ ಅವನ ಬಳಿ ಇತ್ತು.
ಆದರೆ ಮಂಜಣ್ಣ ಊರು ಬಿಟ್ಟು ಹೋಗಿದ್ದ.ಮಾದ - ಮಾದಿ         ವಿಚಾರಿಸಿದರೆ ತಾವು ಹಣವನ್ನು ಕೊಟ್ಟು ತಮ್ಮ ಹೆಸರಿಗೆ ಮಾಡಿಸಿಕೊಂಡಿರುವುದಾಗಿಯೂ ಈರಣ್ಣ ಹೇಳಿದ. ಮಾದನ ಎದೆ ಒಡೆದು ಹೋಯಿತು " ಇದ್ದ ಭೂಮಿಯನ್ನು ಉಳಿಸಿಕೊಳ್ಳಲಾಗಲಿಲ್ಲ, ಶ್ರಮ ಒಬ್ಬನದಾದ್ರೆ ಪ್ರತಿಫಲ ಮತ್ತೊಬ್ಬನದು. ಹೀಗೆ ಪ್ರಾರಂಭದಿಂದಲೂ ನಡೆಯುತಿಹುದು ಸಮಾಜದೊಳಗೆ  ನಮ್ಮಂಥವರನ್ನು ಕಂಡೆ   ಈ ಜನ ಮೋಸ ಮಾಡ್ತಾರೆ ಏನೋ, ಅವ್ರ ಮನೆ ಹಾಳಾಗ " ಎಂದು  ಹಿಡಿ ಶಾಪ ಹಾಕಿದ. ಮನೆಗೆ ಬಂದವನೇ ಯಾರ ಜೊತೆಗೂ ಮಾತಾಡದೆ ಸುಮ್ಮನೆ ಮಲಗಿದ್ದ. ಮಾದಿಯು ಒಲೆ ಹಚ್ಚಿರಲಿಲ್ಲ ಮಕ್ಕಳು ಉಪವಾಸ ಮಲಗಿದ್ದವು,ಇಡೀ ಮನೆಯೇ ದುಃಖ್ಖದಲ್ಲಿದ್ದಾಗ ಊರಿನ ಗೌಡನ ಮನೆಯ ಮಾಂಸದ ಸಾರಿನ ವಾಸನೆ ಮಾದನ ಮನೆಯ ಅಸಹಾಯಕತೆಯನ್ನು ಪ್ರಶ್ನಿಸುತ್ತಿತ್ತು  ಏಳು, ಏಳು ಮಾದ ಎಂದು. ನಿತ್ರಾಣ ತಪ್ಪಿದ್ದರು ಮಾದ ಮರುದಿನ ತನ್ನ ಕಾರ್ಯಕ್ಕೆ ಹೋಗಲೇ ಬೇಕಾದ ಪರಿಸ್ಥಿತಿ " ಕಳ್ಳಸೂಳೇ ಮಕ್ಳು ತಾವು ಮಾತ್ರ ತಿಂದುಂಡು ಹೋಗವ್ರೆ ಹುಟ್ಸೋಮೊದ್ಲು ಹರುವಿರ್ಬಾರ್ದ ಮಕ್ಕಳಿಗೂ ಒಂದಿಷ್ಟು ಕೂಡಿಡ್ಬೇಕು ಅನ್ನೋದು " ಎಂದು ಮನಸ್ಸಿನಲ್ಲಿಯೇ ಬೈದು ವಲ್ಲದ ಮನಸ್ಸಿಂದ ಹೋದನು. ಹೋದವನೇ ಮನಸ್ಸಿನ ತುಂಬಾ ನೂರಾರು ಆಲೋಚನೆಗಳಿದ್ದವು ಕಲ್ಲಿಗೆ ಹೊಡೆದು ಏಟು ಜಾರಿ ಕಾಲಿಗೆ ಬಿದ್ದು ಮೊಣಕಾಲ ಮೂಳೆಗೆ ಹೊಡೆತ ಬಿತ್ತು, ಬಿದ್ದು ವದ್ದಾಡ ತೊಡಗಿದ ಅಲ್ಲೇ ಕೂತವರು ನೀರು ಕೊಡಿಸಿ ಆಸ್ಪತ್ರೆಗೆ ಸೇರಿಸಿ ನಂತರ ಮನೆಗೆ ಕರೆತಂದಿದ್ದರು. ಆಯ್ದು ತಿನ್ನೋ ಕೋಳಿಯ ಕಾಲು ಮುರಿದಂಗಾತು ಅವರ ಬದುಕು.
ಇತ್ತ ಮಾದಿಯ ಪಾಡು ದಿಕ್ಕೆಟ್ಟ ಕರುವಿನಂತಾಯಿತು, ಇದ್ದ ಕಾಸನ್ನು ಭೂಮಿಯ ಆಸೆಗೆ ಬೇರೆಯವರ ಬಾಯಿಗೆ ಹಾಕಿ ಅವರಿಗೆ - ಇವರಿಗೆ ಕೇಳಿ ಸುಸ್ತಾಗಿದ್ದಳು ಏನಾದರೂ ಮಾರೋಣವೆಂದರೆ ಮನೆಯಲ್ಲಿ ಕಡಿಕಾಳುಗಳಿಲ್ಲ, ಕೈಯಲ್ಲಿ ಬಿಡಿಗಾಸಿಲ್ಲ ಕೊನೆಗೆ ಊರಗೌಡನ ಸಹಾಯದಿಂದ ಆಸ್ಪತ್ರೆಯ ಖರ್ಚನ್ನು ಭರಿಸಿದ್ದಾಯಿತು ಅವರಿಗೆ ಇದ್ದಾಗ ಕೊಟ್ಟರಾಯಿತು. ಎಂದು ಸಮಾಧಾನಪಟ್ಟಳು. ಸಂಸಾರದ ಹೊರೆ, ಮಕ್ಕಳ ಪಾಲನೆ, ಗಂಡನ ಆರೈಕೆ ಎಲ್ಲದನ್ನು ನಿಭಾಯಿಸತೊಡಗಿದಳು. ಮಾದನ ಕಾಟ ತಡೆಯಲಾಗಲಿಲ್ಲ ಅವನಿಗೆ ಪ್ರತಿನಿತ್ಯವೂ ಸರಾಬು ಬೇಕೇ-ಬೇಕು, ಸೂರ್ಯನುದಯಿಸುವುದು ಸ್ವಲ್ಪ ತಡವಾಗಬಹುದು ಆದರೆ ಮಾದನ ಶರಾಬು ಟೈಮು ಸರಿಯಾದ ಸಮಯದಲ್ಲೇ ಆಗಬೇಕಿತ್ತು, ಮೀರಿದರೆ ಆತನ ಬಾಯಿಂದ ಬರುವ ಭಗವದ್ಗೀತೆಯ ಶ್ಲೋಕಗಳನ್ನು ಕೇಳಲು  ಜನ ಮನೆ ಮುಂದೇ ಜಮಾಯಿಸುತ್ತಿದ್ದರು.  ಹಾಗಾಗಿ ವಲ್ಲದ ಮನಸ್ಸಿಂದಲೇ ಆತನಿಗೆ ಸರಾಬು ಪೂರೈಸುತ್ತಿದ್ದಳು, ಅದೇ ಚಿಂತೆಯಲ್ಲಿ ತಾನು ಹಾಕಿಕೊಳ್ಳುತ್ತಿದ್ದಳು.
     ಈಗ ಮಾದ ಸಂಪೂರ್ಣ ಗುಣಮುಖನಾಗಿದ್ದಾನೆ. ಈಗಿಗ ಮಕ್ಕಳ ಚಿಂತೆ  ಅವರಿಗೆ, ತಮ್ಮ ಮಕ್ಕಳಿಗೋಸ್ಕರ ಏನು ಮಾಡಲಿಲ್ಲವಲ್ಲ ಎಂಬ ಅಳುಕು ಅವರದು. ಈಗಲಾದರೂ ಅವರಿಗೆ ಒಳ್ಳೆಯ ಶಿಕ್ಷಣ ಕೊಡಿಸಿದರೆ ಸಾಕೆಂದು ಚಿಂತಿಸಿ ದಾವಣಗೆರೆಯ ಕಾಲೇಜಿಗೆ ಸೇರಿಸಿದರು. ವಸತಿ ನಿಲಯದಲ್ಲೆ ವ್ಯವಸ್ಥೆ ಮಾಡಿಸಿ ತಿಂಗಳಿಗೊಮ್ಮೆ ಅಥವಾ ಹದಿನೈದು ದಿನಕ್ಕೊಮ್ಮೆ ಹೋಗಿ ಬರುತ್ತಿದ್ದರು.
     ಒಂದು ದಿನ ಇಬ್ಬರು ಜೊತೆಯಲ್ಲಿಯೇ ಕೆಲಸಕ್ಕೆ ಹೊರಟರು ಅವತ್ತು ಅಷ್ಟೇ ಮಾದಿ ಅವಸರವಾಗಿ ಹೊರಟಳು ಮಾತನಾಡುತ್ತಾ ದಾರಿ ಸಾಗಿತು "ಮಾದ ಮಕ್ಳು ಚನ್ನಾಗ್ ಓದ್ತಾವೆ ಹಿಂಗೇ ಓದಿದ್ರೆ ಸಾಕು ಅವ್ರ ಪಾಡಿಗೆ ಅವ್ರು ಬಾಳ್ವೆ ಮಾಡ್ತಾರೆ " ಎಂದನು. ಮಾದಿ " ಹೂಂ ಅದೇ ನಂಬಿಕೆ ನಂದು " ಎಂದು ಬಾಲಂಗೋಚಿಯಂತೆ ಹಿಂದೆಯೇ ನಡೆಯುತ್ತಿದ್ದಳು. 'ದಾರಿ ಮುಗಿದಿತ್ತು ಕಾಡು ಬಾ ಅಂದಿತ್ತು' ಎಂಬಂತೆ ವಿಪರ್ಯಾಸವೇನೆಂದರೆ ಮಕ್ಕಳ ಮತ್ತವರ ಜೀವನದ ಬಗ್ಗೆ ನೂರಾರು ಕನಸುಗಳನ್ನು ಹೊತ್ತಿದ್ದ ಆ ಮುದಿ ಜೀವಗಳ ಕೊನೆಗಾಲಕ್ಕೆ ಕ್ಷಣಗಣನೆ ಆರಂಭವಾಗಿತ್ತು. ಪಕ್ಕದ ಬಂಡೆಯವರು ಬ್ಲಾಸ್ಟ್ ಮಾಡುತ್ತಿದ್ದೇವೆ ದೂರ-ದೂರ ಎಂದು ಎಷ್ಟು ಕೂಗಿದರು ಮಾತಿನ ಭರದಲ್ಲಿ ಇವರಿಗೆ ಕೇಳಿಸದಾಯಿತು. ಬಂಡೆಗೆ ಹೋಗಿ ಇನ್ನೇನು   ಕೆಲಸಕ್ಕೆ  ತಯ್ಯಾರಿಯಾಗಬೇಕು  ಅನ್ನುವಷ್ಟರಲ್ಲಿ ಛಿದ್ರಗೊಂಡ  ದೊಡ್ಡ ಬಂಡೆ ಇಬ್ಬರ ಮೇಲು ಹರಿದು ಚಪ್ಪಟೆಯಾದರು. ವಸಂತ ಚಿಗುರು ಚಿಗುರಿದಂತೆ ಅವರ ಜೀವನದ ಬಗ್ಗೆ ಚಿಗುರುತ್ತಿದ್ದ ನಂಬಿಕೆಯ ಚಿಗುರು ಚಿಗುರಿನಲ್ಲೇ ಚಿವುಟಿಹೋಯಿತು. ಪಿಸುಮಾತಾಡಲಿಲ್ಲ ಕಟ್ಟಿಟ್ಟ  ಬುತ್ತಿಯ ಗಂಟು ಪರರ ಪಾಲಾಯಿತು. ರೆಕ್ಕೆ ಬಲಿತ ಆ ಎರೆಡು ಹಕ್ಕಿಗಳು ಪರರಿಗೆ ಭಾರವಾದವು  ಕ್ವಾರೆಯಲ್ಲಿಯೇ ಜೀವನವನ್ನು ಕಟ್ಟಿಕೊಂಡಿದ್ದ ಆ ಎರೆಡು ಜೀವಗಳು ಗುರುತು ಸಿಗದಂತಾದವು. ಕಲ್ಲೇ ಅವರಿಗೆ ಬಾಳಿಗೆ ಆಸರೆ ಮತ್ತೆ, ಮುಳುವಾಯಿತು.
       
