ಗುರುವಾರ, ಡಿಸೆಂಬರ್ 7, 2023

ನೀನಿರ ಬೇಕು ನನ್ನ ಬಳಿ (ಕವಿತೆ) - ಜ್ಯೋತಿ ಕುಮಾರ್.ಎಂ(ಜೆ.ಕೆ.).

ನೀನಿರ ಬೇಕು ನನ್ನ  ಬಳಿ
ನಾನಿರ ಬೇಕು 
ನಿನ್ನ  ತೋಳ್ತೆಕ್ಕೆಯಲಿ
ಪ್ರೀತಿ ಪ್ರೇಮಕ್ಕಾಗಿ ಅಲ್ಲ
ಸರಸಕ್ಕಂತು ಅಲ್ಲವೇ ಅಲ್ಲ 
ನನ್ನ  ನಿನ್ನ  ಉಸಿರುಗಳು 
ಮೇಳೈಸಲು
ನಿನ್ನ  ಬೆರಳುಗಳು
ನನ್ಮುಂಗುರುಳಿನಲಿ 
ಮೆರವಣಿಗೆಯಾಗಲು
ನಿನ್ನ  ಹೃದಯ ಬಡಿತವ
ನಾ ಅರಿಯಲು
ನಿನ್ನ  ಬಗೆಗಿನ 
ನನ್ನ  ತುಡಿತವ
ನೀ ತಿಳಿಯಲು
ಒಬ್ಬರಿಗೊಬ್ಬರು
ನಾವಿಬ್ಬರೂ ಎಂದು
ನಾವೀರರ್ವರೂ 
ಎಂಬ ಬಿಸುಪ
ಅನುಭವಿಸಲು
ಪ್ರೇಮ ಕಾಮಕ್ಕೂ
ಮೀರಿದ ಮಧುರಾತಿ
ಮಧುರ
ಅನುಭೂತಿಯಾಗಲು
ನಾನೇ ನೀನಾಗಲು
ನೀನು ನಾನೇ
ಆಗಲು
ಆಗಿರಲು 
ಆಗುತ್ತಲೇ ಇರಲು
ಜಂಗಮವಾಗಲು 
ಸ್ಥಾವರವಾಗಲು 
ಒಬ್ಬರಲ್ಲಿ 
ಮತ್ತೊಬ್ಬರು
ಐಕ್ಯವಾಗಲು 
ನಾವಿರಬೇಕು 
ನಮ್ಮಿಬ್ಬರ 
ಜೊತೆಯಲ್ಲಿ
ಸಂಗದಲಿ
ನಿರಂತರ 
ನಿರಾಕಾರ 
ಅನವರತ.

- ಜ್ಯೋತಿ ಕುಮಾರ್.ಎಂ(ಜೆ.ಕೆ.).

ಮನದಾಳದ ನೋವಿಗೆ ಕಣ್ಣೀರೇ ಆಸರೆ (ಕವಿತೆ) - ಬಸವರಾಜ್ ಎಚ್.ಹೊಗರನಾಳ.

ಅಳುವುದಾದರೆ ಅತ್ತು ಬಿಡು ನೀನು 
ಕಣ್ಣಲ್ಲಿ ಕಣ್ಣೀರು ಅಂತ್ಯವಾಗುವವರೆಗೂ
ಮನದಲ್ಲಿರುವ ನೋವು ನಿವಾರಣೆ ಆಗುವವರೆಗೂ
ನಿನ್ನ ಸಂತೈಸುವವರು ನಿನಗೆ ಸಿಗುವವರೆಗೂ....

ಅಳುವುದಾದರೆ ಅತ್ತು ಬಿಡು ನೀನು 
ನಿನ್ನ ನೋವು ಇನ್ನೊಬ್ಬರಿಗೆ ಅರ್ಥ ಆಗುವವರೆಗೂ
ನಿನ್ನನ್ನು ನೋಯಿಸಿದವರಿಗೆ ನೋವಾಗುವವರೆಗೂ
ನಿನ್ನ ನೋವಿಗೆ ಔಷದಿ ಸಿಗುವವರೆಗೂ....

ಅಳುವುದಾದರೆ ಅತ್ತು ಬಿಡು ನೀನು 
ನೀ ಪ್ರೀತಿಸಿದವರು ನಿನ್ನ ಪ್ರೀತಿಸಲಿಲ್ಲ ಎಂದು 
ನೀ ಇರುವ ಜಾಗ ನದಿಯಾಗಿ ಹರಿಯುವವರೆಗೂ
ಅತ್ತುಬಿಡು ನೀನು ಯಾರಿಗೂ ಕಾಣದ ಮರೆಯಲಿ....

ಅಳುವುದಾದರೆ ಅತ್ತು ಬಿಡು ನೀನು 
ಸಂಬಧಿಕರು ನಿನಗೆ ಬೆಲೆ ಕೊಡಲಿಲ್ಲ ಎಂದು 
ನಿನ್ನ ದೇಹ ಮಣ್ಣಲ್ಲಿ ಮಣ್ಣಾಗುವವರೆಗೂ
ನೀ ಹತ್ತರೆ ಕಣ್ಣೀರು ಒರೆಸುವವರು ಇಲ್ಲ ಎಂದು....

- ಬಸವರಾಜ್ ಎಚ್.ಹೊಗರನಾಳ. ಪತ್ರಿಕೋದ್ಯಮ ವಿದ್ಯಾರ್ಥಿ ಧಾರವಾಡ 
ಮೊ.ನಂ:8951228607

ಮಂಗಳವಾರ, ನವೆಂಬರ್ 21, 2023

ಹೆಸರಿಲ್ಲದವನು(ಸಣ್ಣ ಕತೆ) - ಜ್ಯೋತಿ ಕುಮಾರ್.ಎಂ(ಜೆ.ಕೆ.).

“ ಹಲೋ “,
..............
“ ಹಾಯ್ “,
..............
“ ಹಾಯ್,ಹಲೋ “,
“ಯಾರು?!”
ಅಂತ ಕೇಳಿತು ಮೊಬೈಲಿನಲ್ಲಿಯ ಆ ಬದಿಯ ದನಿ.

ನಾನು ಯಾರು ಅಂತ ಕೇಳಬೇಕಿರಲಿಲ್ಲ.ಅವಳಿಗೆ ಅಷ್ಟೊಂದು ಚಿರಪರಿಚಿತ ನಾನು ಅವಳಿಗೆ.ಜೀವಕ್ಕೆ ಜೀವವೇ ನಾವಿಬ್ಬರೂ ಆಗಿದ್ದಾಗ,ನನ್ನ ಹೆಸರೆ ಅವಳಿಗೆ ಶಕ್ತಿ,ಸಾಂತ್ವನ,ಪ್ರೀತಿ,ಪ್ರೇಮ,ಸಡಗರ,ಜೀವಂತಿಕೆ ಆಗಿತ್ತು.ದಿನಕ್ಕೆ ಒಮ್ಮೆಯಾದರೂ ನೋಡಲೇ ಬೇಕಿತ್ತು,ಒಂದಿಷ್ಟು ಹೊತ್ತು ಮಾತನಾಡಲೆಬೇಕಿತ್ತು."ನೀನು ನನ್ನ ಜೀವ ಭಾವ ತರಂಗ ಕಣೋ” ಅನ್ನೋಳು.

ಆದರೆ,ಇವತ್ತು,ಯಾರು? ಅಂತ ನಿರ್ಭಾವುಕವಾಗಿ ಕೇಳ್ತಾ ಇದ್ದಾಳೆ.

‘ಅಜಯ್ ದೇವಗನ್’ ಅಂದೆ.

ಅವಳಿಗೆ,ಅಜಯ್ ದೇವಗನ್ ಅಂದ್ರೆ ಪ್ರಾಣ.ಅವನ ಪ್ರತೀ ಚಲನ ಚಿತ್ರವನ್ನೂ ಮಿಸ್ ಮಾಡ್ದೆ ನೋಡ್ತಾ ಇದ್ದಳು.ಅವಳ ಪರ್ಸಿನಲ್ಲಿ ಅವನದೊಂದು ಫೋಟೊ ಯಾವಾಗಲೂ ಕುಳಿತಿರೋದು.ಸ್ವಲ್ಪ ಹೆಚ್ಚು ಕಡಿಮೆ ನನ್ನ ಕೂದಲು ಮತ್ತು ನಾನು  ಅದೇ ತರಹ ಇದ್ದಿದ್ದರಿಂದ,ನನ್ಗೆ ಮೀಸೆ ಟ್ರಿಮ್ ಮಾಡಿಸ್ತಾ ಇದ್ದಳು.ಅದೇ ತರಹದ ಬಟ್ಟೆಗಳನ್ನೆ ಸೆಲೆಕ್ಟ್ ಮಾಡಿಸ್ತಾ ಇದ್ದಳು.ಒಳಗೊಂದು ಟೀ ಶರ್ಟ್ ಅದರ ಮೇಲೊಂದು ಶರ್ಟ್,ಪೂರ್ತಿ ಮೇಲಿನದೊಂದು ಓಪನ್ ಬಟನ್.ಅವಳ ಪರ್ಸಿನಲ್ಲಿದ್ದ ದೇವಗನ್ ಶೈಲಿದೇ ಒಂದು ಫೋಟೊ  ಕೂಡ ತೆಗೆಸಿದ್ದಳು.ಇದು ನಮ್ಮಿಬ್ಬರ ಟಾಪ್ ಸಿಕ್ರೆಟಿನಲ್ಲೊಂದಾಗಿತ್ತು.

ಆಗಿನ್ನೂ,ಮೊಬೈಲ್ ಬೊಚ್ಚು ಬಾಯಿ ಬಿಟ್ಟು ಕೊಂಡು,ಅಂಬೆಗಾಲು ಇಡ್ತಾ ಇದ್ದ ಕಾಲ.ಈಗಿನ ತರಹ ಆಗಿದ್ದರೆ,ಟ್ರೂ ಕಾಲರ್ ಆ್ಯಪಿನಲ್ಲಿ ನನ್ನ ಹೆಸರು ಬಂದ ತಕ್ಷಣ ಬ್ಲಾಕ್ ಆಗಿರುತ್ತಿತ್ತೇನೋ.

ಇದೆಲ್ಲ ನೆನಪಿಸಿಕೊಳ್ಳುತ್ತಾ,ನನ್ನ 1108 ನೋಕಿಯಾ ಫೋನ್ ಅನ್ನು ಕಿವಿಗೆ ಸರಿಯಾಗಿ ಹಿಡಿದುಕೊಂಡೆ.

“ಯಾಕೆ ಮಾಡಿದೆ ಫೋನ್?ಫೋನು ಮಾಡಬಾರದು ಅಂತ ನಿನ್ಗೆ ಹೇಳಿಲ್ವ,ಹೇಳಿದ್ದನ್ನೆ ಹೇಳೋಕೆ ಅಸಹ್ಯ ಆಗುತ್ತೆ,ಯಾವ ಬೇವರ್ಸಿನೋ ನಿನ್ಗೆ ನನ್ನ ನಂಬರ್ ಕೊಟ್ಟಿದ್ದು,ಆ ಗಿಡ್ಡ ಮಂಜನಾ,ಆ ಪ್ರವೀಣನಾ?ಆ ನನ್ನ ಮಕ್ಳಿಗೆ ಎಷ್ಟು ಹೇಳಿದ್ರೂ ನಿನ್ಗೆ ನನ್ನ ನಂಬರ್ ಕೊಡ್ತಾರೆ,ಈಡಿಯಟ್ಸ್ .”ಅಂತ ಏನೇನೋ ಬೈಯ್ತಾ ಇದ್ದಳು.ಆದ್ರೆ ಅಪ್ಪಿ ತಪ್ಪಿಯು ಹೇಗಿದ್ದಿಯಾ?ಅರಾಮಾ?ಏನ್ ಮಾಡ್ತಾ ಇದ್ದೀಯಾ?ಎಲ್ಲಿದ್ದೀಯಾ?ಅಟ್ ಲಿಸ್ಟ್ ಸತ್ತಿದ್ದೀಯಾ?ಬದುಕಿದ್ದಿಯಾ? ಅಂತಾನು ಕೇಳಲಿಲ್ಲ.

ಕೊಂಚ ಸಮಯದ ನಂತರ ಫೋನ್ ಕರೆ ಕಟ್ಟಾಗಿತ್ತು.ಇವಳು ಅವಳೇನಾ?ಅಥವಾ ರಾಂಗ್ ನಂಬರ್ರಿಗೆ ಕಾಲ್ ಮಾಡಿದ್ನಾ? ಅಂತ ಒಂದು ಕ್ಷಣ ದಿಗಿಲಾಯ್ತು.

ಇರಲಿ ಯಾವ್ದೋ ಧಾವಂತದಲ್ಲಿ ಇರಬೇಕು ಅಂದುಕೊಂಡು,ಸ್ವಲ್ಪ ಸಮಯದ ನಂತರ ಮೆಸೇಜ್ ಮಾಡ್ದೆ.ಆಗೆಲ್ಲಾ ಮೆಸೇಜಿಗೂ ಕೂಡ ಒಂದು ರೂಪಾಯಿ ಕಟ್ಟಾಗೋದು,ನನ್ಗೆ ಅದರ ದರ್ದು ಇರಲಿಲ್ಲ.ನನ್ನ ಗಮನವೆಲ್ಲ ಅವಳು ನನ್ನ ಜೊತೆ ಮಾತನಾಡಬೇಕು.ನನ್ಗೆ ಅವಳು ಬೇಕಿತ್ತು ಅಷ್ಟೇ.

“ ಹಾಯ್ ”.
.........

“ ಹಲೋ” .
.............

“ ಯಾಕೆ,ನೋ ರಿಪ್ಲೇ?”

“ ಹೇ,ಯಾರಿದು? ‘

ಮತ್ತದೇ,ಸಿಡಿಗುಂಡಿನಂತಹ ಪ್ರಶ್ನೆ.ಅಂದ್ರೆ ನನ್ನ ನಂಬರ್ ಅನ್ನು ಒಂದ್ಸಾರಿನೂ ಗಮನಿಸಿಲ್ಲ ಅಂದ ಹಾಗೆ ಆಯ್ತು.

‘ ರಾಹುಲ್ ದ್ರಾವಿಡ್ ’ ಆಂತ ಈ ಸಾರಿ ಟೈಪಿಸಿದೆ.ಅವಳ ಎರಡನೇ ಫೇವರಿಟ್ ಹೀರೊ.ಗ್ರೇಟ್ ಕ್ರಿಕೆಟರ್.ಇದು ನಮ್ಮಿಬ್ಬರಿಗಷ್ಟೆ ಗೊತ್ತಿದ್ದ ಎರಡನೇ ಸಿಕ್ರೇಟ್.

“ಥೂ!,ನಿನ್ನ.ನಿನ್ನ ಜನ್ಮಕ್ಕೆ ಬೆಂಕಿ ಹಾಕಾ!”.ಎಂದು ರಿಪ್ಲೈ ಬಂತು.ಹೌದು ನನ್ನ ಜನ್ಮಕ್ಕೆ ಬೆಂಕಿಗಿಂತ ಉತ್ತಮ ಸ್ನೇಹಿತ ಇರಲು ಸಾದ್ಯವಿರಲಿಲ್ಲ.ಕನಿಷ್ಟ ನಾಯಿಗೂ ಒಂದು ಹೆಸರಿರುತ್ತೆ,ಬಂಟಿ,ಬಿಂಗೋ,ಚಿನ್ನು,ಮುನ್ನ,ಪಪ್ಪಿ,ರಾಮು...ಹೀಗೆಯೆ,ಆದರೆ ನನ್ಗೆ? ನಂದೆ ಆದ ಹೆಸರೇ ಇರಲಿಲ್ಲ.ಅವರಿವರ ಹೆಸರು ಹೇಳಿಕೊಂಡು,ಪಾತ್ರ ಮಾಡಬೇಕಿತ್ತು.ಹೆಸರಿಲ್ಲದವನು ನಾನು!!!

ಹೀಗೆ ಸುಮಾರು ಆರೇಳು ತಿಂಗಳ ಕಾಲ,ಅಜಯ್ ದೇವಗನ್ ಹಾಗೂ ರಾಹುಲ್ ದ್ರಾವಿಡ್ ಪಾತ್ರಗಳ ಪರಕಾಯ ಪ್ರವೇಶ ಮಾಡಿದರೂ.ಅವಳಿಂದ ಯಾವುದೇ ಉತ್ತರ ಬರಲೇ ಇಲ್ಲ.ಕೊನೆಕೊನೆಗೆ ನಾನು ಹಲೋ ಅಂದ ತಕ್ಷಣ ಫೋನ್ ಕರೆ ಕಟ್ ಮಾಡ್ತಾ ಇದ್ದಳು.ನಾನು ಕಳುಹಿಸಿದ ಎಷ್ಟೋ ಮೆಸೇಜುಗಳು ಇನ್ ಬಾಕ್ಸಿನಲ್ಲಿ ಹಾಗೆಯೇ ಬಿದ್ದು ಸತ್ತು ಹೋಗಿರ್ತಾ ಇದ್ದವು.

ಹಿಂದೊಮ್ಮೆ, ಅವಳು,ನಾನಿದ್ದಲ್ಲಿಗೆ ಬಂದು,”ಇವತ್ತಿಗೆ,ನಮ್ಮಿಬ್ಬರ ಪ್ರೀತಿ ಮುಗೀತು,ಕಾರಣ ಏನೂ ಇಲ್ಲ.ನನ್ಗೆ ನೀನು ಬೇಡ ಅಷ್ಟೆ”,ಅಂದು ಹೋದ ದಿನದಿಂದ ಅವಳ ಮನಸ್ಸಿನಲ್ಲಿ,ಈಗ ಅವಳ ಮೊಬೈಲ್ಲಿನಲ್ಲಿ ನನ್ಗೆ ಯಾವ್ದೇ ಜಾಗ ಇರಲಿಲ್ಲ.ಫೋನ್ನಲ್ಲಿ ನನ್ನ ಹೆಸರು ಸೇವ್ ಆಗಿರಲೇ ಇಲ್ಲ.ಕನಿಷ್ಟ ಒಂದು ಡಾಟ್ ಆಗಿಯಾದರೂ ಸೇವ್ ಮಾಡಬಹುದಿತ್ತು.ಆದರೆ,ಮಾಡಿರಲಿಲ್ಲ.ನನ್ನ ಹೆಸರು,ಅವಳ ಹೃದಯದಲ್ಲಿ,ಅವಳ ಮೋಬೈಲ್ಲಿನಲ್ಲಿ ಉಳಿಯುವುದು ಅವಳಿಗೆ ಬೇಕಾಗಿರಲಿಲ್ಲ.ಲವ್ ಅಂತ ಸೇವ್ ಮಾಡಲು,ನಾನು ಅವಳ ಲವ್ವರ್ ಅಲ್ಲ,ಎಕ್ಸ್ ಅಂತ ಸೇವ್ ಮಾಡಿ ಮನೆಯವರ ಕೆಂಗಣ್ಣಿಗೆ ಸಿಲುಕುವುದೂ ಬೇಕಿರಲಿಲ್ಲ.ಹಾರ್ಟ್ ಸಿಂಬಲ್ ಆಗಿ ಸೇವ್ ಮಾಡಲು,ಇದ್ದೊಂದು ಹೃದಯವ ಯಾರಿಗೆ ಕೊಟ್ಟಿದ್ದಳೋ,ಯಾರಿಗೆ ಗೊತ್ತು?

ನಾನೂ ಏನೆಲ್ಲಾ ಪ್ರಯತ್ನಿಸಿದರು,ಅವಳ ಎದೆಯ ಕವಾಟಗಳು,ನನ್ನ ವಿಷಯದಲ್ಲಿ ಯಾವಾಗಲೋ ಮುಚ್ಚಿ ಹೋಗಿದ್ದವು.ಪ್ರೀತಿ ಇಲ್ಲದವರ ಮನೆಯ ದೇವರ ಜಗುಲಿಯಾದರೂ ಬೇಡ,ಪ್ರೀತಿ ತುಂಬಿದ ಮನೆಯ ಮೆಟ್ಟಿನ ಗೂಡಾಗಿದ್ದರು ಸಾಕು.ನಾನಾದರೂ ಏನು ಮಾಡಲಿ,ಪ್ರೀತಿ ಇಲ್ಲದ ಮೇಲೆ.ಬಲವಂತದಿಂದ  ಮಾಡೋಕೆ ಅದೇನು ಬಲಾತ್ಕಾರವೆ?

ಹೀಗೆಯೇ ಸುಮಾರು ಮೂರು ವರ್ಷಗಳು ಕಳೆದಿರಬಹುದು.ಪಾಪಿ ಪೇಟ್ ಕಾ ಸವಾಲ್.ಏನಾದರೂ ಮಾಡಲೇ ಬೇಕಲ್ವಾ?ಬದುಕು ಬಡಿದು ಬಡಿದು,ಜೀವನದ ಮುಂದಿನ ದಡಕ್ಕೆ ತಲುಪಿಸುತ್ತಂತೆ.ನಾನು ಯಾವುದೋ ಕೆಲಸದ ಮೇಲೆ ದೇವನಹಳ್ಳಿಗೆ ಹೋಗಿದ್ದೆ.ನನ್ನವಳನ್ನು ಅವರ ಸೋದರ ಮಾವನವರ ದೇವನಹಳ್ಳಿಯ ಮನೆಯಲ್ಲಿ ಬಿಟ್ಟು,ಇನ್ನೊಂದು ಕಡೆ ಹೋಗಿ,ಬಸ್ಸಿಳಿದು ಬರ್ತಾ ಇದ್ದೆ.ಮಧ್ಯಾಹ್ನ ಸುಮಾರು ಮೂರು ಗಂಟೆ.ಸೂರ್ಯನಿಗೆ ಆಗ ತುಂಬು ಯೌವ್ವನ,ನಿಗಿ ನಿಗಿ ಬೆಂಕಿ ಕಾರುತ್ತಿದ್ದ.ವಿಪರೀತ ಸೆಕೆ.ಇಳೆ,ಮಳೆ ಕಾದು,ಕಾದು ಕೆಂಡವಾಗಿದ್ದಳು.

ಚೀನಾದ,ಇಷ್ಟಗಲದ ಕಲರ್ ಡಿಸ್ಪ್ಲೇನ ಮೊಬೈಲಲ್ಲಿ ಯಾವುದೋ ಹೊಸ ನಂಬರ್ ನಿಂದ ಕಾಲ್ ಬಂತು.

“ ಹಲೋ ”,

...........

“ ಹಾಯ್,ಯಾರು? ”

“ ನಾನು.”

ನೆತ್ತಿಗೆ ಒಂದೇ ಸಾರಿಗೆ ಸಿಡಿಲು ಬಡಿದ ಹಾಗೆ ಆಯ್ತು.ಕತ್ತೆತ್ತಿ ನೋಡಿದೆ,ಮಳೆ ಮೋಡವಾಗಿ,ಸಿಡಿಲು ಏನಾದರೂ ಬಿತ್ತಾ?ಅಂತ.ಆದರೆ,ಅದೇ ನೀಲಿ ಆಕಾಶದಲ್ಲಿ,ಮೂವತ್ತರೆಡು ಹಲ್ಲು ಬಿಟ್ಟು ಸೂರ್ಯ ನಕ್ಕಂಗೆ ಆಯ್ತು.

“ ಒಂದ್ನಿಮಿಷ.”

ಅಂದು,ಆ ಕಡೆ ಈ ಕಡೆ ನೋಡಿದೆ.ಅಲ್ಲೊಂದು,ಪಟ್ಟಿಗೆ ಅಂಗಡಿ ಇತ್ತು.ಗಿರಾಕಿಗಳಿಲ್ಲದ ಮುದಿ ವೈಶ್ಯಯಂತೆ,ಬಾಗಿಲು ತೆರೆದು ನಿಂತಿತ್ತು.ಅಲ್ಲೋಗಿ ಒಂದು ಸಿಗರೇಟ್ ಕೊಂಡು,ಬಾಯಿಗೆ ಇಟ್ಟು ಅಂಟಿಸಿಕೊಂಡು,ಎದೆಯ ಪುಪ್ಪಸದಾ ತುಂಬಾ ಹೊಗೆಯನ್ನು ಎಳೆದು,ನಿರಾಳನಾದೆ.

“ ಮ್ಮ್,ಹೇಳಿ,ಯಾರು?” ಅಂತ ಕೇಳಿದೆ,ಯಾವುದೇ ಭಾವನೆ ಇಲ್ಲದೇ. ಆದರೆ,ನನ್ಗೆ ಗೊತ್ತಿತ್ತು,ಅದು ಅವಳೇ ಅಂತ.ಅವಳು ಕರೆ ಮಾಡಿದಕ್ಕೆ ನಾನು ಸಂಭ್ರಮಿಸಲೂ ಇಲ್ಲ,ಆಶ್ಚರ್ಯ ಪಡಲೂ ಇಲ್ಲ.

“ ನಾನು” ಅಂದಳು.

“ ನಾನು ಅಂದ್ರೆ,ಹೆಸರಿಲ್ವಾ?”ಮರು ಪ್ರಶ್ನೆ ಎಸೆದೆ.

“ನಾನು.............ಅಂತ,ನಿನ್ಗೆ .........ಆಗಬೇಕು”ಹೀಗೆ ಏನೋ ಹೇಳಿದಳು.ಆದರೆ ನನ್ಗೆ ಅವಳ ಹೆಸರು ಮತ್ತು ನಮ್ಮ ಸಂಬಂಧದ ಬಗ್ಗೆ ಹೇಳಿದಾಗ,ಯಾಕೋ ಮ್ಯೂಟ್ ಮಾಡಿದ ಪಿಕ್ಚರಿನ ಸೀನ್ ತರಹ ಏನೂ ಕೇಳಿಸಲೇ ಇಲ್ಲ.

“ ಹ್ಞುಂ,ಹೇಳು” ಅಂದೆ,ಬೇಕಂತಲೆ,ಬಹುವಚನದಲ್ಲಿ ಮಾತನಾಡಲಿಲ್ಲ.

“ ಚೆನ್ನಾಗಿದ್ದೀಯಾ?”

“ ಬದುಕಿದ್ದೇನೆ.”

“ ಮದುವೆ ಆಯ್ತಂತೆ,ನಾನೇಳಿರಲಿಲ್ವ,ನಿನ್ಗೆ ನಂಗಿಂತ ಒಳ್ಳೆ ಹುಡ್ಗಿ ಸಿಕ್ತಾಳೆ ಅಂತ,ಟೀಚರ್ ಅಂತೆ.”ಅಂದಳು.

“ ನಿಂದೂ ಮದುವೆ ಆಯ್ತಾ?”ಸುಮ್ನೆ ಏನೋ ಒಂದು ಕೇಳಬೇಕು ಅಂತ ಕೇಳಿದೆ.

“ ಹೌದು ಆಯ್ತು,ನಮ್ಮನೆವರು ಎಲ್.ಐ.ಸಿ.ಯಲ್ಲಿ ಡಿ.ಓ.” ಅಂದಳು.

“ಸರಿ” ಅಂದೆ.

“ ಎಲ್ಲಿದ್ದೀಯಾ? ” ಯಾವಾಗ ಕೇಳಬೇಕಿತ್ತೋ ಅವಾಗ ಕೇಳಿರಲಿಲ್ಲ.ಈಗ ಈ ಪರಿಯ ಪ್ರಶ್ನೆ.

“ ಯಾಕೆ? ನಿನ್ನಿಂದ ದೂರಾನೆ,ಇದ್ದೀನಿ ಬಿಡು”,ಅಂತಂದು ಮುಖಕ್ಕೆ ಹೊಡೆದ ಹಾಗೆ ಹೇಳಿದೆ.

“ನಿಂದು,ಅಪಾಯಿಂಟ್ ಆಯ್ತಂತೆ?ನೀನೂ ಟೀಚರ್ ಅಂತೆ?”

“ ಹೌದು”.ಅರ್ಧಕ್ಕೆ ತುಂಡರಿಸಿದೆ.

“ ಓ.ಕೆ.ಬ್ಯೂಸಿ ಇರೋ ಹಾಗೆ ಕಾಣುತ್ತೆ,ಇದೇ ನನ್ನ ನಂಬರ್ ಸೇವ್ ಮಾಡ್ಕೋ ಬಾಯ್”.ಅಂದಳು.

ಅಯ್ಯೋ,ದುರ್ವಿಧಿಯೆ,ಇದೇನು ನಿನ್ನ ಮಾಯ ಜಾಲ,ಬಳಲಿ ಬೆಂಡಾಗಿ ಬಸವಳಿದಾಗ,ಅವಳು ಇನ್ನಿಲದಂತೆ ಕಾಡಿದಳು.ಈಗ ಬೇಡವೆಂದರೂ,ಅವಳೇ ಬಂದು ಕಾಲಿಗೆ ತೊಡರುತ್ತಿದ್ದಾಳೆ.ನಂಬರ್ ಸೇವ್ ಮಾಡಲಾ?ನನ್ನವಳಿಗೆ ಗೊತ್ತಾಗದ ಹಾಗೆ,ಇದನ್ನು ಗುಪ್ತವಾಗಿ ಮುಂದುವರೆಸಲಾ?ಹಳೆಯ ಸಲುಗೆಯಿಂದ ಅವಳಿಗೆ ಪುನಃ ಹತ್ತಿರವಾಗಲಾ?

ಮದುವೆಗೂ ಮುಂಚೆ ನನ್ನವಳಿಗೆ ಅವಳ ಬಗ್ಗೆ ಹೇಳಿದಾಗ,”ನೋಡ್ರಿ,ಪಾಸ್ಟ್ ಈಸ್ ಪಾಸ್ಟ್.ಹಿಂದೆ ಏನಾಗಿತ್ತು,ಅದು ನಂಗೆ ಬೇಡ.ಇನ್ಮುಂದೆ ನೀವು ನನ್ನವರು ಮಾತ್ರ ಅಷ್ಟೇ.”ಅಂದಿದ್ದಳು.ಮದುವೆಯಾಗಿ ಕೆಲವು ದಿನಗಳ ನಂತರ “ಆದರೆ ಮುಂದೆ ಎಂದಾದರೂ ಅವಳು ವಾಪಾಸ್ಸು ಬಂದು,ನಂಗೆ ನೀನು ಬೇಕೆ ಬೇಕು ಅಂದ್ರೆ,ನನ್ನನ್ನು ಬಿಟ್ಟು ಅವಳೆ ನಿಮ್ಮ ಚಾಯ್ಸ್ ಆಗಿರುತ್ತಾಳೆ ಅಲ್ವಾ ?”ಅಂತ ಗೇಲಿ ಮಾಡಿ ನಕ್ಕಿದ್ದಳು.ಅವಳ ಆ ನಗು ನಂಗೆ,ಬೆಂಕಿ ಹಾಗೆ ಸುಡಲು ಪ್ರಾರಂಭಿಸಿತು,ಆದರೆ ನಿಜವಾಗಲೂ ಸುಟ್ಟಿದ್ದು,ಸಿಗರೇಟ್ಟಿನ ಕೊನೆಯ ಬಿಟ್ ದಾಟಿ ಬಂದ ಬೆಂಕಿ.ಜೋರಾಗಿ ಕೈ ಕೊಡವಿ,ಸಿಗರೇಟ್ ಬಿಸಾಕಿದೆ.

ಹೆಸರಿಲ್ಲದವನು ನಾನು, ಪ್ರೇಯಸಿಯ ಅಂತಃಪುರ ಹಸಿರು ಮಾಡಲಾ?ಅಥವಾ ಮುತ್ತು,ಮುತ್ತು ಅಂತ ನನ್ನನ್ನೇ ನೆಚ್ಚಿ ಬಂದು, ಮದುವೆಯಾಗಿ ವರ್ಷ ತುಂಬುವುದರೊಳಗೆ,ಬಸಿರಾಗಿ,ಹೆರಿಗೆಯಾಗಿ,ಮಗು ಕಳೆದುಕೊಂಡು,ಬರಿದಾದ ಮಡಿಲಲ್ಲಿ,ಅಕ್ಷರಶಃ ಹುಚ್ಚಿಯಾಗಿದ್ದಾಳೆ.ನನ್ನವಳ,ಆ ಹುಚ್ಚನ್ನು ಇನ್ನಷ್ಟು ಹೆಚ್ಚಿಸಲೇ?,ಮಸಣವಾದ ನನ್ನವಳ ಬಾಳಲ್ಲಿ ಚಿಂತೆಯ ಚಿತೆಯಾಗಲೇ? ಅಥವಾ ಮಡಿಲಲ್ಲಿ ಮಗುವಾಗಲೇ!.

ಅವಳ ಜೀವನದಲ್ಲಿ ನನ್ನ ಪಾತ್ರಕ್ಕೆ ,ಒಂದು ಹೆಸರಿಲ್ಲ.ಆದರಿವಳೋ ಮುಂದೆ ಹುಟ್ಟುವ ನಮ್ಮ ಮಕ್ಕಳ ಹೆಸರ ಮುಂದೆ ನನ್ನ ಹೆಸರನ್ನು ಸೇರಿಸಿ,ಅವರನ್ನು ಉತ್ತಮ ಪ್ರಜೆಗಳನ್ನಾಗಿ ಮಾಡಬೇಕೆಂದು ಕನಸು ಕಾಣುತ್ತಿರುವವಳು.ನನ್ನ ಹೆಸರು ನನ್ನವಳಿಗೆ ಕುಲ ತಿಲಕ.ರಾಜ ವೈಭವ.ಮದುವೆಯಾದ ಕ್ಷಣದಿಂದ ತನ್ನ ಹೆಸರ ಮುಂದೆ ನನ್ನ ಹೆಸರನಿಟ್ಟು ಮೆರೆಸಿದವಳು.