 - ಸುನಿಲ್  ಐ. ಎಸ್,  ಸಂಶೋಧನಾರ್ಥಿ.
  ಕನ್ನಡ ವಿಶ್ವವಿದ್ಯಾಲಯ, ಹಂಪಿ.
 # 7349177749.

ಶನಿವಾರ, ಫೆಬ್ರವರಿ 18, 2023

ಮಹಾತ್ಮರು (ಕವಿತೆ) - ಸಬ್ಬನಹಳ್ಳಿ ಶಶಿಧರ.

ಸಾವಿರದ ಶರಣರು
ಈ ಮಹಾಸಂತರು
ಹುಡುಕಿದರು ಮತ್ತೆಲ್ಲು
ಸಿಗದ ಶಿವ ಶರಣರು

ಬಸವೇಶ್ವರರ ಹಾದಿಯನ್ನೆ
ಹಿಡಿದವರು
ಸಕಲೆಲ್ಲ ಭೋಗಗಳ
ತೊರೆದು ನಿಂತವರು

ಧರೆಗಿಳಿದು ಬಂದಂಥ
ನಡೆದಾಡೊ ದೇವರು
ಆಡಂಬರವ ದೂಡಿ
ಸರಳತೆ ಮೆರೆದವರು

ಸಂತರಿಗೆ ಸಂತರು
ಈ ಮಹಾ ಋಷಿಗಳು
ಕರುನಾಡಿನಲ್ಲಿದ್ದ
ಕರುಣೆಯ ಯತಿಗಳು

ಶುದ್ಧ ಮನಸಿನ ಸಿದ್ಧ
ಸಾಧಕರು ಇವರು
ಶ್ವೇತ ಉಡುಪನು ತೊಟ್ಟು
ಜ್ಞಾನದೀವಿಗೆಯಾದರು

ಹೆಸರಿಗೆ ತಕ್ಕಂತೆ ಇರುವ
ಸಿದ್ದೇಶ್ವರರು
ಎಲ್ಲ ಸಿದ್ಧಿಯನು ಪಡೆದು
ದಂತ ಕಥೆಯಾದರು
   
   
- ಸಬ್ಬನಹಳ್ಳಿ ಶಶಿಧರ.

ರಮಾಬಾಯಿ ಅಂಬೇಡ್ಕರ್‌ (ಕವನ) - ತರುಣ ಈಶಪ್ಪ ಪೂಜಾರ.

ಎಲ್ಲರ ಮನೆಯ ಬೆಳಗಿಸಿದ ತಾಯಿ ನೀನು, ದೇಶದ ಶ್ರೇಯಸ್ಸಿಗೆ ಮಡಿಯಲು ಕೊಟ್ಟಿರುವ ಹೆಣ್ಣು ನೀನು,
 ಎಲ್ಲಿ ನೋಡಿದರೂ ನಿನ್ನ ನೆನಪುಗಳ ಸೃಷ್ಟಿಸಿ ತುಂಬ್ಧೆ ಸಾಕಷ್ಟು ಧೈರ್ಯವನ್ನು ನೀಡಿದವಳು ನೀನು !!!

ದೇಶದ ಜನರಲ್ಲಿ ಮನೆ ಮಾಡಿ ದೇಶದಾದ್ಯಂತ ಪ್ರೀತಿಯ ಮಗಳಾಗಿರುವ ನೀನು ನಿನ್ನ ಕುಡಿ ಬಾಯಿ ಬಿಟ್ಟೊಡನೆ ಜಗತ್ತಿನ ಹೂವು ಅರಳಿತು ಹೇ ನನ್ನ ತಾಯಿ !!!

ನಿನ್ನ ಕುಡಿ ಕಂಡ ಕೇಳಿದೊಡನೆ ನಮ್ಮೆಲ್ಲರ ಬಾಳಿನ ಬೆಳಕು ಹರಿದಿತ್ತು ಸತ್ಯದ ದಾರಿಗೆ ನಡೆಸುವ ಶಾಂತಿಯ ಮನೆ ತೆರೆದಿತ್ತು ಈ ನನ್ನ ತಾಯಿ!!!

ದೇಶದ ಸರ್ವತೋಮುಖಕ್ಕೆ ಮಡಿಪಾಗಿ ಇಟ್ಟ ಈ ನಿನ್ನ ದೇಹ ಬರಿ ನೆನಪಾಗಿ ಉಳಿದಿದೆ ಹೇ ತಾಯಿ ಸಾಕು ಸಾಕಾಗಿದೆ ಈ ಬೇಸರದ ಮಾತಿಗಾಗಿ ಆದರೂ ಕ್ಷಮಿಸುವ ಋಣವಾಗಿ ಇಟ್ಟೆ!!!

ಹಸಿದು ಮಲಗಿದ ಬಡಪಾಯಿಗಳಿಗೆ ಆಕಾಶವಾದದ ಹೋಳಿಗೆ ಉಳಣಿಸಿದವಳು ನೀನು ವಿದ್ಯೆಇಲ್ಲದೆ ತೊಳಲಾಡುತ್ತಿದ್ದ ಜೀವಗಳಿಗೆ ಜೀವ ವಿರೋಧಿ ಮನುತ್ವ
ಕಿತ್ತಾಕಿ ಜೀವ ಪರ ಮನುಷ್ಯತ್ವ ಚಿಗಿರಿಸಿದವಳು ನೀನು, ಏ ತಾಯಿ ಈ ನಿನ್ನ ನೆನಪು ಅಜರಾಮರ!!!

- ತರುಣ ಈಶಪ್ಪ ಪೂಜಾರ.
 ಹಾವೇರಿ ಜಿಲ್ಲೆ.
# 8884996149.

ಶಿವಾಮೃತ (ಭಕ್ತಿ ಸ್ತುತಿ) - ಮಧುಮಾಲತಿ ರುದ್ರೇಶ್.

ಢಂ ಢಂ ಬೋಲೋ ಢಮರುಗ ಶಿವನುˌ
ಗಿರಿಜಾ ರಮಣ ನಂದಿವಾಹನ ಶಿವನುˌ
ಭಕ್ತಿಗೆ ಒಲಿವ ಪ್ರೇಮಕೆ ಮಣಿವ ಶಿವನುˌ
ಭಕ್ತರ ಮೊರೆಗೆ ಧರೆಗಿಳಿವ ಶಿವನುˌ

ಮೂಜಗದೊಡೆಯ ಪಾರ್ವತಿ ವಲ್ಲಭ ಶಿವನು
ಮೂಷಿಕ ವಾಹನ ಪಿತನಾದ ಶಿವನುˌ
ಕೈಲಾಸವಾಸಿ ಕಾರುಣ್ಯ ಶಿವನುˌ
ಪ್ರೇಮಮಯಿ ಈ ಗಂಗಾಧರ ಶಿವನುˌ

ನಾಗಾಭರಣ ನಾಟ್ಯ ಶೇಖರ ಶಿವನು,
ನಾಲ್ಮೊಗ ಬ್ರಹ್ಮನ ಆರಾಧ್ಯ ಶಿವನು,
ಕರೆದರೆ ಬರುವ ಕರುಣಾಮಯಿ ಶಿವನುˌ
ಭಕ್ತಿಗೆ ಸೋಲುವ ಪ್ರೇಮಮಯಿ ಶಿವನುˌˌˌ
ಭಜಿಸಲು ಶಿವನಾಮವ ಅನುಕ್ಷಣˌˌ
ಕಳೆಯುವುದು ಜನ್ಮಗಳ ಪಾಪವು ಅರೆಕ್ಷಣˌ

ಬನ್ನಿರಿ ಜ್ಙಾನಜ್ಯೋತಿಗೆ ಭಕ್ತಿತೈಲವೆರೆಯೋಣ
ಶಿವನಾಮವ ಅನುಕ್ಷಣ ಭಜಿಸೋಣ.

- ಮಧುಮಾಲತಿ ರುದ್ರೇಶ್, ಬೇಲೂರು.

ದಿಗ್ವಿಜಯ (ಕವಿತ) - ಶ್ರೀ ಇಂಗಳಗಿ ದಾವಲಮಲೀಕ.

ಹಾರಾಡುತ್ತಿತ್ತು ಜಯದ ಬಾವುಟ
ಕಂಡೆ ನಾ ದಿಗ್ವಿಜಯದ ಬಾವುಟ 
ಮೇಲಕ್ಕೆತ್ತಿ ನೂಲಿನ ಹಗ್ಗ ಕಟ್ಟಿ
ಹಾರಾಟ ನಡೆಸಿತ್ತು ಆ ಬಾವುಟ

ಸಾಸಿರ ದಿಕ್ಕುಗಳಲ್ಲಿ ಹಾರುತಿದೆ
ಗಲ್ಲಿಗಲ್ಲಿಗೂ ಏರುತಿದೆ ಬಾವುಟ
ಜೀವಗಳನು ಗಲ್ಲಿಗೇರಿಸಿದ ಲಾಠಿ
ಏಟುಗಳ  ಮುಚ್ಚಿದ ದಿಗ್ವಿಜಯಿ

ಸಾವಿರ ಮನಗಳ ಒಗ್ಗೂಡಿಸಿ
ತಂತ್ರ ಕುತಂತ್ರಕೆ ಅಂತ್ಯ ಹಾಡಿ
ಗಗನದೆತ್ತರಕೆ ಹಾರಿದ ಬಾವುಟ
ಅತಿರಥ ಮಹಾರಥರ ಬಾವುಟ

ಭಾರತಾಂಬೆಯ ದಾಸ್ಯ ಸಂಕೋಲೆಯ
ಕಳಚಿದ ಸ್ವಾತಂತ್ರ್ಯ ವಸ್ತ್ರ ಈ ಬಾವುಟ
ಹಗಲಿರುಳು ಶ್ರಮಿಸಿದ ಜೀವಿಗಳ
ಅದೆಷ್ಟೋ ಬೆವರಿಳಿಸಿದ ಬಾವುಟ

ಗಡಿಯಲಿದ್ದು ಜೀವ ಕೊಟ್ಟ ಜೀವಕೆ
ಹೊದಿಸಿದ ಕೊನೆಯ ದಿವ್ಯ ವಸ್ತ್ರ
ಸರ್ವಧರ್ಮಗಳ ಸಾರವನು ಜಗಕೆ
ಸಾರುತಿರುವ ಭಾರತದ ಬಾವುಟ

ತಲೆ ಎತ್ತಿ ನೋಡಿ ನಮಿಸುವ ಬಾವುಟ
ಅದೊಮ್ಮೆ ನೋಡಿದೆ ಈ ಬಾವುಟವ
ನನಗೇಕೋ ಕಂಡವು ಐದು ವರ್ಣಗಳು
ಓದಿದಾಗ ತ್ರಿವರ್ಣ ಎಂದು ಚಕ್ರವನ್ಹಿಡಿದು
ನಾಲ್ಕು ಎಂದಾಗ ಹೌದೆನಿಸಿತ್ತು 

ಮತ್ತದೇಕೋ ಇನ್ನೊಂದು ವರ್ಣ ಕಂಡೆ
ಏಕೆ ಬದಲಾಯಿತಾ ನನ್ನ ತ್ರಿವರ್ಣ ಎಂದೆ
ಪುಟ್ಟ ಮಗುವೊಂದು ಬಂದು ಎನ್ನೆಚ್ಚರಿಸಿ
ಹೇಳಿತು ಅಣ್ಣ ಅದು ನನ್ನಪ್ಪನ ರಕುತ ಎಂದು

ಅಂದು ಆಂಗ್ಲರೊಂದಿಗೆ ಗೆದ್ದು ವಿಜಯಿಸಿತು
ಇಂದು ವೈರಿಗಳೊಡನೆ ವಿಜಯಿಸುತಿದೆ ತನ್ನ
ನಿಜ ಬಣ್ಣಗಳ ಜೊತೆಗೆ ರುಧೀರ ತಿಲಕ ಹಚ್ಚಿ
ಸುತ್ತಿಕೊಂಡು ಬಂದ ಆ ಸೋದರನ ಶವ ಹೇಳಿತ್ತು

ಕುಸಿದು ಕುಳಿತೆ ಮತ್ತದೆ ಧ್ಯಾನ ಬದಲಾಯಿಸಲೇ
ತ್ರಿವರ್ಣ ಧ್ವಜವನು ಪಂಚವರ್ಣವೆಂದು
ಅದೋಕೋ ಒಪ್ಪುತಿಲ್ಲ ಈ ಮನಸು
ಅದರೂ ಇದು ನನ್ನ ದೇಶದ ಹೆಮ್ಮೆ.

- ಶ್ರೀ ಇಂಗಳಗಿ ದಾವಲಮಲೀಕ,
ಹತ್ತಿಮತ್ತೂರು.

ಗುರುವಾರ, ಫೆಬ್ರವರಿ 16, 2023

ಗಪದ್ಯ - ಖಾದ್ರಿ ವೆಂಕಟ ಶ್ರೀನಿವಾಸನ್, ಮೇಲುಕೋಟೆ.

ಗೆಳತಿ ಹೇಳಿದಳು,
ಬರೆಯಿರೇನಾದರೊಂದು.
ಬರೆಯಲೇನೂಯಿಲ್ಲೆಂದೆನಾದರೂ,
ಕುಳಿತೆ ಲೇಖನಿ ಹಿಡಿದು
ಏನಾದರೊಂದು ಬರೆಯಲೆಂದು.
ಬರವಣಿಗೆಯ ಬರೆ- ಇಡಲೆಂದು.

ಶಿರವ ಕೆರೆಕೆರೆದು
ಬರೀ ತುರಿತುರಿಯಾಗಿ
ಆತುರದಿ ಇದ್ದೆರೆಡು
ಗರಿ ಗರೀ ತುರುಬೂ
ಉದುರಿ ಹಾರಿಹೋಯಿತು.
ಆದರೂ, ಮತ್ತೇನೂ ಬರಲೇಯಿಲ್ಲ ಮಂಡೆಯೊಳಗೆ.
ಹೌದೇ, ಖಾಲಿಯಾಯಿತೇ?
ಬರಿದಾಯಿತೇ? ಎಲ್ಲ ಬರಡಾಯಿತೇ?
ಬೆಟ್ಟದಂತಿದ್ದ ತಲೆಯು
ಬಟ್ಟ ಬಯಲಾಯಿತೇ?
ಬೊಕ್ಕ ಬೋಳಾಯಿತೇ?
ಹಾಳಾದ ಹಂಪೆಯಂತಾಯಿತೇ?
ಬರೆದದ್ದೇ ಬರೆ- ಬರೆದು
ಆ ಬ್ರಹ್ಮನಿಗೂ ಈಗೇನೂ
ತೋಚುತಿಲ್ಲವಂತೇ
ಅದಕೇನೋ, ಈಗವನು ಬರೆಯುವುದ ಬಿಟ್ಟನಂತೆ
ನೋಡಿ ನೋಡಿ, ಎಲ್ಲ
ಹಣೆಗಳೂ ಖಾಲಿ-ಖಾಲಿ
(ಇಲ್ಲಿ ಕೆಲವರದ್ದುಳಿದು)
ಬರೆ ಹಾಕಿದಂತೆ 
ಮತ್ತದನೇ ಬರೆಬರೆದು
ಸಾಕಾಗಿ, ಬೋರಾಗಿ 
ಬರಿದಾಗಿ ಕೈಚೆಲ್ಲಿ
ಸುಮ್ಮನಾಗಿಹನಂತೆ
ಆ ವಿಶ್ವ ಕರ್ತ.
ಬರೆದರೂ ಬರೆಯಬೇಕು,
ಭುವಿಯಲ್ಲಿ ಹುದುಗಿರುವ
ಲಾವಾಗ್ನಿ ಹೊರಬಂದು ಹರಿದು
ಸಾಗರದ ನೀರನ್ನೆ
ಕುದಿಸಿ, ಕೆಂಡವಾಗಿಸಿ,
ದಾವಾನಲವ ಚಿಮ್ಮಿಸಿ, ಚದುರಿಸಿ,
ಎರಚಾಡಿಬಿಡುವಂತೆ.
ಹುದುಗಿಟ್ಟ ಸಿಡಿಮದ್ದು
ಹೆಬ್ಬಂಡೆಯನೆ ಸೀಳಿ
ಒಡೆದು ಹೊರಬಂದು
ಘೋರತರದಾಸ್ಫೋಟಗೊಂಡಂತೆ.
ಅಂತರಂಗದ ಭಾವಾಗ್ನಿ
ನರನಾಡಿಗಳನೆಲ್ಲ
ಹಿಂಡಿ- ಹಿಸುಕಿ
ಹೊರಚೆಲ್ಲಿ
ಬೆಚ್ಚಿ ಬೀಳಿಸಬೇಕು
ನಿದ್ದೆಯಲ್ಲಿದ್ದವರೂ
ಎದ್ದುಬಿಡಬೇಕು.
ಸದ್ದುಮಾಡುತ ಸುತ್ತೆಲ್ಲ
ಸಡಗರದ ಸಂಭ್ರಮದ
ಗದ್ದಲದ ಸಂತೆಕೂಡುವಂತೆ.
ಈಗೆಲ್ಲಿಹುದು
ಆ ಆಗ್ನಿಗೋಳಗಳು
ಆ ಜ್ವಾಲಾ ಶಿಖರಗಳು
ಪಾತಾಳದಾಳದ ಕಾವೇ
ಕರಗಿ ತಣ್ಣಗಾಗಿಹುದು.
ಅಂತರಾಳದ ರಸದೂಟೆಗಳು
ಒಣಗಿ ಬತ್ತಿ ಬಂಜರಾಗಿಹುದು.
ಬರೆಯಲೇನೂಯಿಲ್ಲ
ಗೆಳತೀ, ಎಲ್ಲಾ
ಖಾಲಿ ಖಾಲೀ.
- ಖಾದ್ರಿ ವೆಂಕಟ ಶ್ರೀನಿವಾಸನ್, ಮೇಲುಕೋಟೆ.



ಗೆಲವು ಶಾಶ್ವತವಲ್ಲ! ಸೋಲು ಕೊನೆಯು ಅಲ್ಲ (ಲೇಖನ) - ಮಂಜುನಾಥ್ ಮೇಟಿ.