ಗೆದ್ದಲು ತಿಂದ ಹೃದಯವನ್ನು ದೈವ ಮಂದಿರ ಮಾಡಿ ಪೂಜಿಸಿದ ನನ್ನವಳ ಪ್ರತಿಮೆಯ ಮುಂದೆ,ಅವಳ ನೆನಪು,ಮುಸುಕಾಗಲು ಪ್ರಾರಂಭಿಸಿತು.ಕಾಲುಗಳು ನನ್ನವಳನ್ನು ಸೇರುವ ಕಾತರದಿಂದ,ಆ ಕಡೆ ನಡೆಯಲು ಪ್ರಾರಂಭಿಸಿದವು.ಅವಳಿಂದ ಬಂದ,ಕರೆಯ ನಂಬರ್ರಿನಲ್ಲಿಯ ಅಂಕಿಗಳು ಮನದ ಪಟದಿಂದ ಒಂದೊಂದೇ ಅಳಿಸಿ ಹೋಗಲು  ಪ್ರಾರಂಭಿಸಿದವು.

ನಿಂತ ನೀರ
ಕಲಕಬೇಡಿ ಕಲ್ಲುಗಳೆ.
ಹೂದಳಗಳ 
ಇರಿಯಬೇಡಿ ಮುಳ್ಳುಗಳೆ.
ಎಂಬ ಎದೆಯ ಹಾಡು,ಎಲ್ಲಿಂದಲೋ ತೇಲಿ ಬರ್ತಾ ಇತ್ತು.

 - ಜ್ಯೋತಿ ಕುಮಾರ್.ಎಂ(ಜೆ.ಕೆ.).
ವಿಳಾಸ:-ಜ್ಯೋತಿ ಕುಮಾರ್.ಎಂ(ಜೆ.ಕೆ.)
ಶ್ರೇಯಾಂಕ್  ನಿಲಯ
ಮುದ್ದಣ್ಣ  ಬಡಾವಣೆ
A.P.M.C.ಹಿಂಭಾಗ 
ಜಗಳೂರು
ದಾವಣಗೆರೆ-ಜಿಲ್ಲೆ.
9972397103
jkdear007@gmail.com

ಒಂದು ಸಿನಿಮಾದ ಹಿಂದಿನ ಕಥೆ (ಸಣ್ಣ ಕತೆ) - ಜಯಶ್ರೀ ಹಿರೇಮಠ.

ಡಾಕ್ಟರ. ಬಸಲಿಂಗಯ್ಯ ಹಿರೇಮಠ ಆಯುರ್ವೇದ ವೈದ್ಯಕೀಯದಲ್ಲಿ ಎತ್ತಿದ ಕೈ,  ಸಿದ್ಧ ಹಸ್ಥರಿದ್ದರು.  ಅವರ ಬಾಲ್ಯವನ್ನು  ಗದಗಿನ ಪುಟ್ಟರಾಜ ಗುರುಗಳ ಆಶ್ರಮ, ಆಶ್ರಯದಲ್ಲಿ  ಕಳೆದಿದ್ದರು.  ಗೆಳೆಯರೊಬ್ಬರ ಕೋರಿಕೆ ಮೇರೆಗೆ ಮತ್ತು ಮಕ್ಕಳ ವಿದ್ಯಾಭ್ಯಾಸದ ಸಲುವಾಗಿ ಮೈಸೂರ್ ಗೆ ಹೋದರು.  ನಂತರ ಬೆಂಗಳೂರಿಗೆ ಬಂದು ನೆಲೆಸಿದರು. ಅವರಿಗೆ ಮೂರು ಜನ ಹೆಣ್ಣು ಮಕ್ಕಳು ಮತ್ತು ಇಬ್ಬರು ಗಂಡು ಮಕ್ಕಳು.  ಹಿರಿಯವಳೆ ಜಯಾ ಆಕೆ ತುಂಬಾ ಧೈರ್ಯಶಾಲಿ ತಂದೆಯ ಗರ್ವ.  ಜಯಾಳನ್ನ ಧಾರವಾಡದಲ್ಲಿ  ನೌಕರಿ ಮಾಡುತ್ತಿದ್ದ  ವೀರೇಶ್ ಜೊತೆ ವಿದ್ಯಾಭ್ಯಾಸ ಮುಗಿದ ನಂತರ ಜಯಾ ಮದುವೆ ಮಾಡಿದ್ದರು. 
ಜಯಾಗೆ ಇಬ್ಬರು ಮಕ್ಕಳು ಒಂದು ಹೆಣ್ಣು ಒಂದು ಗಂಡು.  ಮಗಳು ಸುಷ್ಮಾ ರಾಣಿ,  ಮಗ ರುದ್ರಮುನಿ, ಇಬ್ಬರೂ ಶಾಲೆಯಲ್ಲಿ  ನಂಬರ್ ಒನ್.  ಮಗಳು PUC ಕಲಿಯುವಾಗ NCC ಕೆಡೆಟ್,  ಅಲ್ಲದೆ ಸಾರ್ಜೆಂಟ್ ಕೂಡ  B SC, MSC , ಮಾಡಿದ ಮೇಲೆ ಒಂದು ವರ್ಷ ಕಾಲೇಜೊಂದರಲ್ಲಿ  ಲೆಕ್ಚರರ್ ಆಗಿ ನೌಕರಿ ಮಾಡುತ್ತಿದ್ದಾಗ  ಅವಳಿಗೆ ಒಂದು ಒಳ್ಳೇ ಮನೆತನದ ವರ  ಶಿವಾನಂದ್ ನ ಜೊತೆ ಮದುವೆ ಆಯಿತು.  ಅವಳಿಗೆ ಒಬ್ಬ ಗಂಡು ಮಗ ಆದಿತ್ಯ . ಆದಿತ್ಯ ಎಂದರೆ ಜಯಾಗೆ ಪಂಚ ಪ್ರಾಣ.   ಆದಿ ಅವಳಮ್ಮ ಕಲಿಸಿದಂತೆ ಜಯಾನ್ನ ಬೇಬಿ ಎಂದೇ ಕರೆಯುತ್ತಿದ್ದ. 

ಇನ್ನು  ಮಗ ರುದ್ರ  ಸ್ಕೌಟ್ ನಲ್ಲಿದ್ದ ಪ್ರತೀ ಆಟದಲ್ಲೂ ಫಸ್ಟ್. ಯೋಗ, ಕರಾಟೆ, ಡಾನ್ಸ್ ಹೀಗೆ ಆಲ್ ರೌಂಡರ್ ಆಗಿದ್ದ .  ಅವನೂ  B B A ಮುಗಿಸಿದ.  ರುದ್ರನಿಗೆ  ಸಿನಿಮಾದಲ್ಲಿ ಹೀರೋ ಆಗುವ ಮಹದಾಸೆ.  ಅವನು ಬೆಳೀತಾ ಬೆಳೀತಾ ಅವನ  ಆಸೆಯೂ ಬೆಳೆದು ಹೆಮ್ಮರವಾಯ್ತು.  ಮನೆಯಲ್ಲಿ ತಂದೆಯ ಸಮ್ಮತಿ ಇರಲಿಲ್ಲ.  ಮಗಳ ಗಂಡ ಶಿವು , ರುದ್ರನ ಆಸೆಗೆ ಬೆಂಬಲ ನೀಡಿದ. 

      ಶಿವು    2020 ನವೆಂಬರ್ 28 ರ ಶೆನಿವಾರ ರಾಣಿ ಮತ್ತು ಆದಿತ್ಯನ  ಜೊತೆ ಧಾರವಾಡಕ್ಕೆ ಬಂದರು.  ಜಯಾಗೆ  ಬಹಳ ಖುಷಿ ಆಯ್ತು.  ಶಿವು ಊಟ ಮಾಡಿದ ನಂತರ ರುದ್ರುನ್ನ ಕರಕೊಂಡು ಹೊರಗೆ ಹೋದ ನಂತರವೇ ಜಯಾಗೆ ಗೊತ್ತಾಯ್ತು ವಿಷಯ ಏನು ಅಂತ.   ಶಿವು ತನಗೆ ಪರಿಚಯವಿದ್ದ ಸಿನಿಮಾ ನಿರ್ಮಾಪಕರೊಬ್ಬರ ಪರಿಚಯ ಮಾಡಿಸಲು ರುದ್ರುನ್ನ ಕರ್ಕೊಂಡು ಹೋದದ್ದು ಅಂತ. 
  
  ರುದ್ರು ಡಿಗ್ರಿ ಮಾಡುತ್ತಿರುವಾಗಲೇ  ಮಾಡೆಲಿಂಗ್.   ಕ್ಷೇತ್ರದಲ್ಲಿ ಹೆಸರು ಮಾಡಿದ್ದ  ಬೆಂಗಳೂರಿನಲ್ಲಿ.    "ಅಭಿನಯ ಚಕ್ರವರ್ತಿ ಸುದೀಪ್ "ಅವರ ಹಾಗೇ ಅಭಿನಯ ಕೂಡ ಮಾಡುವುದನ್ನು ಒಮ್ಮೆ ಶಿವು ನೋಡಿದ್ದ.  ಅನಾಯಾಸವಾಗಿ ಧಾರವಾಡದಲ್ಲಿ ಶೂಟಿಂಗ್ ಸಲುವಾಗಿ ತಮ್ಮ ತಂಡದೊಟ್ಟಿಗೆ ಬಂದಿದ್ದ ಗೆಳೆಯರಿಗೆ ರುದ್ರನ ಪರಿಚಯ ಮಾಡಿಸಿದಾಗ,
ಅವರು ಮೊದಲೇ ಕರ್ಕೊಂಡು ಬರಬೇಕಿತ್ತು ಈ ಸಿನಿಮಾದಲ್ಲೇ ಹೀರೊ ಆಗಿ ತಗೋತಿದ್ದಿವಿ ಅಂತ ಮರುಗಿದರೆ...?     ಅಲ್ಲಿದ್ದವರೆಲ್ಲಾ  ರುದ್ರುನ್ನೆ ಹೀರೊ ಅಂತ ತಿಳಕೊಂಡಿದ್ರಂತೆ.  

    ಭಾನುವಾರ ಪ್ರದೀಪ್ ಅಂದ್ರೆ ನಿರ್ಮಾಪಕರು ಶಿವುಗೆ ಫೋನ್ ಮಾಡಿ ಮೀಟಿಂಗ್ ಇದೆ ನಿಮ್ಮ ಅಳಿಯನ್ನ ಕರ್ಕೊಂಡು ಬನ್ನಿ ಅಂತ ಹೇಳಿದ್ರಂತೆ  ಮತ್ತೆ ಇಬ್ಬರೂ ಶೂಟಿಂಗ್ ಸ್ಪಾಟ್ ಗೆ  ಹೋದರು.

ಜಯಾ ಮಾತ್ರ ಅವರು ಮನೆಗೆ ಯಾವಾಗ ಬರ್ತಾರೋ 
ಅಂತ ಚಾತಕ ಪಕ್ಷಿಯಂತೆ ಕಾಯ್ತಾ ಇದ್ದಳು. ಸಾಯಂಕಾಲ ಮನೆಗೆ ಬಂದು ಅತ್ತೆಯನ್ನು ನೋಡಿ ಶಿವು ಹೇಳಿದ ಧಾರವಾಡದಲ್ಲಿ ಶೂಟಿಂಗ್ ಮುಗಿಯುವ ತನಕ ರುದ್ರುಗೆ ಬರೋದಕ್ಕೆ ಹೇಳಿದ್ದಾರೆ  ಅತ್ತೆ  ಅಂತ
ಅಂದಾಗ.  ಜಯಾಗಂತೂ ಆಕಾಶ ಮೂರೇ  ಗೇಣು ಇದ್ದಂತೆ ಭಾಸವಾಯಿತು.  ಅಂತೂ ಇಂತೂ  ಮಗನ  ಆಸೆ ಈಡೇರುತ್ತೆ ಅಂತ.

ರುದ್ರ  ಅದೂ ಕೊರೋನಾ ಟೈಮ್ ನ್ನೂ ಲೆಕ್ಕಿಸದೆ ತನಗೆ ಇಷ್ಟವಾದ ಫೀಲ್ಡ್ ಗೆ ತೆರಳಿದ.   ಶಿವು,  ರಾಣಿನ್ನ ಮತ್ತು ಆದಿತ್ಯನ್ನ.   ಕರ್ಕೊಂಡು ಸಾಯಂಕಾಲ ತಮ್ಮ ಊರಿಗೆ ಹೊರಟೇ ಬಿಟ್ಟ. 

    ಆದಿತ್ಯ ಜಯಾಳ ಮುದ್ದಿನ ಮೊಮ್ಮಗ  ಅವ ಹೊರಟ ಅಂದ್ರೆ  ಸಾಕು ಆಕೆಗೆ ಏನೋ ಒಂದು ಥರ  ಕಳವಳ ಬೇಜಾರು ದುಃಖ  ಸಂಕಟ  ಒಂದು ಅಮೂಲ್ಯ ವಾದ  ವ್ಯಕ್ತಿ ತನ್ನಿಂದ ದೂರ ಹೋಗುತ್ತಾನೆ ಅನ್ನುವ ಆತಂಕ, ದುಗುಡ ಅಲ್ಲದೆ ಆದಿತ್ಯ ತಮ್ಮ ಊರಿಗೆ ಹೋದ ಮೇಲೆ ಎಲ್ಲಿ ತನ್ನನ್ನ ಮರೆತು ಬಿಡುತ್ತಾನೇನೋ ಅಂತ ಭಯ.......!?

          30/11/2020

ಬೆಳಿಗ್ಗೆ ಆರು ಗಂಟೆಗೆ ಸರಿಯಾಗಿ ರುದ್ರು  ಶೂಟಿಂಗ್
ಸೆಟ್ ಗೆ  ಹೋಗಿದ್ದ.   ಜಯಾ ಪೂಜೆ ಮಾಡಿ ಮುಗಿಸಿದಾಗ ರುದ್ರ ಶೂಟಿಂಗ್ ಗೆ ಹೋಗಿದ್ದು ಗೊತ್ತಾಯ್ತು.   ಮಧ್ಯಾಹ್ನ ಕಳೆಯಿತು,  ಸಾಯಂಕಾಲ ಆಯ್ತು ರಾತ್ರಿ ಆಯ್ತು.  ರುದ್ರ ಬರಲಿಲ್ಲ.
ಜಯಾಗೆ  ಕುತೂಹಲ....!   ರುದ್ರನ    ಮೊದಲ ದಿನದ
ಅನುಭವ ಹೇಗಿತ್ತು ?  ಕೇಳಲು ಕಾತುರದಿಂದ ಕಾಯ್ತಾ ಇದ್ದಳು  ಒಮ್ಮೇಲೆ ರಾತ್ರಿ 2 ಗಂಟೆಗೆ ಬಂದ ರುದ್ರ.
 
    ರುದ್ರ  ಹೇಳಪ್ಪಾ ನಿನ್ನ ಮೊದಲ ದಿನದ ಅನುಭವ ಹೇಗಿತ್ತು ಅಂತ.....!  ಆಗ ಅವನು ಹೇಳಿದ ಮಾತು ಕೇಳಿ ಜಯಾಳ ಗಂಟಲು ಉಬ್ಬಿತು, ಕಣ್ಣಾಲಿಗಳು ತುಂಬಿ ತುಳುಕಿತು. 

     ರುದ್ರ  ಬೆಳಿಗ್ಗೆ ಬೇಗ ಎದ್ದು ಹೋಗಿದ್ದಾಗ ಸೆಟ್ ನಲ್ಲಿ
ಕ್ಯಾಮರಾ ಮನ್ ,ಸೆಟ್ ಹಾಕುವವರು, ಕುಕ್ ಇನ್ನೂ. ತುಂಬಾ ಜನ ಬಂದಿದ್ದರಂತೆ.   ಆನಂತರ ಶೂಟಿಂಗ್ ಶುರುವಾಯ್ತು ಸುಮಾರು ಆರೇಳು ಗಂಟೆಯ ನಂತರ ವಿರಾಮ.   ಮತ್ತೆ ಶೂಟಿಂಗ್ ಶುರು.  ಅಂತೂ ರಾತ್ರಿ ಒಂದು ಗಂಟೆಗೆ ಪ್ಯಾಕಪ್ ಆದ ಮೇಲೆ  ಸ್ವಲ್ಪ ಹೊತ್ತು ನಿರ್ಮಾಪಕರು, ಚಿತ್ರ ತಂಡದ ಜೊತೆ ಮಾತಾಡಿ ಮನೆಗೆ ಬಂದಾಗ  ರಾತ್ರಿ ಎರಡು ಗಂಟೆ ಆಗಿತ್ತು.

    ರುದ್ರ ಬರುವುದನ್ನೇ ಎದುರು ನೋಡುತ್ತಿದ್ದ ಜಯಾಗೆ  ಕೆಟ್ಟ ಕುತೂಹಲ.  ರುದ್ರ  ಯಾರಿಗೂ ನಿರಾಶೆ ಮಾಡಲಿಲ್ಲ    ತನ್ನ ಅನುಭವ ಹೇಳಲು ಶುರು ಮಾಡಿದ .  ಬೆಳಿಗ್ಗೆ ಐದು ಗಂಟೆಗೆ ಸರಿಯಾಗಿ ಎದ್ದು ತಯಾರಾಗಿ ಆರು ಗಂಟೆಗೆ ಶೂಟಿಂಗ್ ಸ್ಪಾಟ್ ಗೆ ಹೋದೆ ಅಲ್ಲಿ ಎಲ್ಲರೂ ನನ್ನನ್ನ ತುಂಬಾ ಚೆನ್ನಾಗಿ ಮಾತಾಡಿಸಿದರು.   ಶೂಟಿಂಗ್ ನಡೆಯುವಾಗ ನಾನು ಒಂದು ಕಡೆ ನಿಂತು ಎಲ್ಲಾ ಗಮನಿಸಿದೆ.  ಮಧ್ಯ ವಿರಾಮ ಆಗುವ ತನಕ ಅಂದರೆ ಬರೋಬ್ಬರಿ ಆರು ತಾಸು ಆಗಿತ್ತು,  ಒಂಟಿ ಕಾಲ್ನಾಗ ನಿಂತಿದ್ದೆ ಕಾಲು ಭಾಳ ನೋವಾಯ್ತು ಅಂದಾಗ ಜಯಾಗೆ ತುಂಬಾ ಅಳು ಬಂತು.

     ರುದ್ರ ಅದನ್ನ ನೋಡಿ ಆಕೆಗೆ ಹೇಳಿದ ಮಮ್ಮೀ....! ಇದೇನು ಮಹಾ  ಅಲ್ಲ.  ಇದು ನನಗೆ ಇಷ್ಟವಾದ ಜಗತ್ತು.   ನಾನೇ ಅತೀ ಹತ್ತಿರದಿಂದ ಸಿನಿಮಾ
ಶೂಟಿಂಗ್ ನೋಡುವುದರಲ್ಲಿ ಮಗ್ನ ಆಗಿದ್ದು .
ಪ್ರದೀಪ್ ಅಣ್ಣಾ ಕೂತ್ಕೊಳ್ಳಿ  ಅಂತ ಹೇಳಿ ನನ್ನನ್ನ
ಎಲ್ಲರಿಗೂ ಮತ್ತೊಮ್ಮೆ ಪರಿಚಯ ಮಾಡಿಸಿದರು.
ಮೊನ್ನೆ ಶಿವು ಮಾಮ, ಬಸವಾರಾಧ್ಯ ಅಣ್ಣಾ
ನನ್ನನ್ನ ಪ್ರದೀಪ್ ಅಣ್ಣಾ ಅವರಿಗೆ ಪರಿಚಯ
ಮಾಡಿಸಿದ್ರಲ್ಲಾ .....! ಆಗ ಅವರೇನಂದರು ಗೊತ್ತಾ ?
ರುದ್ರ ನಮಗೆ ನೀವು ಮೊದಲೇ ಸಿಗಬೇಕಾಗಿತ್ತು  ಅಂತ.
ಸೆಟ್ ನಲ್ಲಿ ಇದ್ದವರೆಲ್ಲಾ   ನನ್ನನ್ನೇ ಹೀರೊ ಅಂತ
ತಿಳಿದು ಕೊಂಡಿದ್ದರು.  ಈ ಮಾತನ್ನು  ಶಿವೂನೂ ರುದ್ರನಿಗೆ ಹೇಳಿ ಇದನ್ನ ಉಳಿಸಿಕೊಂಡು ಹೋಗು ರುದ್ರ ಅಂತ ಹೇಳಿ ಹೋಗಿದ್ದನಂತೆ.

  ರುದ್ರ ಇದನ್ನೆಲ್ಲಾ ಹೇಳಿ ಮುಗಿಸುವ ಹೊತ್ತಿಗೆ ಬೆಳಿಗ್ಗೆ ಐದು ಗಂಟೆ .   ಎಲ್ಲರೂ ಮಲ್ಕೊಳ್ರಿ  ಇನ್ನು ಅಂದ.
ಬೆಳಕೇ ಆಯ್ತು ಇನ್ನೇನು ಮಲಗೋದು ಅಂತ ಜಯಾ
ಅಂದಾಗ .... ಇವತ್ತು  ನೀವು ನನ್ನ ದಾರಿ ಕಾದೀರಿ ....?! ಇನ್ನು ಮುಂದೆ ಕಾಯ್ ಬ್ಯಾಡ್ರಿ  ಈ ವಯಸ್ಸಿನಲ್ಲಿ ನಿಮಗೆ ರೆಸ್ಟ್ ಬೇಕು. ಅದೂ ಅಲ್ಲದೇ ನಾನೂ ಒಂದೆರಡು ತಾಸು ಮಲಗೆದ್ದು ಮತ್ತೆ ಶೂಟಿಂಗ್ ಗೆ  ಹೋಗ್ತೀನಿ, ಅಂತ ತಾಯಿಗೆ ಮಲಗಲು ಹೇಳಿ  ತನ್ನ ರೂಮಿಗೆ ಹೋದ.

      01/12/2020

ಜಯಾ ಏಳುವ ಹೊತ್ತಿಗಾಗಲೇ ರುದ್ರ ಶೂಟಿಂಗ್ ಗೆ
ಹೋಗಿದ್ದ  ಅವ ಮನೆಗೆ ಬರುತ್ತಿದ್ದ ಹಾಗೆ ಎಲ್ಲರ  ವಿಚಾರಣೆ ಶುರು.  ಇವತ್ತು ಹ್ಯಾಗಿತ್ತು  ನಿನ್ನ  ಅನುಭವ.  ರುದ್ರ ಹೇಳಿದ ಇವತ್ತು ನಿರ್ಮಾಪಕರ ಮಗ ನನ್ನೊಟ್ಟಿಗೆ ಎಷ್ಟು ಹಚ್ಕೊಂಡು ಮಾತಾಡಿದ ಆಗ ಅಲ್ಲಿದ್ದವರೆಲ್ಲಾ ನೀವಿಬ್ಬರೂ ಮೊದಲಿನಿಂದ ಪರಿಚಯಾನ...?  ಅಂತ ಕೇಳಿದರು.
ಜಯಾ  ಅವನ ಮಾತು ತುಂಡರಿಸಿ ಕೇಳಿದಳು ಇದೇ
ಸಿನಿಮಾದಲ್ಲಿ ನಿಂಗೆ ಆಕ್ಟ್ ಮಾಡಲು ಅವಕಾಶ ಸಿಗುತ್ತಾ.....?  ಅಂದಾಗ ರುದ್ರ ಹೇಳಿದ ಇಲ್ಲ.....! ತಾಯಿಗೆ ಬಹಳ ನಿರಾಶೆ ಆಯ್ತು.  ಈ ಸಿನಿಮಾ ಈಗ ಅರ್ಧ ಶೂಟ್ ಆಗಿದೆ ಮುಂದಿನ ಸಾರಿ ನನಗೆ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿ ಮುಗಿಸಿದ.  ಮತ್ತೆ ನೀನು ದಿನಾ ಹೋಗೋದು ನೋಡಿ ನಿನಗೂ ಅವಕಾಶ
ಕೊಟ್ಟಾರೇನೊ .....? ಅನ್ಕೊಂಡಿದ್ದೆ ,  ನೀನು ನಿರ್ಮಾಪಕರಿಗೆ ಹೇಳಿಲ್ಲನು........ ? ನೀನು  ಮಾಡೆಲಿಂಗ್ ಕ್ಷೇತ್ರದಲ್ಲಿ ಹೆಸರು ಮಾಡಿದ್ದು , ಹೇಳಬೇಕಿತ್ತು .  ಅಂದಾಗ ರುದ್ರ ಹೇಳಿದ.  ಶಿವು ಮಾಮ ಎಲ್ಲಾ ಹೇಳಿದ್ದಕ್ಕೆ ಅವರು ನನಗೆ ಅಲ್ಲಿ ಹೋಗಿ ಅನುಭವ ಆಗ್ಲಿ ಅಂತ  ಶೂಟಿಂಗ್ ಸ್ಪಾಟ್ ಗೆ ಹೋಗೋಕೆ  ಅನುಮತಿ ಕೊಟ್ಟಿರೋದು
ಅಂದು ಮಾತು ಮುಗಿಸಿದ.  ಜಯಾಳ ಪೆಚ್ಚು ಮೋರೆ
ನೋಡಿ ರುದ್ರ ಆಕೆಗೆ  ಸಮಾಧಾನ ಮಾಡ್ತಾ ಹೇಳಿದ
ತಡೀರಿ ಈ ಕೊರೋನ ಟೈಮ್ ಮುಗೀಲಿ ಅವಕಾಶ ಜಾಸ್ತಿ ಸಿಗುತ್ತೆ.   ಅಂತ ಹೇಳಿ ಮಲಗಲು ಹೋದ.

03/12/2020

ರುದ್ರ ಬೆಳಿಗ್ಗೆ ಬೇಗ  ಹೋಗೋದು ರಾತ್ರಿ ಶೂಟಿಂಗ್
ಪ್ಯಾಕಪ್  ಆದ ಮೇಲೆ ಬರುವುದು ಜಯಾಳಿಗೀಗ ಅಭ್ಯಾಸ ಆಗಿಬಿಟ್ಟಿತು.    ಆದ್ರೆ  ಇವತ್ತು ಒಂದು ಸರ್ಪರೈಸ್ ಇತ್ತು  ರುದ್ರ ಶೂಟಿಂಗ್ ಹೊರಟ ದಿನದಿಂದ ಜಯಾ ಯಾವಾಗಲೂ ಫೋನ್ ಮಾಡಿ  ಅವನಿಗೆ ತೊಂದರೆ ಕೊಟ್ಟಿರಲಿಲ್ಲ.  ಅವ ಮನೆಗೆ ಬಂದ ಮೇಲೆ ಜಯಾಗೆ ಹೇಳಿದ ಹಿರೇಮಠ್...! 
ರುದ್ರ ಜಯಾ ಮೇಲೆ ಪ್ರೀತಿ ಜಾಸ್ತಿ ಆದಾಗ, ಇಲ್ಲಾ ತುಂಬಾ ಬೇಜಾರು ಮಾಡಿಕೊಂಡಗಲೆಲ್ಲಾ ಸರ್ ನೇಮ್  ಹಚ್ಚಿ  ಕರೆಯುತ್ತಿದ್ದ.  ದಿನಾಲೂ ನೀವು ಕೇಳ್ತಾ ಇದ್ರಿ....! ಇವತ್ತು ಕೇಳಲೇ ಇಲ್ಲ.....?  ನೋಡ್ರಿ ಇವತ್ತು ನನಗೆ ಸಿನಿಮಾದಲ್ಲಿ ನಟಿಸಲು ಅವಕಾಶ ಕೊಟ್ಟರು, ನಂಗೆ  ಕಾಲೇಜ್ ಓರಿಯೆಂಟೇಶನ್ ಡೇ ನಲ್ಲಿ ಕಾಲೇಜ್ ಸ್ಟೂಡೆಂಟ್ ರೋಲ್ ಕೊಟ್ರು.  ಅಂತ ರುದ್ರ ಹೇಳಿದಾಗ  ಏನು ಸೀನಿತ್ತು..? ಎಂದು ಜಯಾ  ಕೇಳಿದಳು ಆಗ  ರುದ್ರ ಹೇಳಿದ.  ಹಿರೇಮಠ್ .....! ನೀವು ಸಿನಿಮಾ ರಿಲೀಸ್ ಆದ ಮೇಲೆ  ನೋಡುವರಂತೆ ಈಗ ನನ್ನನ್ನ ಏನು ಕೇಳಬಾರದಂತಪ್ಪ  ... .....! ಎಂದು ಹೇಳಿ ಮಾತು  ಮುಗಿಸಿದ.  ಇವತ್ತು ಗಟ್ಟಿಮೇಳಾ ಧಾರಾವಾಹಿಯಲ್ಲಿ ನಟಿಸುತ್ತಿದ್ದ ಶರಣ್ಯಳ ನೃತ್ಯ ಇತ್ತಂತೆ.  ಅದು ಒಂದು ಹಾರರ್ ಮೋವಿ ಡಿಸೆಂಬರ್16ರ ವರೆಗೂ ಶೂಟಿಂಗ್ ಇರುತ್ತೆ, ನಂತರ ದಾಂಡೇಲಿಯಲ್ಲಿ  ಶೂಟಿಂಗ್ ಮುಂದುವರಿಯುತ್ತದೆ ಎಂದು ರುದ್ರ ಹೇಳಿದ .  ಅಜೇಯ್ ಮತ್ತು ಅವರ ತಂದೆ ರುದ್ರನ್ನ  ದಾಂಡೇಲಿಗೂ ಬನ್ನಿ ಎಂದು ಹೇಳಿದರಂತೆ.
ಬರೋಣ ಬಿಡಿ ಸಾರ್ ಎಂದು ಹೇಳಿ ಬಂದನಂತೆ.

ರುದ್ರ ಹೀಗೇ ಶನಿವಾರದ ತನಕ ಹೋದ.  ಭಾನುವಾರ
ರಜೆ.   ಮತ್ತೆ ಸೋಮವಾರದಿಂದ ಶುಕ್ರವಾರ ತನಕ
ಹೋಗುವುದು ಬರುವುದು ಮನೆಯವರಿಗೀಗ ಅಭ್ಯಾಸ ಆಗಿಬಿಟ್ಟಿತು ಜಯಾ ಒಮ್ಮೆ ನಮ್ಮನ್ನೂ ಶೂಟಿಂಗ್ ನೋಡಲು ಕರ್ಕೊಂಡು ಹೋಗು ಅಂತ ಕೇಳಿದಳು.  ಈಗ ಬೇಡ ಮಮ್ಮಿ ಎಂದಾಗ ಹೋಗಲಿ .....!  ನಮ್ಮೂರಿನಲ್ಲಿ ಶೂಟಿಂಗ್ ಗೆ  ಬಂದಾರಲ್ಲಪ್ಪ.....!  ಅವ್ರನ್ನಾದ್ರೂ ಮನೀಗೆ ಒಮ್ಮೆ ಊಟಕ್ಕೆ ಕರಿ ಅಂದಳು ಅದಕ್ಕೆ ಅವನು ಆಯ್ತು ಅಂದ.  ಇವತ್ತು ರುದ್ರನ  ಜೊತೆ ಸಂಜೆ ಅವನ ಫ್ರೆಂಡ್ ಕೂಡ ಶೂಟಿಂಗ್ ನೋಡಲು ಹೋಗಿದ್ದನಂತೆ ಆರು ಗಂಟೆಗೇ ಶೂಟಿಂಗ್ ಮುಗಿಸಿ ಇನ್ನೋವಾ ಕಾರಿನಲ್ಲಿ ಇವರ್ದ್ದೊಂದು ಟೀಮ್ ನ ಕರ್ಕೊಂಡು  ಹೊರಗಡೆ ಹೋಗಿ ಊಟ ಮಾಡಿ ಬಂದೆವು ಎಂದು  ಹೇಳಿದ ರುದ್ರ.  ಅಪೂರ್ವ ರುದ್ರನ ಫ್ರೆಂಡ್  ಅವನೂ ರುದ್ರನ ಬಗ್ಗೆ ತನಗೇನು ಗೊತ್ತಿತ್ತೋ  ಅದನ್ನ ಅಲ್ಲಿದ್ದವರಿಗೆಲ್ಲಾ ಹೇಳಿದ್ದ.    ಶನಿವಾರ ಮತ್ತೆ ಅಜೇಯ್ ಫೋನ್ ಮಾಡಿದ ಮೇಲೆ ರುದ್ರ ಹೋಗಿ ಬಂದ.    ಇವತ್ತು ರಾತ್ರಿ 10.30 ಕ್ಕೆ   ಮನೆಗೆ ಬಂದ . ಇವತ್ತು ಎಲ್ಲರೂ ಒಟ್ಟಿಗೇ ಊಟ ಮಾಡಿದೆವು .
ನಂತರ ಜಯಾ  ಮತ್ತೊಮ್ಮೆ ರುದ್ರನಿಗೆ  ಹೇಳಿದಳು. ಅವರೆಲ್ಲಾ ಹೋಗುವುದರೊಳಗೆ ಒಂದು ಸಾರಿ ನಮ್ಮಮನೆಗೆ  ಕರಿ ಅವರೂ ಉತ್ತರ ಕರ್ನಾಟಕದ ಊಟ ಮಾಡ್ಲಿ  ಅಂದಳು  ಆಗ ರುದ್ರ ಹೇಳಿದ  ನಾಳೆ 13, ಭಾನುವಾರ ರಜೆ.  ಸೋಮವಾರ ಕೇಳಿ ನಿಮಗೆ ಹೇಳ್ತಿನಿ ಬಿಡಿ ಅಂದ.
       
             ರುದ್ರ ಸೋಮವಾರ ಸಂಜೆ ಹೋಗಿದ್ದ ಸಂದರ್ಭದಲ್ಲಿ ನಿರ್ಮಾಪಕರು  ಫುಲ್ ಬಿಜಿ, ಹಾಗೇ
ಬಂದ. 15 ರಂದೂ ಹಂಗೇ ಆಯ್ತು.  ಮತ್ತು ಆವತ್ತೇ
ಶೂಟಿಂಗ್ ಕಡೇ ದಿನ ಕೂಡ ಆಯ್ತು.  16 ರಂದು,    ಎಲ್ಲರೂ ರುದ್ರನಿಗೆ ಮತ್ತೆ ಬರೋಣ... ..!ಬನ್ನಿ ಸಾರ್  ಅಂತ ಹೇಳಿದಾಗ.  ರುದ್ರ ಅವರನ್ನೆಲ್ಲಾ ವೀವ್ ನೋಡಲು ಕಲ್ಕೇರಿಗೆ ಕರ್ಕೊಂಡು ಹೋಗಿ ಬಂದ ನಂತರ ಅವರೆಲ್ಲರಿಗೂ ಹೋಟೆಲ್ ನಲ್ಲಿ ಊಟ ಮಾಡಿಸಿದ ಮೇಲೆ ಮನೆಗೆ ಬಂದ.  ಬಂದವನೇ ಮಮ್ಮಿ ಇವತ್ತು ನಾವೆಲ್ಲಾ ಕ್ರಿಕೇಟ್ ಕೂಡ ಆಡಿದೆವು. ಅಂದ ಸರಿ ಬಿಡು ಎಲ್ಲರಿಗೂ ಧಾರವಾಡದ ಪರಿಚಯ ಮಾಡಿಸಿದೆ ಅಂದೆ ಹೂಂ ಎಂದು ಹೇಳಿ ಮಲಗಲು ಹೋದ.

             17/12/2020.

ಇವತ್ತು ರುದ್ರ ಬೆಳಿಗ್ಗೆ 8 ಗಂಟೆ ಗೇ ಹೋಗಿದ್ದ .   ಡೈರೆಕ್ಟರ್  ಕೂಡ ಇವರ ಜೊತೆ ಕ್ರಿಕೇಟ್ ಆಟ ಆಡಿ ಟೈಮ್ ಪಾಸ್ ಮಾಡಿ ಸಂಜೆ ಬೆಂಗಳೂರಿಗೆ ಪ್ರಯಾಣ
ಬೆಳೆಸಿದರಂತೆ.  ಅಂತೂ ಅವರಿಗೆ ಸೆಂಡ್ ಆಫ್
ಮಾಡಿಯೇ ಬಂದ್ಯನಪಾ ......? ಅಂದಳು ಜಯಾ   ಯೆಸ್ ......!.  ಇನ್ನು ನನ್ನ ಟೈಮ್ ಗಾಗಿ ಕಾಯಬೇಕು.  ಭರತ್ ಅಂದ್ರೆ ಡೈರೆಕ್ಟರ್ ಹೋಗುವಾಗ ನೀವು ನಮ್ಮ ಮನಸ್ಸಲ್ಲಿ  ಇರ್ತಿರಾ ಬಿಡಿ ಸಾರ್ ಎಂದು ಹೇಳಿ ಹೋದರಂತೆ.  ಎಷ್ಟು ದೊಡ್ಡ ಮಾತು.....!

ಅಂತೂ ಇಂತೂ ರುದ್ರನ ಆಸೆಗೆ ಗರಿ  ಮೂಡಿದ ಹಾಗೇ
ಆಯ್ತು..... ಇನ್ನು ಈ  ಗಂಡು ನವಿಲು ಗರಿಬಿಚ್ಚಿ ಕುಣಿಯವುದನ್ನು ನೋಡಬೇಕು ಅನ್ನುವುದೇ ತಾಯಿಯ ಮಹದಾಸೆ.
      ರುದ್ರ ಸಿನೆಮಾದಲ್ಲಿ ಆಕ್ಟ್ ಮಾಡುವ  ಆಸೆಯನ್ನ ತಂದೆಗೆ ತಿಳಿಸಿದಾಗ ಆಯ್ತು ಒಂದು ವರ್ಷ ಟೈಮ್ ಕೊಡ್ತೀನಿ  ನಾನು ತಿಂಗಳಿಗೆ 15000/- ರೂ. ಅಷ್ಟೇ ಕೊಡುತ್ತೇನೆ ಅಂದಾಗ ರುದ್ರ ಅದಕ್ಕೊಪ್ಪಿದ.  ಬೆಂಗಳೂರಿನಲ್ಲಿದ್ದ ತನ್ನ ಗೆಳೆಯನ ಜೊತೆ ಶೇರಿಂಗ್ ನಲ್ಲಿ ಇರತೊಡಗಿದ.  ಅವರಪ್ಪ ಎರಡೇ ತಿಂಗಳಿಗೆ ದುಡ್ಡು ಕೊಡುವುದು ನಿಲ್ಲಿಸಿದರು.  ಆಗ ರುದ್ರ  ಮತ್ತೆ ಎರಡು ತಿಂಗಳು ಕಾದ ಪ್ರಯೋಜನ ಆಗಲಿಲ್ಲ.   ಕಡೆಗೆ ಅವ ಫಸ್ಟ್ ಸೋರ್ಸ್ ಎಂಬ UK ಕಂಪನಿಯಲ್ಲಿ  CSA ಆಗಿ ನೌಕರಿ ಮಾಡುತ್ತಲೇ.  ತನ್ನ ತಾಯಿಯ ಫ್ರೆಂಡ್ ಗೆ ಗೊತ್ತಿರುವ ಡೈರೆಕ್ಟರ್ ಕಡೆಯಿಂದ ಸಿನಿಮಾ ಒಂದರಲ್ಲಿ ಒಂದು ಒಳ್ಳೇ ಅವಕಾಶ ಸಿಕ್ಕಿತು.  ಅದರಲ್ಲಿ ಸೆಕೆಂಡ್ ಹೀರೋ ಆಗಿದ್ದ.  ಹೀಗೆ ಒಂದರಿಂದ,  ಒಂದು ಒಟ್ಟು ಐದು ಸಿನಿಮಾದಲ್ಲಿ ಆಕ್ಟ್ ಮಾಡಿದ್ದಾನೆ.  ಅದೂ ಶಿಫ್ಟ್ ನೌಕರಿ ಮಾಡುತ್ತಾ.  
     ರುದ್ರ  ತನ್ನ ಹೆಸರಿಗೆ ತಕ್ಕಂತೆ ಇದ್ದವನು ಈಗ ತುಂಬಾ ಬದಲಾಗಿದ್ದಾನೆ.  ಚಿಕ್ಕವನಿದ್ದಾಗಿನಿಂದಲೂ ಅವನಿಗೆ ತುಂಬಾ ಜವಾಬ್ದಾರಿ.  ತಂದೆ ತಾಯಿ ಅಕ್ಕ...... ಅಂತಾ. ಹೀಗೆ...ಜೀವನದಲ್ಲಿ  ನಡೆದ ಘಟನೆಗಳಿಂದ ಆದ
ಅನುಭವ ಅವನನ್ನು ತುಂಬಾ ದೊಡ್ಡ ವ್ಯಕ್ತಿಯನ್ನಾಗಿ
ಮಾಡಿತ್ತು.   " ಯಾವ ವಿಶ್ವ ವಿದ್ಯಾಲಯವು ಕಲಿಸದ ಪಾಠವನ್ನು ಜೀವನ ಕಲಿಸಿತ್ತು ".
  
      ಹೇಗೋ ಜೀವನ ಸಾಗಿಸುತ್ತಿದ್ದ  ಒಮ್ಮೆಲೇ  ಅವನ ತಾಯಿಗೆ ತುಂಬಾ ಸೀರಿಯಸ್ ICU ನಲ್ಲಿ ರೆಡ್ ಝೋನ್ ನಲ್ಲಿ ಇರಿಸಿದ್ದು ಕೇಳಿ ರುದ್ರ ರಾತ್ರೋ ರಾತ್ರಿ  ಪ್ರಯಾಣ ಬೆಳೆಸಿದ.   31  ಮೇ 2023  ಅಡ್ಮಿಟ್ ಆಗಿ ಎರಡು ದಿನ ಏನೂ ಪ್ರಜ್ಞೆಯೇ ಇಲ್ಲ.   ಜೂನ್ 1ರಂದು ಆಕೆ ಮದುವೆಯಾದ ದಿನ ಗಂಡ ಬಂದು ಮಾತಾಡಿದ್ದು ಅರಿವಿಲ್ಲ.   ಮಗಳು ಬಂದಾಗಲೂ ಏನು ಮಾತಾಡಿದ್ದು ಗೊತ್ತಿಲ್ಲ.  ಅಳಿಯ ಬಂದಾಗ  ಸ್ವಲ್ಪ ತಿಳಿಯಿತು.  ಈಗ ಇಬ್ಬರು ಮೊಮ್ಮಕ್ಕಳು ಜಯಾಗೆ.  ಮಗಳು ,ಅಳಿಯ  ಜಯಾಗೆ ಸಮಾಧಾನ ಹೇಳಿ ನೀವು ಡಿಸ್ಚಾರ್ಜ್ ಆದ ಮೇಲೆ ಬರ್ತೀವಿ ಎಂದು ಹೇಳಿ ಹೋದರು .

      ರುದ್ರ ತಾಯಿ ಡಿಸ್ಚಾರ್ಜ್ ಆಗಿ ಮನೆಗೆ ಬಂದ ಮೇಲೆ ಅವ ಹೇಳಿದ್ದು ಇಷ್ಟೇ.    "  ಮಮ್ಮಿ ನಾನು ಮುಂದೆ ಒಂದು ದಿನ ದೊಡ್ಡ ವ್ಯಕ್ತಿ ಆಗೇ ಆಗ್ತೀನಿ "  ಆದರೆ ಅದನ್ನ ನೋಡೋಕೆ ನೀವೇ ಇಲ್ಲ ಅಂದ್ರ....? " ನಾನು  ಯಾಕ ಇಷ್ಟು ಕಷ್ಟ ಪಡಬೇಕು ".....? ನೀವು  ಇಷ್ಟು ವರ್ಷ ಕಷ್ಟ ಪಟ್ಟೀರಿ ...!  ನಮಗೂ ಒಳ್ಳೇ ಕಾಲ ಬಂದೇ ಬರುತ್ತ.  ಕಾಯಬೇಕು ಅಷ್ಟೇ ಅಂತ ಧೈರ್ಯ ಹೇಳಿ   ಮತ್ತೆ ಬೆಂಗಳೂರಿಗೆ  ಹೋದ.
     ಜಯಾ  ಒಂದು ಶಾಲೆಗೆ ಟೀಚರ್ ಕೆಲಸಕ್ಕೆ ಹೊರಟಳು.   ಈಗಲೂ ಮಗನಿಗೆ ಅದೃಷ್ಟದ  ಬಾಗಿಲು ತೆರೆಯುತ್ತದೆ ಎಂದು ಕಾಯುತ್ತಾ ಕುಳಿತಿರುವಳು......


- ಪ್ರೊ. ಜಯಶ್ರೀ ಹಿರೇಮಠ,
ಆಯುರ್ವೇದ ಮತ್ತು ಜಾನಪದ ವೈದ್ಯರು
ಮತ್ತು ಸಾಹಿತಿ,
ಧಾರವಾಡ -580009.
ಮೋ.  9449819425.

ನಿನಗಾರು ಸಾಟಿ (ಕವಿತೆ) - ಶ್ರೀ ಮುತ್ತು. ಯ. ವಡ್ಡರ.

ಮಮತೆಯಿಂದ ಪ್ರೀತಿಸುವ ತಾಯಿ ನಿನಗಾರು ಸಾಟಿ
ಕಾಳಜಿಯಿಂದ ನೋಡಿಕೊಳ್ಳುವ ತಂದೆ ನಿನಗಾರು ಸಾಟಿ
ಹೆಗಲಿಗೆ ಹೆಗಲು ನೀಡುವ ಸಹೋದರ ನಿನಗಾರು ಸಾಟಿ
ಕಷ್ಟಕ್ಕೆ ಸ್ಪಂದಿಸುವ ಸಹೋದರಿ ನಿನಗಾರು ಸಾಟಿ

ಹಸಿದವರಿಗೆ ಅನ್ನ ನೀಡುವ ರೈತರೆ ನಿಮಗಾರು ಸಾಟಿ
ನೊಂದವರಿಗೆ ನೆರಳಾಗುವ ಆಶ್ರಯದಾತರೇ ನಿಮಗಾರು ಸಾಟಿ
ಅಕ್ಷರ ಕಲಿಸುವ ಗುರುಗಳೇ ನಿಮಗಾರು ಸಾಟಿ
ಪ್ರಾಣ ಹೊತ್ತೆ ಇಟ್ಟು ದೇಶ ಸೇವೆ ಮಾಡುವ ಯೋಧರೆ ನಿಮಗಾರು ಸಾಟಿ 

ಇಡೀ ವಿಶ್ವಕೆ ಬೆಳಕು ನೀಡುವ ಸೂರ್ಯನೇ ನಿನಗಾರು ಸಾಟಿ
ಪ್ರತಿಯೊಬ್ಬರ ಬದುಕಿಗೆ ಉಸಿರಾದ ಗಾಳಿಯೇ ನಿನಗಾರು ಸಾಟಿ
ಜೀವ ಉಳಿಸುವ ಅಮೃತ ಜಲವೇ ನಿನಗಾರು ಸಾಟಿ

ಸಾವಲ್ಲೂ ಜೊತೆನಿಲ್ಲುವ ಸ್ನೇಹಿತನೇ ನಿನಗಾರು ಸಾಟಿ
ಬದುಕಿನಲಿ ಕೈ ಹಿಡಿದು ಬಾಳುವ ಸತಿ ನಿನಗಾರು ಸಾಟಿ 
ಭಾರ ಹೊತ್ತು ಸಲಹುತಿರುವ ಭೂತಾಯಿ ನಿನಗಾರು ಸಾಟಿ
ಅಮೃತದ ಹಾಲು ನೀಡುವ ಗೋಮಾತೆ ನಿನಗಾರು ಸಾಟಿ. 

- ಶ್ರೀ ಮುತ್ತು. ಯ. ವಡ್ಡರ
(ಶಿಕ್ಷಕರು, ಹಿರೇಮಾಗಿ)
ಬಾಗಲಕೋಟ
Mob-9845568484

ಹಣತೆ ಹಬ್ಬ (ಕವಿತೆ) - ಸದ್ದಾಂ ತಗ್ಗಹಳ್ಳಿ.

ಎತ್ತ ನೋಡಿದತ್ತ ಚಿತ್ತ ಸೆಳೆದಿದೆ
        ಮನೋಲ್ಲಾಸ ಬೀರಲು
ಎತ್ತಣ ಸಾಗಿದರು ಕಣ್ತೆರೆಸುತಿದೆ
 ಹುರುಪಿನ ಬೆಳಕ ಚೆಲ್ಲಲು

ಕತ್ತಲೆಯಿಂದ ಬೆಳಕಿನತ್ತ ಸಾಗಿದೆ
ಹೊಸತನವ ಕಂಡುಕೊಳ್ಳಲು
ಅಜ್ಞಾನದಿಂದ ಸುಜ್ಞಾನದೆಡೆಗೆ ಸಾಗಿದೆ
       ಬದುಕಿನೂದ್ದಕ್ಕೂ ನೆಮ್ಮದಿ ಪಡೆಯಲು

ಹಚ್ಚಿದ ಹಣತೆಯಿಂದ ಕಾಂತಿ ಸೂಸಿದೆ
ಮನದಿಂದಾದರವ ಪಡೆಯಲು
ಕ್ರೂರತೆಯಿಂದ ಮಮತೆ ಸೃಷ್ಠಿಸಿದೆ
ಭಾವ ಸಮ್ಮಿಲನದಿಂದಿರಲು

ಅಂಧಕಾರ ತೊರೆದು ಜ್ಯೋತಿ ಚೆಲ್ಲಿದೆ
ಸತ್ಯ ಸನ್ಮಾರ್ಗವ ಸೃಷ್ಠಿಸಲು
ಮಿಂಚುತ್ತಾ ಹೊಳೆಯತ್ತಾ ಹರಡಿದೆ
ಸಂತಸದ ಹಾದಿ ಸುಲಭವಾಗಿಸಲು

ಅಷ್ಟ ದಿಕ್ಕುಗಳಲ್ಲೂ ಆವರಿಸಿದೆ
      ನವಾವತಾರವ ತೋರಿಸಲು
ಭಕುತಿಯಿಂದ ಪಾದಕ್ಕೆ ನಮಿಸಿದೆ
ಸುಖ ಶಾಂತಿ ಪಡೆಯಲು.

- ಸದ್ದಾಂ ತಗ್ಗಹಳ್ಳಿ

ಕಲ್ಪನಾ ಲೋಕ (ಕವಿತೆ) - ರೂಪ ಅಶೋಕ್.

ಮಿತಿಯಿಲ್ಲದೆ ವಿಹರಿಸಿದೆ ಕಲ್ಪನಾ ಲೋಕದಲ್ಲಿ
ಬಾಲ್ಯದ ಕೆಲ ಸಮಯ ಕೊಳ್ಳುವ ಆಸೆಯಲ್ಲಿ
ಭಾವನೆಗಳ ಮಹಪೂರದ ಚಿತ್ತ ಸಂತೆಯಲ್ಲಿ
ನನಗರಿಯದೆ ನಕ್ಕು ನಲಿದು ಅಂತರಂಗದಲ್ಲಿ

ನಿನ್ನದೇ ನೆನಪಲ್ಲಿ ಗುನುಗುನಿಸಿದೆ ಪದದಲ್ಲಿ 
ಕೈಗೆಟುಕುದ ಆಸೆಗೆ ಕಾಲ್ಪನಿಕ ರೂಪದಲ್ಲಿ
ಕೋಗಿಲೆಯಂತೆ ಹಾಡಿದೆ ನನ್ನೊಳ ಮನದಲ್ಲಿ
ಹಗಲಿರುಳು ನೀ ಬಯಸಿದ್ದು ಹೃದಯದಲ್ಲಿ

ಗಳಿಸಿದೆ ಪ್ರತಿದಿನ ಪ್ರೀತಿಯ ಹೆಸರಲ್ಲಿ
ಕುಣಿದಾಡಿದೆ ಮಾಯೆ ಮನಸ್ಸಿನ ಜಂತೆಯಲ್ಲಿ
ಎಂದೂ ಮರೆಯದಿರಲಿ ನನ್ನ ಚಿತ್ತದಲ್ಲಿ
ನಲಿದಿದೆ ಆಂತರ್ಯ  ಮುಸ್ಸಂಜೆಯಲ್ಲಿ

ಅನಿಸುತಿದೆ ಯಾಕೋ ರವಿಯಂತೆ ಮಿಂಚಲು
ಸೂರ್ಯನಂತೆ ಉರಿಯುವ ಆಸೆ ಮೊದಲು
ಜೀವನ ನೌಕೆಯಲ್ಲಿ ಆವರಿಸಿದ್ದಾಗಿದೆ ಕತ್ತಲು 
ಕಾತರಿಸಿದೆ ಮನ ಸಂಪೂರ್ಣತೆ ಹೊಂದಲು

- ರೂಪ ಅಶೋಕ್.

ಜಗಕೆಲ್ಲ ಒಬ್ಬ (ಕವಿತೆ) - ಭಾಗ್ಯಮ್ಮ ಎಸ್ ಅಡವಿ.

ಜಗಕೆಲ್ಲ ಒಬ್ಬ
ನಮ್ಮಲ್ಲಿ ನೀನೊಬ್ಬ
ನಿನ್ನ ಜನನ
ನಮಗೆಲ್ಲ ಜೀವನ

ಜಾತಿ ನೋಡಲಿಲ್ಲ
ಜ್ಯೋತಿಯ ಬೆಳಗಿದೆ
ಮೋತಿ ನೋಡಲಿಲ್ಲ
ಮಾನವನಾಗಿ ಸಿದೆ

ಜಾತಿಯ ಗುಡಿ ನೋಡಲಿಲ್ಲ
ಗೀತೆಯ ಪದ ಕೇಳಲಿಲ್ಲ
ಸಮಾನತೆಯ ನಗೆ ಬೀರಿ
ಜಗಕೊಬ್ಬ ನೀನಾದೆ.

ಬಾಸ್ಕರ ಅಂದರ
ಭ್ಯಾಸರಕಿ ಒಡ್ಯದ
ಕೆಂಪಾಗಿ ಕಂಡಾಗ
ತಂಪಾಗಿ ಕುಂತೇವಿ.

- ಭಾಗ್ಯಮ್ಮ ಎಸ್ ಅಡವಿ.

ಕನ್ನಡ ಬಳಸಿ ಕನ್ನಡ ಉಳಿಸಿ (ಲೇಖನ) - ಮಾನಸ. ಎಂ., ಸೊರಬ.

ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು.
  ಪ್ರಕೃತಿಯೇ ಸ್ವರ್ಗ ಎನ್ನಿಸುವಷ್ಟು ಹಸಿರಿನಿಂದ ಮೈದುಂಬಿಕೊಂಡು ಸೃಷ್ಟಿಯ ಅದ್ಭುತಕ್ಕೆ ಸಾಕ್ಷಿಯಾದ ಕಪ್ಪು ಮಣ್ಣಿನ ನಾಡು ನಮ್ಮ ಕರುನಾಡು. ಕರ್ನಾಟಕ ಎಂದರೆ ಒಂದು ಸಂಸ್ಕೃತಿ. ವಿಶ್ವವೇ ಬೆರಗಾಗಿ ನೋಡುತ್ತಿರುವ ಪರಂಪರೆಯ ಸೊಬಗು. ಕರುನಾಡು ಭಾವೈಕ್ಯತೆಯ ಬೀಡು.ಈ ನಾಡಿನಲ್ಲಿ ಹುಟ್ಟುವುದೇ ಪುಣ್ಯ. ಈ ನಾಡಿನ ಮಣ್ಣಿನಲ್ಲಿ ಕರುಣೆ ಇದೆ, ಪಾವಿತ್ರ್ಯತೆ ಇದೆ, ಶಕ್ತಿ ಇದೆ.
ಶತಮಾನದಿಂದ ಹಂಚಿ ಹೋಗಿದ್ದ ನಮ್ಮ ಕರ್ನಾಟಕ ಒಂದು ಗೂಡಿ ವಿಶಾಲ ಮೈಸೂರು ರಾಜ್ಯ ಉದಯವಾಗಿ 1973 ನವೆಂಬರ್ 1 ಮೈಸೂರ್ ರಾಜ್ಯ ಕರ್ನಾಟಕ ಎಂದು ನಾಮಕರಣವಾಯಿತು. ನಮ್ಮ ಕನ್ನಡಕ್ಕೆ ಸಾವಿರ ವರ್ಷಗಳ ಇತಿಹಾಸ ಇದೆ.
ಕನ್ನಡದ ಸಾಹಿತ್ಯ ಪರಂಪರೆ, ಇತಿಹಾಸ, ಸಂಸ್ಕೃತಿ,ಕಾವ್ಯ ಆಚಾರ ವಿಚಾರ ನಮ್ಮ ಕನ್ನಡದ ಹಿರಿಮೆ , ಸಾಧು,ಸಂತರು, ದಾಸರು, ಶಿವ ಶರಣರು, ಕವಿಗಳು ನಮ್ಮ ನಾಡಿನ ಹೆಮ್ಮೆ ಕನ್ನಡದ ಹೆಮ್ಮೆ. ಜಗತ್ತಿನಲ್ಲಿ ಎಲ್ಲಿಯೂ ಇರದ ಶಿಲ್ಪಕಲೆ ನಮ್ಮ ನಾಡಿನಲ್ಲಿದೆ.
ನಮ್ಮ ಕನ್ನಡ ಪರಿಪೂರ್ಣ ಭಾಷೆ. 
ನಮ್ಮ ಕನ್ನಡ ಕನ್ನಡಿಗರ ಮಾತೃ ಭಾಷೆ ಕರ್ನಾಟಕದ ರಾಜ್ಯ ಭಾಷೆ. 
ನಾವು ಮಾತನಾಡುದ್ದನ್ನ ಬರೆಯಬಹುದು , ಬರೆದದ್ದನ್ನು ಓದಬಹುದಾದ ಒಂದು ಸುಂದರ ವಿಶಿಷ್ಟ ಭಾಷೆ.ನಮ್ಮ ಕನ್ನಡ ಭಾಷೆ ಕೇವಲ ಒಂದು ಭಾಷೆಯಲ್ಲ ಅದು ಕನ್ನಡಿಗರ ಭಾವನೆ ಯೋಚನೆ ಮಾಡುವ ರೀತಿ.
ನಮ್ಮ ಕನ್ನಡ ಭಾಷೆ ಜಗತ್ತಿನ ನಾಲ್ಕುವರೆ ಸಾವಿರ ಭಾಷೆಗಳಲ್ಲಿ ಅತ್ಯಂತ ಶ್ರೀಮಂತ ಭಾಷೆ. ಭಾರತದ ಪುರಾತನ ಭಾಷೆಗಳಲ್ಲಿ ಒಂದು ನಮ್ಮ ಕನ್ನಡ. ಕನ್ನಡ ಭಾಷೆ ಅಭಿಜಾತ ಭಾಷೆಯೆಂಬ ಸ್ಥಾನಮಾನವನ್ನು ಕೇಂದ್ರ ಸರ್ಕಾದಿಂದ ಪಡೆದಿದೆ. ನಮ್ಮ ಭಾರತದ ಶಾಸ್ತ್ರೀಯ ಸ್ಥಾನಮಾನ ಪಡೆದ 3ನೇ ಭಾಷೆ ನಮ್ಮ ಕನ್ನಡ. ವೈಜ್ಞಾನಿಕವಾಗಿ ಅತ್ಯಂತ ಸ್ಪಷ್ಟತೆ ಇರೋ ಭಾಷೆ. 
ಕನ್ನಡ ಲಿಪಿಯನ್ನು ಆಚಾರ್ಯ ವಿನೋಬಾ ಭಾವೆಯವರು "ಜಗತ್ತಿನ ಲಿಪಿಗಳ ರಾಣಿ"  ಎಂದು ಕರೆದಿದ್ದಾರೆ ಅಂತಹ ಸುಂದರ ಭಾಷೆಯ ನಾಡು ನಮ್ಮದು. 
     ಇಂತಹ ಪುರಾತನ ಇತಿಹಾಸ ಸಂಸ್ಕೃತಿ ಇರುವ ನಮ್ಮ ಕನ್ನಡ ನಮ್ಮಿಂದ ದೂರವಾಗಿ ಇಂದು ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಜಾಗೃತವಾಗಬೇಕಿದೆ .ಇಂದಿನ ಯುವ ಜನಾಂಗ ಕನ್ನಡ ಬಗ್ಗೆ ಕೀಳರಿಮೆ ಇಂದ ನಿತ್ಯ ಜೀವನದಲ್ಲಿ ಕನ್ನಡವು ದೂರ ಉಳಿಯುವಂತಾಗಿದೆ. ಕನ್ನಡಿಗರಿಂದಲೇ ಕನ್ನಡಕ್ಕೆ ಭಯವಾಗುತ್ತಿದೆ.ಕನ್ನಡಿಗರೇ ಕನ್ನಡಕ್ಕೆ ಇಂದು ಶತ್ರುಗಳಾಗಿಬಿಡಬಹುದು.ಎರಡೂವರೆ ಸಾವಿರ ವರ್ಷದಿಂದ ಉಳಿದ ನಮ್ಮ ಕನ್ನಡ ಇಂದು ಮರುಗುತ್ತಿದೆ. ಕನ್ನಡಿಗರು ಮನಸ್ಸು ಮಾಡಿದರೆ ಮಾತ್ರ ಉಳಿಸಬಹುದಾದ ಸ್ಥಿತಿಗೆ ಬಂದಿದೆ. ಜ್ಞಾನ ಸಂಪಾದನೆಗೆ ಬೇರೆ ಭಾಷೆ ಬೇಕು ಅಷ್ಟೇ. ನಮ್ಮ ಕನ್ನಡ ಉಳಿಸುವುದು ನಮ್ಮ ಕರ್ತವ್ಯವಾಗಿದೆ.
ನಮ್ಮ ಭಾಷೆ ನಮ್ಮ ನಾಡಿನ ಬಗ್ಗೆ ಹೆಮ್ಮೆ ಇರಲಿ. ಎಂದೂ ನಾವು ನಮ್ಮ ಭಾಷೆಯನ್ನು ಬಿಟ್ಟು ಕೊಡದೆ ಗೌರವಿಸಿ ಉಳಿಸಬೇಕಿದೆ. ನಿತ್ಯ ಜೀವನದಲ್ಲಿ ಕನ್ನಡವನ್ನು ಬಳಸಬೇಕು.  ಮತ್ತೊಮ್ಮೆ ಕನ್ನಡದ ಬಗ್ಗೆ ಹೆಮ್ಮೆ ಮತ್ತು ಗೌರವ ಇರಲಿ ಎಂದು ಹೇಳುವೆ.ಇದು ಒಂದು ದಿನಕ್ಕೆ ಸೀಮಿತವಾಗದೆ ನಿತ್ಯ ಉತ್ಸವವಾಗಿ ರಾರಾಜಿಸಬೇಕು. ಕನ್ನಡವನ್ನು ಬಳಸಬೇಕು. ಕನ್ನಡ ಭಾಷೆಯ ಬಗ್ಗೆ ಅಭಿಮಾನ ಗೌರವ ಇರಲಿ. ಕನ್ನಡವನ್ನು ಉಳಿಸೋಣ ಕನ್ನಡವನ್ನು ಬೆಳೆಸೋಣ.
ಕಲಿಯೋಕೆ ಕೋಟಿ ಭಾಷೆ ಆಡೋಕೆ ಒಂದೇ ಭಾಷೆ ಕನ್ನಡ ಕನ್ನಡ ಕಸ್ತೂರಿ ಕನ್ನಡ.
ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ
ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು.
ಕನ್ನಡವೇ ಸತ್ಯ ಕನ್ನಡವೇ ನಿತ್ಯ.

- ಮಾನಸ. ಎಂ., ಸೊರಬ.

ನಾನು ಕನ್ನಡದ ಕಂದ (ಕವಿತೆ) - ಹಿಮಂತರಾಜ.

ನಾನು ಕನ್ನಡದ  ಕಂದ
ಏನು ಮುನ್ನುಡಿ ಚಂದ
ಹಂಪಿ ನಾಡಿನ ಕುವರ
ಚಂದನ ವನ ಸುಂದರ||ಪ||

ಹರಿಹರನ ಪುಣ್ಯಭೂಮಿ
ರಾಘವಾಂಕ ಧನ್ಯಭೂಮಿ
ತುಂಗಭದ್ರೆಯ ಮನುಜ
ಕಾಣು ಕಾಳುಗಳ ಕಣಜ||ಚ||

ಮುತ್ತುರತ್ನ ಅರಳಿದ್ದವು
ಬಂಗಾರಬೆಳ್ಳಿ ಚೆಲ್ಲಿದ್ದವು
ಅಕ್ಕಬುಕ್ಕ ಸಾಮ್ರಾಜ್ಯವು
ಬೆಟ್ಟಗುಡ್ಡ ಅವಿಭಾಜ್ಯವು||ಚ||

ಜ್ಞಾನಪೀಠದ ಬಹುಮಾನ
ಚಾಮುಂಡಿಯ ಅಭಿಮಾನ
ಕೋಲಾರದ ಚಿನ್ನದಗಣಿ
ಕನ್ನಡನಾಡಿನಲಿ ಕಣ್ಮಣಿ||ಚ||

      - ಹಿಮಂತರಾಜ.

ಸಡಗರಕೆ ಕುಂದಿಲ್ಲ (ಚಿತ್ರ ಕವನ) - ಕಮಲಾಭಿತನಯೆ.

ಕರಕುಶಲ ಕಲೆಯಿಂದ, 
ಮಜಬೂತು ಕಟ್ಟಿಗೆಯ ಕಂಬ ತೊಲೆಗಳಿಂದ ಅಲಂಕೃತ 
ಮನೆಯ ಮಕ್ಕಳು, ಸೊಸೆಯರು/

*ದೀಪಾವಳಿ* ಎಂದು ಸಂಭ್ರಮದಿ ಸೇರಿಹರು ಅಕ್ಕರೆಯಲಿ ಸುಳಿದಾಡಿ ನಗುವ ತುಂಬುವರು/

ಮನೆ ತುಂಬ ಇರುವ ಹಿರಿಯರು,ಮಕ್ಕಳಿಗೆ ಬಗೆ ಬಗೆಯ ಅಡುಗೆ ಮಾಡಿಹರು/

ಸಹಕಾರ -ಸೌಹಾದ೯ತೆಯಲಿ ಕೆಲಸ ಪೂರೈಸಿ,  ತುಸು ಬಿಡುವ ಕಂಡಿಹರು/

ಊಟಕ್ಕೆ ಬರಲಿರುವ ಹಿರಿಯರು,ಮಕ್ಕಳಿಗೆ ಕಾದಿಹರು/

ಕೆಲಸದ ಆಯಾಸ ಇನಿತೂ ತೋರದು, ಮೊಬೈಲ್ ಫೋಟೋದ ಹುಮ್ಮಸ್ಸು ಉಕ್ಕಿಹುದು/

ಚಂದಾಗಿ ಇಣಕಲ್ ಸೀರೆ -ತಕ್ಕ ಆಭರಣ ತೊಟ್ಟು,
ಒತ್ತಾಗಿ ಕೂತಿಹರು,ಸಂತೃಪ್ತಿಯ ನಗೆ ಬೆಳದಿಂಗಳು ಚೆಲ್ಲಿಹುದು/

ಹೆಂಗಳೆಯರೇ ಹಾಗೆ, ಹನಿ ನೀರಿಗೆ ಅರಳಿ ನಗುವ ಪ್ರಕೃತಿಯಂತೆ/

ಫೋಟೋ ಆಯಿತು;
 ಮನೆ ಮಂದಿಗೆಲ್ಲ ಉಣಲಿಕ್ಕಿ, ಉಂಡು ಮಲಗಿ ಎದ್ದರೆ ನಿಶ್ಚಿಂತೆ/

ಮನೆ ಹಿರಿಯರ ಆದರ, ಯಜಮಾನರ ಪ್ರೀತಿ ಇರಲು, ಇರುವ ಮನೆಯೇ ಅರಮನೆಯಂತೆ,
ಇರದು ಅಲ್ಲಿ ಯಾವುದೇ ಚಿಂತೆ/

 - ಕಮಲಾಭಿತನಯೆ
ಶ್ರೀಮತಿ ರೇಖಾ ನಾಡಿಗೇರ ಹುಬ್ಬಳ್ಳಿ

ಡಾ// ಸಿ.ಆರ್. ಚಂದ್ರಶೇಖರ್ ಅವರ'ಆತಂಕ, ಖಿನ್ನತೆ ಮತ್ತು ಗೀಳು ಮನೋರೋಗ' (ಪುಸ್ತಕ ಪರಿಚಯ) - ಮಾಣಿಕ್ ಪಾಂಚಾಳ ಕಲಬುರಗಿ.