ಸಾಧನೆಯ ಫಲದ ರುಚಿಯೇ ಹಾಗೆ,ಅದು ನಿರೀಕ್ಷೆಗೂ ಮೀರಿದ ಬಹುಮುಖಿ ಸೌಕರ್ಯಗಳನ್ನು ಪರಿಚಯಿಸುತ್ತದೆ. ಹೊಸ ಹೊಸ ಅನುಭವಗಳನ್ನು ನೀಡುತ್ತದೆ. ನಿರಂತರವಾಗಿ ಶ್ರಮಿಸುವಂತೆ ಪ್ರಚೋದನೆಯನ್ನು ನೀಡುತ್ತದೆ. ಆದರೆ ಸಾಧನೆ,ಸಾದಕರೆಲ್ಲರಿಗೂ ನೆಮ್ಮದಿಯನ್ನು ನೀಡುತ್ತದೆಯೇ? ಎಂಬ ಪ್ರಶ್ನೆಗೆ ಇನ್ನೂ ನಿಖರವಾದ ಉತ್ತರವನ್ನು ಕೊಟ್ಟಿಲ್ಲ.ಇತ್ತೀಚೆಗೆ ಖ್ಯಾತ ಕ್ರಿಕೆಟ್ ಆಟಗಾರರೊಬ್ಬರು ಅಪಘಾತಕ್ಕಿಡಾಗಿದ್ದರು.ಆ ಘಟನೆ ಘಟಿಸಿ ತಿಂಗಳುಗಳೆ ಕಳೆದರೂ ಆ ಘಟನೆಯ ಬಗ್ಗೆ ಇಂದಿನವರೆಗೂ ಒಂದಿಲ್ಲಾ ಒಂದು ಸುದ್ದಿ ಪತ್ರಿಕೆಗಳಲ್ಲಿ ಬರುತ್ತಲೆಯಿದೆ.ಆ ಸುದ್ದಿಗಳನ್ನು ಓದಿದಾಗಲೊಮ್ಮೆ ನನಗೆ ಗೆಲುವಿನ ಬಗ್ಗೆ ಒಂದೊಂದು ಬಗೆಯ ಅನುಭವ, ಹೊಸ ಆಯಾಮದ ಪರಿಚಯವಾದಂತೆ ಅನ್ನಿಸುತ್ತದೆ.
           ಅವರ ಅಪಘಾತದ ಬಗ್ಗೆ ಖಚಿತ ಮಾಹಿತಿ ಹೊರ ಬೀಳುತ್ತಿದ್ದಂತೆ ಅನೇಕ ಕ್ರೀಡಾಭಿಮಾನಿಗಳಲ್ಲಿ ಆತಂಕ ಸೃಷ್ಟಿ ಮಾಡಿತ್ತು.ಹಲವರಲ್ಲಿ ಆ ಅಪಘಾತವಾದರು ಹೇಗೆ ಸಂಭವಿಸಿತು ಎಂಬ ಕೂತಹಲವೇ ಹೆಚ್ಚಿತ್ತು.ಇದರ ಪ್ರಯೋಜನ ಪಡೆದು ಕೊಂಡವರಾರೆಂಬುದನ್ನು ಬಿಡಿಸಿ ಹೇಳುವ ಅವಶ್ಯಕತೆವಿಲ್ಲವೆಂದು ಭಾವಿಸುತ್ತೇನೆ. ಅಲ್ಲಿಂದ ನಿರಂತರವಾಗಿ ಅವರ ಬಗ್ಗೆ ವರದಿಗಳು ಬರಲು ಆರಂಭಿಸಿದವು.ಅವರು ಸ್ವಲ್ಪ ಚೇತರಿಸಿಕೊಂಡ ಬಳಿಕ ಅಪಘಾತ ಹೇಗಾಯಿತು ಎಂದು ತಿಳಿಸಲಿದ್ದಾರೆ ಎಂದು ಸುದ್ದಿಯಾಯಿತು.ಅಲ್ಲಿಯವರೆಗೆ ಕನಿಕರದಿಂದ ಈ ಘಟನೆಯನ್ನು ಗಮನಿಸುತ್ತಿದ್ದ ಅದೇಷ್ಟೊ ದೊಡ್ಡ ಮಂದಿಗೆ ಭಯವಾಗ ತೊಡಗಿತು.
           ಪ್ರತಿಷ್ಠಿತ ಕಂಪನಿಯ ಕಾರನ್ನು ಬಳಸುತ್ತಿದ್ದ ಅವರಿಗೆ,ಗಂಭೀರವಾದ ಗಾಯಗಳು ಹೇಗಾದವು ಎಂಬ ಪ್ರಶ್ನೆ ಹುಟ್ಟಿದರೆ, ತಮ್ಮ ಘನತೆಗೆ ಎಲ್ಲಿ ದಕ್ಕೆಯಾಗುವುದೋ ಎಂಬರ್ಥದಲ್ಲಿ ಕಾರಿನ ಸುರಕ್ಷತೆಯ ಬಗ್ಗೆ ಎಲ್ಲ ರೀತಿಯ ವಿಮರ್ಶೆನೆಯನ್ನು ನೀಡಲು ಮುಂದಾದದನ್ನು ತಾವು ನೋಡಿರಬಹುದು.ಹಾಗೇ ಯಾರೋ ದುಷ್ಕರ್ಮಿಗಳು ಅವರನ್ನು ಹಿಂಬಾಲಿಸಿದ್ದಕ್ಕಾಗಿ ವೇಗ ನಿಯಂತ್ರಣ ತಪ್ಪಿ ಹೀಗಾಗಿದ್ದರೆ; ಅವರಿಗೆ ರಕ್ಷಣೆ ನೀಡುವಲ್ಲಿ ವಿಫಲರಾಗಿದ್ದಕ್ಕೆ ಎಲ್ಲಿ ನಮ್ಮ ತಲೆದಂಡವಾಗುವುದೋ?ಎಂಬ ಭಯದ ವಾತಾವರಣವು ಕೆಲವರಲ್ಲಿ ಹುಟ್ಟಿಕೊಂಡಿತ್ತು.ಅನೇಕ ಸ್ವಯಂ ಘೋಷಿತ ವಿದ್ವಾಂಸರು ಐಷಾರಾಮಿ ಜೀವನ ಶೈಲಿಯಿರುವ ವ್ಯಕ್ತಿ ಕುಡಿದು ಕಾರನ್ನು ಓಡಿಸಿದ್ದಕ್ಕಾಗಿಯೇ ಈ ಅಪಘಾತವಾಗಿದೆ ಎಂಬ ವರದಿಯನ್ನು ಕೊಟ್ಟಿದ್ದರು.ಅದೇ ರೀತಿ ದೇವ ಮಾನವರು ತಮ್ಮ ತಮ್ಮ ಜ್ಞಾನ ಬಲವನ್ನು ಪ್ರಯೋಗಿಸಿ ಆರನೆ ಮನೆ,ಎಳನೆ ಮನೆಯ ರಾಹು ಕೇತುಗಳನ್ನು ಅಪರಾಧಿಗಳನ್ನಾಗಿ ಮಾಡಿದ್ದನ್ನು ತಾವು ಕಂಡಿರಬಹುದು.ಆದರೆ ಸಂಜೆ ಸ್ವಯಂ ಅವರೇ "ಗುಂಡಿಯನ್ನು ತಪ್ಪಿಸಲು ಹೋಗಿ ಈ ಅಪಘಾತ ಸಂಭವಿಸಿತು" ಎಂದು ಹೇಳುತ್ತಿದ್ದಂತೆ ಎಲ್ಲಾ ಊಹಾಪೋಹಗಳಿಗೆನೋ ತೆರೆ ಬಿದ್ದಿತು ಆದರೆ ಯಾರೂ ಊಹಿಸದ ಸಮೂಹವೊಂದು ತಲೆ ತೆಗ್ಗಿಸುವಂತಾಗಿದ್ದು ಸುಳ್ಳಲ್ಲ.( ಅದು ಅವರಿಗೇನು ಹೊಸತಲ್ಲ ಆದರೆ ಇದು ಸಾಧಕರೊಬ್ಬರಿಗೆ ಸಂಬಂಧಿಸಿದ್ದಾಕ್ಕಾಗಿ ಸ್ವಲ್ಪ ಹೆಚ್ಚಿನ ಸುದ್ದಿ ಮಾಡಿ ಕಿರಿ ಕಿರಿ ಮಾಡಿತ್ತು ಅಷ್ಟೇ) ಈ ಅಪಘಾತದಿಂದ ಕೇವಲ ಅವರ ಆತ್ಮೀಯರಿಗಷ್ಟೆ ಆತಂಕವಾಗದೆ ಕೆಲವು ಸಮಯ ಹಲವರಿಗೂ ಆತಂಕವನ್ನು ತಂದಿತ್ತು.ಹಾಗು ಅನೇಕ ಬುದ್ದಿ ಜೀವಿಗಳಿಗೆ ಒಂದು ಹೊಸ ವೇದಿಕೆಯನ್ನು ಹಾಕಿ ಕೊಟ್ಟಿತ್ತು.ಇದುವೆ ಸಾಧನೆಯ ಶಕ್ತಿ.ಜೀವನದಲ್ಲಿ ಎನನ್ನಾದರು ಸಾಧಿಸಿದರೆ ನಾವು  ಸಾರ್ವಜನಿಕರ ಆಸ್ತಿಯಾಗಿ ಬಿಡುತ್ತೇವೆ.
             ಸುದ್ದಿ ಎಲ್ಲಡೆ ಹರಡುತ್ತಿದ್ದಂತೆ ಗಣ್ಯಾತಿ ಗಣ್ಯರು,ಸಹ ಆಟಗಾರರು, ಆತ್ಮೀಯರು ಮತ್ತು ಅಭಿಮಾನಿಗಳು ಬಹು ಬೇಗನೆ ಗುಣ ಮುಖರಾಗುವಂತೆ ತಮ್ಮ ತಮ್ಮ ಸಾಮಾಜಿಕ ತಾಣಗಳ ಮೂಲಕ (ವೈಯಕ್ತಿಕವಾಗಿಯೂ ತಿಳಿಸಿರಬಹುದು ಆದರೆ ಅದರ ಬಗ್ಗೆ ನಮಗೆ ಸರಿಯಾದ ಮಾಹಿತಿಯಿಲ್ಲ) ಶುಭ ಹಾರೈಕೆಗಳನ್ನು ತಿಳಿಸಿದರು.ಹಲವಾರು ಗಣ್ಯರು ಸಹಾಯ ಹಸ್ತವನ್ನು ಚಾಚಿದರು.ಎಲ್ಲಕಡೆಯಿಂದ ಆರ್ಥಿಕವಾಗಿ ,ಮಾನಸಿಕವಾಗಿ ಬೆಂಬಲ ಸೂಚಿಸಿದರು. ಒಬ್ಬಳು ಮಾಜಿ ಪ್ರೀಯೆಯೊರ್ವಳು ತಮ್ಮ ಕಳಕಳಿಯನ್ನು ವ್ಯಕ್ತಪಡಿಸುವ ಮೂಲಕ ಮತ್ತೊಮ್ಮೆ ಅವರಿಬ್ಬರ ನಡುವಿನ ಊಹಾಪೋಹಗಳನ್ನು ನೆನಪಿಸಿ ಕೊಟ್ಟರು.ಹೀಗೆ ಪ್ರತಿಯೊಂದು ದಿಕ್ಕಿನಿಂದಲು ಅವರೊಂದಿಗಿರುವ  ತಮ್ಮ ತಮ್ಮ ಸಂಬಂಧಗಳನ್ನು ಹುಡುಕಿ ,ಸಾಮಾಜಿಕ ಜಾಲತಾಣಗಳಲ್ಲಿ ಕಾಳಜಿಯನ್ನು ತೋರಿಸುವಲ್ಲಿ ಯಶಸ್ವಿಯಾದರು, ಆದು ಸಾಧನೆಯ ಮತ್ತೊಂದು ಶಕ್ತಿ. ಅದು ಎಲ್ಲ ಸಂಬಂಧಗಳನ್ನು ಆಕರ್ಷಿಸುತ್ತದೆ. ಎಲ್ಲಾ ಭಿನ್ನಾಭಿಪ್ರಾಯಗಳನ್ನು ಮರೆಸುತ್ತದೆ.ಹೊಸ ಹೊಸ ಬಂಧನಗಳನ್ನು ಹುಟ್ಟಹಾಕುತ್ತದೆ. (ಯಾರನ್ನು ಟೀಕಿಸುತ್ತಿಲ್ಲ). ಜನ ತಮ್ಮ ತಮ್ಮ ಜಾಲತಾಣಗಳ ಖಾತೆಗಳಲ್ಲಿ ಆ ಕ್ರೀಡಾಪಟುವಿನೊಂದಗಿನ ಫೋಟೊ ಹಾಕಿ, ಉದ್ದ ಉದ್ದದ ಕ್ಯಾಪಷನಗಳನ್ನು ಹಾಕಿದ್ದು ಗಮನಿಸಿದಾಗ ನನಗೆ ಅವರು ಶುಭ ಹಾರೈಕೆಗಳನ್ನು ತಿಳಿಸುತ್ತಿದ್ದಾರೋ? ಇಲ್ಲಾ ಈ ವ್ಯಕ್ತಿ ನನಗೇನು ದೂರದವನಲ್ಲ,ನಮ್ಮ ನಡುವೆ ಅತೀ ಹತ್ತಿರದ ಆತ್ಮೀಯತೆ ಎಂಬುದನ್ನು ತಿಳಿಸುವ ಪ್ರಯತ್ನದಲ್ಲಿದ್ದರೋ?? ಎಂಬ ಒಂದು ಸಣ್ಣ ಸಂಶಯ ಮೂಡಿತ್ತು.ಗೆದ್ದಾಗ ಮುದ್ದಾಡುವ ಜನ ಸೋತಾಗ ಮೇಲೆತ್ತುವರೆ? ಎಂಬ ಪ್ರಶ್ನೆಯನ್ನು ಸಾಧನೆ ತನ್ನೊಂದಿಗೆ ಸದಾ ಕರೆತರುತ್ತದೆ.
               ಕ್ರಿಕೆಟ ಆಟಗಾರನಿಗೆ ಅಪಘಾತದಲ್ಲಾದ ಗಾಯದ ವಿವರಗಳನ್ನು ವೈದ್ಯರು ತಿಳಿಸುತ್ತಿದ್ದಂತೆಯೇ ಕ್ರಿಕೆಟ ಮಂಡಳಿಯಲ್ಲಿ ಚರ್ಚೆಯೊಂದು ಪ್ರಾರಂಭವಾಯಿತು. ಅವರ ಬದಲಿಗೆ ಇನ್ನಾರನ್ನು ಸೇರಿಸಿ ಕೊಳ್ಳಬೇಕೆಂದು .ಇದು ಹಲವರ ಬಾಳಲ್ಲಿ ಆಶಾ ಕಿರಣ ತೋರಿದ್ದು ಉಂಟು. ಅಷ್ಟೇ ಅಲ್ಲ ಚೇತರಿಸಿಕೊಳ್ಳಲು ಹಲವಾರು ತಿಂಗಳುಗಳೆ ಬೇಕಾಗುತ್ತದೆ ಎಂದು ಗೊತ್ತಾದ ಮೇಲೆ,ಇಗಾಗಲೆ ಒಪ್ಪಂದ ಮಾಡಿಕೊಂಡು ಹಣ ಪಾವತಿಸಿದ್ದ ಜಾಹಿರಾತು ಕಂಪನಿಗಳಿಗೆ ದಿಕ್ಕೆ ತೋಚದಂತಾಗಿದ್ದು ಸುಳ್ಳಲ್ಲ.ಒಪ್ಪಂದವನ್ನು ಮುರಿದುಕೊಳ್ಳ ಬೇಕೆ? ಇಲ್ಲಾ ಈಗ ಸುಮ್ಮನಿದ್ದು ಇನ್ನು ಬಾಕಿಯಿರುವ ಹಣವನ್ನಷ್ಟೆ ಕೈ ಬಿಡಬೇಕೆ? ಹೀಗೆ ಹಲವಾರು ಪ್ರಶ್ನೆಗಳು ಸದ್ದಿಲ್ಲದೆ ಚರ್ಚೆಯಾಗಿದ್ದರೂ ಸುದ್ದಿಯಾಗದಿರುವುದು ನಿಮಗರಿಯದೆ??ಅದು ಸಹಜ ಹಾಗು ಸಾಮಾನ್ಯ. ಅಕ್ಕ ಸತ್ತರೆ ಅಮವಾಸ್ಯೆ ನಿಲ್ಲುವುದೆ? ಸಾಧನಗೆ ಸಾಧಕರು ಯಾರಾದರೇನು? ಒಬ್ಬ ವ್ಯಕ್ತಿ ತನ್ನನ್ನು ಹೊತ್ತಿಕೊಂಡಿದ್ದರಷ್ಟೆ ಸಾಕ ಅದಕೆ! ಇದನ್ನು ಹೇಳುತ್ತಿರುವ ಉದ್ದೇಶ ಸಾಧನೆಯ ಕರಾಳ ಮುಖವನ್ನು ಬಿಂಬಿಸುವದಕ್ಕಲ್ಲ. ಆ ಆಟಗಾರನಿಗೆ ಈ ಎಲ್ಲಾ ಬೆಳವಣಿಗೆ ಬಗ್ಗೆ ತಿಳಿದಾಗ ಹೇಗಾಗಿರ ಬೇಡಾ? ತನ್ನ ಗೆಳೆಯರೊಬ್ಬರಿಗೆ ತಂಡದಲ್ಲಿ ಸ್ಥಾನ ಸಿಗಲಿದೆ ಎಂದು ಖುಷಿ ಪಡಬೇಕೊ? ಇಲ್ಲಾ ತನ್ನ ದುರಾದೃಷ್ಟವನ್ನು ದೂರ ಬೇಕೊ? ತನ್ನ ಅಪಘಾತವನ್ನು ನೆನೆದು ದುಃಖಿಸ ಬೇಕೊ? ಇಲ್ಲಾ ತಾನಿಲ್ಲದಿದ್ದರೂ ಯಾರಿಗು ವ್ಯತ್ಯಾಸವಾಗದು ಎಂಬ ಸತ್ಯವನ್ನರಿತು ಹತಾಶನಾಗ ಬೇಕೊ??
                   ಇಷ್ಟೆ ಅಲ್ಲಾ! ನನಗೆ ಈ ಘಟನೆಯಲ್ಲಿ ವಿಚಲಿತನಾಗುವಂತೆ ಮಾಡಿದ ಸಂಗತಿ ಎಂದರೆ ಅಪಘಾತವಾದ ಕೆಲವು ದಿನಗಳ ನಂತರ ಆ ಆಟಗಾರರನ್ನ ಕಾಪಾಡಿದ್ದ ವ್ಯಕ್ತಿಯನ್ನು ಗುರುತಿಸಿ ಸನ್ಮಾನ ಮಾಡಲಾಯಿತು,ಆ ವ್ಯಕ್ತಿಗೆ ತಾನು ಕಾಪಾಡಿದ್ದ ಮನುಷ್ಯ ಇಷ್ಟೊಂದು ಗೌರವಾನ್ವಿತರೆಂಬ ಸಂಗತಿ ತಿಳಿಯದಿದ್ದರೂ ಯಾವ ಅಪಾಯವನ್ನು ಲೆಕ್ಕಿಸದೆ ಅವರನ್ನು ರಕ್ಷಿಸಿದ್ದರು ಎಂದು ತಿಳಿದಾಗ ಅವರ ಮಾನವೀಯ ಗುಣವನ್ನು ಮೆಚ್ಚಿದೆ,ಆದರೆ ಆ ಆಟಗಾರನನ್ನು ರಕ್ಷಿಸುವಾಗ ಅಲ್ಲಿದ್ದ ಕೆಲವರು ಐಷಾರಾಮಿ ಕಾರನ್ನು ಗುರುತಿಸಿ ಯಾರೊ ದೊಡ್ಡ ಮನುಷ್ಯನೆಂಬುದನ್ನರಿತು ತುರ್ತಾಗಿ ಪ್ರಾಣವನ್ನು ಉಳಿಸಲು ಸಹಾಯ ಮಾಡದೆ ಆ ಕಾರಿನಲ್ಲಿದ್ದ ಬೆಲೆಬಾಳುವ ವಸ್ತು, ಹಣವನ್ನು ಕದ್ದರಲ್ಲ!! ಒಂದು ವೇಳೆ ಆಟಗಾರನನ್ನ ಕಾಪಾಡಿದ ವ್ಯಕ್ತಿ ಆ ಸ್ಥಳದಲ್ಲಿ ಇರದಿದ್ದರೆ ಏನಾಗ ಬಹುದಿತ್ತು?? ತನ್ನ ಕಣ್ಣ ಎದುರೆ ,ತನ್ನ ಪ್ರಾಣ ಹೋಗುತ್ತಿದ್ದರೂ,ಲೆಕ್ಕಿಸದ ಜನ ಹಣಕ್ಕಾಗಿ ಹಪಾಹಪಿಸುವುದನ್ನು ಕಂಡು ತನ್ನ ಸಾಧನೆಯ ಬಗ್ಗೆ ಜಿಗುಪ್ಸೆ ಹುಟ್ಟುತ್ತಿತ್ತೇನೊ??
                 ಸಾಧನೆ ವೇದನೆಗೆ ದಾರಿ ಮಾಡಿಕೊಡದಿದ್ದರಷ್ಟೆ ಅದಕ್ಕೊಂದು ಬೆಲೆ.ನಮ್ಮ ಅಸಹಾಯಕತೆ ಮತ್ತೊಬ್ಬರಿಗೆ ಅವಕಾಶಗಳನ್ನು ಕಲ್ಪಿಸುತ್ತದೆ ಎಂಬ ಸತ್ಯದ ಅರಿವು ನಮಗಿದ್ದರೆ ಮಾತ್ರ ಸಾಧನೆ ಅಥವಾ ಗೆಲವು ನಮ್ಮನ್ನು ನಾವಾಗಿರಲು ಬಿಡುತ್ತದೆ.ಗೆಲವು ಶಾಶ್ವತವಲ್ಲ! ಸೋಲು ಕೊನೆಯು ಅಲ್ಲ.