ನಾನು ಈ ಥರ ಪುಸ್ತಕ ಮೊದಲಬಾರಿ ಓದುಲತಿನಿ ಈ ಬುಕ್ ಓದಲು ಕಾರಣ ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಯುವಜನರು ಖಿನ್ನತೆಯಿಂದ ಬಳಲುತ್ತಿದ್ದಾರೆ. ಅದಕ್ಕೆ ಇದರೆ ಬಗ್ಗೆ ಇನ್ನಷ್ಟು ತಿಳಿಯಲು ಈ ಪುಸ್ತಕ ಓದುತಿದ್ದೇನೆ. ಮೊದಲು ನಾನು ಈ ಪುಸ್ತಕ ನೋಡಿದಾಗ ಇದರಲ್ಲಿ ಖಿನ್ನತೆಗೆ ಒಳಗಾದವರ ಲಕ್ಷಣಗಳು, ಕಾರಣಗಳು ಮತ್ತು ಅವರನ್ನು ಗುರುತಿಸುವುದರ ಬಗ್ಗೆ ಇರಬೌದು ಅಂತ ತಿಳಿದಿದ್ದೆ . ಹಾಗೆ ಈ ಪುಸ್ತಕ ಸುಮ್ನೆ ಓದುತ್ತಾ ಹೋದೆ ಮೊದಲು ನೋಡಿದ್ದು ಮಾನಸಿಕ ರೋಗದ 12 ಸೂತ್ರಗಳು ಓದಿದೆ ಆವಾಗ ಇವು ನನಗೆ ಮ್ಯಚ ಆಗುತ್ತೆ ಅಂತ ಇವುಗಳನ್ನ ನನ್ನ ಜೀವನದಲ್ಲಿ ನಾಬಿ ಪಾಲಿಸಬೇಕು ಅಂತ ಅನ್ಕೊಂಡೆ ಹೀಗೆ ಓದುತ್ತಾ ಹೋದಂತೆ ಕೊನೆಯಲ್ಲಿ ಆತಂಕ ಮತ್ತು ಭಯದ ಬಗ್ಗೆ ಓದುವಾಗ ನನಗೆ ಹಾಗೇನೂ ಅನಿಸಲಿಲ್ಲ ಹಾಗೆ ಓದುತ್ತಾ ಹೋದಂತೆ ಅಲ್ಲಿ ಆತಂಕ ಮತ್ತು ಭಯ ಜ್ಞಾಪಕ ಶಕ್ತಿಯ ಮೇಲೆ ಹೇಗೆ ಪ್ರಭಾವ ಬೀರಿವೆ ಮತ್ತು ಅದನ್ನು ಹೆಚ್ಚಿಸುವುದು ಹೇಗೆ ಎಂದು ಓದ ಬೇಕಾದರೆ ಮೊನ್ನೆ ನನ್ ತಮ್ಮ ನನಗೆ ಇದರ ಬಗ್ಗೆ ಕೇಳಿದ್ದ ಹಾಗೆ ನೆನಪಾಗಿ ನಾನು ಬುಕ್ ತೊಗೊಂಡು ಅವನ್ ಬಲ್ಲಿ ಹೋದ ಅವನಿಗೆ ಈ ಪುಸ್ತಕದಲ್ಲಿ ಕೊಟ್ಟಿರುವ ಜ್ಞಾಪಕ ಶಕ್ತಿ ಹೇಗೆ ಹೆಚ್ಚಿಸಬೇಕು ಎಂದು ವಿವರವಾಗಿ ತಿಳಿಸಿದೆ ಆವಾಗ ಅವನು ಒಂದು ಪ್ರಶ್ನೆ ಕೇಳಿದ ಆಗ ನಾನು ಹಿಂದೆ ಓದಿದ ಎಲ್ಲಾ ಪುಟಗಳು ನೆನಪಾದವು ಆಗ ನನಗೆ ಈ ಪುಸ್ತಕದಲ್ಲಿ ಏನಿದೆ ಎಂದು ತಿಳಿತು. ಆಗ ನಾನು ಅವನಿಗೆ ಹೇಳಿದೆ ಆತಂಕ ಮತ್ತು ಖಿನ್ನತೆ ಅಂದ್ರೆ ಏನು ಅದರಾಗ 6-7 ವಿಧಗಳಿವೆ ಎಂದು ನನಗೂ ಗೊತ್ತಿರಲಿಲ್ಲ ಆಗ ಅವನು ಕೇಳಿದ ನಂತರ ನಾನು ಓದಿದು ನೆನಪಾಯಿತು. ನಾನು ಅವುಗಳ ಬಗ್ಗೆ ಅವನಿಗೆ ಹೇಳಿದೆ ಖಿನ್ನತೆ , ಆತಂಕ ಮತ್ತು ಭಯ ಇವುಗಳ ಲಕ್ಷಣಗಳು , ಕಾರಣಗಳು ಮತ್ತು ಪರಿಹಾರ ಬಗ್ಗೆ ತಿಳಿಸಿ ಹೇಳಿದೆ. ಅವನಿಗೆ ಹೇಳಿದ ನಂತರ ನನಗೂ ಸ್ವಲ್ಪ ಕುತೂಹಲದಿಂದ ಮುಂದೆ ಓದಿದೆ ಅದರಲ್ಲಿ ಕೊನೆಯದಾಗಿ ದೇವರು ಮೈಮೇಲೆ ಬರೋದು, ದೆವ್ವ ಬರೋದು, ಮಾಟ, ಮಂತ್ರ ಮದ್ದು ಇದು ಯಾವುದೂ ಇರುವುದಿಲ್ಲ ಇದು ಒಂದು ಮಾನಸಿಕ ಒತ್ತಡದಿಂದ ಹೀಗಾಗುತ್ತದೆ ಅಂತ ತಿಳಿಯಿತು. ಇದಕ್ಕೂ ಮೊದಲು ನಾನು ಕೂಡ ದೆವ್ವ ಇರುತ್ತವೆ ಅಂತಾ ನಂಬಿದ್ದೆ. ಇಗ ಈ ಪುಸ್ತಕ ಓದಿದರಿಂದ ಇದೆಲ್ಲ ಸುಳ್ಳು ಇದು ಒಂದು ಮಾನಸಿಕ ರೋಗವಾಗಿದೆ. ನಾನು ಈ ಪುಸ್ತಕ ಓದಿ ಇಷ್ಟು ತಿಳಿದುಕೊಂಡಿದ್ದೇನೆ. ನನಗೆ ಈ ಮಾನಸಿಕ ಖಾಯಿಲೆಯ ಬಗ್ಗೆ ಇನ್ನಷ್ಟು ಓದುವ ಕುತೂಹಲ ಬಂದಿದೆ. ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಯುವಜನರು ಖಿನ್ನತೆಯಿಂದ ಬಳಲುತ್ತಿರುವುದರಿಂದ ಅದಕ್ಕೆ ಈ ಪುಸ್ತಕ ಎಲ್ಲಾ ಯುವಜನರು ಓದಲೇಬೇಕಿದೆ. ಧನ್ಯವಾದಗಳು ಸರ್.......

- ಮಾಣಿಕ್ ಪಾಂಚಾಳ ಕಲಬುರಗಿ.

ನಾವು ಒಬ್ಬೊಬ್ಬರು ಹಾರಬಲ್ಲವು ಪರಿಪೂರ್ಣತೆ ಸಾಧಿಸಬಲ್ಲವು (ಕೃತಿ ಪರಿಚಯ) - ಗೊರೂರು ಅನಂತರಾಜು, ಹಾಸನ.

ರವಿ ಕಾಣದ್ದನ್ನು ಕವಿ ಕಂಡ ಎಂಬ ಮಾತಿದೆ. ಕವಿ ತಾನು ಅನುಭವಿಸಿ ಬರೆದಿದನ್ನು ಓದುಗ ಕಂಡು ಕೊಳ್ಳುತ್ತಾನೆ. ಆತ ವಿಮರ್ಶಕನಾಗಿ ಕವಿಯ ಅಂತರಾಳ ಹೊಕ್ಕಿ ಕೃತಿಯ ವಸ್ತು ವಿಷಯ ಜೊತೆಗೆ ಕವಿಯ ಮನಸ್ಥಿತಿ ಪರಿಸ್ಥಿತಿ ಅರಿಯುತ್ತಾನೆ. ಸಾಹಿತಿಗಳ ಜೀವನ ಕ್ರಮ ಅವರು ಅನುಭವಿಸಿದ ಕಷ್ಟ ಕಾರ್ಪಣ್ಯಗಳ ನಡುವೆ ಅಳವಡಿಸಿಕೊಂಡ ಮೌಲ್ಯಗಳು ಅವರ ಜೀವನದಲ್ಲಿ ಘಟಿಸಿದ ಘಟನೆಗಳನ್ನು ಸಾಹಿತಿ ಹೇಗೆ ಓದುಗರಿಗೆ ನಿರೂಪಿಸಿದ್ದಾನೆ, ಅದು ಓದುಗನಿಗೆ ಹೇಗೆ ಪ್ರೇರಣೆಯಾಗಿದೆ. ಸಾಹಿತಿಗಳ ಕೃತಿ ಓದುವಿಕೆಯಲ್ಲಿ ನಮ್ಮ ಬದುಕು ಹೇಗೆ ಉತ್ತಮವಾಗಿಸಿಕೊಳ್ಳಲು ಮಾದರಿಯಾಗುತ್ತದೆ ಎಂಬುದನ್ನು ಹೆಚ್.ಕೆ.ಮಹೇಶ ಭಾರದ್ವಾಜ್‌ ತಮ್ಮ ಕವಿ ಕೃತಿಯಲ್ಲಿ ಜೀವನ ಪ್ರೀತಿಯಲ್ಲಿ ನಿರೂಪಿಸಿದ್ದಾರೆ. ಪ್ರಗತಿಪರ  ಕೃಷಿಕರಾಗಿ ಸಾವಯವ ಕೃಷಿ ಸಾಧನೆಗೆ ಪ್ರಶಸ್ತಿ ಪಡೆದವರು. ಕರ್ನಾಟಕ ರಾಜ್ಯ ಬರಹಗಾರರ ಸಂಘದ ರಾಜ್ಯಾಧ್ಯಕ್ಷ ಮಧು ನಾಯ್ಕ್ ಲಂಬಾಣಿ ರಾಜ್ಯ ಮಟ್ಟದಲ್ಲಿ ಒ೦ದು ಬೃಹತ್‌ ಕಾರ್ಯಕ್ರಮ ಆಯೋಜಿಸಿ ಕೃಷಿಕರು, ಸೈನಿಕರು, ಶಿಕ್ಷಕರು ಮೊದಲಾಗಿ ಸಾಧಕರನ್ನು ಗುರುತಿಸಿ ಸನ್ಮಾನಿಸಲು ಹಾಸನ ಜಿಲ್ಲೆಯಿಂದ ಹೆಸರು ಕೇಳಿದ್ದರು. ಮಹೇಶ್‌ ಹೆಸರನ್ನು ಕೃಷಿ ಕ್ಷೇತ್ರಕ್ಕೆ ಕಳಿಸಿದ್ದೆ. ಕಾರ್ಯಕ್ರಮ ನಡೆಯಬೇಕಾದಿದ್ದು ಹೂವಿನಹಡಗಲಿಯಲ್ಲಿ. ಅನಂತರಾಜ್ ಸಾರ್, ಅಷ್ಟು ದೂರದ ಪ್ರಯಾಣ ಕೃಷಿ ಕೆಲಸ ಬಿಟ್ಟು ಹೋಗುವುದು ಕಷ್ಟವಾಗುತ್ತದೆ ಎಂದಿದ್ದರು. ಕೃಷಿ ಕಾಯಕದ ಬಗ್ಗೆ ಎಷ್ಟೊಂದು ನಿಷ್ಟೆ ಭೇಷ್..! ಈ ಕಾರಣಕ್ಕೆ ಏನೋ ರಾಜ್ಯಾಧ್ಯಕ್ಷರು ದಕ್ಷಿಣ ಕರ್ನಾಟಕದ ಅರ್ಧ ಭಾಗವನ್ನು ನನಗೆ ವಹಿಸಿ ಅದು ಹಾಸನದಲ್ಲಿ ನಡೆದಿತ್ತು. ಮಹೇಶ್ ಕೃಷಿ ಕಾಯಕದಲ್ಲಿ ನಿಷ್ಟಾವಂತರು. ನಾನು ಎಷ್ಟೋ ಬಾರಿ ಯೋಚಿಸಿದ್ದೇನೆ. ನಮಗೂ ಜಮೀನಿತ್ತಲ್ಲ. ನಾನೇಕೆ ಪ್ರಗತಿಪರ ರೈತನಾಗಲಿಲ್ಲ..! ಮೊದಲಿಗೆ ನಮ್ಮ ತಂದೆಯೇ ಇದಕ್ಕೆ ಅವಕಾಶ ಕೊಡಲಿಲ್ಲ. ನಾನು ಓದಲಿಲ್ಲ ಬರೆಯಲಿಲ್ಲ. ವ್ಯವಸಾಯ ನೀ ಸಾಯ ಎಂಬ ಮಾತಿನಂತೆ ಜೀವನ ಪೂರ್ತಿ ದುಡಿಮೆಯಲ್ಲೇ ಜೀವನ ತೇಯ್ದೆ. ನನ್ನ ಮಕ್ಕಳು ನನ್ನಂತೆ ಕಷ್ಟ ಪಡಬಾರದು. ಅವರು ಓದಿ ನೌಕರಿ ಹಿಡಿಯಲಿ ಎಂಬ ಅಪ್ಪ ಬಯಸಿದ್ದರಲ್ಲಾ..! ನಾನಾದರೂ ಪ್ರಾಯದಲ್ಲಿ ಬರೇ ನಾಟಕ ಕಥೆ ಕಾವ್ಯ ಎಂದು ಅತ್ತಲೇ ಚಿತ್ತ ಹರಿಸಿ ಇತ್ತ ನಮ್ಮಪ್ಪ ಸಂಪಾದಿಸಿದ್ದ ಜಮೀನು ಕಳೆದುಕೊಂಡ ದಡ್ಡ ಶಿಖಾಮಣಿ. ಯೌವ್ವನದಲ್ಲಿ ಗೇಯ್ಮೆ ಮಾಡದೇ ರಾಗಿ ಮುದ್ದೆ ಉಣ್ಣದೇ ಬೆಳೆದ ಸೋಮಾರಿ ಸುಖ ಪುರುಷ. ಈಗ ಸಕ್ಕರೆ ಕಾಯಿಲೆ ಮನುಷ್ಯ. ಎಂತಹ ಶ್ರಮಜೀವಿ ನಮ್ಮಪ್ಪ.,?ಅದಕ್ಕೆ ಅಪ್ಪನಿಗೆ ಆ ದೇವರು ಒಳ್ಳೆಯ ಆರೋಗ್ಯ  ಕರುಣಿಸಿದ್ದ.  ಶ್ರಮ ಜೀವಿಗಳಿಗೆ ಯಾವತ್ತೂ ಆರೋಗ್ಯ ಭಾಗ್ಯ ಇರುವಲ್ಲಿ ಈ ಭಾಗ್ಯಲಕ್ಷ್ಮಿ ಆಮಿಷವೇಕೆ? ದೊಡ್ಡಪ್ಪನ  ಪ್ರಶ್ನೆ.  ಈ ಸರ್ಕಾರಗಳು ಇವೆಯೆಲ್ಲಾ ಆವು ನಮ್ಮನ್ನು ಹೆಂಡದ ಆಸೆಗೆ ನೂಕಿ ಆಯಸ್ಸು ಕಿತ್ತುಕೊಳ್ಳುತ್ತವೆ  ಕಣ್ಲಾ ಮಗಾ..ಎನ್ನುತ್ತಿದ್ದ ದೊಡ್ಡಪ್ಪ ಕುಡಿತದ ಚಟಕ್ಕೆ ಅಪ್ಪನಿಗಿಂತ ಮೊದಲೇ ಕೈಲಾಸ ವಾಸಿಯಾಗಿದ್ದರು.  ಬಿ.ಎ.ಪದವೀದರರಾಗಿ ಹಳ್ಳಿಯಲ್ಲೇ  ಉಳಿದು ಕೃಷಿಯನ್ನೇ ತಮ್ಮಜೀವನ ವೃತ್ತಿಯನ್ನಾಗಿಸಿಕೊಂಡು ಶಾಲಾ ಮಕ್ಕಳಿಗೆ ಸಂಜೆ ಉಚಿತ ಪಾಠ ಮಾಡುತ್ತಿರುವ ಮೇಷ್ಪ್ರು. ಮಹೇಶ್‌ ಸಾವಯವ ಕೃಷಿ ಬಗ್ಗೆ ಆಕಾಶವಾಣಿಗೆ ಸಂದರ್ಶನ ನೀಡಿದ್ದಾರೆ. ಸ್ವತ: ಸಾವಯವ ಗೊಬ್ಬರ ತಾವೇ ತಯಾರಿಸಿಕೊಂಡು  ಉತ್ತಮ ಫಸಲು ತೆಗೆದಿದ್ದಾರೆ ಮಹೇಶ್‌ ಹಂದ್ರಾಳು ಅವರ ತೋಟದಲ್ಲಿ ಒಂದು ಸುಂದರ ಕವಿಗೋಷ್ಠಿ ಮಾಡೋಣವೇ ಎಂದು ಹಿಂದೆ ಕೇಳಿದ್ದೆ. ಅದಕ್ಕಿನ್ನು ಉತ್ತರ ಬಂದಿಲ್ಲ. ಇರಲಿ ಬದುಕೆಂದರೆ ನಾವಂದುಕೊಂಡಂತಲ್ಲ. ಅದು ಬಂದಂತೆ ಬರಮಾಡಿಕೊಳ್ಳಬೇಕು. ತಮಗೆ ಬೇಕಾದಂತೆ ಅದನ್ನು ದುಡಿಸಿಕೊಳ್ಳಬೇಕು. ಎಗ್ಗಿಲ್ಲದ ಜೀವನ ನಿರ್ವಹಣೆಯಿಂದಾಗಿ ಬದುಕನ್ನೇ ಶಾಪವಾಗಿಸಿಕೊಂಡ  ನಮ್ಮ ಬದುಕನ್ನು ಹಸನುಗೊಳಿಸಿಕೊಳ್ಳುವ ಹಾದಿಯನ್ನು ಯಾರಾದರೂ ತೋರುವವರಿದ್ದರೆ ಸದ್ಯಕ್ಕೆ ಅವರೇ ನಮ್ಮ ಪಾಲಿನ ಕಂದೀಲು.
  ನಮ್ಮ ಬದುಕಿನ ಕತ್ತಲೆಯನ್ನು ನೀಗಿಸಿ ಬೆಳಕಿನಡೆ ಹೆಜ್ಜೆ ಹಾಕಲು ದಾರಿ ದೀಪಗಳಾಗಿ ಕಾಣುತ್ತಾರೆ.  ಬದುಕೆಂಬ ಬಂಡಿಗೆ ಯಾವುದೇ ನಿಯಮ ಸಿಗ್ನಲ್ಲುಗಳನ್ನು ಹಾಕಿಕೊಳ್ಳದೆ ನಾವು ನಮ್ಮ ಕೈಯಾರೆ ಸೃಷ್ಟಿಸಿಕೊಂಡ ಹೊಂಡಗಳಿಗೆ ಬಿದ್ದು ಹಸನಾದ ಬದುಕನ್ನು ಹಾಳು ಮಾಡಿಕೊಂಡಿದ್ದೆವೆ. 

ಏನು ಪ್ರಪಂಚವಿದು ಏನು ಧಾಳಾಧಾಳಿ
ಏನದ್ಭುತಾಪಾರ ಶಕ್ತಿ ನಿರ್ಘಾತ
ಮಾನವನ ಗುರಿಯೇನು ಬೆಲೆಯೇನು ಮುಗಿವೇನು
ಏನರ್ಥವಿದಕ್ಕಲ್ಲ ಮಂಕುತಿಮ್ಮ -.ಡಿ.ವಿ.ಜಿ

ನಮ್ಮ ಜೀವನಾನುಭವಗಳು ಮತ್ತು ಸಾಹಿತಿಗಳ ಬದುಕಿನ ಅನುಭವಾಮೃತದಿಂದ ಪೂರಿತವಾದ ಸಾಹಿತ್ಯದ ವ್ಯಾಸಂಗಗಳು ಬೆಳಕನ್ನು ಕಂಡು ಕೊಳ್ಳಲು ನೆರವಾಗಬಹುದು. ನಮ್ಮ ಕನ್ನಡ ಬರಹಗಾರರು ತಮ್ಮ ಬರಹದಂತೆಯೇ ಬದುಕಿನಲ್ಲೂ ಉತ್ತಮ ಮೌಲ್ಯಗಳೊಂದಿಗೆ ಬಾಳಿದವರು.  ಮಹೇಶ್ ೨೧ನೇ ಶತಮಾನದ ನೂರು ಪ್ರಮುಖ ಸಾಹಿತಿಗಳ ಬದುಕಿನ ಬಗ್ಗೆ ಕಣ್ಣಾಯಿಸಿ ಹೇಳುತ್ತಾರೆ

ಯಾವ ಪ್ರಮುಖ ಕನ್ನಡ ಸಾಹಿತಿಯೂ ಇದುವರೆಗೆ ಆತ್ಮಹತ್ಯೆ ಮಾಡಿಕೊಂಡ ಉದಾಹರಣೆಗಳಿಲ್ಲ. ಯಾವುದೇ ಕವಿ ಬರಹಗಾರರೂ ತಮ್ಮ ಸಂಗಾತಿಗೆ ವಿಚ್ಛೇದನ ನೀಡಿಲ್ಲ. ತಮ್ಮ ತಂದೆ ತಾಯಂದಿರನ್ನು ಅವರ‍್ಯಾರೂ ವೃದ್ಧಾಶ್ರಮಕ್ಕೆ ಸೇರಿಸಿಲ್ಲ. ಯಾವ ಪ್ರಮುಖ ಸಾಹಿತಿಗಳೂ ಅಪರಾಧಕ್ಕಾಗಿ ಜೈಲಿನ ದರ್ಶನ ಮಾಡಿಲ್ಲ..

ನಮ್ಮ ಕನ್ನಡ ಸಾಹಿತಿಗಳಿಗೆ ಬದುಕಿನ ಬಗೆಗಿದ್ದ ದೃಷ್ಟಿಕೋನವೇನು? ಹಾಗೆಯೇ ಅವರು ತಮ್ಮ ನಡೆಯಲ್ಲಿ ಅಳವಡಿಸಿಕೊಂಡಿದ್ದ ಮೌಲ್ಯವೇನು?  ಪ್ರಶ್ನೆ ಎತ್ತಿಕೊಂಡು ಮೌಲಿಕ ಬದುಕಿಗೆ ಮಾದರಿಯಾದ ಸಾಹಿತಿಗಳನ್ನು ಉಲ್ಲೇಖಿಸುತ್ತಾ ಅವರ ಬದುಕನ್ನು ಪರಾಮರ್ಶೆಗೆ ಒಳಪಡಿಸಿದ್ದಾರೆ. 
ಡಿ.ವಿ.ಜಿ.ಕನ್ನಡ ಸಾರಸ್ವತ ಲೋಕದ ಧೀಮಂತರು. ಎಸ್.ಎಸ್.ಎಲ್.ಸಿ. ಫೇಲಾಗಿ ಕೆಲವು ಕಾಲ ಜಟಕಾಗಳಿಗೆ ಬಣ್ಣ ಬಳಿಯುವ ಕೆಲಸ ಮಾಡಿ ನಂತರ ಪತ್ರಕರ್ತರಾಗಿ ಜೀವನ ನಿರ್ವಹಿಸಿ ಬಹು ಭಾಷಾ ಪರಿಣಿತರಾಗಿ ಸಾಹಿತ್ಯ ಸೇವೆ ಸಲ್ಲಿಸಿದ್ದನ್ನು ಸ್ಮರಿಸಿ ಡಿ.ವಿ.ಜಿ.ಇಂಡಿಯನ್‌ ರೆವ್ಯೂ ಆಫ್‌ ರೆವ್ಯೂಸ್ ಮಾಸಪತ್ರಿಕೆ ನಡೆಸುತ್ತಿದ್ದ ವೇಳೆ ನೆಂಟರೊಬ್ಬರ ಮನೆಗೆ ಯಾವುದೋ ಸಮಾರಂಭಕ್ಕೆ ಹೋಗಬೇಕಿತ್ತು ಆದರೆ ಹೋಗಲಿಲ್ಲ. ಕಾರಣ ಅವರ ಪತ್ನಿ ಬಳಿ ಇದ್ದ ಒಂದೇ ಸೀರೆ ಹರಿದಿತ್ತಂತೆ.! ಆ ಸೀರೆಯಲ್ಲಿ ಹೋದರೆ ಡಿವಿಜಿಯವರ ಮರ್ಯಾದೆಗೆ ಕುಂದು ಬರುತ್ತದೆಂದು ಅವರ ಪತ್ನಿ ಯಾವ ಸಮಾರಂಭಗಳಿಗೂ ಹೋಗುತ್ತಿರಲಿಲ್ಲ. ಇಂತಹ ಆರ್ಥಿಕ ಸಂಕಷ್ಟದ ಪರಿಸ್ಥಿತಿಯಲ್ಲೂ ಸರ್ಕಾರವು ಪತ್ರಕರ್ತರಿಗೆ ನೀಡುತ್ತಿದ್ದ ಸಂಭಾವನೆ ನಿರಾಕರಿಸುತ್ತಾರೆ. ತಮಗೆ ಬಂದ ಕೇ೦ದ್ರ ಸಾಹಿತ್ಯ ಅಕಾಡೆಮಿ ಬಹುಮಾನ ಮೊತ್ತವಲ್ಲದೆ ನಾಗರೀಕರು ಸನ್ಮಾನ ಮಾಡಿ ಅರ್ಪಿಸಿದ ಒಂದು ಲಕ್ಷ ನಿಧಿಯನ್ನು ತಾವು ಕಟ್ಟಿ ಬೆಳೆಸಿದ ಗೋಖಲೆ ಸಾರ್ವಜನಿಕ ಸಂಸ್ಥೆಗೆ ದಾನ ಮಾಡಿದ  ಡಿವಿಜಿ ಸರಳತೆ ಸ್ವಾಭಿಮಾನ ಸಜ್ಜನಿಕೆಗಳ ಸಾಕಾರ ಮೂರ್ತಿ.

ಜೀವನವೆಂದರೆ ಒ೦ದು ಹೂವು ಇದ್ದಂತೆ
ಪ್ರೇಮವೆನ್ನುವುದು ಆ ಹೂವಿನಲ್ಲಿರುವ ಮಕರಂದ ಇದ್ದಂತೆ - ವಿಕ್ಟರ್ ಹ್ಯೂಗೋ

ಸಾಹಿತ್ಯಕ್ಕಿಂತ ಬದುಕು ದೊಡ್ಡದು ಎಂಬ ಅಭಿಪ್ರಾಯದ ತೇಜಸ್ವಿ ಹಾಗೆಯೇ ಬದುಕಿದರು. ತೇಜಸ್ವಿಯವರು ಸಾಂಸ್ಕೃತಿಕವಾಗಿ ಅಷ್ಟು ಎತ್ತರಕ್ಕೆ ಬೆಳೆದರೂ ತೋರಿಕೆಯ ಅರೆ ಬರೆ ವಿದ್ಯಾವಂತರಿಗಿಂತ ಸಾಧಾರಣ ವರ್ಗದ ಜನರೊಂದಿಗೇ ಹೆಚ್ಚು ಸಲೀಸಾಗಿ ಬೆರೆತಿದ್ದರು. ಕನ್ನಡ ಸಾಹಿತ್ಯದಲ್ಲಿ ಎಂ.ಎ.ಪಡೆದ ಅವರು ಅಧ್ಯಾಪಕರಾಗದೆ ಮೂಡಿಗೆರೆ ಸಮೀಪದಲ್ಲಿ ತೋಟ ಖರೀದಿಸಿ ಕೃಷಿಕರಾಗಿ ಹಂಗಿಲ್ಲದ ಬದುಕು ಕಟ್ಟಿಕೊಂಡರು. ಮೇರು ಸಾಹಿತಿ ಕುವೆಂಪುರವರ ಪುತ್ರರಾದರೂ ತಮ್ಮಜೀವನದೃಷ್ಟಿ ಹಾಗೂ ಸಾಹಿತ್ಯದಲ್ಲಿ ಎಲ್ಲೂ ತಂದೆಯ ನೆರಳಾಗದೆ ತಂದೆಯ ಪ್ರಭಾವವನ್ನು ಬಳಸದೆ ಬದುಕಿದ್ದು ತೇಜಸ್ವಿಯವರ ಸ್ವಭಾವದ ಗರಿಮೆ. ಕರ್ವಾಲೋ ಕಾದಂಬರಿಯಲ್ಲಿ ವಿಜ್ಞಾನಿ ಕರ್ವಾಲೋ ಹೇಳುವ ಮಾತು: ನಾನು ಪ್ರೊಫೆಸರು, ಮಂದಣ್ಣ ಹಳ್ಳಿ ಗಮಾರ, ಇವೆಲ್ಲಾ ಹೆಬುದ್ದೆಯನ್ನು ನೀನು ನಿಶಾಂಶ ತಿಳಿದರೆ ಏನಪ್ಪಾ ಕಲಿತಂತೆ ಆಯ್ತು?  ಇದರಲ್ಲೇ ನಿನ್ನ ಆಯಸ್ಸು ಮುಗಿದು ಹೋಗುತ್ತೆ. ಸತ್ಯದ ಕಿಂಚಿತ್‌ ದರ್ಶನಾನೂ ಆಗೋಲ್ಲ ನಿನಗೆ. ಈ ಮಾಯೆಯನ್ನು ಮೀರಬೇಕು ನಾವು ಆಗಲೇ ನಿಮಗೆ ಬೇರೆ ಬೇರೆ ಜಗತ್ತು ಪ್ರಪಂಚ ಕಾಣ್ತದೆ.. 

ಗ್ರಾಮೀಣ ಜೀವನ ಬಹುಮುಖಿ ಯಾದುದು. ಹಲವು ವೃತ್ತಿಗಳ ಹಲವು ಜಾತಿಯ ಹಲವು ರೀತಿ ನೀತಿಗಳ ಜನರನ್ನು ಹಳ್ಳಿಗಾಡಿನಲ್ಲಿ ನೋಡುತ್ತೇವೆ. ಈ ಎಲ್ಲ ವೃತಿಗಳು ಸಂಪ್ರದಾಯಗಳ ಜನ ಜನಪದ ಸಾಹಿತ್ಯ ರಚನೆಯಲ್ಲಿ ಕೊಡುಗೆ ನೀಡಿರುವುದರಿಂದ ಗ್ರಾಮೀಣ ಜೀವನದ ಸರ್ವ ಮುಖಗಳೂ ಅವರ ಸಾಹಿತ್ಯದಲ್ಲಿ ಪ್ರಕಟವಾಗಿದೆ. ಜನಪದ ಸಾಹಿತ್ಯ ಜೀವಂತ ಜನತೆಯ ಜೀವನ ಸಾಹಿತ್ಯ ಎಂದಿದ್ದಾರೆ  ಡಾ. ಎಂ.ಎಸ್. ಸುಂಕಾಪುರ. ಕವಿಗಳೆಂದರೆ ಶಿಷ್ಟರಷ್ಟೇ ಅಲ್ಲ. ಜನಪದರು ಹೌದು. ಜನಪದರ ಸಿರಿ ಬದುಕಿನಲ್ಲಿ ನಮ್ಮ ಹಿರಿಯರು ಜೀವನದಲ್ಲಿ ಅಳವಡಿಸಿಕೊಂಡಿದ್ದ ಮೌಲ್ಯಗಳನ್ನು ಜೀವನ ಪ್ರೀತಿಯನ್ನು ಬಿಂಬಿಸಿದ್ದಾರೆ. 

ತಂದೀಯ ನೆನೆದಾರ ತಂಗುಳು ಬಿಸಿಯಾಯ್ತು
ಗಂಗಾದೇವಿ ನನ್ನ ಹಡೆದವ್ವ ನೆನೆದರೆ
ಮಾಸಿದ ತಲೆಯ ಮಡಿಯಾಯ್ತು..

ದ.ರಾ.ಬೇಂದ್ರೆಯವರ ಬದುಕಿನ ಸೂತ್ರ ಒಲವೇ ನಮ್ಮ ಬದುಕು. ಬೇಂದ್ರೆಯವರು ತಮ್ಮ ಕವನಗಳಲ್ಲಿ ಭಾವಗಂಗೆಯನ್ನು ಇಳಿಸಿ ರಸಧಾರೆ ಹರಿಸಿದ ವರಕವಿ. ಅವರು ಸುಖದ ದಾರಿಯಲ್ಲಿ ನಡೆದು ಮಹಾಕವಿಯೆನಿಸಿಕೊಂಡವರಲ್ಲ. ಬದಲಾಗಿ ಬೆಂದು ಬೇಂದ್ರೆಯಾದವರು.

ಎನ್ನ ಪಾಡೆನಗಿರಲಿ ಆದರೆ ಹಾಡನ್ನಷ್ಟೇ ನೀಡುವೆನು ರಸಿಕ ನಿನಗೆ
ಕಲ್ಲು ಸಕ್ಕರೆಯಂಥ ನನ್ನೆದೆಯು ಕರಗಿದರೆ ಅದರ ಸವಿಯನ್ನಷ್ಟೇ ಹಣಿಸು ಎಂದರು. 

ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು ಬಳಸಿಕೊಂಡೆ ವದನೆ ನಾವು ಅದಕು ಇದಕು ಎದಕು 
ಎಂದು ಪ್ರೇಮ ಸಂದೇಶ ನೀಡಿದರು. ಕುವೆಂಪುರವರ ಬದುಕು ಮತ್ತು ಕೃತಿಗಳ ನಡುವೆ ಅವಿನಾಭಾವ ಸಂಬಂಧ
ಇದೆ. ಅವರು ಬದುಕನ್ನು ಕಡೆಗಣಿಸಿದವರಲ್ಲ. ಅವರ ಪ್ರಕಾರ ಬಾಳು  ಅಮೂಲ್ಯವಾದುದು. ಅಷ್ಟೇ ಏಕೆ ಈ ಸೃಷ್ಟಿಯಲ್ಲಿರುವ ಮರಗಿಡ ಪ್ರಾಣಿ ಪಕ್ಷಿಗಳ ಬದುಕೂ ಮಹತ್ತಾದುದೇ. 

ಆನಂದಮಯ ಈ ಜಗ
ಹೃದಯ
ಎತಕೆ ಭಯ? ಮಾಣೋ
ಸೂರ್ಯೊದಯ ಚಂದ್ರೋದಯ
ದೇವರ ದಯ ಕಾಣೋ

ನಾಡಿನ ಸಂಸ್ಕಾರವಂತ ವಿಚಾರವಂತ ಸಾಹಿತಿಗಳ ಬದುಕಿನ ಘಟನೆಗಳನ್ನು ಅವರ ಕವಿತ್ವ ಸಾಹಿತ್ಯ ಇವೆಲ್ಲವನ್ನೂ ಅಭ್ಯಸಿಸಿ ಅವರ ಬದುಕನ್ನು ಕಿರು ಕೃತಿಯಲ್ಲಿ ಅವಲೋಕಿಸಿದ್ದಾರೆ. ಕಡೆಯದಾಗಿ ನಮ್ಮ ಊರಿನ ರಸಿಕರು ಡಾ. ಗೊರೂರು ರಾಮಸ್ವಾಮಿ ಅಯ್ಯಂಗಾರರು ಶಾಲೆಯಲ್ಲಿ ಕಲಿತ ವಿದ್ಯೆಗಿಂತಲೂ ಸ್ವಂತ ಪ್ರಯತ್ನದಿಂದ ಕಲಿತಿದ್ದೆ ಹೆಚ್ಚು. ಇವರೊಬ್ಬ ಜಾನಪದ ತಜ್ಞ.  ದ.ರಾ.ಬೇಂದ್ರೆಯವರು ಗರುಡ ಗಂಬದ ದಾಸಯ್ಯ ಪುಸ್ತಕಕ್ಕೆ ಬರೆದ ಮುನ್ನುಡಿಯಲ್ಲಿ ನಮ್ಮ ಜನಕ್ಕೆ ನಮ್ಮ ಜೀವನದ ರಮ್ಯತೆಯನ್ನು ತೋರಿಸಿ ಮಂಕು ಕವಿದ ಕಣ್ಣಿಗೆ ಅಂಜನ ಹಾಕುವ ಕಲೆಯಲ್ಲಿ ಕೈ ಪಳಗಿದವರಲ್ಲಿ ಗೊರೂರಿಗೆ ಗಣ್ಯ ಸ್ಥಾನವಿದೆ. ಅಳುತ್ತ ಬಂದವರನ್ನು ನಗುತ್ತ ಹೋಗುವಂತೆ ಮಾಡುವುದು ಜಾತಿ ರಸಿಕರ ಕಸುಬಾಗಿದೆ. 
ರಿಚರ್ಡ್ ಬ್ಯಾಕ್‌ ಅವರ ಜೋನಾಥನ್ ಲಿವಿಂಗ್‌ಸ್ಟನ್‌ ಕೃತಿ ಓದಿ ನೇಮಿಚಂದ್ರರು ಬರೆದರು.
ನಿಮ್ಮ ಮೇಲೆ ನಿಮಗೆ ನಂಬಿಕೆ ಇರಲಿ ಭರವಸೆ ಇರಲಿ. ಭರವಸೆ ಕಳೆದುಕೊಳ್ಳದ ಬದುಕು ಇರಲಿ. ಕನಸುಗಳ ಬೆನ್ನೆತ್ತುವ ಧೈರ್ಯವಿರಲಿ. ಕನಸು ನನಸಾಗಿಸಲು ಬೆವರು ಸುರಿಸುವ ಪ್ರಯತ್ನವಿರಲಿ. ನಾವು ಒಬ್ಬೊಬ್ಬರು ಹಾರಬಲ್ಲೆವು ಪರಿಪೂರ್ಣತೆ ಸಾಧಿಸಬಲ್ಲವು. 
ಚುಟುಕು ಬ್ರಹ್ಮರೆಂದು ಹೆಸರಾದ ದಿನಕರದೇಸಾಯಿಯವರ ಈ ಒಂದು ಚುಟುಕು ಉಲ್ಲೇಖಿಸಿ ವಿಮರ್ಶೆಗೆ ಮುಕ್ತಾಯ ಹಾಡುತ್ತೇನೆ. 

ನನ್ನ ದೇಹದ ಬೂದಿ ಗಾಳಿಯಲ್ಲಿ ತೂರಿಬಿಡಿ
ಹೋಗಿ ಬೀಳಲಿ ಭತ್ತ ಬೆಳೆಯುವಲ್ಲಿ
ಬೂದಿ ಗೊಬ್ಬರದಿಂದ ತೆನೆಯೊಂದು ನೆಗೆದು ಬರೆ
ಧನ್ಯವಾಯಿತು ಹುಟ್ಟು ಸಾವಿನಲ್ಲಿ.. 
  
  
- ಗೊರೂರು ಅನಂತರಾಜು, 
ಹಾಸನ.
ಮೊ: ೯೪೪೯೪೬೨೮೭೯.

ವಿಳಾಸ: ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್, ೩ನೇ ಕ್ರಾಸ್, 
ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, 
ಹಾಸನ.

ಹೆಣ್ಣು (ಕವಿತೆ) - ಕನಸಿನಕೂಸು.

ಅವಳೆಂದರೆ ಪೃಥ್ವಿಗೆ ಸಮತೂಕದವಳು
ಪೂಜ್ಯನಿಯ ಸ್ಥಾನದಲ್ಲಿ ನಿಂತವಳು
ಕರುಣೆಯ ಕಡಲನ್ನು ಉಕ್ಕಿಸುವ ಮಾನಸ ಗಂಗೋತ್ರಿ
ತಪ್ಪು ತಿದ್ದಿ ಬುದ್ದಿ ಕಲಿಸುವಲಿ ಕ್ಷಮಯಾ ಧರಿತ್ರಿ...

ಅವಳು ಅಕ್ಕರೆಯಲಿ ಅಕ್ಕನಾಗಿ ಸಕ್ಕರೆಯ         ತಂಗಿಯಾಗಿ ಮಮತೆಯ ಮಾತೆಯಾಗಿ
ಮುದ್ದಿನ ಮಡದಿಯಾಗಿ ಕರುಣೆಯ ಕಡಲಾಗಿ
ಹಲವಾರು ರಂಗದಲಿ ತನ್ನನು ತೊಡಗಿಸಿಕೊಂಡವಳು ...

ತನ್ನ ಚಾಕ ಚಕ್ಯತೆಯಲಿ ಮನೆಯ ಜವಾಬ್ದಾರಿಯ ಹೊರುವವಳು ಹಸಿದಾಗ ಅಣ್ಣ ನೀಡುವವಳು ಮಾತಿನ ಮೂಲಕ ಎಲ್ಲರ ಮನೆ ಮನ ಗೆಲ್ಲುವವಳು ಸಾಧಾಕಾಲ ತನ್ನವರ ಒಳತಿಗಾಗಿ ಶ್ರಮಿಸುವವಳು...

ಕಲಿಸುವಲಿ ಸರಸ್ವತಿಯಾಗಿ ಒಲಿಯುವಲಿ         ಲಕ್ಷ್ಮೀಯಾಗಿ ಶಿಕ್ಷಿಸುವಲಿ ಕಾಳಿಯಾಗಿ
ಶಿಷ್ಟರ ಪಾಲಿಗೆ ಸೌಮ್ಯಳಾಗಿ ದುಷ್ಟರ ಪಾಲಿಗೆ ಬೆಂಕಿಯ ಕೆನ್ನಾಲಿಗೆಯಾಗಿ ತೋರುವವಳು...

ಅವಳೆಂದರೆ ಒಂದು ಅಮೋಘ ಶಕ್ತಿ
ಅವಳೆಂದರೆ ಸುಂದರವಾದ ಪ್ರಕೃತಿ
ಅವಳೆಂದರೆ ಪ್ರತಿ ಸಂಸಾರದ ಕಣ್ಣು 
ಅವಳೇ ಎಲ್ಲರ ಮನೆ ಮನ ಬೆಳಗುವ ಹೆಣ್ಣು..
   
                                                          - ಕನಸಿನಕೂಸು 
    ವಸಂತ ಪು ಬಾಗೇವಾಡಿ, ಗಜಪತಿ.

ನಾ ಕರಿಯನೆಂದುನೀ ಜರಿಯ ಬೇಡ ಓ ಬಿಳಿಗೆಳತಿ (ಕವಿತೆ) - ಬಿ ಎಂ ಮಹಾಂತೇಶ.

ಆ ನಿನ್ನ ಬಿಳಿ ಮೋಡದಂತ
ಮುದ್ದಾದ ಗಲ್ಲದ ಮೇಲೆ ಮುದದಿ
ಮುದ್ದಾಡುವ ಕಪ್ಪುಬೊಟ್ಟಾಗುವೆ...

ಮಯೂರಿಯಂತೆ ನಟಿಸುವ
ಆ ನಿನ್ನ ಕಣ್ ರೆಪ್ಪೆಗಳಿಗೆ
ಮಾಧುರ್ಯ ಕಪ್ಪಾಗುವೆ...

ನಿನ್ನೊಲವಿನ ಬಿಳಿಯಾಳೆಯ
ಮೇಲೆ, ಚೆಲುವ ಭಾವ
ಗೀಚಲು ಮಧುರ ಮಸಿಯಾಗುವೆ...

ಅಳೆಯಲಾಗದ ಆ ನಿನ್ನ
ಅಂದ ಚೆಂದ, ಮೈ ಬಣ್ಣವನು
ಮುಚ್ಚುವ ಕತ್ತಲೆಯಾಗುವೆ...

ಮುಪ್ಪಿನಲೆಯು ನಿನಗಪ್ಪಳಿಸಿ,
ಬಿಳಿ ಕೇಶರಾಶಿ ಮೂಡಿದಾಗ
ಅವುಗಳಿಗೆ, ಕರಿ ಮಸಿಯಾಗುವೆ...


- ಬಿ ಎಂ ಮಹಾಂತೇಶ
ಕ್ಯಾಸನಕೆರೆ, ಕೂಡ್ಲಿಗಿ ತಾ,
ವಿಜಯನಗರ ಜಿ,
9731418615

ಅಂತರಾಳದ ತುಡಿತ (ಕವಿತೆ) - ಮಾಲತಿ ಮೇಲ್ಕೋಟೆ.

ಭಾವಯಾನದಲಿಂದು ಜೀವನವು ಸಾಗಿಹುದು
ಅಂತರಾಳದ ನೋವ ಹೇಳದಾಗಿಹುದು
ಬಾಳಬದುಕಿನ ಪಯಣದಲಿ ಮಾತು ಮೌನದ ರಿಂಗಣ
ಮಾತು ಮರೆಯಾಗಿಹುದು ಮೌನದಾ ಹಿಂದೆ

ಮನದಲಿಹ ಭಾವಗಳು ಹೊರಬರದಾಗಿಹುದು
ನೀ ಕಂಡ ಕೂಡಲೇ ಮಾತು ಮೌನವಾಗುವುದು
ಕಣ್ಣನೋಟವದು ಮಾತ್ರ ಸಾರಿ ಹೇಳುತಲಿಹುದು
ಮನದೆಲ್ಲ ಭಾವಗಳ ನಿನಗರ್ಪಿಸಿಹುದು

ನೀನಿರದ ದಿನಗಳಲಿ ಬೆಳದಿಂಗಳಲು ತಾಪ
ತೋರುತಿಹೆ ಎಲ್ಲರಲು ಅರಿಯದೆಯೆ ಕೋಪ
ಮನದೆಲ್ಲ ಉಮ್ಮಳವ ನಿನ್ನೆದುರು ಬಿಚ್ಚಿಟ್ಟು
ಹಗುರವಾಗುವ ಬಯಕೆ ನನ್ನಲಿಹುದು

ನಿನ್ನೊಡನೆ ಕಳೆದಂಥ ಸಮಯವದು ಮನದಲ್ಲಿ
ಪುಳಕ ಹುಟ್ಟಿಸುತಿಹುದು ಇಂದು ನನ್ನಲ್ಲಿ
ನಿನ್ನಿಂದ ದೂರಾಗಿ ನೋವು ಹೆಪ್ಪುಗಟ್ಟಿಹುದು
ಕರಗುವಾ ಬಗೆ ಹೇಗೆ ತಿಳಿಯದಾಗಿಹುದು

- ಮಾಲತಿ ಮೇಲ್ಕೋಟೆ,
ಬೆಂಗಳೂರು.

ಮಂಗಳವಾರ, ನವೆಂಬರ್ 7, 2023

ಉನ್ಮಾದ (ಕವಿತೆ) - ಶ್ರೀಧರ ಬಿ ಸಿ ಭುವನಹಳ್ಳಿ, ಮಾಲೂರು.

ಬಿಸಿಯುಸಿರ ತಾಪವು
ಚಿಲುಮೆಯಾಗಿ ಚಿಮ್ಮಿ
ಮೊಸರ ಮಳೆಯಾಗಿ ಹರಿದು
ಹಾಲ್ಗಡಲು ಉಕ್ಕುವಂತೆ ಉಕ್ಕಿ
ತೆರೆಗಳ ನೊರೆಯಂತೆ ಪುಟಿದು
ಶರವೇಗದಲಿ ಶರಧಿಯ ಸೇರುತಿದೆ
ಮನವು ತಣಿಯುತಿದೆ,
ಭಾರವು ಕರಗುತಿದೆ, 
ಜೀವ ಉಲ್ಲಾಸಗೊಂಡಿದೆ,

ಮನದ ಮರ್ಕಟದ ಲಗಾಮು
ಸಡಿಲಿಸಿ ಕಡಲ ಕಡೆಗೆ ಎವಯಿಕ್ಕದೆ ನೋಡುತಿದೆ.
ಸಭ್ಯ ಅಸಭ್ಯಗಳ ತಿಕ್ಕಾಟಕ್ಕೆ 
ಬುದ್ಧಿಯ ಕುಲುಮೆ ಬೇಯುತಿದೆ, ನಲಿಯುತಿದೆ, 

ಉತ್ತುಂಗದ ಉನ್ಮಾದಕ್ಕೆ
ಕಾಯುತ್ತಿದೆ ಕಾತುರದಿಂದ
ಬೆವರಹನಿಯು ಸೇರಿ 
ಬೊಗಸೆ ತುಂಬಿದೆ ಜೋಳಿಗೆಯಲಿ
ಹರಿದು ಹೋಗುತ್ತಿದೆ
ಚರಂಡಿಯ ಕಾಲುವೆಯಲ್ಲಿ
ಸತ್ತ ಹಸುಳೆಯ ಆಕ್ರಂದನ
ಕಿವಿಯಲ್ಲಿ ಗುನುಗುತ್ತಿದೆ

ತಪ್ಪು ಮಾಡಿದೆ ನೀ ಎಂದು
ತಪ್ಪಲ್ಲದ ತಪ್ಪಿಗೂ
ಮರುಗುತ್ತಿದೆ ಜೀವ
ಪ್ರಕೃತಿಯ ನಿಯಮಕ್ಕೆ
ಯಾರು ಹಿತವರು ಎಂದು
ಸಮಾಧಾನಿಸಿಕೊಳ್ಳುತ್ತಲೆ
ಸಾಗುತ್ತಿದೆ ಕರ್ಮ ಹೀಗೆ 
ನಿತ್ಯ ನಿರಂತರ ಸುಖದಾಸೆಗೆ


  - ಶ್ರೀಧರ ಬಿ ಸಿ ಭುವನಹಳ್ಳಿ, ಮಾಲೂರು.

ಶುಕ್ರವಾರ, ಅಕ್ಟೋಬರ್ 27, 2023

ಆತ್ಮವೇ ನೀ ತೊರೆದ ದಿನ (ಕವಿತೆ) - ಬಿ. ಎಂ. ಮಹಾಂತೇಶ.

ಅಂಗಳದಲಿ ಹಾಳು
ಕಸವು, ಧೂಳಾಗಿ
ದೇಹದ ಸುತ್ತ ಸುಳಿದಿತ್ತು...

ನಿನ್ನೆ ನಲಿದಿದ್ದ ಹಾಲು
ಇಂದು ನಲುವಿನಲ್ಲಿ
ಮೊಸರಾಗಿ ಅಳುತಿತ್ತು...

ನನ್ನ ತಲೆ ಬಳಿಯ
ಕಂದೀಲು ನನಗಷ್ಟೇ,
ಮೌನದ ಬೆಳಕ ನೀಡಿತ್ತು...

ಹೇ ಆತ್ಮವೇ ನೀ ನನ್ನ
ತೊರೆದ ಸುದ್ದಿಯ ಸಾರಲು,
ಕಾಗೆಯು ಗೊಗರೆದಿತ್ತು...

ಮಸಣದ ಮಣ್ಣು
ಮೈಗಪ್ಪಲು, ಸಪ್ಪನೆ
ಮಾರಿ ಹಾಕಿ ಚದುರಿತ್ತು...

ಹೇ ಆತ್ಮವೇ ನೀ ತೊರೆದ ಆ ದಿನ..
ಆವರಿಸಿದ್ದು ಬರಿ ಮೌನ...

- ಬಿ. ಎಂ. ಮಹಾಂತೇಶ
SAVT ಕಾಲೇಜು ಕೂಡ್ಲಿಗಿ 
ವಿಜಯನಗರ ಜಿಲ್ಲಾ
9731418615.

ವೇದನೆ (ಕವಿತೆ) - ರಂಜಿತ್ ಕುದುಪಜೆ, ತಣ್ಣಿಮಾನಿ, ಭಾಗಮಂಡಲ.

ಮನಸಿನ ಮನೆ ಸುಂದರವಾಗಿ.. 
ನನಸಿನ ನಸುಕಿನ ಹಂದರವಾಗಿ..
ಕನಸು ಕನವರಿಸಿ ಕಾಡುತಿದೆ..! 
ಬಂಧನದ ಕೊರಡಲಿ ಬೇಡುತಿದೆ..! 

ವೀರ ಶೂರರ ನಾಡೆಂದು.. 
ಕೆಚ್ಚೆದೆ ಕಾವಲಿನ ಕೊಡಗೆಂದು.. 
ಬಿಗಿ ಹಿಡಿದಿದೆ ಹೃದಯವಾಗಿ..! 
ಶಬ್ದ ನಿಶ್ಯಬ್ದದ ನಡುವಾಗಿ..! 

ಕಿತ್ತಾಟವಿಲ್ಲ..ಉಸಿರ ಹುಡುಕಾಟಕೆ! 
ಕರೆಯು ಕಂಗಳ ಕೂಗಾಟಕೆ..! 
ಸಮವಸ್ತ್ರದ ನೋಟ ಸನಿಹವಾಗಿ.. 
ಸಮರಾಭ್ಯಾಸ ಆಸಕ್ತಿಯ ಖನಿಯಾಗಿ.. 

ತಾಯಿಯ ಸೇವೆಯ ನೆನೆಪಿಗೆ.. 
ನರನಾಡಿಗಳ ದೇಶಪ್ರೇಮದ ಬೆಸುಗೆಗೆ..
ಶತ್ರುಗಳ ಸದೆ ಬಡಿಯುವದಕೆ..! 
ವಿಜಯದ ಕದ ತೆರೆಯುವದಕೆ..! 

ಜೀವದ ಉಸಿರಿರುವ ತನಕ..
ಜೀವನದ ಬೆನ್ನೆಲುಬಿನ ತವಕ.. 
ಕಾಡ್ಗಿಚ್ಚಿನಂತೆ ಕಾಡಿದ ಕಿಡಿ..! 
ಮನಬಿಚ್ಚಿ ಮರುಗಿದೆ ನುಡಿ..! 
ನಾನೊಮ್ಮೆ  ಸೈನಿಕನಾಗಬೇಕಿತ್ತು.....

- ರಂಜಿತ್ ಕುದುಪಜೆ, ತಣ್ಣಿಮಾನಿ, ಭಾಗಮಂಡಲ.
ಮೊ:೯೪೮೦୭೩೨೫୭೬.

ಪರೀಕ್ಷಾ ಕೊಠಡಿ (ಕವಿತೆ) - ಪ್ರೊ. ಶಕುಂತಲಾ ಪ್ರ.ಬರಗಿ.

ಪರೀಕ್ಷಾ ಕೊಠಡಿ ಹಲವು ಸಾಧಕರ ಬಾಧಕರ ಭವ್ಯ ಬಂಗಲೆ
ಹಲವು  ಕಲಾನಿಪುಣರು, ಸಮಯ ವ್ಯಹಿಸುವವರ ಮಹಲು
ಮಳ್ಳರು ಮಳ್ಳರು, ಕಳ್ಳರು, ಉತ್ತರ ಕದಿಯುವ ವಂಚಕರು, ಓದದೆ ಪರಿತಪಿಸುವವರ ದೊಡ್ಡ ಗುಂಪು
ಅಲ್ಲಿ ಬರೆದಂತೆ ನಟಿಸುವವರು
ನಟಿಸಿದಂತೆ ಬರೆಯುವವರು ಇರುವ ಇರುವ ಎಕ್ಸಾಮ್ ಹಾಲ್ ಪುಂಡರಿವರು

ಪ್ರಶ್ನೆ ಪತ್ರಿಕೆಯ ನಾಲ್ಕು ಹಂಚು ರೀತಿದ್ದು
ಹೌದು ಇಲ್ಲ ಎನ್ನುವ ಮಲ್ಟಿಪಲ್ ದ್ವಂದ್ವ
ನಡುನಡುವೆ ಅಬ ಜೋಡನೆಗಳ ಗೊಂದಲ
ಒಂದೆರೆಡು ಅಂಕಗಳ ಬರದೆ ಒದ್ದಾಡುವ  ಪರಿಪಾಟಲು
ವ್ಯಾಕರಣ ಪ್ರಬಂಧ ಗಾದೆ ಮಾತುಗಳ ದೊಡ್ಡ ದೊಡ್ಡ ಪುಟಗಳ ಗೋಜಿಲು

ಅವರು ಇವರು ಯಾರ್ಯಾರು ಬರೆಯುತ್ತಿದ್ದಾರೆ ನೋಡುವ ಹುಚ್ಚು  ತೆವಲು
ಯಾವನೋ ಮಲಗಿದ್ದಾನೆ ಯಾಕೆ ಇರಬೇಕು ಕುತೂಹಲ
ಅವಳು ಎರಡೆರಡು ಸಪ್ಲಿಮೆಂಟರಿ ತಗೊಂಡಳು ಒಳಗೊಳಗೆ ಮನಸ್ತಾಪ
ಸಿಲಬಸ್ ಗೊತ್ತಿರದ ದಿನವೂ ಕಾಲೇಜ್ ಮೆಟ್ಟಲು  ಹತ್ತಿರದ ವಿದ್ಯಾರ್ಥಿಗಳ ಗೋಳಾಟ

ಗಾಬರಿ, ಗಲಭೆ, ಗೊಂದಲ 
ಎಲ್ಲೋ ಒಂದೆರಡು ಪ್ರಶ್ನೆಗಳ ಬಗೆಗೆ ಅಗಾಧ ಕುತೂಹಲ
ಒಂದೆರಡು ಪ್ರಶ್ನೆಗಳಿಗೆ ಉತ್ತರದ ಸುರಿಮಳೆ
ಒಂದೆಂಟೆ ಪ್ರಶ್ನೆಗಳನ್ನು ಮರುಹೊಂದಿಸಿ ಬರೆದು ತಿದ್ದುವುದು
ಸಕಲಕಲ ವಲ್ಲಬರಿಗೂ ಸಾಧ್ಯವಾಗದ ಉತ್ತರಗಳ ಬಗೆಗೆ ಪೇಚಾಟ

ಗೊಬೆಗಣ್ಣೆನಂತೆ ನೋಡುವ ವಿಚಾರಕರು ಮೇಲ್ವಿಚಾರಕರು
ನೇರ ಕುಳಿತುಕೊಳ್ಳಿ, ಸರಿಯಾಗಿ ಬರೆಯಿರಿ, ಬರೆಯಿರಿ, ಸಹಿ ಮಾಡು
ಮೇಲಿಂದ ಮೇಲೆ ಮೇಲಿಂದ  ತೂರಿ ಬರುವ ಸೂಚನೆಗಳು
ಅವಳನ್ನು ಇವಳನ್ನು ನೋಡಿದರೂ ತಿಳಿಯದ ಗೊತ್ತಾಗದ ಉತ್ತರಗಳು! 
ಹತಾಶದಿ ಹಂಬಲಿಸಿ ಬೊಬ್ಬೆ ಇಡುವ ವಿದ್ಯಾರ್ಥಿಗಳ ಸಂತೆ ಈ ಪರೀಕ್ಷಾ ಕೊಠಡಿ

- ಪ್ರೊ. ಶಕುಂತಲಾ ಪ್ರ.ಬರಗಿ
ಕನ್ನಡ ಉಪನ್ಯಾಸಕರು
ಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯ ಬಾಗಲಕೋಟೆ
ಮೋ. ಸಂ.8147146194

ಗುರುವಾರ, ಅಕ್ಟೋಬರ್ 26, 2023

ಅಣ್ಣನ ಒಲವು (ಕವಿತೆ) - ಶಾರದಾ ದೇವರಾಜ್ ಎ ಮಲ್ಲಾಪುರ.

ಅಣ್ಣನ ಪ್ರೀತಿಯ ಪಡೆದಿಹ ತಂಗಿಗೆ 
ಸುಖ ಸಮೃದ್ಧಿಯು ದೊರೆತಂತೆ/
 ಅಣ್ಣನ ಒಲವಿನ ಕರುಣೆಯು ಲಭಿಸಲು
 ಸುಂದರ ಪುಷ್ಪದ ತೇರಂತೆ ll

 ಅಣ್ಣನ ಅಕ್ಕರೆ ಗಳಿಸಿದ ತಂಗಿಗೆ
 ಸಕ್ಕರೆ ತುಪ್ಪದ ಔತಣವು/
 ಅಣ್ಣನ ಮಮತೆಯು ಮರುಕಳಿಸಿರಲು
 ತಂಗಿಗೆ ತವರಿನ ಆಶ್ರಯವು ll

 ಅಣ್ಣ ತಂಗಿಯ ಒಲವಿನ ಬಳ್ಳಿಗೆ
 ತಾಯಿಯೇ ಬೇರಿನ ಬುಡವಂತೆ/
 ಅಣ್ಣನ ಲತೆಯು ಹಬ್ಬಿದ ಹಾಗೆ
 ತಂಗಿಯು ಹರಳುವ ಹೂವಂತೆ ll

 ಒಂದೇ ಬೇರಿನ ಲತೆಗಳು ನಾವು
 ಎಲ್ಲರ ಮೆಚ್ಚುಗೆ  ಗಳಿಸೋಣ/
 ತಾಯಿ ತಂದೆಯರ ಕೀರ್ತಿಯ ಹರಡುವ
 ಸುಮಧುರ ಸಂಸ್ಕೃತಿ ಬೆಳೆಸೋಣ ll

- ಶಾರದಾ ದೇವರಾಜ್ 
 ಎ  ಮಲ್ಲಾಪುರ
 ಅರಸೀಕೆರೆ ತಾಲೂಕ್
 ಹಾಸನ ಜಿಲ್ಲೆ
 ಬಾಣಾವರ
ಮೋ.  ನಂಬರ್  9663113628

ಬುಧವಾರ, ಅಕ್ಟೋಬರ್ 25, 2023

ಗುರು (ಕವಿತೆ) - ಕನಸಿನಕೂಸು ವಸಂತ ಪು. ಬಾಗೇವಾಡಿ.

ಉರಿಯುವ ದೀಪವ ನೋಡಿದಡೆನ್ನ ಮನ
ನೆನೆಯುವುದರಿವಿನ ಗುರುವನ್ನು
ದೀಪದಂತೆ ತಾ ಉರಿದು ಬೆಳಗುವನು
ಅಂಧ ಹೃದಯದ ಮನ ಮನೆಯನ್ನು...

ಮಣ್ಣಿನ ಮುದ್ದೆಯ ತಾ ತಿದ್ದಿ ಮಾಡುವನು
ಸುಂದರ ಸುಗುಣದ ಮೂರ್ತಿಯನು
ಜೀವವ ತುಂಬಿ ಸುಶಿಕ್ಷಣ ಅರಹುತ
ತೋರುವನದಕೊಂದ ಸು ಮಾರ್ಗವನು...

ಮಕ್ಕಳ ಮನಸ್ಸನ್ನರಿಯುತ ನಲಿಕಲಿ
ದಾಡುತ ಅವರೊಳಗೊಂದಾಗುವನು
ತಾಯಿಯ ಪ್ರೀತಿಯ ತೋರುತ ಹರುಷದಿ
ಮಗುವಲಿ ಮಗುವಂತಾಗುವನು...

ಗುರು ತೋರಿದ ಮಾರ್ಗದಿ ನಡೆದು ಸಾಗಿದರೆ
ಆಗುವನುತ್ತಮ ಪ್ರಜೆಯೆಂದು
ಗುರುವಿಗೆ ಗುಲಾಮನಾಗದಿರ್ದೋಡೆ
ಕಾಣನು ಪ್ರಗತಿಯನೆದೆಂದೂ...

ಕಲಿಸಿದ ಗುರುವನು ಮರೆಯುವುದಿಲ್ಲ
ನೆನೆಯುವೆ ಅನುಕ್ಷಣ ಅವರನ್ನು
ತನು ಮನದಲಿ ಗುರು ನೆನೆದುಕೊಳ್ಳುತ
ಚರಣಕೆ ನಾ ಸಧಾ ನಮಿಸುವೆನು...
- ಕನಸಿನಕೂಸು 
ವಸಂತ ಪು. ಬಾಗೇವಾಡಿ
ಗಜಪತಿ.

ಗ್ಲೋಬಲ್ ಮಹಾ ವಿದ್ಯಾಮಂದಿರ (ಕವಿತೆ) - ಸದ್ದಾಂ ತಗ್ಗಹಳ್ಳಿ.

ವಿದ್ಯಾದೇವಿಯೊಳ್ ಜ್ಞಾನ
ಜ್ಯೋತಿ ಬೆಳಗಿಸಿದೊಡೆ

ಅಕ್ಕರವ ಬಿತ್ತಿ ಮನವ ಕೆತ್ತಿ
ಶಿಲೆಯಾಗಿ ನಿಲ್ಲಿಸಿದೊಡೆ

ವಿದ್ಯಾದಾನಂ ಸೇವಮಾರ್ಗ
ಗುರುವಿನ ಗುರಿಯೊಂದೆ

ಅಂತರಂಗ ಬಹಿರಂಗ ಶುದ್ಧಿ
ಆತ್ಮಸ್ಥೈರ್ಯ ಬೆಳೆಸಿದೊಡೆ

ನಿಷ್ಕಲ್ಮಶ ಮನದಿಂದರಸಿ
ಒಡಲುಣಿಸುವ ಮಾರ್ಗ ರೂಪಿಸಿದೊಡೆ

ಧಾರೆಯೆರೆದು ಪ್ರೀತಿ ಮಮತೆಯ
ಸಂತಸದಿ ನಡೆದು ಬದುಕಿನೊಳ್

ತನು ಮನ ಧನದಿ ಸ್ವಯಂ
ಭವಿಷ್ಯ ಬದುಕ ರೂಪಿಸಿದೊಡೆ

ದುಃಖವ ತೊರೆದು ನಿಂತು
ಸಂತಸದ ದಿನಗಳ ಛಾಯೆಯೊಳು

ವಿದ್ಯೆಯಿಂದ ವಿನಯ ಪಡೆದು
ಸರಳ ಬದುಕ ಸಾಗಿಸಿದೊಡೆ

ಗುರು ಬ್ರಹ್ಮ ಭಕ್ತಿಯೊಳ್
ಸಾಕ್ಷಾತ್ ಸ್ವರ್ಗ ನೆಲೆಸಿದೊಡೆ

- ಸದ್ದಾಂ ತಗ್ಗಹಳ್ಳಿ.

ಬದುಕಿಬಿಡು ಹೀಗೆ (ಕವಿತೆ) - ತ್ರಿವೇಣಿ ಆರ್. ಹಾಲ್ಕರ್.

ಬದುಕಿದು ಬದುಕಿ ಬಿಡು ನೀ ಸುಮ್ಮನೆ,
ಯಾರ ಮನಸು ನೋಯಿಸದ ಹಾಗೇ,
ಯಾರಿಗೂ ಕೇಡು ಬಯಸದ ಹಾಗೇ.