- ಮಂಜುನಾಥ್ ಮೇಟಿ.

ಸಾವಿನ ಸತ್ಯ (ಕವಿತೆ) - ಮಾಲತಿ ಮೇಲ್ಕೋಟೆ.

ಕಣ್ಣು ಮುಚ್ಚಿ ಮಲಗಿಹರು
ಚಿರನಿದ್ರೆಯಲಿ ರಾಯರು
ಸಂತಾಪ ಸೂಚಿಸಿಹರು
ಬಂದ ಜನ ಸಾವಿರಾರು

ದೇವರಂಥ ಮನುಜರಿವರು
ಗುಣಗಾನ ಮಾಡುತಿಹರು
ನಿತ್ಯ ಶಾಪ ಹಾಕುತಿದ್ದವರು
ಮುಖವಾಡದ ಜನರು

ಸರ್ಕಾರದಧಿಕಾರಿ ರಾಯರು
ಲಂಚಕೋರ-- ಬಿರುದಾಂಕಿತರು
ರಸ್ತೆ ಅಪಘಾತದಲಿ ಮಡಿದರು
ಶಿವನ ಪಾದ ಸೇರಿದರು

ಶವಯಾತ್ರೆ ಮುಗಿಸಿದರು
ಜನರಲ್ಲಿ ಗುಸುಗುಸು ಗುಟುರು
ಎಷ್ಟೋ ಕೋಟಿ ಗಳಿಸಿದ್ದರು
ಮಾಡಿದ ಪಾಪಕೆ ಬಲಿಯಾದರು.

- ಮಾಲತಿ ಮೇಲ್ಕೋಟೆ.

ಕೃತಿ ಪರಿಚಯ: ನನ್ನೊಳಗಿನ ದನಿ (ಕವನ ಸಂಕಲನ) – ವರುಣ್‌ರಾಜ್‌ ಜಿ.

ವೃತ್ತಿಯಲ್ಲಿ ಶಿಕ್ಷಕರಾಗಿರುವ ಶ್ರೀಮತಿ ಅನಿತಾ ಕೆ.ಆರ್.‌ ಇವರು ಪ್ರವೃತ್ತಿಯಲ್ಲಿ ಸಾಹಿತಿ. ಇವರು ಬರೆದಿರುವ ಕೃತಿ ನನ್ನೊಳಗಿನ ದನಿ. ಇದೊಂದು 80 ಪುಟದ ಕೃತಿ. ಸು. 50 ಕವನಗಳು ಈ ಸಂಕಲನದಲ್ಲಿದೆ. ‘ನನ್ನೊಳಗಿನ ದನಿ’ ಎಂಬ ಶೀರ್ಷಿಕೆಯೇ, ಇಲ್ಲಿನ ಕವನಗಳು ಕವಿಯ ಹೃದಯಾಂತರಾಳದ ಅಭಿವ್ಯಕ್ತಿಗಳು ಎಂಬುದನ್ನು ಧ್ವನಿಸುತ್ತದೆ. ನನ್ನೊಳಗಿನ ದನಿ ಎಂಬುದು ಅರ್ಥಪೂರ್ಣವಾದ ಮತ್ತು ಅಷ್ಟೇ ಸೂಕ್ತವಾದ ಶೀರ್ಷಿಕೆ.