ಬದುಕೆಂಬ ಸಾಗರದಲ್ಲಿ ನಾವಿಕ ನೀನು ,
ದಡವ ಸೇರದಿದ್ದರು ಮುನ್ನಡೆಯಬೇಕು,
ಬದುಕು ನಿಲ್ಲಿಸುವವರೆಗೂ ಚಲಿಸುತ್ತಿರಬೇಕು.

ಕಷ್ಟವಿರಲಿ ಸುಖವಿರಲಿ ನಗಬೇಕು,
ನಾವು ನಕ್ಕು ಇತರರನ್ನು ನಗಿಸಬೇಕು,
ನಗುವಿನೊಂದಿಗೆ ಜೀವನವ ಮುಗಿಸಬೇಕು.

- ತ್ರಿವೇಣಿ ಆರ್. ಹಾಲ್ಕರ್
ಗೊಬ್ಬರವಾಡಿ, ಕಲಬುರ್ಗಿ ಜಿಲ್ಲೆ
ಕೃಷಿ ಮಹಾವಿದ್ಯಾಲಯ ಕಲಬುರ್ಗಿಯ ವಿದ್ಯಾರ್ಥಿನಿ.

ಬದುಕು ನಮ್ಮದಾಗಲಿ (ಕವಿತೆ) - ಶ್ರೀ ಮುತ್ತು. ಯ. ವಡ್ಡರ.

ಕೆಟ್ಟವರಿಗು ಒಳ್ಳೆಯ ದಾರಿ ತೋರಿಸಿ
ಅವಮಾನ ಅಪಮಾನ ಮಾಡಿದವರಿಗೆ ಸನ್ಮಾನಿಸಿ ನಮ್ಮವನಲ್ಲ ಅಂದವನೇ ನಮ್ಮವನು ಎನ್ನುವಂತಿಸಿ
ಬದುಕು ಬದಲಿಸುವ ಬನ್ನಿ ಎಲ್ಲರನ್ನು ಸಮಾಧಾನಿಸಿ

ಬದುಕು ಬದಲಾಗಲಿ ಸುಳ್ಳಿನ ಮಧ್ಯ ಸತ್ಯವಾಗಿ
ಬದುಕು ಬದಲಾಗಲಿ ಆಧರ್ಮದ ಮಧ್ಯ ಧರ್ಮವಾಗಿ
ಬದುಕು ಬದಲಾಗಲಿ ಹಿಂಸೆಯ ಮಧ್ಯ ಅಹಿಂಸೆಯಾಗಿ
ಬದುಕು ಬದಲಾಗಲಿ ಅನ್ಯಾಯದ ಮದ್ಯ ನ್ಯಾಯವಾಗಿ 

ದಾನ ಧರ್ಮದಲ್ಲಿ ಕರ್ಣನಂತ ಬದುಕು ನಮ್ಮದಾಗಲಿ
ನ್ಯಾಯ ನೀತಿಯಲ್ಲಿ ಚಾಣಕ್ಯನಂತಹ ಬದುಕು ನಮ್ಮದಾಗಲಿ
ದೇಶ ಭಕ್ತಿಯಲಿ ಭಗತ್ ಸಿಂಗ್ ನಂತಹ ಬದುಕು ನಮ್ಮದಾಗಲಿ 
ಸತ್ಯ ಅಂಹಿಸೆಯಲಿ ಗಾಂಧೀಜಿಯಂತ ಬದುಕು ನಮ್ಮದಾಗಲಿ 

ಹೆತ್ತವರಿಗೆ  ವಿಧೇಯಕರಾಗಿ ಕಿರಿಯರಿಗೆ ಮಾರ್ಗದರ್ಶಕರಾಗಿ
ಅನಾಥರಿಗೆ ಬಂಧುವಾಗಿ ನೋಂದವರಿಗೆ ಆಶ್ರಯವಾಗಿ
ಗುರುಗಳಿಗೆ ಪ್ರೀತಿ ಪಾತ್ರರಾಗಿ ಸ್ನೇಹಿತರಿಗೆ ಬೆನ್ನೆಲುಬಾಗಿ
ಬದುಕು ಬದಲಿಸುವ ಬನ್ನಿರಿ ಮಾನವನಾಗಿ.

- ಶ್ರೀ ಮುತ್ತು. ಯ. ವಡ್ಡರ.
ಬಾಗಲಕೋಟ. #9845568484

ನಾ ಎಂಬುದ ನೀ ನೆನಯದಿರು ಮನವೇ (ಕವಿತೆ) - ವಸಂತ ಪುಂಡಲೀಕ, ಬಾಗೇವಾಡಿ.

ನಾ ಎಂಬುದ ನಿನ್ನ ಮನಕೆ ತಂಪು ನೋಡಾ
ನಾ ಎಂಬುದ ನಿನ್ನ ಕರ್ಣಕೆ ಕಂಪು ನೋಡಾ
ನಾ ಎಂಬ ನುಡಿಯ ನೀ ಮರೆತೆಯಾದರೆ
ಎಲ್ಲರ ಮನ ಧಣಿ ನೀನೇ ನೋಡಾ...

ಸಕಲ ಕಾರ್ಯಂಗಳ ನೀ ಹುಡುಕಿ ಮಾಡುವೆ
ಸಕಲರ ಕಷ್ಟ ಕಾರ್ಪಣ್ಯಗಳಿಗೆ ನೀ ತೆರೆಯನೆಳೆವೆ
ಅನುದಿನವು ಎಲ್ಲರೂಳಗೊಂದಾಗಿ ಕಾರ್ಯವ
ಮಾಡಿ ಮೇಲೆ ನಾ ಎಂದು ನೀ ಉಬ್ಬುಬ್ಬಿ ನಡೆವೆ...

ನಾ ಎಂಬುದು ತರವಲ್ಲ ನಾ ಎಂಬುದು ನರಕ ನೋಡಾ
ನಾ ಎಂಬುವ ಎಲ್ಲಿಯೂ ಸಲ್ಲ ನಾ ಎಂದು ಮೆರೆಯುವ ಮನುಜರ ಯಾರು ನಂಬರು ನೆಚ್ಚರು ನಾ ಎಂಬುದ ನರಿಯದವರ ಎಲ್ಲರೂ ನಗುನಗುತ ಆಲಂಗಿಸುವರು ನೋಡಾ..

ನಾ ಮಾಡಿದೆನೆಂಬ ಮಾತು ಮನದಲ್ಲಿರಲಿ ನೀ ಮಾಡಿದ ಕಾರ್ಯ ಮನುಜರ ಮಾತಿನಲ್ಲಿರಲಿ ಕರದಿ ಮಾಡಿದ ನೆರವು ಮತ್ತೊಂದು ಕರಕೆ ಅರಿವಿಲ್ಲದಂತಿರಲಿ ಆಗ ನೀ ಮಾಡಿದ ಕಾರ್ಯವೆಲ್ಲವೂ ಬಲು ಸಾರ್ಥಕ ನೋಡಾ...

ನಾ ಎಂಬುದಕೆ ನಾಕಾಣೆಯ ಕಿಮ್ಮತ್ತಿಲ್ಲ
ನಾ ಎಂಬುದ ನಾ ಕಾಣೆ ಎಂಬುದನರಿತು ನೋಡಾ
ಎಲ್ಲರ ಬಾಯಲಿ ನೀ ನಲಿದಾಡುವೆಯಲ್ಲ ಓ ಮನುಜ
ನಾ ಎಂಬುದು ನಿನ್ನ ಅವನತಿಯ ಸೊಲ್ಲು ನೋಡಾ...
   
                                                        - ಕನಸಿನ ಕೂಸು
  ವಸಂತ ಪುಂಡಲೀಕ ಬಾಗೇವಾಡಿ 
  ಗಜಪತಿ.

ಹಳ್ಳಿ ಬದುಕಿನ ನೈಜ ಚಿತ್ರಣ ಚಾಕಣದ ಸುಭದ್ರೆ (ಕೃತಿ ವಿಮರ್ಶೆ) - ಗೊರೂರು ಅನಂತರಾಜು, ಹಾಸನ.

ವಿದ್ಯಾರ್ಥಿ ದೆಸೆಯಿಂದಲೇ ಪ್ರಗತಿಪರ ಚಿಂತನೆಗಳನ್ನು ಮೈಗೂಡಿಸಿಕೊಂಡು ಬೆಳೆದವರು ಸಿ.ಸುವರ್ಣ ಶಿವಪ್ರಸಾದ್  ಶಿವಪ್ರಸಾದ್ ಸರ್, ನಾಡು ಕಂಡ ಪ್ರಸಿದ್ಧ ಅಂತರಾಷ್ಪ್ರೀಯ ಚಿತ್ರಕಾರರು. ಸುವರ್ಣ ಮೇಡಂ ಹಾಸನವಾಣಿ ದಿನಪತ್ರಿಕೆಯ ಮುಖೇನ ಪತ್ರಿಕಾ ಕ್ಷೇತ್ರಕ್ಕೆ ಅಡಿಯಿಟ್ಟವರು. ನಾನು ಹಾಸನ ವಾಣಿಯಲ್ಲಿ ಹಾಸನ ಜಿಲ್ಲೆಯ ಐತಿಹ್ಯ ದೇವಾಲಯಗಳ ಕುರಿತಾಗಿ ಇದೇ ಪತ್ರಿಕೆಯ ಭಾನುವಾರದ ಸಂಚಿಕೆಯಲ್ಲಿ ೬೮ ವಾರಗಳು ಬರೆಯುವಾಗ ಮೇಡಂ ಅಲ್ಲಿ ಕೆಲಸ ಮಾಡುತ್ತಾ ನನಗೆ ಪರಿಚಿತರಾದರು. ಈ ದಾರಾವಾಹಿ  ಹಾಸನ ಜಿಲ್ಲೆಯ ದೇವಾಲಯಗಳ ದರ್ಶನ ಎಂದು ಸದ್ಯ ಪುಸ್ತಕವಾಗಿ ಪ್ರಕಟವಾಗಿದೆ. ಇವರು ನಂತರ ಜನತಾ ಮಾಧ್ಯಮ ಪತ್ರಿಕೆಯಲ್ಲೂ ಕೆಲಸ ಮಾಡಿದ್ದಾರೆ. ಈಗಾಗಲೇ ಕನ್ನಡ ಸಾಹಿತ್ಯ ಲೋಕಕ್ಕೆ ಬದುಕು ಮಾಯೇ ಎಂಬ ಲೇಖನ ಸಂಗ್ರಹ ಕೃತಿ ನೀಡಿದ್ದಾರೆ. ಒಂದ್ಕತೆ ಮತ್ತು ಬೆಳಕು ಇವು ಇವರ ಕಾದಂಬರಿಗಳು. ಕನ್ನಡ ಪುಸ್ತಕ ಪ್ರಾಧಿಕಾರದಿಂದ ಧನ ಸಹಾಯ ಪಡೆದ ಚಾಕಣದ ಸುಭದ್ರೆ ಕಥಾ ಸಂಕಲನದಲ್ಲಿ ೬ ಕಥೆಗಳಿವೆ. ಇದರಲ್ಲಿ ಚಾಕಣದ ಸುಭದ್ರೆಯದೇ ೧೧೫ ಪುಟಗಳ ಸಿಂಹ ಪಾಲು. ಸ್ತ್ರೀ  ಸಂವೇದನೆ ರೈತ ಸಂವೇದನೆಯ ಕೇರಿ ಬದುಕಿನ ನೀಳ್ಗತೆ. ಸಂಕಲನದ ಎಲ್ಲಾ ಕಥೆಗಳಲ್ಲೂ ಮಹಿಳೆಯ ನೋವಿನ ಓಳ ನೋಟವನ್ನು ನೀಡುವಂತಹ ಪ್ರಯತ್ನ ಮಾಡಿದ್ದೇನೆ ಎಂದಿದ್ದಾರೆ ಕಥೆಗಾರ್ತಿ. ಚಾಕಣದ ಸುಭದ್ರೆ ದಲಿತ ಮಹಿಳೆಯ ಬದುಕು ಭವಣೆಯ  ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣು ವಿದ್ಯಾವಂತೆಯಾಗಿ ಪುರುಷನಿಗೆ ಸರಿ ಸಮಾನವಾಗಿದ್ದರೂ ಕೂಡ ತನ್ನ ಅಸ್ಮಿತೆಯನ್ನು ಉಳಿಸಿಕೊಳ್ಳಲು ಏನೆಲ್ಲಾ ನೋವು ಅನುಭವಿಸಬೇಕು ಎನ್ನುವುದರ ಬಹುಮುಖಿ ಕಥಾನಕ ಜೊತೆಗೆ ಹೆಣ್ಣಿಗೆ ಹುಟ್ಟಿನಿಂದ ಸಾಯುವಶತನಕ  ನೆಮ್ಮದಿಯಿಲ್ಲದ ಹೋರಾಟದ ಬದುಕಿನಲ್ಲಿ ಅನೇಕ ಸುಳಿಗಳಲ್ಲಿ ಸಿಲುಕಿ ಮತ್ತೆ ಮತ್ತೆ ಶಕ್ತವಾಗುತ್ತ ಸಾಗಿ  ತನ್ನ ಹೆಜ್ಜೆ ಗುರುತು ಮೂಡುತ್ತದೆ ಎಂಬ ಆಶಾಭಾವನೆ ಅಭಿವ್ಯಕ್ತವಾಗಿದೆ. ಬಾಯಿ ಇದ್ದವರು ಬರಗಾಲದಲ್ಲೂ ಬದುಕಿದರು ಎಂಬಂತೆ ಬದುಕಲು ಬಲವಾದ ಆಯಾಮ ಇಲ್ಲವಾದಾಗ ಬಾಯಿಯನ್ನು ಬಂಡವಾಳ ಮಾಡಿಕೊಂಡು ಬದುಕುವ ವಿಧವೆ ಸುಭದ್ರಮ್ಮನ ಕಥೆ ನೀಳ್ಗತೆಯಲ್ಲಿ ಒಂದು ಪಾತ್ರ.ಈಕೆ ಗಯ್ಯಾಳಿ ಅನ್ನೋದು ಊರ‍್ಗೆ ಗೊತ್ತಿದ್ದರೂ ಭೀಮೇಗೌಡ ಇವಳಿಗೆ ಮನೆ ಬಾಡಿಗೆ ಕೊಟ್ಟಿದ್ದಾನೆ. ‘ಸ್ವಲ್ಪ ದಿನ ಆದ ಮೇಲೆ ತಗೊಳಿ ಅವಳ ಗೇಟಫೆ ಬದಲಾಯ್ತು. ಭೀಮೇಗೌಡ ಮನೆ ಬಾಡಿಗೆ ಕೇಳೋಕ್ಕೋದರೆ ಸಾಕು ಅವ್ನಗೆ ಮನಸೋ ಇಚ್ಛೆ ಬಾಯಿಗೆ ಬಂದಂಗೆಲ್ಲಾ ಬೈಯೋದಿಕ್ಕೆ ಶುರು ಮಾಡ್ತಾಳೆ. ಕಥೆಯ ಮಾತುಗಾರಿಕೆ ನಿರೂಪಣೆ ಎಲ್ಲವೂ ಹಳ್ಳಿಯ ಸೊಗಡಿನಲ್ಲೇ ಇದೆ. ಆದರೆ ಓದಲು ತೊಡಕ್ಕಿದೆ.
 ಬ್ಯಾಂಕಿನವರು ಸಾಲ ವಸೂಲಿಗಾಗಿ ಮನೆ ಜಪ್ತಿ ಮಾಡುವಲ್ಲಿಂದ ಕಥೆ  ಶುರು.  ರೈತರು ಬ್ಯಾಂಕಿನವರ ಸಂಘರ್ಷ ಜಪ್ತಿ ತಗಾದೆ ವಿವಾದಗಳು  ರೈತ ಚಳುವಳಿ ದಿನಗಳ ಸರಪಳಿ. ಸಾಲ-ಶೂಲ ಬೆಳೆ ನಾಶ ಕಾಡು ಬದುಕಿನ ಆನೆ ಮಾನವ  ಸಂಘರ್ಷ ಇವೆಲ್ಲಾ ಹೊಸೂರು ಎಂಬ ಹಳ್ಳಿ ಬದುಕಿನಲ್ಲಿ ಹಾಸು ಹೊಕ್ಕಾಗಿವೆ. ಮನೋಜ್ ಪ್ರಮೋದ್ ವಿಜೇಯೆಂದ್ರ ವರುಣ್‌ ಇವರೆಲ್ಲಾ ಬ್ಯಾಂಕಿನವರ ಜಪ್ತಿ ವಿರುದ್ದ ತಿರುಗಿ ಬಿದ್ದು ಕೋರ್ಟ್ ಕಛೇರಿ ಅಲೆದಾಡುವ ದೃಶ್ಯ ನಾವು ಕಂಡಿದ್ದೇವೆ.  
 ಸುಭದ್ರೆ ಮಗಳು ಚಂಚಲ ಓದಲು  ಪಟ್ಟಣಕ್ಕೆ ಬರುತ್ತಾಳೆ. ಮೇಲ್ಜಾತಿಯ ಸುರೇಶ್ ಕೆಲಸ ಮಾಡುವ ಬ್ಯಾಂಕ್‌ನಲ್ಲಿ ಇಬ್ಬರಿಗೂ ಗೆಳತನವಾಗಿ ಪ್ರೇಮಕ್ಕೆ ತಿರುಗಿ ಕಾಲಗತಿಯಲ್ಲಿ ಬ್ಯಾಂಕಿನಿಂದ ಸುರೇಶ್‌ ಡಿಸ್‌ಮಿಸ್‌ ಆಗುತ್ತಾನೆ. ಬಾಡಿಗೆ ಕಟ್ಟಲು ಹಣವಿಲ್ಲದೇ ದಂಪತಿಗಳು ದಮ್ ಕಳೆದುಕೊಳ್ಳುತ್ತಾರೆ. ಚಂಚಲ ಗರ್ಭಿಣಿ ಆಗಿ ಅಬಾರ್ಷನ್ ಮಾಡಿಸಲು ಆಸ್ಪತ್ರೆಗೆ ಹೋದರೆ ಚಂಚಲೆಗೆ ಹುಟ್ಟುವ ಮಗು ತನಗೆ ಕೊಟ್ಟರೆ ಐದು ಲಕ್ಷ ಕೊಡುವುದಾಗಿ ಆಮಿಷ ಒಡ್ಡುತ್ತಾಳೆ ನರ್ಸ್ ಲಕ್ಷ್ಮಮ್ಮ. ತುರ್ತು ಹಣದ ಅಗತ್ಯ ಮತ್ತು ವಾಸಕ್ಕೆ ಮನೆ ಬೇಕಿರಲು ಚಂಚಲೆ ಮೊದಲುಶಒಪ್ಪಿ ಹೆರಿಗೆ ನಂತರ ತಿರುಗಿ ಬೀಳುತ್ತಾಳೆ. ಗಾಂಚಾಲಿ ಮಾಡಿದರೆ ಪೊಲೀಸ್‌ ಕಂಪ್ಲೆಂಟ್‌ ಕೊಡುವುದಾಗಿ ಬೆದರಿಸಿ ತಾನೆತ್ತ ಮಗುವನ್ನು ತನ್ನಲ್ಲೇ ಉಳಿಸಿಕೊಳ್ಳುತ್ತಾಳೆ. ಈ ಕಡೆ ನರ್ಸ್ಗೆ ಗಂಟು ಪೋಯ ನಂಟು ಪೋಯ..!
 ವಿಧಿವತ್ತಾಗಿ ಮದುವೆಯಾಗದೆ ತಾಯಿಯಾಗಿರುವ ಚಂಚಲೆ ಒಂದು ಕಡೆ, ಉದ್ಯೋಗ  ಕಳೆದುಕೊಂಡು ನಿರುದ್ಯೋಗಿಯಾಗಿರುವ ಗಂಡ ಇನ್ನೊಂದು ಕಡೆ ಹೊಟ್ಟೆ ಪಾಡಿನ ಮಾರ್ಕೇಟಿನಲ್ಲಿ ಸುಳ್ಳಿನ ಮಾರಾಟ ಮಾಡಿ ಕಡೆಗೆ ತೌರಿಗೆ ಪತಿ ದೇವರೊಂದಿಗೆ ಚಂಚಲ ತಾಯಿ ಚಾಕಣದ ಸುಭದ್ರೆಯನ್ನೇ ಆಶ್ರಯಿಸುವಲ್ಲಿಗೆ ಇವರ ಕಥೆ ಮುಗಿದು ಮತ್ತೊಂದು ಕುಟುಂಬದ ಕಥೆ ತೆರೆದುಕೊಳ್ಳುತ್ತದೆ. ಗ್ರಾಮ್ಯ ಭಾಷೆ ಸೃಷ್ಟಿಯಲ್ಲಿ ಒಂದೊಂದು ಕೌಟುಂಬಿಕ ಕುಟುಂಬದ ಕಥಾನಕಗಳು ನೈಜ  ಸಹಜ ಬದುಕಾಗಿ ರೂಪು ತಳೆದಿವೆ. 
‘ಹೊಸೂರು ಪಾಪಯ್ಯ ಗ್ರಾಮ ದೇವತೆ ರೇಣುಕಾದೇವಿ ಅಮ್ಮನ ಜಾತ್ರೆಗೆ ಅಂತಾ ಹೆಸರು  ಹೇಳಿ ಕುರಿ ಸಾಕಿದ್ದ. ಅದೋ ಅವರಿವರ ಹೊಲ್ದಾಲ್ಲಿ ಮೇದು ಮೇದು ನೆಣ ಹೆಚ್ಚಾಗಿ ನೆಡೆಲಯಕ್ಕೆ ಆಗ್ದಾಂಗೆ ಆಗಿತ್ತು. ಅಷ್ಟೋ ದಷ್ಟ ಪುಷ್ಟವಾಗಿ ಎರಡು ವರ್ಷದಿಂದಲೂ ಸಾಕಿದ್ದ. ಇಡೀ ಹೊಸೂರು ಜನ್ರು ಕಣ್ಣೆಲ್ಲಾ ಆ ಕುರಿ ಮೇಲೆ ಇತ್ತು. ಎಂದಿನಂತೆ ಪಾಪಯ್ಯ ಮನೆಯಿಂದ ಮೇಯೋಕೆ ಒಡ್ಕೊಂಡು ಹೋಗಿ ಹೊಲ್ದಾಲಿ ಬಿಟ್ಟು ತೋಟ್ದಾಲ್ಲಿ ಕಾಯಿ ಕೀಳಿಸೋಕೆ ಹೋಗ್ತಾನೆ. ಎಲ್ಲಾ ಕೀಳಿಸಿ ಬಂದು ನೋಡೋದರೋಲಗೆ ಕುರಿನೇ ಇಲ್ಲ..!   (ಭಾಷೆ ಓದಲು ತ್ರಾಸವಷ್ಟೇ?) ಕಾಳಜಿಯಿಂದ ಸಾಕಿದ್ದ ಕುರಿ ಕಳೆದುಕೊಂಡು ಊರು ಕೇರಿ ಎಲ್ಲಾ ಹುಡುಕುವ ಪಾಪಯ್ಯನ ಪಡಿಪಾಡಲು ನಾವು ಹಳ್ಳಿಗಾಡಿನಲ್ಲಿ ಕಾಣವಂತದ್ದೇ!
ಮೊದಲಿಗೆ ಚಾಕಣ ಎಂದ ಕೂಡಲೇ ನನಗೆ  ನಮ್ಮೂರಿನಲ್ಲಿ ಚಾಕಣ ಮಾರುತ್ತಿದ್ದ ಒಬ್ಬಾತ ನೆನಪಾದನು. ಅವ ಶನಿ ಮಹಾತ್ಮೆ ನಾಟಕದಲ್ಲಿ ಅಲೋಲಿಕೆಯ ಸಖಿ ಪಾತ್ರದಲ್ಲಿ ನಟಿಸಿ ನುಲಿಯತ್ತ‘ಹೆಂಗಿತ್ರಕ್ಕ ನನ್ನ ಪಾರ್ಟು..ಎಂದು ನಮ್ಮ ಅಂಗಡಿಗೆ ಎಲೆ ಅಡಿಕೆ ಖರೀದಿಸಲು ಬಂದು ನಮ್ಮ ತಾಯಿಯವರಲ್ಲಿ ಕೇಳುತ್ತಿದ್ದಾಗ ನನಗೆ ನಗು ಬಂತು. ಅವ  ಹೆಣ್ಣಿಗನ ತರಹ ಮಾತನಾಡುತ್ತಿದ್ದಿದ್ದು ನನಗೆ ತಮಾಷೆಯಾಗಿ ಕಾಣುತ್ತಿತ್ತು. ನಮ್ಮ ಮನೆ ಮೇಲ್ಗಡೆ ರಸ್ತೆಯಲ್ಲಿ ಒಂದು  ಷರಾಪ್‌ ಅಂಗಡಿ ಇತ್ತು.  ಅಲ್ಲೊಬ್ಬರು ಹೆಂಗಸು ಹೆಸರು ಬೇಡ.  ಸ್ವಲ್ಪ ಎತ್ತರದ ಸ್ಥಳದಲ್ಲಿ ಕುಳಿತು ಷರಾಪ್ ಮಾರುತ್ತಿದ್ದರು. ೫೦ ಲೀಟರ್‌ ಕ್ಯಾನ್‌ನಿಂದ ನಲ್ಲಿಯಲ್ಲಿ ನೀರು ಬಿಟ್ಟಂತೆ ಷರಾಪ್‌ನ್ನು ಗಿರಾಕಿಕೊಟ್ಟ ಹಣಕ್ಕೆ ತಕ್ಕಂತೆ ಅಳತೆ ಮಾಡಿ ಬಿಡುತ್ತಿದ್ದರು. ಕುಡಿದ ಮಹಾಶಯರು ಸಖಿ ಬಳಿ ಸಾಗಿ ಕಡ್ಲೇಕಾಳು, ಹೆಸರು ಕಾಳು ಹುಸ್ಲಿ, ದುಡ್ಡು ಹೆಚ್ಚಿದ್ದರೆ ಬೋಟಿ, ಕುರಿ ಬ್ಲಡ್ ಮಸಾಲೆ, ಮೊಟ್ಟೆ ಆಮ್ಲೇಟ್‌ ಇತ್ಯಾದಿ ಬಿಸಿ ಬಿಸಿ ಬೇಯಿಸಿಕೊಟ್ಟಿದ್ದನ್ನು ತಿಂದು ನಾಲಿಗೆ ಚಪ್ಪರಿಸುತ್ತಿದ್ದ ದೃಶ್ಯ ಅಚಾನಕ್ಕಾಗಿ ಕಣ್ಮುಂದೆ ಬಂತು. ಅಲ್ಲಿ ನಡೆಯುತ್ತಿದ್ದ ಗಲಾಟೆ ಗದ್ದಲಗಳು, ಕುಡಿತ  ಹೆಚ್ಚಾಗಿ ಅಲ್ಲೇ ಒರಗಿಕೊಳ್ಳುತ್ತಿದ್ದ ಇಲ್ಲವೇ ರಸ್ತೆ ಪಕ್ಕ ಚರಂಡಿಯಲ್ಲಿ ಬಿದ್ದಿರುತ್ತಿದ್ದ ದೃಶ್ಯಗಳು ಸರ್ವೇ ಸಾಮಾನ್ಯವಾಗಿದ್ದವು. ದೇಶದ ಜನಸಂಖ್ಯೆ ಇಳಿಸುವಲ್ಲಿ ಸೇಂದಿ ಅಂಗಡಿಗಳ ಪಾತ್ರವು ಮಹತ್ವದ್ದಾಗಿದೆ ಎಂಬುದನ್ನು ಮರೆಯುವಂತಿಲ್ಲ.  ಆ ಕಾಲಕ್ಕೆ ಹುಡುಗರಾಗಿದ್ದ ನಮಗೆ ಈ ವಿಷಯಗಳೆಲ್ಲಾ ಕಥೆ ಬರೆಯಲು ಹೊಳೆಯಲಿಲ್ಲ. ಮೇಡಂ ಅವರ ಕಥೆ ಚಾಕಣದ ಸುಭದ್ರೆ ಎಂದು ಹೆಸರಿದ್ದರೂ ಆಕೆ ಚಾಕಣ ಮಾರುವ ಘಾಟು ಗಮ್ಮತು ಏನೂ ಇಲ್ಲ. ಆದರೂ ಸುಭದ್ರೆ ಮಾತ್ರ ಘಾಟಿ ಹೆಂಗಸು ಎಂಬುದನ್ನು ಹೇಳುತ್ತಾರಷ್ಟೇ.  ನಾನು ವಿದ್ಯಾರ್ಥಿ ದಿನಗಳಲ್ಲಿ ಓದುತ್ತಿದ್ದ ಮಹಿಳೆಯರ ಕಾದಂಬರಿಗಳು   ನಯ ನಾಜೂಕಿನ ಕಾಲ್ಪನಿಕ ಕಥೆಗಳಾಗಿ ರಂಜನೆಯೇ ಪ್ರಧಾನವಾಗಿರುತ್ತಿದ್ದವು. ಸುವರ್ಣ ಮೇಡಂ ತಮ್ಮ ಸುತ್ತಲ ಬದುಕನ್ನು ನೈಜವಾಗಿ ಚಿತ್ರಿಸಿರುವಂತಿದೆ. ಸಂಕಲನದ  ಇನ್ನುಳಿದ ಐದು ಕಥೆಗಳು ಒಡಲಿನ ಕಿಚ್ಚು, ಚಂಚಲ, ನಿರೀಕ್ಷೆ, ಆಸರೆ, ಗಾಯ ಇವೆಲ್ಲಾ ಇದೇ ಹಾದಿಯಲ್ಲಿ ಸಾಗಿವೆ. ಇವು ಚಿಕ್ಕ ಕಥೆಗಳೇ.  ಇವುಗಳನ್ನೆಲ್ಲಾ ಒಟ್ಟಾಗಿಸಿ ಕಾದಂಬರಿಯಾಗಿಯೇ ತರಬಹುದಿತ್ತೇನೋ..? ಏಕೆಂದರೆ ಸುಭದ್ರೆ ಕಥೆಯಲ್ಲಿ ಬೇರೆ ಬೇರೆ ಸನ್ನಿವೇಶ, ದೃಶ್ಯ, ಸಂಸಾರಗಳ ಕಥೆಗಳಿವೆಯಷ್ಟೇ. ಅಂತೆಯೇ 
ಇವುಗಳನ್ನು ಒಟ್ಟುಗೂಡಿಸಿದ್ದರೇ ಒಂದು ಕಾದಂಬರಿ ಆಗಬಹುದಿತ್ತಷ್ಟೇ..!
 
                       
- ಗೊರೂರು ಅನಂತರಾಜು, ಹಾಸನ.
9449462879.

ಬಂಗಾರದ ಮನುಷ್ಯ (ಕವಿತೆ) - ಹುಂಗೇನಹಳ್ಳಿ ಶ್ರೀನಿವಾಸ್ ಎಚ್.ವಿ.

ಕರುನಾಡ ಕಂಡ ಅಪರೂಪದ ಕಣ್ಮಣಿ
ನಮ್ಮ ಅಪ್ಪು ಎಂಬ ತಾರಾಮಣಿ
ಭಾರತ ಕಂಡ ಯುವರತ್ನ
ದಾನ ಧರ್ಮದಲ್ಲಿ ರಾಜರತ್ನ

ಯುವಕರ ಪಾಲಿನ ಯುವಶಕ್ತಿ
ಅನಾಥ ವೃದ್ಧರ ನವಶಕ್ತಿ
ಅಂಧರ ಬಾಳಿಗೆ ಅಶಾಕಿರಣ
ಅಭಿಮಾನಿಗಳ ಮನಗೆದ್ದ ಜಾಣ

ನಗುಮುಖದ ನಂದ ಕಿಶೋರ
ನಟನೆಯಲ್ಲಿ ರಾಜಕುಮಾರ
ನಯವಿನಯದ ನಮ್ಮ ಪುನೀತ
ಕನ್ನಡಿಗರ ಬಾಳಿನ ನವನೀತ

ನೊಂದವರ ಬಾಳಿನ ನೇತಾರ
ಮಾಡಿದ ದಾನ ಧರ್ಮಗಳು ಅಪಾರ
ಕರ್ನಾಟಕಕ್ಕೆ ತಂದು ಕೊಟ್ಟೆ ಕೀರ್ತಿ
ಕನ್ನಡಿಗರಿಗೆಲ್ಲ ನೀನೇ ಸ್ಫೂರ್ತಿ

ಎಲ್ಲಿ ನೋಡಿದರು ನಿನ್ನದೇ ರೂಪ
ನೀನು ಆ ಪರಮಾತ್ಮನ ಸ್ವರೂಪ
ನಿನ್ನ ನೆನಪುಗಳು ಅಜರಾಮರ
ನೀನು ಕನ್ನಡ ನಾಡಿನ ಬಂಗಾರ

ಬ್ರಹ್ಮ ನೀ ಬರೆದ ವಿಧಿ ಲಿಖಿತ ತಪ್ಪು
ನಿನ್ನ ತಪ್ಪಿನಿಂದ ಬಲಿಯಾದ ಅಪ್ಪು
ಓ ಯಮ ನಿನ್ನ ಮನಸ್ಸು ಕಠೋರ
ಏನಗಿರಲ್ಲಿ ಕನ್ನಡಿಗರ ಧಿಕ್ಕಾರ 
   
                           
 - ಹುಂಗೇನಹಳ್ಳಿ ಶ್ರೀನಿವಾಸ್ ಎಚ್.ವಿ 
ಮಾಲೂರು (T),  ಕೋಲಾರ (D).

ಮಂಗಳವಾರ, ಅಕ್ಟೋಬರ್ 24, 2023

ಓ ಚುಕ್ಕಿ ಚಂದ್ರಮನ ಮಗಳೇ (ಕವಿತೆ) - ಪ್ರೇಮ ಕವಿ ಬಸ್ಸು R B S.

ಆಕಾಶದ ಬುಟ್ಟಿಯಲ್ಲಿ ಚುಕ್ಕಿ ಚಂದ್ರಾಮನ ಒಳಪು ಮತ್ತಷ್ಟು ಹೆಚ್ಚಿದೆ ನೋಡು ನಿನ್ನ ಮಧುರ ಮಲ್ಲಿಗೆಯ ಮೊಗದಲ್ಲಿನ ನಗುವ ಕಂಡು ಓ,, ಚುಕ್ಕಿ ಚಂದ್ರಾಮನ ಮಗಳೇ

ಆಗಾಗ ಚುಕ್ಕಿ ಚಂದ್ರಮನು
ನಾಚುತಿದ್ದ ತಿಳಿಯದು ಯಾಕೆಂದು,,, ಮೊನ್ನೆ ತಿಳಿಯಿತು ಏನೆಂದು ನಿನ್ನ ಮುದ್ದಾದ ನಗುವ ಕಂಡು ನಾಚಿದ್ದನೆಂದು,, ಓ ಚುಕ್ಕಿ ಚಂದ್ರಾಮನ ಮಗಳೇ

ಆಕಾಶದ ಚುಕ್ಕಿಯೊಂದು ನಕ್ಕಿದೆ ನೋಡು ನಿನ್ನ ಕೆಂದುಟಿಗಳು ನಕ್ಕರೆ ದೇವಲೋಕದ ಮುತ್ತುಗಳು ಉದುರಿವೆ ನೋಡು ನೀ ಮಾತಾಡಿದರೆ ನೀನಾಗು ಬಾ ಅ ಚುಕ್ಕಿ ಚಂದ್ರಾಮನ ಕೈಸೆರೆ,,,
ಓ ಚುಕ್ಕಿ ಚಂದ್ರಮನ ಮಗಳೇ

- ಪ್ರೇಮ ಕವಿ ಬಸ್ಸು R B S ಕೋಟಗೇರಾ ತಾ, ಜಿ, ಯಾದಗಿರಿ.

ಮಹಿಳೆ ಮತ್ತು ಆರೋಗ್ಯ (ಲೇಖನ) - ಚಾಂದ ಪಾಷಾ.kvs.

"ಭಟ್ಟರ ಹಾಡು ಹೆಣ್ಮಕ್ಳೇ ಸ್ಟ್ರಾಂಗು ಗುರು"  ಹಾಡಿನ ಸಾರಾಂಶ ಇರುವಂತೆ ಎಲ್ಲಾ ಕ್ಷೇತ್ರದಲ್ಲಿ ಕೂಡ ಹೆಣ್ಣು ಮಕ್ಕಳು ತಮ್ಮ ಕಾರ್ಯ ವೈಖರಿಯಿಂದ  ಎಲ್ಲಾ ಕ್ಷೇತ್ರಗಳನ್ನು ನಿಭಾಯಿಸಬಲ್ಲಳು ಎಂಬುದನ್ನು ಸಾಬೀತು ಮಾಡುತ್ತಾರೆ. ಆದರೆ ಆರೋಗ್ಯದ ವಿಚಾರಕ್ಕೆ ಬಂದರೆ ಮಾತ್ರ ಸ್ಟ್ರಾಂಗ್ ಅಲ್ಲ ಅನ್ಸುತ್ತೆ! ‌‌ಹೆಂಡತಿ ಆದಗಾ ಗಂಡನನ್ನು, ತಾಯಿ ಆಗಿದ್ದಾಗ ಮಕ್ಕಳ ಹಾರೈಕೆ ಮಾಡುತ್ತಾ ತನ್ನ ಆರೋಗ್ಯದ ಪರಿವೇ ಇಲ್ಲವಾಗುತ್ತಾಳೆ.

 ಸ್ತ್ರೀ ಅವಿನಾಶಿ, ಸಂಜೀವಿನಿ ಹೆಣ್ಣು, ವಿಶಿಷ್ಟ ಶಕ್ತಿಗಳ ಸಂಗಮ, ಮಮತೆ, ಕರುಣೆ, ವಾತ್ಸಲ್ಯ ,ಅಕ್ಕರೆ, ಮತ್ತು ಭೂಮಿ ತೂಕದ ತಾಳ್ಮೆ ಯುಳ್ಳ ಸ್ತ್ರೀ ಒಂದು ಪ್ರಬಲ ಶಕ್ತಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಹೆಣ್ಣಿಗೆ ಮಾತ್ರ ಇನ್ನೊಂದು ಜೀವಕ್ಕೆ ಜೀವ ಕೊಡುವಂತ ಶಕ್ತಿ ಇದೆ. ಅಂತ ಹೆಣ್ಣು ಮಗಳನ್ನು ಪುರುಷ ಪ್ರಧಾನ ಸಮಾಜದಲ್ಲಿ ಪುರುಷರು ಎಷ್ಟರ ಮಟ್ಟಿಗೆ ಗೌರವಯುತವಾಗಿ ನಡೆಸಿಕೊಳ್ಳುತ್ತಿದ್ದೇವೆ? ಎಂದು ನಮ್ಮನ್ನು ನಾವು ಪ್ರಶ್ನಿಸಿಕೊಳ್ಳಬೇಕು. ಹೆಣ್ಣು ತನ್ನ ತಾಯಿತನದಲ್ಲಿ 9 ತಿಂಗಳ ತನ್ನ ಒಡಲಿನಲ್ಲಿ ಮಗುವನ್ನು ಇಟ್ಟುಕೊಂಡು, 9 ತಿಂಗಳ ನಂತರ ಮಗುವನ್ನು ಹೊರ ಜಗತ್ತಿಗೆ ಪರಿಚಯಿಸುವ ಸಂದರ್ಭದಲ್ಲಿ ಒಬ್ಬ ಮನುಷ್ಯನ ಬೆನ್ನಿನ ಮೂಳೆ ಮುರಿದರೆ ಎಷ್ಟು ನೋವಾಗುತ್ತದೆಯೋ ಅಷ್ಟು ನೋವನ್ನು ಹೆರಿಗೆ ಸಮಯದಲ್ಲಿ ಸಹಿಸುವಳು ಮತ್ತು ಹೆರಿಗೆ ಸಮಯದಲ್ಲಿ ನೋವುಗಳ ಬರಿಸಾಲಾಗದ ಮಹಿಳೆಯರು ಹಾಗೂ  ಗರ್ಭ ಧರಿಸಲು ಸಾಮರ್ಥ್ಯ ಇಲ್ದೇ ಇರೋ ಹೆಣ್ಣು ಮಕ್ಕಳು ಅಂತ ಸಮಯದಲ್ಲಿ ವೈದ್ಯರು ಮಗುವನ್ನು  ಶಸ್ತ್ರ ಚಿಕಿತ್ಸೆ ಮಾಡುವ ಮುಖಾಂತರ ಮಗುವನ್ನು ಹೊರ ಜಗತ್ತಿಗೆ ಪರಿಚಯಿಸುತ್ತಾರೆ ಶಸ್ತ್ರ ಚಿಕಿತ್ಸೆಯಿಂದ ಹೆಣ್ಣು ಮಕ್ಕಳು ಜೀವನಪೂರ್ತಿ ನೋವುಗಳೆ ಅನುಭವಿಸಬೇಕಾಗಿರುತ್ತೆ ಶಸ್ತ್ರ ಚಿಕಿತ್ಸೆಯಿಂದ ಹೆಣ್ಣು ಮಕ್ಕಳು ಜೀವನದಲ್ಲಿ ಜೀವ ಇರುವ ಗೊಂಬೆ ತರ ಆಗಿಬಿಡುತ್ತಾರೆ ಆ ಸಂದರ್ಭದಲ್ಲಿ ಕೆಲವೊಂದಿಷ್ಟು ಮಹಿಳೆಯರಿಗೆ
ಆರೋಗ್ಯದಲ್ಲಿ ಏರುಪೇರು ಉಂಟಾಗಿ ಪ್ರಾಣ ಕಳೆದುಕೊಂಡಿರುವ ಹೆಣ್ಣುಗಳು ಅದೆಷ್ಟೋ..? ಮತ್ತು ಹೆಣ್ಣಿಗೆ ಭೂಮಿಗೆ ನದಿಗಳಿಗೆ ಹೋಲಿಸುತ್ತಾರೆ ಹಾಗೂ 
" ಹೆಣ್ಣೆಂದರೆ ದೀಪ,  ಬೆಂಕಿಯಲ್ಲ ಬೆಳಕು"  
ಹೆಣ್ಣು ಯಾವತ್ತಿಗೂ ಬೆಂಕಿ ಅಲ್ಲ ಜಗವನ್ನು ಬೆಳಗುವ ದೀಪದಂತೆ. ಅಂತ ಬೆಳಕಿಗೆ  ಎಷ್ಟರಮಟ್ಟಿಗಿನ  ಹೆಣ್ಣು ಮಕ್ಕಳ ಬಾಳಿನಲ್ಲಿ ಬೆಳಕಿದೆ! 

"ಆರೋಗ್ಯವೇ ಭಾಗ್ಯ ಎಂಬಂತೆ ಎಲ್ಲರಿಗೂ ಆರೋಗ್ಯ ಅವಶ್ಯಕ "  ಅದರಲ್ಲೂ ಹೆಣ್ಣು ಮಕ್ಕಳಿಗೆ ತುಂಬಾ ಅವಶ್ಯಕ ಅನ್ಸುತ್ತೆ  ಹೆಣ್ಣು ಆರೋಗ್ಯದ ವಿಚಾರದಲ್ಲಿ ಬಂದರೆ ಆದಷ್ಟು ಜಾಗೃತವಾಗಿರಬೇಕು. 
ಹೆಣ್ಣಿಗೆ ಮಾತ್ರ ಆರೋಗ್ಯದ ಸಮಸ್ಯೆ ಪದೇಪದೇ ಕಾಡುತ್ತದೆ ಅದರಲ್ಲಿ ಮುಖ್ಯವಾದದ್ದು ಗರ್ಭಿಣಿಯಾಗಿದ್ದಾಗ  ಆರೋಗ್ಯ ಸಮಸ್ಯೆಗಳು ತೀರಾ 
ಹದಗೆಡುತ್ತದೆ, ಒಂದು ಜೀವಕ್ಕೆ ಜೀವ ಕೊಡುವ ಸಂದರ್ಭದಲ್ಲಿ ಪೌಷ್ಟಿಕ ಆಹಾರ ಮುಖ್ಯವಾಗಿರುತ್ತದೆ. ಶ್ರೀಮಂತ ಹೆಣ್ಣು ಮಕ್ಕಳಿಗೆ ಆಹಾರದ ಕೊರತೆ ಉಂಟಾಗುವುದಿಲ್ಲ, ಆದ್ರೆ ಮಧ್ಯಮ ವರ್ಗದವರು ಮತ್ತು ಬಡವರ ಕುಟುಂಬದಲ್ಲಿ ಸಾಕಷ್ಟು ಪೌಷ್ಟಿಕ ಅಂಶದ ಆಹಾರ ದೊರೆಯದ ಕಾರಣದಿಂದ ಬಹಳಷ್ಟು ಹೆಣ್ಣು ಮಕ್ಕಳು ರಕ್ತಹೀನತೆ ಇಂದ ಬಳಲುತ್ತಾರೆ. ಬಡ ಕುಟುಂಬದ ಹೆಣ್ಣು ಆರೋಗ್ಯದ ಮೇಲೆ ಕಾಳಜಿ ವಹಿಸಲು ಅಸಾಧ್ಯ, ಅವರ ಬಯಕೆಗಳನ್ನು ಈಡೇರಿಸಿಕೊಳ್ಳಲು ಆರ್ಥಿಕವಾಗಿ ಬಲಿಷ್ಠ ವಾಗಿರುವುದಿಲ್ಲ.
ಸರ್ಕಾರದಿಂದ ಬಡವರಿಗಾಗಿ ತಂದಿರುವ ಸಾಕಷ್ಟು ಯೋಜನೆಗಳು ಜಾರಿಗೆ ಬಂದರೂ ಸರಿಯಾದ ಸಮಯಕ್ಕೆ ಮಧ್ಯವರ್ತಿಗಳ ಉಪಟಳದಿಂದ ತಲುಪದೇ ಇರುವುದರಿಂದ ಹೆಣ್ಣು ಮಕ್ಕಳ ಆರೋಗ್ಯದಲ್ಲಿ  ಏರುಪೇರು ಆಗುತ್ತಿದೆ. ಹೆಣ್ಣು ಭಾವನಾತ್ಮಕ ಜೀವಿ ಆಗಿರುವುದರಿಂದ ಆರ್ಥಿಕವಾಗಿ ಹಿಂದುಳಿದಿರುವ ಬಡ ಕುಟುಂಬಗಳ ತಂದೆ ತಾಯಿಗೆ ಹೊರೆ ಆಗಬಾರದೆಂದು ಆರೋಗ್ಯ ಸಮಸ್ಯೆ ಬಂದಾಗ ಹೆಣ್ಣಿಗೆ ತನ್ನ ಮನೆಯ ಪರಿಸ್ಥಿತಿ ಮಾತ್ರ ಕಣ್ಮುಂದೆ ಇರುತ್ತದೆ.ಎಷ್ಟೇ ನೋವನ್ನು ಅನುಭವಿಸುತ್ತಿದ್ದರೂ ವೈದ್ಯರ ಬಳಿ ತೆರಳಲು ಹಿಂಜರಿಯುತ್ತಾಳೆ ಮತ್ತು ಸಮಯಕ್ಕೆ ಸರಿಯಾದ ರೀತಿ ಆರೋಗ್ಯ ತೋರಿಸಿಕೊಳ್ಳದೇ ಇರುವುದರಿಂದ ಹೆಣ್ಣು ಅನಾರೋಗ್ಯಕ್ಕೆ ತುತ್ತಾಗಿ ಗರ್ಭಕೋಶದ ಕ್ಯಾನ್ಸರ್, ಗರ್ಭ ಚೀಲದ ಗಡ್ಡೆ ರೋಗದಿಂದ ಮತ್ತು ಇತರ ಕಾಯಿಲೆಗಳಿಂದ ಬಳಲುತ್ತಾರೆ. ಆದರೂ ಹೆಣ್ಣಿನ ತಾಳ್ಮೆ ಎಷ್ಟರ ಮಟ್ಟಿಗೆ ಅಂದರೆ ಕಟ್ಟಿಕೊಂಡ ಗಂಡನಿಗೂ ತಂದೆ ತಾಯಿಯರಿಗೂ ಆರ್ಥಿಕವಾಗಿ ಹೊರೆ ಆಗಬಾರದೆಂದು ತನ್ನ ಪ್ರಾಣವನ್ನು ಪಣಕಿಡುತ್ತಾಳೆ. 
ಈ ಸಮಾಜದಲ್ಲಿ ಹೆಣ್ಣು ಹುಟ್ಟಿದ ತಕ್ಷಣ ಉಣ್ಣು ಅಂತಾರೆ ,ಅದೇ ಹೆಣ್ಣು ನಿಸ್ವಾರ್ಥಿ ಪರೋಪಕಾರಿಯಾಗಿ ಇತರರಿಗೋಸ್ಕರ ತನ್ನ ಜೀವನವನ್ನೇ ಮುಡಿಪಾಗಿಡುತ್ತಾಳೆ. 
ಮಗು ಇದ್ದಾಗ ಯಾವುದೇ ರೀತಿ ಹೆಣ್ಣಿಗೆ ಚೌಕಟ್ಟು ಇರುವುದಿಲ್ಲ. ಬೆಳಿತಾ ಬೆಳಿತಾ ಅವರ ಚೌಕಟ್ಟುಗಳು ಪ್ರಾರಂಭವಾಗುತ್ತದೆ. ಮಗುವಾಗಿದ್ದಾಗ ತಂದೆ ತಾಯಿಯ ಪೋಷಣೆಯಲ್ಲಿ  ಬೆಳೆಯುತ್ತಾಳೆ, ಒಬ್ಬ ಸಹೋದರನಿಗೆ ಸಹೋದರಿಯಾಗಿ ಅಕ್ಕರೆ ಪ್ರೀತಿಯಿಂದ ನಡೆದುಕೊಂಡು ಬರುತ್ತಾಳೆ,  18 ವರ್ಷ ತುಂಬಿದ ನಂತರ  ಒಂದು ಗಂಡಿಗೆ ಮಡದಿಯಾಗಿ ಗಂಡಿನ ಕಷ್ಟ ಸುಖಗಳಿಗೆ ಅರ್ಧದಷ್ಟು ಪಾಲು ನನ್ನದೆಂದು ಭಾವಿಸುತ್ತಾಳೆ,  ಹೆಣ್ಣು ಮಗುವಾಗಿದ್ದಾಗ ಅನಾರೋಗ್ಯದ ಸಮಸ್ಯೆ ಸಣ್ಣಪುಟ್ಟ ಕಾಯಿಲೆ ಬರಬಹುದು  ಅಷ್ಟೇ.   14 ವರ್ಷ ದಾಟಿದ ನಂತರ ಅವಳಿಗೆ ಕಾಡುವ ಆರೋಗ್ಯದ ಸಮಸ್ಯೆ, ತಿಂಗಳಿಗೊಮ್ಮೆ ಬರುವ ಮುಟ್ಟಿನ ಸಮಸ್ಯೆ, ಹೊಟ್ಟೆ ನೋವಿನಿಂದ ನರಳುವ ಸಂದರ್ಭದಲ್ಲಿ ಹೆಣ್ಣಿನ ನೋವು ದೇವರಿಗೆ ಪ್ರೀತಿ ಈ ಸಂದರ್ಭದಲ್ಲಿ  ಹೆಣ್ಣು ಆರೋಗ್ಯದಲ್ಲಿ ಕಾಳಜಿ ವಹಿಸಬೇಕಾಗುತ್ತದೆ.ಇಲ್ಲವಾದಲ್ಲಿ ದೊಡ್ಡ ಕಾಯಿಲೆಗಳನ್ನು ಬರುವಂತ ಸಾಧ್ಯತೆ ಇದೆ.ಅದನ್ನೆಲ್ಲ ನೋವುಗಳನ್ನು ಇಟ್ಟುಕೊಂಡು ಹೆಣ್ಣು ಸಮಾಜದಲ್ಲಿ ಎಲ್ಲರೊಡನೆ ಹಸನ್ಮುಖಿಯಾಗಿ ಬಾಳುತ್ತಾಳೆ. ಹೆಣ್ಣು ಯಾವುದೇ ಕ್ಷೇತ್ರದಲ್ಲಿ ಕ್ರೀಡೆ, ಶಿಕ್ಷಣ, ಎಲ್ಲಾ ತರಹದ ಉದ್ಯೋಗಗಳು ,ಚಿತ್ರರಂಗ,ಗಡಿ ಕಾಯುವ ಸೈನಿಕ, ಗಗನಸಖಿ ಮತ್ತು ಕುಟುಂಬ ನಿವಾರಣೆ ಎಲ್ಲವನ್ನೂ ನಿಭಾಯಿಸುವ ಶಕ್ತಿ ಇದೆ,ಆದರೆ ಆರೋಗ್ಯ ವಿಚಾರದಲ್ಲಿ   ಅನಾರೋಗ್ಯದಿಂದ ಬಳಲು ಪ್ರಾರಂಭಿಸಿದರೆ ಒಂದು ತಿಂಗಳ ಕಾಲ ಅನಾರೋಗ್ಯದಿಂದ ಬಳಲುತ್ತಾಳೆ.ಈ ಸಂದರ್ಭದಲ್ಲಿ ಹೆಣ್ಣಿಗೆ ಧೈರ್ಯವನ್ನು ತುಂಬುವ ಗಂಡಿನ ಕೆಲಸ ಆಗಬೇಕು ಹಾಗೂ ಆಕೆಯನ್ನು ಆರೋಗ್ಯದ ಸಮಸ್ಯೆ ಬಂದಾಗ ತಾನು ಅನುಭವಿಸುತ್ತಿರುವ ನೋವನ್ನು ತನ್ನ ಒಡಲಿನಲ್ಲಿ ಇಟ್ಟುಕೊಂಡು ಕುಟುಂಬದ ಜೊತೆ ಸದಾ ಹಸನ್ಮುಖಿಯಾಗಿ ನೋವಿನಲ್ಲೂ ಕೂಡ ತನ್ನ ಕೆಲಸದ ಜವಾಬ್ದಾರಿಯನ್ನು ಮರೆಯುವುದಿಲ್ಲ,ಆದರೆ                  
" ಪುರುಷರು ತಮ್ಮ ಚಟದಿಂದ ಆರೋಗ್ಯ ಕೆಡಿಸಿಕೊಂಡರೆ,
ತಂದೆ ತಾಯಿ ಹಾಗೂ ಗಂಡನ  ಚೌಕಟ್ಟಿನಲ್ಲಿ ಬಾಳುತ್ತಿರುವಾ  ಮಹಿಳೆ ಯಾವುದೇ ದುಶ್ಚಟಗಳಿಗೆ ಬಲಿಯಾಗಲ್ಲ. ಅಂತಹ ಮಹಿಳೆಯ ಆರೋಗ್ಯದ ಸಮಸ್ಯೆ ಪದೇ ಪದೇ ಆದಿಗೆಡುತ್ತದೆ. ಅದರಲ್ಲಿ ಹೆಣ್ಣಿಗೆ ಬರುವ ಖಾಯಿಲೆ ಅಂದರೆ ರಕ್ತಹೀನತೆ,ಹಾರ್ಟ್ ಅಟಾಕ್, ಸ್ಟ್ರೋಕ್,ಡಯಾಬಿಟಿಸ್,ಮೂತ್ರ ಜನಕಾಂಗದ ಸೊಂಕು, ಬ್ರೆಸ್ಟ್ ಕ್ಯಾನ್ಸರ್, ಅಸ್ಥಿರಂದ್ರತೆ (ಮೂಳೆ ಸಂಬಂಧ ರೋಗ) ಮರುವಿನಕಾಯಿಲೆ,ಅಂಡಾಶಯ ಕ್ಯಾನ್ಸರ್, ಗರ್ಭಕೋಶದ ಕ್ಯಾನ್ಸರ್,ಖಿನ್ನತೆ ಮತ್ತು ಆತಂಕ, ಋತುಬಂಧ,ಪ್ರಸವದ ನಂತರ ಖಿನ್ನತೆ, ಪಿಎಂ ಡಿಡಿ,ಉಭಯ ರೋಗ ನಿರ್ಣಯ,ಪಿಸಿಓಡಿ,ಥೈರಾಯಿಡ್ ನಂತಹ ಕಾಯಿಲೆಗಳು ವಕ್ಕರಿಸುತ್ತವೆ. ಸಮಾಜದಲ್ಲಿ ಕೆಲವೊಂದು ಇಷ್ಟು ಸಾಮಾಜಿಕ ಸಮಸ್ಯೆ ಕೂಡ ಹೆಣ್ಣಿನ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಅದರಲ್ಲಿ ಮುಖ್ಯವಾದ ಅಂಶಗಳು ಅಂದರೆ            
ಶಾಲಾ ಕಾಲೇಜುಗಳಿಗೆ ಮತ್ತು ತನ್ನ ಇತರೆ ಕೆಲಸಗಳಿಗೆ ಹೋದ ಸಂದರ್ಭದಲ್ಲಿ ಶೌಚಾಲಯದ ವ್ಯವಸ್ಥೆ ಇಲ್ಲವಾದ ಸ್ಥಳದಲ್ಲಿ ಮುಜುಗರದ ಸ್ವಭಾವದವಳಾಗಿರುವುದರಿಂದ  ಹೆಣ್ಣು ಮಗಳು ತನ್ನ ಮೂತ್ರವನ್ನು ಬಹಳಷ್ಟು ಸಮಯ ತಡೆದಿಟ್ಟುಕೊಳ್ಳುವುದರಿಂದ ನಾನಾ ತರಹದ ಕಾಯಿಲೆಗಳು ಹೆಣ್ಣಿಗೆ ಸಂಭವಿಸುತ್ತದೆ. ಇದರಿಂದ ಬಹಳಷ್ಟು ಹೆಣ್ಣು ಮಕ್ಕಳು ಅನಾರೋಗ್ಯದ ಸಮಸ್ಯೆಯಿಂದ  ಬಳಲುತ್ತಾರೆ. ಹೆಣ್ಣು ಮಕ್ಕಳಿಗೆ ಅನಾರೋಗ್ಯ ಸಮಸ್ಯೆಯಲ್ಲಿ ಇದ್ದಾಗ ಅವರಿಗೆ ಧೈರ್ಯ ತುಂಬುವ ಕೆಲಸ ಇತರರಿಂದ ಆಗಬೇಕು ಹೆಣ್ಣು ಮುಜುಗರದ ಸ್ವಭಾವದವಳು  ಆಗಿದ್ದರಿಂದ ತನ್ನ ನೋವನ್ನು ತನ್ನಲ್ಲೇ ಇಟ್ಟುಕೊಂಡು ಯಾರ ಮುಂದೆಯೂ ಹೇಳಲು ಹೋಗುವುದಿಲ್ಲ ಹಾಗಾಗಿ ಬಹಳಷ್ಟು ಹೆಣ್ಣು ಮಕ್ಕಳು ತನ್ನ ಪ್ರಾಣಕ್ಕೆ ತಾವೇ ಆಪತ್ತು ತಂದು ಕೊಳ್ಳುವ ಪರಿಸ್ಥಿತಿಯೂ ಉಂಟು. ಮತ್ತೆ ಹೆಣ್ಣು ಸೌಂದರ್ಯ ಪ್ರಿಯಳು,ಬಡವರ ಹೆಣ್ಣು ಮಕ್ಕಳು ಹತ್ತು ರೂಪಾಯಿ ಪೌಡರ್ ಡಬ್ಬಿಯಲ್ಲಿ ತಮ್ಮ ಸೌಂದರ್ಯವನ್ನು ಹಚ್ಚಿಸಿಕೊಳ್ಳುತ್ತಾರೆ ಆದರೆ ಮಧ್ಯಮ ವರ್ಗ ಶ್ರೀಮಂತರ ಹೆಣ್ಣು ಮಕ್ಕಳು ಪಾರ್ಲರ್ ಮೇಕಪ್ ಕಿಟ್ ಅಂತ ಸಾಮಗ್ರಿಗಳನ್ನು ಬಯಸುತ್ತಾರೆ,ಆದರೆ ಅತಿಯಾದರೆ ಅಮೃತವು ವಿಷದಂತೆ ಯಾವುದು ಕೂಡ ಅತಿ ಆಗಬಾರದು ಇದರಿಂದ ಬಹಳಷ್ಟು ಹೆಣ್ಣು ಮಕ್ಕಳು ಚರ್ಮದ ಕಾಯಿಲೆಗೂ ತುತ್ತಾಗುತ್ತಾರೆ. ಮತ್ತೆ ಹೆಣ್ಣು ಕುರುಕಲು ತಿಂಡಿ ಪ್ರಿಯಳು ಸಂಜೆ ಆದರೆ ಸಾಕು ರಸ್ತೆ ಬದಿಯಲ್ಲಿ ನಿಂತಿರುವ ಪಾನಿಪುರಿ ಅಂಗಡಿಗಳತ್ತ ಕಿವಿ ಕೊಟ್ಟು ಕೇಳಿದರೆ ಸಾಕು ಭಯ್ಯ ಅವರೇ ಒಂದು ಪ್ಲೇಟ್ ಪಾನಿಪುರಿ ಡಾಲು ಇಂಥ ಮಾತುಗಳೇ ಕೇಳಬಹುದು ಮುಸುರೆ ನೀರಿನಂತಿರುವ ಆ ಪಾನಿಪುರಿಯನ್ನು ಬಾಯಿ ಚಪ್ಪರಿಸುತ್ತ ತಿನ್ನುವ ಹೆಣ್ಣು ಮಕ್ಕಳು ಕುರುಕಲು ತಿಂಡಿಗಳು ತಮ್ಮ ಆರೋಗ್ಯಕ್ಕೆ ಮಾರಕವಾಗುತ್ತೆ ಎಂದು ಗೊತ್ತಿದ್ದರೂ ಕೂಡ ಹೆಣ್ಣು ಮಕ್ಕಳ ಬಾಯಿಚಪಲ ಗಂಡು ಮಕ್ಕಳ ಪೀಕಲಾಟ ಅನ್ನಬಹುದು ಮತ್ತೆ ಇನ್ನೊಂದು ವಿಷಯ ಹೇಳಬಹುದಾದರೆ "ಹೆಣ್ಣಿಗೆ ಹಠ ಗಂಡಿಗೆ ಚಟ" ಎರಡು ಮಾತುಗಳು ಹೆಣ್ಣಿನ ಆರೋಗ್ಯದ ಮೇಲೆ ಪರಿಣಾಮ ಬೀರಬಹುದಾದ ಅಂಶಗಳು ಅನುವದ್ರಲ್ಲಿ ಎರಡು ಮಾತಿಲ್ಲ ಕೆಲವೊಂದು ಹೆಣ್ಣು ಮಕ್ಕಳು ಎಷ್ಟು ಹಠಮಾರಿ ಅಂದರೆ ಸಣ್ಣಪುಟ್ಟ ವಿಷಯಕ್ಕೂ  ತಮ್ಮ ಹಠಮಾರಿ ತನದಿಂದ ದೊಡ್ಡ ರಾಧಾಂತವನ್ನು ಮಾಡಿಕೊಂಡು ಅನ್ನ ನೀರು ಬಿಟ್ಟು ತಮ್ಮ ಆರೋಗ್ಯವನ್ನು ತಾವೇ ಹಾಳು ಮಾಡಿಕೊಳ್ಳುತ್ತಾರೆ .ಗಂಡು ಚಟದಿಂದ ದಾಸನಾಗಿರುವ ಮನೆಗಳಲ್ಲಿ ಅಂತ ಮನೆಗಳು ಆರ್ಥಿಕವಾಗಿ ಹಿಂದುಳಿದು ಮನಶಾಂತಿ ನೆಮ್ಮದಿ ಹಾಳಾಗಿರುತ್ತೆ ಅಂತ ಮನೆಗಳ ಹೆಣ್ಣು ಮಕ್ಕಳು ಮಾನಸಿಕ ಖಿನ್ನತೆಗೆ ಒಳಗಾಗುತ್ತಾರೆ ಅಂತ ಹೆಣ್ಣು ಮಕ್ಕಳು ತಮ್ಮ ಆರೋಗ್ಯದ ವಿಚಾರದಲ್ಲಿ ಹಂತ ಹಂತವಾಗಿ ಆರೋಗ್ಯ ಕ್ಷೀಣಿಸುತ್ತಾ ಹೋಗುತ್ತೆ ಮಹಿಳೆಯರ ಆರೋಗ್ಯದ ಸಮಸ್ಯೆ ದೇಶದ ಆರ್ಥಿಕ ಪರಿಸ್ಥಿತಿ ಮೇಲೆ ಪರಿಣಾಮ ಬೀರುತ್ತೆ ಮತ್ತು ಸಮಾಜದಲ್ಲಿ ಮೌಡ್ಯತೆ ಎಷ್ಟಿದೆ ಅಂದರೆ ಉದಾಹರಣೆಗೆ  ಹೆಣ್ಣಿನ ಮುಟ್ಟಿನ ಸಮಸ್ಯೆ ಅದು ಒಂದು ನೈಸರ್ಗಿಕವಾದ ಕಾರ್ಯವಿಧಾನ ಆ ಸಮಸ್ಯೆಯಲ್ಲಿ ಬಳಲುತ್ತಿದ್ದಾಗ ಹೆಣ್ಣಿಗೆ ಕುಟುಂಬ ಸಮಾಜ ಯಾವುದೇ ರೀತಿ  ಅವಳನ್ನು ಹತ್ತಿರಕ್ಕೆ ಸೇರಿಸಿಕೊಳ್ಳುವುದಿಲ್ಲ, ಯಾವುದೇ ಶುಭ ಕಾರ್ಯಗಳಲ್ಲಿ ಭಾಗಿಯಾಗಲು ನಿರಾಕರಿಸುತ್ತಾರೆ,ಸಹಜ ಪ್ರಕ್ರಿಯೆಗೂ ಅವಳನ್ನು ದ್ವೇಷಿಸಿ ದೂರವಿಡುವುದು ಎಷ್ಟರಮಟ್ಟಿಗೆ ಸರಿ?ಈ ಸಮಾಜ ಪುರುಷ ಪ್ರಧಾನವಾಗಿದ್ದರಿಂದ ಇಲ್ಲಿ ಪುರುಷನೇ ತಾನೇ ಸಾರ್ವಭೌಮ ಅಂದುಕೊಳ್ಳಬಾರದು ಇಲ್ಲಿ ಹೆಣ್ಣು ಗಂಡು ಇಬ್ಬರೂ ಸಮಾನರು ಎಂದು ಭಾವಿಸಿ ನಡೆದುಕೊಂಡು ಹೋದರೆ ಒಂದು ಸುಂದರವಾದಂತಹ ಸಮಾಜ ಕಟ್ಟಬಹುದು.