ಕೃತಿಯ ಮುಖಪುಟದಲ್ಲಿ, ಒಂದು ಮಾಸಿದ ಗೋಡೆ, ಅದರ ಮೇಲೆ ಕಲೆಗಳು, ಒಂದು ಕಿಟಕಿ, ಮತ್ತೊಂದು ಅರ್ಧ ಗೋಡೆ, ಒಂದು ಮಾನವ ರೂಪ (ಬಹುಶಃ ಒಬ್ಬ ಹೆಣ್ಣು ಅದರಲ್ಲಿಯೂ ಒಬ್ಬ ವೃದ್ಧೆ) ಇಷ್ಟು ಇವೆ. ಅಷ್ಟೊಂದು ವರ್ಣ ರಂಜಿತವಾಗಿಲ್ಲದಿದ್ದರೂ, ಈ ಮುಖಪುಟ ಅರ್ಥಪೂರ್ಣವಾದ ರೂಪಕಗಳಿಂದ ಕೂಡಿದೆ. ಇಲ್ಲಿ ಯಾವುದೇ ಬಾಗಿಲು ಇಲ್ಲ, ಕೇವಲ ಒಂದು ಸಣ್ಣ ಕಿಟಕಿ ಇದೆ. ಇದರ ಮೂಲಕವೇ ಅವಳು ಲೋಕವನ್ನ ನೋಡಬೇಕು. ಲೋಕ ಅವಳನ್ನು ನೋಡಲೂ ಸಹ ಈ ಕಿಟಕಿಯೇ ಮಾರ್ಗ. ಈ ಕೃತಿಯೂ ಸಹ ಈ ಸಣ್ಣ ಕಿಟಕಿಯ ಹಾಗೆ, ಓದುಗರು ಕವಿಯ ಮನಸನ್ನು ನೋಡಲು ಮತ್ತು ಕವಿ ಹೃದಯವು ಸಮಾಜವನ್ನು ನೋಡಲು ಎರಡಕ್ಕೂ ಈ ಸಣ್ಣ ಕಿಟಕಿಯೇ ಮಾಧ್ಯಮ. ಕಿಟಕಿ ಅಂದರೆ ಕೃತಿ ಸಣ್ಣದಿರಬಹುದು, ಆದರೆ ಇದರಲ್ಲಿ ಇಣುಕಿದಾಗ ಕೃಷ್ಣನ ಬಾಯಲ್ಲಿ ಯಶೋಧೆಗೆ ಬ್ರಹ್ಮಾಂಡವೇ ಕಂಡಹಾಗೇ ಕವಿ ಮನಸ್ಸಿನಾಳದ ಹಲವು ಲೋಕಗಳು ಓದುಗರ ಮುಂದೆ ತೆರೆದುಕೊಳ್ಳುತ್ತವೆ. ಇದೇ ಈ ಕೃತಿಯ ವೈಶಿಷ್ಟ್ಯ.

ಈ ಕೃತಿಗೆ ಬೆನ್ನುಡಿಯನ್ನು ಬರೆದಿರುವ ಶ್ರೀ ರಾಜು ಸೂಲೇನಹಳ್ಳಿಯವರು ಕವಯತ್ರಿಯ ಕುರಿತು “ವೃತ್ತಿಯ ಜೊತೆಗೆ ಬರವಣಿಗೆಯ ಪ್ರವೃತ್ತಿಯನ್ನು ರೂಢಿಸಿಕೊಂಡು ಸ್ವ-ಅನುಭವ ಹಾಗೂ ಜ್ಞಾನವನ್ನು ಒಗ್ಗೂಡಿಸಿಕೊಂಡು ಸಾಹಿತ್ಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡುತ್ತಿರುವ” ಎಂದು ಹೇಳುವರು. ರಾಜು ಕವಿಯವರು ಈ ಮಾತನ್ನು ಬಹಳ ಸೂಕ್ಷ್ಮವಾಗಿಯೇ ಆಲೋಚಿಸಿ ಹೇಳಿದಂತಿದೆ. ಏಕೆಂದರೆ ಜ್ಞಾನ ಮತ್ತು ಅನುಭವಗಳ ಸೂಕ್ತವಾದ ಮತ್ತು ಅಷ್ಟೇ ಸರಿಪ್ರಮಾಣದ ಮಿಶ್ರಣ ಈ ಕೃತಿಯಲ್ಲಿದೆ. ರಾಜುರವರ ಮಾತುಗಳು ಅನುಭವವಿಲ್ಲದ ಜ್ಞಾನದ ನಿಸ್ಸಾರತೆಯನ್ನು, ಸಂವೇದನಾ ಹೀನತೆಯನ್ನೂ ಅಣಕಿಸುವಂತೆ ಇವೆ. ಇಲ್ಲಿನ ಕವನಗಳಿಗೆ ಸೂಕ್ತವಾದ ರೇಖಾಚಿತ್ರಗಳನ್ನು ಅಳವಡಿಸಿರುವುದು ಕೃತಿಯ ಮತ್ತೊಂದು ವಿಶಿಷ್ಟತೆ.

(ಶ್ರೀಮತಿ ಅನಿತಾ ಕೆ. ಆರ್‌, ಕವಿಗಳು ಹಾಗೂ ಶಿಕ್ಷಕರು)

ಈ ಕೃತಿಗೆ ಮುನ್ನುಡಿಯನ್ನು ಬರೆದಿರುವ ಪ್ರಾಧ್ಯಾಪಕರಾದ ಅಶೋಕ ನರೋಡೆಯವರು ‘ನನ್ನೊಳಗಿನ ದನಿ’ಗೊಂದು ಸುಂದರವಾದ ಚೌಕಟ್ಟನ್ನು ಹಾಕಿಕೊಟ್ಟಿರುವರು. ಇಂತಹ ಕ್ರಿಯೆಟಿವ್‌ ಬರಹಗಳನ್ನು ಓದುವಾದ ಮುನ್ನುಡಿ ಬೆನ್ನುಡಿಗಳನ್ನು ಓದದೆಯೇ ಕೃತಿಗೆ ಪ್ರವೇಶ ಮಾಡಬೇಕೆಂಬುದು ನನ್ನ ಸಾಮಾನ್ಯ ನಂಬಿಕೆ. ಆದರೆ, ಈ ಮುನ್ನುಡಿ ಓದುಗರಿಗೆ ಒಂದು ಉತ್ತಮ ಪ್ರವೇಶಿಕೆಯನ್ನು ಒದಗಿಸುತ್ತದೆ ಎನಿಸಿತು. ಇಲ್ಲಿ ಅಶೋಕ ನರೋಡೆಯವರು ಮಹಿಳೆಯರು ಸಾಹಿತ್ಯ ರಚನೆಗೆ ಹೆಚ್ಚು ಹೆಚ್ಚು ಮುಂದಾಗಬೇಕೆಂದು ಹೇಳುತ್ತಾ, ತನ್ನನ್ನು ತಾನು ಶೋಧಿಸಿಕೊಳ್ಳಲು ಕಾವ್ಯ ಒಂದು ಅತ್ಯುತ್ತಮ ಮಾಧ್ಯಮವಾಗುವ ಬಗೆಯನ್ನೂ ವಿವರಿಸುತ್ತಾರೆ. ಈ ಕಾವ್ಯ ಮಾಧ್ಯಮವನ್ನು ಅಷ್ಟೇ ಯಶಸ್ವಿಯಾಗಿ ಬಳಸಿಕೊಳ್ಳುವ ಪ್ರಯತ್ನವನ್ನು ಕವಯತ್ರಿ ಅನಿತಾರವರು ಮಾಡಿರುವರು.

ಕವಯತ್ರಿ ತಮ್ಮ ಕವನವನ್ನು ಪ್ರಾರಂಭಿಸುವುದೇ ಆನ್ನದಾತನಿಂದ. ಈ ಕೃತಿಯಲ್ಲಿ ದೇಶಕ್ಕೆ ಅನ್ನವನ್ನು ನೀಡುವ ರೈತರಿಗೆ ಮೊದಲ ಸ್ಮರಣೆ ದಕ್ಕಿರುವುದು ವಿಶೇಷವಾಗಿದ್ದು, ಇದು ಕವಿ ಮನಸ್ಸಿನ ವೈಚಾರಿಕ ಪ್ರಜ್ಞೆಯನ್ನು ಹಾಗೂ ಸಾಮಾಜಿಕ ಸಂವೇದನೆಯನ್ನು ನಮಗೆ ತಿಳಿಸುತ್ತದೆ. ಈ ಕವಿತೆಯಲ್ಲಿ ರೈತರ ತ್ಯಾಗ, ಕಾಯಕಗಳನ್ನು ವಿವರಿಸುತ್ತ,

“ಸ್ಮರಿಸು ಬಾ ಮನುಜ

ಗಾಂಧಿ ತಾತನಂತೆ ದುಡಿವ

ರೈತ ಯೋಗಿಯ

ನಮ್ಮ ರೈತ ಯೋಗಿಯ”

ಎಂದು ಹೇಳುತ್ತಾ, ರೈತನ ಅನ್ನದ ಕೃಷಿ, ಗಾಂಧಿಯ ಸ್ವತಂತ್ರ್ಯದ ಕೃಷಿ ಎರಡನ್ನೂ ಸಮೀಕರಿಸುತ್ತಾ, ರೈತರ ಆತ್ಮಹತ್ಯೆಗಳನ್ನು, ಗಾಂಧಿಯ ಹತ್ಯೆಯನ್ನು ನೆನಪಿಸಿ ಎರಡಕ್ಕೂ ವಿಷಾದ ವ್ಯಕ್ತಪಡಿಸುತ್ತದೆ. ಕೃತಿಯ ಮತ್ತೊಂದು ಕವಿತೆ ಮತದಾನದ ಕುರಿತದ್ದು, ‘ಮತದಾನ ಮಹಾದಾನ’ ಈ ಕವಿತೆಯ ಶೀರ್ಷಿಕೆ. ಮತದಾನಕ್ಕೆ ಪ್ರೇರಣೆ ನೀಡುವ ಆಶಯವನ್ನೊಳಗೊಂಡು ಪ್ರಾರಂಭವಾಗುವ ಈ ಕವಿತೆ ಮತವನ್ನು ಮಾರಿಕೊಳ್ಳಬೇಡಿ ಎಂದು ಹೇಳುತ್ತ, ಮತದಾನವನ್ನು ಪ್ರಜಾಪ್ರಭುತ್ವದ ಹಬ್ಬ ಎಂದು ಗುರುತಿಸುತ್ತದೆ.

ʼಕವಯತ್ರಿʼ ಎಂಬ ಮತ್ತೊಂದು ವಿಶೇಷವಾದ ಕವಿತೆಯಲ್ಲಿ ಬರುವ

“ಹೃದಯದೊಳಗಿನ ಭಾವನೆಗೆ

ಮನದ ಏಖಾಂತಕ್ಕೆ ಬೇಸರಕ್ಕೆ

ಬೇಕಿತ್ತೊಂದಾಸರೆ”

“ಕಾಗದ, ಲೇಖನ ದೊರಕ ತನಕ

ಚಿಮ್ಮಿತ್ತು ಭಾವನೆ

ಮೂಡಿಬಂದವು ಅಕ್ಷರಗಳು

ಹೊಮ್ಮಿದವು ಪದಗಳು

ಅನುಭವಗಳು, ಅನಿಸಿಕೆಗಳು....”

ಎಂಬ ಸಾಲುಗಳು ಒಂದು ರೀತಿಯ ಸ್ತ್ರೀವಾದಿ ಕಾವ್ಯಮೀಮಾಂಸೆಯ ದೃಷ್ಠಿಕೋನವನ್ನು ಒಳಗೊಂಡಂತೆ ಅನಿಸುವುದು. ಕವಿ ತನ್ನ ಬಿಡುಗಡೆಗಾಗಿ ಕಾವ್ಯ ರಚನೆಯನ್ನು ಮಾಡುತ್ತಾನೆ. ತನ್ನ ಅಭಿವ್ಯಕ್ತಿಯ ಒಂದು ಮಾಧ್ಯಮವಾಗಿ ಬರವಣಿಗೆಯನ್ನು ಆಯ್ದುಕೊಳ್ಳುವ ಕವಿ ಆ ಮೂಲಕವೇ ತನ್ನೆಲ್ಲ ಅನಿಸಿಕೆ ಅನುಭವಗಳನ್ನು ನೋವು-ನಲಿವುಗಳನ್ನು ಹೊರಹಾಕುತ್ತಾ ಹಗುರಾಗುವನು. ಇಂತಹ ಹಗುರಾಗುವಿಕೆ ಈ ಕವಿತೆಯಲ್ಲೂ ವ್ಯಕ್ತವಾಗಿದೆ. ಇದೇ ಕವಿತೆಯ ಮುಂದಿನ ಸಾಲುಗಳಲ್ಲಿ ನನ್ನ ಪದಗಳು ಖಾಲಿಯಾದರೆ ಹೇಗೆ ? ಎಂಬ ಭಯವನ್ನೂ ಉಳಿಸಿಕೊಳ್ಳುತ್ತಾ, ಕವಿಯೆಂಬ ಅಹಂಕಾರದ ಭಾವನೆ ತನ್ನಲಿ ಸುಳಿಯಬಾರದೆಂಬ ಆಶಯವನ್ನು ವ್ಯಕ್ತಪಡಿಸುತ್ತಾರೆ.