ಒಬ್ಬ ವ್ಯಕ್ತಿಯು ಆರೋಗ್ಯವಂತಾಗಿರಲು  ಆಹಾರ ಸೇವನೆ ಮುಖ್ಯವಾಗಿರುತ್ತೆ.ಆರೋಗ್ಯಎಂದರೆ"ದೈಹಿಕ ಸ್ವಾಸ್ಥ್ಯ" ಎನ್ನಬಹುದು ಶಾರೀರಿಕವಾಗಿ ಸದೃಢವಾಗಿ ಕೆಲಸ ಕಾರ್ಯಗಳನ್ನು ನಿರ್ವಹಿಸುವ ಶಕ್ತಿ ಪಡೆದುಕೊಳ್ಳಲು ಆಹಾರ ಮುಖ್ಯ ಎನ್ನಬಹುದು .
ಭಾರತ ದೇಶವು ಅತಿ ಹೆಚ್ಚು ಹಳ್ಳಿಗಳಿಂದ ಕೂಡಿರುವುದರಿಂದ ಹಳ್ಳಿಗಳಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಸೌಲಭ್ಯಗಳು ದೊರಕುವುದು ಬಹಳಷ್ಟು ಕಡಿಮೆ ಮತ್ತು ಆಸ್ಪತ್ರೆಗಳು ಇಲ್ಲದೆ ಇರೋ ಕಾರಣದಿಂದ ಹಳ್ಳಿಗಳ ಜನರು ನಗರ ಪ್ರದೇಶದ ಆಸ್ಪತ್ರೆಗಳಿಗೆ ಹೋಗಬೇಕಾದರೆ ಸರಿಯಾದ ಸಾರಿಗೆ ಸಂಪರ್ಕ ಇಲ್ಲದಿರುವುದರಿಂದ ಹಳ್ಳಿಗಳ ಜನರಿಗೆ ಸರಿಯಾದ ಸಮಯದಲ್ಲಿ ವೈದ್ಯರು ಮತ್ತು ಚಿಕಿತ್ಸೆ ಸಿಗದೇ ಕಾರಣದಿಂದ  ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. 
ವಿವಿಧ ದೇಶಗಳ   ಹೆಣ್ಣು ಮಕ್ಕಳ ಆಯಸ್ಸಿನ ಪ್ರಮಾಣ ನೋಡೋದ ಆದರೆ 2011 ಜನಗಣತಿ ಪ್ರಕಾರ ಥೈಲಾಂಡ್  73.2 ,ಅಮೆರಿಕ 79.9,
ಇಂಗ್ಲೆಂಡ್ 80.2 ,ಜಪಾನಿನಲ್ಲಿ 84.4, ಇವೆಲ್ಲ ಜಗತ್ತಿನ ಕೆಲವೊಂದಿಷ್ಟು ದೇಶಗಳ  ಹೆಣ್ಣು ಮಕ್ಕಳ ಆಯಸ್ಸಿನ ಪ್ರಮಾಣದ ಸರಾಸರಿ ಅನ್ನಬಹುದು ಇವೆಲ್ಲ ದೇಶಕ್ಕೆ ಹೋಲಿಸಿಕೊಂಡರೆ ಭಾರತ ದೇಶವು ಕಡಿಮೆ ಆಯಸ್ಸಿನ ಪ್ರಮಾಣ ಹೊಂದಿದೆ ಕೇವಲ 63.8 ಮಾತ್ರ ನಾವು ನೋಡಬಹುದು. ಈ ಪ್ರಮಾಣದಲ್ಲಿ ಇರಲು ಕೆಲವೊಂದಿಷ್ಟು ಅಂಶಗಳನ್ನು ನೋಡಬಹುದು ನಮ್ಮ ಭಾರತ ದೇಶದಲ್ಲಿ ಹಳ್ಳಿಗಳು ಮತ್ತು ನಗರಗಳು ಹಾಗೂ ಬೃಹತ್ ನಗರಗಳು ಕೂಡಿದ್ದು ಆರೋಗ್ಯಕ್ಕೆ ಸಂಬಂಧಿಸಿದ ಹಾಗೆ ಹಳ್ಳಿಗಳಲ್ಲಿ ಗಮನಹರಿಸಿದರೆ ಪೌಷ್ಟಿಕಾಂಶಗಳು  ಆಹಾರ ದೊರೆಯುವುದಿಲ್ಲ ನಗರ ಪ್ರದೇಶಕ್ಕೆ ಹೋಲಿಸಿದಾದರೆ ಭಿನ್ನವಾಗಿರುತ್ತೆ ಸಾಕಷ್ಟು ಪೌಷ್ಟಿಕಾಂಶದ ಆಹಾರ ದೊರೆತರೂ ಇಲ್ಲಿನ ಜನರು ಸಮಯದಿಂದ ಓಡುತ್ತಿರುತ್ತಾರೆ ಸರಿಯಾದ ಊಟವನ್ನೇ ಮಾಡೋದಿಲ್ಲ ಇದರಿಂದ ಅನಾರೋಗ್ಯಕ್ಕೆ ಪದೇಪದೇ ತುತ್ತಾಗುತ್ತಾರೆ .
ವಿವಾಹ ಅನ್ನುವುದು ಅದು ಒಂದು ಸಾಮಾಜಿಕ ಸಂಸ್ಥೆಯಾಗಿದೆ ಹೆಣ್ಣು ಗಂಡಿನ ಕೆಲವೊಂದಿಷ್ಟು ಬಯಕೆಗಳನ್ನು ಮತ್ತು ವಂಶ ವೃದ್ಧಿಗೊಳಿಸಲು ಇದು ಎಲ್ಲರಿಗೂ ಅವಶ್ಯಕವಾಗಿದ್ದು ಜನರಲ್ಲಿ ಅರಿವು ವಿದ್ಯಾವಂತಿಕೆ ಕೊರತೆಯಿಂದ ನಮ್ಮ ದೇಶದಲ್ಲಿ ಬಾಲ್ಯ ವಿವಾಹ ಆಗುತ್ತೆ ಅಂತ ಹೆಣ್ಣು ಮಕ್ಕಳು   ಮನೆ ನಿರ್ವಹಣೆ ಮಾಡಲು ಹಾಗೂ ಗರ್ಭ ಧರಿಸಲು ಅಷ್ಟೊಂದು ಸಾಮರ್ಥ್ಯ ಹೊಂದಿರುವುದಿಲ್ಲ ಆದಕಾರಣ ಭಾರತ ದೇಶದಲ್ಲಿ ಕಡಿಮೆ ಪ್ರಮಾಣದ ತೂಕ ಉಳ್ಳ ಮಕ್ಕಳು ಜನಿಸುವುದರಲ್ಲಿ   
33 ರಷ್ಟು ನಮ್ಮ ದೇಶ ಸರಾಸರಿ ಹೊಂದಿದೆ. 
ನಮ್ಮ ದೇಶ ಹೆಚ್ಚು ಹಳ್ಳಿಗಳಿಂದ ಕೂಡಿರುವ ದೇಶ ಆಗಿದ್ದು ಕೃಷಿ ಪ್ರಧಾನ ಕುಟುಂಬಗಳೇ ಹೆಚ್ಚು ನಾವು ಕಾಣಬಹುದು ಅಂತ ಕುಟುಂಬಗಳಲ್ಲಿ ಹೆಣ್ಣು ಮಕ್ಕಳು ದಿನನಿತ್ಯ 12 ತಾಸುಗಳಿಗಿಂತ ಹೆಚ್ಚಿನದಾಗಿ ತಮ್ಮ ಆರೋಗ್ಯದ ಪರಿವೇ ಇಲ್ಲದೆ ಬಡತನ ಭವಣೆಯನ್ನು ನೀಗಿಸಿಕೊಳ್ಳಲು ಕೃಷಿ ಮತ್ತು ಕೃಷಿಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ತೊಡಗುತ್ತಾರೆ ನಾವುಗಳು ಹಾಗೆ ನಮ್ಮ ಭಾಗದ್ದು ಕೃಷಿ ಸಂಬಂಧಿಸಿದ ಕಾರ್ಯಗಳ ಬಗ್ಗೆ ಗಮನಿಸಿದ್ದೆ ಆದರೆ ನಮ್ಮ ಪ್ರಮುಖ ಬೆಳೆ ಭತ್ತ ಅನ್ನಬಹುದು ಇದು ವರ್ಷಕ್ಕೆ ಎರಡು ಬಾರಿ ಪಸಲು ನೀಡುತ್ತೆ ಇದರ ಕಾರ್ಯ ಚಟುವಟಿಕೆ ನೋಡಿದ್ದರೆ ನಾಟಿ ಮಾಡುವ ಸಮಯದಲ್ಲಿ ಬಹಳಷ್ಟು ಹೆಣ್ಣು ಮಕ್ಕಳು ಮನೆ ಕೆಲಸವನ್ನು ಮುಗಿಸಿ ಬೆಳಗ್ಗೆ 8 ಗಂಟೆಗೆ ಹೊಲದಲ್ಲಿ ಕೆಲಸಕ್ಕೆ ಹೋದರೆ ಮಧ್ಯಾಹ್ನದ ಊಟವನ್ನೇ ಮಾಡಲಾರದೆ ರಾತ್ರಿ 8: ಸುಮಾರಿಗೆ ಮನೆಗೆ ಮರಳುತ್ತಾರೆ ಇಂಥ ಸಂದರ್ಭದಲ್ಲಿ ಹೆಣ್ಣು ಮಕ್ಕಳ ಆರೋಗ್ಯವು ಹದಗೆಡುವುದುಂಟು.
 ಹೆಣ್ಣು ಮಕ್ಕಳು ಕೆಲಸದ ವಿಚಾರಕ್ಕೆ ಬಂದರೆ ಗಂಡು ಮಕ್ಕಳಿಗೆ ಹೋಲಿಸಿದರೆ ಅತಿ ಹೆಚ್ಚಾಗಿ ಕೆಲಸವನ್ನು ಮಾಡುವರು. ಆಹಾರಕ್ಕೆ ಹೋಲಿಸಿದರೆ ಅತಿ ಕಡಿಮೆ ಪ್ರಮಾಣದಲ್ಲಿ 1000ಕ್ಯಾಲೋರಿಯಷ್ಟು ಮಾತ್ರ ಆಹಾರ ಸೇವನೆ ಮಾಡುತ್ತಾರೆ ಇದರಿಂದ ಬಾಳಷ್ಟು ಹೆಣ್ಣು ಮಕ್ಕಳು ಅನಾರೋಗ್ಯಕ್ಕೂ ತುತ್ತಾಗುವುದುಂಟು ಪೌಷ್ಟಿಕ ಆಹಾರದ ಕೊರತೆಯಿಂದ ಹೆಣ್ಣು ಮಕ್ಕಳಲ್ಲಿ ರಕ್ತ ಹೀನತೆ ಸಮಸ್ಯೆಗಳು ನಾವು ಕಾಣಬಹುದು ಅಂಕಿ ಅಂಶಗಳ ಪ್ರಕಾರ 50 ಶೇಕಡ ರಷ್ಟು ನಗರ ಭಾಗದಲ್ಲಿ ಗ್ರಾಮೀಣ ಭಾಗದಲ್ಲಿ  70% ರಷ್ಟು ಹೆಣ್ಣುಮಕ್ಕಳು ರಕ್ತಹೀನತೆಯಿಂದ ಬಳಲುತ್ತಾರೆ.  
ಕೆಲವೊಂದಿಷ್ಟು ಹೆಣ್ಣು ಮಕ್ಕಳ ಆರೋಗ್ಯ ಸಂಬಂಧಿಸಿದ ಹಾಗೆ @ ಪರಿಹಾರಗಳನ್ನು ನೋಡುವುದಾದರೆ ಹೆಣ್ಣು ಮಕ್ಕಳು ಆರೋಗ್ಯದ ವಿಚಾರದಲ್ಲಿ ಆದಷ್ಟು ಜಾಗೃತ ವಹಿಸಬೇಕು .
ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಹೋಗುವುದು ವೈದ್ಯರ ಸಲಹೆಗಳನ್ನು ಪಡೆದುಕೊಳ್ಳುವುದು. ಮತ್ತು ಇದ್ದ ಜಾಗದಲ್ಲಿ 104 ಸಹಾಯವಾಣಿಗೆ ಕರೆ ಮಾಡಿ ಆರೋಗ್ಯದ ಸಲಹೆ ಪಡೆದುಕೊಳ್ಳಬಹುದು .     ಪೌಷ್ಟಿಕ ಆಹಾರ ಸೇವನೆಯಲ್ಲಿ ಗಮನಹರಿಸಬೇಕು, ಕುರುಕುಲು ತಿಂಡಿಗಳನ್ನು ಆದಷ್ಟು ಮಿತವಾಗಿ ಸೇವಿಸಬೇಕು .
ಆರ್ಥಿಕವಾಗಿ ಹಿಂದುಳಿದ ಕುಟುಂಬಗಳು ಆರೋಗ್ಯಕ್ಕೆ ಸಂಬಂಧಿಸಿದ ಸರಕಾರಿ ಸೌಲಭ್ಯಗಳಾದ ಆಯುಷ್ಮಾನ್ ಭವ ಕಾರ್ಡ್ ಮತ್ತು ಇತ್ಯಾದಿ ಯೋಜನೆಗಳು ಉಂಟು ಸರ್ಕಾರಿ ಆಸ್ಪತ್ರೆ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು  ಗರ್ಭಿಣಿಯರಿಗಾಗಿ ಸರ್ಕಾರ ಸಾಕಷ್ಟು ಯೋಜನೆಗಳು ಇದೆ ಅದರಲ್ಲಿ ಮಾತೃಪೂರ್ಣ, ಪ್ರಧಾನ ಮಂತ್ರಿ ಮಾತೃ ವಂದನ, ಪೋಷಣೆ ಅಭಿಯಾನ ಯೋಜನೆ ,ಶ್ರೀ ಶಕ್ತಿ ಯೋಜನೆ ,ಭಾಗ್ಯಲಕ್ಷ್ಮಿ ಸುಕನ್ಯ ಸಮೃದ್ಧಿ ಖಾತೆ ಯೋಜನೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನಮಂತ್ರಿ ಸುರಕ್ಷಿತ ಮಾತೃ ಅಭಿಯಾನ ,ತಾಯಿ ಕಾರ್ಡ್ ,ಇವೆಲ್ಲ ಯೋಜನೆಗಳ ಮಹಿಳೆಯರು ಇದರ  ಸದುಪಯೋಗ ಪಡೆದುಕೊಳ್ಳಬೇಕು ಮನುಷ್ಯರಾಗಿ ಹುಟ್ಟಿದ ಮೇಲೆ ಎಲ್ಲರಿಗೂ ಕಷ್ಟಗಳು ಬರುವುದು ಸಹಜ ಇದನ್ನೆಲ್ಲ ಬದಿಗೊತ್ತಿ ಆರೋಗ್ಯ ಅಂತ ಬಂದರೆ ಅತ್ತಕಡೆ ಗಮನಹರಿಸುವುದು ಸೂಕ್ತ.
(ಆಧಾರ ಗ್ರಂಥಗಳು)
1)ಡಾ/ ಹೇಮಾ ಲತಾ ಎಸ್.ಎಂ 
 ಮಹಿಳಾ ಅಧ್ಯಯನ 1,2,3,  ಮತ್ತು4  ಪ್ರಕಾಶಕರು ಡಿ ವಿ ಕೆ ಮೂರ್ತಿ ಮೈಸೂರ್ 
2)ಡಾ/ ಡಿ. ಮಂಗಳ ಪ್ರಿಯದರ್ಶಿನಿ 
ಸ್ತ್ರೀವಾದ ಮತ್ತು ಮಹಿಳಾ ಅಧ್ಯಯನ ಒಂದು ಪ್ರವೇಶಿಕೆ 3)ಡಾ/ ಆರ್ ಇಂದಿರಾ 
ಮಹಿಳಾ , ಸಮಾಜ ಮತ್ತು ಸಂಸ್ಕೃತಿ
3) ಡಾ/ ಎಚ್ ಗಿರಿಜಮ್ಮ
"ಬಸಿರು" ಪುಸ್ತಕ ನವ ಕರ್ನಾಟಕ ಪ್ರಕಾಶನ.

 - ಚಾಂದ ಪಾಷಾ.kvs,
M. A. ಸಮಾಜ ಶಾಸ್ತ್ರದ ವಿದ್ಯಾರ್ಥಿ, ಸರ್ಕಾರಿ ಮಹಾವಿದ್ಯಾಲಯ ಸಿಂಧನೂರು.
# 8861319186.

ಅಪ್ಪು (ಕವಿತೆ) - ಕು. ಜ್ಯೋತಿ ಆನಂದ ಚಂದುಕರ, ಬಾಗಲಕೋಟೆ.

ನಿರ್ಮಲ ಮನಸಿನ ಮಗು
ತಿಳಿನೀರ ಒಡಲ ಸಿಹಿನಗು
ಮರೆಯಾಗಿಲ್ಲ ನೀವಿನ್ನೂ
ಇರುವಿರಿ ನನ್ನೆದೆಯೊಳಗೆ.

ತಿಳಿಯಾದ ನೀಲ ಕಡಲ ಮುತ್ತು
ನಿಮ್ಮ ನಗುವೇ ನಮಗೆ ಸಂಪತ್ತು
ಕಾಯಕವೇ ಕೈಲಾಸವೆಂದೇ
ನಡೆದು ಮಾದರಿಯಾದಿರೆಲ್ಲರಿಗೆ.

ಕರ್ಣನಿಗೂ ಮೀರಿದ ಮನ
ಮರೆಯಲ್ಲಿ ಮಾಡಿದ ದಾನ
ಮೋಡದ ಮರೆಯೆ ಮಿನುಗುವ
ನಕ್ಷತ್ರವಾದಿರಿ ಆಗಸದೊಳಗೆ.

ಕರುನಾಡಿಗೆ ಕಣ್ಣಾದೆ ಪರಮಶಿವ
ದೇಶಕೆ ಮಾದರಿಯಾದೆ ಮಾಧವ
ಕರುನಾಡಿನ ದೊಡ್ಮನೆಯ ರಾಜರತ್ನ
ಜೀವಂತ ನೀವು ಜನರ ಮನದೊಳಗೆ

ಕಾಣದಂತೆ ಮಾಯವಾದೆ ಅಪ್ಪು 
ಕಡಲ ತೀರದಲ್ಲಾದೆ ಮುತ್ತಿನ ಚಿಪ್ಪು
ಕಲೆಯಾಗಿದ್ದ ಕರುನಾಡನು
ಮರೆಯಾಗಿ ಹೋದೆ ಸ್ವರ್ಗದೊಳಗೆ.

ಪುನೀತವಾಗಿದೆ ಕರುನಾಡು
ನಿಮ್ಮನು ಪಡೆದಿದ್ದ ನಾವೂ ಕೂಡ
ನಮ್ಮಲ್ಲೇ ಇರುವಿರಿ ನೆನಪಾಗಿ
ಮತ್ತೇ ಹುಟ್ಟಿ ಬನ್ನಿ ಕರುನಾಡಿಗೆ.

- ಕು. ಜ್ಯೋತಿ ಆನಂದ ಚಂದುಕರ, ಬಾಗಲಕೋಟೆ.

ನೆಲದ ನೋವು (ಕೃತಿ ವಿಮರ್ಶೆ) - ಮೈಬೂಬಸಾಹೇಬ.ವೈ.ಜೆ.

ನೆಲದ ನೋವು
ಕವನ ಸಂಕಲನಕ್ಕೆ ಬಸವರಾಜ ಕಲೆಗಾರರು ಮುನ್ನುಡಿ ಬರೆದು, ಡಾ.ಎ.ಎಲ್. ದೇಸಾಯಿಯವರು ಬೆನ್ನುಡಿ ಮತ್ತು ರಾಘವೇಂದ್ರ ರಾಜಕುಮಾರ್ ಶುಭಾಶಯದೊಂದಿಗೆ ಲೋಕಾರ್ಪಣೆಗೊಂಡಿರುವ ಕೃತಿ ಹೊತ್ತಿನ ಚೀಲ ತುಂಬಿಸಿಕೊಂಡು ಬದುಕ ತೆಯ್ದದವರ ಬಡಿವಾರದ ಬದುಕಿನ ಕಂತುಗಳ ಬಗ್ಗೆ ಬಹಳಷ್ಟು ಮಾತನಾಡುತ್ತದೆ.ವಿಜ್ಞಾನ ತಂತ್ರಜ್ಞಾನ ಇತಿಹಾಸ ಅರ್ಥಶಾಸ್ತ್ರ ಹೀಗೆ ಎಲ್ಲ ಭಾಗಗಳಿಂದಲೂ ದ್ವಂದ್ವಮುಖವಾಗಿ ಪದ್ಯ ಅನುಭವಿಸಲು ಅವ್ವ ಮತ್ತು ತಂತ್ರಜ್ಞಾನ ಸಿಗುತ್ತದೆ.
ಸಿದ್ದಣ್ಣ ಪೂಜಾರಿ ಅವರ ಈ ಕವನ ಸಂಕಲನ ನೆಲ ಮೂಲ ಸಂಸ್ಕೃತಿಯನ್ನು ಆವರಿಸಿಕೊಂಡು ಬಡತನ,ನಿರುದ್ಯೋಗ,ಮನದ ವ್ಯಾಜ್ಯ,ರಾಷ್ಟ್ರಧ್ವಜ,ರಾಷ್ಟ್ರಪ್ರೇಮ ಸಹಜವಾಗಿ ಉತ್ಪತ್ತಿಯಾಗುವ ಮನದನ್ನೆಯ ನೆನಪು, ತಾಯಿಯ ಶ್ರೇಷ್ಠತೆ,ಬದುಕು ಒಂದು ಅನ್ವೇಷಣೆ ಮಾತು ಕಟ್ಟುವಿಕೆ, ಅಲ್ಲಲ್ಲಿ ಕಂಡು ಬರುವ ಅಕ್ಷರದವ್ವನ ನೆನಪು,ಅದೋ ರಾತ್ರಿ ಬೆಳೆದು ನಿಂತ ದೊಡ್ಡ ಪಟ್ಟಣಗಳಲ್ಲಿ ನಾಚಿಕೆಯಾಗುವಂತಹ ಡಿಜಿಟಲೀಕರಣದ ಮಾನವೀಯ ಮೌಲ್ಯಗಳ ಕುಂದುವಿಕೆ ಹೀಗೆ ಜಗತ್ತಿನ ನಾನಾ ಮೂಲೆಗಳನ್ನು ಸುತ್ತಿ ಬಂದರೂ ಸಹಿತ ಮಾಯವಾಗುತ್ತಿರುವ ನೀತಿ,ಸಮಾನತೆ,ಸಹಕಾರ, ಮಾನವ ಬಂದತ್ವ ಹೀಗೆ ಪರ್ಯಾಯ ಮಾರ್ಗಗಳನ್ನ ಹುಡುಕುತ್ತಾ ಹೋದಂತೆಲ್ಲಾ ಮಾಯವಾದ ಎಲ್ಲ ವಿಚಾರಗಳ ಮೇಲೆ ಬೆಳಕು ತರುವ ಪ್ರಯತ್ನ ಈ ಕವನ ಸಂಕಲನ ಮಾಡಿದೆ ಎಂದು ಹೇಳಬಹುದು.
'ಉಚ್ಚ ವಿಚಾರ ದೇಶ ಸಂಸ್ಕಾರ' ಎನ್ನುವ ಪ್ರಾಚೀನ ನಾನ್ನುಡಿಯಂತೆ ಸಂಸ್ಕಾರಯುತ ದೇಶವನ್ನ ಕಟ್ಟಬೇಕಾದರೆ ಉಚ್ಛವಾದ ವಿಚಾರಗಳು ಮಾನವನಲ್ಲಿ ಸದಾ ಹರಿದಾಡುತ್ತಿರಬೇಕು ಮತ್ತು ಮನುಷ್ಯನ ನಡುವೆ ಬೆಸೆಯುತ್ತಿರಬೇಕು ಎನ್ನುವ ಕಲ್ಪನೆಯ ಇಡಿಯಾಗಿ ಕವನ ಸಂಕಲನ ಮಾತನಾಡುತ್ತಾ ಹೋಗುತ್ತದೆ. ಮಾನವ ಸಹಜ ಗುಣಗಳಾದ ದ್ವೇಷ -ಅಸೂಹೆ-ಮತ್ಸರ ಕಿತ್ತೆಸೆದು ಸ್ವಾತಂತ್ರ್ಯ- ಸಮಾನತೆ-ಭಾತೃತ್ವ, ಸಹಕಾರ-ಸಹೋದರತ್ವ ಸಧರ್ಮ ಗೌರವ-ಅನ್ಯಧರ್ಮದ ಪ್ರೇಮ ಹೀಗೆ ನಾವೆಲ್ಲ -ಭಾರತೀಯರೆಂಬ ಭಾವ ಮೂಡಲಿ ನಮ್ಮಲ್ಲಿ ಭೇದ-ಭಾವ ಪ್ರಭು ದೂರ ಮಾಡಲಿ'ಎನ್ನುವ ಕವಿತೆಯ ಸಾಲುಗಳನ್ನು ನೆನೆಸುವಂತೆ ಸಿದ್ದಪ್ಪ ಪೂಜಾರಿ ಅವರು ನೆನೆಕೆಯಲ್ಲಿಯೇ ಸರ್ವಧರ್ಮ ಸಮಾನತೆಯ ಮಾತುಗಳನ್ನು ಮೇಲುಪಂಥಿಗೆ ತರುವ ಪ್ರಯತ್ನ ಮಾಡಿದ್ದಾರೆ.ನನ್ನ ದೇಶಾಭಿಮಾನ, ಯಾರು ಯಾಕೆ ಜೈ ಎಂದರು-! ಈ ನೆಲ ಒಪ್ಪುವುದಿಲ್ಲ,ಎಲ್ಲರೂ ಸಮಾನರೇ,ರಾಷ್ಟ್ರ ಧ್ವಜ ಹಾರಿಸುತ್ತೇವೆ, ನನ್ನ ಹಲಗಿ,ನನ್ನ ಒಪ್ಪಿಕೊಳ್ಳಿ,ಯಾರನ್ನಾದರೂ ವಿರೋಧಿಸ, ಪ್ರೀತಿ ಎಂದರೆ, ನಾಳೆಯ ಭರವಸೆ, ಧ್ವನಿ ಇಲ್ಲದವರು,ನಾನೇಕೆ ಬರೆಯುತ್ತೇನೆ ಎನ್ನುವ ಕವಿತೆಗಳಲ್ಲಿ ಸಹಜ ಸಂಸ್ಕೃತಿಯನ್ನು ಭಾರತೀಯತೆಯ ಮೂಲವನ್ನು ಬಯಲಿಗೆಳೆಯೂವ ಪ್ರಯತ್ನದ ವಾರಸುದಾರರಾಗಿ ಕಾಣಿಸಿಕೊಳ್ಳುತ್ತಾರೆ.
ಕವನ ಸಂಕಲನ ಯಾರ ಪರವಾಗಿಯೂ ಮಾತನಾಡದೆ ಯಾವುದರ ಮುತುವರ್ಜಿಯನ್ನು ವಹಿಸಿಕೊಳ್ಳದೆ ಸಹಜವಾಗಿ ಹುಟ್ಟಿರುವ ಭಾವನೆಗಳಿಗೆ ಸಹಜ ರೀತಿಯಲ್ಲಿಯೇ ಪ್ರತಿಕ್ರಿಸುತ್ತಾ ಬಂದಿರುವುದು ಅವರ ಸಹಜಭಾಷೆಯ,ಸಹ ಸಂಸ್ಕೃತಿಯ ಸಲಹುವಿಕೆ ಎದ್ದು ಕಾಣುತ್ತದೆ, ಮಾತ್ರವಲ್ಲ ಭಾರತೀಯತೆಯ ಒಲವು ಸರ್ವಧರ್ಮದ ಚೆಲುವುಗಳಿಗೆ ಕಾರಣವಾಗಿದೆ ಎಂದು ಇಲ್ಲಿ ದಾಖಲಿಸಿಕೊಳ್ಳಬಹುದು. ಭಾಷೆ ಸೊಗಡು ಗ್ರಾಂಥಿಕವಾಗಿ ಕಾಣಿಸಿಕೊಂಡರು ತಾಯಿ ಬಗ್ಗೆ ಮಾತನಾಡುವಾಗ, ತಮ್ಮನ ಬಗ್ಗೆ ಮಾತನಾಡುವಾಗ, ಸಮಾಜದ ಬಗ್ಗೆ ಮಾತನಾಡುವಾಗ,ಸಹ ಧರ್ಮದ ಬಗ್ಗೆ ಮಾತನಾಡುವಾಗ, ಸಹಜ ಸೊಗಡನ್ನು ಎತ್ತಿಕೊಂಡು ಬಂದಿದೆ ಎಂದು ಹೇಳಲು ಅತೀಶಯವೇನು ಅನಿಸುವುದಿಲ್ಲ.ಅಲ್ಲಲ್ಲಿ ಎದ್ದು ಕಾಣುವ ನಿಜ ಶಬ್ದಗಳು ಗ್ರಂಥ ಮೂಲದ ಕೊರತೆ ಮತ್ತು ಭಾಷೆಯ ಕಟ್ಟುವಿಕೆಯಲ್ಲಿ ಕಂಡುಬಂದಿರುವ ಕೊರತೆಗಳ ವಿನಹಃ ಅವು ಸಂಕಲನದ ಅಂತಿಮ ಚಹರೆಗಳಲ್ಲಾ. ಕವಿಯ ಗೊಂದಲಗಳು ಮುಂದಿನ ಓದುಗಳಲ್ಲಿ ಬದಲಾಗಬಹುದು ಎಂದು ನಾವು ಭಾವಿಸಿಕೊಳ್ಳಬೇಕಾಗುತ್ತದೆ.
ಕವಿಯಾದವನು ಶಬ್ದಗಳನ್ನ ಮುರಿದು ಕಟ್ಟುವ ಮತ್ತು ಸಹಜಕ್ಕೆ ಬಗ್ಗದ ಕುಗ್ಗದ ಪಗ್ಗದ ಸಗ್ಗಗಳನ್ನು ಬಳಸಿಕೊಂಡಾಗ ಸುಖದ ಉತ್ತುಂಗವನ್ನು ಇರಬಹುದು. ಸಮಾಜ ಹೇಳದೆ ಉಳಿದಿರುವ ಕೆಲವು ವಿಚಾರಗಳನ್ನ ವಾಕ್ಯ-ಪದ-ಶಬ್ದಗಳಲ್ಲಿ ವ್ಯಕ್ತಪಡಿಸಬಹುದು. ಇದು ಶ್ರೇಷ್ಠ ಮಟ್ಟದ ಓದಿನಿಂದ ಮಹೋನ್ನತ ಕವಿಭಾವದಿಂದ ಮತ್ತು ಕವಿ ಸಮಯದಲ್ಲಿ ಉತ್ಪತ್ತಿಯಾಗಿರುವ ಸಹಜ ಕವಿತೆಗಳಿಂದ ಊಹಿಸಲು ಸಾಧ್ಯಇದನ್ನು ಗ್ರಹಿಸಿಕೊಂಡಾಗ ಮಾತ್ರ ಕವಿಯಾದವನು ಜನ-ಸಹೃದಯ ಊಹೆ ಮಾಡದೇ ಇರುವ ವಿಚಾರಗಳನ್ನ ದಾಖಲಿಸಿ, ಸಹೃದಯದಿಂದ ಭೇಷ್ ಎನಿಸಿಕೊಳ್ಳಬಹುದು.ಅದನ್ನ ಸಿದ್ದಪ್ಪನವರು ಕಲಿಯಬೇಕಾದ ಅರಿಯಬೇಕಾದ ಸೂಕ್ಷ್ಮ ಸಂವೇದನೆ ಎಂದು ನಾವು ಹೇಳಬೇಕಾಗುತ್ತದೆ.
ಒಟ್ಟು ಕವಿತೆಯ ಕವನ ಸಂಕಲನದ ಸಾರವೇನೆಂದರೆ ತಾನು ಅರಗಿಸಿಕೊಂಡಿರುವ ಸಮಾಜದ ದ್ವೀತ್ವಗಳು-ವಿಪ್ರಗಳು ಸ್ವಪ್ನದ ರೂಪದಲ್ಲಿ ಬಂದಿರುವ ವಿಚಿತ್ರಗಳನ್ನ ಜನರತ್ತ ಹರಿಬಿಟ್ಟು, ಅವರ ಅಭಿಪ್ರಾಯಗಳಿಗೆ ವಿಶೇಷವಾದ ಮನ್ನಣೆ ಕೊಟ್ಟು ಭಾವಿ ಕವಿತೆ ಕಾವ್ಯ ಕಥೆ ಕಾದಂಬರಿಗೆ ಹೊಸ ರೂಪಗಳನ್ನು ಕಲ್ಪಿಸಿಕೊಳ್ಳಬೇಕು ಎನ್ನುವ ಕಾರಣಕ್ಕಾಗಿ 'ನೆಲದ ನೋವು' ಕವನ ಸಂಕಲನ ಜನರಿಗೆ ಅರ್ಪಿಸಿದ್ದಾರೆಎಂದುಭಾವಿಸಿಕೊಳ್ಳಬೇಕಿದೆ.ಅಷ್ಟೇ ಅಲ್ಲ ಭಾವತೀತವಾದ ಹೊಸ ಜಗತ್ತನ್ನ ಪ್ರವೇಶಿಸುತ್ತಿರುವ ಸಿದ್ದಪ್ಪನವರಿಗೆ ಹಳೆಯ ತಲೆಮಾರಿನ ಕವಿಗಳು ಸೂಕ್ತವಾದ ಮಾರ್ಗದರ್ಶನವಿತ್ತು ಸಹಕರಿಸಿ ಮುಂಬರುವ ಕವಿತೆಗಳಿಗೆ ದರ್ಶಕ-ರೂಪಕ ಮತ್ತು ಮಾರ್ಗದರ್ಶಕರಾಗಿ ಕಾಣಿಸಿಕೊಳ್ಳಬೇಕಾಗಿದೆ. ಇದು ಗ್ರಹಿಸುವ ಜರೂರತ್ತು ಈ ಕವನದ ರೂವಾರಿಗಳದ್ದಾಗಿದೆ ಎಂದಿಲ್ಲಿ ಹೇಳಬಹುದು. ಈ ನೆಲದ ನೋವು ಇನ್ನಷ್ಟು ಮಾತನಾಡಲಿ ಭೇಧ ಭಾವ ತೆಗೆದುಹಾಕಿ,ಸಮಾನತೆಯ ಬಿತ್ತಿ ಹೋಗಲಿ ಬೆಳೆ-ಬೆಲೆ ಸಮೃದ್ಧವಾಗಲಿ ಎಂದು ಹಾರೈಸುತ್ತೇನೆ.

- ಮೈಬೂಬಸಾಹೇಬ.ವೈ.ಜೆ.
ವಿಜಯಪೂರ. 
mehboobyaragall@gmail.com
+919535104785.

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...