‘ಆರಾಧನೆ’ ಎಂಬ ಮತ್ತೊಂದು ಕವಿತೆಯಲ್ಲಿ,

“ಅಭಿಮಾನಿಸುತ್ತೇನೆ ಗೆಳೆಯಾ

ಗೆದ್ದು ಬೀಗುವಾಗ ಬೆನ್ತಟ್ಟಿದ್ದಕ್ಕಲ್ಲ

ಸೋತು ಕುಸಿದಾಗ ಕೈ ಹಿಡಿದದ್ದಕ್ಕೆ

ಸದ್ಗುಣಗಳ ಮೆಚ್ಚಿಕೊಂಡದ್ದಕ್ಕಲ್ಲ

ದುರ್ಗುಣಗಳ ಸಹಿಸಿಕೊಂಡದಕ್ಕೆ,

ಸಿರಿಯಿದ್ದಾಗ ಸನಿಹವಿದ್ದುದ್ದಕಲ್ಲ

ಸೂತಕವಿದ್ದಾಗ ಜೊತೆಯಾದುದಕ್ಕೆ.”

ಇಂತಹಾ ಒಬ್ಬ  ಗೆಳೆಯನನ್ನು ಆರಾಧಿಸುವೆ ಎನ್ನುತ್ತಾರೆ. ಇಂತಹ ಒಬ್ಬ ಸಂಗಾತಿಯ ನಿರೀಕ್ಷೆ ಎಲ್ಲ ಗಂಡು ಹೆಣ್ಣುಗಳಲ್ಲೂ ಸಾಮಾನ್ಯ. ಈ ನಿರೀಕ್ಷೆ ಸಫಲವಾದ ಸಾರ್ಥಕ ಭಾವ ಈ ಕವಿತೆಯಲ್ಲಿ ಕಂಡು ಬರುತ್ತದೆ.

“ಮನಸ್ಸಿದೆಯಲ್ಲ ಎಂಬ ಮತ್ತೊಂದು ಕವಿತೆಯನ್ನು ಗಮನಿಸುವುದಾದರೆ,

“ಮಿನುಗುವ ತಾರೆಗಳ

ಮುಟ್ಟಲಾಗದಿದ್ದರೇನಂತೆ?

ಅವುಗಳ ಬೆಳಕಲಿ ಸಾಗುವ

ಕನಸಿದೆಯಲ್ಲ?........................

................ಮನಸ್ಸು ಎಂದಿಗೂ

ಬರಿದಾಗದು

ಜೀವ ಭಾವಗಳ ಮುನ್ನಡೆಸುವ

ಬಾಳಿನ ದೋಣಿಯಿದು”

ಎಂಬ ಸಾಲುಗಳು ಮಾನವನ ಮನಸ್ಸಿನಲ್ಲಿರುವ ಅಗಾಧ ಶಕ್ತಿಯನ್ನು ಮನವರಿಕೆ ಮಾಡಿಕೊಡುತ್ತಲೇ, ಸೋತ ಮನಸ್ಸುಗಳಿಗೆ ದೈರ್ಯ ತುಂಬುವ ಕೆಲಸವನ್ನು ಮಾಡುತ್ತವೆ. ಇರುವೆಗಳು ಎಂಬ ಮತ್ತೊಂದು ಕವಿತೆಯಲ್ಲಿ, “ನಾವು ಮಾಡಿದ್ದು ಸಾಧನೆಯಲ್ಲ, ಓದಿ, ಬರೆದು ಅಹಂಕಾರ ನಮ್ಮದೆಲ್ಲ” ಎಂಬ ಆತ್ಮ ನಿವೇದನೆ ಇದೆ. ಇರುವೆಗಳ ಒಗ್ಗಟ್ಟನ್ನು, ಛಲಬಿಡದ ಶ್ರಮವನ್ನು ಪ್ರಶಂಶಿಸುತ್ತಾ ಮಾನವನಿಗೆ ಇರುವೆಯೂ ಮಾದರಿಯಾಗಬಹುದು ಎಂಬುದನ್ನೂ ಕವಿ ಗುರುತಿಸುತ್ತಾರೆ. ಮತ್ತೊಂದು ಕವಿತೆ ‘ಬದುಕಿನ ಸಾರ್ಥಕತೆ’ ಈ ಕವಿತೆಯಲ್ಲಿ,

“ಕಾನನದ ಬಿದುರುಗಳೆಲ್ಲವೂ

ಮಧುರ ಮುರಳಿಯಾಗಬಲ್ಲವೇ?

ಹೂ ಬನದ ಸುಮಗಳೆಲ್ಲವೂ

ದೇವರ ಮುಡಿಗೇರಬಲ್ಲವೇ?

ಬದುಕು ಬದಲಾಗಲು ಕಾಲಬೇಕು

ಹಸಿವು ಕಸುವಿನಲ್ಲಿ ಮೀಯಬೇಕು

ಒಲುಮೆ ಚೆಲುಮೆಯ ಜಾಲಬೇಕು

ಪರೀಕ್ಷೆ ನಿರೀಕ್ಷೆಯಲ್ಲಿ ಬೇಯಬೇಕು”

 ಎನ್ನುತ್ತಾ ಬದುಕಿನ ಸಾರ್ಥಕತೆಯ ತತ್ತ್ವವನ್ನು ಬಹಳ ಸರಳವಾಗಿಯೇ ವಿವರಿಸಿರುವರು.

ʼಸಾಕೆನಿಸಿದೆ ಬದುಕುʼ ಎಂಬ ಕವಿತೆಯಲ್ಲಿ ಯಾವುದೋ ಸಂದರ್ಭದಲ್ಲಿ ತಾನು ಅನುಭವಿಸಿದ ನೋವು ಅಥವಾ ನಿರಾಶೆಯನ್ನು ವ್ಯಕ್ತ ಪಡಿಸುತ್ತಾ ಬದುಕು ಸಾಕೆನಿಸಿದೆ ಎಂದು ಕವಯತ್ರಿ ಬರೆಯುತ್ತಾರೆ. ಇಂತಹ ನಿರಾಶಾವಾದದ ಬೆನ್ನಿಗೇ, ‘ನಿತ್ಯ ಮಾರ್ಗದರ್ಶನ’ ಎಂಬ ಕವಿತೆಯಿದೆ. ಈ ಕವಿತೆ ತನ್ನನ್ನೂ ಒಳಗೊಂಡಂತೆ ನಾವು ಎಂದಿಗೂ ನಿರಾಶಾವಾದಿಗಳಾಗಬಾರದು ಎನ್ನುವ ಸಂದೇಶವನ್ನು ಕೊಡುತ್ತದೆ. ಎಲ್ಲಾ ಆಶೆಯ ಹಾದಿಗಳೂ ಮುಚ್ಚಿಕೊಂಡರೂ ನಮಗೆ ನಾವೇ ಮಾರ್ಗದರ್ಶಕರಾಗಿ ಬದುಕನ್ನು ಮುನ್ನಡೆಸಬೇಕೆಂಬ ಆಶಯ ಈ ಕವಿತೆಗಳಲ್ಲಿದೆ.

‘ವಿಮರ್ಶೆ’ ಈ ಕವಿತೆಯಲ್ಲಿ ಮಹಿಳೆಯ ಕಣ್ಣೀರಿನ ಪ್ರಶ್ನೆ ಇದೆ.

“ಉತ್ತರ ಇಲ್ಲದ

ವಿಮರ್ಶೆಯ ಸಂತೆಯಲ್ಲಿ

ಜೀವನ ಜಾತ್ರೆಯು ಸಾಗಿತು

ಬದುಕಿನ ಪರದೆಯು ಮುಚ್ಚಿತ್ತು

ವಿಮರ್ಶೆ ಕೂಟವು ಕೂಡಿತ್ತು.

ಇಲ್ಲಿ ವಿಮರ್ಶೆ ಅಂದರೆ ಸ್ತ್ರೀ ಎದುರಿಸುವ ನಿಂದನೆ ಆಪಾದನೆಗಳು ಅನ್ನುವ ಅರ್ಥದಲ್ಲಿ ಇವರು ವಿಮರ್ಶೆಯನ್ನ ಬಳಸಿದ್ದಾರೆ ಮತ್ತೊಂದು ಕಡೆ ವರದಕ್ಷಿಣೆಯ ಕುರಿತು ಮಾತನಾಡುತ್ತಾ,

“ವರನೆಂಬ ಭೂತ

ಮದುವೆ ಮಂಟಪದಲ್ಲಿ ಕೂತ

ವರದಕ್ಷಿಣೆ ಎಂಬುದಕ್ಕೆ ಸೋತ”

“ಗಂಡಾದರೇನಂತೆ, ಅವನು ಹುಟ್ಟಿರುವುದು ಹೆಣ್ಣಿನ ಗರ್ಭದಲ್ಲೇ!” ಎನ್ನುವ ಸಾಲುಗಳಲ್ಲಿ ವ್ಯಕ್ತವಾಗಿರುವ ಸಹಜ ಪ್ರಾಸ, ಮತ್ತು ವರದಕ್ಷಿಣೆ ಪಡೆಯುವ ವರನನ್ನು ಕುರಿತ ವ್ಯಂಗ್ಯ ಅರ್ಥಪೂರ್ಣವಾಗಿ ಮೂಡಿ ಬಂದಿವೆ.

ʼಮರಳಿನ ಗೂಡುʼ ಎಂಬ ಕವಿತೆಯು, ನಮ್ಮೆಲ್ಲರ ಬಾಲ್ಯವನ್ನು ನೆನಪಿಸುತ್ತಲೇ, ಆ ಮರಳಿನ ಗೂಡೇ ಅನಂತವಾಗುವ ಪರಿಯನ್ನು ಚಿತ್ರಿಸುತ್ತಾ ಮಾನವನ ಭವ ಬಂಧನಗಳ ಮತ್ತವುಗಳ ಕ್ಷಣಿಕತೆಯನ್ನು ಓದುಗರಿಗೆ ಮನದಟ್ಟು ಮಾಡಿಸುತ್ತದೆ.

ʼಚುನಾವಣೆʼ ಎಂಬ ಕವಿತೆಯಲ್ಲಿ “ಯಾರು ಅಧಿಕಾರ ಹಿಡಿದರೇನು, ಎಲ್ಲರೆಲ್ಲರೂ ದೃತರಾಷ್ಟ್ರ ಪುತ್ರರೇ, ಅಬ್ಬರ ಆಡಂಬರದ ಮಂಟಪದಲ್ಲಿ ಕುರಿಗಳೇ ಎಲ್ಲ(ನಾವೆಲ್ಲ)” ಎಂಬ ಸಾಲುಗಳು ಒಂದು ರೀತಿಯ ಬಂಡಾಯವನ್ನು ವ್ಯಕ್ತಪಡಿಸುತ್ತವೆ. ಇಂದಿನ ರಾಜಕೀಯ ವಿದ್ಯಮಾನಗಳನ್ನು ಕಂಡು ಬೇಸತ್ತಿರುವ ಕವಿ ಮನಸ್ಸಿನ ನೋವನ್ನು, ಆಕ್ರೋಶವನ್ನು ಈ ಕವಿತೆ ವ್ಯಕ್ತಪಡಿಸುತ್ತೆ. ಈ ಕವಿತೆಗೆ ಅಳವಡಿಸಿರುವ ರೇಖಾ ಚಿತ್ರವನ್ನು ಗಮನಿಸುವುದಾದರೆ, ಸಂವಿಧಾನನ್ನು ಮುಚ್ಚಿಟ್ಟು ಅದರ ಮೇಲೆ ಕುರ್ಜಿಯನ್ನು ಹಾಕಲಾಗಿದೆ, ಜೊತೆಗೆ ಪ್ರಶ್ನಿಸುವ, ದಿಕ್ಕಾರ ಕೂಗುವ ಕೈಗೆ ಹಗ್ಗ ಬಿಗಿಯಲಾಗಿದೆ. ಈ ರೇಖಾಚಿತ್ರವೂ ಸಹ ಕವಿತೆಯನ್ನು ಮತ್ತಷ್ಟು ಅರ್ಥಪೂರ್ಣವಾಗಿ ಪ್ರತಿನಿಧಿಸುತ್ತದೆ.

ಇಷ್ಟೇ ಅಲ್ಲದೇ, ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಉತ್ತೇಜನ ನೀಡುವ ಹಲವು ಪದ್ಯಗಳು ಈ ಕೃತಿಯಲ್ಲಿವೆ. ಪ್ರಮುಖವಾಗಿ, ಬಾ ಬಾಲೆ ಶಾಲೆಗೆ, ಕೂಲಿಯಿಂದ ಶಾಲೆಗೆ, ಶಾಲೆಗಾಗಿ ನಾವು ನೀವು, ನಲಿ-ಕಲಿ ಮುಂತಾದ ಕವಿತೆಗಳು ಶಾಲಾ ಶಿಕ್ಷಣದ ಮಹತ್ವವನ್ನು ಸರಳವಾಗಿ ಮತ್ತು ಅಷ್ಟೇ ಪರಿಣಾಮಕಾರಿಯಾಗಿ ನಮ್ಮ ಮುಂದಿಡುತ್ತವೆ. ಉಳಿದಂತೆ, ಮಡದಿಯ ವೇದನೆ, ಸತಿ-ಪತಿ ಕರ್ತವ್ಯ, ಇಳೆಯ ಮಳೆ, ಬಡತನದ ಬವಣೆ, ಮೌನ, ವಿರಹ ವೇದನೆ ಮುಂತಾದ ಕವಿತೆಗಳು ಅರ್ಥಪೂರ್ಣವಾಗಿವೆ.

ಒಟ್ಟಿನಲ್ಲಿ, ʼನನ್ನೊಳಗಿನ ದನಿʼ ಒಂದು ಯಶಸ್ವಿ ಪ್ರಯೋಗವಾಗಿದೆ. ಈ ಕೃತಿ ಸಂಪೂರ್ಣ ಪರಿಪೂರ್ಣವೆಂದ  ಹೇಳಲಾಗದು. ಹಾಗೆ ನೋಡಿದರೆ ಯಾವುದೋ ಪರಿಪೂರ್ಣವಲ್ಲ. ಅಕ್ಷರ ದೋಷಗಳು ಈ ಕೃತಿಯಲ್ಲಿ ಹೆಚ್ಚಾಗಿದ್ದು, ಬರಹಗಾರರು, ಪ್ರಕಾಶಕರು ಇಂತಹ ವಿಚಾರಗಳನ್ನು ಮುಖ್ಯವಾಗಿ ಗಮನಿಸಲೇಬೇಕು. ಕೆಲವು ಕಡೆ ಪ್ರಾಸ ಸಹಜವಾಗಿದ್ದು, ಕವಿತೆಯ ಸೌಂದರ್ಯವನ್ನು ಹೆಚ್ಚಿಸಿದ್ದರೇಮ ಹಲವು ಕಡೆ ಪ್ರಾಸವನ್ನು ಬಲವಂತವಾಗಿ ತಂದಂತಿದೆ. ಪ್ರಾಸಕ್ಕಿಂತ ಪದ ಮತ್ತು ಪದಾರ್ಥಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಬೇಕಿತ್ತು. ಕೆಲವು ಕಡೆಗಳಲ್ಲಿ ಪ್ರಾಸ ಬರಲೇಬೇಕೆಂಬ ಹಠ ಪದ್ಯದ ಅರ್ಥವ್ಯಾಪ್ತಿಯನ್ನು ಅನಂತ ವಿಸ್ತರಣಾ ಸಾಧ್ಯತೆಗಳನ್ನು ಮಿತಿಗೊಳಿದಂತೆ ಭಾಸವಾಗುತ್ತದೆ.

ಕೃತಿಯ ಕೆಲವು ಕವನಗಳ ಪದ ಬಳಕೆಯಲ್ಲಿ ಮತ್ತಷ್ಟು ಎಚ್ಚರಿಕೆ ಬೇಕಿತ್ತು ಎನಿಸುತ್ತದೆ. ಉದಾ: ʼಸೃಷ್ಠಿಯ ಅಸಮಾನತೆʼ ಎಂಬ ಕವಿತೆಯಲ್ಲಿ ಅಸಮಾನತೆ ಎಂಬ ಪದ ಸೂಕ್ತವೇ? ಸೃಷ್ಠಿಯಲ್ಲಿ ಅಸಮಾನತೆಯಿಲ್ಲ ಬದಲಾಗಿ ಬಹುತ್ವವಿದೆ. ಇದೇ ರೀತಿ ʼವಿಮರ್ಶೆʼ ಎನ್ನುವ ಪದ್ಯದಲ್ಲಿ ವಿಮರ್ಶೆ ಎಂಬ ಪದವನ್ನು ಸ್ತ್ರೀ ಎದುರಿಸುವ ನಿಂದನೆಗಳು ಎಂಬ ಅರ್ಥದಲ್ಲಿ ಬಳಸಲಾಗಿದೆ. ಈ ಪ್ರಯೋಗವೂ ಅಷ್ಟು ಸೂಕ್ತ ಎನಿಸುವುದಿಲ್ಲ. ಇಂತಹ ಪದ ಪ್ರಯೋಗಗಳನ್ನು ಎಚ್ಚರಿಕೆಯಿಂದ ಗಮನಿಸಬೇಕಿತ್ತು.

ಕೆಲವು ಪದ್ಯಗಳಲ್ಲಿ ವಾಕ್ಯ ರಚನೆ ಹಾಗೂ ವ್ಯಾಕರಣ ನಿಯಮಗಳನ್ನು ಗಮನಿಸಬೇಕಿತ್ತು. ಉದಾ: ʼಭಾರತದ ಪರಿಸ್ಥಿತಿʼ ಎಂಬ ಕವಿತೆಯಲ್ಲಿ “ಅವರು ಧರಿಸುವುದೆಲ್ಲಾ ಬರೀ ಜೀನ್ಸ್‌ ಪ್ಯಾಂಟನ್ನು” ಎಂದಿದೆ. ಇಲ್ಲಿ ಬಹುವಚನದಲ್ಲಿ ಪ್ರಾರಂಭವಾಗುವ ವಾಕ್ಯ ಕೊನೆಗೆ ಏಕವಚನದಲ್ಲಿ ಮುಕ್ತಾಯವಾಗುವುದು. ಇಂತಹ ಪ್ರಯೋಗಗಳು ಕೃತಿಯ ಹಲವು ಕಡೆ ಇದ್ದು ಇವನ್ನು ಬರಹಗಾರರು ಮುಖ್ಯವಾಗಿ ಗಮನಿಸಬೇಕು.

ಇದು ಲೇಖಕಿಯ ಚೊಚ್ಚಲ ಕೃತಿಯಾದರಿಂದ ಈ ಎಲ್ಲಾ ಸಣ್ಣ ಪುಟ್ಟ ದೋಷಗಳಿಗೆ ರಿಯಾಯಿತಿ ಇದ್ದೆ ಇರುತ್ತದಾದರೂ ಇವನೆಲ್ಲಾ ಗಮನಿಸಿ ಅನುಸರಿಸಿದಲ್ಲಿ ಮುಂದಿನ ಬರಹ ಬಹಳ ಅರ್ಥಪೂರ್ಣವಾಗುವುದು ಎಂಬ ಸದಾಶಯ ನಮ್ಮದು.

ಉಳಿದಂತೆ, ಈ ಕೃತಿಯಲ್ಲಿ ಒಬ್ಬ ಬಂಡಾಯದ ಮನಸ್ಥಿತಿಯ ವ್ಯಕ್ತಿ, ಒಬ್ಬ ತಾಯಿ, ಸ್ತ್ರೀಪರ, ಜೀವಪರ ಚಿಂತನೆಯ ಮನಸ್ಸು, ಪ್ರಗತಿಪರ ಆಲೋಚನೆಯ ಮನಸ್ಸು ಹಾಗೂ ಮೌಢ್ಯವಿರೋಧಿ ಮನಸ್ಥತಿ, ಸಮಕಾಲೀನ ಚಿಂತನೆಗಳು, ಸಾಮಾಜಿಕ ಸಂವೇದನೆ, ಆತ್ಮನಿವೇದನೆ, ಇತ್ಯಾದಿಗಳು ಸ್ಪಷ್ಟವಾಗಿ ಗೋಚರಿಸುತ್ತವೆ. ಇನ್ನಷ್ಟು ಆಳದ ಆಲೋಚನೆಗಳನ್ನು, ನೋಟ ಕ್ರಮಗಳನ್ನು, ದರ್ಶನವನ್ನು ಕಾಣಿಸುವ ಪ್ರಯತ್ನವನ್ನು ಮುಂದಿನ ಬರಹಗಳಲ್ಲಿ ಮಾಡಬಹುದು.

ಕೊನೆಯದಾಗಿ, ಇಂತಹ ಮಹತ್ವದ ಪ್ರಯತ್ನಕ್ಕಾಗಿ ಶ್ರೀಮತಿ ಅನಿತಾ ಕೆ. ಆರ್.‌ ಇವರಿಗೆ ತುಂಬು ಗೃದಯದ ಅಭಿನಂದನೆಗಳನ್ನು ತಿಳಿಸುತ್ತಾ, ಇಂತಹಾ ಹತ್ತು ಹಲವು ಮಹತ್ವದ ಕೃತಿಗಳು ಇವರಿಂದ ಬರಲಿ ಎಂದು ಆಶಿಸುವೆ. ಓದುಗರ ಮಹಾಶಯರು ಕೃತಿಯನ್ನು ಕೊಂಡು-ಓದು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಮೂಲಕ ಬರಹಗಾರರನ್ನು ಪ್ರೋತ್ಸಾಹಿಸಬೇಕೆಂದು ಕೋರುವೆ. ನಮಸ್ಕಾರಗಳು.

ನನ್ನೊಳಗಿನ ದನಿ ಕೃತಿಗಾಗಿ ಸಂಪರ್ಕಿಸಿ: 7259896840


-  ವರುಣ್‌ರಾಜ್‌ ಜೀ.

ವಿಚಾರ ಮಂಟಪ ಬಳಗ.

# ೯೪೪೮೨೪೧೪೫೦


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ: 9113036287 ವಾಟ್ಸಪ್‌ ಮಾತ್ರ)

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...